Thursday, April 5, 2007

ಪೂ.ಚಂ.ತೇ ಇನ್ನಿಲ್ಲ .. :(

ಕನ್ನಡದ ಅದಮ್ಯ ಚೇತನ ಪೂರ್ಣಚಂದ್ರ ತೇಜಸ್ವಿ ಇನ್ನು ಬರಿ ನೆನಪು,ಸಂಕಿರಣ,ಪುಸ್ತಕಮಾಲೆ...
ತಮ್ಮ ಬರಹ ಚಟುವಟಿಕೆಗಳಿಂದ ನಮಗೆ ಆಪ್ತ ರಾಗಿದ್ದ ಹಿರಿಯ ಜೀವ..
ಸಮೀಪ-ಪರಿಚಯವಿಲ್ಲದ ಓದುಗ-ಅಭಿಮಾನಿಯಾದ ನನಗೇ ಸಂಕಟವಾಗುತ್ತಿದೆ.
ಅವರ ಅಗಲಿಕೆಯ ನೋವನ್ನ ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ.
ನಮ್ಮೆಲ್ಲರ ತುಂಬು ಹೃದಯದ ನಮನ ಅವರ ಚೇತನಕ್ಕೆ.
ದೂರದಲ್ಲಿದ್ದರೂ ಆಪ್ತ ಸಾಂತ್ವನ ಮನೆಮಂದಿಗೆ.

ಈಗ ಗೊತ್ತಾಗಿದೆ...

ಮಳೆಯಲ್ಲಿ ನೆಂದ ಹಚ್ಚಹಸಿರಲ್ಲಿ

ಮೊಗ್ಗು ಮೂಡಿ,

ಹೂವರಳಿ, ಕಾಯಿ ಜಗ್ಗಿ,

ಹಣ್ಣಾಗಿ, ಎಲೆಗಳುದುರಿ. . . .

ಹಾವಸೆ ಹಿಡಿದ ಜಾರುದಾರಿಯಲ್ಲೀಗ

ನೆಲಕಚ್ಚಿದ ತರಗೆಲೆಗಳ ಮರ್ಮರ;

ದಿಟ್ಟಿ ಹಾಯುವವರೆಗೆ

ಹಸಿರ ತಂಪಿನ, ಕಂಪು ಸೂಸಿದಲ್ಲೀಗ

ನೆಳಲೂ ನೀಡದ

ಬೋಳು ಬೋಳು ಗಿಡಮರ.


ನಿಸರ್ಗವೇ ಹೀಗೆ. . .

ಋತು‌ಋತುವಿಗೆ ಬದಲಾಗಿ,

ಕೊನೆಯಾಗಿ, ಮೊದಲಾಗಿ,

ಕ್ಷಣ ಕಾಯದೆ, ಕ್ಷಣ ನಿಲ್ಲದೆ

ನಿರಂತರ ಪರಿವರ್ತನೆ, ಚಲನೆ.


ಈಗ ಗೊತ್ತಾಗಿದೆ. . .

ನಾನು ನಿನ್ನ ನಿಸರ್ಗಕನ್ಯೆ ಅಂತ

ಕರೆದಿದ್ದು ಸುಳ್ಳಲ್ಲ,

ಉತ್ಪ್ರೇಕ್ಷೆ ಖಂಡಿತಾ ಅಲ್ಲ.


ನನ್ನ ನೋಡಿ ಮಿಂಚಿದ್ದ

ನಿನ್ನ ಕಣ್ಣಲ್ಲೀಗ ಕಪ್ಪು ಮೋಡ,

ಕೊನೆಯಿರದ ಮಳೆಗಾಲ;

ಪ್ರಪಂಚ ಗೆದ್ದ ಭಾವದಲ್ಲಿ

ನನ್ನ ಕೈಗಳನ್ನ ಹಿಡಿದಿದ್ದ

ನಿನ್ನ ಕೈಗಳಲ್ಲೀಗ ಬರಗಾಲ;

ನನ್ನ ಬರುವಿಕೆಯ ತಂಗಾಳಿಗೆ

ತೂಗಿದ್ದ ನಿನ್ನ ಮನದಲ್ಲೀಗ

ಚಂಡಮಾರುತ. . . .


ರುದ್ರ ರಮಣೀಯ ನಿಸರ್ಗದ ರಮ್ಯತೆ,

ಮಾನವಸಹಜ ಕ್ಷುಲ್ಲಕತೆಗೆ

ಬಲಿಬಿದ್ದು

ರೌದ್ರತೆಯಷ್ಟೇ ಉಳಿದಿರುವುದು

ಮಾತ್ರ, ಅನ್ಯಾಯ... :<(