Tuesday, August 4, 2015

ಹಲವುತನದ ಮೈಮರೆಸುವಾಟವಿದು..

ಆಕಾಶದ ನೀಲಿಗೆ
ನನ್ನ ತೆಕ್ಕೆ
ಮೇಲೆತ್ತಿ ಎತ್ತಿ
ಚಾಚಿ ಇನ್ನೇನು
ಬೊಗಸೆಯಲ್ಲಿ ವಿಸ್ತಾರ
ಸಿಕ್ಕೇಬಿಟ್ಟಿತು
ಎನ್ನುವಷ್ಟರಲ್ಲಿ
ಕಡುನೀಲಿ ಮುಗಿಲು
ದಟ್ಟೈಸಿ
ಬೆಳಕು ಅಡಗಿ
ಈಗ ಮೂಡಣ ಪಡುವಣದಲ್ಲಿ
ಭೋರ್ ಮಳೆ
ಅಳಿದುಳಿದ ಚಿಕ್ಕೆ ಮೋಡಮರೆಯಲ್ಲೇ
ಮಿನುಗಿ
ಮೇಲೆತ್ತಿದ ತೆಕ್ಕೆ ಕೆಳಗಿಳಿಸುವಾಗ
ದಾರಿಯ ಮಣ್ಣೆಲ್ಲ ಕೊಚ್ಚೆ
ನೆಲದಲ್ಲೇ ಜಾರುವ ಹೆಜ್ಜೆ
ನೀಲಿ ವಿಸ್ತಾರ ಅಲ್ಲೆ ದೂರದಲ್ಲೆ
ಜಾರು ಹೆಜ್ಜೆ ಇಲ್ಲೆ ನಿಂತಲ್ಲೆ
ನಡೆಯದೆಯೇ ನಡೆದ ಹಾಗೆ.?!
ನಿಂತೂ ಮುಂದುವರೆದ ಹಾಗೆ ?!
ಇರಲಿ. ಪಾಡ್ಯದಲ್ಲಿ ಕತ್ತಲೆಯೇ.
ತದಿಗೆ ಎಂದಿಗೂ ಸುಂದರ.


(ಶೀರ್ಷಿಕೆ - ಅಡಿಗರ ಅಳುವ ಕಡಲೊಳು ಕವಿತೆಯ ಸಾಲು)

Monday, July 27, 2015

ಕಲಾಮಜ್ಜನಿಗೆ ನಮನ.

ನಮ್ಮ ಮಹಾನಗರದ ಶಾಲೆಗಳು
ತುಂಬ ಸೊಫೆಸ್ಟಿಕೇಟೆಡ್ದು.
ಅಗಲಿದ ಹಿರಿಚೇತನಕ್ಕೆ ನಮಿಸಿ
ಸರ್ಕಾರ ರಜೆ ಘೋಷಿಸಿದ್ದು
ಇವತ್ತು ರಾತ್ರಿಯೇ ಇನ್ಬಾಕ್ಸಿಗೆ ಬರುತ್ತೆ;
ಇವತ್ತು ಲೇಟಾಗಿ ಮಲಗಿದ ಪುಟ್ಟನಿಗೆ ನಾಳೆ ಬೇಗೆದ್ದರೂ ಶಾಲೆಯಿಲ್ಲ.

ನನ್ನೂರಿನ ಕೆರೆದಡದ ಶಾಲೆಗಳ ನಿಲುವೇನೋ ಗೊತ್ತಿಲ್ಲ;

ಹಳ್ಳಿಯೂರಿನ ಕನ್ನಡ ಶಾಲೆ ಹೇಗೋ ಗೊತ್ತಿಲ್ಲ.;
ಅಲ್ಲಾದರೂ ಇರಬಹುದು -
ನಿವೃತ್ತಿಯ ಹತ್ತಿರತ್ತಿರದ ಮೇಷ್ಟರು ಕೆಲವರು
ಅರ್ಧಕ್ಕೆ ಧ್ವಜ ಹಾರಿಸಿ
ಮೌನವಂದನೆ ಮಾಡಿಸಿ
ಬಂದವರಲ್ಲೇ ಒಬ್ಬಳ ಹತ್ತಿರ
ಆ ಚೇತನದ ಬಗ್ಗೆ ನಾಕಾರು ಮಾತಾಡಿಸಿ
ಮಕ್ಕಳಿಗೆ ಕಾಣಿಸದ ಹಾಗೆ ಕಣ್ಣೊರೆಸಿಕೊಳ್ಳುವವರು...ಅಲ್ಲಾದರೂ ಇರಬಹುದು..

ಅಲ್ಲಿವರೆಗೆ ಪಿಸುಗುಟ್ಟುತ್ತ
ಸರತಿ ಕೆಡಿಸಿ ಓಡಲು ಸಿದ್ಧ
ಪುಟ್ ಪುಟಾಣಿ ಕಣ್ಗಳು
ಇದನ್ನೆಲ್ಲ ಗಮನಿಸಿ
ಗಪ್ ಚಿಪ್ಪಾಗಿ ಸರತಿಯಲ್ಲಿ ನೆಟ್ಟಗೆ ನಿಲ್ಲಬಹುದು;
ಒಂದೆರಡು ಸಪೂರ ಜೀವಗಳ
ಕಣ್ಣು ಮಂಜಾಗಬಹುದು;
ಮುಂದೆಂದೋ ವಿಂಗ್ಸ್ ಆಫ್ ದಿ ಫೈರ್ ಆಗಿ ನಿಲ್ಲಬಹುದು.
ನಿಲ್ಲಲಿ.

ಮಹಾನಗರದ ಪುಟ್ಟನಿಗೆ ಇವೆಲ್ಲ ಸಿಗುವುದಿಲ್ಲ. ಬರಿಯ ರಜೆ.

ಎಲ್ಲದಕ್ಕೂ - ಗರಿಮೆಗೂ ಮತ್ತು ಅಂತಃಕರಣಕ್ಕೂ.

ಕಲಾಮಜ್ಜನಿಗೆ ನಮನ.

Tuesday, July 14, 2015

ಬದಲಾಗಲು ನಮಗೆ ಹೆದರಿಕೆ

ಬದಲಾಗಲು ನಮಗೆ ಭಯ. ಯಾಕೆಂದರೆ ಏನೆಲ್ಲ ಮಾಡಿದ ಮೇಲೂ, ಎಷ್ಟೆಲ್ಲ ಕಷ್ಟಪಟ್ಟರೂ ನಮಗೆ ನಮ್ಮ ಸುತ್ತಲ ಭವವೇ ಚೆನ್ನಾಗಿ ಗೊತ್ತಿರುವುದು.
ಅಷ್ಟೇ ಯಾಕೆ. ನಮಗೆ ನಾವಿರುವ ಸ್ಥಿತಿ ಅಂತ ಚೆನಾಗಿಲ್ಲ. ಇದೇ ಅಲ್ಟಿಮೇಟ್ ಅಲ್ಲ, ಇದು ಒಂಚೂರೂ ಚೆನಾಗೂ ಇಲ್ಲ, ನಮಗೆ ಯಾವ್ರೀತಿನೂ ಇಷ್ಟವೂ ಇಲ್ಲ ಅಂತಲೂ ಗೊತ್ತು. ಆದ್ರೆ ಇದು ಸರ್ವಕಾಲಕ್ಕೂ ಇದೇ ತರ. ಒಂದೇ ತರ.. ಯಾವುದೇ ಅನಿರೀಕ್ಷಿತಗಳಿಲ್ಲದೆ ಹಾಗೇ ಇರುತ್ತದೆ ಎಂಬ ಭರವಸೆಯೂ.
ಅದಕ್ಕಾಗಿಯೆ ನಾವು ನಮ್ಗೆ ಬೇಕೇ ಬೇಕಾದ ಕಡೆ ಒಂಚೂರು ಜರುಗಿ, ಸರಿಸಿ, ಸವರಿಸಿಕೊಂಡು ಒಂದು ಅಡ್ಜಸ್ಟ್ ಮೆಂಟಿನ ಬದಲಾವಣೆ ಬೇಕಿದ್ರೆ ಮಾಡ್ಕೊಂಡು ಇರ್ತೀವಿ. ಎಲ್ಲದೂ ಅದೇ ತರವೇ ಇರ್ಬೇಕು. ಅಂತ ಏನೂ ಬದ್ಲಾಗದ ಹಾಗೆ.. ಅದೇ ಸೂರ್ಯ ಅದೇ ಬೆಳಗು. ಅರ್ಜೆಂಟಾಗಿ ತಿರುಗುವ ಅದೇ ಗಡಿಯಾರ. ಸೆಲ್ಲು ವೀಕಾಗದ ಹಾಗೆ ನೋಡಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ.
ದೂರದಲ್ಲಿ ಎತ್ತರಕ್ಕೆ ನಿಂತ ಹಸಿರುಬೆಟ್ಟಗಳು ನಮ್ಮ ಕಣ್ಣಿಗೆ ಮನಸ್ಸಿಗೆ ಖುಶಿಕೊಡುತ್ತವೆ. ಅಚಲ. ಶಕ್ತ. ಮತ್ತು ದೃಢತೆಯ ಉಪಮೆಯಾಗಿ ನಮಗವು ತುಂಬಾ ಇಷ್ಟವಾಗುತ್ತವೆ. ಅಲ್ಲಿನ ಎತ್ತರೆತ್ತರಕ್ಕೆ ಬೆಳೆದ ದೊಡ್ ದೊಡ್ಡ ಮರಗಳನ್ನು ನೋಡಿ ಕಣ್ ಕಣ್ ಬಿಡುತ್ತೇವೆ. ಒಂದು ಡೀವಿಯೇಟಿಂಗ್ ಆಲೋಚನೆ. ಅವುಗಳನ್ನ ಇದ್ದಲ್ಲಿಂದ ಕಿತ್ತು ಬೇರೆ ಕಡೆ ನೆಡುವ ಪ್ರಯತ್ನ ಮಾಡಿದಲ್ಲಿ ಬಹಳಷ್ಟು ಮರಗಳು ಸಾಯುತ್ತವೆ. ಒಳ್ಳೆಯ ನಾಟಗಳು. ಒಳ್ಳೆಯ ಬೆಲೆ.
ನಮಗೆ ಬೆಟ್ಟದಂತೆ ಇರುವಾಸೆ. ಎತ್ತರೆತ್ತರದ ದೊಡ್ಡ ಮರಗಳ ಹಾಗೆ ಬಾಳುವಾಸೆ. ದೃಢ ಮತ್ತು ಗೌರವಯುತ ಬದುಕು ಬೇಕು ನಮಗೆ.
ಹೀಗೆಲ್ಲ ಬೆಳಗಿಡೀ ಅನಿಸುತ್ತಿರುತ್ತೆ. ರಾತ್ರಿ ಕತ್ತಲ ಮಡಿಲಲ್ಲಿ ಕುಡಿಗಣ್ಣ ದೀಪದಲ್ಲಿ ಹೊರಗಣ್ಣು ಮುಚ್ಚುವಾಗ ಮಗ್ಗುಲು ಬದಲಾಗುತ್ತದೆ. ಬ್ರಾಂಡೆಡ್ ಹಾಸಿಗೆಗಳ ಗರಿ ಮುದುರದ ಹೊದಿಕೆಗಳ ಮೇಲಿನ ಬೆಚ್ಚನೆ ನಿದ್ದೆ ಮಧ್ಯದಲ್ಲಿ ಎಬ್ಬಿಸುವ ಕನಸಿನ ಕನವರಿಕೆಯೇ ಬೇರೆ.
"ಆ ಹಾರುಹಕ್ಕಿ ಎಷ್ಟ್ ಚೆಂದ. ಖಂಡಾಂತರ ಹಾರುತ್ತದೆ. ಎಲ್ಲಿ ಬೇಕೋ ಅಲ್ಲಿ ಕೂತು ಹಾಡುತ್ತದೆ. ಇವತ್ತು ಇಲ್ಲಿ. ನಾಳೆ ಬೇರೆ ಆಕಾಶ. ಮತ್ತೆ ಇನ್ನೊಂದಿನ ಹೊರಟ ಜಾಗಕ್ಕೇ ತಿರುಗಿ ಬಂದು. ಮಧ್ಯ ಮೊಟ್ಟೆ ಮರಿ... ಆಹಾ ಹೀಗಿರಬಾರದೆ ನಾನು?!
ಅಥವಾ
ಗಾಳಿಯಾಗಬಾರದೆ ನಾನು? ಎಲ್ಲಿಂದ ಬಂದೆ ತಿಳಿಯದ ಹಾಗೆ. ಎಲ್ಲಿಗೆ ಹೊರಟೆ ಎಂದು ಕೇಳದ ಹಾಗೆ. ತನಗೆ ಬೇಕಿದ್ದ ಕಡೆಗೆ ದಿಕ್ಕು ಬದಲಾಯಿಸುವ ಹಾಗೆ...ಯಾರಿಗೂ ಯಾವ ಸಮಜಾಯಿಷಿ ಕೊಡಬೇಕಿರದ ಹಾಗೆ... ?!"
ಕನಸಿನ ರಾತ್ರಿ ಮುಗಿಯುತ್ತಲೂ ಬೆಳಕು ಚಿಮ್ಮುವ ಬೆಳಗು.  ತಕ್ಷಣ ತಿಳಿವಿನ ಬೆಳಕಿನ ಪ್ರತಿಫಲನ ಎಲ್ಲೆಲ್ಲೂ.
"ವಲಸೆ ಹಕ್ಕಿಗಳು ತಮ್ಮ ನಿಜಪಯಣಕ್ಕಿಂತ ಜಾಸ್ತಿ, ಬೇಟೆಗಾರರ ಬಾಣಗಳನ್ನು ತಪ್ಪಿಸಲು ಹಾರುತ್ತಿರುತ್ತವೆ ಎಂದು. ಅವಿಟ್ಟ ಮೊಟ್ಟೆಗಳೆಲ್ಲವೂ ಮರಿಯಾಗಲಾರವೆಂದು. ಮತ್ತೆ ಯಾರಿಗೂ ಉತ್ತರ ಕೊಡಬೇಕಿರದ ಆ ಮೋಹಕ ಗಾಳಿ...ಸುಂಟರಗಾಳಿಯಾಗಿ ಬದುಕು ನುಚ್ಚು ನೂರಾಗಬಹುದು" ಎಂದು.
ಓಹ್ ಮತ್ತೆ ಸುರಕ್ಷಾ ವಲಯದೊಳಗೆ ಗಿರಕಿಹೊಡೆಯುತ್ತಿರುತ್ತೇವೆ.

