Monday, June 12, 2017

ಡಾಕ್ಟರಜ್ಜನೆಂಬ ಅಚ್ಚರಿ ಮತ್ತು ಅಕ್ಕರೆ

ಜೂನ್ ೧೧ ರಂದು ಅಂಕಿತ ಪ್ರಕಾಶನದಿಂದ ಡಾ.ಡಿ.ವಿ.ರಾವ್ ಅವರ ಮೂರು ಕಾದಂಬರಿಗಳು - ಸಂಪ್ರದಾದ, ದೃಷ್ಟಿದಾನ ಮತ್ತು ಅವದಾನಗಳ ಮರುಪ್ರಕಾಶಗೊಂಡವು. ಈ ಸಂದರ್ಭದಲ್ಲಿ ಅವರ ಈ ಮೂರು ಪುಸ್ತಕಗಳ ಬಗ್ಗೆ ನನ್ನ ಅನಿಸಿಕೆ. ವಿಶ್ವವಾಣಿಯ ವಿರಾಮ ಸಾಪ್ತಾಹಿಕದಲ್ಲಿ

೮೦ರ ದಶಕದಲ್ಲಿ ಟೀವಿ ಇನ್ನೂ ನಮ್ಮ ಬಿಡುವಿನ ಹೊತ್ತನ್ನು ಆವರಿಸಿರದ ದಿನಮಾನದಲ್ಲಿ ಓದಲು ಬಲ್ಲವರ ಬಿಡುವಿನಲ್ಲಿ ಸುಧಾ, ತರಂಗ ಮೊದಲಾದ ಸಾಪ್ತಾಹಿಕಗಳು ಮಯೂರ,ತುಷಾರ,ಚಂದಮಾಮಗಳೆಂಬ ಮಾಸಪತ್ರಿಕೆಗಳು ನಮ್ಮ ಕನ್ನಡದ ಜನರ ಪಾಲಿಗೆ ಸಾಹಿತ್ಯಸೇತುಗಳಾಗಿದ್ದವು. ಈಗಲೂ ಇವೆಲ್ಲ ಮುನ್ನಡೆಯುತ್ತಿದ್ದರೂ, ಸಾಕ್ಷರತೆ ಹಿಂದಿಗಿಂತ ಹೆಚ್ಚಿದ್ದರೂ ಇವು ಇಂದು ಕೆಲವೇ ಸಾಹಿತ್ಯಪ್ರೀತಿಯವರಾಗಿಬಿಟ್ಟಿವೆ. ನಮ್ಮ ಬಿಡುವನ್ನು ಮತ್ತು ದಿನರಾತ್ರಿಗಳನ್ನು ಟೀವಿ ಮತ್ತು ಜಾಲತಾಣಗಳು ಸಂಪೂರ್ಣ ವಶಪಡಿಸಿಕೊಂಡಿವೆ. ಹಿಂದೆ ಈ ಪತ್ರಿಕೆಗಳು ಬರುವ ಸಮಯ ಕಾದು ಪೈಪೋಟಿಯಲ್ಲಿ ಮನೆಮಂದಿಯೆಲ್ಲ ಓದುತ್ತಿದ್ದ ದಿನಗಳು ನೆನಪಿನ ಸಂದೂಕದಲ್ಲಿ ಬೆಚ್ಚಗೆ ಹುದುಗಿವೆ. ಅಂತಹ ದಿನಗಳಲ್ಲಿ ಡಾ.ಡಿವಿ ರಾವ್, ಕೆಟಿ ಗಟ್ಟಿ, ನಾಡಿಸೋಜ, ಅನುಪಮಾ ನಿರಂಜನ, ಉಷಾ ನವರತ್ನರಾಮ್, ಸುದರ್ಶನ ದೇಸಾಯಿ ಇವರೆಲ್ಲ ಓದುಗರ ಬಿಡುವನ್ನು, ಸಾಹಿತ್ಯದೊಲವನ್ನು ಸಮೃದ್ಧಗೊಳಿಸಿದ ಮಹನೀಯರು. ಇವರುಗಳು ಬರೆಯುತ್ತಿದ್ದ ಧಾರಾವಾಹಿಗಳನ್ನು ಕಾತುರದಿಂದ ಓದಿ, ವಾರದ ನಂತರ ಆ ಪುಟಗಳನ್ನು ಕತ್ತರಿಸಿ ಜೋಡಿಸಿ, ಧಾರಾವಾಹಿ ಮುಗಿದ ಮೇಲೆ ಹೊಲಿದು ಬೈಂಡ್ ಮಾಡಿ ಮನೆಯಿಂದ ಮನೆಗೆ ಮನಮನಗಳಿಗೆ ಸಾಗುತ್ತಿದ್ದ ಆ ಕಾಲದ ಧಾರಾಕಾದಂಬರಿಗಳ ನೆನಪಾದರೆ ಈಗ ರೋಮಾಂಚನ. ಓದಲು ಎಲ್ಲರಿಗೂ ಎಷ್ಟು ಕಾತುರ ಮತ್ತು ಅಕ್ಕರಾಸ್ಥೆ ಇದ್ದ ಕಾಲವದು.
