Friday, September 30, 2011

ಹಲ್ನೋವು

ಮಳೆಗಾಲದ ಮಧ್ಯಾಹ್ನ
ಉಂಹೂಂ ನಮ್ಮೂರಾಗಲ್ಲ
ಇಲ್ಲೆ ಐಟಿಸಿಟಿಯಲ್ಲಿ
ಬೈಗು,ಬೆಳಗು,ಬಿಸ್ಲೊತ್ತು,ನೆಳಲು
ಗೊತ್ತಾಗದ ಹಾಗೆ
ಏಸಿಯಲ್ಲಿ ಕುಳಿತು
ದಿನಚರಿಯನ್ನೇನು ಹೇಳುವುದು ಬಿಡಿ
ಎಲ್ಲರ ಕತೆಯೂ ಅದೆ
ವಿಷ್ಯ ಏನಪಾಂದ್ರೆ
ಸ್ವಲ್ಪ ಹೆಚ್ಚೇ ಕಾಡುತ್ತಿರುವ
ಹಲ್ನೋವು.
ಹುಂ ತಕ್ಷಣವೇ ಡಾಕ್ಟರತ್ರ
ಕರ್ಕೊಂಡೋಗಲು ನಾನು
ಹೊಸಹೆಂಡತಿಯಲ್ಲ.
ಅಂವ ಹಳೆಗಂಡನೂ ಅಲ್ಲ
ವಯಸ್ಸಾದ್ ಮೇಲೆ
ಇದ್ದಿದ್ದೆ ಇದೆಲ್ಲ
ಅಂತ ನಾನೂ ಸುಮ್ನಿದ್ದೆ
ಸುಮ್ನಾದಂಗೂ ಅಬ್ಬರ
ಜಾಸ್ತಿಯಾಗುವುದೇ ಹಲ್ನೋವಿನ ಲಕ್ಷಣವಂತೆ
ಈಗ ಮೂವತ್ತೈದರ ಆಜೂಬಾಜಲ್ಲಿ
ಇನ್ನೇನು ಮತ್ತೆ
ಎಲ್ಲ ಸಣ್ ಪುಟ್ಟ ಕಾಯಿಲೆಗಳಿಗೂ
ಬಾಲಗೋಪಾಲದಿಂದ
ಕಿರೀಟಕ್ಕೇ ಭಡ್ತಿ.
ಅದಕ್ಕೆ ಇರಬೇಕು
ಮಹಾನಗರದ ಆಸುಪತ್ರೆಗಳೆಲ್ಲ ಭರ್ತಿ.
ಮಳೆಯ ಚಳ್ ಚಳಿಯಲ್ಲಿ
ಬೆಚ್ಚಗೆ ಕೂತು ಚಕ್ಕಲಿ ಕಡಿಯುವ ನೆನಪಿಗೆ
ಹಲ್ಲು ಕಟಗುಟ್ಟಿ
ಇಷ್ಟೆಲ್ಲ ಬರೆಸಿದ್ದು ನೋಡಿದ್ರೆ
ಭೂತಗನ್ನಡಿಯಲ್ಲಿ ಬೆಳಕು ತೂರದೇನೆ
ಬೆಂಕಿ ಬಂದ್ರೂ ಬಂತೆ.

Tuesday, September 27, 2011

ಸುಗಂಧ ಸಮೀರ

ಸುಮ್ಮಗೆ ನೆಲದ ಮೇಲೆ
ಕಾಯುತ್ತ ಕೂತವಳ
ಎದಿರು
ಸಗ್ಗದಿಂದಿಳಿದಂತೆ
ನೀನು
ಹಾಜರಿ ಹಾಕಲು -
ಮೋಡವಾಗಿ ಬನಿಇಳಿವ
ಮೊದಲೇ
ಈ ಹನಿ
ಶರಧಿಯೊಳಗೆ ತಲ್ಲಣಿಸಿ
ಆವಿಯಾಗಿತ್ತೆಂಬ ಅರಿವು.
ಎಳೆಯ ಕಾಲದಿ ಬಿತ್ತಿದ
ಮೊಳಕೆಮೂಡದ ಬೀಜ
ಏರುಬದುಕಿನ ಬಿರುಹಾದಿಯಲಿ
ನೆರಳಿಗೆ ಹೊರಳಿದರೆ ತಂಗಾಳಿ
ಸೂಸುವ ಎಲೆಮರ,
ನೆನಪ ಗಂಧ ತೇಯುವ
ಕಲ್ಲು ಮನದ ಸುತ್ತ ಸುಳಿವ
ಸುಗಂಧಿತ ಸಮೀರ.
ನೀನು ಮೊನ್ನೆಯ ನಿಜ.
ಇವತ್ತೂ ನಿಜವೇ.
ಕಳೆದ ಕಾಲದ ಕನ್ನಡಿಯಲಿ
ನಿತ್ಯ ನೂತನ
ಮಂದಹಾಸವರಳಿಸುವ
ಮುಟ್ಟಲಾಗದ ನಿಜ.
ನಿಲುಕಲಾರದ ಅಳುಕಲ್ಲು
ಸವರಿ ಸಂತೈಸಿಕೊಳ್ಳುವೆ
ಕವಿತೆ ಬರೆವ ಲಹರಿ
ಅಲ್ಲು ಇಲ್ಲು ಎಲ್ಲೂ.
ಪೋಣಿಸಿದ ಅರಳು ಮೊಗ್ಗು
ಆಹ್ಲಾದ
ಕನಸು ಮನಸು
ನನಸಲ್ಲೂ!