Wednesday, December 3, 2014

ಮುಂದಿದೆ ಮಾರಿಹಬ್ಬ

ಇದು ಬಹುಶಃ ನಮ್ಮೂರಿನಲ್ಲಿ ಮಾನವ ಜನಾಂಗದ ಚಳಿಗಾಲ.
ಮಾರ್ದವತೆ ಒಣಗಿ, ಚರ್ಮ ಬಿರಿದು, ಗಾಯವನೆ ಕೆರೆ ಕೆರೆದು ಹುಣ್ಣಾಗಿಸಿ
ಮುಂದಿನ ಬಿರುಬಿಸಿಲಿಗೆ ಇವತ್ತಿನಿಂದಲೆ ತೆರೆದುಕೊಳ್ಳುತ್ತಿರುವ ಹಾಗಿದೆ.
ಹತಾಶೆ ನನಗೆ.
ನಾನು ಬೆಚ್ಚನೆ ಗೂಡಿನಲ್ಲಿದ್ದೇನೆ. ಇರಬೇಕು.
ಹೊರಗೆ ಇರಲೇಬೇಕಾದ ಅವಳು, ಇವಳು, ಇನ್ನೊಬ್ಬಳು
ಎಲ್ಲರೂ ಬೇರೆಯವರ ಮೃಗತೃಷೆಯ ನೀಗಬೇಕು.
ಅವಳು, ಇವಳು, ಇನ್ನೊಬ್ಬಳು ಸಧ್ಯ ನಾನಲ್ಲ ಎಂದು ಸುಮ್ಮನಿರಲೆ?
ನನ್ನ ಸರದಿ ಮುಂದಿದೆಯೆಂದು ಭಯಪಡಲೆ?
ಏನೋ.. ಇದು ಹಿಂಡುತ್ತಿರುವ ಮನಸ್ಸು
ಓಹ್ ಟೈಮಿಲ್ಲ. ಪ್ರಾಜೆಕ್ಟು ಡೆಡ್ ಲೈನು
ಸಂಜೆಗೆ ಮುಗಿಸಲೇಬೇಕಿರುವ ಹೋಮ್ ವರ್ಕು
ನಾದಿಟ್ಟ ಚಪಾತಿ ಹಿಟ್ಟು ಮುಗಿದಿರಬಹುದು
ಹೋದಮೇಲೆ ನೆನಪಿಟ್ಟು ಕಲಸಿ
ರಾತ್ರಿಯೂಟ ತಯಾರಿಸಿ
ಕೈಯಲ್ಲಿ ತಟ್ಟೆ ಹಿಡಿದು ಪೇಪರ್ ಹಿಡಿದ ಮೇಲೆ
ನನ್ನ ಸಾಮಾಜಿಕ ಜವಾಬ್ದಾರಿಗಳ ಮೇಲೆ ಕಣ್ಣೋಡಿಸಬಹುದು.
ತುಂಬ ಕಲಕಿದರೆ ಬಿಡಿ
ಇದ್ದೇ ಇದೆ ಎಫ್.ಬಿ., ಬ್ಲಾಗಂಗಳ
ಒಳಗಿನದ್ದೆಲ್ಲ ಹೊರಹರಿಸಿ ಝಳ ಝಳ.
ಮತ್ತೆ ಹೊಸ ಸಮಸ್ಯೆಗಳ ತಟ್ಟೆಗೆ ಸುರುವಿಕೊಳ್ಳುತ್ತ
ಮುಗಿದ ನಿನ್ನೆಗಳ ಬುಟ್ಟಿಗೆ ಕೆಡವುತ್ತಾ
ನನ್ನ ಗುಂಡಿಯ ನಾನೇ ತೋಡುತ್ತಾ...
ಚಳಿ ಹೆಚ್ಚಿ, ಚರ್ಮ ಬಿರಿದಿದೆ.
ಕೆರೆದಷ್ಟೂ ಹಿತ. ರಕ್ತ ಹನಿದಿದೆ.
ಗಾಯ ಒಣಗಿದ ಮೇಲೆ...
ಮಾರಿಹಬ್ಬ ಮುಂದಿದೆ.

Wednesday, November 19, 2014

ಒಂದು ಕಿರಿಬೆರಳ ಜಾದೂ!

ಹಣ್ಣಾರಿಸಿ ಕಾಯುತ್ತ
ಕೂತು, ತಾನೇ ಹಣ್ಣಾದವಳ
ನಿರೀಕ್ಷೆಗೆ ಪುಟವಿಟ್ಟು
ಮುಕ್ತಿಕೊಟ್ಟಿದ್ದು;


ಹೊಡೆಯಲು ಕೈ ಎತ್ತಿದವಳ
ದಿಕ್ಕು ತಿರುಗಿಸಿ,
ಸೃಷ್ಟಿಯ ತೋರಿದ್ದು;


ಸಂಸಾರ ವೃಂದದ
ಕೋಟಲೆಯಿಂದ ಪಾರುಗಾಣಿಸಲು,
ಸಂಗೀತ ಸುಧಾಂಬುಧಿಯಲ್ಲಿ
ಅದ್ದಿ ತೆಗೆಯಲು,
ಪಿಡಿದ ಬಿದಿರಿನ ಕೋಲಿಗೆ
ಮತ್ತು ಆಲಿಸಿದವರಿಗೆ ಜೀವವೂಡಿದ್ದು;


ಹಿರಿತಲೆಗಳ ಗರುವಭಂಗಕ್ಕೆ,
ಹೊಸಆಲೋಚನೆಗಳ ಉತ್ಕರ್ಷಕ್ಕೆ,
ಶರಣುಬಂದವರ ನೆರಳಿಗೆ,
ಎತ್ತಿ ಹಿಡಿದ ಗಿರಿಯ ಆನಿಕೆಯಾಗಿದ್ದು;


ಗಡಿಬಿಡಿಯಲ್ಲಿ
ದಾಕ್ಷಿಣ್ಯದಲ್ಲಿ ಪರಿಮಳದ ಡಬ್ಬಿಯ
ತುರುಕಿ, ಬದಿಗೆ ಸರಿದು ನಿಂತು
ಸುತ್ತಲವರ ಅಪಹಾಸ್ಯಕ್ಕೆ
ಈಡಾದ ಕುರೂಪಿಯ
ಕಿನ್ನರಿಯಾಗಿ ಬದಲಿಸಿದ್ದು;


ತಡೆಹಿಡಿದಷ್ಟೂ ಜಾರುವ
ಕಣ್ಬನಿ ಪ್ರವಾಹವ
ಒರೆಸಿ ಕಟ್ಟೆ ಕಟ್ಟಿದ್ದು;


ಜಾರುದಾರಿಯ ಹೆಜ್ಜೆಗಳ
ದಿಕ್ಕು ಬದಲಿಸಿ
ಜೊತೆಕೊಟ್ಟಿದ್ದು;


ಒಂದಕ್ಕೊಂದು ಬೆರೆಸಿ ನಡೆವಾಗ
ಕಾರಣವಿರದೆ
ಚಿತ್ತಾರವಿಟ್ಟು
ಮೈಮನದಲ್ಲಿ ಹೂವರಳಿಸಿದ್ದು;


ಜಗದೆಲ್ಲ ಚಿಂತೆಗಳ
ಅಮ್ಮನೆ ಕಳೆವಳೆಂಬ
ಭರವಸೆಯಲಿ,
ರಸ್ತೆಯುದ್ದಕೂ
ಕುಣಿಯುತ ಸಾಗುವ,
ಪುಟ್ಟಕಿನ್ನರಿಯು
ಹಿಡಿದು ನಡೆವುದು:
ಮತ್ತು
ಹಿಡಿದವಳು-ಕೊಟ್ಟವಳೂ ಇಬ್ಬರನ್ನೂ ಪಾರುಗಾಣಿಸುವುದು;


ಈ ಕಿರುಬೆರಳೇ ಅಲ್ಲವೇ?