ಈ ಭಾನುವಾರ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಅಂಕಿತ ಪುಸ್ತಕದ ವತಿಯಿಂದ ಡಾ.ದೊಡ್ಡೇರಿ ವೆಂಕಟಗಿರಿ ರಾವ್ (ಡಿ.ವಿ.ರಾವ್) ಅವರ ಮೂರು ಪುಸ್ತಕಗಳು ಮರುಪ್ರಕಾಶನಗೊಳ್ಳಲಿವೆ. ಈ ಮೂರೂ ಪುಸ್ತಕಗಳು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಗಳಾಗಿ ಮನಸೂರೆಗೊಂಡ ಕಾದಂಬರಿಗಳು. ಸಂಪ್ರದಾನ,ದೃಷ್ಟಿದಾನ, ಮತ್ತು ಅವದಾನ. ಇವುಗಳಲ್ಲಿ ಅವದಾನ ನಂತರ ೧೯೮೫ರಲ್ಲಿ ಪುಟ್ಟಣ್ಣ ಕಣಗಾಲರ ದಿಗ್ದರ್ಶನದಲ್ಲಿ ಅಮೃತಘಳಿಗೆಯೆಂಬ ಸುಂದರ ಚಲನಚಿತ್ರವಾಯಿತು. ವೃತ್ತಿಯಿಂದ ವೈದ್ಯರಾಗಿದ್ದ ಡಿ.ವಿ.ರಾವ್, ಮಲೆನಾಡಿನ ಸಾಗರದ ಬಳಿಯ ಪುಟ್ಟ ಹಳ್ಳಿ ದೊಡ್ಡೇರಿಯವರು. ಕೃಷಿ ಮನೆತನ ಮತ್ತು ಜೀವನವಿಧಾನದಿಂದ ಬಂದವರು. ವೃತ್ತಿಯ ಸಲುವಾಗಿ ದೊಡ್ಡ ಊರುಗಳಲ್ಲಿ, ನಗರಗಳಲ್ಲಿ ಜೀವನ ನಡೆಸಿದವರು. ಪ್ರವೃತ್ತಿಯಾಗಿದ್ದ ಸಾಹಿತ್ಯ ಮತ್ತು ಛಾಯಾಚಿತ್ರಗಾರಿಕೆಗಾಗಿ ಪ್ರಪಂಚವನ್ನೇ ಸುತ್ತಿದವರು. ಕಥೆ, ಕಾದಂಬರಿ, ಪ್ರವಾಸಕಥನ, ವೈದ್ಯಕೀಯ ಪ್ರಕಾರಗಳಲ್ಲಿ ಜನರ ಮನಮುಟ್ಟುವಂತೆ ಬರೆದ ಲಲಿತ ಶೈಲಿ ಇವರದು. ಛಾಯಾಚಿತ್ರದ ಬಗ್ಗೆ ಇವರು ಬರೆದಿರುವ ಭಾವಾಭಿವ್ಯಂಜಕ ಛಾಯಾಚಿತ್ರಕಲೆ ಎಂಬ ಪುಸ್ತಕ ಇವತ್ತಿನ ಡಿಜಿಟಲ್ ಫೋಟೋಯುಗಕ್ಕೆ ಅದರಲ್ಲಿರುವ ಫ್ರೇಮಿಂಗ್ ಮತ್ತು ಕೆಮೆರಾ ಹಿಂದಿನ ಕಣ್ಣು ಕಾಣಬೇಕಿರುವ ವಿಷಯಗಳಿಂದಾಗಿ ಪ್ರಸ್ತುತವಾಗುವ ಪುಸ್ತಕ.
