Friday, April 13, 2007

ನಲ್ಮೆಯ ನಮನ

ಸುಂದರ ಪಾರ್ಕು, ಸುತ್ತೆಲ್ಲ ಮರಗಳು


ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ.


ಜನಜಾತ್ರೆ, ಇಷ್ಟೊಂದು ಜನ ಇಲ್ಯಾಕೆ ಮೈಯೆಲ್ಲ ಕಿವಿಯಾಗಿ ಕೂತಿದ್ದಾರೆ ಕೇಳೋಣ ಅಂತ ಸುತ್ತ ಬಾಗಿ ನಿಂತ ಮರಗಳು,


ನೀರಿಲ್ಲದೆ ಪರದಾಡುವ ಬೆಂಗಳೂರಲ್ಲೂ ನೆಲ ಕಾಣದಷ್ಟು ಹಸಿರಾಗಿ ಮಿರುಗುವ ಹುಲ್ಲು ಹಾಸು, ಅಲ್ಲಲ್ಲಿ ನಗುವ ಹೂಗಳ ಬಿಂಕದಿಂದ ಬಾಗಿರುವ ಗಿಡದ ಗುಚ್ಛಗಳು.. ಸಂಜೆ ಗೂಡಿಗೆ ವಾಪಸಾದ ಹಲ ಕೆಲವು ಹಕ್ಕಿ ಸಂಸಾರದ ಕಲರವ.. ನಿಮಗಿಷ್ಟವಾಗುವ ವಾತಾವರಣ..


ನೀವಿದ್ದಿದ್ರೆ ಇನ್ನೊಂದು ಹಾಡು ಹುಟ್ಟುತ್ತಿತ್ತೇನೋ.. ಇರಲಿ ಬಿಡಿ - ಏನಾದರೇನೀಗ ನೀವು ತೆರೆದ ಬಾಗಿಲಿನಿಂದ ಹೋಗಿ ತುಂಬ ದಿನಗಳಾಗಿವೆ.. ನನಗ್ಗೊತ್ತು ನೀವಲ್ಲಿ ತಾರೆಗಳ ಮೀಟದೆ, ಚಂದಿರನ ದಾಟದೆ ಕೂತಿದ್ದೀರಿ, ಗೃಹಲಕ್ಷ್ಮಿ ಇಲ್ಲೆ ಉಳಿದಿದ್ದಾಳಲ್ಲ, ಜೊತೆಗಾನದ ತಂಪು ಉಲಿಯಲ್ಲವೆ ಅದು.. ಅಲ್ಲಿ ಶಾನುಭೋಗರು ಸಿಕ್ಕಿದರೆ ಈಗ ನೀವು ಕೇಳುವಂತಿಲ್ಲ, ನನ್ನ ಒಬ್ಬಳೆ ಹೆಂಡತಿಯಾದ ನಿಮ್ಮೊಬ್ಬಳೇ ಮಗಳನ್ನ ಬೇಗ ಇಲ್ಲಿ ಕಳಿಸಿ ಎಂದು.. ಧರೆಯ ಸುಖದಲ್ಲಿ ನಿಮ್ಮಾಕೆ ನಿಮ್ಮ ಮರೆತಿಲ್ಲ, ಹಗಲಿರುಳ ನಡುವಿನ ವ್ಯತ್ಯಾಸ ಮರೆತು ಕಾಣುವಳು ನಿಮ್ಮದೇ ಕನಸು. ಆಗೀಗ ಎಚ್ಚರಿಸುತ್ತದೆ ಮೊಮ್ಮಕ್ಕಳ ಗೆಜ್ಜೆ ಗೊಲಸು.. ನಿಮ್ಮ ಕವಿತೆಯನುಲಿವ ಹಾಡು ಹಕ್ಕಿಗಳ ಗಾನದಿಂದ ಸಿಂಗರಿಸುತಿಹಳು ಮನದ ವೃಂದಾವನ, ದಿನ ಬಿಟ್ಟು ದಿನ ರೇಡಿಯೋಲೂ ಬರುತ್ತದೆ, ಮಲ್ಲಿಗೆಯ ವಿವಿಧ ತನನ...


ನಿಮ್ಮ ಇತ್ತೀಚಿನ ಭಾವಚಿತ್ರ ನಗುತ್ತಿದೆ ವೇದಿಕೆಯಲ್ಲಿ, ಹೋದ ವರುಷದಲಿ ಅಸ್ತಂಗತನಾದ ರಾಜಕುಮಾರನ ತುಂಬು ನಗೆ ನಿಮ್ಮ ಸಿರಿಮಲ್ಲಿಗೆಯ ಪಕ್ಕದಲ್ಲಿ.


