Tuesday, July 14, 2015

ಬದಲಾಗಲು ನಮಗೆ ಹೆದರಿಕೆ

ಬದಲಾಗಲು ನಮಗೆ ಭಯ. ಯಾಕೆಂದರೆ ಏನೆಲ್ಲ ಮಾಡಿದ ಮೇಲೂ, ಎಷ್ಟೆಲ್ಲ ಕಷ್ಟಪಟ್ಟರೂ ನಮಗೆ ನಮ್ಮ ಸುತ್ತಲ ಭವವೇ ಚೆನ್ನಾಗಿ ಗೊತ್ತಿರುವುದು.
ಅಷ್ಟೇ ಯಾಕೆ. ನಮಗೆ ನಾವಿರುವ ಸ್ಥಿತಿ ಅಂತ ಚೆನಾಗಿಲ್ಲ. ಇದೇ ಅಲ್ಟಿಮೇಟ್ ಅಲ್ಲ, ಇದು ಒಂಚೂರೂ ಚೆನಾಗೂ ಇಲ್ಲ, ನಮಗೆ ಯಾವ್ರೀತಿನೂ ಇಷ್ಟವೂ ಇಲ್ಲ ಅಂತಲೂ ಗೊತ್ತು. ಆದ್ರೆ ಇದು ಸರ್ವಕಾಲಕ್ಕೂ ಇದೇ ತರ. ಒಂದೇ ತರ.. ಯಾವುದೇ ಅನಿರೀಕ್ಷಿತಗಳಿಲ್ಲದೆ ಹಾಗೇ ಇರುತ್ತದೆ ಎಂಬ ಭರವಸೆಯೂ.
ಅದಕ್ಕಾಗಿಯೆ ನಾವು ನಮ್ಗೆ ಬೇಕೇ ಬೇಕಾದ ಕಡೆ ಒಂಚೂರು ಜರುಗಿ, ಸರಿಸಿ, ಸವರಿಸಿಕೊಂಡು ಒಂದು ಅಡ್ಜಸ್ಟ್ ಮೆಂಟಿನ ಬದಲಾವಣೆ ಬೇಕಿದ್ರೆ ಮಾಡ್ಕೊಂಡು ಇರ್ತೀವಿ. ಎಲ್ಲದೂ ಅದೇ ತರವೇ ಇರ್ಬೇಕು. ಅಂತ ಏನೂ ಬದ್ಲಾಗದ ಹಾಗೆ.. ಅದೇ ಸೂರ್ಯ ಅದೇ ಬೆಳಗು. ಅರ್ಜೆಂಟಾಗಿ ತಿರುಗುವ ಅದೇ ಗಡಿಯಾರ. ಸೆಲ್ಲು ವೀಕಾಗದ ಹಾಗೆ ನೋಡಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ.
ದೂರದಲ್ಲಿ ಎತ್ತರಕ್ಕೆ ನಿಂತ ಹಸಿರುಬೆಟ್ಟಗಳು ನಮ್ಮ ಕಣ್ಣಿಗೆ ಮನಸ್ಸಿಗೆ ಖುಶಿಕೊಡುತ್ತವೆ. ಅಚಲ. ಶಕ್ತ. ಮತ್ತು ದೃಢತೆಯ ಉಪಮೆಯಾಗಿ ನಮಗವು ತುಂಬಾ ಇಷ್ಟವಾಗುತ್ತವೆ. ಅಲ್ಲಿನ ಎತ್ತರೆತ್ತರಕ್ಕೆ ಬೆಳೆದ ದೊಡ್ ದೊಡ್ಡ ಮರಗಳನ್ನು ನೋಡಿ ಕಣ್ ಕಣ್ ಬಿಡುತ್ತೇವೆ. ಒಂದು ಡೀವಿಯೇಟಿಂಗ್ ಆಲೋಚನೆ. ಅವುಗಳನ್ನ ಇದ್ದಲ್ಲಿಂದ ಕಿತ್ತು ಬೇರೆ ಕಡೆ ನೆಡುವ ಪ್ರಯತ್ನ ಮಾಡಿದಲ್ಲಿ ಬಹಳಷ್ಟು ಮರಗಳು ಸಾಯುತ್ತವೆ. ಒಳ್ಳೆಯ ನಾಟಗಳು. ಒಳ್ಳೆಯ ಬೆಲೆ.
