Tuesday, November 6, 2007

ಮಾತು-ಮೌನ

ಹುಲುಸಾಗಿ ಬೆಳೆದ ಮಾತಿನ ಬೆಳೆ,
ಭೂಮಿ ಹುಣ್ಣಿಮೆ ಕಳೆದು,
ಭೂರೆ ಅಭ್ಯಂಜನ ಸುರಿದು,
ಮಾಗಿಯ ಇಬ್ಬನಿಯ ಮೆದ್ದು,
ಸಂಕ್ರಮಣದ ಎಳೆಬಿಸಿಲ ಹೊದ್ದು
ಕಾಯುತ್ತ ಕೂತಿತ್ತು
ನಿನ್ನ ನಲುಮೆಯ ಕೊಯ್ಲಿಗೆ


ನೀನ್ಯಾಕೆ ಕೊಯ್ಲು ಬೇಸರವುಕ್ಕಿ
ಸುಮ್ಮನೆ ಕತ್ತರಿಸಿ
ಕಾಳೊಕ್ಕದೆ
ಮೌನ ಬಿತ್ತಿಬಿಟ್ಟೆ?!


ಇನ್ನೂ ಮಳೆಯ ಹದ ಕಾಣದ
ಬಿರುನೆಲದಲ್ಲಿ
ಬಿಮ್ಮಗೆ ಮೊಳಕೆಯೊಡೆದ ಮೌನ
ಒಕ್ಕದೇ ಹೋಗಿ
ಎಲ್ಲ ಕಾಳೂ ಜೊಳ್ಳಾಗಿ
ಮಾತು ಸಸಾರವಾಗಿ
ಕೇಳುವವರಿಲ್ಲದೆ ಬಿದ್ದು
ನಿದ್ದೆ ಎಚ್ಚರದ ನಡುವಿನ ಪಯಣ


ದೀಪಾವಳಿಯಂತೆ, ಹೊಸವರ್ಷ, ಹೊಸಬದುಕಂತೆ,
ನಿನ್ನ ಜೊತೆಬೆಳಕಿಲ್ಲದೆ ಇನ್ಯಾವ ದೀಪವಿದ್ದರೇನಂತೆ..?!


ಹೋಗಲಿ ನಸುನಗುವೊಂದೆರಡ ಬಿಸಾಕು
ನಿನ್ನ ನಲ್ದನಿಯ ಜೊತೆಯಿಲ್ಲದ
ಬೆಂದ ಮನಸಿಗಿಷ್ಟು ತಂಪು ಸೇಚನ..


--------------------
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ..
(ಜಿ.ಎಸ್.ಎಸ್ ಅಥವಾ ಕಣವಿಯವರ ಸಾಲು, ಯಾರದೆಂದು ಸರಿಯಾಗಿ ಗೊತ್ತಿಲ್ಲ)

Monday, November 5, 2007

ಮಗುಗಳ ಮಾಣಿಕ್ಯ

ಈ ಕತೆಯೊಳಗಿನ ಮಾಣಿಕ್ಯ ಈಗ ತಾನೇ ನಂಗೆ ಫೋನಲ್ಲಿ ಹೆಚ್ಚೂ ಕಮ್ಮಿ 10 ವರ್ಷಗಳ ನಂತರ ಮಾತಾಡಕ್ಕೆ ಸಿಕ್ಕಿದ. ಸಿಗಲು ಕಾರಣವಾದ ಭಾರತತ್ತೆಗೆ, ಅವನು ಅಲ್ಲಿಗೆ ಬರಲು ಕಾರಣವಾದ ಅವನ ಪ್ರಾಜೆಕ್ಟಿಗೆ..ಬಿಲಿಯನ್ ಥ್ಯಾಂಕ್ಸ್.

ದೀಪಾವಳಿಯ ರಜೆ ಕಳೆದು ವಾಪಸ್ ಬೆಂಗಳೂರಿಗೆ ಬಂದ ಕೂಡಲೇ ಅವನ ಮನೆಗೆ ಓಡಿ ಹೋಗುವವಳಿದ್ದೇನೆ.. ಅವನು ಈ ವರ್ಷ ಎಸ್ಸೆಸ್ಸೆಲ್ಸಿ.. :) ಉದ್ದ್ ದ್ದ್ ದ್ದಾಆಆಆಆಅಕ್ಕೆ ಬೆಳೆದಿದಾನಂತೆ.. !

ಫಲೂಡ ಎಲ್ಲಿರಬಹುದು.. ನಮ್ಮನೇಲಂತೂ ಒಂದು ಜೋಕಾಲಿಯಿದೆ.. :)

Wednesday, October 31, 2007

ಮಕ್ಕಳೆಂಬ ಮಾಯಾದೀಪ..

ಸುಜಯ್ ಈ ಬರಹ ನಿಮಗೇ! ಈಗ ಒಂಚೂರು ನಗಿ ನೋಡೋಣ... :)

ಅವಳು ಕುಳ್ಳಗಿದ್ದಳು. ಅಲ್ಲಿದ್ದವರೆಲ್ಲಾ ಕುಳ್ರೆ.. ಕನ್ನಡ ಶಾಲೆಯ ಐದನೇ ಕ್ಲಾಸಿನ ಮಕ್ಕಳು. ಮುಂದಿನ ಎರಡು ಸಾಲು ತುಸು ಕುಳ್ಳಗಿದ್ದ ಮಕ್ಕಳಿಗೆ, ಹಿಂದಿನ ಸಾಲುಗಳು ಉದೂದ್ದವರಿಗೆ.ಅವಳು ಮುಂದಿನ ಸಾಲಿನ ಮುಂದಿನ ಹುಡುಗಿ. ತುಂಬ ಮೆದು ಮತ್ತು ವಿನಾಕಾರಣ ಗಾಬರಿಗೊಂಡುಬಿಡುವವಳು. ದೊಡ್ಡ ದೊಡ್ಡ ಕಣ್ಣು, ಉದ್ದ ಜಡೆಗಳು, ಬಣ್ಣ ಬಣ್ಣದ ಫ್ರಾಕು ಬಂಗಾರದ ಬಳ್ಳಿಯ ಹಾಗೆ ಕಂಡವಳಿಗೆ ಸ್ವರ್ಣಲತಾ ಅಂತ ಅಪ್ಪ ಅಮ್ಮ ಹೆಸರಿಟ್ಟಿದ್ದರು.

ನಮ್ಮ ಉದ್ದೂದ್ದ ಮಕ್ಕಳಿಗೆ ಪಾಪದವಳ ಹಾಗಿರುವ ಸ್ವರ್ಣಲತಾ ಆಟಕ್ಕೆ ದಾರಿ. ಒಂದಿನ ಅವಳು ತುಂಬ ಸೀರಿಯಸ್ಸಾಗಿ ಜಾಸ್ತಿ ಟೈಮ್ ತಗೊಂಡು ಟೀಚರ್ ಕೊಟ್ಟ ಅಭ್ಯಾಸ ಬರೆಯುತ್ತಿದ್ದರೆ, ಹಿಂದೆ ಕುಳಿತ ಗೆಳತಿಯರು ಬೇಗ ಬೇಗ ಬರೆದು ಮುಗಿಸಿ, ಪಾಟಿಚೀಲದಲ್ಲಿದ್ದ ಯಾವುದೋ ದಾರದೆಳೆ ತೆಗೆದು ಅದರ ತುದಿಗೆ ಕಲ್ಲಿನಕಡ್ಡಿ ಮತ್ತು ಮುರಿದು ಹೋಗಿದ್ದ ಪ್ಲಾಸ್ಟಿಕ್ ಕ್ಲಿಪ್ಪು ಕಟ್ಟಿ ಇನ್ನೊಂದು ತುದಿಯನ್ನ ಸ್ವರ್ಣಳ ತೂಗಾಡುವ ಜಡೆಗೆ ಕಟ್ಟಿದರು. ಸ್ವರ್ಣ ಅರ್ಧ ಗಾಬರಿ ಅರ್ಧ ಯೋಚನೆಯಲ್ಲಿ ಬರೆಯುತ್ತ ಕೂತಿದ್ದಾಳೆ ಗೊತ್ತೇ ಆಗಿಲ್ಲ.

ಹೊರಗೆ ಪಕ್ಕದ ಕ್ಲಾಸಿನ ಟೀಚರನ್ನು ಮಾತಾಡಿಸಲು ಹೋಗಿದ್ದ ಶುಭಾವತಿ ಟೀಚರ್, ಮುಗಿಸಿದ್ರಾ ಅಂತ ಕೇಳ್ತಾ ಬಂದವರು ಮೊದಲು ಸ್ವರ್ಣನ್ನೇ ಕರೆದರು. ಮುಂದಿನ ಬೆಂಚಿನ ಮೊದಲ ಹುಡುಗಿ. ಅವಳು ಡಯಾಸ್ ಹತ್ತಿರ ಹೋಗುತ್ತಿದ್ದ ಹಾಗೆ ಕಿಸಿಕಿಸಿ ನಗು; ಮೊದಲು ಭಾಗ್ಯ ಬಾಯಿಗೆ ಕೈ ಅಡ್ಡ ಹಿಡಿದು ನಕ್ಕರೆ, ಹಿಂದೆ ಕೂತ ವಸು, ಲಕ್ಷ್ಮಿ ತಲೆ ತಗ್ಗಿಸಿ ನಗುತ್ತಿದ್ದಾರೆ. ರೂಪ ಸಿಂಧು ನಗು ಅಂದ್ರೆ ಗೊತ್ತಿಲ್ಲವೇನೋ ಅನ್ನೋ ಹಾಗೆ ಸೀರಿಯಸ್ ಮುಖ ಮಾಡಿಕೊಂಡು ಒಳಗೊಳಗೇ ನಗುತ್ತಿದ್ದಾರೆ. ಇವರೆಲ್ಲ ಹೀಗೆ ನಗ್ತಾ ಇದ್ರೆ, ಹುಡುಗರು ಸುಮ್ಮನಿರೋದು ಹ್ಯಾಗೆ ಹೇಳಿ? ರಘುರಾಮಂಗೇನೋ ಅನುಮಾನ ಬಂತು, ಭಾಗ್ಯನ್ನೇ ನೋಡಿದ, ಭಾಗ್ಯನ ಕಣ್ಗಳು ಸ್ವರ್ಣಳ ಜಡೆ ಮೇಲೆ. ಓಹೋ ಗೊತ್ತಾಗೇ ಹೋಯ್ತು. ಪಕ್ಕದಲ್ಲೇ ಕೂತ ನವೀನನ್ನ ತಿವಿದು ತೋರಿಸಿದ. ನವೀನ ನಗೋದ್ರಲ್ಲಿ ಎಕ್ಸ್ ಪರ್ಟ್. ಅವನು ಹಿಂದಿನ ಬೆಂಚಿನ ರಾಘು, ನೂರುಲ್ಲ,ಜಗದೀಶನ್ನ ಕಣ್ ಸೆಳೆದ.

ಇವರಾಟಾ ನೋಡ್ತಾ ಇದ್ದ ಉಳಿದವರೂ ಈಗ ನಗತೊಡಗಿದರು. ಇಡೀ ಕ್ಲಾಸಿಗೆ ಕ್ಲಾಸೇ ಒಂದೇ ಮುಖವಾಗಿ ನಗುವಿನ ತೆರೆ ಹೊದ್ದು ಕೂತಿತು. ಶಬ್ಧದ ಕಾವಿಗೆ ಒಡೆದೇ ಹೋಗುತ್ತೇನೋ ಎಂಬಂತೆ ಎಲ್ಲರೂ ಸದ್ದಿಲ್ಲದೆ ನಗುತ್ತಿದಾರೆ. ಶುಭಾವತಿ ಟೀಚರ್ ಟೇಬಲ್ ಮೇಲೆ ನೋಟುಬುಕ್ಕು ನೋಡ್ತಾ ಇದಾರೆ. ಅವರ ಪಕ್ಕದಲ್ಲಿ ಸ್ವರ್ಣ ಕ್ಲಾಸಿಗೆ ಬೆನ್ನು ಹಾಕಿ, ಪುಸ್ತಕವನ್ನೇ ನೋಡುತ್ತಾ ಹೆದರಿಕೆಯಲ್ಲಿ ನಿಂತಿದಾಳೆ. ಟೀಚರ್ ಏನೋ ಒಂದೆರಡು ಕಾಗುಣಿತ ಗುರುತು ಹಾಕಿದವರು, ಪರಾಇಲ್ಲ, ಮುಂದಿನ ಸಲ ಒಂದೂ ತಪ್ಪಿಲ್ದಂಗೆ ಬರೀಬೇಕು ಅಂತ ತಲೆ ಎತ್ತಿದರು. ಸರಿ ಸರಿ ಅಂತ ಸ್ವರ್ಣ ತಲೆಯಲ್ಲಾಡಿಸುವಾಗ, ಟೀಚರ್ ಕ್ಲಾಸನ್ನೂ ಕ್ಲಾಸನ್ನು ಆವರಿಸಿದ ನಗುವಿನ ತೆರೆಯನ್ನು ಅದರ ಕೇಂದ್ರವನ್ನೂ ಗಮನಿಸಿಬಿಟ್ಟರು. ಅವರಿಗೂ ನಗು ಬಂದ್ ಬಿಡ್ತು. ಅವರನ್ನೇ ನೋಡ್ತಿದ್ದ ಸ್ವರ್ಣ ಗಾಬರಿಯಾಗ್ ಬಿಟ್ಟಳು.

ಯಾರ್ರೇ ಅದು ಹಂಗ್ ಮಾಡಿದ್ದು, ಕೋಪ ನಟಿಸುತ್ತ ಟೀಚರ್ ಕೇಳಿದರೂ ಅವರ ದನಿಯಲ್ಲಿ ನಗುವಿತ್ತು. ಈಗ ನಿಧಾನವಾಗಿ ಸ್ವರ್ಣಂಗೆ ಎಲ್ರೂ ತನ್ನೇ ನೋಡಿ ನಗ್ತಿದಾರೆ ಅಂತ ಗೊತ್ತಾಯ್ತು. ಯಾಕೆ ಏನು ಅಂತ ಗೊತ್ತಿಲ್ಲ ಅವಳಿಗೆ ಅಳುವೇ ಬಂದ್ ಬಿಡ್ತು. ಟೀಚರ್ ಗೆ ಪಾಪ ಅನ್ನಿಸಿ, ನೋಡು ದಾರ ಕಟ್ಟಿದಾರೆ ಬಿಚ್ಕೋಮ್ಮಾ ಅಂತಾ ಇದ್ದ ಹಂಗೆ ಸ್ವರ್ಣ ತಡೆಹಿಡಿದಿದ್ದ ನೀರು ಕಣ್ಣಿಂದ ಕೆಳಗುರುಳೇ ಬಿಟ್ಟಿತು. ಕಾಡಿಗೆ ಹಚ್ಚಿದ್ದ ಆ ದೊಡ್ಡ ದೊಡ್ಡ ಕಣ್ಣುಗಳು ಪುಟ್ಟ ಪುಟ್ಟ ನಲ್ಲಿಯಂತೆ ಧಾರಾಕಾರ ನೀರು. ಒಂದು ಕೈಯಲ್ಲಿ ಕಣ್ಣೊರೆಸುತ್ತಾ ಇನ್ನೊಂದು ಕೈಯಲ್ಲಿ ಆ ದಾರ ಬಿಡಿಸಲು ಕಷ್ಟಪಡುತ್ತಿದ್ದರೆ ಅಲ್ಲಿಯವರೆಗೂ ನಗುತ್ತಿದ್ದ ಇಡೀ ಕ್ಲಾಸಿಗೆ ಇದ್ದಕ್ಕಿದ್ದಂತೆ ಎತ್ತಿ ಬಿಸಾಡಿದಂತಾಯಿತು.

ರೂಪ, ವಸು ಓಡಿ ಹೋಗಿ ದಾರ ಬಿಡಿಸಿಕೊಟ್ಟು ಅವಳನ್ನ ಕರೆದುಕೊಂಡು ಬಂದು ವಾಪಸ್ ಬೆಂಚಲ್ಲಿ ಕೂರಿಸಿದರು. ಭಾಗ್ಯ ಎದ್ದುಹೋಗಿ ಟೀಚರ್ ಕೈಯಿಂದ ನೋಟ್ ಬುಕ್ಕು ತಗೊಂಡು ಬಂದಳು. ಲಕ್ಷ್ಮಿ ತನ್ನ ಕಸೂತಿ ಹಾಕಿದ ಕರ್ಚಿಫ್ ಕೊಟ್ಟಳು. ಸಿಂಧು ಬ್ಯಾಗಲ್ಲಿ ಸಂಜೆ ಆಟವಾಡಬೇಕಾದ್ರೆ ಅಂತ ಎತ್ತಿಟ್ಟುಕೊಂಡಿದ್ದ ಚಿಕ್ಕಿಯನ್ನ ಸುನೀತಾ ಮೂಲಕ ಸ್ವರ್ಣಳಿಗೆ ಕಳಿಸಿದಳು. ಹುಡುಗರೆಲ್ಲ ಇದ್ದಕ್ಕಿದ್ದಂಗೆ ಗಂಭೀರವಾಗಿ ತಮ್ಮ ತಮ್ಮ ಅಭ್ಯಾಸದಲ್ಲಿ ಮುಳುಗಿಹೋದವರ ಹಾಗೆ ಕೂತುಕೊಂಡರು. ಟೀಚರ್ ಕೂಡಾ ಹುಡುಗರ ನೋಟ್ಸ್ ಪರಿಶೀಲನೆ ಮಾಡತೊಡಗಿದರು. ಹತ್ತು ನಿಮಿಷದಲ್ಲಿ ರಿಸೆಸ್ ಬೆಲ್ಲಾದ ಕೂಡಲೆ ಟೀಚರ್ ಹೊರಟುಹೋದರು.

ಎಲ್ಲರೂ ಸ್ವರ್ಣಳ ಸುತ್ತ ಅವಳಿಗಿಷ್ಟವಾಗಲಿ ಅಂತ ಏನೇನೋ ಕಸರತ್ತು ಮಾಡಿದರು.ಯಾವಾಗಲೂ ಎಲ್ಲರ ಹತ್ತಿರವೂ ಸಿಟ್ಟು ಮಾಡಿಕೊಂಡೇ ಇರುವ ಪ್ರೇಮ, ಅವಳ ಬ್ಯಾಗಿಂದ ಒಂದು ಮಾವಿನ ಮಿಡಿ ತೆಗೆದು ಸ್ವರ್ಣಳ ಕೈಗಿತ್ತಳು. ಅವಳ ಬಾಡಿ ಹೋದ ಮುಖ ಚೂರು ಚೂರಾಗೆ ಅರಳಿ ಮತ್ತೆ ಹೂವಾಯಿತು. ಬಂಗಾರದ ಬಳ್ಳಿಯಲ್ಲಿ ಕಿರುನಗೆಯ ಹೂವರಳಿ..

ಇದೆಲ್ಲ ಯಾಕೆ ನೆನಪಾಯಿತೆಂದರೆ ಒಂದು ಪುಸ್ತಕ ಓದ್ತಾ ಇದೀನಿ. "ಕೈಟ್ ರನ್ನರ್" ಅಂತ ಖಾಲಿದ್ ಹುಸೇನಿ ಯವರು ಬರೆದ ಕಾದಂಬರಿ. ಇಬ್ಬರು ಪುಟ್ಟ ಗೆಳೆಯರು ಅವರ ಮಧ್ಯದ ವಿನಾಕಾರಣ ಪ್ರೀತಿ, ಸಿಟ್ಟು ಹತಾಶೆ, ಕುಟುಂಬ ಜೀವನ, ಸುಮ್ಮನೆ ಹೂವರಳಿದಂತೆ ಇದ್ದ ಊರೊಂದು ಅಕ್ಕಪಕ್ಕದವರ ದುರಾಸೆಯಿಂದ ಯುದ್ಧಭೂಮಿಯಾಗಿ ಇವತ್ತು ಜಗತ್ತಿನ ಪವರ್ ಫುಲ್ ದೇಶಗಳನ್ನೇ ನಡುಗಿಸುವ ಉಗ್ರಗಾಮಿ ದೇಶವಾಗಿ ಬದಲಾದ ಹೃದಯಸ್ಪರ್ಶಿ ಚಿತ್ರಣ.. ಹೌದು ಇದು ಆಫ್ಗಾನಿಸ್ತಾನದಲ್ಲಿ ನಡೆವ ಕತೆ. ಇನ್ನೂ ಪೂರ್ತಿ ಮುಗಿಸಿಲ್ಲ.. ಪುಸ್ತಕದ ಪುಟಪುಟವೂ ಒಂದು ಮಾರ್ದವ ಅನುಭೂತಿಯನ್ನು ಕಟ್ಟಿಕೊಡುತ್ತದೆ.

