Monday, September 19, 2016

ಎಂ.ಎಂ.ಎಸ್.

ಆಕಾಶಮಲ್ಲಿಗೆಯ ಮರಕ್ಕೆ ತೋರಿದ ಮುದ್ದಣ ಮನೋರಮೆಯರ ಸಲ್ಲಾಪ

ಮು: ಇನ್ನು ನೀನು ಮಾತನಾಡಬೇಡ
ಮ: ಹೌದಾ ಹಾಗಾದರೆ ಬೇರೆ ಏನು ಮಾಡಲಿ

ಮು. ಬೇಳೆ ಹೋಳಿಗೆ. ಕಟುಂ ಚಕ್ಕಲಿ
ಕಲಸನ್ನ, ಪಾಯಸ. ಕೋಸಂಬರಿ
ಜೊತೆಗೆ ಕುಂಬಳದ ಮಜ್ಗೆ ಹುಳಿ ಇರಲಿ

ಮ: ಅಭ್ಭಾ ಸರಿ ಸರಿ ಮೆನುವೇನೋ ಭಾರಿ..
ನಾನು ಮಾತನಾಡುವುದಿಲ್ಲ
ನೀನು ನಿಲ್ಲಿಸದಿರು

ಮು: ಅದನ್ನು ನೀನು ಹೇಳಬೇಕೆ
ಮಾತು ಮೌನ ನಿರ್ವಾತದಲ್ಲೂ
ನನ್ನದೇ ಹೇಳಿಕೆ, ಬಡಬಡಿಕೆ
ಎಂದೂ ಮುಗಿಯದ ಚಡಪಡಿಕೆ
ನಿನ್ನ ಕಣ್ಣ ಕೊಳದಲ್ಲಿ ಬಿದ್ದಾದ ಮೇಲೆ
ಏಳುವುದಾದರೂ ಯಾಕೆ?

ಮ: ಇರಲಿರಲಿ.
ಹದವಾಗಿ ಸುಟ್ಟ ಬಾಳೆಕುಡಿಯಲ್ಲಿ
ಬಡಿಸಿರುವ ಪರಮಾನ್ನಗಳ
ಮುಗಿಸು ಮೊದಲು.
ಏಳಕೂಡದು
ನನ್ನೆಲೆಯೂ ಬರಿದಾಗುವ ಮೊದಲು

ಮು: ಅದಕ್ಕೇನಂತೆ
ವೈದ್ಯ ಹೇಳಲೆಂದೇ ಬಯಸುವ ರೋಗಿಯೊಲು
ಇಲ್ಲೆ ಕುಳಿತಿರುವೆ
ಅನುಮತಿಯಿದೆಯೆ ಕೈ ನೆಕ್ಕಲು?
ಬಿರಿಗಣ್ಣು ಬೇಡ ಬಿಡು.
ಊಟ ಅರಗದೆ ಹೋದೀತು.
ಹೊರಗೆ ಅಂಗಳದಲ್ಲಿ
ಅಗಸೆಯ ಮರವನೊರಗಿದ
ಬಳ್ಳಿ ತುಂಬ ಚಿಗುರೆಲೆ
ನೋಡಿದೆಯೋ ಇಲ್ವೋ ಹೇಳು ಮೊದಲು.

ಮ: ಎಲ್ಲ ಗೊತ್ತಿದೆ.
ಜಗುಲಿಯ ತೂಗುಮಂಚದಲ್ಲಿ
ಅಣಿಯಾಗಿದೆ ಎಲಡಿಕೆಯ ಬಟ್ಟಲು
ನೆನಪಿರಲಿ
ಕೈತೊಳೆದು ಬಂದ ಮೇಲೆಯೇ ವೀಳ್ಯ.

ಮು: ಎಲ್ಲ ಗೊತ್ತಿದೆ
ಮಾತು ಕೇಳದಿರೆ
ಸಲ್ಲಾಪದ ವೀಳ್ಯಕ್ಕೆ ರಣ ಸೇರುವುದೆಂದು

ಅಂಗಳದಲ್ಲಿ ಹೂತ ಆಕಾಶಮಲ್ಲಿಗೆ ಮರಕ್ಕೆ ಕಂಡಿದ್ದು ಕೇಳಿದ್ದು ಇಷ್ಟು:

ಜಗುಲಿಯ ತೂಗುಮಂಚದಲ್ಲಿ"
ಇವಳದು ಭಾಮಿನಿ
ಅವನದು ರಗಳೆ
ಇವಳ ಶರಗಳನ್ನು ತಡೆಯಲಸಹಾಯನಾದ
ಅವ ಶರತಲ್ಪದಲ್ಲೇ ಉದ್ದಂಡ.
ಸಣ್ಣ ಗೊರಕೆ.


ಶಾಲೆಗೆ ಹೋದ ಕಂದಪದ್ಯ
ಮನೆಗೆ ಬರುವುದರೊಳಗೆ
ಫಿಲ್ಟರಿನಲ್ಲಿ ಡಿಕಾಕ್ಷನಿಳಿದು
ಸಂಜೆ ಬಂಗಾರದ ಬೆಳಕು
ಅಂಗಳದಂಚಿನ ಅಬ್ಬಲಿಗೆಯ
ಹೊಳೆಯಿಸುವಾಗ,
ಹಬೆಯಾಡುವ ಕಾಫಿ
ಒಳಹೊಗುವಾಗ,
ಒಂದೆರಡು ಸುನೀತ.

ಮತ್ತೆ ಸಂಜೆಯಡಿಗೆ ತಯಾರಿ.
ದಿನದಿನವೂ ಅದದೇ
ಮತ್ತೇ ಭವಿ ಕ್ರೀಡಿತ ವೃತ್ತ.

(ನನ್ನ ಹಾಗಿನ ಏಳನೇ ಕ್ಲಾಸಿಗೆ ಕನ್ನಡದ ಅಭ್ಯಾಸ ಕೊನೆಯಾದವರಿಗಾಗಿ ಒಂದೆರಡು ಮಾತು;ಭಾಮಿನಿ, ಶರ, ಉದ್ದಂಡ ಇವು ಕನ್ನಡದ ಕೆಲ ಷಟ್ಪದಿಗಳು. ರಗಳೆ, ಸುನೀತ, ವೃತ್ತ, ಕಂದಪದ್ಯ ಇವುಗಳೂ ಕನ್ನಡ ಕಾವ್ಯ ರಚನೆಯ ರೀತಿಗಳು.)