Monday, February 11, 2019

ವ್ಯಾಕರಣ

ನೀನು ನನ್ನ ಬದುಕಿನ ಮಹಾಪ್ರಾಣ
ಅನ್ನುವುದೆಲ್ಲ ನಿಜ.
ಆದರೆ ಬದುಕಿನ ಕಾಗುಣಿತದಲ್ಲಿ
ತಲೆಗಟ್ಟು, ಇಳಿ, ಕೊಂಬು,
ದೀರ್ಘ, ಅನುಸ್ವಾರ, ವಿಸರ್ಗ,
ಅರ್ಕಾವತ್ತು, ಮತ್ತು ಒತ್ತಕ್ಷರಗಳ
ಹಿಂಡೇ ಇದೆ.
ನಾನು ಬದುಕೆಂಬ ಭಾಷೆಯನ್ನು ಹಿಂಡುತ್ತ ಇರುವಾಗ
*ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು*
ಎಂದು ಕೆ.ಎಸ್.ನ. ಕವಿತೆ ಓದಿದೆ.
ಈಗ ಭಾಷೆಯನ್ನು ಮರೆತಿರುವೆ
ಹಿಂಡುವ ಬದುಕಿನ ತಿರುಗಣಿಗೆ
ನನ್ನನು ನಾನೇ ಒಪ್ಪಿಸಿಕೊಂಡಿರುವೆ
ಒಮ್ಮೊಮ್ಮೆ ಗಾಳಿ ಬೀಸುವುದು
ಕಥೆ ಕವಿತೆ ಇಂಪುಲಿ ಮತ್ತು ಮಕ್ಕಳನಗೆಯಂತೆ.
ಮರೆತಿದ್ದರೂ ಎಲ್ಲ ವ್ಯಾಕರಣ
ತಿರುಗತಲಿಹುದು ಗಾಣ
ಅದಕೆ ನೀನೇ ಕಾರಣ.
ಗತಿ ನಿರ್ಧರಿಸದೆ ಅತ್ತಿತ್ತ ತಿರುಗುವ ಹೆಜ್ಜೆ
ನಿಂತುಬಿಟ್ಟಿತು:
ಇನ್ನೇನು-
ಹನಿಯಿಳಿಯಲು ಅಣಿಯಾದ ಬನಿಸಂಜೆ
ಗಿಜಿಗಿಟ್ಟುವ ಬೀದಿ, ಪಾದಪಥ, ಅಂಗಡಿ ಮುಂಗಟ್ಟೆ
ಕೊಳ್ಳುವಿಕೆಯಿಂದ ಬೀಗುವ ಚೀಲದ ಹೊಟ್ಟೆ
ಸರಸರನೆ ಸರಿವ ನೂರಾರು ಚಹರೆ
-ಗಳ ನಡುವೆ ದಿಟ್ಟಿಸಿ ನೋಡುತ ನಿಂತವನ
ನೋಡುತನಿಂತುಬಿಟ್ಟಿತು
ಹೆಜ್ಜೆ, ಕಣ್ಣು, ಯೋಚನೆ, ಕಾಲ
ಮರೆತವು ಎಲ್ಲ
"ಬಿಚಿ" "ಡಿಚಿ" ರಂಪ ರಾದ್ಧಾಂತ
ಜತೆಹಾದಿಯ ಪಯಣಾಂತ್ಯ :(
ಹೇಗಿದ್ದೀ ಎಂದಿಷ್ಟು
ಮಣಮಣಿಸಿ
ಮಾತು ಮರಣಿಸಿ, 
ಮೌನ ತಳಮಳಿಸಿ
..................ಕೈಬೀಸಿ
ಪಟಪಟನೆ ಹೆಜ್ಜೆ ಹೊರಟಿತು-
ಹೆಜ್ಜೆ, ಕಣ್ಣು, ಯೋಚನೆ, ಕಾಲ
ಚಲಿಸತೊಡಗಿ
ಹನಿಯುದುರುವ ಸಂಜೆ
-ಯಲ್ಲಿ ಬಜಾರು ಬೀದಿಯಲ್ಲಿ ಓಡಾಡುವ
ಖುಷಿ ಕರಗಿ ನೀರಾಗಿ;
ದಿನಪತ್ರಿಕೆಯಲ್ಲಿ ಸುದ್ದಿ ಬಂತು-
"60ಮಿ.ಮೀ ಮಳೆ, ರಸ್ತೆ ತುಂಬ ಹರಿದ ಕೊಳೆ."