ತುಂಬ ಸಂತಸ ನನಗೆ ನಿಮ್ಮನ್ನ ಕಂಡು, ನಿಮ್ಮನ್ನ ಓದಿ, ನಿಮ್ಮನ್ನ ಕೇಳಿ.. ನೀವು ಬರೆದ ಕವಿತೆಗಳ ತುಂಬ ನಲಿವಿನ ಮೆಲ್ನಗೆ, ವಿನೋದದ ಅಂಚು, ದಾಂಪತ್ಯದೆಳೆ, ಪಟ್ಟ ಸಾವಿರ ನೋವುಗಳ ಒಂದೆರಡು ಮೆಲ್ದನಿಯೂ ಎಲ್ಲ ಚಿತ್ರಗಳಾಚೆ ಕಾಣುವ ಇನ್ನೊಂದು ಸಿರಿಮಲ್ಲಿಗೆಯ ಹಿಂದೆ ಅಡಗಿ, ಕವಿತೆಯ ತುಂಬ ಬದುಕಿನದೇ ಹೂರಣ..


ತುಂಬ ಮೆಚ್ಚಿಗೆ ನನಗೆ ನೀವೆಂದರೆ, ನೀವಲ್ಲವೇ "ನನ್ನ ಜೊತೆಯಲ್ಲಿ ಪಯಣಿಸಿದವರ ಮುಂದಿನ ನಿಲ್ದಾಣ ಎಲ್ಲೆಂದು ಕೇಳದವರು, ಜಾತಕಗಳೊಪ್ಪಿದರೆ ಮದುವೆಯೇ! ಎಂದು ಅಚ್ಚರಿಯಲಿ ಬರೆದವರು, ನಗುತಳುತ ಬಾಳಹಾದಿಯ ಕಳೆದು ಬಯಲು-ಚೆಂಡುಗಳೆರಡನ್ನೂ ಮನದನ್ನೆಯದಾಗಿಸಿ ಜಗುಲಿಯಲಿ ಕೂತು ವಿಧವಿಧದ ಮಲ್ಲಿಗೆಗಳ ದಂಡೆ ನೇಯ್ದವರು. ನಿಮ್ಮನುಭವ ತೆಳುವೆಂದವರ ಟೀಕೆಗೆ ನೀವು ನಕ್ಕಿರಿ, ನನಗೂ ನಗು.. ಅವರು ಹಿಡಿದು ನೋಡಿದ್ದರೆ ತಿಳಿಯುತ್ತಿತ್ತು ಮಲ್ಲಿಗೆಯ ದಂಡೆ ಎಷ್ಟು ಒತ್ತಾಗಿದೆಯೆಂದು.. ಸಂಪಿಗೆಯ ಮೆಚ್ಚುವಗೆ ಮಲ್ಲಿಗೆಯ ಪರಿಮಳ ತೆಳುವೇ ಸರಿ.. :-) ನಿಮ್ಮ ಮಲ್ಲಿಗೆಗಳೇ ಗುನುಗುತ್ತವೆ ಹೀಗೆಂದು.


ತುಂಬ ಅಚ್ಚರಿ ನನಗೆ ನೀವು ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳನ್ನ ಮಲ್ಲಿಗೆಗೆ ಸಿಂಪಡಿಸಿದ ರೀತಿಗೆ, ನೋವ ಕ್ಷಣಗಳನೆಲ್ಲ ಗೆದ್ದು ನಗುವ ಬದುಕಿನ ಪ್ರೀತಿಗೆ. ನಿಮ್ಮ ರೀತಿಗೆ ನಿಮ್ಮ ಪ್ರೀತಿಗೆ ಕಣ್ಣ ಹನಿಗಳೆ ಕಾಣಿಕೆ. ನಿಮ್ಮ ರೀತಿಗೆ ನಿಮ್ಮ ಪ್ರೀತಿಗೆ ನಿಮ್ಮ ಸಾಲ್ಗಳೆ ಹೋಲಿಕೆ..


ಅಲ್ಲಿ ವೇದಿಕೆಯಲ್ಲಿ ತುಂಬ ಹಿರಿಯರು ಕನ್ನಡದ ಗಣ್ಯರು, ಪ್ರತಿಷ್ಠಿತರು ನಿಮ್ಮ ಕವಿತೆಗಳ ವಾಚಿಸುತಿದ್ದಾರೆ. ಒಬ್ಬೊಬ್ಬರದೂ ಒಂದು ನೋಟ.. ಈಗ ಕಲ್ಪಿಸಿಕೊಂಡೆ ನಿಮ್ಮ ಹಾಡನ್ನ ನಿಮಗೇ ಯಾರೋ ತಮ್ಮದೆಂಬಂತೆ ಹಾಡಿದರೆ ಹೇಗೆನಿಸುತ್ತದೆಂದು.. ಎಲ್ಲ ದನಿಗಳಿಗೊಂದು ಕವಿತೆ, ಎಲ್ಲರೊಳಗೊಂದು ಹಣತೆ, ಯಾರ ಹೊಟ್ಟೆಯ ಪಾಡಿಗೋ, ಇನ್ಯಾರ ಮನದ ಆಹ್ಲಾದಕ್ಕೋ ಸಿರಿಮಲ್ಲಿಗೆ ನೇಯ್ದ ನಿಮಗೆನ್ನ ತುಂಬು ಹೃದಯದ ನಮನ.