ಮಕ್ಕಳು ಹೇಗೆ ಏನು ಗೊತ್ತಿಲ್ಲದೆ ಯಾವುದೋ ಇನ್ನೊಂದು ಪುಟ್ಟ ಮನಸ್ಸನ್ನ ಹೇಗೆ ಮುದುಡಿಸುತ್ತಾರೆ ಮತ್ತು ಮಕ್ಕಳು ಹೇಗೆ ಒಂದು ಪುಟ್ಟ ಖುಷಿಯಲ್ಲಿ ಏನೆಲ್ಲ ದುಃಖವನ್ನು ಮರೆತುಬಿಡುತ್ತಾರೆ..! ಡಯಾಸಿನ ಮೇಲೆ ಅಳುತ್ತಿದ್ದ ಸ್ವರ್ಣ ಗೆಳತಿಯರೆಲ್ಲ ಜೊತೆಗೂಡಿದ ಕೂಡಲೆ ಒಂದು ಪುಟ್ಟ ಚಿಕ್ಕಿಯಿಂದ, ಮಾವಿನ ಮಿಡಿ ಚೂರಿಂದ ಎಷ್ಟು ಖುಷಿ ಪಡುತ್ತಾಳಲ್ಲವಾ?

ಈ ಕಾದಂಬರಿ ಮಕ್ಕಳೆಂಬ ಮಾಯಾದೀಪದ ಬೆಳಕಲ್ಲಿ ಮನುಷ್ಯನ ನೂರೆಂಟು ಒಳಮುಖಗಳನ್ನ, ಸಂಬಂಧ,ಧರ್ಮ, ರಾಜಕೀಯದ ಹಲವು ಹತ್ತು ಮಗ್ಗುಲುಗಳನ್ನ ಅನನ್ಯವಾಗಿ ಕಟ್ಟಿಕೊಡುತ್ತದೆ. ಅಷ್ಟೆ ಅಲ್ಲ ನಮಗೆ ಪರಿಚಯವೇ ಇಲ್ಲದ ಪ್ರೀತಿ ಹುಟ್ಟಿಸುವ ಕಾಬೂಲಿವಾಲರನ್ನ ಅನಾವರಣಗೊಳಿಸುತ್ತದೆ.ರಷ್ಯನ್ ದಾಳಿಗೂ ಮೊದಲು ಇದ್ದ ಸಾದಾ ಸೀದಾ ಆಫ್ಘಾನಿಸ್ತಾನ, ರಷ್ಯನ್ ದಾಳಿಯಲ್ಲಿ ಪುಡಿಗೊಂಡ ಆಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ಧರ್ಮಾಂಧತೆಯಲ್ಲಿ ಉಸಿರುಕಟ್ಟಿ ನೇತಾಡುತ್ತಿರುವ ಆಫ್ಘಾನಿಸ್ತಾನದ ಒಂದು ಅಪರೂಪದ ಚಿತ್ರಣವಿಲ್ಲಿದೆ. ಹೇಗಾದರೂ ಮಾಡಿ ಪುರುಸೊತ್ತು ಮಾಡಿ ಓದಿ.

ಕಾದಂಬರಿಯ ಬಗ್ಗೆ ಒಂದಿಷ್ಟು ರಿವ್ಯೂ ಅದೂ ಇದೂ ವಿವರಗಳು ಇಲ್ಲಿವೆ. ಮತ್ತೊಂದು ವಿಶೇಷ ಅಂದ್ರೆ ಇದು ಸಿನಿಮಾ ಕೂಡಾ ಆಗ್ತಿದೆ. ಡಿಸೆಂಬರಲ್ಲಿ ರಿಲೀಸ್ ಅಂತ ಹಾಕಿದಾರೆ.

Thursday, October 18, 2007

ಗಡೀಪಾರು ಗವಾಕ್ಷಿ

ಸಂಜೆಯ ಸೂರ್ಯ ಬೆಂಕಿ ಕಿರಣಗಳ ಶಾಲು ಹೊದ್ದು ಪಶ್ಚಿಮದ ಗೂಡಿಗೆ ಹತ್ತಿರವಾಗುತ್ತಿದ್ದ. ಸ್ವಲ್ಪ ಮೊದಲು ನಿಂತ ಮಳೆಯಿಂದಾಗಿ, ಸಾಯಂಕಾಲದ ದೀಪ ಹಚ್ಚಲು ಕೈಕಾಲು ಮುಖ ತೊಳೆದ ಹುಡುಗಿಯಂತೆ ಫ್ರೆಷ್ಷಾಗಿದ್ದ ಭೂಮಿ. ಆಕಾಶದ ತುಂಬ ಇನ್ನೂ ಚದುರಿರದ ಬಿಳಿ ಬಿಳಿ ಮೋಡ. ಸಂಜೆ ಇಷ್ಟು ಚಂದ ಇದ್ದರೆ ಅಂಶು ಎಷ್ಟೇ ತಡಮಾಡಿ ಬಂದರೂ ಕಾಯುತ್ತೇನೆ ಅಂದ್ಕೊಂಡು ಕಲ್ಲು ಬೆಂಚಿಗೆ ಹಾಗೇ ಒರಗಿ ಪಾರ್ಕಿನ ಬೇಲಿಯಾಚೆಗಿದ್ದ ರಸ್ತೆಗೆ ಕಣ್ಣು ಬಿಸಾಕಿ ಕೂತೆ.

ವಿಧ ವಿಧವಾದ, ರಂಗುರಂಗಿನ, ಹಲವು ವಾಹನಗಳು ಮೂತಿಯುಬ್ಬಿಸಿ ಸುಂಯ್ ಅಂತ ಹೋಗ್ತಿದ್ರೆ, ಕೈನಿ, ಬೈಕುಗಳು ನಾವೇನು ಕಡ್ಮೆ ಎಂದು ಜುಮ್ ಅಂತ ಓವರ್‌ಟೇಕ್ ಮಾಡ್ತಿವೆ. ಆಟೋರಾಜರಂತೂ ಬಡಪಾಯಿ ಪ್ರಯಾಣಿಕ ಪ್ರಜೆಗಳು ಕೈ ಅಡ್ಡ ಹಾಕಿರುವುದನ್ನು ಲಕ್ಷಿಸದೆ ರಾಜಗಾಂಭೀರ್ಯ ಮತ್ತು ವೇಗಗಳಿಂದ ತಮ್ಮ ಹಿರಿಮೆಗೆ ತಕ್ಕಂತೆ ಸಾಗುತ್ತಿವೆ. ನೀವು ಮಾತ್ರ ರಸ್ತೆಯಿಡೀ ಸವಾರಿ ಮಾಡ್ತಿದ್ರೆ, ನಾವೇನು ನಿಲ್ದಾಣದಲ್ಲೇ ಇರ್ಬೇಕಾ ಎಂದು ಗುರುಗುಟ್ಟುವ ಸಿಟಿಬಸ್ಸುಗಳು, ನಿಮ್ದು ಸ್ಪೀಡಾದ್ರೆ ನಮ್ದು ಸೌಂಡು ಅಂತ ಹಾರನ್ನಿಸುವ ಲಾರಿಗಳು, ಈ ಎಲ್ಲ ಮೋಟಾರುಗಳ ಮಧ್ಯೆ ಶಿಲಾಯುಗದ ಗಾಂಭೀರ್ಯದಿಂದ ತಲೆತಗ್ಗಿಸಿ ಅಲ್ಲೊಂದು ಇಲ್ಲೊಂದು ಎತ್ತಿನ ಗಾಡಿ... ಇಲ್ಲಿ ಪಾರ್ಕಿನ ಕಾಲುಹಾದಿಯಲ್ಲಿ ಸೈಕಲ್ ಕಲಿವ ಚಿಣ್ಣರು, ಹುಲ್ಲಿನ ಮೇಲೆ ಕುಳಿತು ಗಹಗಹಿಸಿ ನಕ್ಕು ವ್ಯಾಯಾಮ ಮಾಡುತ್ತಿರುವ ಅಜ್ಜ ಅಜ್ಜಿಯರು.. ಸುತ್ತಮುತ್ತಲು ನೂರೆಂಟು ಚಿತ್ರಗಳ ಗ್ಯಾಲರಿಯಾಗಿ ಭಾಸವಾಯಿತು.

ಸೂರ್ಯ ಮನೆಗೆ ಹೋಗ್ತಾ ಹಾಗೇ ಬಿಟ್ಟು ಹೋದ ಬಣ್ಣದ ಕ್ಯಾನ್ವಾಸಿನ ಮೇಲೆ ರಾತ್ರಿ ತನ್ನ ಕಪ್ಪುನೀಲಿ ತೆರೆ ಹೊದೆಸತೊಡಾಗಿತು. ಅಲ್ಲಲ್ಲಿ ಒಂದೊಂದು ಮಿನುಗು ಚುಕ್ಕಿ. ಅಲ್ಲಿ ದೂರದ ತಿರುವಿನಲ್ಲಿ ಮಿನುಗಿದ ದೀಪ ಅಂಶುನ ಬೈಕಿಂದಾ? ನೋಡಲು ಬಗ್ಗಿದೆ - ಅಲ್ಲ. ಈ ಮಾರಾಯ ಇನ್ನೂ ಎಷ್ಟು ಹೊತ್ತಿಗೆ ಬರ್ತಾನೋ ಅಂದುಕೊಳ್ತಾ ತಲೆಯೆತ್ತಿದೆ. ನನ್ನ ನೋಟದ ನೇರಕ್ಕೇ ಆಕಾಶದ ನೀಲಿಯಲ್ಲಿ ಒಂದು ಬಿಳೀ ವರ್ತುಲವಿತ್ತು. ಬಿಳಿಯೆಂದರೆ ಬಿಳಿಯಲ್ಲ, ಬೂದುಬಣ್ಣ, ಅಂಚು ಮಾತ್ರ ಅಚ್ಚ ಬಿಳಿ. ಆಕಾಶದ ಗವಾಕ್ಷಿಯಂತೆ ಕಾಣುವ ಇದನ್ನು ಅಂಶುಗೆ ತೋರಿಸಿ ವಿವರ ಕೇಳಬೇಕು ಅಂದುಕೊಂಡೆ.

"ಮೇಡಂ ಅದು ಗವಾಕ್ಷಿಯೇ, ಆದ್ರೆ ಆಕಾಶದ್ದಲ್ಲ, ಗಡೀಪಾರುಗವಾಕ್ಷಿ" ಅಂತ ಒಂದು ಆಳದ ದನಿ ಕೇಳಿಸಿತು. ಒಂದರೆ ಕ್ಷಣ ಭಯದಿಂದ ಕೂದಲು ನಿಮಿರಿ "ಅಂಶು" ಅಂತ ಸಿಟ್ಟಿನಿಂದ ಪಕ್ಕಕ್ಕೆ ತಿರುಗಿದರೆ ಅಲ್ಲಿ ಯಾರಿಲ್ಲ.

ಮಾತಾಡಿದ್ದು ನಾನು ಮೇಡಂ.. ಮತ್ತದೇ ವಿಲಕ್ಷಣ ದನಿ. ನನ್ನೆದೆ ಬಡಿತ ನನಗೇ ಕೇಳುತ್ತಿತ್ತು. 'ಇನ್ಯಾವತ್ತೂ ಸೂರ್ಯ ಮುಳುಗಿದ ಮೇಲೆ ಅಂಶುಗೆ ಕಾಯಲ್ಲ, ಭೂಮಿತಾಯಾಣೆಗೂ ಅಂದುಕೊಳ್ತಾ ಆ ದನಿಯ ದಿಕ್ಕಿಗೆ ತಿರುಗಿದೆ. ಅಲ್ಲಿ ಬೆಂಚಿನ ಪಕ್ಕದಲ್ಲಿ, ತೂಗಿ ನಿಂತಿದ್ದ ಆಕಾಶಮಲ್ಲಿಗೆಯ ಮರದಡಿಯಲ್ಲಿ ಎರಡು ಕಣ್ಣುಗಳು ಫಳಫಳಿಸುತ್ತಿದ್ದವು. ಹೆದರಿಕೆಯಿಂದ ಎದ್ದು ನಿಂತುಕೊಂಡೆನಾದರೂ ಹೆಜ್ಜೆ ಮುಂದಡಿಯಿಡಲಾಗಲಿಲ್ಲ. ಈ ಹಾಳು ಕಣ್ಣೋ ಬೇರೆ ಕಡೆಗೆ ನೋಡುತ್ತಲೂ ಇಲ್ಲ. ಈಗಷ್ಟೇ ಹೊತ್ತಿಕೊಂಡ ಬೀದಿದೀಪದ ಬೆಳಕು ಆತನ ಮೇಲೆ ಬೀಳುತ್ತಿತ್ತು. ಮಧ್ಯವಯಸ್ಕನ ಹಾಗಿದ್ದ. ತಿಳಿಬಣ್ಣದ ಬಟ್ಟೆ, ಆ ಮರಕ್ಕೊರಗಿ ಕೂತಿದ್ದ. ಮಬ್ಬುಗತ್ತಲ ಹಿನ್ನೆಲೆ ಭಯ ಹುಟ್ಟಿಸುತ್ತಿತ್ತಾದರೂ ಅವನನ್ನು ನೋಡಿ ಭಯವಾಗಲಿಲ್ಲ.

'ಭಯ ಯಾಕೆ ಮೇಡಂ? ನೀವು ಕಾಯುತ್ತಿರುವವರು ಇನ್ನು ಐದ್-ಹತ್ತು ನಿಮಿಷದಲ್ಲಿ ಬರ್ತಾರೆ. ಅವ್ರಿಗೆ ಈ ಗವಾಕ್ಷಿ ಬಗ್ಗೆ ಏನೂ ಗೊತ್ತಿಲ್ಲ" ಅಂದವನ ಮುಖದಲ್ಲಿ ನಗು ಕಾಣಿಸಿತಾ..? 'ಲೇ ಚಂದೂ, ಚಂದನಾ, ಮಂಕೇ, ಸುಮ್ನೇ ಇಲ್ಲಿಂದ ನಡೆದು ಅಲ್ಲಿರೋ ಬಸ್‌ಸ್ಟಾಪಲ್ಲಿ ನಿಂತರೆ ೪೩ ಬರತ್ತೆ. ಬೇಡ, ಇವತ್ತು ಆಟೋಲೆ ಹೋಗು, ಇಲ್ಲಿ ನಿಲ್ಬೇಡವೇ ಅಂತ ಮನಸ್ಸು ಛೀಮಾರಿ ಹಾಕುತ್ತಿದ್ರೆ, ನಾನು ಪಾರ್ಕಿನ ಗೇಟಿನ ಕಡೆಗೆ ಹೆಜ್ಜೆ ಕಿತ್ತಿಟ್ಟೆ. ಆ ಮರ ದಾಟುವಾಗ ಅದ್ಯಾವ ಭಂಡತನವೋ ಅಲ್ಲಿ ನಿಂತು "ಅದೇನದು ಗಡೀಪಾರು ಗವಾಕ್ಷೀಂದ್ರೆ? ಅದ್ಯಾಕೆ ಅಲ್ಲಿದೆ? ಅದ್ರ ಬಗ್ಗೆ ನಿಮಗೇನು ಗೊತ್ತು? ಕೇಳಿಯೇಬಿಟ್ಟೆ. ಆವನು ಕೊಟ್ಟಿದ್ದು ಉತ್ತರವೋ ಕವಿತೆಯೋ ಅರ್ಥವಾಗಲಿಲ್ಲ.


"ಹೂಗನಸ ಬಿತ್ತಿ ಬೆಂಕಿಬೆಳೆ ಬೆಳೆದ ಕನಸಿಗ,
ಕನಸುಗಳ ಸಾಮ್ರಾಜ್ಯದಿಂದ
ಗಡೀಪಾರಾದ.
ಮುಖವಿಲ್ಲದ ಜನಸಂದಣಿಯಲ್ಲಿ
ನೆಮ್ಮದಿಯ ನಗುವನರಸುತ್ತಕಳೆದುಹೋದ.."


ಮತ್ತೆ ಅವನೇ ಮಾತಾಡಿದ - ನಿಮಗೆ ಕಾಣಿಸುವ ಆ ವರ್ತುಲದ ಹಿಂದಿರುವುದು ಕನಸುಗಳ ಸಾಮ್ರಾಜ್ಯ, ಅದು ಆ ಸಾಮ್ರಾಜ್ಯದ ಗವಾಕ್ಷಿ. ಅಲ್ಲಿಂದ ಗಡೀಪಾರಾದವರೆಲ್ಲ ಆ ಗವಾಕ್ಷಿಯಿಂದಾನೇ ಈ ಕಡೆ ಬಂದು ಬೀಳೋದು. " ನಾನು ತಬ್ಬಿಬ್ಬಾದೆ. ಕನಸು, ಕನಸಿನ ಸಾಮ್ರಾಜ್ಯ ಅರ್ಥವಾಯ್ತು. ಈ ಗಡೀಪಾರು-ಗವಾಕ್ಷಿ ಎಲ್ಲ ಗೊಂದಲವಾಗ್ತಿದೆ. 'ನೀವೂ' ಅಷ್ಟರಲ್ಲಿ ಆತನೇ ಹೇಳಿದ.
'ನಾನೂ ಅಲ್ಲಿಂದ ಈಗ ೨೦ ವರ್ಷಗಳ ಕೆಳಗೆ ಗಡೀಪಾರಾಗಿ ಈ ಕಡೆ ಬಂದು ಬಿದ್ದೆ. ಆಗಾಗ ಇಲ್ಲಿ ಬಂದು ಕೂತು ಬರಿಯ ಗವಾಕ್ಷಿ ನೋಡಿ ಮನೆಗೆ ವಾಪಸಾಗ್ತೀನಿ. ನಿಮಗೆ ಪೂರ್ತಿ ಅರ್ಥವಾಗೋ ಹಾಗೆ ಹೇಳ್ಬೇಕಾದ್ರೆ ತುಂಬ ಸಮಯ ಬೇಕು. ನಿಮಗೆ ಆ ಗವಾಕ್ಷಿ ಕಾಣಿಸ್ತಾ ಇದೆ ಅನ್ನೋದೆ ಅರ್ಧ ವಿಷಯ ಅರ್ಥವಾದ ಹಾಗೆ. ಅಲ್ನೋಡಿ ನಿಮ್ಮವರು ಬರ್ತಿದ್ದಾರೆ. ನಾನು ಹೊರಟೆ. ನಾವು ನಾಳೆಯಲ್ಲ ನಾಡಿದ್ದು ಇಲ್ಲೇ ಸಿಗೋಣ.. ಅಂದವನೇ ಸರ್ರನೆದ್ದು ಆ ಪಾರ್ಕಿನ ಕತ್ತಲೆಯಲ್ಲಿ ಕಳೆದು ಹೋದ.

ಸಾರಿ ಚಂದೂ ತುಂಬ ಕಾಯಿಸ್ಬಿಟ್ಟೆ.. ಅಂತ ಓಡುತ್ತ ಬಂದ ಅಂಶುವಿಗೆ ಆಕಾಶ ತೋರಿಸಿ ಕೇಳಿದೆ. ಅಲ್ಲಿದೆಯಲ್ಲಾ ಗವಾಕ್ಷಿ, ಆ ಬಿಳೀ ವರ್ತುಲ ಅದೇನದು? ಯಾವ ವರ್ತುಲಾನೇ? ಅಲ್ಲಾ ನಾನು ಲೇಟಾಗಿ ಬಂದೆ ಅಂತ, ನೀನು ಹೀಗೆಲ್ಲ ತಮಾಷಿ ಮಾಡ್ಬೇಡ. ಬಾ ಕಾಫಿ ಕುಡೀತಾ ಮಾತಾಡೋಣ..
ಸುಮ್ಮನಾದೆ. ಮಾತು ಪ್ರಶ್ನೆಗಳನ್ನ ನಾಡಿದ್ದಿಗೆ ಕಾದಿಡೋಣ ಅನಿಸಿತು.