ಹೌದು. ಕನಸು ಕಾಣುತ್ತಿರುವುದೇ ಒಳ್ಳೆಯದು. ಕನಸಿನ ಬನಿ ನನಸಿಗಿಳಿಸಲು ಇನ್ನೂ ತುಂಬ ದಿನ ಇದೆ. ನಾಳೆಗಳು ತುಂಬ ಇವೆ ಎಂದು ನಂಬುತ್ತಾ.. ಹಕ್ಕಿ ಹಾರಿದ ಊರಿಗೆ ಹೋಗಲು ಪಯಣ ಇಟಿನರರಿ ತಯಾರಿಸಲು ತುಂಬ ಸಮಯ ಇರುತ್ತದೆ. ಕನಸು ದುಬಾರಿಯಲ್ಲ. ಇವತ್ತು ರಾತ್ರಿ ಮಲಗಿದ ಕೂಡಲೇ ಹತ್ತಬಹುದು ಮಾಯಾಚಾಪೆ. ಎಷ್ಟೊಂದು ಟೈಮಿದೆ!!
ಕಷ್ಟಕ್ಕೆ ಬರುವುದು ಈ ಕನಸುಗಳನ್ನ ನನಸಿನ ಬೆಟ್ಟದ ಏರು ಹತ್ತಿಸುವಾಗ. ಮೊದಲ ಸುತ್ತಿಗೇ ಏದುಸಿರು. ಮರಳಿ ಮನೆಗೆ. ದಿನ ಕೊನೆಯಾಗಿ ಇರುಳು ತಬ್ಬುವಾಗ ಕನಸು ಕಂಡರೆ ಸಾಕು. ಸಾಹಸ ಯಾಕೆ ಬೇಕು? ರಿಸ್ಕು ತಗೊಳ್ಳುವುದು ಹಣಹೂಡಿಕೆಗೆ ಮಾತ್ರ ಎಂಬ ಸೂತ್ರಕ್ಕೆ ನಾವು ಬದ್ಧ.

ಕೊನೆಗೂ...ಬದಲಾಗಲು ನಮಗೆ ಹೆದರಿಕೆ. ನಮಗೆ ಬೇಕಾದ ಹಾಗೆ ಬದಲಾಗಲು ತುಂಬ ಹೆದರಿಕೆ.
ಅಚ್ಚರಿ ಅಂದ್ರೆ.. ಬದುಕು ಬದಲಾವಣೆಗಳ ಸರಮಾಲೆ. ಬೆಳವಣಿಗೆಯ ಮೂಲ ಸ್ರೋತವೇ ಬದಲಾವಣೆ. ಆದರೆ ಬದಲಾವಣೆಯನ್ನ ನಾವಾಗಿಯೇ ಬಯಸಿ ಹೊಂದಲು ಸಿಕ್ಕಾಪಟ್ಟೆ ಭಯ.
ನನ್ನ ನಡೆಗೆ ಇನ್ಯಾರದ್ದೋ ಜವಾಬ್ದಾರಿ ಇದ್ರೆ ಅಷ್ಟೇ ಅನುಕೂಲ ಅಂತ ಬಹುಶಃ ಎಲ್ರೂ ಅಂದ್ಕೋತಾ ಇರ್ತೀವೋ ಏನೋ..

ಪಾವ್ಲೋ ಕೊಯ್ಲೋನ ಈ ಲೇಖನ ಓದಿ .. ಪ್ರಯತ್ನಿಸಿದ ಭಾವಾನುವಾದ. http://paulocoelhoblog.com/2015/04/03/afraid-to-change-2/

Monday, May 4, 2015

ನನ್ನ ಪ್ರೀತಿಯ ಹೆಬ್ಬಲಸಿನ ಮರ

ವೈಶಾಖದ ಇಳಿ ಮಧ್ಯಾಹ್ನ,
ಹೆಬ್ಬಲಸಿನ ಮರವೊಂದು
ನಿಧಾನ, ನಿರುಮ್ಮಳವಾಗಿ
ನೆಲಕ್ಕೆ ಒರಗಿತು.

ಎಲ್ಲ ಎಲೆಗಳಿಗೂ
ಮಣ್ಣಲ್ಲಿ ಕಲೆತುಹೋಗುವ
ಪಾಠವನ್ನ ಚಿಗುರಿದಾಗಲೇ ಕಲಿಸಿದ
ಮರ,
ಕಾಯುತ್ತ ಇತ್ತು -
ಸಂಜೆಗೆಂಪಲಿ ಮಣ್ಣಲಿ ಬೆರೆಯಲು.
ಕೊಂಬೆಕೊಂಬೆಗಳಲಿ ಹಕ್ಕಿ
ಕುಕಿಲು ಚಿಲಿಪಿಲಿ,
ಮರದಲ್ಲಿ ಹಣ್ಣಾದಷ್ಟೇ ಸಹಜದಲಿ
ಮರವೇ ಹಣ್ಣಾದ ಬಗೆ!
ಸ್ಪಷ್ಟ, ಸೌಮ್ಯ, ವಿಶಿಷ್ಟ.

ತುಂಬಿ ಬಂದ ಕಣ್ಣು
ತುಳುಕದೆ ಹಾಗೆಯೇ
ನಕ್ಕುಬಿಡುವಂತ ನೆನಪಿನ ಆಸರೆ;
ದಾರಿಯ ಬದಿಗೆ ಸರಿದು ನಡೆವಾಗ
ಚುಚ್ಚುವ ಕಲ್ಲು ನೆನಪಿಸುವ
ಅಜ್ಜನು ಜೊತೆಗೇ ತೋರಿಸುವನು
ಹುಲ್ಲಿನ ಸಂದಿಯಲ್ಲಿ ಹರಿವ ನೀರಲಿ
ಕಾಲಿಡುತ್ತ ನಡೆದು ಹೋಗುವ ಸುಖ.

ಇದುವೆ ಬದುಕು ಇದುವೆ ಜೀವನ.

ನನ್ನ ಪ್ರೀತಿಯ ಹೆಬ್ಬಲಸಿನ ಮರ
ನಿಧಾನಕ್ಕೆ ನಿರುಮ್ಮಳದಲ್ಲಿ
ಒರಗಿದೆ ಮಣ್ಣಿಗೆ.
ಮಣ್ಣಿನ ಚೈತನ್ಯ ಮಣ್ಣಿಗೇ ಮರಳಿದ
ಸಂತಸ ಮಣ್ಣಿಗೆ.


ಬದುಕಿನ ಸೂಕ್ಷ್ಮ ಪಾಠಗಳನ್ನ ನನ್ನ ಅಜ್ಜನೋ ಎಂಬಷ್ಟು ನವಿರಾಗಿ ಹೇಳಿಕೊಟ್ಟ ಪೆಜತ್ತಾಯ ಅಂಕಲ್ ಮೊನ್ನೆ ಏಪ್ರಿಲ್ 30 ರ ಮಧ್ಯಾಹ್ನ ಪಂಚಭೂತಗಳಲ್ಲಿ ಸೇರಿಹೋದರು. ಈ ಕವಿತೆಗೆ ಅವರ ನೆನಪು ಮುಗಿಯುವುದಿಲ್ಲ. ಅವರ ಜೀವನ್ಮುಖೀ ವ್ಯಕ್ತಿತ್ವಕ್ಕೆ ಇದು ಒಂದು ಕಿಂಡಿ, ಅಕ್ಷರ ನಮನ.

Monday, April 20, 2015

ಕೊನೆಯದೊಂದು ಜತೆಪಯಣ..

ದಿ ಇನ್ಸ್ಟಂಟ್ ಮೇಡ್ ಎಟರ್ನಿಟಿ..! (ಬ್ರೌನಿಂಗ್)

ಒಪ್ಪಿದೆ.
ನಾನು ಸಲ್ಲದವಳು. ತಕ್ಕುದಲ್ಲದವಳು.
ಕುಟುಂಬ ವತ್ಸಲೆಯಲ್ಲ,
ನಿನ್ನ ಮೌನದ ಕೊಳಕ್ಕೆ
ನನ್ನ ಮಾತಿನ ಕಲ್ಲೆಸೆದು ಘಾಸಿಗೊಳಿಸಿರುವೆ-
ಅನುದ್ದೇಶದ ಒಡಲೊಳಗಿರುವ
ಘನೋದ್ದೇಶದ ಅರಿವಿರದೆ.

ಒಪ್ಪಿದೆ
ಜತೆಪಯಣಕ್ಕೆ ತಕ್ಕ ಸುಹೃದೆಯಲ್ಲ,
ನಿನ್ನ ಹೆಜ್ಜೆಗೆ ನನ್ನದು ಜೋಡಿಸಲೆ ಇಲ್ಲ,
ಹಂಬಲಗಳ ಹರವಿ ಕೂತು,
ತೊಂದರೆಗಳ ಪರಿಕಿಸದೆ
ಹರಿವಿಗೆ ಬಿದ್ದೆ....
ಬಿದ್ದ ಮೇಲೆ ಕಲಿತ ಈಜು
ಆಟವಲ್ಲ. ಬದುಕುವ ದೊಂಬರಾಟ.


ಒಪ್ಪಿದೆ
ಇದು ನಿನ್ನ ಮಾತು.
ಎಲ್ಲ ದನಿಯನ್ನೂ ಮಾತಲ್ಲೆ ಕಡೆಯಬೇಕಿಲ್ಲ
ಸುಮ್ಮನಿರಲು ಬರದವಳಿಗೂ ಇದು ಗೊತ್ತಾಗಿದೆಯಲ್ಲ!


ಒಪ್ಪಿದೆ
ಹೊಳೆಗಿಳಿಯದೆ ಪಕ್ಕದಲ್ಲೆ ನಡೆದು ಹೋಗುವ ಹಾದಿ ಇದೆ.
ತಂಪು ಪಡೆಯದೆಯೂ ತಣ್ಣಗಿದೆ.
ಹರಿಯದೆಯೂ ಮುಂದುವರೆದಿದೆ.