ತಲೆಬಾಗುತ್ತೇನೆ ನಮ್ರಳಾಗಿ:

ಕವನ ನೇಯುವುದು ದೊಡ್ಡದಲ್ಲ. ಕವಿತೆ ಬರೆಯುವ ಮಧ್ಯೆ ನೀವು ನೆಮ್ಮದಿಯರಸಿ ರೆಕಾರ್ಡ್ ಬರೆಯುವ ಗುಮಾಸ್ತರಾಗಲಿಲ್ಲವಲ್ಲ ಅದಕ್ಕೆ, ಎಲ್ಲ ಗೌಜುಗಳ ನಡುವೆ ಮನದ ಮೌನದಿ - ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ ಎಂದು ಬರೆದಿರಲ್ಲ ಅದಕ್ಕೆ, ದೇವನೊಡನೆ ಗೆಳೆತನ ಬೆಳಸಿ, ಅವನು ಕೊಟ್ಟ ಜಗದಿ ನಿಮ್ಮಷ್ಟಕ್ಕೆ ನೀವೆ ಹಾಡಿಕೊಂಡು ಒಲವಿನ ರೂಪಕವಾದಿರಲ್ಲ ಅದಕ್ಕೆ.


ಶರತ್ ಶಾರದೆಯ ನವರಾತ್ರಿಗಳಿಗೂ ಹಚ್ಚಿ ವರ್ಷವಿಡೀ ಬರುವ ಅಮಾವಾಸ್ಯೆಯ ಕಾರ್ಗತ್ತಲುಗಳಿಗೂ ಹಚ್ಚಲಾಗಬಹುದಾದಷ್ಟು ಹಣತೆಗಳ ತೇಲಿ ಬಿಟ್ಟಿದ್ದೀರಿ ನಮ್ಮ ಭಾವದ ಸರಸ್ಸಿನಲ್ಲಿ.. ಒಂದೊಂದು ಹಣತೆಗೂ ಒಂದು ದೊಡ್ಡ ಮಲ್ಲಿಗೆಯ ಮುಗುಳು.. ಅತ್ತಿತ್ತ ಹೊರಳದೆ ಮಲಗಿದೆ ಮಗು.. ನಿಮ್ಮ ಹಾಡ ಸವಿಯುವ ಹಂಬಲು.


ನೀಲಿಯ ಗಗನದ ಉಪಮೆಯಲ್ಲಿ ಸಾಮರಸ್ಯದ ಪಾಠ ಹೇಳಿದ್ದೀರಿ, ಮಾವೊಂದೆ ಚಿಗುರಲಿಲ್ಲ ಚಿಗುರುತ್ತಿದೆ ಬೇವು, ನಲಿವೊಂದೆ ಹರಸಲಿಲ್ಲ ಜೊತೆಯಲಿತ್ತು ನೋವು ಎಂದು ಎಚ್ಚರಿಸಿದ್ದೀರಿ.. ಮಾಂದಳಿರಿನ ಚೆಂದುಟಿಯಲಿ, ಬಿರಿದಾ ಹೂವ ಮೇಲೆ, ಮೂವತ್ತು ವರುಷದ ಹಿಂದೆ, ಎಂದೋ ಕೇಳಿದ ಒಂದು ಹಾಡನು ಮನದ ವೀಣೆಗೆ ಕಲಿಸಿದ್ದೀರಿ.. ಮನೆಯಿಂದ ಮನೆಗೆ, ಗಡಿಯಾರದಂಗಡಿಯ ಮುಂದೆ, ಸಂಬಳದ ದಿನದಂದು, ತುಂಗಭದ್ರೆಯ ಆನಂದವನ್ನು ಹಂಚಿದ್ದೀರಿ. ಮೀನಳ ಕಣ್ಣೀರೊರೆಸಿದ್ದೀರಿ.. ವಿಳಾಸವರಿಯದೆ ಬಂದವರಿಗೆ ಇಹದ ಪರಿಮಳದ ಹಾದಿಯ ಕೈಮರದ ನೆರಳಲ್ಲಿ ಸಂಜೆ ಹಾಡು ಹಾಡಿದ್ದೀರಿ. ನಿಮಗೆ ಉಂಗುರವಿಡಲೋ, ಶಿಲಾಲತೆಯ ಶಾಲೋ? ನವಪಲ್ಲವದಲಿ ಐರಾವತದ ಮೆರವಣಿಗೆಯೋ? ಇರುವಂತಿಗೆಯ ಮಾಲೆಯೋ? ನವಿಲಗರಿಯ ಚಾಮರವೋ? ಅದೆಲ್ಲ ಯಾಕೆ.. ಮನದ ಮೂಲೆಯಲ್ಲೊಂದು ದುಂಡುಮಲ್ಲಿಗೆ ನೆಟ್ಟು ನೀರೆರೆಯೆಂದಿರಾ, ನೀವು ಹಲವರುಷಗಳ ಹಿಂದೆ ಬಳೆಗಾರನ ಗಂಟಲ್ಲಿ ನೀಡಿದ ಮಲ್ಲಿಗೆಯ ಕೊನರು ಬದುಕಿನ ಎಲ್ಲ ತಿರುವುಗಳಲ್ಲೂ ಹಬ್ಬಿ ಹೂ ಬಿರಿದಿದೆ. ಎಲ್ಲ ಚಿತ್ರಗಳ ನಡುವೆ ಗೊಂದಲಗೊಂಡಾಗ ಅದರಾಚೆಗಿನ ಚಿತ್ರದ ಹೊಳವು ಪರಿಮಳವಾಗಿ ಹಬ್ಬಿದೆ.


