Wednesday, October 3, 2018

"ಗಾಂಧಿ"

(ಗಾಂಧಿಯವರು ಹುಟ್ಟಿ 150 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ವಿಜಯಕರ್ನಾಟಕದ ಭಾನುವಾರದ ಪುರವಣಿಯಲ್ಲಿ ನನ್ನ ಲೇಖನ (30.09.2018))

There is no such thing as ‘Gandhism,’ and I do not want to leave any sect after me. I do not claim to have originated any new principle or doctrine. I have simply tried in my own way to apply the eternal truths to our daily life and problems…The opinions I have formed and the conclusions I have arrived at are not final. I may change them tomorrow. I have nothing new to teach the world. Truth and nonviolence are as old as the hills. • Gandhi
ಇವತ್ತು, ಗಾಂಧಿ ಜಯಂತಿ ಎನ್ನುವುದು ಬೇಕೋ ಬೇಡವೋ ಎಂಬಂತಹ ಚರ್ಚೆಗಳನ್ನ ಹುಟ್ಟುಹಾಕುತ್ತಿರುವ ನಮ್ಮ ರಾಜಕೀಯಕೃಪಾಪೋಷಿತ ಯುವಸಮುದಾಯಗಳು ಹುಟ್ಟುಹಾಕುತ್ತಿರುವ ಹೊತ್ತಿನಲ್ಲಿ ಈ ಮಾತು ಎಂದಿಗಿಂತ ಉಜ್ವಲವಾಗಿ ಹೊಳೆಯುತ್ತಿದೆ.
ಮಹಾತ್ಮಾ ಎಂಬ ಹೆಸರನ್ನು ಕೊಟ್ಟ ಸಂದರ್ಭದಲ್ಲಿ ಅದನ್ನು ನಿರಾಕರಿಸುವ ಗಾಂಧೀಜಿ ಹೇಳುತ್ತಾರೆ. ಲಂಪಟ ಎನ್ನುವ ಹೆಸರು ನನಗೆ ಮಹಾತ್ಮಾ ಎಂಬ ಹೆಸರಿಗಿಂತ ಹೆಚ್ಚು ಸೂಕ್ತ. ದಯವಿಟ್ಟು ನನ್ನನ್ನು ಮಹಾತ್ಮಾ ಎನ್ನಬೇಡಿ, ನಾನು ಸಾಮಾನ್ಯ ರಾಗದ್ವೇಷಗಳ ಮನುಷ್ಯ. ಅಹಿಂಸೆ ಮತ್ತು ಸತ್ಯವನ್ನು ಪಾಲಿಸುವ ವ್ರತದ ದಾರಿಯಲ್ಲಿ ನಡೆಯುತ್ತಿರುವುದಷ್ಟೇ ನನ್ನ ಹಾಗಿನ ಎಲ್ಲರಿಗಿಂತ ನಾನು ಮಾಡುತ್ತಿರುವ ಭಿನ್ನ ಕೆಲಸ. ಎಂದರು. ಗಾಂಧೀಜಿಯನ್ನು ಎಲ್ಲ ಆಯಾಮಗಳಲ್ಲಿ ವೈಭವೀಕರಿಸುವ ಅಥವಾ ಧಿಕ್ಕರಿಸುವ ಮುನ್ನ ಅವರ ಕೆಲವು ಕೆಲವೇ ಕೆಲವು ನೇರ ಮತ್ತು ಸರಳ ಪತ್ರಗಳನ್ನ ಓದಿದರೆ ಸಾಕು ನಮ್ಮ ಆರಾಧನೆ ಅಥವಾ ಅಸಹ್ಯದ ವ್ಯರ್ಥತೆ ಅರ್ಥವಾಗುತ್ತದೆ.