ಬೆಳಿಗ್ಗೆ ಎಂಟೂಮುಕ್ಕಾಲಿಗೆ ಜೆ.ಸಿ.ರಸ್ತೆಯ ಸಿಗ್ನಲ್ಲಿನಲ್ಲಿಳಿದು ಸರಸರನೆ ನಡೆಯುತ್ತಿದ್ದೆ. ಅಂಗಡಿಗಳೆಲ್ಲ ಆಗತಾನೆ ಕಣ್ಣು ತೆರೆಯುತ್ತಿದ್ದವು. ನಮ್ಮೆಲ್ಲರ ವಾಹನಗಳನ್ನು ಪುಷ್ಪಕವಿಮಾನದಂತೆ ಮಾರ್ಪಡಿಸುವ ಆಟೋ ಸಲಕರಣೆಗಳ ಅಂಗಡಿಗಳಿದ್ದವು ಇಕ್ಕೆಲದಲ್ಲಿ. ತಲೆಗೆ ಬಲೆಬಲೆಯ ಬಿಳೀ ಟೋಪಿ ಹಾಕಿದ ದೊಡ್ಡ ಪೋರ, ಅವನಂಗಡಿಯ ಕರಿ ಬಿಳಿ ಮ್ಯಾಟ್ರೆಸ್ ಎಳೆದು ರಸ್ತೆಗೆ ಕಾಣಿಸುವ ಹಾಗೆ ಕಟ್ಟಿಡುತ್ತಾ, ಪಕ್ಕದ ಅಂಗಡಿಯಲ್ಲಿ ವೆಂಕಟ್ರಮಣನ ಫೋಟೋಕ್ಕೆ ಮಲ್ಲಿಗೆ ಮಾಲೆ ಕೊಳ್ಳುತ್ತಿದ್ದ ಇನ್ನೊಂದ್ ಸ್ವಲ್ಪ ದೊಡ್ಡ ಪೋರನಿಗೆ ನಕ್ಕು ಕುಶಲೋಪರಿ ವಿಚಾರಿಸುತ್ತಿದ್ದ. ನಕ್ಕೋ ಬೇ, ನಿನ್ನೇದು ರಾತ್ರೆ ಶಟ್ರ್ ಎಳ್ಕೊಂಡಿ ಹೋಗೋಷ್ಟೊತ್ತಿಗೆ ಟಿಕೇಟ್ ಎಲ್ಲಾ ಸೋಲ್ಡ್ ಔಟು.. ಹಾಂ ಅದೇ ನನ್ಮಗಂದು ಡಬ್ಬಾ ಸಿನ್ಮಾ, ದುಡ್ಯೋ ಮಗಾ ಯಾವನು ಬ್ಲಾಕಲ್ಲಿ ತಕೊಂಡು ನೋಡ್ತದೆ.. ಈವತ್ತು ಜಲ್ದೀ ಹೊಲ್ಟ್ರೆ ನೋಡಬೈದು..ಮುಂದೆ ಕೇಳಿಸಲಿಲ್ಲ. ರಸ್ತೆ ದಾಟಬೇಕಿತ್ತು.

ದಾಟುವಾಗ ಗಮನಿಸಿದೆ. ನನ್ನ ಪಕ್ಕದಲ್ಲೇ ಒಬ್ಬ ಅಜ್ಜ.. ದಾಟಿಸಬೇಕೇನೋ ಅಂದ್ಕೊಂಡೆ. ನನ್ನನ್ನ ಗಮನಿಸಿದ ಅವನ ಮುಖದಲ್ಲಿ ನಸುನಗು.

ಎಲ್ಲಾರ್ಗೂ ದಾಟ್ಸೋ ನಂಗೇ ಸಹಾಯನೇನಮ್ಮಾ? ಅಷ್ಟು ವಯಸ್ಸಾದ ಹಾಗೆ ಕಾಣ್ತೀನಾ? ನಂಗೆ ಸಂಕೋಚವಾಯಿತು. ಇಲ್ಲಜ್ಜ, ವಯಸ್ಸಾದ ಹಾಗೇಂತಲ್ಲ. ನೀವು ಆಚೆ ಈಚೆ ನೋಡುತ್ತಾ ನಿಧಾನ ಮಾಡ್ತಿದ್ರಲ್ಲಾ ಅದಕ್ಕೇ... ನಾನು ನಿಂಗೇ ಕಾಯ್ತಿದ್ದೆ ಕಣಮ್ಮೋ..ನಂಗೆ ಯೋಚನೆಯಾಯಿತು. ಮತ್ತೆ ಆತನನ್ನು ದಿಟ್ಟಿಸಿದೆ. ವಯಸ್ಸು ತನ್ನ ಛಾಪನ್ನ ಚೆನ್ನಾಗೇ ಒತ್ತಿತ್ತು. ನಿರಿಬಿದ್ದ ಚರ್ಮ, ಹಣ್ಣಾದ ಕೂದಲು, ವಯಸ್ಸಿನ ಭಾರದಿಂದ ಬಾಗಿದ ಬೆನ್ನು.. ಆ ಮುಖದಲ್ಲಿನ ಹೊಳೆವ ಕಣ್ಗಳೆರಡು ಮಾತ್ರ ಅಜ್ಜನ ಜೀವಂತಿಕೆಯನ್ನು, ಚೈತನ್ಯವನ್ನು ಸಾರಿ ಹೇಳುತ್ತಿತ್ತು. ಓದಿಕೊಂಡವರ ಹಾಗೆ ಕಾಣಲಿಲ್ಲ. .. ನನ್ನ ಮನಸ್ಸನ್ನು ಓದಿದವರ ಹಾಗೆ ಹೇಳಿದ ಅವನು.

ಹೌದ್ ತಾಯೀ, ನಾನು ಶ್ಯಾನೆ ಓದ್ಕಂಡಿಲ್ಲ. ಇಂಗೇ ಕನ್ನಡ ಪ್ಯಾಪ್ರು, ಬಿಲ್ಲು, ಅಡ್ರೆಸ್ಸು, ಓದ್ಬಲ್ಲೆ. ಹೆಬ್ಬೆಟ್ಟಲ್ಲ... ಅಂಗೂ ಇಂಗೂ ಏನಾದ್ರೂ ಅರ್ಜಿ ಕೊಡೋವಾಗ ತೆಪ್ಪಾದ್ರೂ ನಾನೇ ಬರ್ದಾಕ್ತೀನಿ.. ಇಬ್ಬರೂ ರಸ್ತೆ ದಾಟಿ ನನ್ನ ಆಫೀಸಿನ ಕಡೆ ನಡೆಯುತ್ತಿದ್ದೆವು. ನಂಗೆ ಆತನ ಮೊದಲ ಮಾತು ನೆನಪಾಯ್ತು.
ಏನ್ ಕೆಲಸ ಮಾಡೋದಜ್ಜಾ ನೀವು ಕೇಳಿದೆ..
ಅವನು ನಕ್ಕ. ಈ ಪ್ರಪಂಚದ ಯಾವಾರ ಮುಗುಸ್ ಕೊಂಡು ಒಂಟೋಯ್ತಾರಲ್ಲವ್ವಾ - ಅಂತೋರನ್ನ ಕಳ್ಸೋದಕ್ಕೆ ನಮ್ ವಾಹ್ನಾನೇ ಆಗ್ಬೇಕು.. ಬದುಕಿದ್ದಾಗ ಎಂತ ಲಗ್ಷುರಿ ಗಾಡೀನೇ ಇಟ್ಗಂಡಿರ್ಲಿ.. ಸತ್ತೋದ್ ಮ್ಯಾಕೆ ಯಾವೋನ್ನೂ ಕಾರ್ ಹತ್ಸಾಕಿಲ್ಲ. ನಮ್ಮ ಬಣ್ಣ ಹಾರೋದ್ ಡಬ್ಬಾ ಗಾಡೀಲೆ ಸಾಗ್ಸಾದು... ಶವವಾಹನ.. ಹಾಂ ಅದೇಯಾ..ಯಾಕ್ತಾಯೀ ಈಗ ನನ್ನೋಡಿ ಎದ್ರುಕೆ ಆಗ್ತೈತಾ?
ಇಲ್ಲಜ್ಜಾ, ಮತ್ತೆ ನೀನ್ಯಾಕೆ ನಂಗೆ ಕಾಯ್ತಾ ನಿಂತಿದ್ದೆ ಅಲ್ಲಿ..?
ಓ ಅದಾ.. ನಿನ್ನೆ ನಿಂಗೆ ಪಾರ್ಕಾಗೆ ಸಿಕ್ಕಿದ್ನಲ್ಲ ಅದೇನೋ ಆಕಾಸ್ವ ನೋಡ್ಕೊಂಡು ಕಯಿತೆ ಮಾತಾಡ್ತಾನಲ್ಲ ಅಂವ ಹೇಳ್ದ ಅದ್ಕೆ..
ಮೈ ಜುಮ್ಮೆಂದಿತು. ಅವನು ಏನು ಹೇಳ್ದ? ನಿಮ್ಗೆಲ್ಲ ನಾನು ಇಲ್ಲಿ ಓಡಾಡೋದು ಹೇಗೆ ಗೊತ್ತು... ನಾನು ಒಳಗೊಳಗೇ ಅಧೀರಳಾದೆ.

ಹೆದ್ರಕೋಬೇಡ ತಾಯೀ, ನಿಂಗೇನೂ ಕ್ಯಟ್ಟದ್ ಮಾಡಕ್ ಬರ್ಲಿಲ್ಲ ನಾನು. ಅಂವಂಗೆ ನಾಳೆ ತಂಕಾ ತಡ್ಯಕ್ಕಾಗಿಲ್ಲ. ಇವತ್ತು ಬರಕ್ಕೆ ಡೂಟಿ ಐತಲ್ಲ. ಅಂಗಾಗೆ ನಂಗ್ ಯೋಳ್ದ.. ನಾವೆಲ್ಲ ಎಂಗಿದ್ರೂ ಕಂಡ ಕನಸು ಮುಕ್ಕಾಗಿ ಏನುಳದೈತೋ ಅದ್ರಾಗೆ ಬದುಕೋ ಗುಂಪಿಗೆ ಸೇರಿದೋರಲ್ವಾ.. ಅಷ್ಟರಲ್ಲಿ ನನ್ನ ಆಫೀಸಿನ ಮುಂದಿದ್ದೆವು. ನಾನು ಅಜ್ಜನ ಮುಖ ನೋಡಿದೆ. ಸಾವಿರಗಟ್ಟಲೆ ಸಾವು-ಕರೆಗಳನ್ನು ಗೋಳು-ಕರೆಗಳನ್ನು ನೋಡಿ, ಕೇಳಿ, ಪಕ್ಕಾಗಿದ್ದ ಅವನ ಹಣೆಯ ಗೆರೆಗಳು ನನ್ನನ್ನು ಅಲ್ಲೇ ನಿಲ್ಲಿಸಿದವು. ಹಣ್ಯಾಗ್ ಏನೈತಿ ನಮ್ಮವ್ವಾ? ನೀವು ಓದಕ್ಕಲ್ತವ್ರು, ಕಂಪೂಟ್ರಿನಾಗೆ ಕ್ಯಲ್ಸ ಮಾಡವ್ರು ತಿಳ್ಕಂಡಿರೋದನ್ನ ಈ ಬಡ ಡ್ರೇವರ್ ಏನ್ ಯೋಳ್ತಾನೆ.. ಅದೂ ಹೆಣ ಸಾಗ್ಸೋನು.. ಅದಿರ್ಲಿ ನಮ್ಮುಡುಗ ಏನಂದಾ ಅಂತ ಯೋಳ್ಬುಡ್ತೀನಿ ಅಲ್ದೆ ನಿಮ್ಗೂ ಹೊತ್ತಾಯ್ತದೆ ಕ್ಯಲ್ಸ ಮಾಡವ್ರನ್ನು ಯಾವತ್ತೂ ತಡ್ದು ನಿಲ್ಲಿಸ್ಬಾಡ್ದು.. ಪೂಜೆ ನಿಲ್ಸಿದಷ್ಟೇ ಪಾಪ ಸುತ್ಗೋತ್ತದೆ ಅಲ್ಲೇನ್ರವಾ? ಅವನ ಮುಖದಲ್ಲಿ ಹೊಳೆದಿದ್ದು ಯಾರು ಬಸವಣ್ಣನವರಾ?

ಅಷ್ಟರಲ್ಲಿ ಅಜ್ಜ ಮಾತಿನ ಮಳೆಗರೆದ.. ಅದೂ ನೀವು ಎಳೇಜನ ಯಾನ್ ಯಾನೋ ಕನ್ಸು ಕಾಣ್ತೀರಲ್ರವ್ವಾ ಹಿಂತಾದ್ನೇ ಓದಬೇಕು, ಹಿಂತಲ್ಲೆ ಓದ್ ಬೇಕು, ಹಿಂತಾ ಕ್ಯಲ್ಸನೇ ಇಡೀಬೇಕು, ಸಂಬಳ ಇಂಗಿಂಗೇ ಇರ್ಬೇಕು, ಗೆಣೆಕಾರನೋ ಗೆಣೆಕಾತಿನೋ ಇರಬ್ಯಾಕು, ಇಂಗಿಂಗೇ ಇರಬ್ಯಾಕು.. ಇಂಗೇ ಯಿನ್ನೂ ಯೇನೇನೋ.. ಅಂತ ಕನ್ಸು ಕಾಣೋವ್ರೆಲ್ಲ ಒಂದ್ಕಡೆ ಇರ್ತಾರಂತೆ. ನಿಮ್ಗೆಲ್ಲ ನಂಬ್ರು ಹಾಕೋ ಮ್ಯಾಷ್ಟ್ರು ಅವತ್ತು ತಲಕ್ಯಟ್ಟು ನಂಬ್ರು ಸರೀಗೆ ಒಗೀಲಿಲ್ಲಾಂದ್ರೆ, ಅಪ್ಲಿಕೇಸನ್ನು ಕೊಟ್ಗಂಡು ನಿಂತ್ರೆ ನಿಂತಾವ ಫೀಸ್ ಕೊಡಾಕಾಗಾಕಿಲ್ಲ ಹೋಗಯ್ಯೋ ಅಂತ ಸೀಟ್ ಕೊಡ್ದೆ ಕಳ್ಸಿದಾಂದ್ರೆ, ಅಗ್ಲೂ ರಾತ್ರೆ ಕೂತ್ಕಂಡ್ ಓದಿ, ನಂಬ್ರಾನೂ ತ್ಯಗ್ದು, ಹಿಂಟ್ರೂನಾಗೆಲ್ಲ ಚಲೋ ಮಾಡಿದ್ರೂ ಜಾತಿನೋ, ಸಿಫಾರ್ಸೋ ಯಾವ್ದೋ ಸರೀಗಾಗ್ಲಿಲ್ಲ ಅಂತ ಕ್ಯಲ್ಸ್ ತ್ಯಪ್ಪೋದ್ರೆ.. ಸಿಕ್ಕಿದ್ ಕೆಲ್ಸದಾಗೂ ತಿಂಗಳ್ ನಡ್ಸೋದೇ ಕಷ್ಟ ಆಗೋದ್ರೆ, ಎಲ್ಲಾನೀನೇ ಅಂತ ಕಣ್ಣಾಗ್ ಕಣ್ಣಿಟ್ಟು ನೋಡುದ್ ಗೆಣೆಕಾರ ಯೋನೋ ಕಾರ್‍ಣಾನೇ ಕೊಡ್ದೆ ಉಲ್ಟಾ ಒಡುದ್ರೆ.. ಹಿಂಗೇ.. ಕಂಡಿದ್ ಕನುಸೆಲ್ಲ ನೋಡ್ತಾ ನೋಡ್ತಾ ನೀರ್ ಗುಳ್ಳೆ ತರಾ ಒಡುದ್ ಹೋಗುತ್ತಲ್ಲವ್ವಾ ಆವಾಗ, ಅಲ್ಲಿ ಕನಸಿನ ರಾಜ್ಯದಾಗೆ ಇರಾಕಾಗಾಕಿಲ್ಲ. ಯಾಕ್ ಯೋಳಿ.. ಅಲ್ಲಿರೋರೆಲ್ಲಾ ಕನಸು ಕಾಣ್ತಿರ್ತಾರೆ ಅದನ್ನ ಸುಳ್ಳು ಅಂತ ಯೋಳೋಕ್ಕಾಗಲ್ಲ, ನಮ್ಮ ಕನಸು ಮುರುದ್ ಬಿದ್ದಿದ್ದನ್ನ ತಡ್ಕೊಳಾಕ್ಕಾಗಲ್ಲ.. ಸೂಕ್ಷ್ಮಸ್ತರು ಅಂಗೇ ಬದುಕೋ ದಾರಿ ಬರ್ ಬಾದಾಗೋಗಿ, ಯಂಗ್ ಬಂತೋ ಅಂಗೆ ಜೀವ ತೇಯ್ತಾರೆ.. ಕೊನೆಗೊಂದಿನ ನನ್ ಗಾಡೀ ತಾವ... ಸ್ವಲ್ಪ ಮಂಡಬುದ್ದಿಯೋರು.. ಅಲ್ ಕಂಡ್ತಲಾ ನಿಮ್ಗೆ ಗವಾಕ್ಷಿ ಅದ್ರಾಗೆ ತೂರ್ಕೊಂಡ್ ಬಂದು ಈ ಕಡೆ ಯಾವಾರದ್ ಪ್ರಪಂಚದಾಗೆ ಬೀಳ್ತಾರೆ. ಅಷ್ಟ್ ದಿನ ಅನುಭೋವ್ಸಿದ್ದ ಕನಸು ಅವ್ರಿಗೆ ಏನೋ ಮಾಡ್ಬೇಕು ಅನ್ನೋ ಹಪಾಹಪಿ ತುಂಬಿರುತ್ತೆ. ಮುರುದ್ ಬಿದ್ದು ಮಣ್ ಪಾಲಾದ ಕನ್ಸು ಯಾವಾರ ಕಲ್ಸಿರುತ್ತೆ. ಎಂಗೋ ಹಣೇ ಬರಾ ಬದಲಾಯಿಸ್ ಕ್ಯಂಡು ತಮಗೇ ಬೇಕಾದಂಗೆ ಬದುಕಾದ್ ಕಲ್ತ್ ಬುಡ್ತಾರೆ.. ಉಂಹೂಂ.. ಹಳೇ ಕನ್ಸಿನ ಸಾವಾಸಕ್ಕೇ ಓಗಂಗಿಲ್ಲ.. ಮಣ್ಣು ಪಾಲಾದ್ದು ಮತ್ತೆ ಇವ್ರ ತಾವ ಬರಂಗಿಲ್ಲ..
ಹೂವ ಇವತ್ತು ನಕ್ಕೊಂಡು ಸೆಂದಾಕ್ ಕಾಣ್ತದೆ. ವಾರದ್ ಮ್ಯಾಲೆ ಅದ್ನ ಅಂಗೇ ನೀರ್ನಾಗೆ ಇಟ್ರೆ ಕೊಳ್ತು ನಾರ್‍ತದೆ. ಎಸ್ದು ಬುಡ್ಬೇಕೂ. ಮುರುದ್ ಬಿದ್ದ ಕನ್ಸು ಅಂಗೇ ಅಲ್ಲವ್ರಾ?

ಅದ್ಸರಿ ಅಜ್ಜಾ ನಿಂಗೆ ಹ್ಯಾಗೆ ಈ ವಿಷ್ಯ ಎಲ್ಲಾ ಗೊತ್ತಾತು.. ಐ ಮೀನ್, ಆ ಗವಾಕ್ಷಿ, ಮುರುದು ಬಿದ್ದ ಕನ್ಸು.. ಅದೆಲ್ಲಾ.