ಹೊಳೆಯೊಳಗಿನ ಕಲ್ಲು ಎಷ್ಟೆಲ್ಲ ನೆನೆದೂ
ದೊರಗು ಕಳೆದು ಬರಿಯ ನುಣುಪು,
ಮೆತ್ತಗಾಗುವುದಿಲ್ಲ.
ದೂರ ದೂರಕೆ ಹರಿವ ಹೊಳೆಯಲ್ಲೆ
ಮುಳುಗಿಯೂ ತಾನೆ ಹೊಳೆಯಾಗುವುದಿಲ್ಲ.
ಒಣಗಿದ ಹೆಜ್ಜೆಗಳು ಒದ್ದೆಯಾಗಬಯಸುವುದಿಲ್ಲ.


ಒಪ್ಪಿದೆ
ಜೊತೆ ಎಂದರೆ ಒಟ್ಟಿಗೇ ಎಂದಷ್ಟೆ ಅಲ್ಲ!
ಹೊಳೆಗೆ ದಂಡೆಯ ಹಾಗೆ,
ರೈಲು ಕಂಬಿಗಳ ಹಾಗೆ,
ನಿದ್ದೆ ಎಚ್ಚರದ ಹಾಗೆ,
ಬೆಳಕು ಕತ್ತಲ ಹಾಗೆ,
ಮೌನ ದನಿಗಳ ಹಾಗೆ,
ಜೊತೆಗೇ ಇರುತ್ತೇವೆ. ಬೇರೆ ಬೇರೆ.


ಅದಕ್ಕೆ ಇವತ್ತೊಂದು ಹೊಸ ಹಂಬಲು.
ಬೆಳಗಲ್ಲಿ ದಿನಮಣಿಯ ಬೆಳಕಿನ ಬಲೆಯಲ್ಲಿ
ಪುಳಕಿಸುವ ಹುಲ್ಗರಿಕೆಯ ಬೆಟ್ಟದೆಡೆ
ಕೆಂಪು ಒಡಲಲ್ಲಿ ಎಳೆಹಸಿರು ಮೊಳಕೆ ಹೊತ್ತ ಇಳೆಗೆ
ನೀಲಿ ಮುಗಿಲು ಬಾಗಿ ಮುದ್ದಿಸುವ ಕಡೆ,
ಕತ್ತಲ ಆಗಸಕೆ ಚಿಕ್ಕೆ ಮಿನುಗು ಮಿಂಚುವೆಡೆ,
ದಾರಿ ಮುಗಿಯದಿರಲಿ ಎಂದೆನಿಸುವೊಡೆ,
ಗಿರಿಯಿಂದ ಕಣಿವೆಗೆ ಹರಿವೆಡೆ,
ಕೊನೆಯದಾಗಿ ಒಂದು ಪಯಣ ಹೋಗೋಣವೆ?

ಮತ್ತೆ ಕೇಳಲಾರೆ. ಒಪ್ಪಿದೆನಲ್ಲ. ಜೊತೆಗೇ ಬೇರೆ.
ಅದಕ್ಕೆ ಮುಂಚೆ ಒಮ್ಮೆ
ಈ ಮೂರ್ಖ ಮನದ ಮುದ್ದಿನ ಬಯಕೆ.
ಹೌದೌದು ಕೊನೆಯ ಒಂದು ಸಲ.


ಆಹ್ ಸಧ್ಯ ಒಪ್ಪಿದೆಯಲ್ಲ!

ಈಗ ನಾನು ನನ್ನವನು
ಕೊನೆಯ ಸವಾರಿ, ಕೊನೆಯ ಪಯಣ.
ಶ್. ಸುಮ್ಮನಿರಿ. 
ಜಗತ್ತು ಇವತ್ತಿಗೆ ಕೊನೆಯಾದರೂ ಆಗಬಹುದು.
ನನ್ನ ಬೇಷರತ್ ಒಪ್ಪಿಗೆಯಿದೆ.

ಇವನ ಬಗಲಲ್ಲಿ ಹೋಗುತ್ತಿರುವೆ ನಾನು.
ಇಳಿಸಂಜೆಬೆಳಕಲ್ಲಿ ಬದಿಗೆ ಕದ್ದು ನೋಡಿದೆ
ಅದೇ ಬಿಂಬ. ಅದೇ ಪುಟ್ಟ ಬಾಯಿ. ಕಿರಿಹಲ್ಲು. ಸಿರಿನಗೆ.
ಇವತ್ತಿಗೆ ಕೊನೆಯಾಗಲಿ ಜಗತ್ತು
ಈ ಕ್ಷಣ, ಈ ಪಯಣ, ಈ ಕೊನೆಯೇ ಚಿರಾಯು!

Monday, March 30, 2015

ಜಲದ ಕಣ್ಣು

ಹೊಳೆಯು ಹರಿದೇ ಹರಿವುದು,
ದಂಡೆ ಸಿಕ್ಕದೆಯೂ,
ಒಡ್ಡು ಕಟ್ಟದೆಯೂ,
ತನ್ನ ಪಾತ್ರವ ತಾನೇ ನಿರ್ಮಿಸಿ,
ಹೊಳೆಯು ಹರಿದೇ ಹರಿವುದು.


ಕಲ್ಲು, ಕೊರಕಲು, ಬಯಲು,
ಬರೆದಿಡದ ಹಾದಿ,
ಬೇಡ ಯಾವ ಕೈದೀಪ,
ಹರಿವು ಮುಗಿಯದ ಹಾಗೆ
ಹಳ್ಳ, ತೊರೆ, ನದಿ
ಮೇಲಿಂದ ಧುಮ್ಮಿಕ್ಕುವ ತಡಸಲು,
ಹೊಳೆಯು ಹರಿದೇ ಹರಿವುದು.


ಮರಳ ಮೇಲೆ
ತೆಳುವಾಗಿ ಹರಡಿದ ನೀರಪರದೆ;
ಬಿಸಿಲು ಚುರುಗುಟ್ಟಿ ನೆಲದೊಳಗೆ ಇಂಗಿ
ಒಳಗೊಳಗೇ ಜಿನುಗುವ ಆರ್ದ್ರತೆ;
ಚುಚ್ಚುವ ಕಲ್ಲು ರಾಶಿಗಳನೆಲ್ಲ
ನುಣುಪಾಗಿಸಿ ಸರಿವ ಪೂರ;
ಸುತ್ತಿಬಳಸಿ ಹತ್ತಿ ಇಳಿದು
ಉಸ್ಸೆಂದು ನೋಡುವ ಮುಖಕ್ಕೆ
ಎರಚುವ ಹನಿ ಹನಿ ಆಹ್ಲಾದ ಪಾತ;
ಹೊಳೆಯು ಹರಿದೇ ಹರಿವುದು.


ದೂರದ ಕಡಲು ಎಂದು
ಮುನಿಸಿ ಕೂರುವುದಿಲ್ಲ;
ಬಿಸಿಲ ದಾರಿ ಎಂಬ ಸೆಡವಿಲ್ಲ;
ನೆಳಲು ಹೆಚ್ಚು ಎಂದು ಅಸೌಖ್ಯಗೊಳ್ಳುವುದಿಲ್ಲ;
ಈ ಬಾರಿ ಮಳೆ ಕಡಿಮೆ,.. ಸರಿ ಪುಟ್ಟ ಪಾತ್ರ;
ಈ ಬಾರಿ ಬಿಸಿಲು ಜಾಸ್ತಿ... ತುಸು ಮೆಲ್ಲ ನಡೆ;
ಈ ಬಾರಿ ಅಧಿಕ ಮಾನ್ಸೂನು..ಭೋರ್ಗರಿಸಿ ಹೆಡೆ;
ಹೊಳೆಯು ಹರಿದೇ ಹರಿವುದು.


ಈ ಸಂಲಗ್ನಕ್ಕೆ --
ಪಂಚಾಂಗ ಶುದ್ಧವಿರಬೇಕು,
ಒಳಗಿನ ಒರತೆಯ ಕಣ್ಣು ಬಿಡಿಸಿರಬೇಕು,
ಅಷ್ಟು ಸಾಕು!
ಹೊಳೆಯು ಹರಿದೇ ಹರಿವುದು.
ಕಡಲನ್ನ ಕೂಡಿಯೇ ಸಿದ್ಧ-
ಇನ್ನೊಂದು ಮಹಾನದಿಯನ್ನೇ ಸೇರಿಯಾದರೂ...

Tuesday, February 24, 2015

ಅಲ್ಲಿ ಇವಳೇ ಇದ್ದಿದ್ದರೆ?!

ಇದು ಈ ಬಾರಿ ಪ್ರಜಾವಾಣಿ ಭೂಮಿಕಾ ಸಂಕ್ರಾಂತಿ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ನನ್ನ ಪ್ರಬಂಧ.
ಲಲಿತ ಪ್ರಬಂಧದ ಹತ್ತಿರದ ಕಸಿನ್ನು ಅಷ್ಟೇ ಅಂತ ನಾನು ಮೆಚ್ಚುವ ಹಲವರು ಹೇಳಿದ್ದಾರೆ.
ಇಷ್ಟ ಆಯ್ತು. ಆದ್ರೂ ಸ್ವಲ್ಪ ಭಾಷಣ ಇದೆ ಕೊನೆಕೊನೆಗೆ ಅಂತ ತೀರ್ಪುಗಾರರು ಹೇಳಿದ್ದಾರೆ.

ಅದೇನೇ ಆದ್ರೂ ನಂಗೆ ತುಂಬ ಇಷ್ಟ ಆದ "ಆ ಕ್ಷಣದ ಸತ್ಯ" ದ ಆಲೂರು ಚಂದ್ರಶೇಖರ್ ಅವರ ತೀರ್ಪುಗಾರಿಕೆಯಲ್ಲಿ ತೂರಿಬಂತು ಇದು ಅನ್ನೋದು ನಂಗೆ ಎಲ್ಲಕ್ಕಿಂತ ಜಾಸ್ತಿ ಖುಶೀ.

ಓದಿ ನಿಮಗೆ ಏನನ್ನಿಸ್ತು ಹೇಳಿ.
------------------------------------------------------------------