ನಮಗೆ ಬೆಟ್ಟದಂತೆ ಇರುವಾಸೆ. ಎತ್ತರೆತ್ತರದ ದೊಡ್ಡ ಮರಗಳ ಹಾಗೆ ಬಾಳುವಾಸೆ. ದೃಢ ಮತ್ತು ಗೌರವಯುತ ಬದುಕು ಬೇಕು ನಮಗೆ.
ಹೀಗೆಲ್ಲ ಬೆಳಗಿಡೀ ಅನಿಸುತ್ತಿರುತ್ತೆ. ರಾತ್ರಿ ಕತ್ತಲ ಮಡಿಲಲ್ಲಿ ಕುಡಿಗಣ್ಣ ದೀಪದಲ್ಲಿ ಹೊರಗಣ್ಣು ಮುಚ್ಚುವಾಗ ಮಗ್ಗುಲು ಬದಲಾಗುತ್ತದೆ. ಬ್ರಾಂಡೆಡ್ ಹಾಸಿಗೆಗಳ ಗರಿ ಮುದುರದ ಹೊದಿಕೆಗಳ ಮೇಲಿನ ಬೆಚ್ಚನೆ ನಿದ್ದೆ ಮಧ್ಯದಲ್ಲಿ ಎಬ್ಬಿಸುವ ಕನಸಿನ ಕನವರಿಕೆಯೇ ಬೇರೆ.
"ಆ ಹಾರುಹಕ್ಕಿ ಎಷ್ಟ್ ಚೆಂದ. ಖಂಡಾಂತರ ಹಾರುತ್ತದೆ. ಎಲ್ಲಿ ಬೇಕೋ ಅಲ್ಲಿ ಕೂತು ಹಾಡುತ್ತದೆ. ಇವತ್ತು ಇಲ್ಲಿ. ನಾಳೆ ಬೇರೆ ಆಕಾಶ. ಮತ್ತೆ ಇನ್ನೊಂದಿನ ಹೊರಟ ಜಾಗಕ್ಕೇ ತಿರುಗಿ ಬಂದು. ಮಧ್ಯ ಮೊಟ್ಟೆ ಮರಿ... ಆಹಾ ಹೀಗಿರಬಾರದೆ ನಾನು?!
ಅಥವಾ
ಗಾಳಿಯಾಗಬಾರದೆ ನಾನು? ಎಲ್ಲಿಂದ ಬಂದೆ ತಿಳಿಯದ ಹಾಗೆ. ಎಲ್ಲಿಗೆ ಹೊರಟೆ ಎಂದು ಕೇಳದ ಹಾಗೆ. ತನಗೆ ಬೇಕಿದ್ದ ಕಡೆಗೆ ದಿಕ್ಕು ಬದಲಾಯಿಸುವ ಹಾಗೆ...ಯಾರಿಗೂ ಯಾವ ಸಮಜಾಯಿಷಿ ಕೊಡಬೇಕಿರದ ಹಾಗೆ... ?!"
ಕನಸಿನ ರಾತ್ರಿ ಮುಗಿಯುತ್ತಲೂ ಬೆಳಕು ಚಿಮ್ಮುವ ಬೆಳಗು.  ತಕ್ಷಣ ತಿಳಿವಿನ ಬೆಳಕಿನ ಪ್ರತಿಫಲನ ಎಲ್ಲೆಲ್ಲೂ.
"ವಲಸೆ ಹಕ್ಕಿಗಳು ತಮ್ಮ ನಿಜಪಯಣಕ್ಕಿಂತ ಜಾಸ್ತಿ, ಬೇಟೆಗಾರರ ಬಾಣಗಳನ್ನು ತಪ್ಪಿಸಲು ಹಾರುತ್ತಿರುತ್ತವೆ ಎಂದು. ಅವಿಟ್ಟ ಮೊಟ್ಟೆಗಳೆಲ್ಲವೂ ಮರಿಯಾಗಲಾರವೆಂದು. ಮತ್ತೆ ಯಾರಿಗೂ ಉತ್ತರ ಕೊಡಬೇಕಿರದ ಆ ಮೋಹಕ ಗಾಳಿ...ಸುಂಟರಗಾಳಿಯಾಗಿ ಬದುಕು ನುಚ್ಚು ನೂರಾಗಬಹುದು" ಎಂದು.
ಓಹ್ ಮತ್ತೆ ಸುರಕ್ಷಾ ವಲಯದೊಳಗೆ ಗಿರಕಿಹೊಡೆಯುತ್ತಿರುತ್ತೇವೆ.