ಬಿಳಿದಿಂಬಿನಂಚಿಗೆ ಗೆರೆ ಕೊರೆದ ಕಾಡಿಗೆಯ, ದೀಪದುರಿಯ ಕಣ್ಗಳ ಒಡತಿಯ ಕನ್ನಡಕ ಮಬ್ಬಾಗಿದೆ, ನಗಲಾಗದೆ ಮೆಲ್ನಗೆಯ ನಟನೆ, ಅವಳ ಹಸಿರ ಕನಸಿನಲ್ಲಿ ಮಲ್ಲಿಗೆಯದೆ ಪರಿಮಳ, ಇಹದ ನಿಜದಲ್ಲಿ ನೀವಿಲ್ಲದ ದಾರಿ ಸವೆಸಿ ಮನದೊಳೇನೋ ತಳಮಳ, ಕಾಲು ಜೊತೆಯಾಗುವುದಿಲ್ಲ ಬೇಕಾದ ನಡಿಗೆಗೆ, ನಿಲ್ಲಲು ಹಟ ಹೂಡುತ್ತದೆ ಸುಸ್ತಾಗಿದೆ ನಡುವಿಗೆ. ಹೊರಗಿನ ಜಂಜಾಟ ಹೊರಕ್ಕಿರಲಿ, ಮನದ ತುಂಬ ಮಲ್ಲಿಗೆ, ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು, ಒಣಗಬಾರದು ಒಲವ ಚಿಲುಮೆ, ಮನದ ಮಬ್ಬಿನಲಿ ನೀವೆ ಹಚ್ಚಿಟ್ಟ ದೀಪವಿದೆ, ಒಳಗಣ್ಣು ಎಲ್ಲ ಚಿತ್ರಗಳಾಚೆಗೆ ತೆರೆದಿದೆ.


ನೊಂದನೋವುಗಳೆಲ್ಲ ಹಾಡಾಗಲಿಲ್ಲ.. ಎಲ್ಲ ಗಾಯನದಲ್ಲು ಸಿರಿಮಲ್ಲಿಗೆ. ಗಂಭೀರ ಕವಿತೆಗಳಿಗೆ ಪಕ್ಕದ ಕುರ್ಚಿಯಲ್ಲಿ ಕುಳಿತ ಮಕ್ಕಳು ಆಚೀಚೆ ನೋಡುತಿಹವು, ಅವರಿಗೂ ಬೇಕು ನಿಮ್ಮ ನವಿಲೂರ ಕನಸೆ.. ಕವಿಗೋಷ್ಠಿಯಲಿ ವಿಮರ್ಶೆಗೆ ಸರಕಾಗಿ ಬಂದರೂ ಗೊತ್ತಿದೆ ನನಗೆ ಅವರು ಮೆಚ್ಚುವ ವಸ್ತು ಅಲ್ಲಿಲ್ಲ..


ಕಾಳಿಂಗರಾಯರ ಅಂತಿಂಥ ಹುಡುಗಿ, ಅನಂತಸ್ವಾಮಿಯವರ ಲಾಲಿ ಹಾಡು, ಅತ್ರಿಯ ಶಾನುಭೋಗರ ಮಗಳು - ಅಲ್ಲಿ ನಿಮ್ಮ ದಿನವ ತುಂಬಿರಬಹುದು.. ನನಗೆ ಗೊತ್ತಿದೆ, ಅಲ್ಲಿ ನಿಮ್ಮ ಕೆದರಿದ ಕೂದಲ ಸರಿಮಾಡಲು ಯಾರಿಗೂ ಆಗುವುದಿಲ್ಲ, ಅದು ವೆಂಕಮ್ಮನದೇ ಆಸ್ತಿ, ಇಲ್ಲಿ ಮನೆಯಲಿ, ಇಳಿಸಂಜೆಯ ನಳಿನಾಕ್ಷಿ ಕೊನೆಯ ಪಯಣಕ್ಕಾಗಿ ಮಂಚದ ಕೆಳಗೆ ಮುಚ್ಚಿಟ್ಟ ಪೆಟ್ಟಿಗೆಯಲಿಲ್ಲ ಬೇಸಿರಿ,ಬೆಂಡೋಲೆ, ಅಲ್ಲಿ ಮೊದಲ ಸೀರೆಯ ಸೆರಗಿನಲ್ಲಿ ಸುತ್ತಿ ಮಲಗಿದೆ ಪುಟ್ಟ ಬಾಚಣಿಗೆ.