 
ನಾವು ಸ್ವತಂತ್ರ ಭಾರತದ ಮಕ್ಕಳು, ಮೊಮ್ಮಕ್ಕಳು, ಮತ್ತು ಮರಿಮಕ್ಕಳು. ಹೆಚ್ಚಿನ ಮಕ್ಕಳು ಈಗ ರಂಗದ ಮೇಲಿರುವವರ ಆಟಾಟೋಪಗಳನ್ನು ನೋಡುತ್ತ ಹಿಂದಿನದನ್ನು ಮೆಲುಕು ಹಾಕುತ್ತ ತೆರೆಮರೆಯಲ್ಲಿ ಉಳಿದಿದ್ದಾರೆ. ಕೆಲವೇ ಕೆಲವು ಪ್ರಿವಿಲೇಜ್ಡ್ ಮೊಮ್ಮಕ್ಕಳು ಸ್ವತಂತ್ರ ಭಾರತವೆಂಬ ಸ್ವರ್ಗವನ್ನ ಒಂದೊಂದೇ ಹೆಜ್ಜೆ ನರಕವನ್ನಾಗಿಸುತ್ತ ತಮ್ಮ ಮಕ್ಕಳಿಗೆ ಅಥವಾ ಸ್ವತಂತ್ರ ಭಾರತದ ಮರಿಮಕ್ಕಳ ಹೆಸರಲ್ಲಿ ದಾಖಲು ಮಾಡುತ್ತಿದ್ದಾರೆ. ಜಾಗದಲ್ಲಿ ದಾಖಲಾಗದಿರುವುದನ್ನ ಹೊರದೇಶದ ಬ್ಯಾಂಕುಗಳಲ್ಲಿ ಕೇಜಿಗಟ್ಟಲೆ ಬಂಗಾರದಲ್ಲಿ ಕಣ್ಣುಕುಕ್ಕುವ ವೈಭವೋಪೇತ ಜೀವನಶೈಲಿಯಲ್ಲಿ ಸಿಕ್ಸ್ ಲೇನ್ ಹೆದ್ದಾರಿಗಳಲ್ಲಿ ಯಾರ ಜೀವದ ಹಂಗೂ ಇಲ್ಲದೆ ಯಮವೇಗದಲ್ಲಿ ಓಡುವ ಐಷಾರಾಮಿ ಕಾರುಗಳಲ್ಲಿ ಕಟ್ಟಿಡುತ್ತಿದ್ದಾರೆ. ಒಂದಷ್ಟು ಜನ ಮೊಮ್ಮಕ್ಕಳು ಈ ಸ್ವತಂತ್ರದ ಹಂಗೇ ಬೇಡವೆಂದು ಚೆನ್ನಾಗಿ ಓದಿ ಈ ಕಕ್ಷೆಯಿಂದಾಚೆಗೆ ಜಿಗಿದಿದ್ದಾರೆ. ಅವರ ಮಕ್ಕಳು ಈಗ ಇನ್ನಾವುದೋ ಸ್ವತಂತ್ರ ದೇಶಗಳ ಮೀಸಲು ನೌಕರರು. ಇಲ್ಲೆ ಇರುವ ಎಲ್ಲಿಗೂ ಹೋಗಲರದ ಕೆಲವು ಮೊಮ್ಮಕ್ಕಳು ಹಳೆಯ ಮತ್ತು ಹೊಸತರ ಕೊಂಡಿಯಾಗಿರುವುವವರು ಐಷಾರಾಮವನ್ನು ಬಯಸದೆ ಅದನ್ನು ಬಿಡಲೂ ಆಗದೆ ಹಳಹಳಿಕೆಯಿಂದ ತಮ್ಮ ಮಕ್ಕಳನ್ನು ತಮ್ಮ ಪರವಾಗಿ ಹೆದೆಯೇರಿಸಿ ಬಾಣ ಬಿಡುತ್ತಿದ್ದಾರೆ. ಈ ಎಲ್ಲದರ ನಡುವೆ ದೇಶದ ಬಹುಪಾಲು ಜನ ಸ್ವತಂತ್ರ ಭಾರತದ ಭವ್ಯ ಬದುಕು ಆಕಾಶಕ್ಕೆ ನೇತುಬಿಟ್ಟ ಅತ್ತಿಂದಿತ್ತ ತೂಗುವ ವಿಶಾಲ ಉಯ್ಯಾಲೆಯಂತೆ ಜೀಕುತ್ತಿರುವುದನ್ನ ನೋಡುತ್ತಾ, ಒಂದು ಕಾಲು ನೋಯ್ದಾಗ ಅದನ್ನ ತುಸ ಮೇಲೆತ್ತಿ ಇನ್ನೊಂದು ಕಾಲಿನ ಮೇಲೆ ಹೆಚ್ಚಿನ ಭಾರ ಬಿಡುತ್ತಾ ಅದು ನೋಯ್ದಾಗ ಮತ್ತೆ ಕಾಲು ಬದಲಾಯಿಸುತ್ತಾ ನಿಂತಿದ್ದಾರೆ. ಆಗಾಗ ಇವರಿಗೆ ಸ್ವಾತಂತ್ರ್ಯದ ಎಷ್ಟನೆಯದೋ ಆಚರಣೆ, ಮಹಾತ್ಮನ ದಿನ, ಇನ್ಯಾವುದೋ ಹೋರಾಟದ ನೆನಪಿನ ಸುವರ್ಣ ಸಂಭ್ರಮಗಳ ಅಕ್ಷತೆಕಾಳು ತಲೆ ಮೇಲೆ ಬೀಳುತ್ತದೆ. ಒಲೆಯ ಮೇಲಿನ ಪಾತ್ರೆಯಲ್ಲಿ ಬರಿದೆ ನೀರು ಮರಳುತ್ತಿದೆ ಅಕ್ಕಿಯಿಲ್ಲ.
ಬಾಚಿಕೊಳ್ಳುವವರ, ತಲೆತಲಾಂತರಗಳಿಗೆ ಮೆತ್ತನೆಯ ಕುರ್ಚಿಯ ಮೇಲಿನ ಝರಿ ಶಾಲು ಮಾಸದ ಹಾಗೆ ಬುಕ್ ಮಾಡಿ ಇಡುವ ನಾಯಕರ, ಪಕ್ಷಪಾತಿಗಳ ನಡುವೆ, ಒಂದೇ ಒಂದು ಗಾಂಧಿಯ ನೆರಳೂ ಇಲ್ಲದೆ ಇರುವ ಈ ಹೊತ್ತಿನಲ್ಲಿ ಗಾಂಧಿಜಯಂತಿ ಮತ್ತು ಅವರ ನೆನಪು ಹೆಚ್ಚು ಪ್ರಸ್ತುತ.
ನನ್ನ ದೇಶದ ಬಹುಪಾಲು ಜನರ ಮೈಗೆ ಅವರ ನಗ್ನತೆಯನ್ನು ಮುಚ್ಚುವಷ್ಟೂ ಬಟ್ಟೆಯಿಲ್ಲ. ಹಾಗಾಗಿ ನಾನು ಅರ್ಧ ಮೈ ಬಟ್ಟೆ ತೊಡುತ್ತೇನೆ ಎಂದು ಘೋಷಿಸಿ, ಕಡೆಯವರೆಗೆ ಅದಕ್ಕೆ ಬದ್ಧನಾಗಿ ಬದುಕಿದ ಗಾಂಧಿಯೆಲ್ಲಿ? ಸರಳ ಎಂಬುದು ಬ್ರಾಂಡುಗಳ ಹೆಸರಾಗಿ, ವಿಶ್ವಮಾನ್ಯತೆಯ ಮಾರಾಟದ ಸರಕಾಗಿ ಸಾವಿರ ಲಕ್ಷಗಳಲ್ಲಿ ಬಿಕರಿಯಾಗುತ್ತಿರುವ