ಇದಕೆ ಇರಬಹುದು
ಹಿರಿಯರ ಸಾಲು.. 
"ಮುಳುಗುವ ಜೀವಕೆ ಹುಲ್ಲುಕಡ್ಡಿಯ ಆಸರೆ" ಎಂಬ ರೂಪಕ

Thursday, November 6, 2014

"ಪಾರಿಜಾತ"

ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯಲ್ಲಿ ನನ್ನ "ಪಾರಿಜಾತ" ಕಥೆಗೆ ಎರಡನೇ ಬಹುಮಾನ ಬಂತು.
ಹೆಣ್ಮಕ್ಕಳಿಗಾಗಿ ಇರುವ ಈ ಸ್ಪರ್ಧೆಗೆ ಕಥೆ ಹವ್ಯಕ ಭಾಷೆಯಲ್ಲಿರಬೇಕು. ಮೊದಲ ಬಾರಿ ಪೂರ್ಣಪ್ರಮಾಣದ ಹವ್ಯಕ ಭಾಷೆಯಲ್ಲೆ ಕತೆ ಬರೆದ ಪ್ರಯತ್ನಕ್ಕೆ ಈ ಪುರಸ್ಕಾರ ನಂಗೆ ಖುಶಿಯಾಯ್ತು.
ನಿಮ್ಮ ಜೊತೆಗೆ ಹಂಚಿಕೊಳ್ಳುವ ಅಂತ ಇಲ್ಲಿ:

ಹವ್ಯಕ ಭಾಷೆಯಲ್ಲಿ ಬರೆಯದು ಮತ್ತು ಓದದು ಎರಡೂ ಮಾತಾಡುವುದಕ್ಕಿಂತ ಕಷ್ಟ. ಹವ್ಯಕ ಭಾಷೆ ಬರದ ನನ್ನ ಸ್ನೇಹಿತರಲ್ಲಿ ಕ್ಷಮೆ ಕೋರುತ್ತಾ ಈ ಬರಹ ನಿಮ್ಮ ಓದಿಗಾಗಿ.