ತುಂಬು ಗೌರವ ನಿಮಗೆ, ತುಂಬು ನಮನ, ನಿಮ್ಮ ನೋಡಿ ಬೆರಗುವಡೆದ ಕಣ್ಗಳಲಿ ತುಂಬು ಹನಿ,, ಇಲ್ಲ.. ನಿಮ್ಮೆಡೆಗಿನ ಒಲವ ಬಿಂದಿಗೆ ತುಂಬಿಲ್ಲ.. ತುಂಬಿದರೆ ಒಲವಲ್ಲ.. ಹನಿತುಂಬಿದ ಕಣ್ಣಲ್ಲಿ ಎಲ್ಲದರಾಚೆಗಿನ ಚಿತ್ರ, ಇಹದ ಪರಿಮಳದ ಹಾದಿ.

Thursday, April 12, 2007

ನೀರಿನಲ್ಲಿ ಅಲೆಯ ಉಂಗುರಾ..

ಭೂಮಿತಾಯಾಣೆಗೂ ನನ್ನ ಈ ಬರಹಕ್ಕೂ ಸೂಪರ್ ಡ್ಯೂಪರ್ ಹಿಟ್ "ಮುಂಗಾರು ಮಳೆ"ಗೂ ಯಾವ ಸಂಬಂಧವೂ ಇಲ್ಲ. ನಿನ್ನೆ ರಾತ್ರೆ ಬೆಂಗಳೂರಿನಲ್ಲಿ ಬಿದ್ದ ಈ ವರ್ಷದ ಮೊದಲ ಮಳೆಹನಿಗಳು ನನ್ನನ್ನು ಆರ್ದ್ರಗೊಳಿಸಿ ಹಳೆಯ ನೆನಪುಗಳೊಡನೆ ಹಳೆಯ ಬರಹಗಳನ್ನೂ ಟೇಬಲ್ ಮುಂದೆ ಹರಡಿದ್ದರಿಂದ ಸಿಕ್ಕ ಒಂದು ಬರಹ. ಹೌದು ಇದು ಅವನಿಗೆ ಬರೆದಿದ್ದು.. ಪತ್ರವಲ್ಲ.. ಹನಿದು ಹರಿದ ಭಾವನೆಗಳಷ್ಟೆ..

ನೀರಿನಲ್ಲಿ ಅಲೆಯ ಉಂಗುರಾ..ಮನದ ಕೊಳದಿ ನೆನಪಿನುಂಗುರ..


ಒಲವೇ, ನನ್ನ ಬದುಕಿನ ಚೈತನ್ಯವೇ,

ನೋಡಿಲ್ಲಿ ಮಳೆ ಹ್ಯಾಗೆ ಬರುತ್ತ ಇದೆ ಅಂತ..

"ನೀನು ಮುಗಿಲು ನಾನು ನೆಲ, ನಿನ್ನ ಒಲವೆ ನನ್ನ ಬಲ" ಅಂತ ಶಿವರುದ್ರಪ್ಪನವರು ಬರೆದ ಕವಿತೆಯನ್ನು, ರತ್ನಮಾಲ ಪ್ರಕಾಶ್ ಹಾಡಾಗಿ ಉಣಿಸಿದಂತಿದೆ.

ನೆಲ ಮುಗಿಲಿನ ಬಾಂಧವ್ಯವನ್ನು ಪ್ರೀತಿಗೆ ಹೋಲಿಸಿದ ಎಷ್ಟು ಸುಂದರ ಭಾಷೆ. ಮಳೆ ಬರುತ್ತಲೂ ನನಗೆ ಮೊದಲು ನೆನಪಾಗುವುದೇ ನೀನು. (ಇದು ಸುಳ್ಳೇನೋ - ಯಾಕಂದ್ರೆ ನೀನು ಮರೆತು ಹೋಗಿದ್ರೆ ತಾನೆ ನೆನಪಾಗಲಿಕ್ಕೆ..!) ನಿನ್ನ ನೆನಪುಗಳ ಮಾರುತ ಹೊತ್ತು ತರುವ ಎಲ್ಲ ವರ್ಷಧಾರೆಯೂ ನನಗೆ ಹಲವು ಧಾರೆಗಳನ್ನು ನೆನಪಿಸುತ್ತದೆ.

ಮಳೆಯ ಹನಿ ಬೀಳುವ ಕೆರೆಯಿಂದ ಹೇಗೆ ನೂರಾರು ಅಲೆಗಳ ತರಂಗ ಹೊಮ್ಮುತ್ತಲ್ಲಾ ಹಾಗೆ - ನಿನ್ನೊಡನೆ ಕಳೆದ ಕ್ಷಣಗಳ ನೆನಪಿನ ಅಲೆಗಳು ಮನದ ಕೊಳದಲ್ಲಿ, ಮಳೆಯ ದರ್ಶನ ಮಾತ್ರಕ್ಕೇ ಏಳುತ್ತವೆ.