ಆಗ ಅವನು ಬಣ್ಣಗೆಟ್ಟ ಹಲ್ಲುಗಳೆಲ್ಲ ಕಾಣುವಂತೆ ನಕ್ಕ ನಗು ಒಂದೆರಡೇ ಹಲ್ಲು ಹುಟ್ಟಿ ನಗುವ ಮಗುವಿನಷ್ಟೇ ಇಷ್ಟವಾಯಿತು. ಈಗ ಬೆಳ್‌ಬೆಳಿಗ್ಗೆ ಇಂಗೆ ಟಿಪ್-ಟಾಪಾಗಿ ಕಾಣ್ತಾ ಇದೀನವ್ವಾ ನಾನು. ಸಂಜಿ ಮ್ಯಾಕೆ ಆಗಿದ್ರೆ ನೀನು ನನ್ನ ರಸ್ತೆ ದಾಟ್ಸೊದಿರ್ಲಿ, ಹತ್ರದಲ್ಲೂ ಹೋಗ್ತಾ ಇರ್ಲಿಲ್ಲ. ನಂಗು ಒಬ್ಬ ಮಗ ಅದಾನೆ. ಅವ್ನೂ ಇಂಗೆ ಓದೋ ಕನ್ಸು ಮುರೀತು. ಅದು ಮುರುದ್ರೆನು ಮೆಕ್ಯಾನಿಕ್ ಆಗಿ ಹೊಸ ಕನ್ಸು ಫಿಟ್ ಮಾಡ್ತೀನಿ ಅಂತ ಹೊಂಟ. ಅವ್ನು ಜ್ವಾಪಾನ ಮಾಡಿದ್ದ ಅದ್ಯಾವ್ದೋ ಕಾಲೇಜುಡುಗಿ, ಆ ಕನ್ಸಿನ ಪೋವ್ರಿಗೆ ಗೇರ್ ಹಾಕಕ್ಕಾಗ್ದೆ ಒಂಟೋದ್ಳು. ನನ್ಮಗ ಕನ್ಸೇ ಕಂಡಿಲ್ಲ ಅನ್ನೋ ಅಂಗೆ ಬದಕಕ್ಕೆ ಪ್ರಯತ್ನ ಪಟ್ಟ ಯಾನ್ ಮಾಡದು. ಅವ್ನೂ ಅದೇ ಪರ್ಪಂಚದಾಗೆ ಉಳ್ದ್ ಬುಟ್ಟಿದ್ದ. ಎಲ್ಲರ ಕನಸೂ ಬಣ್ಣ ಕಟ್ಗಂಡು ಜುಂ ಅಂತ ಇಮಾನದ ಸ್ಪೀಡ್ನಾಗೆ ಹೋಯ್ತಾ ಇರ್ವಾಗ ಇವಂಗೆ ತನ್ನ ಗಾಡಿ ಪಂಚರ್ರಾದದ್ದು ತಡ್ ಕಳಾಕ್ಕಾಗಿಲ್ಲ.. ಅಂಗೇ ಸಂಜೆ ಮೇಲೆ ಒಂದೊಂದೇ ಜಾಮ್ ತಕ್ಕಳ್ಳಾದ್ ಕಲ್ತ. ನನ್ ಹೆಂಡ್ರು ಮಗನ್ನ ಯಂಗಾರಾ ಮಾಡಿ ಓದ್ಸಿ ಬೇರೆ ಕೆಲ್ಸಕ್ಕೆ ಹಚ್ಬೇಕು ಈ ಸಾವಿನ ವಾಹ್ನದ ಸವಾಸ ಬ್ಯಾಡ ಅಂದ್ಕಂಡು ಇದ್ ಬದ್ದಿದ್ದೆಲ್ಲಾ ಅಡಾ ಇಟ್ಟಿದ್ಲು. ಅವಳಿಗೆ ಉಸಾರಿಲ್ದಿದ್ದಾಗ ಡಾಕುಟ್ರ ತಾವ ಕರ್ಕಂಡ್ ಹೋದ್ರೆ ಅಂವಾ ನನ್ ಜೇಬ್ನಾಗೆ ಕಣ್ಣಿಟ್ಟ.. ಯಾವ್ ರಿಪೋರ್‍ಟ್ ಏನ್ ಕಾಣ್ತದೆ. ಯಾವ ವಾಹನ ಅಂದ್ರೆ ಮಾರು ದೂರ ಓಡ್ತಿದ್ಲೋ ಅದ್ರಾಗೆ ಅವಳನ್ನ ಸಾಗ್ಸಿ ಆಯ್ತು.. ಈಗ ದಿನಾ ಸಂಜೆ ಇಬ್ರೂ ಒಂದೇ ಕಡೆ ಕೂತ್ಕಂಡು ಒಟ್ಟೇ ತುಂಬ ಕುಡ್ ಕಂಡು ಮನೀಗೆ ಯಂಗೋ ಓಯ್ತೀವಿ. ಬಡ್ಡೀಮಗಂದು ಕನ್ಸು ಕೈ ಕೊಟ್ಬುಡ್ತು ನನ್ ಮಗಂಗೆ. ತಡ್ಕಂಡು ನಿಂತು ಮುಂದೋಗಕ್ಕಾಗದಂಗೆ ಜೋಲಿ ಒಡ್ದುಬುಡ್ತು. ಇದೆಲ್ಲ ಮಗುವಿನ ನಗು ನಗುತ್ತಲೇ ಹೇಳ್ತಾ ಇದ್ದ ಅಜ್ಜ.
ಈಗ ಅವನ ನಗುವಲ್ಲಿ ಸುಟ್ಟಗಾಯದ ವಾಸನೆ ಬರತೊಡಗಿತು. ಅಲ್ಲೆ ಸಂದಿಯಲ್ಲಿ ಕೀವು ಸೋರಿ.. ಅಯ್ಯೋ ನನ್ನ ತಲೆ ತಿರುಗುತ್ತಿದೆ...

ಎಚ್ಚರಾದಾಗ ನಮ್ಮ ಆಫೀಸ್‌ಬಾಯ್ ವೆಂಕಟ್ ಇದ್ದ. ಏನ್ ಮೇಡಂ, ಉಶಾರಿಲ್ವಾ, ಯಾಕ್ ಬರಕ್ಕೋದ್ರಿ.. ಆಟೋ ಮಾಡಿ ಮನೆಗೆ ಕಳಿಸ್ಲಾ ಅನ್ನುತ್ತಿದ್ದರೆ ನಾನು ಸುಮ್ಮನೆ ತಲೆಯಾಡಿಸಿದೆ. ಅಜ್ಜ, ಗವಾಕ್ಷಿ, ನೆರಳಿನಂತಹ ಮನುಷ್ಯ.. ಕನಸು.. ಎಲ್ಲ ನೆನಪಾಯಿತು. ಅಮಾನುಷವಾಗಿ ಕೊಚ್ಚಿಸಿಕೊಂಡ ಕನಸುಗಳ ಬರ್ಬರ ಗಾಯಗಳು ನೆನಪಾಗಿ ಉರಿಯಿಂದ ಚೀರತೊಡಗಿದೆ. ಯಾರೋ ತಲೆಗೆ ತಣ್ಣೀರು ತಟ್ಟುತ್ತಿದ್ದರು. ನನಗೆ ಉಕ್ಕಿ ಬರುವ ದುಃಖವನ್ನು ಬೆಚ್ಚಗೆ ಕಣ್ಣೀರಲ್ಲಿ ಕಳೆಯಬೇಕಿತ್ತು. ಎಷ್ಟೆಲ್ಲಾ ಇದ್ದೂ ಅಂಶೂನ ಹತ್ತಿರ ಅದು ಹಾಗಿಲ್ಲ, ಇದು ಬೇಕು ಅಂತ ಹಟ ಮಾಡುವ ನನ್ನ ಪೆದ್ದುತನವನ್ನ ವಾಂತಿ ಮಾಡಿಕೊಳ್ಳಬೇಕಿತ್ತು. ಏನೋ ಒಂದು ಸರಿಹೋಗದೆ ಇದ್ದರೆ ಸತ್ತು ಹೋಗಿಬಿಡಲಾ ಅಂತ ಎದ್ದು ಬರುವ ಆಲೋಚನೆಗಳನ್ನೆಲ್ಲ ಕತ್ತು ಹಿಡಿದು ಅಂಡಿನ ಮೇಲೆ ಒದ್ದು ಹೊರದಬ್ಬಬೇಕಿತ್ತು. ಇದ್ದ ಖುಷಿಯನ್ನು ನೋಡದೆ, ಇರದಿರುವ ಯಾವುದಕ್ಕೋ ಹಪಹಪಿಸುವ ಹಳಹಳಿಕೆಯನ್ನು ನೆಲದ ಮೇಲೆ ಬೀಳಿಸಿ ಹೊರಳಾಡಿಸಿ ಅಳಿಸಬೇಕಿತ್ತು. ತುಂಬಿನಿಂತಿರುತ್ತಿದ್ದ ಸುತ್ತಲಿನ ಕೆರೆ ಬಾವಿಗಳು ಖಾಲಿಯಾಗಿದ್ದನ್ನ ನೋಡದೆ, ಸಾಹಿತ್ಯ ಕ್ಷಾಮದ ಬಗ್ಗೆ ಗೊಣಗಾಡುವ ವಿವೇಕವನ್ನ, ಅಟ್ಟಿಸಿಕೊಂಡು ಹೋಗಿ ಹೊಡೆಯಬೇಕಿತ್ತು.. ಆದರೆ ಎಲ್ಲ ಸೇರಿ ನನಗೆ ತಣ್ಣೀರು ತಟ್ಟುತ್ತಿದ್ದರು. ಗಾಳಿ ಹಾಕುತ್ತಿದ್ದರು. ರುಚಿಯಾದ ನಿಂಬೆಹುಳಿ ಸೋಡಾ ಕುಡಿಸುತ್ತಿದ್ದರು.ನೆರಳಲ್ಲಿ ಮಲಗಿಸುತ್ತಿದ್ದರು.. ನಾನು ಏನೇನು ಮಾಡಬೇಕಿತ್ತೋ ಎಲ್ಲ ಮರೆತು ಹಾಯಾಗಿ ಮಲಗಿದೆ..ಅಲ್ಲಿ ಗಡ್ಡದ ಸಾಬರ ಅಂಗಡಿನೆರಳಿನಲ್ಲಿ. ಎದ್ದಾಗ ಮಧ್ಯಾಹ್ನವಾಗಿತ್ತು.. ಬಿರುಬಿಸಿಲಿನಲ್ಲಿ ಅದ್ದಿ ತೆಗೆದ ನೀಲಿ ಆಕಾಶ. ಮೋಡದ ತುಣುಕಿರಲಿಲ್ಲ. ಗವಾಕ್ಷಿಯ ಸ್ಕೆಚ್ ಕೂಡ ಇರಲಿಲ್ಲ. ಹೊಟ್ಟೆಯಲ್ಲಿ ಚೂರುಚೂರಾದ ಕನಸುಗಳ ಸಂಕಟ ಸುಳಿತಿರುಗುತ್ತಿತ್ತು.

ಮರುದಿನ ಎಂದಿನಂತೆ ಯಾವ ವಿಶೇಷಗಳೂ ಘಟಿಸದೆ ಕಳೆಯಿತು. ಸಂಜೆಗೆ ಅಂಶುಗೆ ಕಾಯುತ್ತಾ, ಲೈಬ್ರರಿಯ ಮುಂದಿನ ಪಾರ್ಕಿನಲ್ಲಿ ಕುಳಿತೆ. ಅತ್ತಿತ್ತ ನೋಡಿದೆ. ಅವತ್ತು ಕಂಡ ವಿಲಕ್ಷಣ ವ್ಯಕ್ತಿ ಕಾಣಲಿಲ್ಲ. ಅಜ್ಜನ ಜೊತೆ ಮಾತಾಡಿದಾಗಿನಿಂದ ಅವನ ಬಗ್ಗೆ ಕುತೂಹಲ ಜಾಸ್ತಿಯಾಗಿತ್ತು. ಅದಕ್ಕೇ ಅಂಶು ಬೇಡವೆಂದರೂ ಇವತ್ತು ಹಟ ಮಾಡಿ ಪಾರ್ಕಿನಲ್ಲಿ ಕುಳಿತು ಕಾಯುತ್ತಿದ್ದೆ.
ಕತ್ತಲೆ ಮೆಲ್ಲಡಿಯಿಡುತ್ತಾ ಬಂದು ಸಂಜೆಯಾಕಾಶವನ್ನು ತಬ್ಬುತ್ತಿದ್ದಳು. ಅಲ್ಲೊಂದು ಇಲ್ಲೊಂದು ಮಸುಕು ನಕ್ಷತ್ರ. ಸಾರಿ ಮೇಡಂ... ಬೆಚ್ಚಿ ಬಿದ್ದೆ. ಅವನೇ ಇವತ್ತು ಸ್ವಲ್ಪ ಬೆಳಕಿನಲ್ಲೇ ಕಾಣಿಸಿಕೊಂಡುಬಿಟ್ಟ. ಹೀಗೇ ಎಂದು ಹೇಳಲಾಗದ ವ್ಯಕ್ತಿತ್ವ. -ನಿನ್ನೆ ಅಜ್ಜನ ಮಾತುಗಳನ್ನು ನಿಮಗೆ ತಡೆದುಕೊಳ್ಳಲಾಗಲಿಲ್ಲವಂತೆ. ತೊಂದರೆಯಾಗಿದ್ದಕ್ಕೆ ಕ್ಷಮಿಸಿ. ಇವತ್ತು ಆದಷ್ಟು ಬೇಗ ನಿಮಗೆ ಕಷ್ಟವಾಗದ ಹಾಗೆ ಸರಳವಾಗಿ ವಿವರಿಸಿಬಿಡುತ್ತೇನೆ.. ನಾನು ಬೆಂಚಲ್ಲಿ ಸರಿದು ಕೂತು ಅವನನ್ನೂ ಕೂರಲು ಸೂಚಿಸಿದೆ.. ಅವನು ತಲೆಯಲ್ಲಾಡಿಸಿ, ಆಕಾಶಮಲ್ಲಿಗೆಯ ಮರಕ್ಕೆ ಆನಿಕೊಂಡು ನಿಂತು ಮಾತಾಡತೊಡಗಿದ. ನಾನು ಕಿವಿಯಾದೆ.

ನನ್ನದೊಂದು ಕನಸಿನ ಎಲ್ಲೆ ದಾಟದ ಸಾಮಾನ್ಯ ಲೋಕವಿತ್ತು. ಎಲ್ಲರಂತೆ ಗ್ರಾಜುಯೇಶನ್, ಒಳ್ಳೆ ಕಂಪನಿಯಲ್ಲಿ ಕೆಲಸ. ಅಪ್ಪ ಅಮ್ಮ ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಅದ್ಯಾರ ನೆರಳು ಬಿತ್ತೋ ಅವಳು ಕಂಡಳು. ಬೇಕೇ ಬೇಕು ಅನ್ನಿಸಿದಳು. ನಾನು ಅದುವರೆಗೂ ಮಾಡಿರದ ಸರ್ಕಸ್ಸೆಲ್ಲಾ ಮಾಡಿ ಅವಳನ್ನು ಒಲಿಸಿದೆ. ನಿಜವಾಗ್ಲೂ ಅವಳು ಆಗಷ್ಟೇ ಇಬ್ಬನಿಯಲ್ಲಿ ಮಿಂದು, ಸೂರ್ಯನ ಬೆಳಕಿಗೆ ನವಿರೇಳುತ್ತಿದ್ದ ಅರಳು ಮೊಗ್ಗಂತೆ ಇದ್ದಳು. ಹಾಲು-ಸುಣ್ಣ ಗೊತ್ತಾಗದವಳು ಅಂತ ಅವಳಮ್ಮ ಹೇಳುತ್ತಿದ್ದರು. ಅದನ್ನ ನಾನೂ ಇವತ್ತಿಗೂ ಒಪ್ಪುತ್ತೇನೆ. ಮನೆಯಲ್ಲಿ ಅಪ್ಪ ಅಮ್ಮ ಗಲಾಟೆ ಮಾಡಿದರು. ಅವರ ಮನೆಯಲ್ಲೂ ಏನು ಇಷ್ಟವಿರಲಿಲ್ಲ. ಬೆಳ್ಳುಳ್ಳಿಯೂ ತಿನ್ನದವಳು, ಮಾಂಸದಡಿಗೆಯ ಮನೆಯಲ್ಲಿ ಏನು ತಿಂದಾಳೆಂಬ ಆತಂಕ.. ಮೊಗ್ಗಿಗೆ ಅರಳುವ ಸಂಭ್ರಮ, ಬೇರಿನ ಮಣ್ಣು ಸಡಿಲಾದದ್ದು ತಿಳಿಯಲಿಲ್ಲ. ನನಗೆ ಅರಳು ಮೊಗ್ಗನು ಬೊಗಸೆಯಲ್ಲಿ ಹಿಡಿದು ನಲಿವ ಖುಷಿ, ಮೊಗ್ಗಿನ ಜೀವಸೆಲೆಯ ಸ್ಪಷ್ಟ ಕಲ್ಪನೆಯಿಲ್ಲ.. ಪ್ರೀತಿಯ ಮಂಜುತೆರೆಯ ಜೊತೆಗೆ, ಎಲ್ಲರನ್ನೂ ಎದುರಿ ಹಾಕಿಕೊಂಡು ಏನೋ ಸಾಧಿಸುತ್ತಿದ್ದೇವೆಂಬ ಹಮ್ಮಿನ ನೆರಳುಗತ್ತಲೆಯಿತ್ತು. ಅಪ್ಪ ಅಮ್ಮ ಬೆನ್ನು ತಿರುವಿದರೇನಂತೆ, ಲಗಾಟಿ ಹೊಡೆಯುವಾಗಲೂ ಜೊತೆಗೇ ನಿಲ್ಲುವ ಸ್ನೇಹಿತರು ನಮ್ಮ ದಾರಿಗೆ ದೀಪವಿಟ್ಟರು. ಪುಟ್ಟ ಮನೆ ಹಿಡಿದು, ಅವಳಿಗಿಷ್ಟವಾಗಬಹುದೆಂಬ ಅಂದಾಜಿನ ಮೇಲೆ ಸಜ್ಜು ಮಾಡಿದೆ. ಬೆತ್ತದ ಕುರ್ಚಿಗಳು, ಕಂಬಳಿ ಹಾಸಿಗೆ, ಪುಟ್ಟ ಪುಟ್ಟ ಹೂವಿರುವ ಪಿಂಗಾಣಿ ಪಾತ್ರೆ ಸೆಟ್ಟು, ಗೋಡೆಯಲ್ಲಿ ಹೂಗೊಂಚಲು ಹಿಡಿದ ಪುಟ್ಟ ಮಕ್ಕಳ ಜೋಡಿ ಫೋಟೋ, ನೀಲಿ ಬಣ್ಣದ ಕರ್ಟನ್ನು.. ಅವಳು ಕಣ್ಣ ಹನಿ ತೊಡೆದು, ಮೆಲ್ನಗುತ್ತಾ ಹೊಸಿಲು ದಾಟಿ ಬಂದಳು. ರಾತ್ರೆಗೆ ಮಿನುಗು ನಕ್ಷತ್ರ, ಬೆಳಿಗ್ಗೆ ಉದಯರವಿ, ಮಧ್ಯಾಹ್ನ ಬಿಸಿಲಿನಲ್ಲೂ ನೆರಳು, ಸಂಜೆ ರಂಗುತುಂಬಿದ ಆಕಾಶದೊಡನೆ ಬೀಸಿ ಬರುವ ತಂಗಾಳಿ... ನಾವು ತೆಗೆದುಕೊಂಡ ಯಾವ ನಿರ್ಧಾರದಲ್ಲಿ ಅಪ್ರಾಮಾಣಿಕತೆ ಇತ್ತೋ, ಹೊರಳಿದ ಯಾವ ದಾರಿಯಲ್ಲಿ ಜಾರಿಕೆ ಇತ್ತೋ, ಇಟ್ಟ ಯಾವ ಹೆಜ್ಜೆ ಟೊಳ್ಳಾಗಿತ್ತೋ, ಇವತ್ತಿಗೆ ಸರಿಯಾಗಿ ಗೊತ್ತಾಗುತ್ತಿಲ್ಲ, ಆದರೆ ಇದ್ದದ್ದು ಹೌದು ಗಟ್ಟಿಯೆಂದು ಹಿಡಿದ ಕಾಳು ಜೊಳ್ಳು.. ಅದರ ಆಘಾತ ತಡೆದುಕೊಳ್ಳದ ಪ್ರೀತಿ ಮುದುಡಿ ಹೋಗಿ, ಕತ್ತಲ ಬೆನ್ನಿಗಾತು ನಿಂತು ಕಣ್ಣೀರಿಟ್ಟಿತು. ನಾವಿಬ್ಬರೂ ಮತ್ತೆ ಸೇರಿಸಲಾಗದಂತೆ ಒಡೆದು ಹೋದೆವು.