"ಪಾರಿಜಾತ

ಯಾವತ್ತೂ ಕರಕರೆ ಮಾಡದ, ಗೌಂಜು ಅಂಬದೆ ಗೊತ್ತಿಲ್ದೆ ಇಪ್ಪ ಪಾವನಿಯ ಕಣ್ಣಲ್ಲಿ ನೀರು ಸುರೀತಾನೆ ಇದ್ದು. ಮಲಗಿಪ್ಪ ಅಲ್ಲೆ ಶಣ್ಣಕೆ ಮುಲುಗಾಟ. ಆ ಕಡೆ ಮೂಲ್ಯಾಗೆ ಫಳ್ಳಗೆ ಮಿಂಚ್ವ ಎರಡು ಕಣ್ಗಳಿಗೆ ಈ ನಳ್ಳಾಟದ ಸೂಚನೆ ಸಿಕ್ಕಿದ್ದೇಯ ಹೊಟ್ಯಲ್ಲಾ ತೊಳಸಕ್ಕೆ ಹೊಂಡ್ತು.
ಪಾವನಿಯ ಬೆನ್ಹುರಿಯಾಗೆ ಹರಡ್ತಾ ಇಪ್ಪ ನೊಂವು ಶ್ರಾವಣಿಗೆ ಹಂಗೇ ಗೊತ್ತಾಗೋತು. ಅವಳಿಗ್ ಗೊತ್ತಿದ್ದು. ಇನ್ ಸ್ವಲ್ಪ ಹೊತ್ತಿಗೆ ಅವ್ಳಿಗೆ ಹಿಂಗೆ ಸುಮ್ನೆ ಮಲಗಲಾದಿಲ್ಲೆ. ಹೂಂಕರ್ಸ್ಲೇಬೇಕು. ಎದ್ ನಿಂತ್ರೇ ಅನ್ಕೂಲ. ಆದ್ರೆ ಅದನ್ನ ತಾಂ ಹೇಳದ್ ಹೆಂಗೆ. ಗೊತ್ತಿಲ್ಲೆ. ಅವಳು ಹತ್ರಕ್ಕೂ ಇಲ್ಲೆ. ಆದ್ರೆ ಸುಮ್ನೆ ನೋಡ್ಕ್ಯಂಡು ನಿಂತ್ಗಂಬ ಹಂಗೂ ಇಲ್ಲೆ. ಹೊರ್ಗಡೆ ಭೋರು ಮಳೆ. ಆಕಾಶ್ವೆ ಹರ್ಕಂಡ್ ಬೀಳ್ತನ ಕಾಣ್ತು. ಒಂದೊಂದ್ಸಲ ಜಡಿಯಲೆ ಶುರುವಾದ್ರೆ ಇವತ್ತು ಕಳ್ದು ನಾಳೆ ಬಿಸ್ಲು ಮುಳ್ಗ ತಂಕ ಹೊಯ್ದ್ರೂ ಹೊಯ್ತೆ. ಅವತ್ತೆಲ್ಲ ಎತ್ಲಾಗೂ ಹೋಗಾ ಹಂಗೇ ಇಲ್ಲೆ. ಇಲ್ಲೆ ಮೂಲೆನೇ ಗತಿ.
ನೊಂವ್ವು ಕೆರಳಿ ಅವಳು ಒದ್ದಾಡಿ ಗಲಾಟೆ ಮಾಡಿದ್ ಮ್ಯಾಲಷ್ಟೇ ಒಳ್ಗಡೆ ಮಲ್ಗಿಪ್ಪ ಜನಕ್ಕೆ ಅವಳ ಗತಿ ಗೊತ್ತಾಗದು ಅಂತ ಶ್ರಾವಣಿಗೆ ಗೊತ್ತಿದ್ದು. ಈಗಿನ್ನೂ ಎರಡ್ ತಿಂಗಳಿತ್ಲಾಗೆ ತಂಗಾದ ಅವಸ್ಥೆ ಅವಳಿಗೆ ಮರ್ತೋಗದಿಲ್ಲೆ. ಒಂದರ್ಧ ಗಂಟೆ ಮುಂಚೇ, ಬರೀ ಒಂದರ್ಧ ಗಂಟೆ ಮುಂಚಿಗೆ ಡಾಕ್ಟ್ರು ಬಂದಿದ್ರೆ ಹಿಂಗಾಗ್ತಿರ್ಲೆ ಅಂತ ಮನೇವೆಲ್ಲ ಮಾತಾಡ್ಕ್ಯಂಡಿದ್ದು ಕೇಳಿಸ್ಕಂಡ್ ಮೇಲೆ ಕಳ್ಕಂಡ್ ನೋವು ಇನ್ನೂ ಚೂರು ಹೆಚ್ಚಾಗೆ ನೋಯಿಸ್ತಿತ್ತು. ಅದು ಇವತ್ತು ಪಾವನಿಗೆ ಆಗ್ಲಾಗ. ಎಂತಾರು ಆಗ್ಲಿ ಅಂದ್ಕಂಡವಳೇ ಅಡ್ಗೆ ಮನೆ ಕಡಿಗೆ ಮುಖ ಮಾಡಿ ಜೋರಾಗಿ ಹೂಂಕಾರ ಹಾಕೇ ಬಿಟ್ಟ. ಆ ಶಬುದಕ್ಕೆ ಅವಳ ಮೈಯೆಲ್ಲ ಬಿಗ್ ಕ್ಕಂಡೇ ಹೋತು. ಅಕ್ಕ ಪಕ್ಕದಾಗೆ ಸುಮ್ನೆ ಮಲ್ಕ್ಯಂಡಿದ್ದವೆಲ್ಲ ಒಂದ್ಸಲ ಗಾಬ್ರಿಯಾಗಿ ಬಾಲ ಬಡ್ದ. ಈ ಕೂಗು ಮಳೆ ದಾಟ್ಕ್ಯಂಡು ಮನೆ ಒಳಕ್ಕೆ ಹೊಗ್ತೋ ಇಲ್ಯೋ ಗೊತ್ತಾಗಲ್ಯಲ ಅಂದಕತ್ತಾ ಇತ್ತು ಶ್ರಾವಣಿ. ಆದ್ರೆ ಪಾವನಿ ಕಡಿಗೆ ನೋಡಿದ್ ಕೂಡ್ಲೇ ಈ ಅಂದಾಜು ಎತ್ಲಾಗಾರು ಹಾಳಾಗ್ ಹೋಗ್ಲಿ ಅಂದ್ ಕಂಡು ಮತ್ತೆ ಮತ್ತೆ ಹೂಂಕರಿಸಕ್ಕೆ ಶುರು ಮಾಡ್ಕ್ಯಂಡ. ಈಗ ಮಳೇಲಿ ಸೊಪ್ಪಿನ ಕಾವಲ್ಲೆ ಬೆಚ್ಚಗೆ ಮಕ್ಕಂಡಿದ್ದ ಪುಟ್ ಪುಟಾಣಿ ಹನುಮ, ತುಳಸಿ, ಅರುಂಧತಿ, ಸುಕನ್ಯ ಎಲ್ಲವೂ ಕೂಗಕ್ಕೆ ಶುರು ಮಾಡ್ಜ. ಈ ಕೂಗಿನ ಆವುಟ ಹೆಚ್ಚಾಗ ಹೊತ್ತಿಗೆ ಅಲ್ಲಿ ಪಾವನಿ ತನ್ನ ನಾಕೂ ಕಾಲೂ ನೀಡ್ಕ್ಯಳಕ್ಕೆ ಶುರು ಮಾಡ್ಚು. ಬೆನ್ನು ಹುರಿಯಾಗೆ ಹರಡ್ಕ್ಯೋತಿದ್ದಿದ್ ನೊಂವ್ವು ಈಗ ಅಲ್ಲೆ ಒಂದೇ ಕಡಿಗೆ ಹಾಕ್ಯಂಡು ಒತ್ತಲೆ ಶುರು ಮಾಡಿದ್ದು. ಕಣ್ಣಾಗೆ ನೀರು ಸುರಿಯದು ನಿಂತೋಯ್ದು. ಆದ್ರೆ ಮೂಗಾಗೆ ಬಾಯಾಗೆ ಇಳಿತಾ ಇದ್ದು. ಭುಸುಗುಡಕ್ಕೆ ಶುರುವಾಯ್ದು. ಅಷ್ಟೊತ್ತಿಗೆ ಅಡಿಗೆ ಮನೆ ಹಿಂದಿನ್ ಲಾಯದ ಬಾಗ್ಲು ಕಿರ್ರಂತು. ಒಳಾಗಡೆಯಿಂದನೂ ಹಿಂದಿನ್ ತಂಕ್ಲೂ ಲೈಟಿನ ಬೆಳಕು ಹರಕಂಡ್ ಬಂತು. ಕೊಟ್ಗೆ ಮನೆ ಕಿಟಕೀಲಿ ನೋಡಾ ಶ್ರಾವಣಿಗೆ ಲಾಯದ ಬಾಗ್ಲಾಗೆ ಬ್ಯಾಟ್ರಿ ಕಯ್ಯಾಗೆ ಹಿಡ್ಕಂಡು ಸ್ವೆಟರ್ ಹಾಕ್ಯಂಡು ಬೆಚ್ಚಗೆ ನಿಂತ್ಕಂಡ ಶ್ರೀಮತಕ್ಕನ ಆಕಾರ ಕಂಡ್ಚು. ಈಗ ಹೂಂಕಾರದ ಆವುಟ ಕಡ್ಮೆ ಮಾಡಿ ಬೇಡಿಕೆಯ ಕೂ ಹಾಕಕ್ಕೆ ಶುರು ಮಾಡ್ಚು ಶ್ರಾವಣಿ. ಅದ್ ಕೇಳ್ತಿದ್ದಂಗೆ ಶ್ರೀಮತಕ್ಕ ಅಲ್ಲೇ ಬಾಗ್ಲಾಗೆ ನಿಂತ್ಕಂಡೆ.. ಕೂಯ್... ಕೇಳ್ಚಾ... ಪಾವ್ನೀಗೆ ಬ್ಯಾನೆ ಶುರ್ವಾದಂಗೆ ಕಾಣ್ತು. ಆ ವೆಟ್ನೀ ಡಾಕ್ಟ್ರ ಮೊಬಾಯಿಲಿಗೊಂದು ಫೋನ್ ಹಚ್ಚಿಕ್ಕಿ ನಿಂಗವು ಬಂದು ಇಲ್ಲಿ ನಿಂತ್ಕಳಿ. ಕೇಳ್ಚಾ... ಅಂತ ಹೇಳಿಕ್ಕೆ ಕೊಟ್ಟಿಗೆ ಮನಿಗ್ ಬಂದು ಪಾವ್ನಿ ಹತ್ರ ಕುಂತ್ಕಂಡು ಗಂಗೆದೊಗ್ಲಿಗೆ ಕೈ ಹಾಕಿ ನೀವಿದ್ದೂ ನೀವಿದ್ದೇ. ಪಾವ್ನೀ ಮಗ್ಳೇ ಆಗೋತ್ತು. ಡಾಕ್ಟ್ರು ಬಂದೇ ಬಿಟ ಅಕಾ, ಅಳಡ. ನೋಯ್ತನೇ... ಇಲ್ನೋಡು ಆಂ ಇಲ್ಲೆ ಇದ್ದಿ. ಇಕಾ ಚೂರು ನೀರು ಸೊರ್ಗುಡುಸು. ಸೇರದಿಲ್ಲೆ ಗೊತ್ತಿದ್ದು ಆದ್ರೂ ಚೂರ್ ತಗಾ, ಹೇಳಿದ್ ಕೇಳ್ತ್ಯಾ ಇಲ್ಯಾ... ತಗ ಮಗಾ.. ನೋವು ಇನ್ ಸ್ವಲ್ಪೊತ್ತಿಗೆ ಹೋಗ್ತು. ಪುಟ್ಟಿ ಕರ ಬತ್ತಲೆ.. ಹೇಳಿ ಮಾತಾಡಿಸ್ಕ್ಯೋತ ಪಾವ್ನಿಯ ಹೊಟ್ಟೆ ಸವರಿ ಸವರಿ ತಲೆ ಎಲ್ಲಿದ್ದು, ಕಾಲು ಎಲ್ಲಿದ್ದು, ಎಲ್ಲ ನೋಡ್ಕ್ಯೋತ ಮುಟ್ತಾ ಇದ್ದ. ಅಷ್ಟೊತ್ತಿಗೆ ರಾಘಣ್ಣನೂ ಬಂದಾತು. ಡಾಕ್ಟ್ರು ಬತ್ವಡ. ಮಳೆ ಆದ್ರೂ ಅಡ್ಡಿಲ್ಲೆ ಬತ್ತಿ ಹೇಳ್ದ. ಗನಾ ಡಾಕ್ಟ್ರೇ ಅಂವ. ಶ್ರೀಮ್ತೀ.. ನೀ ಹೋಗಿ ಹಂಡೆಲಿಂದ ಒಂದ್ ಬಕೀಟು ಬಿಸಿ ನೀರು ತಗಂಬಾ ನೊಡನ. ಪಾವ್ನೀ..ಎಂತೇ. ಸ್ವಲ್ಪ ಹೊತ್ತೇ ಮಾರಾಯ್ತೀ. ಪುಟ್ಟಿ ಕರ ಬಂದ್ ಮೇಲೆ ನೋವೆಲ್ಲ ಹೋಗೇ ಹೋಗ್ತು. ಅಂತ ಮುಟ್ಟಿ ಮುಟ್ತಿ ಮಾತಾಡಿಸಕ್ಕೆ ಶುರು ಮಾಡ್ದ. ಶ್ರಾವಣಿಗೆ ಹೊಟ್ಟೆಯೊಳಗೆಲ್ಲ ಗುಡುಗುಡು. ನಿಂತಲ್ಲಿ ನಿಲ್ಲಕ್ಕೆ ಆಗ್ತಾ ಇಲ್ಲೆ. ಒಂದೆರಡ್ ಸಲ ಕೊಂಬನ್ನ ಮುಂದ್ಗಡೆ ಕಟ್ಟೆಗೆ ಸಮದೂ ಸಮ್ದ. ರಾಘಣ್ಣ. ಶ್ರಾವ್ಣೀ ನಿಂದ್ ಎಂತಕೆ ಗಲಾಟೇ? ಒಹೋ ಗೆಳತೀಗೆ ನೊಂವ್ವಾತು ಅಂತ್ಲೋ. ಅದ್ಕೇ ಹೇಳದು ಜಾನ್ವಾರೇ ಅಡ್ಡಿಲ್ಲೆ ಮನ್ಷರಗಿಂತಾ ಅಂತ. ಹೇಳ್ಕ್ಯೋತ ಪಾವ್ನಿಯ ಬೆನ್ನು ಸವರ್ತಾ ನಿಂತಿದ್ದ. ಶ್ರೀಮತಕ್ಕ ನೀರು ತಗಂಡ್ ಬಂತು. ಮಳೇಲಿ ಬಿಸಿಬಿಸಿ ನೀರಿನ ಬಕೆಟ್ಟಿನಿಂದ ಹಬೆ ಮೇಲೇರ್ತಾ ಇದ್ದು. ಶ್ರೀಮತಕ್ಕನೂ ಶ್ರಾವಣಿ ಕಡಿಗೆ ನೋಡಿದ್ದೆ ಹತ್ರ ಬಂದು ಒಂದ್ಸಲ ಅವ್ಳ ಬೆನ್ ಮೇಲೂ ಕೈಯಾಡಿಸ್ಚು. ಅಷ್ಟಲ್ದೆ ಹೆಣ್ಣು ಹೇಳ್ತ್ವನಾ ಹಂಗರೆ, ಅವಳಿಗೆ ಅವಳ ಕರದ್ ನೆನ್ಪಾಗ್ತಾ ಇದ್ದು ಕಾಣ್ಚು. ಎಂತ ಮಾಡದು ಶ್ರಾವ್ಣೀ ನಿನ್ ಕರ ಉಳಸ್ಕ್ಯಳಕ್ಕೇ ಆಗಲ್ಯಲೇ ಮಗಾ. ಹೆಂಗೋ ನೀ ಉಳ್ದಿದ್ದೇ ಹೆಚ್ಚು ಹೇಳಿ ಹೇಳ್ದ ಡಾಕ್ಟ್ರೂ. ಅವು ಹೇಳಿದ್ ದಿನಕ್ಕಿಂತ ಮುಂಚೆ ಆದ್ರೆ ನಂಗನಾರೂ ಎಂತ ಮಾಡದು. ಅದೇ ಟೈಮಾಗೆ ಶಣ್ಣಮ್ಮಿ ಕೂಶಿಂದು ನಾಮಕರಣ ಬ್ಯಾರೆ ಬಂಧೋಗಿ, ನಿನ್ ಮೇಲೆ ನಿಗಾನೂ ಮಾಡಕ್ಕಾಗಲ್ಲೆ ಎಂಗವಕ್ಕೆ. ಕ್ಷಮುಸ್ ಬುಡೇ ಶ್ರಾವ್ಣಿ ಅಂತ ಹೇಳಾ ಹೊತ್ತಿಗೆ ಶ್ರೀಮತಕ್ಕನ್ ಕಣ್ಣಾಗೆ ನೀರೇ ಬಂತು. ಇದೆಲ್ಲ ಗೊತ್ತಿದ್ದು ಶ್ರಾವಣಿಗೆ. ಮಕ್ಳ ಹಂಗೇ ನೋಡ್ಕ್ಯಳ ಯಜಮಾನ ಯಜಮಾನಿ ಇರದು ಹೌದು. ಆದ್ರೆ ಹೊಟ್ಟೆಲಿ ಹುಟ್ಟಿದ್ ಮಕ್ಳು ಮನ್ಶಾಂಗೆ ಯಾವಗ್ಳು ಮುಂದೆ. ಮನ್ಶಂಗೆಂತು ಜಾನವಾರಕ್ಕೂ ಅಷ್ಟೇಯ ಹಂಗಾಗೆ ಅಲ್ದ. ಪಟ್ರೆ ಒಡ್ಕಂಡು ಹುಟ್ಟಿದ ಕರ ಇವತ್ತಿಗೂ ನೆನಪಾದ್ರೆ ರುಚಿರುಚಿಯಾಗಿ ಮುಂದಿಟ್ಟ ಅಕ್ಕಚ್ಚಿನ ಬಾನಿ ಕಡೆ ಶ್ರಾವಣಿ ತಿರ್ಗದೂ ಇಲ್ಲೆ. ಈಗ್ಲೂ ಪಾವನಿಯ ನೋವು ನೋಡ್ತಾ ಇದ್ರೆ ಶ್ರಾವಣಿಗೆ ತನ್ನ ಹೊಟ್ಟೆಯ ನೋವೇ ಮತ್ತೆ ಮರುಕಳ್ಶಿದಂಗೆ ಆಗಿರದು ಮಾತ್ರ ಮನ್ಶರಿಗೂ ಮೀರಿದ ನಿಜ. ಅವ್ಳ ಗಂಗೆದೊಗಲಲ್ಲಿ ಕೈಯಾಡಿಸ್ತ ನಿಂತ್ಕಂಡ ಶ್ರೀಮತಕ್ಕನ ಕಿವಿಗೆ ಡಾಕ್ಟ್ರ ಬೈಕಿನ ಸದ್ದು ಬಿದ್ದೇ ಬಿತ್ತು. ತರಾತುರಿಲಿ ಓಡ್ಕ್ಯಂಡು ಹೋಗಿ ವಾಸ್ತು ಬಾಗ್ಲು ತೆಗ್ದು, ಚಿಟ್ಟೆ ಬಾಗ್ಲನ್ನ ಕಿರ್ಗುಡಿಸಿ ತೆಗ್ದ. ಅಂಗಳಕ್ಕೆ ಹಾಕಿದ್ ಫ್ಲಡ್ ಲೈಟಲ್ಲಿ ಡಾಕ್ಟ್ರು ಎಲ್ಲೂ ಜಾರ್ ಬೀಳ್ದೆ ಅಡಿಕೆ ಪಟ್ಟೆ ದಾರೀಲಿ ಹುಷಾರಾಗಿ ಬಂದ. ಅವರ ರೈನ್ ಕೋಟ್ ತಾನೇ ಒಂದು ಮೋಡ್ವೇನೋ ಅಂಬಾ ತರ ನೀರು ಸುರುಸ್ತಿತ್ತು. ಅದ್ನ ಅಲ್ಲೆ ಬಾಗ್ಲ ಬದೀಲಿ ಇಪ್ಪ ಗೂಟಕ್ಕೆ ನೇತ್ ಹಾಕಿ ಶ್ರೀಮತಕ್ಕನ ಹಿಂದ್ಕೆ ತಲೆ ತಗ್ಗ್ಸ್ ಕ್ಯಂಡು ಒಳಗ್ ಬಂದ. ಹಿತ್ಲ್ ಬಾಗ್ಲು ದಾಟಾವರೀಗೂ ಡಾಕ್ಟ್ರು ತಲೆ ಎತ್ತಿದ್ರೆ ಕೇಳಿ. ಮುಂಚ್ ಮುಂಚೆ ಬಂದಾಗೆಲ್ಲ ತಲೆ ಎತ್ತಿ ನಡ್ದು ಹೊಡಸ್ಕ್ಯಂಡ ಎಲ್ಲ ಬಾಗ್ಲ ಪಟ್ಟೇನೂ ಡಾಕ್ಟ್ರಿಗೆ ಚೆನಾಗ್ ನೆನ್ಪಿತ್ತು. ಆ ನೋವಂತೂ ಮೂರ್ ಮೂರ್ ದಿನ ಇದ್ದಿತ್ತು. ಈಗೀಗ ಡಾಕ್ಟ್ರು ಈ ದೊಡ್ ದೊಡ್ಡ ಹಳ್ಳೀ ಮನೆಒಳ್ಗೆ ಓಡಾಡಲೆ ಹುಶಾರಾಯ್ದ. ಮುಂದ್ಗಡೆ ಬಾಗ್ಲಾಗೆ ತಗ್ಸಿದ್ ತಲೇನ ಹಿತ್ಲಕಡೆ ಬಾಗ್ಲು ದಾಟಿ ಕೊಟ್ಗೆ ವರಿಗೆ ಬರಾವರಿಗೂ ಎತ್ಲಾಗ ಅನ್ನದು ಅವರು ಕಲ್ತ ಪಾಠ.