ಸ್ವಯಂ ನಿವೃತ್ತಿ ಪಡೆದು ಹುಟ್ಟೂರು ದೊಡ್ಡೇರಿಯಲ್ಲಿ ನೆಲೆಸಿದ ಡಿವಿ ರಾವ್, ತಮ್ಮ ಸಾಹಿತ್ಯ ಕೃಷಿಯನ್ನು ಇಲ್ಲಿ ಚೆನ್ನಾಗಿ ನಡೆಸಿ ಕನ್ನಡದ ಸಾಹಿತ್ಯ ಸಮೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಮಡದಿ ಸಾವಿತ್ರಿ ಮತ್ತು ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳ ಜೊತೆ ಸಮೃದ್ಧ ಜೀವನ ನಡೆಸಿದ ಡಿವಿ ರಾವ್, ಊರಿನಲ್ಲಿ ಮತ್ತು ಸುತ್ತಮುತ್ತಲ ಎಲ್ಲರಿಗೂ ಡಾಕ್ಟರ್ ಮಾವ, ಡಾಕ್ಟರಜ್ಜ ಎಂದೇ ಪರಿಚಿತರು. ಪರಿಚಿತರಿಗೆ ಆಗೀಗ ವೈದ್ಯಕೀಯ ಸಲಹೆ ನೀಡುತ್ತಲೇ ಇದ್ದರೂ ಅವರ ಮುಖ್ಯ ಆಸಕ್ತಿ ನಿವೃತ್ತಿಯ ನಂತರ ಸಾಹಿತ್ಯವೇ. ನಾನು ಓದುವ ಕಾಲಕ್ಕೆ ಡಾಕ್ಟರಜ್ಜನು ನಿಜಕ್ಕೂ ಆಜ್ಜ ಆಗಿದ್ದರು. ಬಿಳಿಕೂದಲು, ನಗುಮುಖ, ಕನ್ನಡಕ ಧಾರಿ ಅಜ್ಜನ ಕೈಗಳ ಮೃದು ನೇವರಿಕೆ, ಏನ್ ಓದುತಾ ಇದ್ದೀಯ ಮರಿ ಎಂದು ಆಸಕ್ತಿಯಿಂದ ಕೇಳುವ ಪರಿ, ಎಲ್ಲಿಗೇ ಬರಲಿ ಸಾವಿತ್ರಿಅಜ್ಜಿಯ ಜೊತೆಗೇ ಬಂದಿರುತ್ತಿದ್ದ ಅಜ್ಜನ ವಿಶಿಷ್ಟ ನಡವಳಿಕೆ..ಮತ್ತು ಬಹುಶಃ ಒಬ್ಬರಿಗೊಬ್ಬರು ಸದಾ ಪೂರಕವಾಗಿಯೇ ಇದ್ದಾರೆ ಎಂಬಂತೆ ಯಾರಿಗೂ ಅನಿಸಬಹುದಾದ ಅವರಿಬ್ಬರ ಜೊತೆ, ಪುಸ್ತಕ ಬರೆಯುತ್ತಾರೆ ಎಂಬ ಕಿರೀಟ ಎಲ್ಲವೂ ಸೇರಿ ಅವರನ್ನು ನಾವು ಮಕ್ಕಳು ಕಾಯುತ್ತಿದ್ದ ವಿಶೇಷ ಅತಿಥಿಯನ್ನಾಗಿಸಿದ್ದವು. ನನ್ನ ಅಜ್ಜಿಯ ಅಣ್ಣನಾಗಿದ್ದ ಇವರು ಬಂದರೆ ನಮಗೆ ವಿಶೇಷ ಸಂಭ್ರಮ. ಆಗೀಗ ಅವರ ಮನೆಗೆ ಹೋಗುತ್ತಿದ್ದ ನೆನಪುಗಳು ನನ್ನಲ್ಲಿ ಹಚ್ಚಗಿವೆ. ಅವರ ಮನೆಯ ಎತ್ತರದ ಕಿಟಕಿ ಭರಿತ ಗೋಡೆಗಳು ಮತ್ತು ವಿಶಾಲ ಅಂಗಳ, ಅವರು ಕೂರುತ್ತಿದ್ದ ಹಾಲಿನ ಮೂಲೆಯ ದೊಡ್ಡಕುರ್ಚಿ ಮೇಜು, ಅವರು ಕೂತ ಧೀಮಂತ ನಿಲುವು ಕಣ್ಣಿಗೆ ಕಟ್ಟುವ ಹಾಗಿವೆ. ನನ್ ಕಥೆ ಎಲ್ಲ ಓದಿದಾಳೆ ಕಣೆ ಇವಳು ಅಂತ ಅಜ್ಜಿಯ ಕರೆದು ಹೇಳುತ್ತಿದ್ದರು. ೧೦ರ ಆಸುಪಾಸಿನ ನನ್ನ ಹತ್ತಿರ ಅಜ್ಜಿ ನಗುತ್ತ ಬಂದು ಬಳಸುತ್ತಿದ್ದರು. ಓದ್ಬೇಕು ತುಂಬ. ಬರೀ ಕಥೆ ಅಷ್ಟೆ ಅಲ್ಲ. ಎಲ್ಲದನ್ನೂ. ಪ್ರಪಂಚದ ವಿಷಯಗಳನ್ನೆಲ್ಲಾ. ಎಲ್ಲ ಪ್ರಕಾರಗಳನ್ನೂ ಅಂತ ಅವರಂದರೆ.. ಪ್ರಕಾರವೆಂದರೆ ಏನೆಂದರಿಯದ ನಾನು ಬರೀ ತಲೆಯಲ್ಲಾಡಿಸುತ್ತಿದ್ದೆ. ಅವರ ಪಕ್ಕದ ಟೇಬಲ್ಲಿನಲ್ಲಿ ಇರಿಸಿದ್ದ ಅದ್ಯಾವುದೋ ದೇಶದ ಪ್ರವಾಸದಿಂದ ಬರುವಾಗ ಅವರು ತಂದ ಕಲ್ಲೊಂದಿತ್ತು. ಇದು ಎಷ್ಟೋ ಸಾವಿರ ವರ್ಷಗಳ ನಂತರ ವಜ್ರವಾಗುತ್ತೆ ಅಂತ ಅದರ ವಿವರವನ್ನೆಲ್ಲ ಹೇಳುತ್ತಿದ್ದರು. ನಾನೊಬ್ಬ ಪುಟ್ಟಹುಡುಗಿ ಎಂದೆಣಿಸದೆ ಆಸಕ್ತಿ ತೋರಿಸುತ್ತಿದ್ದ ವಿವರಿಸುತ್ತಿದ್ದ ಅವರ ಈ ಪರಿಯೇ, ಅವರನ್ನ ಅಷ್ಟು ಆಸಕ್ತಿಯುತವಾಗಿ ಬರೆಯುವ ಕಾದಂಬರಿಕಾರನನ್ನಾಗಿಸಿತ್ತು ಅಂತ ಇವತ್ತು ಮತ್ತೆ ಅವರ ಕಾದಂಬರಿಗಳನ್ನು ತಿರುವಿ ಹಾಕುವಾಗ ಅನ್ನಿಸಿತು. ಮುಂದೆ ನಾನು ಅವರಿಗೆ ಒಂದೆರಡು ಬಾರಿ ಪತ್ರ ಬರೆದಿದ್ದೆ ಅದಕ್ಕೆ ಅವರು ಸೂಕ್ತ ಉತ್ತರವನ್ನೂ ನೀಡಿ ಬರೆದಿದ್ದರು. ಆ ವೇಳೆಗಾಗಲೇ ಅವರು ೮೮ ದಾಟಿದ್ದ ಅಜ್ಜನಾಗಿದ್ದರು. ೨೦೦೪ ರಲ್ಲಿ ಕೆಲಕಾಲದ ವಯೋಸಹಜ ಅನಾರೋಗ್ಯದ ನೆಪದಲ್ಲಿ ಅವರು ೯೫ನೆಯ ವರ್ಷದಲ್ಲಿ ನಮ್ಮನ್ನಗಲಿದರು. ದೊಡ್ಡೇರಿಯ ಮನೆಯಲ್ಲಿ ಈಗ ಮೂರ್ನಾಲ್ಕು ವರ್ಷದವರೆಗೂ ಅಜ್ಜಿ ಇದ್ದರು. ಅವರ ಮಕ್ಕಳು ಅಲ್ಲಿಯೇ ಇದ್ದಾರೆ. ಅಜ್ಜನ ಆತ್ಮೀಯತೆ ಆ ಪರಿಸರದಲ್ಲಿ, ಮನೆಯ ಎಲ್ಲರಲ್ಲಿ ಹಾಗೆಯೇ ಉಳಿದು ಬೆಳೆದು ಬಂದಿದೆ.