ಚಿತ್ರಕ್ಕೆ ಫ್ರೇಮಷ್ಟೇ ಇತ್ತು. ಸ್ಕೆಚ್ಚು ಪೂರ್ತಿಯಾಗಿ ಬಣ್ಣ ತುಂಬುವುದರೊಳಗೆ ಅವಳು ಕನಸಿನ ಕ್ಯಾನ್ವಾಸಿನ ಪುಟ ತಿರುಗಿಸಿ ಅದೇ ಹೊಸ್ತಿಲಿನಿಂದ, ಕಣ್ಣು ತುಂಬಿದ ನೀರು ಕೆಳಗಿಳಿಯುತ್ತಿದ್ದರೆ, ತಿರುಗಿ ನೋಡದೆ ಹೊರಟೇ ಹೋದಳು. ಅಷ್ಟು ಪ್ರೀತಿ ಮಾಡಿದ ನಾನು ಹೊಡೆದರೆ ತಪ್ಪಾ, ಅವಳು ನಕ್ಕರೆ ಮನೆಯಲ್ಲೇ ನಗಬೇಕು ಅಂತನ್ನಿಸಿದ್ದು ಸುಳ್ಳಲ್ಲ, ನಕ್ಕರೆ ಮಲ್ಲಿಗೆಯರಳಿದಂತ ಅನುಭವ ಕೊಡುವ ಅವಳು ಹೊರಗೆ ಗುಂಪಲ್ಲಿ ನಕ್ಕರೆ, ಎಲ್ಲಿ ಕಳಕೊಂಡೇನೋ ಎಂಬ ಭಯ.. ಅವಳು ಕೆಲಸಕ್ಕೆ ಹೊರಟರೆ, ಇನ್ನು ಖರ್ಚಿಗೆ ನನ್ನ ಕೇಳಲ್ವಲ್ಲಾ, ಎಂಬ ಆತಂಕ, ನಾನು ಬೇಡದೇ ಹೋಗಿಬಿಟ್ಟರೆ ಏನು ಮಾಡಲಿ ಅಂತ ಕಳವಳ.. ಜಾಜಿ ಮಲ್ಲಿಗೆಯನ್ನ ಬಯಸಿದರಷ್ಟೇ ಸಾಲದು, ಜೋಪಾನವಾಗಿ ಹಿಡಿದಿಡುವ ನಾಜೂಕುತನ ಬೇಕು.. ನಾನು ಒಡ್ಡ. ಅವಳನ್ನ ನೋಯಿಸಿದ್ದು ಸತ್ಯ. ಆದ್ರೆ ನಾನೂ ನೊಂದೆನಲ್ಲ.. ನಂದು ಲೆಕ್ಕಾಚಾರ ಜಾಸ್ತಿ. ಬದುಕಲು ಬೇಕೇ ಬೇಕಲ್ಲ... ಏನೋ ಈಗ ಲೆಕ್ಕ ಹಾಕಿ ಏನುಪಯೋಗ.. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಬರೆದುಕೊಳ್ಳುವ ಲೀಗಲ್ ಕೌನ್ಸೆಲರ್'ಗಳ ಮುಂದೆ ನಮ್ಮ ಕನಸಿನ ಬದುಕಿನ ಪಕಳೆಗಳನ್ನು ಒಂದೊಂದಾಗಿ ಬಿಡಿಸಿಟ್ಟು, ಭಗವದ್ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುವೆನೆಂಬ ಸುಳ್ಳಾಡುತ್ತಾ, ಕಪ್ಪು ಅಕ್ಷರಗಳಿಂದ ತುಂಬಿರುವ ಬಿಳಿ ಪೇಪರಿನಲ್ಲಿ ಸಹಿ ಹಾಕುವ ಕ್ಷಣದಲ್ಲಿ ನನಗೆ ಅವಳ ಕಡೆ ತಿರುಗಬೇಕೆನಿಸಲಿಲ್ಲ. ಅವಳ ನಾಜೂಕು ಬೆರಳುಗಳು ನಡುಗುತ್ತಾ ಸಹಿ ಹಾಕುತ್ತಿದ್ದುದು ಕಣ್ಣಂಚಿನಲ್ಲಿ ಕಾಣುತ್ತಿತ್ತು. ಈಗ ಎಲ್ಲ ಮುಗಿದು ೨೦ ವರ್ಷಗಳಾಗಿವೆ. ನಮ್ಮ ದಾರಿ ಬೇರೆಯಾಗಿ, ಗುರಿ ಚದುರಿದೆ. ಆಮೇಲೆ ಮತ್ತೆ ಜೊತೆಯಾದ ಅಮ್ಮ ಅಪ್ಪನ ಆಯ್ಕೆಗೆ ತಲೆಬಾಗಿ, ಅವರ ಆಯ್ಕೆಯ ಹೆಂಡತಿ, ಮಕ್ಕಳೊಂದಿಗೆ ನನ್ನ ಸಂಸಾರ. ಇವಳು ಆಕಾಶದ ಚಿಕ್ಕೆಯಲ್ಲ, ಮನೆಯ ಗೋಡೆಯ ಭದ್ರತೆಯಲ್ಲಿ ಬೆಳಗುವ ದೀಪ.

ಎಲ್ಲಾದರೂ ಒಬ್ಬನೆ ಇದ್ದಾಗ ಸಂಜೆಗತ್ತಲಲ್ಲಿ ಹೊಳೆವ ಶುಕ್ರತಾರೆಯ ಮಿನುಗಲ್ಲಿ ಅವಳ ನೆನಪು. ಕನಸಿನ ಸಾಮ್ರಾಜ್ಯದಿಂದ ಗಡೀಪಾರಾಗಿ ಈಚೆಗೆ ಜನಜಂಗುಳಿಯಲ್ಲಿ ಬಂದು ಬಿದ್ದ ನನಗೆ, ಅವಳು ತಿರುಗಿಸಿ ಹೊರಟ ಕ್ಯಾನ್ವಾಸಿನಲ್ಲಿ ಎಂದೂ ಮೂಡದ ಚಿತ್ರದ ಬಯಕೆ. ಹೂಗನಸುಗಳ ಬೀಜವೆಂದುಕೊಂಡೇ ಬಿತ್ತಿದೆ.. ಬೆಳೆದುನಿಂತ ಬೆಂಕಿಬೆಳೆಯ ನಡುವೆ ಹೂಗೊಂಚಲನ್ನು ಹುಡುಕಿ ಸುಸ್ತಾಗಿ ಮನೆಗೆ ಹೊರಡುತ್ತೇನೆ ಹತಾಶೆಯಿಂದ ಗವಾಕ್ಷಿಯನ್ನೇ ನೋಡುತ್ತಾ.. ದಿನವೂ ಸಿಗುವ ಜನರಲ್ಲಿ ಅವಳ ಕಣ್ಣಮಿಂಚು ಹುಡುಕುತ್ತಾ, ಮನೆಯಲ್ಲಿ ಗೂಡಲ್ಲಿ ಬೆಚ್ಚಗೆ ಬೆಳಗುವ ದೀಪದ ಕಂಗಳೆದುರು ಬಯಲಾಗುತ್ತೇನೆ. ದೀಪ ಸುಡುತ್ತದೆ, ಹೊರಗೆ ರಾತ್ರಿಯ ಗಾಳಿಯಲ್ಲಿ ತಿಂಗಳನ ಮೊರೆಹೋಗುತ್ತೇನೆ, ಅವನು ನನ್ನ ನೋಡಲಾರದೆ, ಮೋಡದ ಮೊರೆಹೋಗುತ್ತಾನೆ.. ಗೊತ್ತು ನನಗೆ ಉಳಿದಿರುವುದು ದೀಪದ ಬೆಳಕಷ್ಟೇ ಅಂತ, ಆದರೂ ನಕ್ಷತ್ರದ ಆಸೆ.. ನನ್ನ ಮಿತಿಯ ನೆನಪು ಹರಡುತ್ತಾ ಗಡೀಪಾರು ಗವಾಕ್ಷಿ.. ಅದರಾಚೆಗೆಲ್ಲೋ ಅವಳ ಹೊರಳು... ಅವನ ಸ್ಪಷ್ಟ ದನಿ ಒಡೆಯಿತು, ಮುಂದೆ ಮಾತಿಲ್ಲ... ಕೆಲನಿಮಿಷಗಳ ಮೌನ ಇಬ್ಬರ ನಡುವೆ ಗಾಢವಾಗಿ ಹರಡಿತು.

ಮತ್ತೆ ಮಾತಾಡಿದ.. ಮೊನ್ನೆ ನೀವಿಲ್ಲಿ ಕುಳಿತ ಭಂಗಿ ಮೊದಲ ಬಾರಿ ಆಫೀಸಿನ ಗಾರ್ಡನ್ನಿನಲ್ಲಿ ಅವಳನ್ನು ಕಂಡ ದಿನವನ್ನ ನೆನಪಿಸಿತು. ನಿಮಗೂ ನನ್ನ ಗಡೀಪಾರು ಗವಾಕ್ಷಿ ಕಂಡದ್ದರಿಂದ ನಿಮ್ಮೊಡನೆ ಮಾತಾಡಬಹುದು ಅನ್ನಿಸಿತು. ಹಲವರುಷಗಳ ನೆನಪಿನ ಹೊರೆ ಇಂದು ಇಳಿಸಿ ಹಗುರಾಗಿದ್ದೇನೆ. ಸಹನೆಯಿಂದ ಕೂತು ಕೇಳಿದ್ದಕ್ಕೆ ಥ್ಯಾಂಕ್ಸ್ ..., ಉತ್ತರವಾಗಿ ನಾನು ಏನನ್ನೂ ಹೇಳುವ ಮೊದಲೇ ಬೆನ್ನುತಿರುಗಿಸಿ ಹೊರಟೇ ಹೋದ..

ಕೆಲನಿಮಿಷ ಕಾಲುಹಾದಿಯನ್ನೇ ನಿಟ್ಟಿಸಿದ ನಾನು ಆಕಾಶದತ್ತ ನೋಡಿದರೆ, ಗವಾಕ್ಷಿಯ ವರ್ತುಲ ಮಸುಕಾಗುತ್ತಾ ಇತ್ತು.. ಓಹ್, ಅಂಶು ಬೇಲಿಯಾಚೆಗೆ ರಸ್ತೆಯಲ್ಲಿ ಗಾಡಿ ಹಾರ್ನ್ ಮಾಡುತ್ತಾ ನನ್ನ ಕರೆಯುತ್ತಿದ್ದ.

Friday, October 12, 2007

ಕೆಂಪಿಕಣ್ಣು...

ದೀಪದ ಕುಡಿಗಳಂತ ಕಣ್ಣಂಚಲ್ಲಿ ಈಗಲೋ ಆಗಲೋ ಬೀಳುವಂತೆ ತುಂಬಿ ನಿಂತ ಹನಿ, ಮುದ್ದಾದ ಉದ್ದ ಮೂಗಿನ ತುದಿ ಕೆಂಪಗೆ ಕುಂಕುಮ ಸವರಿದಂತೆ, ಯಾವಾಗಲೂ ಕತೆ ಕಟ್ಟುವ ತುಂಟ ಬಾಯಿ, ತುಟಿ ಬಿಗಿದು ಸಿಡುಕಿಕೊಂಡು.. ಅಮ್ಮನಿಗೆ ನಗು ಬಂತು. ಆದರೆ ನಗುವಂತಿಲ್ಲ. ತುಟಿಗಳನ್ನ ಉಮ್ ಅಂತ ಬಿಗಿಹಿಡಿದು, ಕೆನ್ನೆಯನ್ನ ಕಷ್ಟಪಟ್ಟು ಒಳಗೆಳೆದುಕೊಂಡು ನಿಲ್ಲಿಸಿ, ಕಣ್ಣನ್ನ ಆದಷ್ಟೂ ಅಗಲ ಮಾಡಿಕೊಂಡು ಮಗಳನ್ನ ಸೀರಿಯಸ್ ಆಗಿ ನೋಡಿದಳು. ಮಗಳಿಗೋ ತುಂಬ ವಿಶ್ವಾಸ ಕಣ್ಣಂಚಿನಲ್ಲಿ ನಿಂತಿರುವ ಹನಿ ಕೆಳಗೆ ಉರುಳುತ್ತಿದ್ದಂತೆಯೇ ಅಮ್ಮನ ಮುಖ ಸಡಿಲವಾಗುತ್ತದೆ, ದನಿ ನವಿರಾಗುತ್ತದೆ, ಕೈ ತನ್ನನ್ನ ಬಳಸುತ್ತದೆ ಮತ್ತು ತಾನೂ ಇಷ್ಟೊತ್ತೂ ಹಟ ಮಾಡುತ್ತಿರುವ ಬಿಸ್ಕೇಟನ್ನ ಅಮ್ಮ ಅಲ್ಲಿ ನಾಗಂದಿಗೆಯ ಮೇಲಿಟ್ಟ ಸಿಲ್ವರ್ ಡಬ್ಬಿಯಿಂದ ತೆಗೆದು ಕೊಟ್ಟೆ ಕೊಡುತ್ತಾಳೆ.. ಹನಿ ಉದುರಿಸಲೋ ಬೇಡವೋ.. ಅಮ್ಮನ ಮುಖ ನೋಡಿದಳು.

ಉಂಹುಂ ಬಿಗಿದುಕೊಂಡೆ ಇದೆ.. ಓ ಇನ್ನೇನು ನಗುತ್ತಾಳೆ ಬಾಯಿ ತೆರೆಯಿತು..
ಅಮ್ಮನ ಬಾಯಿಂದ ಆ ಭಯಾನಕ ಶಬ್ಧ ಬಂದುಬಿಟ್ಟಿತು.. "ಕೆಂಪಿಕಣ್ಣು ಗೊತ್ತಲ್ದಾ.. ಹಟ ಮಾಡ ಮಕ್ಕಳಿಗೆ ಎಂತ ಮಾಡ್ತು ಅಂತ ಮರ್ತೋತಾ ಪುಟ್ಟೀ?...

ಕಣ್ಣಂಚಿನ ಹನಿ ಅಲ್ಲೆ ನಿಂತುಬಿಟ್ಟಿತು. ಭಯದಿಂದ ಕಣ್ಣು ಅಗಲವಾದರೂ ಪುಟ್ಟಿಗೆ ಸುಮ್ಮನಿರಲಾಗಲಿಲ್ಲ.. ಆ ಬಾಯಿ ಕೇಳಿಯೂ ಕೇಳಿಸದ ಹಾಗೆ "ಎಂತಾ ಮಾಡ್ತು" ಕೇಳೇ ಬಿಟ್ಟಿತು.

ಈಗ ಅಮ್ಮನ ಮುಖ ಸಡಿಲಾಯಿತು. ಬಗ್ಗಿ ಪುಟ್ಟಿಯನ್ನ ಎತ್ತಿ ಸೊಂಟಕ್ಕೆ ಹಾಕಿಕೊಂಡು ಮೆತ್ತಿನ ಮೆಟ್ಟಿಲ ಕೆಳಗಿದ್ದ ದೊಡ್ಡ ಕಿಟಕಿಯ ತಳಿಯಲ್ಲಿ ಕೂತಳು ಅಮ್ಮ. ಹೊರಗೆ ಕಿಟಕಿಯಿಂದಾಚೆಗೆ ಬಯಲ ಕೊನೆಗೆ ದಕ್ಷಿಣ ರೈಲ್ವೆಯ ಕೊನೆಯ ಸ್ಟೇಷನ್ನಿನ ಮರದ ಬೇಲಿಗಳು, ಹಸಿರಗಿಡಗಳ ಜೊತೆಗೆ ಮಾತುಕತೆ ನಡೆಸಿದ್ದವು. ಬೇಲಿ ಪಕ್ಕದ ಹಾದಿಯಲ್ಲಿ ಪ್ಲೈವುಡ್ ಫ್ಯಾಕ್ಟರಿಯ ಮೊದಲ ಶಿಫ್ಟು ಮುಗಿಸಿ ಹೋಗುತ್ತಿರುವ ಹಳ್ಳಿಯವರು... ಎಂತಾಗ್ತು ಅಂದ್ರೇ...

ಒಂದೂರಲ್ಲಿ ಒಂದು ಪುಟ್ಟ ಮನೆ, ನಮ್ಮನೇ ತರದ್ದೇ, ಬೀದಿಗೇ ಹೊಂದಿಕೊಂಡು ಅಂಗಡಿ, ದಾಟಿದ ಕೂಡಲೆ, ಜಗಲಿ, ಆಮೇಲೆ ನಡೂಗಿನ ಕೋಣೆ,ಮೆತ್ತಿ ಮೆಟ್ಲು, ಆದ್ ಕೂಡ್ಲೆ ಅಡಿಗೆ ಮನೆ, ಅಲ್ಲೇ ದೇವರ ಗೂಡು, ಆಮೇಲೆ ಪುಟ್ಟ ಅಂಗಳ, ಅಂಗಳದ ಕೊನೆಗೆ ಬಚ್ಚಲು ಮನೆ, ಅದರಾಚೆಗೆ ಕೊಟ್ಟಿಗೆ.. ದಾಟಿಕೊಂಡು ಹೋದ್ರೆ ಬಾವಿಯ ಬಯಲು..

ಗೊಬ್ರಗುಂಡಿ ಅಂಚಿನ ತೊಂಡೆಬಳ್ಳೀನೂ ಇತ್ತನೂ ಅಮಾ?
ಹೂಂ ಯಾವಾಗಲೂ ಹೂಮಿಡಿ ಬಿಡ್ತಿದ್ದ ತೊಂಡೆಬಳ್ಳಿ..
ಆಮೇಲೆ..