ಕೊಟ್ಗೆ ಮನೆ ಒಳ್ಗೆ ಇಪ್ಪ ಲೈಟು ಸಾಕಾಗದಿಲ್ಲೆ ಅಂತ ಆಷ್ಟೋತ್ತಿಗೆ ರಾಘಣ್ಣ ಒಂದು ಎಮರ್ಜೆನ್ಸಿ ಲ್ಯಾಂಪ್ನೂ ತಂದಿಟ್ಟಿದ್ದ. ಡಾಕ್ಟ್ರು ಬಂದವ್ರೆ ಪಾವ್ನೀನ ನೋಡಿ ಒಳ್ಳೆ ಕೆಲ್ಸ ಮಾಡಿದ್ರಿ ರಾಘಣ್ಣ, ಇನ್ ಟೈಮಿಗೆ ಕರ್ಸಿದೀರಿ ಅಂದ. ಏಳು ಏಳು ಅಂತಿದ್ ಹಾಂಗೆ ಅಲ್ಲೀವರಿಗೆ ಮಲಕ್ಯಂಡಿದ್ದ ಪಾವನಿ ದೇವ್ರ ಹಾಂಗೆ ಎದ್ ನಿಂತೇಬಿಡ್ಚು. ಡಾಕ್ಟ್ರು ಅವ್ರ ಕೆಲ್ಸ ಅವ್ರು ಶುರು ಮಾಡ್ದ. ಶ್ರೀಮ್ತಕ್ಕ ರಾಘಣ್ಣ ಇಬ್ರೂ ಕೈನೆರ್ವಿಗೆ ಇದ್ದೇ ಇದ್ದ. ಒಂದೆರಡು ನಿಮ್ಶದಾಗೆ ಸುರ್ಳೀತ ಕರ ಹೊರ್ಗೇ ಬಂತು. ಗುಳ್ ಗುಳ್ಳೆಯಾಗಿ ಮಾಸೂ ಬಂತು. ಹಿಡ್ಕಂಡ್ರೆ ಜಾರಿ ಬಿದೋಗ್ತಿದ್ದ ಕರನ ಶ್ರೀಮ್ತಕ್ಕ ಸಂಭ್ರಮದಿಂದ ಬಿಸ್ನೀರಾಗೆ ತೊಳ್ದು ಬೈಹುಲ್ ಹಾಸ್ಗೆ ಮೇಲೆ ಹಾಕ್ದ. ಪಾವ್ನಿ ಸುಸ್ತಾಗಿ ಕೆಳಗೆ ಬಿದ್ಕಂಡು ಕರಾನ ಎರ್ಡ್ ಸಲ ನೆಕ್ಕಿ, ಕಣ್ ಮುಚ್ಚ್ ಕ್ಯಂಡು ಕೂರ್ಚು. ಅದಕ್ಕೆ ಮುಂಚೆ ಶ್ರಾವ್ಣಿ ಕಡಿಗ್ ತಿರ್ಗಿ ಒಂದ್ಸಲ ಅಂಬಾ ಅನ್ನಲೆ ಮರೆಯಲ್ಲೆ. ಶ್ರಾವ್ಣಿಗೆ ಈಗ ಮತ್ತೆ ಗುಡುಗುಡು ಹೊಟ್ಟೇಲೆಲ್ಲ. ಪಾವ್ನಿಗೆ ಕರ ಹುಟ್ಟಾವರಿಗೂ ತಾಯಿ ಮೇಲಿ ಇದ್ದಿದ್ ನೆದರು ಈಗ ಪುಟ್ಟೀ ಕರದ್ ಕಡಿಗೆ ಬಿದ್ ಮೇಲೆ ತನ್ ಹೊಟ್ಟೇ ಸಂಕಟ ದುಪ್ಪಟ್ಟಾಗಿ ವಾಪಸ್ಸಾತು. ಪಾವ್ನಿಯ ನೋವೇ ತನ್ನ ನೊಂವ್ವೇನೋ ಅನ್ನ ಹಂಗೆ ದುಸಮುಸ ಮಾಡ್ತಾ ಇದ್ದಿದ್ದ ಶ್ರಾವಣೀನ ಡಾಕ್ಟರೂ ನೋಡಿದ್ದೇ ಹತ್ರ ಬಂದ್ರೆ ಹಾಯಕ್ಕೇ ಹೋತು. ಡಾಕ್ಟ್ರು ಪಾಪ ಒಳ್ಳೇ ಜನ. ತಪ್ಪಾಯ್ತು ಅಮ್ಮಾ. ಆದ್ರೆ ಇನ್ನೊಂದ್ ಸ್ವಲ್ಪ ಮುಂಚೆ ಕರ್ಸಿದ್ರೆ ಹೆಂಗಾರೂ ಕರಿನ ಉಳ್ಸಬೋದಿತ್ತು. ನಿನ್ ಉಳಸ್ಕ್ಯಂಡಿದ್ದೂ ಪವಾಡ ಅಂದವ್ರೇ ಕೊಟ್ಗೆ ಹೊರಗೆ ನೆಡ್ದೇ ಬುಟ. ಅಷ್ಟೊತ್ತಿಗೆ ಕತ್ಲು ಹರಕಂಡು ಬೆಳಕಿನ ಕೋಲು ಬಂದೇ ಬಂತು. ಜಾರಿ ಜಾರಿ ಬೀಳ್ಕ್ಯೋತ ಪುಟ್ಟಿ ಕರ ಎದ್ ನಿಂತಗಂಡು ತಾಯಿ ಮೊಲೆಹಾಲು ಹುಡುಕ್ತು. ಶ್ರೀಮ್ತಕ್ಕ ಬಂದು ಬಾರೇ ಪುಟ್ಟಕ್ಕಾ ಎಂತ ಹೆಸ್ರಿಡವಾತೇ ಮಾರಾಯ್ತೀ ನಿಂಗೆ. ಇಲ್ನೋಡು, ಇಲ್ಲಿದ್ದು ಮುಕ್ಕು ತಗಾ ಅಂತ ಒಂದು ತೊಟ್ಟಲ್ಲಿ ಸೊರ ಹಿಡ್ದು ಕೊಟ್ರೆ ಪುಟ್ಟಿಕರ ತಿರ್ಗಿ ನೋಡಿದ್ರೆ ಕೇಳಿ. ಹಾಲು ಸೋರಿಸ್ಕ್ಯೋತ ಅದು ಕುಡಿಯಾ ಚಂದ ನೋಡಲೆ ಎರಡು ಕಣ್ಣು ಸಾಲದು. ಪಾವ್ನಿ ಸುಮ್ನೆ ಆ ಕರದ ಹಿಂಬದಿನ ನೆಕ್ಕಿ ನೆಕ್ಕಿ ಚೊಕ್ಕ ಮಾಡ್ತಾ ನಿಂತಿದ್ದು. ಶ್ರಾವಣಿ ಮಾತ್ರಾ ಜೋರಾಗೀ ಹೂಂಕರ್ಸವು ಅನ್ಸಿದ್ರೂ ಹೊಟ್ಟೇಲಿ ಒತ್ತಿ ಹಿಡ್ಕಂಡು ಶಣ್ಣಕೆ ಅಂಬಾ ಅನ್ಕೋತ ನಿತ್ತಿದ್ದು.