ಒಂದು ನೆನಪಿನ ಅಲೆ ಕರಗುವಲ್ಲಿ ಇನ್ನೊಂದು ಅಲೆಯೆದ್ದು ಅದು ಕರಗೆ ಮತ್ತೊಂದು... ಯಾವ ನೆನಪಿನ ಅಲೆಯನ್ನ ಜಾಸ್ತಿ ದೂರ ಹರಡಲೋ ಗೊತ್ತಾಗುವುದಿಲ್ಲ. ತಂಪು ನೀಲಿಯ ಕೆಳಗೆ ಹಸಿರು ಹುಲ್ಲಿನ ನಡುವೆ ಮಾತಾಡುತ್ತ ಜೊತೆಜೊತೆಗೆ ನಡೆದು ಹೋಗಿದ್ದು, ಬೆಳಕು ಹರಿಯದ ಮುಂಜಾವದಲ್ಲಿ ಗುಡ್ ಬೈ ಹೇಳಿದ್ದು, ಹೂಕನಸಿನ ಕವಿಯ ನೆರಳಲ್ಲಿ ಹಾದು ಹೋಗಿದ್ದು, ಕೆಮೆರಾ ಕಣ್ಣು ಸೆರೆ ಹಿಡಿದ ಅಮ್ಮನ ವಿವಿಧ ಸೊಗಸುಗಳನ್ನು ಸವಿದಿದ್ದು, ಮತ್ತೆ ಅಮ್ಮನ ಮಡಿಲಿಗೆ-ಗುಡ್ಡದ ತಪ್ಪಲಿಗೆ ನಡೆದು ಹೋಗಿದ್ದು, ತುಂಬಿ ತುಳುಕಿದ ನೀಲಿ ಕೆರೆಯ ಕಟ್ಟೆಯಲ್ಲಿ ಜೊತೆಯಾಗಿ ನಿಂತಿದ್ದು, ಸುಸ್ತಾಗಿ ಕುಸಿದ ಕ್ಷಣಗಳಲ್ಲಿ ಮುಚ್ಚಿದ ಕಣ್ಣು ತೆರೆದಾಗ ನಿನ್ನ ಹೊಳಪು ಕಣ್ಗಳ ಕಂಡಿದ್ದು, ನಿದ್ದೆ ಹೋಗುವವರೆಗೂ ಮಾತಾಡಿದ್ದು, ತಂಪು ಬೆಟ್ಟದ ತುದಿಯಲ್ಲಿ ನನ್ನ ಚೈತನ್ಯವೇ, ನಿನ್ನ ಮಡಿಲಲ್ಲಿ ನಾನು ನಿದ್ದೆ ಹೋದದ್ದು, ಅಲ್ಲಲ್ಲ ಎಚ್ಚರಿದ್ದಿದ್ದು, ಬೆಳಗಿನ ಜಾವದ ಚಳಿಯಲ್ಲಿ ಮೋಡಗಳ ಸ್ವೆಟರ್ ಹೊದ್ದ ಸೂರ್ಯನ್ನ ನಿನ್ನ ಕಣ್ಣಲ್ಲೇ ನಾನು ನೋಡಿದ್ದು....


ಓಹ್, ಈ ನೆನಪುಗಳ ಅಲೆಯಿಂದ ಮುಂದರಿಯಲೇ ಮನಸಾಗುತ್ತಿಲ್ಲ. ಮತ್ತೆ ನಿಂಗೊತ್ತಾ ಈ ಅಲೆಯನ್ನ ದೊಡ್ಡ ಹನಿಯಿಟ್ಟು ಎಬ್ಬಿಸಿದ್ದೇನೆ - ನೀನು ನೀಲಿಕೆರೆಯಲ್ಲಿ ಕಪ್ಪೆಕಲ್ಲು ಹಾರಿಸಿ ಎಬ್ಬಿಸಿದೆಯಲ್ಲಾ ಹಾಗೆ-ತುಂಬ ದೂರದವರೆಗೆ ತುಂಬ ಹೊತ್ತಿನವರೆಗೆ ಇರುತ್ತೆ. ಹಲೋ ನಿಂಗೇ ಹೇಳಿದ್ದು, ಎಲ್ಲಿ ಕಳೆದು ಹೋಗಿದ್ದೀಯ? ಓ ನೀನು ಆ ಅಲೆಯಲ್ಲಿ ಮುಳುಗೇಳುತ್ತಿದ್ದೀಯಾ! ಸರಿ ಬಿಡು, ಡಿಸ್ಟರ್ಬ್ ಮಾಡುವುದಿಲ್ಲ.