ಆಮೇಲೆಂತು, ಆ ಮನೇಲಿ, ಅಜ್ಜ, ಅಮ್ಮಮ್ಮ, ಅಪ್ಪ, ಅಮ್ಮ, ಮತ್ತೆ ಪುಟ್ಟಿ ಇದ್ದಿದ್ರು. ಅಷ್ಟಮಿ ಹಬ್ಬಕ್ಕೆ ಅಂತ ಅಜ್ಜ ಅಮ್ಮಮ್ಮ ಹಾರೆಗೊಪ್ಪಕ್ಕೆ ಹೋಗಿದ್ದರು. ಅವತ್ ರಾತ್ರೆ ಅಮ್ಮ ಊಟಕ್ಕೆ ರೊಟ್ಟಿ ಮಾಡಿದ್ದಳು. ಅಪ್ಪ ಅಂಗಡಿ ಬಾಗಿಲು ಹಾಕಿ - ಹಾಂ ಅದೇ ಹಲಗೆ ಹಲಗೆ ಬಾಗಿಲಿಂದೇ ಅಂಗಡಿ ಅವರದ್ದೂ- ಊಟಕ್ಕೆ ಬಂದು ಕುಳಿತರೆ, ಪುಟ್ಟಿನೂ ಜೊತೆಗೆ. ಅಮ್ಮ ಅಪ್ಪಂಗೆ ಮೂರು ರೊಟ್ಟಿ ಹಾಕಿದಳು, ತನಗೆ ಅಂತ ಎರಡು ರೊಟ್ಟಿ, ಪುಟ್ಟಿಗೆ ಒಂದು ರೊಟ್ಟಿ. ತಟ್ಟೆ ನೋಡಿದವಳೇ ಪುಟ್ಟಿಯ ಗಲಾಟೆ ಶುರುವಾಯಿತು. ನಂಗೆ ಇನ್ನೂ ಒಂದು ರೊಟ್ಟಿ ಬೇಕೂ..ಊಂ... ಅಮ್ಮ ನಯವಾಗಿ ಹೇಳಿದಳು, ಇಲ್ಲ ಪುಟ್ಟೂ ಮಕ್ಕಳಿಗೆ ಒಂದೇ ರೊಟ್ಟಿ, ರಾತ್ರೆ ಹೊತ್ತು ಜಾಶ್ತಿ ತಿಂದರೆ ಹೊಟ್ಟೆನೋವು ಬಂದು.. ಉಂಹೂಂ ಪುಟ್ಟಿ ಕೇಳೋದಿಲ್ಲ. ರಾಗ ದೊಡ್ಡದು ಮಾಡಿ, ತಟ್ಟೆ ದೂಡಿ ನೆಲಕ್ಕೆ ಕಾಲು ಬಡಿದು ಅಳತೊಡಗಿದಳೂ.. ನಂಗೆ ಒಂದ್ ರೊಟ್ಟಿ ಬ್ಯಾಡಾ ಹುಂ ಹೂಂ.. ಎರ್‍ಡೇ ಬೇಕು.. ಅಪ್ಪಂಗಾದ್ರೆ ಮೂರ್ ಹಾಕಿದ್ದೆ, ನಿಂಗೆ ಎರಡು, ನಂಗ್ಯಾಕೆ ಒಂದೇ... ಊಂ...ಪುಟ್ಟೂ ಮಕ್ಕಳು ಹಂಗೆಲ್ಲಾ ಹಟ ಮಾಡಾಲಾಗ, ಜಾಣೆ ಅಲ್ದಾ ನೀನು, ನಾಳೆನೂ ಮತ್ತೆ ರೊಟ್ಟೀನೇ ಮಾಡ್ತಿ, ಅವಾಗ ಮತ್ತೆ ತಿನ್ನು.. ಊಂಹೂಂ.. ನಂಗೆ ಎರಡು ಇಲ್ಲಾ ಮೂರು ರೊಟ್ಟಿ ಇವತ್ತೇ ಬೇಕೂ,, ಈಗ್ಲೇ.. ಈಗ ಅವಳು ನೆಲಕ್ಕೆ ಬಿದ್ದು ಹೊರಳಾಡಿ ಅಳತೊಡಗಿದಳು. ಅಪ್ಪ ಇನ್ನೂ ತಟ್ಟೆಗೆ ಕೈಇಟ್ಟಿರಲಿಲ್ಲ. ಗಂಭೀರವಾಗಿ ಹೇಳಿದರು. ಪುಟ್ಟೂ ಹಿಂಗೇ ಹಟಾ ಮಾಡಿದ್ರೆ ಹೊರಗಡೆ ಹಾಕಿ ಬಾಗಿಲು ಹಾಕ್ ಬಿಡ್ತಿ ನೋಡು. ಆಮೇಲೆ ನಾವೆಲ್ಲಾ ಮಲ್ಗಿದ ಮೇಲೆ ಕೆಂಪಿಕಣ್ಣು ಬಂದು... ಪುಟ್ಟಿಗೆ ಯಾರ ಮಾತೂ ಆಗುತ್ತಿಲ್ಲ. ಈಗ ಅಳುತ್ತ ಅಳುತ್ತ ಗಲಾಟೆ ಶುರು ಮಾಡಿಬಿಟ್ಟಳು. ಕೆಂಪಿಕಣ್ಣೂ ಇಲ್ಲೆ ಎಂತೂ ಇಲ್ಲೆ. ಹೊರಗಾಕಿದ್ರೂ ಅಡ್ಡಿಲ್ಲೆ ನಂಗೆ ಒಂದ್ ರೊಟ್ಟಿ ಬೇಡಾ, ಎರಡೇ ಬೇಕು.. ಅವರಿಬ್ಬರು ಸಮಾಧಾನ ಮಾಡಿ, ಬಯ್ದು ಸಿಟ್ಟು ಮಾಡಿ ಏನು ಮಾಡಿದರೂ ಪುಟ್ಟಿ ಬಿದ್ದುಕೊಂಡಲ್ಲಿಂದ ಏಳುತ್ತಲೇ ಇಲ್ಲ. ಅವಳಮ್ಮ ಕೊನೆಗೆ ಹೋಗಲಿ ಇನ್ನೊಂದರ್ಧ ರೊಟ್ಟಿ ಹಾಕ್ತಿ ಆಮೇಲೆ ರಾತ್ರೆ ಹೊಟ್ಟೆನೋವೂಂತ ಅತ್ರೆ ನಾನೇನು ಕೇಳದಿಲ್ಲೆ ಅಂತ ಹೇಳಿ ಅವಳ ತಟ್ಟೆಗೆ ಇನ್ನರ್ಧ ರೊಟ್ಟಿ ಹಾಕಿದರು. ಆದ್ರೂ ಪುಟ್ಟಿಯ ಹಟ ನಿಲ್ಲಲಿಲ್ಲ. ಅಳ್ತಾನೇ ಇದ್ದಾಳೆ. ಈಗ ಅಪ್ಪಂಗೆ ನಿಜವಾಗಲೂ ತುಂಬ ಸಿಟ್ಟು ಬಂದ್ ಬಿಡ್ತು.

ಎದ್ದು ಮಲಗಿ ಹೊರಳಾಡುತ್ತಿದ್ದ ಪುಟ್ಟಿಯನ್ನು ಎತ್ತಿಕೊಂಡು ಹೊರಗೆ ಹೋಗಿ ಬಾಗಿಲು ತೆಗೆದು ಹೊರಗೆ ಹಾಕಿ ಒಳಗಿನಿಂದ ಚಿಲುಕ ಹಾಕಲು ಹೊರಟವರು ಮತ್ತೆ ಕೇಳಿದರು.. ಪುಟ್ಟೂ ಈಗಲಾದರೂ ಹಟ ನಿಲ್ಲಿಸ್ತೀಯ ಅಥವಾ ಹೊರಗೇ ಇರ್ತೀಯ? ಪುಟ್ಟಿಗೆ ಈಗ ಇನ್ನೂ ಸಿಟ್ಟು ಬಂತು, ನಾನೇನು ಒಳಗೆ ಬರೋಲ್ಲ. ನಂಗೆ ಮೂರು ರೊಟ್ಟಿ ಕೊಡೋ ಹಾಗಿದ್ರೆ ಮಾತ್ರ ಒಳಗೆ ಬರೋದು... ಅಂತ ಅಲ್ಲೆ ಮುಂದಿನ ಕಟ್ಟೆಯಲ್ಲಿ ಕೂತು ಮತ್ತೆ ಅಳತೊಡಗಿದಳು. ಸರಿ ಹಾಗಾದ್ರೆ ಅಂತ ಅಪ್ಪ ಬಾಗಿಲು ಹಾಕಿಕೊಂಡು ಒಳಗೆ ಹೋದರು.

ಅಮ್ಮಾ ಅವಳು ಒಬ್ಳೇ ಅಲ್ಲೆ ಕತ್ತಲಲ್ಲಿ ಇದ್ಲಾ ನಮ್ಮ ಪುಟ್ಟಿಯ ಭಯದ ಪ್ರಶ್ನೆ.
ಅಮ್ಮ ಪುಟ್ಟಿಯನ್ನ ಇನ್ನೂ ಹತ್ತಿರ ಎಳೆದುಕೊಂದು ಹೇಳುತ್ತಾಳೆ. ಇಲ್ಲೆ ಮಗಾ ಆವಾಗಿನ್ನೂ ರಸ್ತೆ ಲೈಟೆಲ್ಲ ಹಂಗೇ ಇತ್ತು. ಅಷ್ಟೆಲ್ಲ ಕತ್ತಲೆ ಇರಲಿಲ್ಲ. ಆ ಪುಟ್ಟಿಗೆ ನಿಜವಾಗ್ಲೂ ತುಂಬ ಹೆದರಿಕೆ ಏನೂ ಆಗಲಿಲ್ಲ ಮತ್ತೆ ಸಿಟ್ಟು ಹಟ ಬೇರೆ ಇತ್ತಲ್ಲಾ ಹೆದರಿಕೆ ಇನ್ನೂ ಶುರುವಾಗಿರಲಿಲ್ಲ.
ಆಮೇಲೇನಾತಮ್ಮಾ?
ಹುಂ ಇನ್ನೇನು..

ಆ ಅಪ್ಪ ಅಮ್ಮ ಇಬ್ರೂ ಊಟ ಮಾಡಿದರು. ಅಮ್ಮ ಗೋಮೆ ಹಚ್ಚಿ, ಅಡಿಗೆ ಮನೆಯ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ನೆಲ ಒರೆಸಿ, ಬಚ್ಚಲು ಒಲೆಗೆ ಬೆಳಗಿನ ಬೆಂಕಿಗೇಂತ ಕಟ್ಟಿಗೆ ಪುರುಳೆ ಎಲ್ಲ ತುಂಬಿ ಕೊನೆಕೊನೆಯ ಕೆಲಸ ಮಾಡುತ್ತಿದ್ದಳು. ಅಪ್ಪ ನೀಟಾಗಿ ಹಾಸಿಗೆ ಹಾಸಿ, ಅವತ್ತಿನ ಲೆಕ್ಕ ಎಲ್ಲ ಬರೆದು ಮುಗಿಸುವಾಗ ಅಮ್ಮ ಎಲ್ಲ ಕೆಲಸ ಮುಗಿಸಿ ಬಂದಳು.

ಪುಟ್ಟಿ ಏನಾದ್ಲಮ್ಮಾ? ನಮ್ಮ ಪುಟ್ಟಿಗೆ ಹೆದರಿಕೆ ಕುತೂಹಲ ಎರಡೂ ತಡೆಯಲಾಗುತ್ತಿಲ್ಲ.

ತಡಿ ಹೇಳ್ತೀನಿ. - ಅವಳು ಅಲ್ಲಿ ಹೊರಗೆ ಕೂತಿದ್ಲಲ್ಲ ಸೊಲ್ಪ ಹೊತ್ತಿಗೆ ಅವಳಿಗೆ ದೂರದಲ್ಲಿ ಪೋಲಿಸ್ ಸ್ಟೇಷನ್ ತಿರುವಿನ ಹತ್ತಿರ ಎರಡು ಕೆಂಪು ಕಣ್ಣುಗಳು ಹೊಳೆಯುತ್ತ ಕಾಣಿಸಿತು. ಜೋಗದ ಕಡೆಯಿಂದ ಬರುತ್ತಿರುವ ಸ್ಕೂಟರ್ ಇರಬಹುದು ಅಂದ್ಕೊಂದಳು. ಆದರೂ ಸ್ವಲ್ಪ ಹೆದರಿಕೆ ಶುರುವಾಗಿತ್ತು. ಈಗ ಅಳು ನಿಂತು ಬಿಟ್ಟಿತು.

ಅದು ಕೆಂಪಿಕಣ್ಣೇ ಅಲ್ದಾ ಅಮಾ, ನಂಗೊತ್ತಿದ್ದು.. ನಮ್ ಪುಟ್ಟಿಯ ನಡುಗುವ ಧ್ವನಿ..
ಅಮ್ಮ ಕತೆಯ ಜೋಷಲ್ಲಿ ತೇಲುತ್ತಿದ್ದವಳು ಪುಟ್ಟಿಯ ಮುಖ ನೋಡುತ್ತ ಹೇಳಿದಳು. ಹೌದು ತಡೀ ಪೂರ್ತಿ ಹೇಳಕ್ಕೆ ಬಿಡದಿಲ್ಯಲ ನೀನು, ಇಷ್ಟೇ ಸಾಕಾ ಕತೆ ಇನ್ನೂ ಮುಂದೆ ಹೇಳ್ಲಾ...
ಓ, ನಂಗೆ ಈ ಸಲಾನೂ ಅದು ಕೆಂಪಿಕಣ್ಣಾ ಅಂತ ಗೊತ್ತಿಲ್ಯಲ.. ಏನು ಬರ್ತು ಬಂದ್ ಮೇಲೆ ಏನು ಮಾಡ್ತು ಅಂತ ನೋಡನ.. ಹೇಳಮ್ಮಾ...
ಸರಿ ಹಂಗಂದ್ರೆ ಕೇಳು..

ಹೊಳೀತಾ ಇರೋ ಕಣ್ಣು ಈಗ ಹತ್ರಾನೆ ಬಂದ್ ಬಿಡ್ತು. ಎಲ್ಲರ ಮನೆಯ ಬಾಗಿಲೂ ಹಾಕಿಕೊಂಡಿದೆ. ಹೆಚ್ಚೂ ಕಮ್ಮಿ ಎಲ್ಲ ಮನೇಲೂ ಲೈಟೆಲ್ಲ ಆಫ್ ಆಗಿದೆ.ಮಲಗ್ ಬಿಟ್ಟಿದಾರೆ. ಆ ಕಡೆ ಮಿಲ್ಲಿನ ಮುಂದಿದ್ದ ಕಂಬದ ಲೈಟಿನ ಬೆಳಕಲ್ಲಿ ಈಗ ಬರೀ ಕೆಂಪಿಕಣ್ಣಷ್ಟೆ ಅಲ್ಲ ಕಣ್ಣ ಹತ್ತಿರ ಕೆಳಗೆ ಹೊಳೆಯುವ ಮೀಸೆ, ಪಟ್ಟೆ ಪಟ್ಟೆ ಮೈ, ಚೂರೆ ಚೂರು ತೆಗೆದುಕೊಂಡ ಹಾಗೆ ಇರೋ ಬಾಯಲ್ಲಿ ಬೆಳ್ಳಗೆ ಹೊಳೆವ ಕೋರೆ ಹಲ್ಲು, ದಪ್ಪ ಬಳ್ಳಿಯಂತೆ ಆ ಕಡೆ ಈ ಕಡೆ ತೊನೆದಾಡುವ ಬಾಲ... ಎಲ್ಲ ಒಂದೊಂದೇ ಕಾಣಿಸತೊಡಗಿತು. ಪುಟ್ಟಿಯ ಹಟ ಕೂಡ್ಲೆ ಕಾಲ್ ಕಿತ್ತಿತು. ಹೆದರೀಕೆಂದ್ರೆ ಹೆದರಿಕೆ. ಅಳಕ್ಕೂ ಹೆದರಿಕೆ. ಕೂತಲ್ಲಿಂದ ಏಳಕ್ಕೂ ಆಗ್ತಾ ಇಲ್ಲ. ಇನ್ನೇನು ಜೂಜನ ಮನೆ ದಾಟಿದ್ರೆ, ಕಿಲಾರದವರ ಮನೆ ಆಮೇಲೆ ಪೇಪರಜ್ಜನ ಮನೆ, ಅದಾದ್ ಮೇಲೆ ನಮ್ಮನೇನೆ ಅಂತ ಗೊತ್ತಾಗೋತು ಪುಟ್ಟಿಗೆ.

ಹೆಂಗೆಂಗೋ ಎದ್ದವಳು ಬಾಗಿಲ ಹತ್ರ ಹೋಗಿ ನಿಂತ್ಕಂಡು ಅಳ್ತಾ ಅಳ್ತಾ ಅಮ್ಮನ್ನ ಕರೆದಳು. ಅಮ್ಮಾ ಇನ್ಯಾವತ್ತು ಹಟ ಮಾಡಲ್ಲ ಬಾಗುಲ್ ತೆಗೆಯಮ್ಮಾ, ಕೆಂಪಿಕಣ್ ಬರ್ತಾ ಇದೆ ನಂಗೆ ಹೆದ್ರಿಕೆ ಅಮ್ಮಾ, ಒಳ್ಳೇವ್ಳಾಗಿರ್ತೀನಿ ಒಳಗೆ ಕರ್ಕೊಳ್ಳಮ್ಮಾ, ಊಟ ಮಾಡಕ್ಕೆ ಹಟ ಮಾಡಲ್ಲಮ್ಮಾ... ಜೋರಾಗಿ ಅತ್ತಳು. ಅಳುತ್ತಳುತ್ತ ನೋಡಿದರೆ ಕೆಂಪಿಕಣ್ಣು ಜೂಜನ ಮನೆ ದಾಟಿ ಕಿಲಾರದ ಮನೆಯವರ ಹತ್ತಿರ ಬರ್ತಿದೆ... ಅಯ್ಯೋ, ಈಗ ಬಾಗಿಲ ಹೊರಗಿನ ಚಿಲಕವನ್ನ ಅಲ್ಲಾಡಿಸಿ ಅಳುತ್ತಾ ಕರೆದಳು ಅಮ್ಮಾ, ಅಪ್ಪಯ್ಯಾ ಹಟ ಮಾಡುಲ್ಲ ನಾನು ಒಳಗೆ ಕರ್ಕೊಳ್ಳೀ.... ಹೂಂ.....

ಅಮಾ ಒಳಗಡೆ ಅಪ್ಪ ಅಮ್ಮಂಗೆ ಕೇಳ್ಸೇ ಇಲ್ವಾ ಅಮಾ ಅವಳು ಅಳ್ತಾ ಇದ್ದಿದ್ದು.. ಕೆಂಪಿಕಣ್ ಬಂದ್ ಬುಟ್ರೆ ಏನ್ ಮಾಡ್ತಾಳಮ್ಮಾ ಅವ್ಳು... - ನಮ್ ಪುಟ್ಟಿಯ ಕಳಕಳಿಯ ಪ್ರಶ್ನೆ
ಸ್ವಲ್ಪ ತಡಿ.. ಮುಂದೆ ಹೇಳಕ್ಕೋ ಬ್ಯಾಡದೋ... ಹೂಂ ಹೇಳು..

ಅಷ್ಟೊತ್ತಿಗೆ ಹಿಂದ್ಗಡೆ ಕೊಟ್ಟಿಗೇಲಿ ಗೌರಿದನದ ಕರ ಬೆಳ್ಳಿ ಎಂತಕೋ ಅಂಬಾ ಅಂತ ಕೂಗ್ತಿತ್ತು. ಅಡಿಗೆ ಮನೇಲಿದ್ದ ಅಮ್ಮಂಗೆ, ಲೆಕ್ಕ ಬರೀತಾ ಇದ್ದ ಅಪ್ಪಂಗೆ ಇದೆಲ್ಲ ಕೇಳಿಸಲೇ ಇಲ್ಲೆ...
ಆದ್ರೆ ಅಮ್ಮ ಕೆಲ್ಸ ಮುಗಿಸಿ ನಡುಗಿನ ಕೋಣೆಗೆ ಬಂದಾಗ ಅವಳಿಗೆ ಬಾಗಿಲ ಚಿಲಕ ಅಲ್ಲಾಡಿಸಿ ಅಳುವ ಪುಟ್ಟಿಯ ಶಬ್ದ ಕೇಳಿಸಿತು. ಓಡುತ್ತ ಓಡುತ್ತ ಬಂದ ಅಮ್ಮ ಬಾಗಿಲು ತೆಗೆದಳು..
ಹೊರಗಡೆ ಇದ್ದ ಪುಟ್ಟಿಗೆ ಈಗ ಅಳಲೂ ಆಗುತ್ತಿಲ್ಲ. ಹೆದರಿಕೆಯಿಂದ ಮೈಯೆಲ್ಲ ಬೆವೆತುಹೋಗಿದೆ. ಕೆಂಪಿಕಣ್ಣು ಪೇಪರಜ್ಜನ ಮನೆಯ ಹತ್ತಿರ ಬಂದ್ ಬಿಟ್ಟಿದೆ.

ಅಷ್ಟೊತ್ತಿಗೆ ಬಾಗಿಲು ತೆಗೆದ ಅಮ್ಮ, ಪುಟ್ಟಿಯನ್ನ ಎತ್ತಿಕೊಂಡು ಬಾಗಿಲು ಹಾಕಿದಳು.ಅಮ್ಮನನ್ನ ಗಟ್ಟಿಯಾಗಿ ಹಿಡಿದುಕೊಂಡ ಪುಟ್ಟಿ ತಪ್ಪಾಯ್ತಮ್ಮಾ ಇನ್ಯಾವತ್ತೂ ಹಟ ಮಾಡಲ್ಲ, ನನ್ನ ಕೆಂಪಿಕಣ್ಣಿಗೆ ಕೊಡಬೇಡಾ.. ಅಂತ ಅಳುತ್ತಳುತ್ತ ಹೇಳಿದಳು. ಪುಟ್ಟಿಯ ಕಣ್ಣೊರೆಸಿದ ಅಮ್ಮ, ಅಡಿಗೆ ಮನೆಗೆ ಎತ್ತಿಕೊಂಡೇ ಹೋಗಿ, ತಟ್ಟೆಯಲ್ಲಿದ್ದ ರೊಟ್ಟಿಯನ್ನ ಬೆಲ್ಲ ತುಪ್ಪ ಹಚ್ಚುತ್ತಾ ಪುಟ್ಟಿಗೆ ತಾನೆ ತಿನ್ನಿಸಿದಳು. ರೊಟ್ಟಿ ಮುಗಿದ ಕೂಡಲೆ ಹಾಲು ಕೊಟ್ಟರೆ ಪುಟ್ಟಿ ಯಾವ ವೇಷನೂ ಮಾಡದೆ ಸುಮ್ಮನೆ ಹಾಲು ಕುಡಿದಳು. ಅಮ್ಮ ಬಚ್ಚಲಿಗೆ ಕರೆದುಕೊಂಡು ಹೋಗಿ ಅವಳ ಬಾಯಿ ತೊಳೆಸಿ, ಉಶ್ ಮಾಡಿಸಿ ಬರುವಷ್ಟರಲ್ಲಿ ಪುಟ್ಟಿಯ ಕಣ್ಣು ಮುಚ್ಚಿಕೊಂಡು ಹೋಗುತ್ತಿತ್ತು. ನಿದ್ದೆ ಬಂದೇ ಬಿಟ್ಟಿದೆ. ಎತ್ತಿಕೊಂಡು ಹೋಗಿ ಅಪ್ಪ ಹಾಸಿಟ್ಟಿದ್ದ ಹಾಸಿಗೆಯಲ್ಲಿ ಮಲಗಿಸಿ, ಬೆಚ್ಚಗಿನ ಬೆಡ್ ಶೀಟ್ ಹೊದಿಸಿ, ತಾನೂ ಮಲಕ್ಕೊಂಡಳು. ಅಪ್ಪ ಕವಳ ಉಗಿಯಲು ಎದ್ದು ಹೊರಗೆ ಹೋದ..