ಸಂಪ್ರದಾನ - ರೋಗ ನಿವಾರಣೆಗೆ ಎಲ್ಲಕ್ಕಿಂತ ಮುಖ್ಯವಾದದ್ದು ಹಿತಕರ ಪೋಷಣೆ, ಹತ್ತಿರದವರ ಅಕ್ಕರಾಸ್ಥೆ, ಮತ್ತು ಬದುಕಿನಲ್ಲಿ ಭರವಸೆ ತುಂಬುವ ನಿರ್ವ್ಯಾಜ ಪ್ರೇಮ ಎಂಬುದನ್ನು ಪ್ರತಿಪಾದಿಸುವ ಈ ಕಾದಂಬರಿ ಇವರ ರಂಜನೀಯ ಬರವಣಿಗೆಯ ಶೈಲಿಯಲ್ಲಿ ಇನ್ನಷ್ಟು ಥಳಥಳಿಸಿದೆ. ರಮ್ಯ ಚಿತ್ರಣದ ನಡುವೆಯೂ ವಾಸ್ತವದ ಮಾತುಗಳು ಸಹಜವಾಗಿ ಕೃತಿಯ ಮತ್ತು ಕೃತಿಕಾರನ ಎಚ್ಚರವಾಗಿ ಮೂಡಿಬಂದಿದೆ. ಇನ್ನೆಲ್ಲೋ ಓದಿದರೆ ಮತ್ತೊಂದು ಪರ್ಸನಾಲಿಟೀ ಡೆವಲಪ್ ಮೆಂಟ್ ಪುಸ್ತಕವಾಗುವ ಸಾಧ್ಯತೆಯಿರುವ ವಿಚಾರವನ್ನು ಡಿ.ವಿ.ರಾವ್ ಮನಸ್ಸಿಗೆ ತಾಕುವ ಹಾಗೆ ಬರೆದಿರುವುದು ಅವರ ಬರವಣಿಗೆಯ ಶಕ್ತಿಗೆ ಸಾಕ್ಷಿ. ಅವರ ವೃತ್ತಿಜೀವನದ ಅನುಭವ, ಹಲವಾರು ರೀತಿಯ ವ್ಯಕ್ತಿತ್ವಗಳ ಪರಿಚಯ ಈ ಕಥೆಯನ್ನು ಅಸಂಭವನೀಯತೆಯಿಂದ ಎತ್ತಿ ಇದು ಹೀಗೆಯೇ ಇರಬಲ್ಲದು ಎಂಬಂತಹ ಸಾಧ್ಯತೆಗಳ ಸಾಲಲ್ಲಿ ಮೊದಲು ನಿಲ್ಲಿಸಿದೆ. ಅವರೇ ಬರೆದಂತೆ, ಈ ಕೃತಿ ಫಿನ್ನಿಷ್ ಆತ್ಮಕಥಾನಕ ಕಾದಂಬರಿ ಗುನರ್ ಮ್ಯಾಟ್ಸನ್ನನ ದಿ ಪ್ರಿನ್ಸೆಸ್ ಕೃತಿಯಿಂದ, ಅವನ ಜೀವನದಿಂದ, ಮತ್ತು ಅವನು ಪ್ರತಿಪಾದಿಸಿದ ಸಾಧ್ಯತೆಗಳಿಂದ ಪ್ರೇರಿಸಲ್ಪಟ್ಟಿದ್ದು. ಓದುವಾಗ ಇದು ಇಲ್ಲೆ ಪಕ್ಕದೂರಲ್ಲೆ , ಕಣ್ಮುಂದೆ ನಡೆದಿದೆ ಎಂಬಂತಹ ಆತ್ಮೀಯ ಹೃದ್ಯ ಚಿತ್ರಣವಿದೆ. ವಿಚಾರಗಳನ್ನು ಇದು ವಿಚಾರ, ಇದು ಅಜೆಂಡಾ ಎಂದು ಹೇಳದ ಹಾಗೆ ಕಥೆಯೊಂದರ ಹೆಣಿಗೆಯಲ್ಲಿ ನಿಮ್ಮ ಮನದಂಗಳಕ್ಕೆ ತಂದುಬಿಡುವ ಕಲೆ ಈ ಕಥೆಗಾರನದ್ದು. ಹೊಸತು ಹಳತುಗಳ, ವಾಸ್ತವ ಮತ್ತು ರಮ್ಯತೆಗಳ ನಡುವಿನ ತಾಕಲಾಟವನ್ನು ಹೃದಯಸ್ಪರ್ಶಿಯಾಗಿ ಓದುಗರ ಮುಂದಿಡುವ ಡಿವಿ ರಾವ್, ಎಲ್ಲಿಯೂ ಪ್ರೀಚೀ ಆಗಿರುವುದಿಲ್ಲ. ಈ ತಾಕಲಾಟಗಳ ಇವತ್ತಿನ ಪ್ರಸ್ತುತತೆಯ ಬಗ್ಗೆ ಹೆಚ್ಚು ಹೇಳಬೇಕಾಗಿಯೇನಿಲ್ಲ. ಕಪ್ಪು ಬಿಳುಪಿನಲ್ಲಿ ತೆರೆದಿಡಬಹುದಾದ ಅನಂತ ಬಣ್ಣದ ಶೇಡುಗಳನ್ನು ತೆರೆದಿಡುವ ಛಾಯಾಚಿತ್ರಕಾರ ನುರಿತ ಕಾದಂಬರೀಕಾರನೂ ಆದಾಗ ಸಿಗುವ ಪಕ್ವತೆಯನ್ನ ನೀವು ಈ ಪುಸ್ತಕದ ಓದಿನಲ್ಲಿ ಅನುಭವಿಸಬಹುದು.