ಶ್ರೀಮ್ತಕ್ಕ ಬಾಣಂತಿ ಕೆಲ್ಸ್ ಮುಗ್ಸಿದವ್ಳೇ ಬ್ಯಾರೆ ದನದ್ದು ಹಾಲು ಕರ್ಯೋ ಕೆಲ್ಸಕ್ಕೆ ಶುರು ಮಾಡ್ಕ್ಯಂಡ. ಸುಮ್ಮನೆ ಮಲ್ಗಿದ್ದ ಪುಟ್ ಕರ ರಾಜೀವನ್ನ ಮುದ್ ಮಾಡಿ ಎಬ್ಸಿ ಅವ್ರಮ್ಮನ ಹಿಂದ್ಗಡೆ ಬಿಟ್ಟ. ಒಂದೆರಡು ಸಲ ಮುಕ್ಕಿದ್ನೋ ಇಲ್ಯೋ ಅತ್ತೆ ಅವ್ನ ಕುತ್ತಿಗೆ ಕಣ್ಣಿ ಎಳ್ದು ಆಚೆಕಡೆ ತಾಯಿ ಮುಂದ್ಕೆ ನಿಲ್ಸಿ ತಂಬಿಗೆ ಹಿಡ್ದು ಕೂತೇ ಬುಟ. ತಂಬ್ಗಿಗೆ ಹಚ್ ಕ್ಯಂಡಿದ್ ತುಪ್ಪನ ಹೆಬ್ಬೆಟ್ನಾಗೆ ಮುಟ್ಕ್ಯಂಡು ಸೊರಸೊರನೆ ನೊರೆ ನೊರೆ ಹಾಲು ಕರ್ದು ತಂಬಿಗೆ ಗಟ್ಲೆ ತುಂಬ್ತಾ ಇದ್ರೆ ರಾಜೀವನ ಹೊಟ್ಟೆ ಚುರುಗುಡ್ತಾ ಇದ್ದು. ತಾಯಿ ಎಷ್ಟೇ ನೆಕ್ಕಿ ಸಮಾಧಾನ ಮಾಡಿದ್ರೂ ಅಂವ ಸುಮ್ನಾಗ. ಕೊನೀಗೆ, ಒಂದ್ ಮಲೆ ಹಾಲು ಬಿಟ್ಟಿದ್ನೋ ಮಾರಾಯಾ ಅಷ್ಟ್ನೂ ಕರ್ಯಲ್ಲೆ ಹೇಳ್ಕೋತ ಶ್ರೀಮ್ತಕ್ಕ ಅಂವನ್ನ ಮತ್ತೆ ಅಮ್ಮನ ಮಲಿಗೆ ಕೊಡದೆ ತಡ ಅಂವ ಅಚ್ಚೀಚಿಗೆ ಮಾಡ್ದೆ ಕುಡ್ದ.