ಇಷ್ಟೊತ್ತೂ ಗಾಬರಿ, ಕುತೂಹಲದಿಂದ ಪ್ರಶ್ನೆ ಕೇಳುತ್ತಿದ್ದ ನಮ್ಮ ಪುಟ್ಟಿ ಈಗ ಸುಮ್ಮನಾಗಿಬಿಟ್ಟಿದ್ದಾಳೆ. ಆ ಹೂವಿನ ಎಸಳುಗಳಂತ ಕಣ್ಣುಗಳ ತುಂಬ ಏನೋ ಯೋಚನೆ. ಮೆತ್ತನೆ ಗಲ್ಲದ ಮೇಲೆ ತೋರುಬೆರಳು ಬೇರೆ. ಸುಮ್ಮನೆ ಮಗಳನ್ನು ದಿಟ್ಟಿಸಿ ನೋಡಿದ ಅಮ್ಮನಿಗೆ ತುಂಬ ಮುದ್ದು ಬಂತು. ಪುಟ್ಟಿಯನ್ನು ಇನ್ನೂ ಹತ್ತಿರಕ್ಕೆ ಎಳೆದುಕೊಂಡು ಆ ಕೆನ್ನೆಯ ಮೇಲೆ ಮುತ್ತೂ ಕೊಟ್ಟುಬಿಟ್ಟಳು.
ಆಮೇಲೆ ನಿಧಾನವಾಗಿ ಹೇಳಿದಳು ನೋಡಿದ್ಯಾ ಹಟಾ ಮಾಡೋ ಮಕ್ಕಳಿಗೆ ಏನಾಗ್ತು ಅಂತ. ಕೆಂಪಿಕಣ್ ಬಂದ್ರೆ ಅಷ್ಟೇ..

ತಲೆಯನ್ನ ಒಂದು ಕಡೆಗೆ ವಾರೆ ಮಾಡುತ್ತಾ ಪುಟ್ಟಿ ಅಮ್ಮನ ಕುತ್ತಿಗೆಯನ್ನ ಎರಡೂ ಕೈಗಳಿಂದ ಬಳಸಿ ಉಲಿದಳು. ಅಮ್ಮಾ ನಾನು ಯಾವ್ದಕ್ಕೂ ಹಟ ಮಾಡೊಲ್ಲ, ಆದ್ರೆ ನೀನು ಯಾವತ್ತಾದ್ರೂ ನಾನ್ ಹಟ ಮಾಡಿದ್ರೆ ಕೆಂಪಿಕಣ್ಣಿಗ್ ಮಾತ್ರ ನನ್ ಕೊಡಬೇಡಮ್ಮಾ.. ಈ ಕತೆ ನೆನಪ್ ಮಾಡು, ಆಮೇಲೆ ನಾನು ಹಟ ಮಾಡಲ್ಲ... ನಾನು ಒಳ್ಳೇವಳು ಅಲ್ವಾ ಅಮ್ಮಾ.. ಈಗ ನಂಗೇನು ಬಿಸ್ಕೆಟ್ ಬೇಡ. ಸಂಜಿಗೆ ಹಾಲು ಕುಡಿಯೋ ಹೊತ್ತಿಗೆ ಕೊಡು ಪರವಾಗಿಲ್ಲ..

ಬಂದ ನಗುವನ್ನು ಕಷ್ಟಪಟ್ಟು ತಡೆದ ಅಮ್ಮ - ಹೌದಪ್ಪಾ ನಮ್ಮನೆ ದೇವ್ರ ಗುಣ ನಮಗೆ ಗೊತ್ತಿಲ್ಲವೇ.. ನೀನು ಒಳ್ಳೆಯವಳೇ.. ಆ ಹಟ ಒಂದು ಪೂರ್ತಿ ಬಿಟ್ಟರೆ ಅಪ್ಪಟ ಬಂಗಾರ - ಅನ್ನುತ್ತಾ ಪುಟ್ಟಿಯ ಕೆನ್ನೆ ತುಂಬ ಮುತ್ತಿನ ಗೊಂಚಲು ಬಿಡಿಸಿ....


ಇಲ್ಲಿ ಜನತುಂಬಿದ ಮಾಲ್ ಹೊರಗೆ ನಿಂತು ಅವನಿಗೆ ಕಾಯುತ್ತಿದ್ದೇನೆ. ಪಕ್ಕದಲ್ಲಿ ಮಗುವೊಂದು ಹೊರಳಾಡಿ ಅಳುತ್ತಿದೆ ಸೂಪರ್ ಮ್ಯಾನ್ ಗನ್ ಬೇಕೇ ಬೇಕು ಅಂತ.. ಅಮ್ಮ ಏನೇನೋ ಹೇಳಿ ರಮಿಸುತ್ತಿದ್ದಾಳೆ. ಮಗು ಕೇಳುತ್ತಿಲ್ಲ. ನನ್ನವನು ಬರುವವರೆಗೆ ಕೆಂಪಿಕಣ್ಣಿನ ಕತೆ ಹೇಳಲಾ ಅಂದ್ಕೊಂಡೆ.. ಅಷ್ಟೊತ್ತಿಗೆ ಮಗುವಿನ ಅಪ್ಪ ಬಂದವರು ಅಮ್ಮನಿಗೆ ಬೈದರು.. ಏನ್ ಮಮ್ಮೀ ನೀನು.. ಮಗೂ ಅಳ್ತಾ ಇದ್ರೆ ಕೇಳಿದ್ ಕೊಡಸೋದು ಬಿಟ್ಟು, ಏನೋ ಉಪದೇಶ ಮಾಡ್ತಾ ಇದ್ದೀಯಲ್ಲಾ? ಕೇಳಿದ್ ಕೊಡ್ಸಕ್ಕೆ ಎನ್ ಪ್ರೊಬ್ಲೆಮ್ ನಿಂಗೆ. ಕಮ್ ಹನೀ.. ಏನ್ ಬೇಕು ನಿಂಗೆ.. ಹಿಡ್ಕೋ ಇದನ್ನ ಅಂತ ತುಂಬಿ ತುಳುಕುತ್ತಿದ್ದ ಆಟದ ಸಾಮಾನಿನ ಚೀಲವನ್ನ ಹೆಂಡತಿಗೆ ಕೊಟ್ಟು, ಮಗುವನ್ನು ಎತ್ತಿಕೊಂಡು ಮತ್ತೆ ಮಾಲ್ ಒಳಕ್ಕೆ ಹೋದರು.

ನನ್ನ ಕೆಂಪಿಕಣ್ಣಿನ ದೃಷ್ಟಿ ಮಂಕಾಗಿ, ಹೊಳಪು ಕಳೆದುಕೊಂಡು ಮುಂದೆ ಹೋಗಲಾರದೆ ಅಲ್ಲೆ ಮಲಗಿಬಿಟ್ಟಿತು. ಈಗ ಮಕ್ಕಳಿಗೆ ಕತೆ ಹೇಳುವಷ್ಟಿಲ್ಲ. ವಿಡಿಯೋ-ಗೇಮಲ್ಲಿ ಸೀಡಿಯಲ್ಲಿ ಅವರಿಗೆ ಬೇಕಾದ್ದನ್ನ ಅವರೇ ಆಯ್ಕೆ ಮಾಡಿಕೊಂಡು ನೋಡುತ್ತಾರೆ. ಬೇಕಾದ್ದನ್ನ ಕೇಳಿದ ಕೂಡಲೆ ಕೊಡಿಸಲು ಅಪ್ಪ ಅಮ್ಮ ಹಗಲೂ ರಾತ್ರೆ ದುಡಿಯುತ್ತಾರೆ. ಊಟದ ತಟ್ಟೆ ಚಮಚ ಚಾಕು ಹಿಡಿದುಕೊಂಡು ಆಯಾ ನಿಂತಿರುತ್ತಾಳೆ. ನೂಡಲ್ಸ್, ವೇಫರ್ಸ್, ಐಸ್ ಕ್ರೀಂ, ಪಿಝಾ ಗಳನ್ನ ಎಷ್ಟು ತಿಂದರೂ ಯಾರು ಕೇಳುವವರೇ ಇಲ್ಲ. ಮೆಡಿಕ್ಲೈಮ್ ಇದೆಯಲ್ಲ..

ಇಲ್ಲಮ್ಮಾ ನಂಗೆ ನಿನ್ ಕತೆ ಬೇಕು..ಹೇಳ್ದೆ ಇದ್ರೆ ನಾನ್ ಊಟ ಮಾಡೊಲ್ಲ ಅಂತ ಇನ್ನೂ ಮೂಡದ ಜೀವವೊಂದು ಮೋಡ ಮರೆಯಿಂದ ಪಿಸುಗುಡುತ್ತ ನನ್ನ ಸಂತೈಸುತ್ತಿದೆ. ೧೫ ವರ್ಷದ ಹಳೆಯ ಚಂದಮಾಮ ಪುಸ್ತಕಗಳನ್ನ ಬುಕ್ ಬೈಂಡ್ ಮಾಡಿಸಿ ಹಿಡಿದು ಬರುತ್ತಿರುವ ನನ್ನವನನ್ನ ನೋಡಿ ಮನಸ್ಸಿಗೆ ಏನೋ ಸಮಾಧಾನ. ಸಿಗ್ನಲ್ ದಾಟುವಾಗ ನೋಡಿದೆ. ಅಲ್ಲಿ ಲೈಟುಕಂಬದ ಹಿಂದೆ ಹೊಳೆಯುತ್ತಿರುವುದೇನು.. ಕೆಂಪಿಕಣ್ಣೇ.. ನೀನಿದ್ದೀಯಲ್ಲಾ, ನಂಗೇನು ಭಯವಿಲ್ಲ..ಮತ್ತೆ ಬರುತ್ತೇನೆ ಅಂತ ಕಣ್ಣು ಮಿಟುಕಿಸುತ್ತಿತ್ತು..

Thursday, September 6, 2007

ಊರು, ಅಜ್ಜಿ, ಮಳೆ ಮತ್ತು ಅಜ್ಜನ ನೆನಪು...

ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್ತ ಮಾತಿಲ್ಲದೆ ಜೊತೆಯಾಗಿ ನಿಂತ ಬಿಳಿಬಿಳಿ ಕಟ್ಟಡಗಳು ಕೆರೆಯಾಚೆಗಿನ ರಸ್ತೆಯಂಚಿನ ದೊಡ್ಡ ದೊಡ್ಡ ಮರಗಳು ಎಲ್ಲವೂ ಮಳೆಯ ಸೋನೆಗೆ ಮೈಯೊಡ್ಡಿ ಸೊಂಪಾಗಿ ಕಾಣುತ್ತಿತ್ತು. ತುಂಬ ದಿನಗಳ ನಂತರ ಊರಿಗೆ ಹೋಗಿದ್ದೆ. ಎಲ್ಲ ಅವತ್ತು ೧೫ ವರ್ಷಗಳ ಮುಂಚೆ ಒಂದು ಮಳೆಗಾಲದಲ್ಲಿ ನಾನು ಹೊರಟಾಗ ಇದ್ದಂತೆಯೇ ಕಂಡರೂ ಎಲ್ಲ ಬೇರೆಯೇ ಅಂತ ಗೊತ್ತಾಗುತ್ತಿತ್ತು. ಕಳೆದಕಾಲದೊಡನೆ ಬದಲಾದ ಊರು ಮತ್ತು ನಾನು..

ಅಜ್ಜಿಗೆ ಸ್ವಲ್ಪ ಹುಷಾರಿರಲಿಲ್ಲ. ನನಗೆ ನೋಡಲೇಬೇಕೆನ್ನಿಸಿತ್ತು. ಎಷ್ಟೇ ಫೋನಿನಲ್ಲಿ ಮಾತಾಡಿದರೂ ನನ್ನ ಸ್ವರದ ಅಂದಾಜಿನ ಮೇಲೆ ಮಾತನ್ನು ಊಹಿಸುವ ಇಳಿವಯಸ್ಸಿನ ಅರೆಕಿವುಡು. ನನಗೆ ಅವಳ ಜೊತೆಕೂತು ಮಾತುಕತೆ ಹೊಸೆಯಬೇಕಿತ್ತು. ಬೆನ್ನ ಹಿಂದೆ ಜಗ್ಗಿನಿಂತ ಎಲ್ಲ ಕೆಲಸಗಳನ್ನೂ ರಿಕ್ವೆಸ್ಟ್ ಮಾಡಿ ಬದಿಗೆ ಸರಿಸಿ ರಾತ್ರಿ ಬಸ್ಸು ಹತ್ತಿದೆ. ಹಣ್ಣು ಮುಖದ ತುಂಬ ಹೂನಗೆ ಹೊತ್ತವಳು ಕಾದಿದ್ದಳು.. ಯಾವಯಾವುದೋ ವಿಷಯದಲ್ಲಿ ಶುರುವಾದ ಎಲ್ಲ ಮಾತಿನ ಹಾದಿಗಳೂ ಸಾವಿನ ಮನೆಯ ಜಗುಲಿಗೇ ಹೋಗಿ ಸೇರುತ್ತಿತ್ತು. ಅವಳ ಓರಗೆಯವರನೇಕರು, ಚಿಕ್ಕವರು ಮತ್ತು ದೊಡ್ಡವರು ಸಾಕಷ್ಟು ಜನ ಗಂಟು ಮೂಟೆ ಕಟ್ಟಿದ್ದರು. ಒಬ್ಬೊಬ್ಬರು ಹೋದಾಗಲೂ ಮೊದಲ ಆತಂಕ ನೆಕ್ಸ್ಟ್ ನಾನೇ ಏನೋ ಅನ್ನುವುದೇ. ಎರಡನೆಯದು ಯಾವ ಬಗೆಯ ಸಾವು..? ಆಸ್ಪತ್ರೆಯಲ್ಲಿ ಜೀವರಸವನ್ನೂ(ಗ್ಲೂಕೋಸ್) ಹಿಂಡುವ ನೋವಿನೊಂದಿಗೆ ಜೀವದೊಳಗೆ ಬಿಟ್ಟುಕೊಳ್ಳುತ್ತಾ ಬಿಡಲಾರದೆ ಜೀವ ಬಿಡುವುದೋ, ಇಲ್ಲಾ ಮನೆಯಲ್ಲಿ ಬೆಳಿಗ್ಗೆ ತಿಂಡಿ, ಸ್ನಾನ ಚಾ ಆಗಿ ಅಡಿಕೆ ಕುಟ್ಟಿಕೊಂಡು ಎಲೆ ನೀವಿ ಸುಣ್ಣ ಹಚ್ಚುವಾಗ ಗೊತ್ತಾಗದಂಗೆ ಜೀವ ಹೋಗುವುದೋ.. ನೇರವಾಗಿ ಹೀಗೇ ಆಗಲಿ ಎನ್ನುವ ಧೈರ್ಯವಿಲ್ಲವಾದರೂ ಅವಳ ಮನಸ್ಸಿನ ತುಂಬ ಕಾಡಿನಿಂತ ಆಸೆ ಅದೇ.. ಚಿಕ್ಕಂದಿನ ನೆನಪುಗಳಿಂದ ಹಿಡಿದು ಇವತ್ತಿನ ಮಾತ್ರೆಗಳು, ಡಾಕ್ಟರವರೆಗೆ, ಎಲ್ಲ ಮಾತಾಡುತ್ತ ಕೂತೆವು. ನಾಲ್ಕೈದು ಲೋಡು ಕವಳ ಖರ್ಚಾಯಿತು. ಅಂಗಳದಲ್ಲಿ ಮಳೆ ನಮ್ಮ ಮಾತಿಗೆ ಹನಿ ಹಾಕುತ್ತಿತ್ತು.ನಾನು ವಿಮಾನದಲ್ಲ್ ಊರುಗಳಿಗೆ ಹೋಗುವುದನ್ನು ಮತ್ತೆ ಮತ್ತೆ ಕೇಳಿದಳು. ಅವಳಿಗೆ ವಿಮಾನದಲ್ಲಿ ಹೋಗಿನೋಡಬೇಕೆಂಬಾಸೆ ಆದರೆ ಭಯ :)

ಮಧ್ಯಾಹ್ನ ಊಟವಾಗಿ ಅವಳು ಮಲಗಿದ ಮೇಲೆ ನಾನು ಚಿಕ್ಕಪ್ಪನ ಜೊತೆ ಅಜ್ಜನೂರಿಗೆ ಹೋದೆ. ಅದು ಅಜ್ಜನಷ್ಟೇ ಹಿತವಾಗಿ, ಪ್ರೀತಿಯಿಂದ ಕಾದು ನಿಂತಿತ್ತು. ಊರ ಹತ್ತಿರದ ತಿರುವು, ಸೇತುವೆ, ಮೈದಾನ, ಶಾಲೆ, ನೀರಿರದ ಬಾವಿ ಮತ್ತು ದೂರದ ಬೋರ್ ವೆಲ್,ಬೃಹದಾಕಾರದಲ್ಲಿ ನಿಂತ ಬೂತಪ್ಪನ ಮರ, ಮನೆಯಾಚೆಗಿನ ಪುಟ್ಟ ಹಸಿರುಗುಡ್ಡ, ಗುಡ್ಡದ ಮೇಲಿನಿಂದ ಕಾಣಬರುವ ಶರಾವತಿಯ ಹಿನ್ನೀರು, ಊರ ಮೈದಾನದ ಕೊನೆಗೆ ದೊಡ್ಡದಾಗಿ ಆವರಿಸಿ ನಿಂತ ಮನೆ, ಮನೆಯ ಸುತ್ತಲ ಗೇರುಮರಗಳು ಎಲ್ಲವೂ ಅಜ್ಜನ ನೆನಪನ್ನ ಗೊಂಚಲು ಗೊಂಚಲಾಗಿ ಹೊತ್ತು ನಿಂತಿದ್ದರೆ, ಮನಸು ಒಳಗೇ ಸರಿಯುತ್ತಿತ್ತು.