ರಾತ್ರಿ ಇದ್ದಕ್ಕಿದ್ದಂಗೆ ಎಚ್ಚರಾಯಿತು. ಕಿಟಕಿಬದಿಯ ಮಂಚ. ಹೊರಗೆ ಮಹಾನಗರದ ಅರೆಗತ್ತಲಲ್ಲಿ ಹಾಲು ಸುರಿವ ಬೆಳದಿಂಗಳು. ಆಕಾಶಕ್ಕೆದ್ದು ನಿಂತ ಅರೆ-ಮನೆಗಳೆಲ್ಲ ಭೂಮಿಗೆ ಮುಖ ಕವುಚಿ ಮಲಗಿದಂತಿರುವ ಮುದ್ದು ಇರುಳು. ತಿಂಗಳ ಬೆಳಕು ಎಷ್ಟು ಹೊಳಪಾಗಿತ್ತೆಂದರೆ ಮಲಗುವ ಮುನ್ನ ಕೆನ್ನೆ ತೋಯಿಸಿದ್ದ ಎಲ್ಲ ಭಾವಗಳೂ ಗಪ್ಪು ಚಿಪ್ಪಾಗಿ ಕೂತು ಮನಸು ಹಾರಗುದರಿ ಬೆನ್ನನೇರಿ ಮಲ್ಲಿಗಿ ಮಂಟಪದ ಹಾದಿ ಹಿಡಿಯಲೇ ಬೇಕಾಯಿತು. ಹುಕ್ಕೇರಿ ಬಾಳಪ್ಪಜ್ಜನ ದನಿ ಆ ಬೆಳಕಿನೊಡನೆ ತೆಕ್ಕೆ ಹಾಕಿ ಉಲಿಯಿತು.. “ಎಂಥಾ ಚಂದ ಬೆಳದಿಂಗಳ...ಜಗದ ಜನಕೆ ಮಂಗಳ.” ಕಣ್ ತಣಿಸಿದ ತಂಪು ಬೇಗುದಿಯ ಮನವನ್ನಿಷ್ಟು ತಹಬಂದಿಗೆ ತಂದಿತು.
ಪಕ್ಕದಲಿ ನಿದ್ದೆಯಲಿದ್ದ ಎರಡು ಕಿನ್ನರ ಜೀವಗಳು ಮತ್ತಷ್ಟು ಮುದ್ದಾಗಿ ಮಗ್ಗುಲು ಮುರಿದು ಪುಟ್ ಪುಟಾಣೀ ಕೈಗಳಲಿ ಬಳಸುತ್ತ, ಚಿಕ್ ಚಿಕಾಣಿ ಕಾಲ್ಗಳ ಎತ್ತಿ ಹಾಕುತ್ತ ನಿದ್ದೆ ಸವಿಯ ಕಥೆ ಸಾರಿದವು. ಆಗ ಇನ್ನೂ ತೀವ್ರವಾಗಿ ಅನಿಸಿತು. ಇಲ್ಲ ಅವಳೇ ಆಗಿದ್ದಿದ್ದರೆ ಎದ್ದು ಹೋಗುತ್ತಿರಲಿಲ್ಲ.
ಬದುಕಿನ ಭಾವೋತ್ಕರ್ಷಗಳಿಗೆ ಪಕ್ಕಾಗಿ,ಮೀರುವಿಕೆಯ ಹಂಬಲದ ಅವನು ಜ್ಞಾನದ ಹೊಸಿಲಲ್ಲಿ ನಿಂತು ರಾತ್ರೋ ರಾತ್ರಿ ಹೊರಟ ಕತೆ ಕೇಳಿದಂದಿನಿಂದ ಒಂದು ಕಸಿವಿಸಿ. ಅವನು ಹೊರಡುವ ಮೊದಲು ಹಿಂದಿರುಗಿ ನೋಡಿದಾಗ, ಅವಳು ಬೇಕೆಂತಲೇ ಕಣ್ಣು ಮುಚ್ಚಿಕೊಂಡಿದ್ದಳು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ! ತನ್ನ ಪ್ರೀತಿಯ ಜೀವದ ಹಂಬಲಿಕೆಯನ್ನ ಕಟ್ಟುಪಾಡಿಗೆ ಒಳಪಡಿಸದೆ ಬಿಟ್ಟು ಕೊಟ್ಟ ಅವಳು.. ಅವನ ಜಾಗದಲ್ಲಿ ತಾನೇ ಇದ್ದಿದ್ದರೆ ಬಿಟ್ಟು ಹೋಗಿ ಸಾಧಿಸುತ್ತಿರಲಿಲ್ಲ. ಇದ್ದು ತೋರಿಸುತ್ತಿದ್ದಳೇನೋ ಎಂದು ಅನಿಸುತ್ತಿರುತ್ತದೆ. ಇದು ಒಬ್ಬ ಟಿಪಿಕಲ್ ಹೆಣ್ಣು, ಅಮ್ಮ, ಹೆಂಡತಿ, ಮಗಳು ಮೀರದ ಕಟ್ಟು ಎಂದೂ... ‘ಬಿಚ್ಚಿಟ್ಟ ಹಗ್ಗದ ಅರಿವಿರದೆ ಗೂಟದ ಪಕ್ಕದಲೇ ಕೂತ ಒಂಟೆ’ ಯ ಮನಸ್ಥಿತಿ ಎನ್ನುವಿರೇನೋ... ಆದರೆ ನೀವೇ ಹೇಳಿ….
ಬೆರಳ ತುದಿಯನ್ನೋ ಹೆರಳನ್ನೋ ಸೆರಗಿನಂಚನ್ನೋ ಬದುಕಿನ ಭರವಸೆಯೆ ಇದೆಂದು ಪುಟ್ಟ ಮುಷ್ಟಿಯಲಿ ಹಿಡಿದು ನಿದ್ರಿಸಿಹ ಮುದ್ದು ಮಕ್ಕಳನು ಹೇಗೆ ಬಿಟ್ಟು ಹೋಗಬಲ್ಲೆ?
ಬದುಕಿನ ಪಾತ್ರೆಯ ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ ಎಂಬ ಹಾಗೆ ದಿನದಿನವೂ ಅನುಕ್ಷಣವೂ ಹಂಚಿಕೊಂಡು ಈಗ ಹಾಸಿಗೆಯಂಚಲಿ ನಿದ್ದೆಹೋದ ಈ ಇವನ ಹೇಗೆ ತೊರೆಯಬಲ್ಲೆ?
ಬೆಳಗ್ಗೆ ಬರಲಿರುವ ಹಾಲಿನವನ ಅಂದಾಜಿಗೆ ಬಾಗಿಲಿಗೆ ಕೂಪನ್ ಸಿಕ್ಕಿಸಿದ್ದೇನೆ. ಡಿಕಾಕ್ಷನ್ನಿಗೆ ನೀರು ಕುದಿಯುವ ಮೊದಲು ಬಾಗಿಲು ತೆರೆದು ಹಾಲು ಪ್ಯಾಕೆಟ್ಟುಗಳ ತೆಗೆದುಕೊಳ್ಳಬೇಕು.
ಹಾಲು ಕಾಯುವ ಮುನ್ನ ಸೂರ್ಯನಮಸ್ಕಾರ ಮುಗಿಸಿ ಒಂದೆರಡು ಆಸನವ ಹಾಕಬೇಕು.
ಮುಚ್ಚಿದಕಣ್ಣಲಿ ಸ್ನಾನಕ್ಕೆ ಬರುವ ಪುಟ್ಟ ಮಗಳಿಗೆ ಇಸ್ತ್ರೀ ಮಾಡಿದ ಯುನಿಫಾರ್ಮ್ ಇರಬೇಕು.
ಎದ್ದು ರಚ್ಚೆ ಹಿಡಿಯುವ ಮುದ್ದು ಮಗುವಿನ ಪಕ್ಕದಲಿ ಹಾಲು ಬಾಟಲಿ ಇಡಬೇಕು.
ಕುಕ್ಕರ್ ಕೂಗುವಷ್ಟರಲಿ ಮಸಾಲೆ ಅರೆದು ನೆನೆಸಿದ ಹುಣಿಸೆಹಣ್ಣು ಕಿವಿಚಬೇಕು.
ಕಾವಲಿಗೆ ಎಣ್ಣೆ ಸವರಿ ಕಾಯುವಷ್ಟರಲಿ ಲಂಚ್ ಬಾಕ್ಸುಗಳ ಜೋಡಿಸಿಟ್ಟುಕೊಳ್ಳಬೇಕು.
ಇದೆಲ್ಲದರ ಮಧ್ಯೆ ಬರುವ ಗೆಳತಿಯ ಗುಡ್ ಮಾರ್ನಿಂಗ್ ಎಸ್ಸೆಮ್ಮೆಸ್ಸಿಗೊಂದು ಮಾರುತ್ತರ ಕಳಿಸಬೇಕು.
ಸಾರು ಹುಳಿಗಳು ಕುದಿಯುವುದಕೆ ಕಾಯುತ್ತ ಬಿಸಿ ಕಾಫಿ ಹೀರುವಾಗ ನ್ಯೂಸ್ ಪೇಪರಿನ ಮೊದಲೆರಡು ಪುಟವ ಓದಬೇಕು.
ಪುಟ್ಟದೆರಡು ಜಡೆಗಳಿಗೆ ಬ್ಯಾಂಡು ಹಾಕುತ್ತ, ಮಡಿಚಿದ ಕಾಲರ್ ಸರಿಮಾಡುತ್ತ ಆ ಕಿರುಗುರುಳ ತಿದ್ದಿ ಹಣೆ ಮಧ್ಯದಲಿ ಒಂದು ತಿಲಕವನಿಡಬೇಕು. ತಿರುತಿರುಗಿ ನೋಡುತ್ತ ಹೋಗುವ ಮಿನಿಯೇಚರಿಗೆ ನಗುನಗುತ್ತ ಬಾಯ್ ಹೇಳಬೇಕು.
ಸ್ನಾನ ಮುಗಿಸಿ, ಬಟ್ಟೆ ಬದಲಾಯಿಸಿ, ಜಡೆಗೆ ಕ್ಲಿಪ್ಪು ಸಿಕ್ಕಿಸುತ್ತಲೇ ಬತ್ತಿ ಸರಿಮಾಡುತ್ತ ಎಣ್ಣೆ ಸುರುವಿ ದೀಪ ಹಚ್ಚಬೇಕು. ದೀಪದುರಿಯಲ್ಲಿ ಚಣಕಾಲ ದಿಟ್ಟಿ ನಿಲ್ಲಿಸಿ ೩೮ ವರುಷಗಳ ಒಳಿತುಗಳ ನೆನೆಯುತ್ತ, ತಲೆಬಾಗಬೇಕು.
ಅಲ್ಲಲ್ಲೆ ಸುಳಿದೂ ಬೆನ್ನಲ್ಲೆ ಇರುವ ಪುಟ್ಟ ಜೀವದ ಕೆನ್ನೆ ಸವರಬೇಕು. ಡಬ್ಬಿಯ ಚೀಲಕೆ ತುಂಬುತ್ತ, ಬೆನ್ನಬ್ಯಾಗಲಿ ಫೋನು ಸಿಕ್ಕಿಸುತ್ತ, ನೋಟದಲೆ ಜೀವಸೆಳೆಯುವ, ಗೊತ್ತಾದರೆ ಅರಚುತಲೆ ಜೀವಹಿಂಡುವ ಪುಟ್ಟ ಗೊಂಬೆಯ ಕಣ್ತಪ್ಪಿಸಿ ಚಪ್ಪಲಿ ಮೆಟ್ಟಿ ಕಾಯಕದ ಗಾಡಿಯನೇರಬೇಕು.
ಹೊರಡುವ ಮೊದಲು ಅವನ ಲಂಚ್ ಬ್ಯಾಗಿಗೆ ಚಮಚ ತುಂಬಿರುವುದ ಖಾತ್ರಿ ಮಾಡಿಕೊಳ್ಳಬೇಕು. ಮಾತು ಪೋಣಿಸದೆ ಕಣ್ ಸನ್ನೆಯಲಿ ಹೊರಟಿದ್ದು ತಿಳಿಸಬೇಕು.
ಹೀಗೆಲ್ಲ ಇರಲು ಬೆಳಕಿನ ಸಮುದ್ರದ ದಂಡೆಯಲ್ಲೇ ನಿಂತ ನಾನು, ನೀರೊಳಗೆ ಬೀಳದೆ, ಮುಳುಗದೆ, ಕರಗುವ ಆಸೆಯ ಹೊತ್ತು ಕಾಯುತಲೆ ಇರಬೇಕು. ಕರಗಬಾರದು ಅಲ್ಲವೇ? ನೀವೇ ಹೇಳಿ….
ಬೆಳಕು ಹೊರಗೆ ಬಾನಿನಲ್ಲಿ, ಭುವಿಯಲ್ಲಿ, ಗಾಳಿಯಲ್ಲಿ, ನೋಡಿದಲ್ಲಿ. "ನೋಡಿ"ದಲ್ಲಿ ಮಾತ್ರ. "ಕಂಡವರಿಗಷ್ಟೆ.. ಕಂಡವರಿಗಲ್ಲ"..ಎಂದ ಬೇಂದ್ರೆ ಅಜ್ಜನ "ಬೆಳಕನ್ನ ಒಳಗೆ ಕರೆಯುವ" ಹಾಡು ಹಸೆಯ ಕಲಿಯಬೇಕು. ಹೀಗಲ್ಲದೆ ಬಾನ ಬೆಳದಿಂಗಳು ಒಳಗಿಳಿಯುವುದೆಂತು?! ಮುಂದೊಮ್ಮೆ , “ನಿಮ್ಮಿಂದಲೇ ಬಂದವರು ನಾವು, ನಿಮ್ಮವರೆ ನಾವು. ಆದರೆ ನೀವೇ ಅಲ್ಲ, ನಮ್ಮ ನಾಳೆಗಳು ನಿಮ್ಮವಲ್ಲ” ಎಂಬಂತೆ ಸುತ್ತ ನೆರೆದವರು ಅವರವರ ಹಾದಿಯ ಹಿಡಿವಾಗ, ಜಗುಲಿಯಲಿ ನಿಂತು ಕೈಬೀಸಿ ಕಳಿಸುವಾಗ ಈ ಸೊಲ್ಲು ಜೊತೆಗುಳಿಯಬಹುದು. ಪುಟಿಪುಟಿವ ನಾಳೆಗಳ ಹಂಬಲು ಇಳಿದು, ಇಂದಿಗಿಂದಿನ ಬದುಕು ಎಂದು ನಾವೆಯದು ಹೊಯ್ದಾಡುವಾಗ ಸರ್ವಋತು ಬಂದರಿನ ಸಿಗ್ನಲ್ಲು ಮಿಂಚಬಹುದು.
ಭರಿಸುವುದಕೆ ತಕ್ಕ ಮನಸ್ಥಿತಿಗೇರದ ಹೊರತು ಬಿಟ್ಟು ಹೋಗುವುದಾದರೂ ಹ್ಯಾಗೆ, ಯಾವ ಬೆಳಕೇ ಕರೆದು ತೋರಿದರೂ ಹೊರಟು ಬಿಡುವುದು ಹೇಗೆ? ಇದು ಅವಳ ಹಾಡು. ಇವಳ ಪಾಡು. ಅವನ ಜಾಡು ಬೇರೆಯೇ. ಬೆಳಕು ಮಿಂಚಿದರೆ ಹೊರಡಬಹುದು. ಎಲ್ಲವನ್ನೂ ಇದ್ದಲ್ಲಿಯೇ ಬಿಟ್ಟು. ಹಳಹಳಿಕೆಯೆನ್ನದಿರಿ. ನನ್ನ ನಿಮ್ಮ ಕಡುವಾಸ್ತವ ಇದು. ಇವಳು ಅವನಲ್ಲ. ಇವಳು ಬಯಸಿದರೆ ಅವನಾಗಬಹುದಾದರೂ, ಅವನೆಂದಿಗೂ ಇವಳಾಗಲಾರ. ಅದು ಅವನ ಮಿತಿ.
ಮಳೆಯೇ ಸುರಿಯುವುದು ನಿಜವೆಂದಾದರೆ, ಕೊಡೆಯಿಲ್ಲ, ಆಸರೆಯಿಲ್ಲವೆಂದಾದರೆ ಸುರಿವ ನೀರಲಿ ಕಾಲಾಡುತ್ತ ಹಾಡುಗುನುಗುತ್ತ ಹೋಗುವುದು - ಬಯ್ಯುತ್ತ ಬೇಸರಿಸುತ್ತ ಮಳೆ ನಿಲ್ಲುವವರೆಗೂ ಪರಿತಪಿಸುತ್ತ ಇರುವುದಕ್ಕಿಂತ ಒಳ್ಳೆಯದು ಎಂಬುದು ನನ್ನ ಭಾವನೆ. ಮನೆ ಸೇರಿದ ಮೇಲೆ ಬೆಚ್ಚನೆಯ ಬಟ್ಟೆಯ ಧರಿಸಿ ಕಾಫಿ ಕುಡಿವಾಗ ಪ್ಯಾರಸಿಟಮೋಲೊಂದನ್ನು ಮರೆಯದೆ ನುಂಗಬೇಕಷ್ಟೆ.