ಅವದಾನ - ಅಮೃತಘಳಿಗೆಯಾಗಿ ಚಿತ್ರೀಕರಣಗೊಂಡ ಈ ಕೃತಿ ೮೦ ರ ದಶಕದ ಜನಜೀವನವನ್ನು, ಸಾಮಾಜಿಕ ಪರಿಸ್ಥಿತಿಯನ್ನು, ಕಟ್ಟುಪಾಡುಗಳನ್ನು, ಮಿತಿಗಳನ್ನು ಮತ್ತು ಮೀರುವಿಕೆಯನ್ನು ಹದವಾಗಿ ಬೆರೆಸಿದ ಕಾದಂಬರಿ. ಸ್ನೇಹ, ಯೌವನದ ಸಹಜ ಭಾವಗಳು ಸ್ನೇಹ ಮತ್ತು ಪ್ರೇಮದ ನೆಲೆಯಲ್ಲಿ ಬೇರೂರುವ ವಿವರಗಳು, ವಾಸ್ತವದ ಛಳುಕು, ಮಲೆನಾಡಿನ ಆತ್ಮೀಯ ಪರಿಸರ, ತ್ಯಾಗ ಮತ್ತು ಹೊಂದಾಣಿಕೆ ಎಂಬ ಇವತ್ತು ಅತೀ ಅಪರೂಪವಾದ ಎರಡು ಭಾವ ಜಗತ್ತುಗಳನ್ನ ಈ ಕಾದಂಬರಿ ತೆರೆದಿಡುತ್ತದೆ. ಯಾವುದನ್ನೂ ಸಿನಿಮೀಯಗೊಳಿಸಿದ ನಿರೂಪಣೆ ಈ ಕಾದಂಬರಿಯ ಮುಖ್ಯಲಕ್ಷಣ. ವಾಸ್ತವದ ಉರುಳುಗಳನ್ನು ರಮ್ಯವಲ್ಲದ ಆದರೆ ಅಪರೂಪವೆನ್ನಿಸುವ ಆದರ್ಶ ಭರವಸೆಗಳಲ್ಲಿ ಬಿಡಿಸುವ ನಾಜೂಕು ಹೆಣಿಗೆ ಇಲ್ಲಿದೆ. ಇವತ್ತಿಗೆ ಇದು ಪ್ರಸ್ತುತವಲ್ಲ ಎಂದು ಮೇಲ್ನೋಟಕ್ಕೆ ಎನಿಸುವ ಕಥೆಯಾದರೂ ಈ ಕಾದಂಬರಿಯಲ್ಲಿ ಉಕ್ಕುವ ಜೀವನಪ್ರೀತಿ, ಸಹೃದಯತೆ ಎಂದಿಗೂ ಪ್ರಸ್ತುತ ಎಂದು ನನ್ನ ಅನಿಸಿಕೆ.