ಈ ಹೊತ್ತು ವಾಲಂಟರಿ ಸಿಂಪ್ಲಿಸಿಟಿ ಅಥವಾ ಐಚ್ಚಿಕ ಸರಳತೆ ಎಂಬ ಮೌಲ್ಯವನ್ನು ನಂಬಿ ಬದುಕಿದ ಗಾಂಧಿಯ ಬದುಕಿನ ಕುರಿತ ಬರಹಗಳ, ವಿವರಗಳ ಒಂದು ಕಿರುನೋಟಕ್ಕೆ ಕೆಲಸಮಯ ಮೀಸಲಿಡಲು ಈ ದಿನವನ್ನು ಗಾಂಧಿಜಯಂತಿಯನ್ನು ಆಚರಿಸಬೇಕು. ಗಾಂಧಿ ಬದುಕಿದ (ಬರಿಯ ಬೋಧನೆಗೆ ಸೀಮಿತವಲ್ಲದ) ಮೌಲ್ಯಗಳನ್ನು ಕಡೆಯ ಪಕ್ಷ ಓದಬೇಕು ಮತ್ತು ನಮ್ಮ ಮಕ್ಕಳು ಓದುವಂತೆ ಮಾಡಬೇಕು. ಓದಿದ್ದೆಲ್ಲ ಗ್ರಹಿಕೆಗೆ ದಕ್ಕುವುದಿಲ್ಲ. ಗ್ರಹಿಕೆಗೆ ದಕ್ಕಿದ್ದರಲ್ಲಿ ಎಲ್ಲವೂ ಆಚರಣೆಗೆ ಬರುವುದೂ ಇಲ್ಲ.
ಆದರೆ ನಾನು ಅನುಕೂಲದ ತುತ್ತ ತುದಿಯಲ್ಲಿ ಆನಂದತುಂದಿಲಳಾದ ಕ್ಷಣದಲ್ಲಿ ಆ ತುದಿಯ ಇನ್ನೊಂದು ಕೊನೆಯಲ್ಲಿ ದಿನನಿತ್ಯದ ಅವಶ್ಯಕತೆಗಾಗಿ ದಿನಗಟ್ಟಲೆ ಕಾದುಕೂರುವ ಜನ ಇದ್ದಾರೆ ಎಂಬ ಅರಿವು ನನಗೆ ಆದರೆ ಸಾಕು. ಆ ಅರಿವು ನನ್ನನ್ನು ಮುನ್ನಡೆಸುವ ಬೆಳಕಾಗುತ್ತದೆ. ಆದರೆ ಇಷ್ಟು ಮಟ್ಟಿನ ಓದನ್ನೂ, ಹೀಗೆಲ್ಲ ಇದೆ, ಇತ್ತು ಎಂಬುದನ್ನೂ ನಾವು ಗಮನಿಸದೆ ಹೋದರೆ, ನಮ್ಮ ಮಕ್ಕಳಿಗೆ ಹೇಳದೆ ಹೋದರೆ ಲಕ್ಷಾಂತರ ಜನ ಜೀವ ಕೊಟ್ಟು, ಮನೆಮಾರು ಬಿಟ್ಟು, ಓದು ಕೆಲಸ ಬಿಟ್ಟು...ಹೋರಾಡಿ ನಮ್ಮದಾಗಿಸಿದ ಸ್ವಾತಂತ್ರ್ಯವನ್ನು ನಾವೇ ತಟ್ಟೆಯಲ್ಲಿ ಇಟ್ಟು ಲಾಲಸೆಗಳಿಗೆ, ಮಾರಾಟಕೋರರಿಗೆ ಕೊಡುವ ದಿನ ದೂರವಿಲ್ಲ.