ಇದ್ನೆಲ್ಲ ಎಂಗೆ ನೋಡಲೆ ಸಿಕ್ಕಿದ್ದು ಈ ಸಲ ದೀಪಾವಳಿ ಹಬ್ಬಕ್ಕೆ ಮೊದ್ಲೆ ನಾಕ್ ದಿನ ರಜ ಜಾಸ್ತಿ ತಗಂಡು ಸಂಪಿಗೆಸರದ ಸ್ವಾದರತ್ತೆ ಮನಿಗೆ ಹೋಗಿದ್ದಕ್ಕೆ. ಈ ಬೆಂಗಳೂರ್ ಪ್ಯಾಟೆ ಸೇರಿದ್ ಮೇಲೆ ಕೂಸೆ, ಅತ್ತೆ ಮನಿಗೆ ಬರದೇ ನಿತ್ತೋತಲೇ ಅಂತ ಯಾವಾಗ್ಲೂ ಬೈಸ್ಕ್ಯಂಡು ಬೈಸ್ಕ್ಯಂಡು ಸಾಕಾಗಿ ಹೋಗಿತ್ತು ಎಂಗೂ. ಅದ್ಕೆ ಈ ಸಲ ಭೂರೆ ಹಬ್ಬಕ್ಕೆ ಬೆಂಗಳೂರಿಂದ ನೆಟ್ಟಗೆ ಇಲ್ಲಿಗೇ ಬರಾ ಹಂಗೆ ರಜ ಅಡ್ಜಸ್ಟು ಮಾಡ್ಕ್ಯಂಡು ಬಂದಾತು. ನಾಳಿಗೆ ಭೂರೆ ಮುಗ್ಸಿ ಸಂಜೆ ಬಸ್ಸಿಗೆ ಊರಿನ ದಾರಿ. ಅತ್ತೆ ಮನೆ ಕೊಟ್ಗೆ ನೋಡಲೇ ಚಂದ. ಒಪ್ಪ ಇಟ್ಟಿರ್ತ. ಮಾವ ಅತ್ತೆ ಇಬ್ರಿಗೂ ಜಾನ್ವಾರ್ಗಾ ಅಂದ್ರೆ ಜೀಂವ. ಇಬ್ರೇ ಇಪ್ಪದು. ಹೆಣ್ ಮಕ್ಳಿಬ್ರೂ ಮದ್ವೆ ಆಗಿ ಗಂಡನ್ ಮನೇಲಿದ್ದ. ಮಗಾ ದಿಲ್ಲೀಲಿ ಲೆಕ್ಚರ್ರು. ಹಂಗಾಗಿ ಅವ್ರ ಮಾತುಕತೆ ಎಲ್ಲಾ ಜಾನ್ವಾರು, ನಾಯಿ, ಬೆಕ್ಕಿನ್ ಜೊತಿಗೇ. ಈಗೀಗ ಮಾಂವ ಮಗರಾಯ ತಂದ್ಕೊಟ್ಟಿರೋ ಕ್ಯಾಮರಾ ಸಿಕ್ ಹಾಕ್ಯಂಡು ಹಕ್ಕಿ ಭಾಷೇನೂ ಕಲ್ತಗಂಡು ಎನ್ ಮನೇಲಿ ಒಬ್ಳೇ ಬಿಟ್ಟಿಕ್ ಹೋಗ್ತ ಅನ್ನದು ಅತ್ತೆ ಕಂಪ್ಲೇಂಟು.
ಅತ್ತೆ ತಿಂಡಿ ತಿನ್ನರತೀಗೂ ಪಾವ್ನಿ ಶ್ರಾವ್ಣಿ ಕತೆ ಹೇಳಿದ್ದೇ ಹೇಳಿದ್ದು. ಈಗ ಎಂಗೊಂದು ಚೊಲೋ ಹೆಸ್ರು ಹುಡುಕ್ಯೊಡು ಪುಟ್ಟಿಕರಕ್ಕೆ. ಈ ಸಲ ಧಾರ್ವಾಹಿ ಹೆಸ್ರು ಬ್ಯಾಡ. ಎಲ್ರ ಮನೇಲೂ ಅದೇ ನಮ್ನಿ ಹೆಸರಿಡ್ತ. ಎಂಗೆ ಬ್ಯಾರೆ ತರದ್ದು ಬೇಕು ಅಂದಿದ್ದಕ್ಕೆ, ಈ ಸಲ ಪುಟ್ಟೀಕರಕ್ಕೆ ಸೈನಾ ಅಂತ ಹೆಸ್ರಿಡೇ, ನಮ್ ದೇಶದ್ ಮಹಿಳಾ ಬ್ಯಾಡ್ಮಿಂಟನ್ ರಾಣಿ ಅವ್ಳು ಅಂದಿದ್ಕೆ ಅತ್ತಿಗೆ ಖುಶ್ಯೇ ಆತು. ಅಡ್ಡಿಲೆ ತಗ ಅದ್ನೇ ಇಡ್ತೀ. ಇಲ್ದೆ ಇದ್ರೆ ನಿನ್ ಮಾವ ಮಾಯಾವತಿ ಅಂತ ಇಟ್ರೂ ಇಟ್ವೇ. ನೆಡಿ ನೆಡಿ ನೆಗ್ಯಾಡಿದ್ದು ಸಾಕು. ಈಗ ನಾಳಿನ್ ಕೊಟ್ಟೆ ಕಡ್ಬಿಗೆ ಹಿಟ್ಟು ಬೀಸ್ಕ್ಯಳ ಕೆಲ್ಸಿದ್ದು. ಅಂಗ್ಳ ಬಳಿಯವು. ಬಾವಿಕಟ್ಟೆ ಚೊಕ್ ಮಾಡವು. ಶೇಡಿ ಬಳ್ಯವು ಒಂದಾ ಎರ್ಡಾ.. ಅಂತ ಗಡಿಬಿಡಿ ಮಾಡ ಅತ್ತೆಯ ಮಲ್ಟಿ ಟಾಸ್ಕಿಂಗ್ ನೋಡಿ ಎಂಗೆ ಒಂತರಾ ವಿಚಿತ್ರ ಖುಶಿ ಮೆಚ್ಗೆ ಅನ್ನುಶ್ಚು.

