ಬೇಸರ,ಸಂಕಟ,ಅನಾನುಕೂಲಗಳನ್ನೆಲ್ಲ
ಮೂಟೆ ಕಟ್ಟಿಟ್ಟ
ಆಹ್ಲಾದದ ಹಾದಿಯದು
ಪುಲ್ಲ ಕುಸುಮಿತ ದ್ರುಮದಲ ಶೋಭಿನೀ
ಹೊರೆಗೆಲಸದ ಕಟ್ಟೆಯಿಳಿದು
ಕಾಲು ಚೆಲ್ಲಿದ ಕೂಡಲೆ
ಮುತ್ತಿಡುವ ಆಶಾದಾಯಿನಿ
ಯಾವ ತಿರುವಲ್ಲಿ ತಿರುಗಿದೆನೋ ಗೊತ್ತಿಲ್ಲ
ಅನುಕೂಲಗಳ ಆತಂಕರಹಿತ
ಅನಾಹತ ಹೈವೇಗೆ ಬಂದಾಯಿತು
ಇಲ್ಲೇ ಸುದೂರದಿ
ನೀಲಿಗೆರೆಯ ಸುತ್ತಲ
ಹಸಿರು ಪದರದ ಹಾದಿಯ ಸಂಜೀವಿನೀ
ದೂರವೇನಿಲ್ಲ,
ಕಾಲಿಗೆ ದಕ್ಕುವುದಿಲ್ಲ,
ನಡುವೆಯಿರುವುದೀಗ
ದಾಟಿ ಹಾರಬಹುದಾದ ಕಿಟಕಿಯಲ್ಲ
ದಿನದಿನವೂ ಮೊನಚಾಗಿ ಚುಚ್ಚುವ ಕನ್ನಡಿ!
ಮುಂದೆ ಮುಂದೆ ಹೋದರೆದಾರಿ ಸಿಕ್ಕದಲ್ಲ
ಹಿಂದೆ ತಿರುಗಿ ಹೋಗಬಹುದೆ?
ಅದರ ಗುಟ್ಟು ನನಗೆ ತಿಳಿಯದಲ್ಲ..!
ಕೂತು ಯೋಚಿಸಲು ಗಡಿಬಿಡಿ
ಕೊನೆಗೆ ಷರಾ ಹೋಗಲಿಬಿಡಿ..
ಆಕಡೆ ನೋಡದಿದ್ದರಾಯಿತು
ದಾರಿ ತನ್ನ ಪಾಡಿಗೆ ತಾನು ಕನ್ನಡಿಯಲ್ಲಿರಲಿಬಿಡಿ
ಆದರೂ...
ಈಗ ಇಲ್ಲದಿದ್ದರ ಕುರಿತು
ಕೊರಗಿ ನಲುಗುವ ಮೊದಲು
ಒಂದು ಕೃತಜ್ಞತೆ ಹೇಳಬೇಕಿದೆ,
ಇಲ್ಲಿಯವರೆಗೆ ನಿಲುಕಿದ್ದಕ್ಕೆ
ಬೇಕಿತ್ತೋ ಬೇಡವೋ ಒಳಗೊಂಡಿದ್ದಕ್ಕೆ
ಕೇಳದೆಯೇ ಒಲಿದು ಬಂದದ್ದಕ್ಕೆ
ಕಣ್ಣಹನಿಯಿಳಿಯುವಾಗ ಅಂಗೈ ಹಿಡಿದದ್ದಕ್ಕೆ
ಹೆಜ್ಜೆ ಜಾರುವಾಗ, ಕೈಬೆರಳ ಬಿಗಿದು ಹಿಡಿದ ಬಿಸುಪಿಗೆ
ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?
ಸಂಕಟಕಳೆದು
ನಲಿವು ಮುಗಿದು
ಸ್ಥಿತಪ್ರಜ್ಞಯೋಗದಲ್ಲೂ
ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!
ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ
-
ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ
ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’ಯೊಳಗಿರುವ
ಹತ್ತ...