1869 ಅಕ್ಟೋಬರ್ 2ರಂದು ಹುಟ್ಟಿದ ಮೋಹನದಾಸ ಕರಮಚಂದ ಗಾಂಧಿ ಎಂಬ ಹುಡುಗ, ಮುಂದೊಂದು ದಿನ ಮನುಕುಲದ ಹೋರಾಟಗಳಲ್ಲಿ ತನ್ನ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡು, ಅದರಿಂದ ತನ್ನ ಜನ್ಮಭೂಮಿಯ ಬಾಂಧವರ ಬದುಕನ್ನು ಉತ್ತಮಗೊಳಿಸುತ್ತ ಹೋದ ಕಥೆ, ತನ್ನ ಶೋಧನೆಯಲ್ಲೇ ತಾನು ತಳಮಳಿಸುತ್ತ ದಾರಿ ಸಾಗಿದ ಕಥೆಯನ್ನು ಓದಲು ಈ ದಿನ ಬೇಕಲ್ಲವೆ. ಅಥವಾ ಕನಿಷ್ಟ ಪಕ್ಷ ಅವರ ಬದುಕಿನ ಕೆಲವು ಅತ್ಯುನ್ನತ ಮೌಲ್ಯಗಳ ಇಣುಕುನೋಟ ನಾವು ನಿಂತ ನೆಲವನ್ನೂ ಮುಟ್ಟಬಹುದಾದ ಎತ್ತರವನ್ನೂ ದೊರಕಬಹುದಾದ ವೈಶಾಲ್ಯವನ್ನೂ ತೋರಿಸುತ್ತದೆ ಎಂಬ ನಂಬಿಕೆ ನನ್ನದು.
ಇಂತಹ ಒಬ್ಬ ಮನುಷ್ಯ ಈ ಭೂಮಿಯ ಮೇಲೆ ನಡೆದಿದ್ದ ಎಂಬುದನ್ನೂ ನಂಬದ ಕಾಲವೊಂದು ಮುಂದೆ ಬರುತ್ತದೆ ಎಂದು ಅಲ್ಬರ್ಟ್ ಐನ್ ಸ್ಟೀನ್ ಗಾಂಧೀಜಿಯ ಕುರಿತು ಉದ್ಘರಿಸಿದ್ದು ನಿಜವಾಗುವ ಕಾಲವಿದು. ಒಂದು ಗುಂಪು ಅವನು ಮನುಷ್ಯನಲ್ಲ ದೇವರು ಎಂದು ವಿಜೃಂಭಿಸುತ್ತಿದೆ. ಇನ್ನೊಂದು ಅವನೊಬ್ಬ ಮನುಷ್ಯನೇ ಎಂದು ಕೀಳುಗರೆಯುತ್ತಿದೆ. ಸತ್ಯ ಇವೆರಡರ ಮಧ್ಯದಲ್ಲಿ ಹಿಂಸೆ ಅನುಭವಿಸುತ್ತಿದೆ. ಅಹಿಂಸೆಯನ್ನು ಅದರ ತಾತ್ವಿಕ ರೂಪದಿಂದ ಅದರ ಪರಿಣಾಮಕಾರೀ ಕಾರ್ಯರೂಪಕ್ಕೆ ಎತ್ತರಿಸಿದ ಗಾಂಧೀಜಿಗೆ ಇದು ನಾವು ಮಾಡುವ ದೊಡ್ಡ ಅವಮಾನ.
 
ಒಬ್ಬ ರಾಜಕೀಯ ನಾಯಕನಾಗಿ ನಾನು ನನ್ನ ಮನೆಯವರಿಗೆ, ಮಕ್ಕಳಿಗೆ ಪರವಾಗಿ ನಿಲ್ಲುವುದಿಲ್ಲ, ಅವರ ಬೆನ್ನು ಕಟ್ಟುವುದಿಲ್ಲ ಎಂದು ನಿಂತ ಈ ನಾಯಕನ ಚೂರುಪಾರು ನೆರಳಾದರೂ ನಮ್ಮ ರಾಜಕೀಯದ ನಾಯಕರ ಮೇಲೆ ಬೀಳಲಿ.