ಮಳೆಯ ಹನಿ ಬಿದ್ದ ಕೂಡಲೇ ನಾನೇಕಿಷ್ಟು ಭಾವುಕಳಾಗಿ ಬಿಡುತ್ತೇನೋ. ಒಂದು ನಿಜ, ಮಳೆಯಿಂದ ಎಷ್ಟೇ ಕರಕರೆ ಆದ್ರೂ, ಮಳೆ ಅಂದ್ರೆ ನಂಗೆ ತುಂಬ ಇಷ್ಟ. ಇಷ್ಟು ಇಷ್ಟದ ಮಳೆ ಬರುತ್ತಿರುವಾಗ ಜೊತೆಗೆ ನೀನಿದ್ದರೆ ಮತ್ತೂ ಇಷ್ಟ. ನಾವಿಬ್ಬರೂ ಮಳೆಯಲ್ಲಿ ಕಾಡುಬಯಲಲ್ಲಿ ದೂರ ನಡೆದು ಹೋಗಿ, ಬೆಚ್ಚಗೆ ಬೆಂಕಿ ಕಾಯಿಸುತ್ತಾ, ಸೋನೆರಾಗಕ್ಕೆ ಕಿವಿಯೊಡ್ಡಿ ಕುಳಿತಿದ್ದರೆ ಎಷ್ಟು ಇಷ್ಟವಾಗುತ್ತೆ ಗೊತ್ತಾ? ಎಷ್ಟೂಂದರೆ ಆ ಮಳೆ ಮುಗಿದು ಬೆಳಗಾಗಿ ಸೂರ್ಯ ಕೆಂಪಾಗುವಾಗ, ಹೆಸರಿಲ್ಲದ ಕಾಡುಹಕ್ಕಿ ಮರದ ಎಲೆಯ ಶವರಲ್ಲಿ ಮಿಂದು ಉದಯರಾಗ ಹಾಡುವಾಗ ಉಸಿರು ಅಲ್ಲೇ ನಿಂತು ಬಿಡಲಿ ಅನ್ನುವಷ್ಟು.


ಬರೀ ಕಣ್ಣೀರಿನ ಮಳೆ ಹೊಯ್ದು, ಕೆಟ್ಟ ಕ್ಷಣಗಳ ಕೊಚ್ಚೆಯಲ್ಲೇ ಹೆಜ್ಜೆ ಇಡಲಾರದೆ ಇಟ್ಟು ಬಂದ ದಿನಗಳು ಕಳೆದು ಹೋಗಿದೆ ಅಲ್ಲವೇನೋ? ಒಲವೇ, ನಿಜವಾಗ್ಲೂ ಆ ಮಳೆಯ ಚಳಿಗೆ ಬೆಚ್ಚನೆ ಸ್ವೆಟರಾಗಿದ್ದು ನಿನ್ನ ಕಣ್ಣ ದೀಪದ ಹೊಳಪು. ಜಾರಿ ಬೀಳುವ ಹೆಜ್ಜೆಗಳಿಗೆ ಆಸರೆಯಾಗಿದ್ದು ನಿನ್ನ ಭರವಸೆಯ ಕಿರಿಬೆರಳು. ನಿನ್ನೆಲ್ಲ ಕಸಿವಿಸಿಯನ್ನ, ಸಂಕಟವನ್ನ ನನಗೊಂಚೂರೂ ಕಾಣಿಸದ ಹಾಗೆ ನನ್ನನ್ನ ಸಂತೈಸಿದೆಯಲ್ಲ ಆ ನಿನ್ನ ನಿಲುವು ನನ್ನ ಬದುಕಿನ ಚೈತನ್ಯವಾಗಿ ತುಂಬಿಕೊಂಡಿದೆ. ನಿನ್ನ ತೊಡಕುಗಳನ್ನ ನಾನು ಬಗೆಹರಿಸಲಾಗುವುದಿಲ್ಲ ಬಿಡು ಆದರೆ ನಿನ್ನ ನೋವಿನ ಕ್ಷಣಗಳಿಗೆ ನಾನು ಕಿವಿಯಾಗಬಾರದಾ? ನಿನ್ನ ಕಣ್ಣೀರನ್ನ ನಾನು ಒರೆಸಬಾರದಾ? ನಿನ್ನ ನೋಯುವ ತಲೆಯನ್ನ ನಾನೊಂದಿಷ್ಟು ಹೊತ್ತು ಲಾಲಿಸಬಾರದಾ? ಕನಿಷ್ಠ ಜೊತೆಗಿರಬಾರದೇನೋ?


ನನ್ನ ರೇಶಿಮೆಯಲ್ಲಿ ಸುತ್ತಿಟ್ಟು ನೀನಲ್ಲಿ ಮುಳ್ಳು ಹಾಸಿಗೆಯಲ್ಲಿ ಮಲಗಿದರೆ ನಂಗೆ ನಿದ್ದೆ ಬಂದೀತೇನೋ? ನನ್ನ ಹೊಟ್ಟೆ ತುಂಬ ಊಟವಿಟ್ಟು ನೀನಲ್ಲಿ ಅರೆ ಹೊಟ್ಟೆ ಉಂಡರೆ, ಉಂಡಿದ್ದು ನನ್ನ ಮೈಗೆ ಹಿಡಿಯುತ್ತೇನೋ? ನನ್ನ ಕ್ಷಣಗಳ ತುಂಬ ಸಂತಸದ ಪ್ಯಾಕೇಜುಗಳನ್ನೇ ತುಂಬಿ, ನೀನಲ್ಲಿ ಕಣ್ಣ ನೀರು ತುಳುಕಿಸಲಾರದೆ, ಹಿಡಿದಿಡಲಾರದೆ ನರಳುತ್ತಿದ್ದರೆ ನನ್ನ ನಗುವಲ್ಲಿ ಜೀವವಿರುತ್ತೇನೋ?