ಬೆಳಕು ಏಕೆ ಕತ್ತಲನ್ನ ಸೊಗಯಿಸುತ್ತದೆ ಎಂದು ಈಗ ಈ ತಿಂಗಳ ಹೊನಲಲ್ಲಿ ಮೀಯುವಾಗ ಅರ್ಥವಾಯಿತು. ಎಲ್ಲ ಕಹಿಗಳ ಸೋಸಿ ಬರುವ ಕಡು ನಿಜದಲ್ಲಿ ಅನಿಸುತ್ತದೆ. ಇದಿಷ್ಟೇ ಅಂದುಕೊಂಡಿರುತ್ತೇವೆ. ಅಲ್ಲ ಅದಲ್ಲ. " ಸಾವ್ ಗಾಳಿ ತೂರಲ್ ಅರಿವಪ್ಪುದಯ್...! ಆ ಜೊಳ್ಳೆ ಗಟ್ಟಿ. ನಾವು ಗಟ್ಟಿಯೆಂದರಿತುದೆಲ್ಲಂ ಜೊಳ್ಳು..!!" ಎಂದು ಕುವೆಂಪುರವರ ವಾಲಿಯೆಂದ ಹಾಗೆ. “ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ” ಎಂದ ನರಸಿಂಹಸ್ವಾಮಿಯವರೂ, “ಹೊರಗಿನ ಸಡಗರ ಮುಗಿದಂದು ಬುದ್ಧಿ ಕಳೆಯೇರುವುದು” ಎಂದ ತಿಮ್ಮ ಗುರುವೂ ಒಟ್ಟೊಟ್ಟಿಗೆ ನೆನಪಾಗುತ್ತಾರೆ. ಬದುಕು ಗರಿಗರಿಯಾಗಿ ಇಡಿಯಾಗಿ ನನಸಾಗಿಯೆ ಇರಲಿ. ಒಳಗಿನ ಹಾದಿಗೆ ಮಾತ್ರ ಕನಸು ಕೈಮರವಾಗಲಿ.

ಹಿರಿದೊಂದಿದೆ ನಾನು ಕಿರಿಯಳು, ಎಂಬಲ್ಲಿ ದ್ವೈತವೂ, ಆ ಹಿರಿಯದರ ಬಿಂದು ನಾನೆಂಬ ಅದ್ವೈತವೂ ಅರಿವಾಗಲು ಬಿಟ್ಟು ಹೊರಡಲೇಬೇಕೆಂದಿಲ್ಲ. ಹೊರಡುವವರ ಕಟ್ಟಿ ಹಿಡಿಯಲು ಸಲ್ಲ. ಮೀರುವುದಕೆ ಹೊರಟವರು ಒಳಗೊಳ್ಳುವುದು ಕಲಿಯಬೇಕು. ಎಲ್ಲವೂ ಗೊತ್ತಿರುವುದಿಲ್ಲ ಎಂಬುದು ಮೊದಲು ಗೊತ್ತಿರಬೇಕು.
ಇಷ್ಟೆಲ್ಲ ಗಳುಹಿದ ಮೇಲು ಹೊರಗೆ ಮಾತ್ರ ಹಾಲ್ ಬೆಳುದಿಂಗಳು. ತನ್ನ ಪಾಡಿಗೆ ತಾನು. ಎಲ್ಲವನ್ನು ಭರಿಸಿ ನಡೆವ, ಬಿಟ್ಟು ಕೊಟ್ಟು ಒಳಗೊಳ್ಳುವ ಅವಳ ಹಾಗೆ. ಇವಳ ಹಾಗೆ. ಅದಕ್ಕೇ ಹೇಳಿದ್ದು ಅವಳೇ ಆಗಿದ್ದಿದ್ದರೆ ರಾತ್ರಿಯಲಿ, ಮಲಗಿದವರ ಬಿಟ್ಟು ಎದ್ದು ಹೋಗುತ್ತಿರಲಿಲ್ಲ. ಆಸೆಯೇ ದುಃಖಕ್ಕೆ ಮೂಲವೆಂದು ಗೊತ್ತಿದ್ದೂ ಆಸೆ ಪಡದಿರುತ್ತಿರಲಿಲ್ಲ. ಅವನಿಗಾದರೋ ಕಡುಕಷ್ಟ ತಿಳಿಸಿ ಹೇಳಲು. ಸಂಘಕ್ಕೆ ಬಂದವರೆಲ್ಲ ಜಾಸ್ತಿ ಗಂಡಸರು. ಭಿಕ್ಕುಣಿ ಸಂಘ ಸೇರದೆಯೇ ಬೆಳಕ ಹೊದ್ದವಳು. ಮಿಕ್ಕಿ ಮೀರಿ ಹೋಗುವವನ ಬಿಟ್ಟು ಕೊಟ್ಟವಳು. ಮೀರದೆಯೆ ಒಳಗೊಂಡವಳು.

ಈ ಇಂಥ ಇವಳನ್ನೂ ಹಣಿಯುವ ಮೃಗತೃಷೆಯೊಂದಿದೆ ಸುತ್ತಲೂ. ಶತಮಾನಗಳಿಂದ ಮುಸುಕಿನ ಮರೆಯಲ್ಲೆ ಹಿಂಜರಿಕೆಯಲ್ಲಿ ಆಕ್ರಮಿಸುತ್ತಿದ್ದಿದ್ದು ಈಗದೇಕೋ ಏಕಾಏಕಿ, ನೇರಾನೇರ, ಸರ್ವವ್ಯಾಪಿ...ಹಾವಳಿಗೆ ತೊಡಗಿದೆ.ಉಕ್ಕುವ ಇವಳ ಚೈತನ್ಯವ ದಕ್ಕಿಸಿಕೊಳ್ಳುವುದಿರಲಿ ನೋಡಲೂ ಕಣ್ಣು ಕೋರೈಸುತ್ತದೆ. ಅದಕೆಂದೇ ಕನ್ನಡಕ ಹಾಕಿದ ಕಾಮೋತ್ಕರ್ಷದ ಅಟ್ಟಹಾಸ. ಇವಳನ್ನ ಇವಳ ಮೂಲದಲ್ಲಿಯೇ ಕತ್ತರಿಸಬೇಕೆನ್ನುವ, ದೇಹದಲ್ಲೇ ಉಂಡು ತೀರಿಸುವ ಆಶೆಯ ಪಾಶಗಳ ಬಿಗಿದವರ ಕಾಲಮಾನದಲ್ಲಿದ್ದೇವೆ. ದೊಡ್ಡವಳ ಮುಂದೆ ಮಂಡಿಯೂರಬೇಕಾದೀತು.ಮಗುವಾದರೆ ಒಳಿತು. ಒಪ್ಪದಿದ್ದರೂ ಬಗ್ಗಿಸಬಹುದು. ತಗ್ಗದಿದ್ದರೂ ಜಗ್ಗಬಹುದು.
ಹೊಸಕುವ ಕಾಲಿಗೆ ಹೂವೇನು ಚಿಗುರೇನು?! ಒಣ ತರಗೆಲೆಯನ್ನೂ ಪುಡಿಗಟ್ಟಿಸಿ ನಡೆಯುವ ಮದೋನ್ಮತ್ತ ಗುಂಪಿಗೆ ಜೀವನ್ಮುಖತೆಯ ಹಾಡು ಕೇಳಬಹುದೆ?!
ಹೂಮನದ ಮಿಡಿತ ಅರಿಯಬಹುದೆ?!
ಕಾಲಕಾಲಕ್ಕೆ ಅವಳಿಂದ ಇವಳಿಗೆ ಬನಿಯಿಳಿದ ತಿಳುವಳಿಕೆಗೆ ಹೊಸ ಸೊಲ್ಲು ಸೇರಿಸಬೇಕಾದ ಸಂಧಿಕಾಲ ಇದು,
 ಬಗ್ಗಿನಡೆದದ್ದು ಮುಗಿಯಿತು. ಎಚ್ಚರದಲಿ ನಡೆ. ಕನಸು ಇರಲಿ ಒಳಗೆ. ಸಮತೆಯ ಬಾವುಟ ಹಾರಿಸುವಾಗ ಇರಲಿ ಹದ್ದಿನ ಕಣ್ಣು ಸುತ್ತೆಡೆ. ಹಾಡಿನ ಸೊಲ್ಲು ಕಲಿತೆ ಸರಿ, ಕರಾಟೆ ನಿಲುವು ಕಲಿ. ಒಳಗಿನ ಬೆಳಕಿಗೆ ತೆರೆದುಕೋ. ಹೊರಗಿನ ಕತ್ತಲಲಿ ನಿನ್ನದೇ ಆತ್ಮರಕ್ಷಣೆಯ ಟಾರ್ಚು ಹೊತ್ತಿಸು. ತಮ್ಮನಿಗೆ,ಅಣ್ಣನಿಗೆ ಗೆಳೆಯನಿಗೆ ಅವನ ಜಾಗವನ್ನಿಷ್ಟು ತೋರಿಸು. ಪಶುಗಳಿಗೆ ಪಾಠ ಬೇಡ. ದಂಡನೆಯೂ ಕ್ರಮವೆ ಎಂಬುದನು ಮನಗೊಳ್ಳುವ ಕಾಲದಲಿ ಮೃದುವಾಗದೆ ಗಟ್ಟಿ ಇರು. ಬಗೆಯುವ ಕಣ್ಗಳಿಗೆ ಬಿರುನೋಟ ಬೀರದೆಯೆ ಮರೆತುಬಿಡು. ನಿನ್ನ ರೇಖೆಯ ದಾಟಿ ಬರುವವನ ಸುಟ್ಟು ಬಿಡು. ಹಾಡು ಉಲಿಯುವ ಬಾಯಿಗೆ ಕಿರುಚಿ ಕೂಗಲು ಬರುವುದ ಮರೆಯದಿರು. ಬಂಡೆಗೆ ತಲೆ ಚಚ್ಚದಿರುವ ಎಚ್ಚರದ ಜೊತೆಗೆ, ತಿರುಗಿಬೀಳುವ ಭಂಡತನವನ್ನು ಜೇಬಲ್ಲಿಯೇ ಇಟ್ಟಿರು. ಮನೆ ಮತ್ತು ಹೊರಗೆ ಎಂಬ ಗೆರೆಯಿರದ ಈ ಸುಳಿಯ ಬಗ್ಗೆ ಹುಷಾರಿನಿಂದಿರು, ಕ್ರೌರ್ಯ ಬಯಲಾಗಿಸುವ ಧೈರ್ಯದಿಂದಿರು. ಮೆಲುವಾದರು ಇರಲಿ ದನಿಯೆತ್ತುವ ಸ್ಥೈರ್ಯ ಹೊಂದಿರು. ಈ ಎಲ್ಲ ಜ್ಞಾನ ಗುಳಿಗೆಗಳ ಜೊತೆಗೆ ಹೆಲ್ಪ್ ಲೈನ್ ನಂಬರ್ ನೆನಪಿಟ್ಟುಕೊಂಡಿರು.
ಬೆಳಕಿದ್ದರೆ ಮಾತ್ರ ಕತ್ತಲ ಸೊಗಸು ಅರಿವಾಗುವುದು. ಕಡುನೀಲಿ ಬಾನಂಗಳಕೆ ಚುಕ್ಕಿಗಳ ನೆರವು.
ಕತ್ತಲೆಯನೆ ಹೊದ್ದು ಕತ್ತಲನೆ ಉಂಡು ಕತ್ತಲನೆ ಹಂಚುವವರು ಬೆಳಕ ಸಹಿಸುವುದಿಲ್ಲ. ಈ ಎಚ್ಚರದಲ್ಲಿ ಕನಸು ಕಾಣುತಿರು. ಮಿತಿಗಳ ಆಚೆಗಿನ ಸಾಧ್ಯತೆಗಳಲ್ಲಿ ಈಜುತಿರು. ನೀನು ಎರಡನೆಯವಳೆಂದವರ ಮಾತ ನಗುತ ಒಪ್ಪುತ್ತಲೆ, ನೀನೆ ಮೊದಲೆನ್ನುವುದ ಮರೆಯದಿರು. ಅದನೆ ಮಾತೊಡೆದು ಹೇಳದಿರು. ದೇವಿಯಾಗುವುದು ಬೇಡ. ದಾಸಿ ಬೇಡವೆ ಬೇಡ. ಮೊದಲಿಗನು ತಾನೆಂದವನ ಬೆನ್ನಾಸರೆಗೆ ಬೀಳದೆ ನಿನ್ನ ದಾರಿಯಲಿ ನೀನು ನಡೆಯುತಿರು. ನಿನ್ನ ಮಡಿಲ ಮಕ್ಕಳಿಗೂ ಈ ಮಾತ ಕಲಿಸುತಿರು. ಸಾಧ್ಯವಾದರೆ ಸ್ಥಾನಗಳ ಗೆರೆ ಅಳಿಸಿಬಿಡು. ನಾವು ಮೀರಬಲ್ಲ ನಮ್ಮ ಮಿತಿಯ ನಮಗೆ ಅರಿವಾಗುವ ಹಾಗೆ ಮಾಡಿದ ಅವನಿಗೆ ನಮಿಸಬೇಕು. ಹೌದು. ಹಿಂಸೆ ಕೊಟ್ಟವನಿಗೆ ಹಿಡಿದು ತಪರಾಕಿ ತಟ್ಟುವ ಮೊದಲು ನಮಿಸಬೇಕು. 
ಅದು ಮೀರುವ ಹಾದಿಯ ಮೊದಲ ಹೆಜ್ಜೆ.