ಇಂದಿಗೂ ಗಾಂಧೀಜಿ ಬದುಕಿದ ಸರಳ ಜೀವನದ ಪಳೆಯುಳಿಕೆಗಳಾಗಿ ಹಲವು ಸೇವಾಗ್ರಾಮಗಳಿವೆ. ಅಲ್ಲಿ ಹಳೆಯ ತಲೆಮಾರೊಂದು ಈ ನಾಯಕನ ಹಿಂದೆ ತಲೆತಗ್ಗಿಸಿ ನಡೆದುಹೋಗಿ ನಿಂತುಬಿಟ್ಟಿರುವುದು ಕಾಣುತ್ತದೆ. ಆದರೆ ಪ್ರಾಮಾಣಿಕತೆ ಎಂಬುದು ಹೊರಗಿನ ಆಚರಣೆಯಾಗದೆ ಜೀವನದ್ರವ್ಯವನ್ನೇ ಆಗಿಸಿಕೊಂಡ ಗಾಂಧಿಯ ಬದುಕು ಮತ್ತು ದಾರಿ ನಡೆಯಲು ಹೋದ ಇವರೆಲ್ಲರೂ ತಮ್ಮ ದಾರಿಯನ್ನು ತಾವು ಶೋಧಿಸುವುದರಲ್ಲಿ ಸ್ವಲ್ಪ ಕಂಗೆಟ್ಟರೇನೋ ಎಂಬಂತೆ ಕಾಣಿಸುತ್ತಾರೆ. ಆದರೂ ಆ ಸರಳಚೇತನದ ಸವಿಯುಂಡ ಈ ಗುಂಪು ಈಗ ತನ್ನ ಪಾಡಿಗೆ ತಾನು ತಲೆತಗ್ಗಿಸಿ ನೇಯುತ್ತ ಕೂತಿದೆ. ದಣಿದ ಕೈಗಳನ್ನ ನೇವರಿಸಿ ಬಲುಹಿನ ಕೈಗಳನ್ನ ಸೇರಿಸುವ ಯುವ ಸಮುದಾಯದ ಪ್ರಾಮುಖ್ಯತೆ ಬೇರೆಯದೇ ಇದೆ. ಆ ಪ್ರಾಮುಖ್ಯತೆಯನ್ನು ರೂಪಿಸಿದ ಜವಾಬ್ದಾರಿ ಅವರ ಅಪ್ಪ ಅಮ್ಮಂದಿರದು. ಮುಂದೆ ನಮ್ಮ ಮಕ್ಕಳು ನೀನೇಕೆ ಇವುಗಳನ್ನು ನನ್ನ ಮುಂದಿಟ್ಟೆ ಎಂದು ನಮ್ಮನ್ನು ಬಯ್ಯದೆ ಇರಲು ನಾವು ಗಾಂಧಿಯ ಬದುಕಿನ ಬರಹಗಳನ್ನು ಆಶ್ರಯಿಸಬೇಕಿದೆ. ಅವರ ಆರಾಧಕರನ್ನಲ್ಲ. ಅವರ ಟೋಪಿ ಮತ್ತು ಚರಕಾದ ಜಾಹೀರಾತನ್ನಂತೂ ಖಂಡಿತ ಅಲ್ಲ.
ಈ ಮನುಷ್ಯನ ತೀವ್ರ ಪ್ರಾಮಾಣಿಕ ಪ್ರಯತ್ನಕ್ಕೆ ದಾಸ್ಯದಲ್ಲಿದ್ದ ಭಾರತದ ಲಕ್ಷಾಂತರ ಜನ ಅದೇ ತೀವ್ರತೆಯಲ್ಲಿ ಪ್ರತಿಸ್ಪಂದಿಸಿದರು. ಆ ತೀವ್ರತೆ ಮತ್ತು ಪ್ರಾಮಾಣಿಕತೆ ಒಂದು ಕ್ಷಣದ್ದಲ್ಲ. ಕ್ಷಣದಲ್ಲಿ ಗಳಿಸಿದ್ದೂ ಅಲ್ಲ. ಹೊರಗಿನ ವೇಷ,ಪೋಷಾಕು,ನಡವಳಿಕೆಗೆ ಅತ್ಯಂತ ಬೆಲೆಕೊಡುವ ಹೈಫೈ ನಾಯಕರುಗಳು, ಪ್ರಪಂಚದಾದ್ಯಂತ ಈ ತುಂಡುಡುಗೆಯ ಮನುಷ್ಯನ ಮಾತನ್ನು ಕೇಳಿದರು.