ಹೌದು. ಕನಸು ಕಾಣುತ್ತಿರುವುದೇ ಒಳ್ಳೆಯದು. ಕನಸಿನ ಬನಿ ನನಸಿಗಿಳಿಸಲು ಇನ್ನೂ ತುಂಬ ದಿನ ಇದೆ. ನಾಳೆಗಳು ತುಂಬ ಇವೆ ಎಂದು ನಂಬುತ್ತಾ.. ಹಕ್ಕಿ ಹಾರಿದ ಊರಿಗೆ ಹೋಗಲು ಪಯಣ ಇಟಿನರರಿ ತಯಾರಿಸಲು ತುಂಬ ಸಮಯ ಇರುತ್ತದೆ. ಕನಸು ದುಬಾರಿಯಲ್ಲ. ಇವತ್ತು ರಾತ್ರಿ ಮಲಗಿದ ಕೂಡಲೇ ಹತ್ತಬಹುದು ಮಾಯಾಚಾಪೆ. ಎಷ್ಟೊಂದು ಟೈಮಿದೆ!!
ಕಷ್ಟಕ್ಕೆ ಬರುವುದು ಈ ಕನಸುಗಳನ್ನ ನನಸಿನ ಬೆಟ್ಟದ ಏರು ಹತ್ತಿಸುವಾಗ. ಮೊದಲ ಸುತ್ತಿಗೇ ಏದುಸಿರು. ಮರಳಿ ಮನೆಗೆ. ದಿನ ಕೊನೆಯಾಗಿ ಇರುಳು ತಬ್ಬುವಾಗ ಕನಸು ಕಂಡರೆ ಸಾಕು. ಸಾಹಸ ಯಾಕೆ ಬೇಕು? ರಿಸ್ಕು ತಗೊಳ್ಳುವುದು ಹಣಹೂಡಿಕೆಗೆ ಮಾತ್ರ ಎಂಬ ಸೂತ್ರಕ್ಕೆ ನಾವು ಬದ್ಧ.

ಕೊನೆಗೂ...ಬದಲಾಗಲು ನಮಗೆ ಹೆದರಿಕೆ. ನಮಗೆ ಬೇಕಾದ ಹಾಗೆ ಬದಲಾಗಲು ತುಂಬ ಹೆದರಿಕೆ.
ಅಚ್ಚರಿ ಅಂದ್ರೆ.. ಬದುಕು ಬದಲಾವಣೆಗಳ ಸರಮಾಲೆ. ಬೆಳವಣಿಗೆಯ ಮೂಲ ಸ್ರೋತವೇ ಬದಲಾವಣೆ. ಆದರೆ ಬದಲಾವಣೆಯನ್ನ ನಾವಾಗಿಯೇ ಬಯಸಿ ಹೊಂದಲು ಸಿಕ್ಕಾಪಟ್ಟೆ ಭಯ.
ನನ್ನ ನಡೆಗೆ ಇನ್ಯಾರದ್ದೋ ಜವಾಬ್ದಾರಿ ಇದ್ರೆ ಅಷ್ಟೇ ಅನುಕೂಲ ಅಂತ ಬಹುಶಃ ಎಲ್ರೂ ಅಂದ್ಕೋತಾ ಇರ್ತೀವೋ ಏನೋ..

ಪಾವ್ಲೋ ಕೊಯ್ಲೋನ ಈ ಲೇಖನ ಓದಿ .. ಪ್ರಯತ್ನಿಸಿದ ಭಾವಾನುವಾದ. http://paulocoelhoblog.com/2015/04/03/afraid-to-change-2/