P.S: Credits:
ಎಂಥ ಚೆಂದ ಬೆಳದಿಂಗಳು, ಜಗದ ಜನಕೆ ಮಂಗಳ - ಕವಿತೆಯ ಸೊಲ್ಲು ಎಸ್.ವಿ ಪರಮೇಶ್ವರ ಭಟ್ಟರದು.
ನಮ್ಮಿಂದಲೇ ಬಂದವರು ಆದರೆ ನಾವೇ ಅಲ್ಲ - ಗಿಬ್ರಾನನ "ಚಿಲ್ಡ್ರನ್" ಪದ್ಯದ ಭಾವ-ಸಾರ.
ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ - ಕೆ.ಎಸ್.ನ ಅವರ ಕವಿತೆ ಸಾಲು. 

Saturday, January 24, 2015

ಕೆ.ಎಸ್.ನ ನುಡಿ ನಮನ

ನಾನೊಬ್ಬ ಅಕೆಡೆಮಿಕ್ ಅಲ್ಲದ ಸಾಮಾನ್ಯ ಕನ್ನಡ ಓದುಗಳು. ಕಾವ್ಯ, ಕವಿತೆ ಇವು ನನ್ನಿಷ್ಟದ ಆಯ್ಕೆ.
ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಗಳು ನನ್ನ ಬಾಳಿನುದ್ದಕ್ಕೂ ಒದಗಿದ ಕೈಯಾನಿಕೆಗಳು, ತುಂಬ ನೊಂದು ನಿಂತಾಗ ಸಾವರಿಸಿಕೊಳ್ಳಲು ಸಹಾಯ ಮಾಡಿದ ಮಿನುಗುಚುಕ್ಕಿಗಳು.
ಹಾಗಾಗಿ ಕೆ.ಎಸ್.ನರಸಿಂಹಸ್ವಾಮಿ ನನ್ನ ಪಾಲಿಗೆ "ಪ್ರೇಮಕವಿ" ಅಲ್ಲ. ಅವರು ಒಲವಿನ ಕವಿ. ಜೀವನಪ್ರೀತಿಯ ಕವಿ.
ನವಿರಾದ ಪ್ರೇಮಗೀತೆಗಳು, ದಾಂಪತ್ಯಗೀತೆಗಳು ಎಂದು ಕರೆಸಿಕೊಂಡು ಮನೆಹಾಡುಗಳಾದ ಅವರ ಕೆಲವು ಕವಿತೆಗಳನ್ನ ಕೇಳಿದವರಿಗೆ ಮಾತ್ರ ಅವರು ಪ್ರೇಮಕವಿ ಎನ್ನಿಸುವುದು ಸಹಜವಾದರೂ, ಅವರ ಮಾಗಿದ ಜೀವನದೃಷ್ಟಿ ತುಂಬಿದ ಅವರ ಎಲ್ಲ ಕವಿತೆಗಳನ್ನು ಓದುತ್ತ ಹೋದರೆ ಬದುಕಿನೊಡನೆ ಅವರ ಸೃಜನಶೀಲ ಅನುಸಂಧಾನ ಥಟ್ಟನೆ ಓದುವವರ ಅರಿವಿಗೆ ಬರುತ್ತದೆ.
ಇವರ ಕವಿತೆಗಳ ಗುಣವಿಶೇಷವೆಂದರೆ ಆಡಂಬರವಿಲ್ಲದ ಸರಳ ಭಾವಸ್ರೋತ.
ಎಲ್ಲ ಚಿತ್ರಗಳಾಚೆಗೆ ಇನ್ನೊಂದು ಚಿತ್ರವಿರುತ್ತದೆ, ಇರಬಹುದು, ಇರಬೇಕು.. ಅದನ್ನ ನೋಡಲಿಕ್ಕೆ ನಮಗೆ ಮನಸು ಬೇಕು. ಕಣ್ಣು ತೆರೆದಿರಬೇಕು ಎಂದು ಬರೆದವರು ಕೆ.ಎಸ್.ನ. ಜೀವನಾನುಭವದ ರಸಪಾಕ ಅವರ ಕವಿತೆಗಳು ಎನ್ನುವುದು ನನ್ನ ಭಾವನೆ.
ಬರಿ ನನ್ನ ಮಾತುಗಳು ಯಾಕೆ. ಅವರ ಕಿರಿಯ ಕವಿಗೆ ಎಂಬ ಕವಿತೆಯಿಂದ ಈ ಸಾಲು ಓದಿ.
ಅಗ್ಗಿಷ್ಟಿಕೆಯ ಕೆಂಡ ಹೊತ್ತಿಕೊಳ್ಳುವ ತನಕ
ಒಲೆಯ ಮೇಗಡೆ ಪಾತ್ರೆ ಇರಿಸಬೇಡ.
ಒಂದೆರಡು ಹೂಗಳನು ಗಿಡದ ಮೇಲೆಯೆ ಬಿಟ್ಟು
ಉಳಿದವನು ಕಿತ್ತುಕೋ ಎನುವೆ ನಾನು;
ಕವಿತೆಗಸ್ಪಷ್ಟತೆಯು ಒಂದು ಚೆಲುವು.
ಇವು ಕೆ.ಎಸ್.ನ ಅವರ "ಕಿರಿಯ ಕವಿಗೆ" ಕವಿತೆಯಿಂದ ಆಯ್ದ ಸಾಲುಗಳು. ನನ್ನ ಗೆಳತಿಯೊಬ್ಬಳು ಕೆ.ಎಸ್.ನ ಅವರ ಕವಿತೆಗಳ ಬಗ್ಗೆ - ನಮ್ಮ ತಲೆಮಾರಿಗೆ ಕೆ.ಎಸ್.ನ ಬರೆದ ಎಷ್ಟೋ ಸಂಗತಿಗಳ ನೇರ ಅನುಭವ ಮತ್ತು ಸ್ಪಂದನ ಗೊತ್ತೇ ಇಲ್ಲ ಎಂದು ಬರೆದಿದ್ದಳು. ಅವರ ಸಮಗ್ರ ಸಂಕಲನವನ್ನೊಮ್ಮೆ ತಿರುವಿ ಹಾಕಿದರೆ ಅದು ಎಷ್ಟೊಂದು ನಿಜ ಎನಿಸುತ್ತದೆ. ಈಗ ಇಂಡಕ್ಷನ್ ಮತ್ತು ಗ್ಯಾಸ್ ಸ್ಟೋವಿನ ಕಾಲದ ನಾವು ಮತ್ತು ನಮ್ಮ ಮಕ್ಕಳಿಗೆ ಅಗ್ಗಿಷ್ಟಿಕೆಗಳ ಬಗ್ಗೆ ತಿಳಿಯ ಹೇಳುವುದು ಮತ್ತು ರಿಲೇಟ್ ಮಾಡಿಸುವುದು ಕಷ್ಟ.
ಆದರೆ ಯಾವ ಕಾಲಕ್ಕೂ ಸಲ್ಲುವ ಒಂದು ಸತ್ಯವನ್ನ ಕೆ.ಎಸ್.ಎನ್ ಅಕ್ಷರವಾಗಿಸಿದ್ದಾರೆ ಅವರ ಕವಿತೆಗಳಲ್ಲಿ. ಕೆಂಡದ ಅಗ್ಗಿಷ್ಟಿಕೆಗಳ(ಒಲೆಯ) ಮೇಲೆ ಅಡಿಗೆಗೆ ಪಾತ್ರೆ ಇರಿಸಬೇಕಿದ್ದರೆ ಅದರೊಳಗೆ ಬೆಂಕಿ ಚೆನ್ನಾಗಿ ಹೊತ್ತಿಕೊಂಡಿರಬೇಕು. ಇಲ್ಲವಾದರೆ ಹೊತ್ತಿಕೊಳ್ಳುವುದಕ್ಕೆ ಮುಂಚಿನ ಹೊಗೆ ವಾಸನೆಯು ಮಾಡಿದಡುಗೆಯ ರುಚಿ ಕೆಡಿಸುತ್ತದೆ. ಕಾದದ್ದು ಹೊಳೆಯುವುದು, ಪಕ್ವವಾಗಿದ್ದು ರುಚಿಯಾಗುವುದು ಎಂಬ ಭಾವವನ್ನು ಕೆ.ಎಸ್.ನ ಅಂದಿನ ಜನಜೀವನದ ಸಂಗತಿಯಾಗಿ ಇಲ್ಲಿ ಭಾವಗೀತೆಯಾಗಿ ಉದಾಹರಿಸಿದ್ದಾರೆ. ಇದು ಅವರ ಕವಿತೆಗಳ ಗುಣವೂ ಹೌದು.
ಒಂದೆರಡು ಹೂವನು ಗಿಡದ ಮೇಲೆಯೆ ಬಿಡುವ ಜೀವನಾನುಭವ, ರಸದೃಷ್ಟಿ, ಮುಂದೆ ಬರುವುದಕ್ಕೆ ಕೊಡಮಾಡುವ ಮನಸ್ಸು, ಪರಾಗಸ್ಪರ್ಷಕ್ಕೆ ಮುಂದುವರಿಕೆಗೆ ಹೂವುಳಿಯಲಿ ಎಂಬ ವೈಚಾರಿಕ ನಿಲುವು ಅವರ ಕವಿತೆಗಳ ವಿಶೇಷತೆ ಎನಿಸುತ್ತದೆ ನನಗೆ. ಅದನ್ನೇ ಅವರು ಕಿರಿಯ ಕವಿಗಳಿಗೆ ಕಿವಿಮಾತಾಗಿ ಹೇಳಿದ್ದಾರೆ.
ಕಾಲಕಾಲಕ್ಕೆ ಕೆ.ಎಸ್.ನ ಅವರಲ್ಲಿದ್ದ ಕವಿ ಬದಲಾದರು ಎಂದಿರುವರು ಹಿರಿಯರು, ಸಹೃದಯರು ಮತ್ತು ಓದುಪ್ರೀತಿಯ ಹಲವರು. ಒಟ್ಟಿಗೇ ಅವರ ಸಮಗ್ರವೋದಿದರೆ ಮೊದ ಮೊದಲ ಕವಿತೆಗೇ ಕಣ್ಣು ಹನಿಯುತ್ತದೆ. ಯುವ ಕವಿಯ ಒಳಗಿನ ಭಾವದ ಗಾಢತೆ... ಕೊನೆ ಕೊನೆಯ ಕವಿತೆಯವರೆಗೂ ಹೇಗೆ ಬಂತು, ಕಣ್ಣು ಕಾಣುವುದಿಲ್ಲ ಎಂಬ ಚಿಂತೆ ನನಗೆ ಎನ್ನುವ ಮಾಗಿದ ಕವಿಯ ಇಳಿ ಸಂಜೆಯ ಹಾಡುಗಳಲ್ಲಿ ಕವಿತೆಯೇ ಹೇಗೆ ದೃಶ್ಯ ಕಾಣಿಸಿತು ಎಂಬಲ್ಲಿಗೆ ಆ ಮೊದಮೊದಲ ಕವಿತೆಗಳಲ್ಲಿದ್ದ ಒಲವು ಚೆಲುವಿನ ಜೀವನದೃಷ್ಟಿ ಅವರ ಕಾವ್ಯ ಕೃಷಿಯುದ್ದಕ್ಕೂ ಬದಲಾದ ಕಾಲ, ಧರ್ಮ, ಮತ್ತು ಪೀರ್ ಪ್ರೆಷರುಗಳಲ್ಲೂ ಹೇಗೆ ಮತ್ತಷ್ಟು ಅರಳುತ್ತ ವಿಸ್ತರಿಸುತ್ತ ಹೋಯಿತು ಎಂಬುದು ಅರ್ಥವಾಗುತ್ತದೆ.
ಅವರ ಕೊನೆಯ ಸಂಕಲನ ದೀಪಸಾಲಿನ ನಡುವೆಯಲ್ಲಿ "ಮಧುಗಿರಿಯಲ್ಲಿ ಕಂಡಾಗ" ಕವಿತೆಯ ಈ ಸಾಲುಗಳು ಅವರ ಒಲವಿನ ಸಾಕ್ಷಾತ್ಕಾರಕ್ಕೆ ಪ್ರಭಾವಳಿಯಾಗಿವೆ.
ಒಲವು ಬರುವುದೆ ಹೀಗೆ; ಮೊದಲು ಸುಂಟರಗಾಳಿ,
ಬಳಿಕ ಪರಿಮಳಭರಿತ ತಂಪಿನೆಲರು;
ಒಲವು ಮುಟ್ಟಿತು ನನ್ನ, ನಿನ್ನ ನೋಡಿದೆ ನಾನು
ಗಾಳಿಗಾರುವುದಿಲ್ಲ ಒಲವ ಸೊಡರು.
ಒಲವಿನ ಹಾಡು ಹಾಡುತ್ತ ನೊಂದ ನೋವನ್ನ ನೇವರಿಸುವ ಕವಿಯು, ಚೌಕಟ್ಟಿನಾಚೆಗಿನ ಚಿತ್ರದ ಬಗ್ಗೆ ಮತ್ತೆ ಮತ್ತೆ ಬರೆದಿದ್ದಾರೆ. ಎಲ್ಲ ಚಿತ್ರಗಳಾಚೆಗಿನ್ನೊಂದು ಚಿತ್ರವಿರುವುದನ್ನ ಸಾಲು ಸಾಲುಗಳಲ್ಲಿ ಕಂಡರಿಸಿದ್ದಾರೆ.
ಮಾತು ಜ್ಯೋತಿರ್ಲಿಂಗವಾಗಿ ಹೊಳೆಯಿತು ನನಗೆ,
ಕಟ್ಟು ಹಾಕಿದ ಪಟವ ನಾನು ಕಂಡೆ;
ಚೌಕಟ್ಟಿನಾಚೆಗೂ ಅರ್ಥವಿಹುದೆನ್ನುವರು,