ಮಧ್ಯಾನ್ನದ್ ಊಟ ಮುಗ್ಸಿ, ಮಾವನ್ ಜೊತಿಗ್ ಒಂದು ಶೀಂಕವ್ಳ ಹಾಕಿ ಹೊರ್ಗಡೆ ಜಗಲಿ ಕಟ್ಟೆ ಮೇಲೆ ಮಲ್ಗಿದ್ದಷ್ಟೇ ನೆನ್ಪು. ಯೋಳಕ್ಕಿದ್ರೆ ಸಂಜ್ಯಾಗೋಜು. ಘಮ್ಮನೆ ಸಾರ್ಸಿದ್ ಅಂಗ್ಳದಾಗೆ ಅತ್ತೆಯ ರಂಗೋಲಿ ಹೂಗೊಂಚ್ಲು. ಹಿಂದ್ಗಡೆ ಕೊಟ್ಗೇಲಿ ಅಂಬಾರಾಗ. ಒಳ್ಗಡೆ ಅಡ್ಗೆ ಮನೇಳಿ ಕಡ್ಬಿನ ಹಿಟ್ಟು ಬೀಸ್ತಾ ಇರ ಒಳ್ಳಿನ ಗಡಗಡ ತಾಳ. ಎದ್ದು ನೋಡಿದ್ರೆ ಮಾಂವ ತ್ವಾಟದಿಂದ ಅರಶ್ಣದ್ ಎಲೆ ಕಿತ್ಗಂಡು ಬರ್ತಾ ಇದ್ದ. ಕೊಟ್ಟೆ ಕಟ್ಟಲೆ. ಎಂಗೆ ಒಂದ್ ಚಂದದ ಕನ್ಸಿಂದ ಇನ್ನೊಂದು ಚಂದದ್ ಕನ್ಸಿಗೆ ಸಾಗಿ ಹೋದ್ ಹಂಗೆ ಅನುಸ್ತಾ ಇದ್ದು.

