Monday, September 16, 2013

ಹೂವ ತರುವರ ಮನೆಗೆ ಹುಲ್ಲ ತರುವ...

ಹೀಗೊಂದು ಮಳೆ ಸುರಿವಾಗ ನನಗೆ ಹನಿಯಾಗಿ ದೊರಕಿದ್ದು...

ಏನು ಮಾತಾಯಿತು ಏನು ಸಿಕ್ಕಿತು ಏನನ್ನಿಸಿತು ಎಂಬ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ.

ಮಳೆ ಬಂತು. ನಾನೆಷ್ಟು ಒಡ್ಡಿದೆನೋ ಅಷ್ಟು ನೆಂದೆ. ನೆರೆ ಇನ್ನೂ ಬರಬೇಕಿದೆ. ಈಗಿನ್ನೂ ಭಾದ್ರಪದ ಮುಗಿಯುತ್ತಿದೆ. ಆಷಾಢ  ಬರುವ ಮೊದಲು ಹೇಮಂತ ಶಿಶಿರಗಳಿವೆ.

ಮಳೆ ಬರಬೇಕು
ಈವರೆಗೆ ಕಟ್ಟಿದ್ದು,
ಗೋಡೆಗೆ  ಕೊಟ್ಟ ತಳಪಾಯ
ಮೇಲಿಟ್ಟ ಹೊದಿಕೆ
ಬಣ್ಣ ಬಣ್ಣದ ಸುಣ್ಣ
ಗಟ್ಟಿಸಿ ಹಾಕಿದ ಚಿಲಕ
ತೆಗೆಯದೆ ಬಿಟ್ಟ ಕಿಟಕಿ
ಎಲ್ಲ ಮುಳುಗಿಸುವ
ಕರಗಿಸುವ
ಮಳೆ ಬೇಕು
ಕೊಚ್ಚಿಕೊಂಡೋಗುವ
ನೆರೆಯಲ್ಲಿ
ಮುಳುಗದೆ
ತೋರಬೆರಳಿನ
ಆಸರೆಯಲ್ಲಿ
ಸಾಗಬೇಕು,
ಬಯಲಿಗೆ
ಎತ್ತಲಿಂದಲೂ ಹಾದಿಯಿದೆ
ನಾವು ಹೊರಡಬೇಕು.
**************************************************************

ಬೇಕು ಎನ್ನುವುದು ಬೇಕು.
ಸಿಗಬೇಕಿದ್ದರೆ
ಮೊದಲು ಕರೆಯಬೇಕು.
ಮರುದನಿ
ಹುಟ್ಟಿಸಲು
ಕರೆದನಿಯೇ ಬೇಕು.
ಇದೆಲ್ಲ ಕೇಳಲು
ಶಬುದ ನಿಲ್ಲಿಸಬೇಕು.
ಎದೆಕಲಕಿ ಪ್ರಾರ್ಥಿಸಬೇಕು
ಒಳಗಿರುವ ಗುಟ್ಟು
ಹೊರಬರಲೆಂದು.

**********************************************

ಗುರಿ ಇರುವುದು ಬಾಣದ ಮೊನೆಯಲ್ಲಿ
***************************************************

ಕಾಯುವಿಕೆ ಎಂದೂ ಒಬ್ಬರದಲ್ಲ..
*************************************

ಗಟ್ಟಿ ಮನೆಗಳ ಅಂಗಳದಲ್ಲಿ ಕಟ್ಟೆಯಲ್ಲಿ ಕೂತು ಪ್ರವಾಹಕ್ಕೆ ಕಾಯುವವರು ಹುಚ್ಚರೇ ಇರಬಹುದು. ಹುಚ್ಚು ಹಿಡಿಯದೆ ಇದ್ದರೆ ನೆರೆಗೆ ಸಿಕ್ಕುವುದು ಹ್ಯಾಗೆ. ನೆರೆ ಬರದೆ ಹೊಸತು ಹುಟ್ಟುವುದು ಹ್ಯಾಗೆ. ಇದ್ದ ಬೆಳಕು ಹೊಸದಾಗಿ ಮೂಡುವುದು ಹ್ಯಾಗೆ...
******************************************************************************
ಹೂವ ತರುವರ ಮನೆಗೆ ಹುಲ್ಲು ತಂದವರ ಮಾತುಗಳಲ್ಲಿ ತೊಯ್ದೆ ನಾನು. -ಸಿಂಧು