ಹಿಡಿತಕ್ಕೆ ಸಿಕ್ಕಿತ್ತು ನನ್ನ ಮಾತು.
-ಕವಿತೆಯಾಯಿತು ನನಗೆ ನನ್ನ ಮಾತು.
ತನ್ನ ಅನುಭವಗಳನ್ನ ಮಾತಿಗೆ ಮೀರಿದ ದನಿಯಲ್ಲಿ ಕಟ್ಟಿ ಕೊಡುವ ಈ ಕವಿಯ ಪ್ರತಿಮೆಗಳು ಒಂದಕ್ಕಿಂತ ಒಂದು ಸೊಗಸಾಗಿವೆ. ಅವರ ಅನುಭವಗಳ ಮೂಲಕ ಕಲಿತದ್ದನ್ನ ಓದುಗರೆದೆಗೆ ನೇರ ದಾಟಿಸುವ ಈ ಪರಿಗೆ ಮಾರುಹೋಗದವರುಂಟೆ?!
ನಮಗೆ ಆದದ್ದಷ್ಟೆ ಅನುಭವವೆಂದು ತಿಳಿಯುವುದು
ದಾರವಿಲ್ಲದ, ಕಣ್ಣೆ ಇರದ ಸೂಜಿಯ ಹಾಗೆ.
ಇವರ ಪ್ರಯೋಗ ಸರಳ ಸಹಜ ಕನ್ನಡವಷ್ಟೇ ಅಲ್ಲ! ಗಹನ ಕನ್ನಡವೂ. ಅವರೆ ಹಿಂದೊಮ್ಮೆ ಬರೆದ ಹಾಗೆ..
ಕನ್ನಡ ಮಾಧ್ಯಮವಾದರೆ ಸಾಲದು ಕೇವಲ ಮಕ್ಕಳಿಗೆ, ಮೊದಲಾಗಲಿ ಕವಿಗಳಿಗೆ!
ದೀಪ ಸಾಲಿನ ನಡುವೆ ಸಂಕಲನದ - "ಕೆಲವು ಅನುಭವ ಹೀಗೆ" ಕವಿತೆಯ ಒಂದೆರಡು ಸಾಲೋದಿ..:
ತಿಳುವಳಿಕೆಗಿಂತ ತಿಳಿಯದೆ ಇರುವುದೆ ಲೇಸು,
ಕಾದಿಹುದು ಬಲುಹಿಂದಿನನುಭವದ ಸೊಗಸು,
ಸೂರ್ಯೋದಯದ ಬಳಿಕ ಚಂದ್ರೋದಯ!
"ಕಾದಿಹುದು" ಎಂಬುದು ಕಾಯುತ್ತಿರುವುದು, ಪೊರೆಯುತ್ತಿರುವುದು ಎಂಬ ಭಾವದಲ್ಲಿ ಬಂದಿದೆ. ಈ ಸೊಗಸು, ಈ ಹೊಳವು ಮತ್ತೆ ಮತ್ತೆ ಓದಿಯೇ ದಕ್ಕುವುದು.
ಇರುವಂತಿಗೆ ಸಂಕಲನದ "ಸಣ್ಣ ಸಂಗತಿ" ಎಂಬ ಕವಿತೆಯಲ್ಲಿ ಆಗಷ್ಟೇ ಮಳೆ ಬಂದು ನಿಂತು ಇನ್ನೂ ಸೂರಹನಿ ಬೀಳುತ್ತಿರುವ ತಂಪು ರಾತ್ರಿಯಲಿ ತಾಯಿ ಹೇಗೆ ತನ್ನ ನಿದ್ದೆಯ ನಡುವೆಯೂ ಒಂದು ತಾಯೆಚ್ಚರದಲ್ಲಿ ಮಗುವಿನ ಹೊದಿಕೆ ಸರಿಮಾಡುತ್ತಲೇ ಇರುವಳು ಎಂಬ ಚಿತ್ರಣವಿದೆ. ಅದರಲ್ಲಿ ಮಳೆಹನಿಗಳಿಗೆ ಅವರ ಬಳಕೆ, ನೀರ್-ತುಂಬಿಗಳು.
ಒಂದೊಂದು ಸಣ್ಣ ಆದರೆ ಮುಖ್ಯ ಸಂಗತಿಯನ್ನೂ ಹೀಗೆ ಸೊಗಸಾಗಿ ಕಂಡರಿಸುವ ಸೂಕ್ಷ್ಮ ಕುಸುರಿ ಒಬ್ಬ ಸೂಕ್ಷ್ಮ ಹೃದಯದ ಕವಿಗೆ ಮಾತ್ರ ಸಾಧ್ಯ.
ಬಹಳ ವರ್ಷಗಳ ಹಿಂದೆ ಕೆಎಸ್.ನ ಅವರು ಇದ್ದಾಗ, ಅವರನ್ನು ಮನೆಯಲ್ಲಿ ಮಾತನಾಡಿಸುವ ಒಂದು ಅವಕಾಶ ಬಂದಿತ್ತು ನನ್ಗೆ. ಅವರ ಮುಂದೆ ಮೊದಲ ಬಾರಿಗೆ ಶಾಲೆಯಲ್ಲಿ ಟೀಚರ್ ನೋಡಿ ತಬ್ಬಿಬ್ಬಾದ ಆತಂಕಮಿಶ್ರಿತ ಎಕ್ಸೈಟುಮೆಂಟಲ್ಲಿ ಕೂತು ಅವರನ್ನ ಮಾತು ಮರೆತೇ ನೋಡುತ್ತ ಇದ್ದೆ.
ಜೊತೆಗಿದ್ದ ಸ್ನೇಹಿತರ ಕೈಯಲ್ಲಿ ವಿಡಿಯೋ ಕೆಮೆರಾ ಇತ್ತು. ಒಳಮನೆಯಿಂದ ಅವರ ಕೈಹಿಡಿದು ಕರೆತಂದು ಹಾಲಲ್ಲಿ ಕೂರಿಸಿದ ವೆಂಕಮ್ಮನವರು ನಮ್ಮೊಡನೆ ಅದೂ ಇದೂ ಮಾತನಾಡುತ್ತ ಇದ್ದರು.
ಕವಿ ಅವರ ಕನ್ನಡಕದ ಕಣ್ಣಲ್ಲಿ ಎಲ್ಲರನ್ನೂ ಒಮ್ಮೆ ನೋಡಿ, ಅವರ ಕವಿತೆಯ ಯಾವುದೋ ಒಳದನಿಗೆ ಮೈಯೆಲ್ಲ ಕಿವಿಯಾಗಿ ಸುಮ್ಮನೆ ಕೂತು ಬಿಟ್ಟರು.
ಸ್ನೇಹಿತರು ಕೆಮೆರಾ ಆನ್ ಮಾಡಿದ ಕೂಡಲೇ ಲೋಕಾಭಿರಾಮವಾಗಿ ಲೌಕಿಕ ಮಾತನಾಡುತ್ತಿದ್ದ ವೆಂಕಮ್ಮನವರು ಒಂದ್ನಿಮಿಷ ಇರೀ ಅಂದು, ತಿದ್ದಿ ತೀಡಿಸಿ ಕೂತಿದ್ದ ಕೆ.ಎಸ್.ನರ ಹತ್ತಿರ ಹೋಗಿ, ತಮ್ಮ ಸೊಂಟದಲ್ಲಿ ಸಿಕ್ಕಿಸಿಟ್ಟುಕೊಂಡಿದ್ದ ಪುಟ್ಟ ಬಾಚಣಿಗೆ ಹೊರತೆಗೆದು, ಕವಿಯ ಮುಂದಲೆಯಲ್ಲಿ ಹುಡುಗಾಟವಾಡಿಕೊಂಡಿದ್ದ ಬಿಳಿಗುರುಳುಗಳನ್ನು ತೀಡಿದರು. ಹೂಂ ಈಗ ತಗೋಳಿ ಅಂದು ದೂರದಲ್ಲಿ ಸೈಡಿಗೆ ಹೋಗಿ ನಿಂತರು. ನಾನು ವೆಂಕಮ್ಮನವರನ್ನ ನೋಡುತ್ತ ನಿಂತೆ. ಈ ದಾಂಪತ್ಯ ಗೀತವು ಬಹುಶಹ ಕೆ ಎಸ್. ನ ಬರೆದ ಎಲ್ಲ ಕವಿತೆಗಳೂ ಕಿವಿಗೊಟ್ಟು ಕೇಳಿಸಿಕೊಂಡ ಹಾಗೆ ರೂಪಿತಗೊಂಡಿವೆ ಅನ್ನಿಸಿತು.
ಇಷ್ಟಲ್ಲದೆ ಅಂತರ್ಮುಖಿ ಕವಿಯ ವ್ಯಾವಹಾರಿಕತೆಯನ್ನ ಈ ಕವಿಪತ್ನಿಯು ನಿಭಾಯಿಸಿದ ಪರಿಯನ್ನು, ಕವಿಯ ಮನಃಶಾಂತಿಯನ್ನು ಕಾಪಿಟ್ಟ ಪರಿಯನ್ನು ಹತ್ತಿರದಿಂದ ಕಂಡು ಕೇಳಿದ್ದೆನೆ. ಕೆ.ಎಸ್.ನ ಅವರ ಸಂದರ್ಶನದಲ್ಲೂ ಈ ಬಗ್ಗೆ ಹೇಳಿದ್ದನ್ನ ಕೇಳಿದ್ದೆನೆ.
ಅವರ ಬಹುಚರ್ಚಿತ ಗಡಿಯಾರದಂಗಡಿಯ ಮುಂದೆ ಕವಿತೆಯ ಬಗ್ಗೆ ನನಗೆ ಅದು ಅರ್ಥವಾದ ಪರಿಯನ್ನ, ಇಲ್ಲಿ ಬರೆಯುತ್ತೇನೆ.
ಬದುಕು ನಮ್ಮ ಮುಂದೆ ನೂರೆಂಟು ಗಡಿಯಾರಗಳನ್ನಿಡುತ್ತದೆ. ಒಂದೊಂದು ಹಾದಿಗೆ ಅದರದರದೇ ಟೈಮ್ ಝೋನು..! ನನಗೆ ಆ ಕ್ಷಣಕ್ಕೆ ಸರಿಕಂಡ ಸಮಯವನ್ನ ನನ್ನ ಕೈಯಿನ ಗಡಿಯಾರಕ್ಕೆ ಹೊಂದಿಸಿಕೊಂಡೆ. ಏನೋ ಕೆಲಸ್, ಮತ್ತೇನೋ ಹಳವಂಡ. ಹೋಗಿ ಮುಗಿಸಿ ಮತ್ತೆ ಗಡಿಯಾರದಂಗಡಿಯ ಮುಂದೆ.
ಈಗ ಅವತ್ತಿನ ಕುಣಿತ ಹೆಜ್ಜೆಯಲಿಲ್ಲ. ಕಣ್ಣ ಮಿಂಚಿಗೆ ಚಾಳೀಸಿನದೇ ಹಂಬಲು. ಇವತ್ತು ಅವತ್ತಿನ ಸಮಯ ಯಾಕೋ ಸರಿಹೊಂದುತಿಲ್ಲ. ಈ ಕ್ಷಣದ ಅನುಕೂಲಕ್ಕೆ ಗಡಿಯಾರ ಹೊಂದಿಸಿಕೊಳ್ಳಬೇಕು. ಇದು ಮುಖವಾಡವಲ್ಲ. ಬದಲಾವಣೆ. ಕಾಲದ ಹಾದಿಯಲ್ಲಿ ಮುಂದೆ ಇಟ್ಟ ನೂರೆಂಟು ಸ್ಟಾಂಡರ್ಡುಗಳ(ಅಳತೆಗೋಲುಗಳ) ನಡುವೆ ನಮ ನಮಗೆ ಸರಿಕಂಡಿದನ್ನು ಆರಿಸಿಕೊಳ್ಳುತ್ತ, ಅಥವಾ ಬಿಟ್ಟು ಬಿಡುತ್ತಾ, ಹಾದಿ ಮುಂದುವರಿದಂತೆ, ಬೇರಿನ್ನೊಂದಕ್ಕೆ ಬದಲಾಗುತ್ತಾ """""" ಹೊತ್ತ ಮೂಟೆಗಳೇನು. ಹಿಡಿದ ಗಿಂಡಿಗಳೇನು.. ಹೆಜ್ಜೆ ಸಾಲಿನ ಪಯಣ ನಾರಾಯಣ.. ಅಲ್ಲವೆ ಅನ್ನಿಸಿಬಿಡುತ್ತದೆ.
ಅವರೇ ಬರೆದ ಹಾಗೆ...
ತೆರೆದ ಬಾಗಿಲು ಸಂಕಲನದ "ಋತುವೈಭವ" ಕವಿತೆಯ ಈ ಸಾಲುಗಳು ಅವರ ಕವಿತ್ವಕ್ಕೆ ಸಲ್ಲುವುದು.
ಮೃದು ವಸಂತ ಮುಗಿಯಿತೆನಲು
ಗ್ರೀಷ್ಮ ಬಂದೆನೆನುವುದು
ಗ್ರೀಷ್ಮದುರಿಯು ನಂದಿತೆನಲು
ವರ್ಷ ನುಗ್ಗಿ ಬರುವುದು
ಮಳೆಯ ಹಿಂದೆ ಶರತ್ಕಾಲ
ಬಿಳಿಯ ಹೆಜ್ಜೆಯಿಡುವುದು
ಹೇಮಂತದ ಹಿಂದೆ ಶಿಶಿರ
ಕಾಲವೀಣೆ ಮಿಡಿವುದು.
ಅವರ ಕಾವ್ಯದ ವೀಣೆ ಅನಾದಿ ಕಾಲಕ್ಕೂ ಸಲ್ಲುವ ವಾದ್ಯ. ನುಡಿಸಲು ಕಲಿತವರೆಷ್ಟೋ... ತಂತಿಯ ಬರಿದೆ ಮಿಡಿದವರೆಷ್ಟೋ.. ಮುಟ್ಟಿದರೆ ಝುಂ ಎನ್ನಿಸುವ ನಾದ ಎಂದಿಗೂ ಹೊಮ್ಮುವ ಹದಕ್ಕೆ ಅದನ್ನ ಶ್ರುತಿ ಮಾಡಿ ಹೋದ ಕವಿಗೆ:
ನನ್ನ ಹೂನಮಮನ, ನುಡಿನಮನ, ಅಡ್ಡಡ್ಡ ಉದ್ದುದ್ದ ಬಿದ್ದ ಸಾಲು ಸಾಲು ನಮನ.

