ಏರು ಹಾದಿಯ ಬೆಟ್ಟಸಾಲಿನ
ನಿಬಿಡ ಕಾಡಿನ ಅಂಚಲಿ
ಹರಡಿ ನಿಂತ ಚಾಮರವ
ಹೊತ್ತ ಮತ್ತಿಮರದ ನೆರಳಲಿ
ನಿಂತು ನೋಡಲು
ಕಾಣಸಿಗುವುದು ದೂರಕಣಿವೆಯ
ಕಾಲುಹಾದಿ,..
ಹಸಿರ ಹುಲ್ಲಿನ ಮಧ್ಯೆ
ಬಳುಕಿ ಹರಿವ ಹೊನಲಿದೆ,
ಅಲ್ಲೆ ಸನಿಹದಿ
ಮೆಲ್ಲಹೊರಳುತ ದಾರಿ
ದೂರಕೆ ಸಾಗಿದೆ
ಬೆಟ್ಟತುದಿಯ ನೋಟಕೆ
ಕ್ಯಾಮೆರಾ ಕಣ್ಣಾಟಕೆ
ರಮಣೀಯ ಚಿತ್ರದ ಯೋಚನೆ
ದಾರಿಯೆಡೆಯಲ್ಲಿ ನಡೆದವರಿಗಷ್ಟೇ
ಗೊತ್ತು
ಚುಚ್ಚುವ ಮುಳ್ಳು, ಒತ್ತುವ ಕಲ್ಲು
ಹಳ್ಳದ ಉಸುಕು,
ಗುರಿಯಿರದ ಪಯಣದ ಯಾತನೆ....
ಇಲ್ಲಿ ದೂರದಿ
ಬೆಟ್ಟದೇರಲಿ
ತಂಪು ಮತ್ತಿಯ
ನೆರಳಲಿ
ಆ ಎಲ್ಲ ಯಾತನೆಗಳ
ತಿಥಿ ನಡೆದಿದೆ
ಊಟವಿಲ್ಲದ ಶ್ರಾದ್ಧ;
ಮನಸೋ
ಮರೆಯಬೇಕಿರುವುದನ್ನೆ
ನೆನೆಯಲು
ಮತ್ತೆ ಮತ್ತೆ ಬದ್ಧ;
ಮರೆಯಲೋ ನೆನಪಾಗಲೋ
ನೆನಪುಗಳಿಗೆ ನಡೆದಿವೆ
ತಂತಮ್ಮೊಳಗೇ ಯುದ್ಧ!
ಯುದ್ಧ ಮುಗಿದು
ಗಾಯಗಳ ನೆಕ್ಕುತ್ತಾ,
ಕಣ್ಣ ನೋಟವ ಕದಲಿಸಿ
ಬೆಟ್ಟಸಾಲಿನಲ್ಲಿ
ಆರೋಹಣ.
ಮತ್ತೆ ಮುಂದಿನ ತಿಥಿಗೆ
ನೆನಪುಗಳ ಅವರೋಹಣ..
ಹತ್ತುವುದೆಲ್ಲ ಇಳಿಯಲಿಕ್ಕೇ ಅಂತ ಇದಕ್ಕೇ ಅನ್ನುತ್ತಾರೇನೋ!
ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ
-
*ಯಾ*ವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ
ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು
ಹೇಳಿದ್ದ...