ಹಿಟ್ಲರ್ ನಂತಹ ಹಿಟ್ಲರನಿಗೆ ಪ್ರಿಯ ಸ್ನೇಹಿತನೇ ಎಂದು ಬಹಿರಂಗ ಪತ್ರಬರೆಯಬಹುದಾದ ನೈತಿಕತೆ ಮತ್ತು ಪ್ರಾಮಾಣಿಕತೆ, ತನ್ನದೇ ಮಗನ ಅನ್ಯಾಯಗಳನ್ನು ಸಹಿಸದೆ ದೂರವಿಟ್ಟ ನ್ಯಾಯಪರತೆ, ನಾಯಕನಾಗಿ ನಡೆಯುವಾಗ ಕುಟುಂಬದ ಪ್ರಾಮುಖ್ಯತೆ ಗೌಣವಾಗಿಸಿ, ಅವರು ಕಷ್ಟದಲ್ಲಿ ನೊಂದರೆ ತಾನು ಒಳಗೆ ಬೆಂದು, ಹೊರಗೆ ನಗುತ ನಿಲ್ಲುವ ನಿಷ್ಠುರತೆ, ತನ್ನ ಮಾನವಸಹಜ ದೌರ್ಬಲ್ಯಗಳನ್ನು ಸಾರ್ವಜನಿಕವಾಗಿ ತೆರೆದಿಡಬಲ್ಲ ಸರಳತೆ ಇದೆಲ್ಲವನ್ನೂ ನಾವು ನಂಬಲು ಅಸಾಧ್ಯವಾಗುವಷ್ಟು ತೀವ್ರತೆಯಲ್ಲಿ ಬದುಕಿದ ಈ ಮನುಷ್ಯ ಗಾಂಧಿಯೆಂದರೆ ನನಗೆ ಪ್ರೀತಿ, ಅಚ್ಚರಿ ಮತ್ತು ಅಪಾರ ಗೌರವ.
ಫಾಧರ್ ಆಫ್ ದಿ ನೇಷನ್, ಮತ್ತು ಭಾರತ ಸ್ವತಂತ್ರ ಹೋರಾಟದ ನೇತಾರ, ಮತ್ತು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಎಂಬ ಅತ್ಯಂತ ಸೀಮಿತ ಚೌಕಟ್ಟಿನಲ್ಲಿ ನಿಲ್ಲಿಸಿರುವ ಗಾಂಧಿ ಅಸಹಾಯಕತೆಯಿಂದ ಚಡಪಡಿಸುತ್ತಿದ್ದಾರೆ. ಹೊರಗೆ ಬರೋಣವೆಂದರೆ ಅವರ ಕೈಯ ಕೋಲನ್ನು ಆ ಭಾರೀ ಚೌಕಟ್ಟಿಗೆ ಅಂಟಿಸಲಾಗಿದೆ, ಮಾತನಾಡಿ ತಿಳಿಸೋಣವೆಂದರೆ ಮಕ್ಕಳ ಕಿವಿಯಲ್ಲಿ ಗ್ಯಾಜೆಟ್ಟುಗಳ ಇಯರ್ ಫೋನಿದೆ. ಕೊನೆಯ ಪಕ್ಷ ಇದೊಂದು ದಿವಸ ನಾವು ಮಹಾತ್ಮನನ್ನು - ಬಾಪುವಾಗಿಸೋಣ, ಮಕ್ಕಳು ನಿಜವಾದ ಮಮತೆಯಲ್ಲಿ ಅವರನ್ನು ಬಾಪೂಜಿ ಎಂದು ಕರೆಯುವಷ್ಟು ಹತ್ತಿರ ಹೋಗೋಣ.