ಇದೇ ಸಂದರ್ಭದಲ್ಲಿ ನಾಳೆ ೨೫ ಭಾನುವಾರ ಮಂಡ್ಯದ ಲೇಡೀಸ್ ಕಾಲೇಜಿನಲ್ಲಿ "ಅನೇಕ" ಗೆಳೆಯರ ಬಳಗ ಹೂಬುಟ್ಟಿ - ಕೆ.ಎಸ್.ನ ಕವಿತೆಗಳ ಹೊಸ ಓದು ಎನ್ನುವ ಪುಸ್ತಕ ಬಿಡುಗಡೆ, ಅವರ ಕವಿತೆಗಳ ಬಗ್ಗೆ ಸಂವಾದ, ಸಾಕ್ಷಚಿತ್ರ, ಮತ್ತು ಕವಿತಾವಾಚನ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಕೆ.ಎಸ್.ನ ಅವರ ಕೆಲಿಡೋಸ್ಕೋಪಿಕ್ ಕವಿತೆಗಳ ಇನ್ನಷ್ಟು ನೋಟ. ಅಲ್ಲೆ ಹತ್ತಿರವಿರುವವರು, ಬರಲು ಆಗುವವರು ದಯವಿಟ್ಟು ಬನ್ನಿ.


Monday, January 19, 2015

ನಿಲುವು

ನನ್ನ ನಿಲುವೇ ಬೇರೆ.
ಗುರುವೆಂದರೆ
ಗುರು ಸಾಕ್ಷ್ಯಾತ್ ಪರಬ್ರಹ್ಮ
ಎಂದು ಕಲಿತವಳು, ಬೆಳೆದವಳು
ಗುರುವೆಂದರೆ ದಾರಿಯಲ್ಲ
ಬಯಲಿಗೆ ಧುಮುಕುವುದಕ್ಕೆ

ಇರುವ ಪುಟ್ಟ ಮೆಟ್ಟುಕಲ್ಲು ಎಂಬ ಅರೆ ಅರಿವು.

ಬೆನ್ನು ಸೆಟೆದಾಗೊಮ್ಮೆ
ಕಾಲು ಸೋತಾಗೊಮ್ಮೆ
ಕತ್ತು ಮೇಲೆತ್ತಲು
ಹೊಳೆವ ಮುಗಿಲು, ಧೃವತಾರೆ
ಆಕಾಶದ ಅವಕಾಶವೇ ಎಂದಂದುಕೊಂಡವಳು!

ಆ ಗಗನಕೊ ಕರಿಗೆರೆಯಿರಬಹುದು
ಸಹಜದಲ್ಲಿ ಸಹಜ..
ಹಾಗಂತ ಅದರ ವಿಸ್ತಾರ
ಮರೆಸಲುಂಟೇ
ಇದನ್ಯಾರೋ ನಿಮ್ಮ ತಿಳುವಳಿಕೆಗೂ ಇರಲಿ
ಎಂದರೆಂದು ಅದಷ್ಟೇ ಗುರುವೆಂದು
ಭಾವಿಸಲುಂಟೇ..
ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ಬೊಗಸೆಗೆ
ಅವರವರ ಮನಸಿಗೆ
ಸಿಕ್ಕಿದ್ದು ಅವರ ಪಾಲಿನ ಪಂಚಾಮೃತ
ಹೀಗಿರಲು ಹೊಡೆದಾಟವೇಕೆ?
ಹೀಗಳಿಕೆ ಯಾಕೆ
ಇದನೆಲ್ಲ ಮಾಡಲು
ಹೆಂಗಳೆಯರ ನಾಮಭೂಷಣವೇಕೆ?

ಅಲ್ಲಿಂದಲೆ ಬಂದವರಿಗೆ
ಅಲ್ಲಿನ ಗುಂಗು ಸಹಜವಾದರೂ
ಅಲ್ಲೆ ಇರಲಾಗದು.

ಇವರ ಫೋಕಸ್ ಸರಿಯಿಲ್ಲ, ನಿಜ
ಅವರ ಎಕ್ಸ್ ಪೋಷರ್ ಸರಿಯಿಲ್ಲವೆಂಬುದೂ ಅಷ್ಟೆ ನಿಜವಲ್ಲವೆ.
ನಾನು ಅವರೊಡನೆ ಇಲ್ಲ
ಇವರಲ್ಲಿ ಸೇರಲಾರೆ.

ನಿಲುವು ಅಂತೊಂದಿದ್ದರೆ
ಅದು ಬೇರೆ. ಇದಲ್ಲ.
ತಪ್ಪು ತಿದ್ದಿಕೊಳ್ಳುವ, ಹೊಸತನ್ನು ಕಲಿಯುವ
ಹಳೆಯ ಮನೆಯ ಜಗುಲಿಯಿಂದ
ಹೊಸ ಸೂರ್ಯೋದಯಕೆ ಮುಖವೊಡ್ಡುವ
ನಿಲುವು.
ಅಜ್ಜನ ಮಾತು ಕೇಳುವ
ಮಗುವಿನ ಆಟ ನೋಡುವ
ಅಮ್ಮನ ನಿಲುವು.
ಒಳಗೊಳ್ಳುವ ನಿಲುವು
ಹೊರಹಾಕದ ನಿಲುವು.