ದೃಷ್ಟಿದಾನ - ಹೆಸರೇ ಹೇಳುವ ಹಾಗೆ ಇದು ಕಣ್ಣುಕೊಡುವ ಕಥೆ. ಅನುಕಂಪವನ್ನು ಕರುಣೆಗೆ ಸಮೀಕರಿಸುವ ಈ ದಿನಗಳಲ್ಲಿ ಈ ಕಥೆ ತನ್ನ ವಿಚಾರ ವಿಶ್ಲೇಷಣೆಗಳಿಂದಲೇ ಗಮನ ಸೆಳೆಯುತ್ತದೆ. ಇವತ್ತು ಈ ಕಥೆಯಲ್ಲಿ ಬರುವ ಜೀವನ ವಿಧಾನ - ನಿಧಾನ, ವ್ಯವಧಾನ ಇಲ್ಲದೆ ಇದ್ದರೂ ಇದರಲ್ಲಿರುವ ವಿಚಾರ ಹಿಂದೆಂದಿಗಿಂತಲೂ ಇವತ್ತು ಪ್ರಸ್ತುತವೆಂದೇ ನನಗನ್ನಿಸಿತು. ಇದು ಬರಿಯ ಹೊರಗಣ್ಣಿನ ದೃಷ್ಟಿಗಿಂತಲೂ ಜೀವನದೃಷ್ಟಿಗೆ ಹೆಚ್ಚು ಸೂಕ್ತ ಎಂದು ನನಗನ್ನಿಸುತ್ತಿದೆ. ಅನುಕಂಪ ಅಥವಾ ಎಂಪಥಿಯಿಂದ ಉಂಟಾದ ಪರಿಚಯ ಇಷ್ಟ ಮತ್ತು ಗಾಢ ಪ್ರೇಮವಾಗಿ ಬೆಳೆಯುವ ಒಂದು ಸಂಬಂಧದ ರೂಪಕ ಈ ಕಾದಂಬರಿಯಲ್ಲಿದೆ. ಇದನ್ನು ನೇಯಲು ಕಥೆಗಾರ ಉಪಯೋಗಿಸಿರುವ ನಿರೂಪಣೆಯಲ್ಲಿ ಮಾನವೀಯ ಸಂಬಂಧಗಳ ಸೂಕ್ಷ್ಮ ವಿಶ್ಲೇಷಣೆಯಿದೆ. ದಾಂಪತ್ಯದ ಅನೇಕ ಹಂತಗಳನ್ನು ಸೂಚ್ಯವಾಗಿ ಆದರೆ ಸಶಕ್ತವಾಗಿ ನಿರೂಪಿಸುತ್ತ ಸಾಗುವ ಈ ಕಥೆ ಇವರ ಎಲ್ಲ ಕಾದಂಬರಿಗಳ ಹಾಗೆ ಓದಲು ತೊಡಗಿದರೆ ಕೆಳಗಿಡಲು ಮನಸು ಬಾರದ ಹಾಗೆಯೇ ಇದೆ.
ಈ ಮೂರೂ ಕೃತಿಗಳಲ್ಲಿ ಎಲ್ಲಿಯೂ ಪುರುಷ-ಸ್ತ್ರೀ ಸಂಬಂಧಗಳಲ್ಲಿ ಹೆಚ್ಚುಗಾರಿಕೆ ಇಲ್ಲದ ಹಾಗೆ, ಒಬ್ಬರಿನ್ನೊಬ್ಬರಿಗೆ ಪೂರಕ ಎನ್ನುವುದನ್ನು ಎಷ್ಟು ಸಾಧ್ಯವೋ ಅಷ್ಟು ನವಿರಾಗಿ ಅದರೂ ಸ್ಪಷ್ಟವಾಗಿ, ಸಂಬಂಧ ಗಾಢವಾಗಬೇಕಿದ್ದರೆ ಅದು ಇಬ್ಬರಿಂದಲೂ ಹೆಚ್ಚಿನ ಆಸಕ್ತಿ ಮತ್ತು ತೊಡಗುವಿಕೆಯನ್ನು ಪ್ರೇಮವನ್ನು ಬೇಡುತ್ತದೆ ಮತ್ತು ಅದರಿಂದ ಬದುಕು ಹೇಗೆ ಚಂದಗೊಳ್ಳುತ್ತದೆ ಎಂಬುದನ್ನು ಈ ಮೂರು ಕಾದಂಬರಿಗಳೂ ವಿಶಿಷ್ಟವಾಗಿ ನಿರೂಪಿಸಿವೆ. ಓದಲು ಹೆಚ್ಚು ಸಮಯ ಬೇಡದ ಈ ಕಾದಂಬರಿಗಳು ಓದಿದ ನಂತರ ಚಿರಕಾಲದ ಚಿತ್ರಗಳಾಗಿ ಮನಸ್ಸಿನಲ್ಲಿ ನಿಲ್ಲುತ್ತವೆ. ಅಂತಹ ಪರಿಣಾಮಕಾರಿ ಚಿತ್ರಣವನ್ನು ಹೆಚ್ಚಿನ ಗಲಾಟೆಯಿಲ್ಲದೆ ಮೂಡಿಸಿದ ಶ್ರೇಯಸ್ಸು ಕಾದಂಬರಿಕಾರನದ್ದು.
