ತಡೆಹಿಡಿದಿಟ್ಟವು ಕೆಲವು
ಕಾಣದಂತೆ ಒರೆಸಿದವು ಹಲವು
ಮೂಡುವುದಕ್ಕೂ ಮೊದಲೆ
ಅವಡುಗಚ್ಚಿದ ಹೊಡೆತಕ್ಕೆ
ಕರಗಿಹೋದವು ಕೆಲವು
ಹರಿದು ಹೋಗಲೆಂದೇ ಸುರಿದ ಅಬ್ಬಿಯೇ ಬೇರೆ
ಅವ ಒರೆಸಿದ್ದೊಂದಷ್ಟು
ಎಲ್ಲರ ನೇವರಿಕೆಯಲ್ಲಿ ಒಣಗಿದವೊಂದಷ್ಟು
ಹೀಗೆ ಹಾಗೆ
ನನ್ನೊಳಗೆ ಹೊರಗೆ
ಸುಳಿದ ಸುಳಿವ ಹನಿಗಳನ್ನೆಲ್ಲ
ಅಕ್ಷರವಾಗಿಸಿದರೆ
ಅರೆ..!
ಕವಿತೆ
ಅರೆಗವಿತೆ?!!
------------------------
ಬನಿಯು ಹನಿವ
ಸಾಲುಗಳಲಿ
ಮೆತ್ತಗೆ ತೂರುವ ಬೆಳಕಬಲೆ
ಅಲ್ಲಿ ಒಳಗೆ
ಮೋಡ ಮುಸುಕಿದ
ಮನದಂಗಳದಲಿ
ಚೂರು ಬಗ್ಗಿಸಿ ಹರಿಯಿಸಿದರೆ
ಸಾಕು ಮಳೆಬಿಲ್ಲು!
ನೋಡನೋಡುತಲೆ ಕಳೆವ ದಿನದ
ಕೊನೆಗೆ ರಾತ್ರಿ
ಕತ್ತಲೆ ಅಲ್ಲು ಇಲ್ಲು ಎಲ್ಲು.
ಮಳೆಸುರಿದ ಇರುಳು ಕಳೆದು
ಬೆಳ್ಳಗೆ ಹೊಳೆದ ಬೆಳಗಿನ
ನೀಲಿಬಟ್ಟಲ ತುಂಬ ಮೊಸರು ಮೊಸರು ಮೋಡ,
ದಾರಿಯಿಡೀ ತುಂಬಿದ ಉದುರೆಲೆಗಳ
ಮೆಟ್ಟುತ್ತ ಮೇಲೆ ನೋಡಾ
ಹನಿಯಿಳಿವ ಎಲೆಗಳ ಹಿನ್ನೆಲೆಗೆ
ಘಮಗುಡುವ ಹೂಗೊಂಚಲು
ತೆಳುಪರಿಮಳವಿದು ಉಕ್ಕಿಸುವ
ಭಾವೋತ್ಕರ್ಷವದು ಗಾಢ!
--------------------------------
ಹಾವು ಹರಿದಂತೆ ಸರಿವ ದಾರಿ
ಕಾಡ ಸೆರಗಿನ ಹುಲ್ಲುಹಾವಸೆ
ಮುಳ್ಳು ಚುಚ್ಚದ ಹಾಗೆ
ಬದಿಯಲ್ಲಿ ಬೀಳದ ಹಾಗೆ
ಎಚ್ಚರದಿ
ಗಮಿಸುವ ಕನಸಿನೊಳಗಣ ಹಾದಿ
ಅವರು ಇವರು ಎಲ್ಲರೂ
ಜೊತೆಜೊತೆಗೆ ಸಾಗಿ
ಇಳಿದ ನೆಲೆಯ ಹೆಸರು ನೋಡದೆ
ವಿದಾಯದಲ್ಲಿ ನಗುವ ಹಂಚಿ
ಮುಂದೆ ಸಾಗುವ
ಲಗ್ಗೇಜು ಇರದ ಹಾದಿ
ಎಚ್ಚರದ ಹೆಜ್ಜೆ ಬೇಡುವ
ಕನಸಿನ ಹಾದಿ.
ಸ್ವಪ್ನಂ ಶರಣಂ ಗಚ್ಛಾಮಿ!
ನೋಟ್ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ
-
ʼನೋಟ್ ಬುಕ್ಕಿನ ಕಡೆಯ ಪುಟʼ ಈ ಹಾಸ್ಯಪಂಚವಿಂಶತಿಯನ್ನು ಬರೆದ ಶ್ರೀಮತಿ ಜಯಶ್ರೀ
ದೇಶಪಾಂಡೆಯವರಿಗೆ ಹಾಗು ಪ್ರಕಟಿಸಿದ ಶ್ರೀ ಅಣಕು ರಾಮನಾಥರಿಗೆ ಅಭಿನಂದನೆಗಳನ್ನು ಹಾಗು
ಧನ್ಯವಾದಗಳನ್ನು ಮ...