Monday, May 4, 2015

ನನ್ನ ಪ್ರೀತಿಯ ಹೆಬ್ಬಲಸಿನ ಮರ

ವೈಶಾಖದ ಇಳಿ ಮಧ್ಯಾಹ್ನ,
ಹೆಬ್ಬಲಸಿನ ಮರವೊಂದು
ನಿಧಾನ, ನಿರುಮ್ಮಳವಾಗಿ
ನೆಲಕ್ಕೆ ಒರಗಿತು.

ಎಲ್ಲ ಎಲೆಗಳಿಗೂ
ಮಣ್ಣಲ್ಲಿ ಕಲೆತುಹೋಗುವ
ಪಾಠವನ್ನ ಚಿಗುರಿದಾಗಲೇ ಕಲಿಸಿದ
ಮರ,
ಕಾಯುತ್ತ ಇತ್ತು -
ಸಂಜೆಗೆಂಪಲಿ ಮಣ್ಣಲಿ ಬೆರೆಯಲು.
ಕೊಂಬೆಕೊಂಬೆಗಳಲಿ ಹಕ್ಕಿ
ಕುಕಿಲು ಚಿಲಿಪಿಲಿ,
ಮರದಲ್ಲಿ ಹಣ್ಣಾದಷ್ಟೇ ಸಹಜದಲಿ
ಮರವೇ ಹಣ್ಣಾದ ಬಗೆ!
ಸ್ಪಷ್ಟ, ಸೌಮ್ಯ, ವಿಶಿಷ್ಟ.

ತುಂಬಿ ಬಂದ ಕಣ್ಣು
ತುಳುಕದೆ ಹಾಗೆಯೇ
ನಕ್ಕುಬಿಡುವಂತ ನೆನಪಿನ ಆಸರೆ;
ದಾರಿಯ ಬದಿಗೆ ಸರಿದು ನಡೆವಾಗ
ಚುಚ್ಚುವ ಕಲ್ಲು ನೆನಪಿಸುವ
ಅಜ್ಜನು ಜೊತೆಗೇ ತೋರಿಸುವನು
ಹುಲ್ಲಿನ ಸಂದಿಯಲ್ಲಿ ಹರಿವ ನೀರಲಿ
ಕಾಲಿಡುತ್ತ ನಡೆದು ಹೋಗುವ ಸುಖ.

ಇದುವೆ ಬದುಕು ಇದುವೆ ಜೀವನ.

ನನ್ನ ಪ್ರೀತಿಯ ಹೆಬ್ಬಲಸಿನ ಮರ
ನಿಧಾನಕ್ಕೆ ನಿರುಮ್ಮಳದಲ್ಲಿ
ಒರಗಿದೆ ಮಣ್ಣಿಗೆ.
ಮಣ್ಣಿನ ಚೈತನ್ಯ ಮಣ್ಣಿಗೇ ಮರಳಿದ
ಸಂತಸ ಮಣ್ಣಿಗೆ.


ಬದುಕಿನ ಸೂಕ್ಷ್ಮ ಪಾಠಗಳನ್ನ ನನ್ನ ಅಜ್ಜನೋ ಎಂಬಷ್ಟು ನವಿರಾಗಿ ಹೇಳಿಕೊಟ್ಟ ಪೆಜತ್ತಾಯ ಅಂಕಲ್ ಮೊನ್ನೆ ಏಪ್ರಿಲ್ 30 ರ ಮಧ್ಯಾಹ್ನ ಪಂಚಭೂತಗಳಲ್ಲಿ ಸೇರಿಹೋದರು. ಈ ಕವಿತೆಗೆ ಅವರ ನೆನಪು ಮುಗಿಯುವುದಿಲ್ಲ. ಅವರ ಜೀವನ್ಮುಖೀ ವ್ಯಕ್ತಿತ್ವಕ್ಕೆ ಇದು ಒಂದು ಕಿಂಡಿ, ಅಕ್ಷರ ನಮನ.