ಸ್ಪಷ್ಟ, ಮಧುರ, ವಿಚಾರಯೋಗ್ಯ ಮತ್ತು ಮಾನವೀಯ ಚಿತ್ರಣಗಳು ಡಾಕ್ಟರಜ್ಜನ ಸ್ವಭಾವದ ಪಾತಳಿಯಲ್ಲೆ ಕಟ್ಟಲ್ಪಟ್ಟಿವೆಯೇನೋ ಅನಿಸಿತು. ಮತ್ತೊಮ್ಮೆ ಈ ಆತ್ಮೀಯ ಅಕ್ಕರೆಯ ಜೀವದ ನೆನಪು ಗಾಢವಾಗುವಂತೆ ಮಾಡಲು ಈ ಬರಹ ಕಾರಣ. ಪ್ರೇರೇಪಿಸಿದ ಅಂಕಿತ ಪ್ರಕಾಶನ ಮತ್ತು ವಿಶ್ವವಾಣಿಗೆ ನನ್ನ ಧನ್ಯವಾದಗಳು.

-ಪ್ರೀತಿಯಿಂದ
ಸಿಂಧು ರಾವ್.ಟಿ

ಎದುರ ಬದುರ ಅಥವಾ ಅಕ್ಕ-ಪಕ್ಕ... ಥೇಟ್ ಬದುಕಿನ ಹಾಗೆ.

ವಿಶಾಲ ಅಂಗಳ
ತುಸು ದೊಡ್ಡದೇ ಜಗಲಿ
ಉದೂದ್ದ ಕಿಟಕಿ
ಕೂರಬಹುದಾದ ಕಿಟಕಿ ತಳಿ
ಜಗಲಿಯಂಚಿನ ಕಲ್ಲು ಬೆಂಚು
ಹಂಚಿನಿಂದಿಳಿದ ಚಂದದ ದೀಪ
ಕೂತು ಕಣ್ಣು ನೆಟ್ಟರೆ ಅಂಗಳದಾಚೆಗೆ ಹೊಳೆ
ಹೊಳೆನೋಡಲು ಮರಸಲು
ಬೇಲಿ ಬೇಡದ ಎತ್ತರೆತ್ತರ ಮರಸಾಲು
ಎಂದೋ ತುಂಬಿಸಿಟ್ಟ ಕಮಲಕೊಳ
ಒಂದಿಂಚು ಧೂಳಿನ ನೆಲ
ಯಾರೂ ಕೂರದೆ ಬೆಪ್ಪಾದ ಆರಾಮುಕುರ್ಚಿ
ಮುಖ ದುಮ್ಮಿಸಿ ನಿಂತ ಕಾಫಿಮೇಜು
ತೆಗೆಯದೆ ಹೋದ ಕಿಟಕಿ ಬಾಗಿಲು
ಬೀಗದ ಸಖ್ಯದಲ್ಲಿ ಇಡೀ ಮನೆಯ ಅಳಲು
ಮನೆಯ ಸುತ್ತ ಹೂವರಾಶಿ
ಹಕ್ಕಿ,ಅಳಿಲು ಜೀವರಾಶಿ
ಗಿಳಿಯು ಪಂಜರದೊಳಿಲ್ಲ
ಅಕ್ಕರಾಸ್ಥೆಯಲಿ ಕಟ್ಟಿದ ಮನೆಯೊಳು ಮನೆಯೊಡೆಯನಿಲ್ಲ.
ನೋಡನೋಡುತ್ತ ಭಾರವಾಗುವ ಮನ
ಬದುಕು ಯೋಜನೆಗೆ ತಕ್ಕ ಹಾಗೆ ಇರುವುದಿಲ್ಲ.
ಒಂದು ಹೊಸಾ ಪ್ಲಾಟು - ಚೌಕ, ರಸ್ತೆ ಪಕ್ಕ, ಜಲವಸತಿ
ಇನ್ನೊಂದು ಸುಸಜ್ಜಿತ ಹಳೇ ಪ್ಲಾಟು - ಒಬ್ಬಳೇ... ಮನೆಯೊಡತಿ.