Thursday, March 2, 2017

ಮೌನಹೋಮದ ಸಮಿತ್ತು

ಮಾತಾಡದೇ ಇದ್ದಿದ್ದರೇ ಚೆನ್ನಾಗಿತ್ತು
ಹರಿತವಾದ ಮೌನ
ಚುಚ್ಚಿ ಗಾಯವಾಗಿ ಅಭ್ಯಾಸ,
ಈ ಸುಡು ಮಾತು
ಚುರ್ರೆನ್ನಿಸಿ ಸುಟ್ಟು
ಒಂದೇ ದಿನಕ್ಕೆ ನಂಜು ಕೀವು.

ಗೊತ್ತು
ಹೂಕಣಿವೆಯ ಹಾದಿ ದಾಟಿಯಾಗಿದೆ
ಮುಂದೆ ಮಂಜು ಶಿಖರ
ಹತ್ತಲೂ ಆಗದು
ವಾಪಸಾಗುವ ದಾರಿಯ
ತೊರೆದು ಬಹಳ ದಿನಗಳಾಗಿವೆ

ಈಗ ನೆನಪಿನೆಣ್ಣೆಯೆರೆದು
ಉರಿವ ದೀಪದ ಬೆಳಕಿಗೂ
ಉರಿ!
ಕತ್ತಲೆಯಲ್ಲೇ ಇರಿ,
ಮಾತಲ್ಲಿ ಬೇಡ.