ನೀನು ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಬೇಡ. ನಂಗೇನು ಅನ್ಸಿದೆ ಅಂತ ನಿಂಗೊತ್ತಾಯ್ತಲ್ಲಾ ಅಷ್ಟೆ ಸಾಕು ನಂಗೆ.


ನೋಡು ಇಬ್ಬರೂ ಮುಳ್ಳುದಾರಿಯಲ್ಲೇ ನಡೆಯೋಣ. ಚುಚ್ಚಿಕೊಳ್ಳುವ ಮುಳ್ಳುಗಳನ್ನು ಒಬ್ಬರಿಗೊಬ್ಬರು ತೆಗೆದು ಹಾಕಬಹುದು. ಈ ಸಾಂತ್ವನದ ಮುಂದೆ ರೇಷಿಮೆಯ ಸಿರಿ ಯಾಕೆ. ಉಣಲಿಕ್ಕೆ ಅರೆಹೊಟ್ಟೆಯಾದರೂ ಸರಿ ಜೊತೆಗೇ ತಿನ್ನೋಣ; ನೆಂಚಿಕೊಳ್ಳಲಿಕ್ಕೆ ಸವಿಮಾತಿರುತ್ತಲ್ಲಾ. ಹೊಟ್ಟೆ ತುಂಬದೆ ಸಂಕಟವಾಗಿದ್ದಾಗ ಮಾತಾಡಿಕೊಳ್ಳಲು, ಕನಸು ಕಾಣಲು, ಹಾಗೇ ಹಸಿವು ಮರೆತುಹೋಗಲು ಒಬ್ಬರಿಗಿನ್ನೊಬ್ಬರ ಜೊತೆಯಿರುತ್ತಲ್ಲಾ ಇನ್ಯಾವ ಭಕ್ಷ್ಯ ಭೋಜ್ಯಗಳು ಬೇಕು?


ಬದುಕಿನ ಕ್ಷಣಗಳ ತುಂಬೆಲ್ಲಾ ಸಂತಸದ ಪ್ಯಾಕೇಜುಗಳನ್ನೇ ತುಂಬಿಡಲಾಗುವುದಿಲ್ಲ. ಅಳುವ ಘಳಿಗೆಗಳಲ್ಲಿ ಜೊತೆಗಿರೋಣ ಒಬ್ಬರಿನ್ನೊಬ್ಬರ ಕಣ್ಣೀರೊರೆಸಲಿಕ್ಕೆ. ನಗುವಿನ ಹೂವರಳದಿರಲಿ ಚಿಂತಿಲ್ಲ, ನಗೆ ಹೂವಿನ ಬಳ್ಳಿಯ ಬೀಜ ನೆಟ್ಟು, ಕಣ್ಣೀರನ್ನೆ ಎರೆದು ಕಾಯೋಣ ಕಣೋ. ಕಣ್ಣು ಕಂಬನಿಗಳಿಂದ ಮಂಜಾಗಿದ್ದರೂ ಎಂದೋ ಒಂದು ದಿನ ನಗೆ ಮೊಗ್ಗು ಬಿಟ್ಟಿದ್ದು ಕಂಡೀತು, ಕಣ್ಣೊರಸಿ ನೋಡುವಾಗ ಮೊಗ್ಗು ಅರಳಿ ನಿಂತು ನಕ್ಕೀತು, ಏನಂತೀಯಾ?


ಅನ್ನೋದೇನೇ, ಬಾ ಬೇಗ, ಜೊತೆಯಾಗಿ ಹೋಗೋಣ ಅಂತ ಕರೆದೆಯಲ್ಲಾ, ಇರು ಬಂದೆ. ಅಮ್ಮನ ಕಪಾಟಲ್ಲಿ, ಅವಳಮ್ಮನಿಂದ ಬಳುವಳಿಯಾಗಿ ಬಂದು, ನಂಗಾಗೇ ಉಳಿಸಿಟ್ಟಿರುವ ಒಂದಷ್ಟು ನಗೆ ಹೂವಿನ ಬೀಜ ಇದೆ ತೆಗೆದುಕೊಂಡು ಬರುತ್ತೀನಿ. ಕೂಡಲೆ ಹೊರಡೋಣ. ನಮ್ಮ ಮಗಳಿಗೂ ಒಂದಷ್ಟು ಉಳಿಸಿಡಬೇಕು, ಅಷ್ಟನ್ನೂ ನಾವೇ ಬಿತ್ತುವ ಹಾಗಿಲ್ಲ ನೋಡು ಮತ್ತೆ. ಬಾ ಹೋಗೋಣ...