ಹಳ್ಳಿಯ ಮನೆಯಲ್ಲಿ ಯಾರೂ ಇಲ್ಲದ ದಿನಗಳಲ್ಲಿ ಅಜ್ಜ ಮತ್ತು ಪುಟ್ಟ ನಾನು ಸಾಗರದಿಂದ ಬಸ್ಸಿಗೆ ಬಂದು, ಅಲ್ಲಿಂದಲೇ ತಂದುಕೊಂಡಿರುತ್ತಿದ್ದ ಫ್ಲಾಸ್ಕಿ ನ ಟೀ ಕುಡಿದು ಬಿಸ್ಕತ್ ತಿನ್ನುತ್ತಿದ್ದ ಸಮಯ, ಗದ್ದೆ ತೋಟಗಳ ಮೇಲುಸ್ತುವಾರಿಗೆ ಹೋಗುವ ಅಜ್ಜನ ಬಾಲದಂತ ನಾನು, ಗದ್ದೆಯಲ್ಲಿ ಹೆದರಿಸುವ ಏಡಿ, ತೋಟದಲ್ಲಿರುತ್ತಿದ್ದ ಭಯಾನಕ ಆಕಾರದ ಜೇಡಗಳು, ಕಟ್ಟಿ ನಿಂತ ಗದ್ದೆಯ ಬದುವಲ್ಲಿ ಅಲ್ಲಲ್ಲಿ ಪುಟ್ಟ ಜಲಪಾತದಂತೆ ಹರಿಯುವ ನೀರು, ಈ ಹೊತ್ತಿನಲ್ಲಿ ಯಾವ್ಯಾವುದೋ ಗಿಡದ ನಡುವೆ ಅಡಗಿಕೊಂಡು ಬಿರಿದಿರುವ ಗೌರಿ ಹೂಗಳು, ಮರವ ತಬ್ಬಿ ಸೊಗಯಿಸುವ ಸೀತಾಳೆ ದಂಡೆಗಳು, ಅಜ್ಜನೆಂದರೆ ಭಕ್ತಿಯನ್ನೇ ತೋರುವ ನರಸ, ಉಡಾಫೆ ಕತೆ ಹೊಡೆಯುವ ಕೇಶವ.. ತೋಟದ ಹಾಳಿಗಳ ಮಧ್ಯೆ ಅಲ್ಲಲ್ಲಿ ಹರಿಯುವ ತೋಡುಗಳು ಎಲ್ಲ ಒಟ್ಟೊಟ್ಟಿಗೆ ನೆನಪಾದವು. ಅಜ್ಜನಿಲ್ಲ ಅಂತ ಬೇಸರಿಸಿ ಕಣ್ಣೀರಿಡಲೋ ಅಥವಾ ಸುತ್ತೆಲ್ಲ ಕಾಣುವ ಈ ಚಂದ ಸಂಗತಿಗಳ ಪ್ರತಿ ಹೊರಳಲ್ಲೂ ಹೊಳೆವ ಅವನ ನೆನಪನ್ನ ನೇವರಿಸಿ ಮುದ್ದಾಡಲೋ?! ಈ ಎಲ್ಲ ಸಂಗತಿಗಳನ್ನ ನನ್ನ ಮಡಿಲಿಗಿಟ್ಟು, ಕಣ್ಣು ನೋಡಲು ಒಂದು ವಿಶಾಲ ಆಕಾಶವನ್ನು ಕೊಟ್ಟ ಅವನಿಗೆ ನನ್ನ ಪ್ರೀತಿಯ ನಮನ.

ಅತ್ತೆ ಮಾಡಿಕೊಟ್ಟ ಟೀ ಕುಡಿದು ಹಾಗೇ ಗದ್ದೆಯ ಕಡೆ ಹೊರಟೆವು. ಅಲ್ಲಿ ತೋಟವನ್ನಾಸಿ ಹೋಗುವಾಗ ಕಾಣಿಸಿತು - ಬ್ರಹ್ಮ ಕಪಾಲದ ಕಮರಿ.. ಚಿಕ್ಕವಳಿದ್ದ ನನ್ನನ್ನು ಅಜ್ಜ ಜೊತೆಗಿರಲಿ ಅಂತ ಕರೆದುಕೊಂಡು ಹೋಗುತ್ತಿದ್ದ ಹಳ್ಳಿಗೆ. ಆದರೆ ನನ್ನನ್ನು ಎತ್ತಿಕೊಳ್ಳಲಾಗುತ್ತಿರಲಿಲ್ಲ ಅವನಿಗೆ. ನನ್ನನ್ನ ನಡೆಸಿಕೊಂಡು ಏರುತಗ್ಗಿನ ಹಾದಿಯಲ್ಲಿ ಗದ್ದೆ ತೋಟ ಎಲ್ಲ ಹಾಯಬೇಕಲ್ಲ, ಅದಕ್ಕೊಂದು ಉಪಾಯ ಕಂಡುಹಿಡಿದಿದ್ದ. ಕತೆ ಹೇಳುವುದು. ಮನೆಯಿಂದ ಹೊರಡುವಾಗ ಒಂದು ಕತೆ ಶುರು ಮಾಡಿಬಿಡುವುದು. ಆಮೇಲೆ ದಾರಿಯುದ್ದಕ್ಕೂ ಅಲ್ಲಲ್ಲಿ ಇಷ್ಟಿಷ್ಟೇ ಕತೆ ಹೇಳುತ್ತ ಹೋಗುವುದು, ನಡು ನಡುವೆ ಅವನ ಕೆಲಸ, ಕೆಲಸದವರ ಜೊತೆ ಮಾತು, ಇತ್ಯಾದಿ. ನಾನು ಕಾಲುನೋವೆಂದು ನೆನಪು ಮಾಡಿದ ಕೂಡಲೆ ಅಜ್ಜ ನನಗೆ ಅಲ್ಲೆ ನಿಂತಿದ್ದ ಮರವನ್ನೋ, ಅದ್ಯಾವುದೋ ಹೂವನ್ನೋ, ದೂರದಲ್ಲೆಲ್ಲೋ ಕೇಳಿಬಂದ ಹಕ್ಕಿಗೊರಳನ್ನೋ ತೋರಿಸಿ/ಕೇಳಿಸಿ, ಅದನ್ನ ಅವನು ಹೇಳುತ್ತಿದ್ದ ಕತೆಯಲ್ಲಿ ಸೇರ್‍ಇಸಿ ಇದು ಅದೇ ಮರ, ಅವಳು ಮುಡಿಯುತ್ತಿದ್ದ ಹೂವು, ಆಗ ಹಾಡಿದ್ದ ಹಕ್ಕಿಯ ಸಂತತಿ ಹೀಗೆ ಕತೆ ಕಟ್ಟುತ್ತಿದ್ದ. ನಂಗೆ ಅಜ್ಜನ ಬರಿಯ ಕತೆಗಳೆಂದರೇ ಕಲ್ಪನೆಯ ಕುದುರೆ ಸವಾರಿಯ ಹಾಗೆ.. ಅದರ ಜೊತೆಗೆ ಜೀವಂತವಾಗಿ ಎದುರು ನಿಂತಿರುವ ಅಥವಾ ಕಾಣುವ ಯಾವುದೋ ಆ ಕತೆಯಲ್ಲಿದೆ ಅಂದರೆ ಡಬ್ಬಲ್ ಇಷ್ಟ. ಕಾಲುನೋವು ಮರೆತುಹೋಗುತ್ತಿತ್ತು. ಕಲ್ಪನೆಯ ಕುದುರೆಯ ನಾಗಾಲೋಟಾಕ್ಕೆ ರೆಕ್ಕೆಗಳ ಬಡಿತವೂ ಸೇರುತ್ತಿತ್ತು.. ಹೀಗೇ ಅವನು ಹೇಳಿದ ಕತೆಯೊಂದರ ಸನ್ನಿವೇಶ ನಾವು ನಮ್ಮ ತೋಟ ಹೊಕ್ಕುವಾಗ ಸಿಗುವ ಚಿಕ್ಕ ದರಿ. ಭೂಮಿ ಅಥವಾ ಮಣ್ಣ ಗುಡ್ಡ ಅಲ್ಲಲ್ಲಿ ಕುಸಿದು ಆಗಿರುವ ಪುಟ್ಟ ಪುಟ್ಟ ಹೊಂಡಗಳಿಗೆ ನಮ್ಮಲ್ಲಿ ದರೆ/ದರಿ ಅನ್ನುತ್ತಾರೆ. ಪ್ರತಿ ಮಳೆಗಾಲ ಬಂದಾಗಲು ಇದು ಸ್ವಲ್ಪ ಅಗಲವಾಗುವುದುಂಟು.. ಕುಸಿದ ಮಣ್ಣು ಮತ್ತಷ್ಟು ಕುಸಿದು.. ಇದನ್ನು ದಾಟಿ ಆಚೆಹೋಗಲು ಬಿದ್ದ ಅಡಿಕೆಮರಗಳನ್ನು ಕಡಿದುಸೇರಿಸಿ ಸೇತುವೆ ಮಾಡಿರುತ್ತಾರೆ. ಅದನ್ನು ನಮ್ಮ ಕಡೆ ಸಂಕ ಎಂದು ಕರೆಯುತ್ತಾರೆ.

ನಾವು ಈಗ ಪಟ್ಟಣದಲ್ಲಿ ಪೇಟೆಯಲ್ಲಿ ಸುರಕ್ಷಿತ ರಸ್ತೆ ಸೇತುವೆಗಳಲ್ಲಿ ಓಡಾಡುವವರಿಗೆ ಇದನ್ನು ನೋಡಿದರೆ ಗಾಬರಿಯಾಗಿ ಕಾಲಿಡಲು ಭಯವಾಗುತ್ತದೆ. ಆದರೆ ಇಲ್ಲೇ ಬೆಳೆದ ಜೀವಗಳು ಸುಮ್ಮನೆ ಸಪಾಟು ರಸ್ತೆಯಲ್ಲೇ ನಡೆದ ಹಾಗೆ ಸಹಜವಾಗಿ ದಾಟಿಹೋಗುತ್ತಾರೆ. ಅಂತಹ ಒಂದು ಸಂಕವನ್ನು ನಾನು ಅಜ್ಜನ ಕೈಹಿಡಿದು ದಾಟುತ್ತಿದ್ದೆ. ಆದರೆ ದಾಟುವಾಗೆಲ್ಲ ತುಂಬ ಭಯ. ಸಾಕಷ್ಟು ಉದ್ದ ಮತ್ತು ಆಳವಾಗಿದ್ದ ದರೆಯದು. ಅಜ್ಜ ತನ್ನ ಕಲ್ಪನೆಯನ್ನೆಲ್ಲ ಖರ್ಚು ಮಾಡಿ ತುಂಬ ಎಕ್ಸೈಟಿಂಗ್ ಆಗಿರುವ ಕತಾ ಸನ್ನಿವೇಶಗಳನ್ನು ಹೇಳುತ್ತಿದ್ದ. ನಾನು ಹೂಂಗುಡುತ್ತಾ ಭಯವಾದರೂ ಕತೆ ಕೇಳುತ್ತಾ ಹೇಗೆ ಹೇಗೋ ದಾಟುತ್ತಿದ್ದೆ. ಅಂತ ಒಂದು ಕತೆಯ ಸನ್ನಿವೇಶ ಇದು. ಬ್ರಹ್ಮ ಹತ್ಯಾದೋಷ ಹತ್ತಿದ ಶಿವನ ಕೈಗೆ ಅಂಟಿಕೊಂಡ ಬ್ರಹ್ಮಕಪಾಲವು ಅವನನ್ನು ಏನು ಮಾಡಲೂ ಬಿಡುತ್ತಿರಲಿಲ್ಲ. ಊಟ ಮಾಡಲು ಹೋದರೆ ಕಪಾಲವೇ ತಿಂದುಬಿಡುತ್ತಿತ್ತು, ಕೈಯಲ್ಲೇ ಇತ್ತಲ್ಲಾ, ನೀರು ಕುಡಿಯಲು ಹೋದರೂ ತಾನೇ ಕುಡಿಯುತ್ತಿತ್ತು, ಒಟ್ಟಲ್ಲಿ ಯಾವ ಕೆಲಸವನ್ನೂ ಮಾಡಗೊಡುತ್ತಿರಲಿಲ್ಲ. ಒಂದೇ ಪರಿಹಾರವೆಂದರೆ ಆ ಕಪಾಲವನ್ನು ಇನ್ನೊಬ್ಬರ ಕೈಗೆ ಅವರು ಒಪ್ಪಿದರೆ ದಾಟಿಸುವುದು, ಆದರೆ ಅದಕ್ಕೆ ಯಾರೂ ಸಿಗಲಿಲ್ಲ. ಯಾರು ತಾನೆ ಹೀಗೆ ಜೀವಹಿಂಡುವ ಕಪಾಲವನ್ನು ಇಷ್ಟಪಟ್ಟು ತಗೋತಾರೆ? ಹೀಗೆ ಕಷ್ಟಪಡುತ್ತಿರುವ ಶಿವನ ಗೋಳು ನೀಗಿಸಲು ವಿಷ್ಣು ಒಂದು ಸಕ್ಕತ್ತಾಗಿರುವ ಉಪಾಯ ಮಾಡಿದ. ಒಂದು ದೊಡ್ಡ ಪ್ರಪಾತದ ಆಚೆ ಈಚೆ ವಿಷ್ಣು ಶಿವ ಇಬ್ಬರೂ ನಿಂತುಕೊಂಡರು. ವಿಷ್ಣುವಿನ ಕೈಗೆ ಶಿವ ಕಪಾಲವನ್ನು ದಾಟಿಸಬೇಕಿತ್ತು, ಶಿವ ಕೈ ಮುಂದೆ ನೀಡಿ ಕಪಾಲವನ್ನು ಕಳಿಸಲು ರೆಡಿಯಾದರೆ, ವಿಷ್ಣುವೂ ಕೈ ಮುಂದೆ ನೀಡಿ ಕಪಾಲವನ್ನು ಪಡೆಯಲು ರೆಡಿಯಾಗಿದ್ದನು. ಇಬ್ಬರ ಮಧ್ಯೆ ಪ್ರಪಾತ. ಶಿವನ ಕೈಯನ್ನ ಕಪಾಲ ಬಿಟ್ಟು ಇನ್ನೇನು ವಿಷ್ಣುವಿನ ಕೈಯನ್ನು ಹಿಡಿಯಬೇಕು, ಕ್ಷಣಾರ್ಧದಲ್ಲಿ ವಿಷ್ಣು ಕೈ ವಾಪಸ್ ತಗೊಂಡ್ ಬಿಡುತ್ತಾನೆ. ನೆಗೆಯುತ್ತಿರುವ ಬ್ರಹ್ಮಕಪಾಲ ಆಳವಾದ ಕಮರಿಗೆ ಬೀಳುತ್ತದೆ. ಅದು ಎಷ್ಟು ದೊಡ್ಡದು ಮತ್ತು ಆಳ ಅಂದರೆ ಕಪಾಲಕ್ಕೆ ಇನ್ನು ಮೇಲೆ ಬರಲಾಗುವುದಿಲ್ಲ. ಅದು ಎಷ್ಟು ದೊಡ್ಡದು ಆಳ ಅಂದರೆ ನಾವೀಗ ದಾಟುತ್ತಿದೇವಲ್ಲ ಇದೇ ದರಿಯೇ.. ಮತ್ತು ನಾನು ಈಗ ಬೇಗಬೇಗ ಸಂಕ ದಾಟದೇ ಇದ್ದರೆ ಅಲ್ಲೇ ಕೆಳಾಗೆ ತೆವಳುತ್ತಿರುವ ಬ್ರಹ್ಮಕಪಾಲ ಯಾರು ಸಿಗುತ್ತಾರೋ ಅವರ ಕೈ ಹಿಡಿದುಕೊಂಡುಬಿಡುತ್ತದೆ. ಹಾಗೆಲ್ಲ ನಿಧಾನವಾಗಿ ದಾಟುವುದು ನಾನೇ ಆಗಿದ್ದರಿಂದ ನಾನೇ ಅದರ ಈಸಿ ಟಾರ್ಗೆಟ್. ನಂಗೆ ಸಿಕ್ಕಾಪಟ್ಟೆ ಹೆದರಿಕೆ ಮತ್ತು ಕುತೂಹಲ. ಅಷ್ಟು ಹೆದರಿಕೆಯಲ್ಲಿ ದಾಟುವ ನಾನು, ಅಲ್ಲಿ ಕೆಳಗೆ ತೆವಳುತ್ತಿರುವ ಕಪಾಲ ಕಾಣುತ್ತದೆಯಾ ಅಂತ ನೋಡಲು ಮರೆಯುತ್ತಿರಲಿಲ್ಲ. ಸಂಕ ದಾಟಿದ ಮೇಲೆ ಸ್ವಲ್ಪ ದೂರ ಅದೇ ದರೆಯ ಗುಂಟ ಸಾಗಬೇಕು. ಕಾಲು ದಾರಿಯಲ್ಲಿದ್ದರೂ ನನ್ನ ಕಣ್ಣು ದರೆಯೊಳಗಿರುತ್ತಿತ್ತು, ಬ್ರಹ್ಮ ಕಪಾಲ ಹುಡುಕುತ್ತಾ. ಒಬ್ಬಳೇ ಅಲೆಯಲು ಹೊರಡುವ ನನ್ನನ್ನು ಈ ಜಾಗಕ್ಕೆಲ್ಲ ಒಬ್ಬಳೆ ಬರದಿರಲು ಅಜ್ಜ ಉಪಯೋಗಿಸುವ ರಾಮಬಾಣವೂ ಕೂಡ ಅದೇ ಬ್ರಹ್ಮಕಪಾಲವೇ ಆಗಿತ್ತು ಎಷ್ಟೋ ವರುಷಗಳವರೆಗೆ.

ನಾನು ಸ್ವಲ್ಪ ದೊಡ್ಡವಳಾಗಿ ಆ ಕತೆಯೊಳಗಿನ ಕತೆ ಅರ್ಥವಾದ ಮೇಲೆ, ಇನ್ನೂ ಪುಟ್ಟವನಿದ್ದ ತಮ್ಮನನ್ನು ಅಲ್ಲೆಲ್ಲ ಸುತ್ತಾಡಿಸಿ ಈ ಕತೆ ಹೇಳಿ ಹೆದರಿಸಿದ್ದಿದೆ. ಹೆದರಿಸಿ ಅಭಯ ತೋರಿ ಅವನ ಕೈಯಲ್ಲಿದ್ದ ಕಾಡು ಹಣ್ಣು ಹೂವು ಗಿಟ್ಟಿಸಿಕೊಂಡಿದ್ದಿದೆ. ಆಮೇಲೆ ಇಬ್ಬರೂ ಇದನ್ನೆಲ್ಲ ಜೋಕು ಮಾಡಿ ನಗುವಷ್ಟು ದೊಡ್ಡವರಾದ ಮೇಲೆ ಅಲ್ಲಿ ಹೋದಾಗ ಪ್ರತಿಬಾರಿಯೂ ಬ್ರಹ್ಮಕಪಾಲದ ಕಮರಿಯನ್ನು ಸುಮ್ಮನೆ ಹೋಗಿ ಹಾದುಬಂದಿದ್ದಿದೆ. ಅಜ್ಜನ ತಿಥಿಗೆ ಹೋದರೆ ನನಗೆ ಗೊತ್ತು ಅಜ್ಜ ಮನೆಯಂಗಳದ ನೈವೇದ್ಯಕ್ಕೆ ಬರುವುದಿಲ್ಲ.. ಅಲ್ಲಿರುತ್ತಾನೆ ಬ್ರಹ್ಮಕಪಾಲದ ಸಂಕ ದಾಟಲು ಬರುವ ಮೊಮ್ಮಕ್ಕಳ ಕೈಹಿಡಿದು ಕತೆ ಹೇಳಿ ದಾಟಿಸಲು. ಅದಕ್ಕೆ ನಾನು ಅಲ್ಲೆ ಮರಗಳ ನೆರಳಲ್ಲಿ ಸಂಕದ ಆಸುಪಾಸು, ತೋಟ ಸುತ್ತುತ್ತಿರುತ್ತೇನೆ, ಅಜ್ಜನ ಕೈ ಬಳಸಲು.

ಈ ಎಲ್ಲ ನೆನಪನ್ನು ಹೊತ್ತು ಸಂಕ ದಾಟುವಾಗ ಈ ಸಲದ ಮಳೆಗೆ ತುಂಬ ಮಣ್ಣು ಕುಸಿದು ದರೆ ಅಗಲವಾದದ್ದು ಕಾಣಿಸಿತು. ಸಂಕ ದೊಡ್ಡದು ಮಾಡಲೇ ಬೇಕಿರಲಿಲ್ಲ. ದರೆಯ ಸುತ್ತಿ ಬಳಸಿ ಹಾಯುವ ದಾರಿಯನ್ನೇ ಎಲ್ಲರೂ ಉಪಯೋಗಿಸಿ ಸಂಕ ಹ್ಯಾಪುಮೋರೆ ಹಾಕಿಕೊಂಡಿತ್ತು.

ಹೀಗೇ ಏನೇನೋ ನೆನಪು ಮಾಡಿಕೊಳ್ಳುತ್ತಾ ಅಲ್ಲೆಲ್ಲ ತಿರುಗಿ ಮನೆಗೆ ವಾಪಸಾಗುವಾಗ ಅಲ್ಲೊಂದಿಷ್ಟು ಕಡು ಹಸಿರಿನ ಗಿಡಗಳ ನಡುವೆ ದಟ್ಟ ಹಳದಿಕೆಂಪಿನ ಡಿಸೈನಿನಲ್ಲಿ ಚೆಲುವಾಗಿ ಅರಳಿನಿಂತ ಗೌರಿಹೂಗಳು ಕಾಣಿಸಿ ಅಜ್ಜನನ್ನೇ ನೋಡಿದ ಖುಷಿಯಾಯಿತು.