ಅಷ್ಟೊತ್ತಿಗೆ ಒಳ್ಗಡೆ ಫೋನು ರಿಂಗಾತು. ಆನೆ ಎದ್ ಹೋಗಿ ತಗಂಡ್ರೆ ಆ ಕಡೇಲಿ ಹರ್ಷಭಾವ. ದಿಲ್ಲೀ ಫೋನು. ಲೋಕಾರೂಢಿ ಮಾತು ಮುಗಿಯ ಹೊತ್ತಿಗೆ ಪಕ್ಕಕ್ಕೆ ಬಂದ್ ನಿತ್ತ ಮಾವಂಗೆ ಕೊಟ್ಟಿ ರಿಸೀವರ್ರು. ಇಬ್ರೂ ಭಾಳ ಹೊತ್ತು ಮಾತಾಡ್ ಕ್ಯಂಡ. ಎಂಗೆ ಇದೆಲ್ಲ ಹೇಳಡ ಮಾರಾಯಾ. ಅವ್ಳ್ ಹತ್ರೇ ಮಾತಾಡು ಅಂದ ಮಾವ ಶ್ರೀಮ್ತೀ.. ಕೇಳ್ಚಾ...(ಒಳ್ಳಿನ ಗಡ ಗಡ ನಿಲ್ಚು) ಅಪ್ಪಿ ಫೋನು. ಮಾತಾಡಕ್ಕಡ ಬಾ. ಒಳ್ಳಿಗೆ ಒಂಚೂರು ಕೈತೊಳ್ದ ಹಂಗೆ ಮಾಡಿ ಕೈ ವರ್ಶಿಕೋತ ಅತ್ತೆ ಬಂದು ರಿಸೀವರ್ ಇಸಕಳ್ಚು. ಹೂಂಗುಡ್ತಾ ನಿಂತ ಮಖದಾಗೆ ಶಣ್ಣಕೆ ಬೆವರ ಹನಿ. ನಿಂಗ್ ಸರಿ ಕಂಡಿದ್ ಮಾಡಾ ಅಪಿ. ಎಂಗಳ್ ಮಾತ್ ಕೇಳವು ಯಾರು ಹೇಳು. ...ಹಂ.....ಹೋಗ್ಲಿ ಬಿಡು. ಹಬ್ಬಕ್ ಬಪ್ದಿಲ್ಯನಾ? ಹಾಂ ಅಚ್ಚಲ ಬೆಂಗ್ಳೂರಿಂದ ಇಲ್ಲಿಗೇ ಬೈಂದು. ಭೂರೆ ಮುಗ್ಸಿಕ್ ಮಗೆಗಾರಿಗೆ ಹೋಗ್ತಡ. ಒಬ್ಳೇ. ಗಂಡಂಗೆ ಅಷ್ಟೆಲ್ಲಾ ರಜೆ ಇಲ್ಯಡ.ಅಂವ ದೊಡ್ ಹಬ್ಬದ್ ದಿನ ಅಲ್ಲಿಗೇ ಬತ್ನಡ. ಸರಿ. ಹೇಳ್ತಿ. ನೀ ಹೆಂಗಾರು ಬರಕ್ಕಾಗ್ತಾ ನೋಡು. ಆಗ್ದೆ ಇದ್ರೆ ಎಂತ ಮಾಡದು. ಮತ್ ಮುಂದಿನ್ ಸಲ ಇದ್ದಲೋ. ಸರಿ. ಹುಷಾರಿಲಿರು. ಇಡ್ತಿ....

ಕೊನೆಕೊನೆಯ ಮಾತಿಗೆ ಸ್ವಲ್ಪ ದನಿ ಬಂದಿತ್ತು. ಅಲ್ಲೆ ನಿಂತಿದ್ ಮಾವನ್ ಕಡಿಗೆ, ಸ್ವಲ್ಪ ದೂರದಾಗಿದ್ ನನ್ ಕಡಿಗೆ ನೋಡಿದ್ ಅತ್ತೆ. ಇನ್ನೆಂತದು ಅದೇ ಮಾತುಕತೆ. ನೆಡ್ರಿ. ಹಬ್ಬದ ತಯಾರಿ ಪೂರೈಸಿ, ಊಟ ಮಾಡಕ್ಕಿರೆ ಮಾತಾಡಿರ್ ಆತಪ. ಅಂದು ಒಳಗೆ ಹೋತು. ಮಾವ ಬೇಜಾರದಾಗೆ ತಲೆ ಅಲ್ಲಾಡಿಸ್ಕ್ಯೋತ ಕೊಟ್ಗೆ ಕಡಿಗೆ ಹೊರಟ. ಬೆಕ್ಕು ಶೂರಿ.. ಮಾವನ್ ಕಾಲಿಗೆ ಮೈ ತಿಕ್ಯೋತ ಅವನ್ ಹಿಂದ್ ಹಿಂದಕ್ಕೇ ಹೋಗದು ನೋಡ್ತಾ ಕೂತ ಎನಗೆ ಎಲ್ಲದೂ ಪೂರ್ತಿ ಸರಿ ಇಲ್ಲೆ ಅನ್ಸಿದ್ದು ಹೌದು. ಸಂಜೆಗನಸಿನ ಚಂದವೆಲ್ಲ ರಾತ್ರೆಯ ಕತ್ಲಾಗೆ ನಿಧಾನಕ್ಕೆ ಕರಗಿದ ಹಂಗೆ...!
ರಾತ್ರೆ ಊಟಕ್ಕೆ ಕೂರಕ್ಕಿರೆ ಯಾವತ್ತಿನಂಗೆ ಕರೆಂಟಿರ್ಲೆ. ದೀಪಾವಳಿ ಟೈಮಿಗಾದ್ರೂ ಹಿಂಗ್ ಮಾಡ್ದೆ ಇದ್ರೆ ಬೆಳಕಿನ ಹಬ್ಬ ಹೇಳಿ ಕರೀಲಾಗಿತ್ತು ಅಂದ ಮಾವ. ದಿವಿ ಹಲ್ಸಿನ ಹುಳಿ ಜೊತಿಗೆ ಬಡ್ಸಿದ್ ಹಲ್ಸಿನ ಹಪ್ಪಳ ಮುರೀತಾ ಆನು ನಿಧಾನಕ್ಕೆ ಅಂದಿ..
ಪೂರ್ತಿ ಕತ್ಲಾಗಿರೋ ಅಂಗಳದ ತುಳಸಿಕಟ್ಟೇಲಿ ಪುಟ್ ಪುಟಾಣಿ ಎಣ್ಣೆ ದೀಪ ನೋಡಕ್ಕೇ ರಾಶಿ ಚಂದ, ಸೀರಿಯಲ್ ಲೈಟಾಗಿ ಈ ಕತ್ಲಲ್ಲಿ ಬೆಳಗೋ ದೀಪದ್ ಚಂದ ಕಳ್ದೋಗ್ತು ಅಲ್ದನಾ..
ಅಂವ ನಗ್ಯಾಡ್ದ. ಕೂಸೆ ಪ್ಯಾಟೆಲಿಪ್ಪವಕ್ಕೆ ಒಂದೆರಡ್ ದಿನಕ್ಕೆ ಬಪ್ಪವಕ್ಕೆ ಈ ಕತ್ಲು ಬೆಳಕಿನ ಚಂದ ಗೊತ್ತಾಗ್ತು ಅಷ್ಟೇಯ. ಇಲ್ಲೆ ಉಳ್ಕಂಡವಕ್ಕೆ ಈ ಚಂದ ನೋಡಲೆ ಪುರಸೊತ್ತೂ ಇರದಿಲ್ಲೆ, ಮನೆ ಒಳ್ಗಡೆ ಕತ್ಲಿಗೆ ಹಚ್ಚಾ ಚಿಮಣೇ ಬುಡ್ಡೇ ಸಮ ಮಾಡ್ಕ್ಯಳ ಹೊತ್ತಿಗೆ ದೀಪಾವಳಿ ರಾತ್ರೆ ಕಳ್ದೋಗ್ತು.. ಭೂರೇಲಂತೂ ಕಳ್ರಿಗೆ ಒಳ್ಳೇ ಪರಮಾಯ್ಶಿ..
ಈ ಮಾತ್ಕತೆ ಯಾವ್ದೂ ತಂಗಲ್ಲ ಅಂಬ ಹಂಗೆ ನಿಂತಿದ್ದ ಶ್ರೀಮತತ್ತೆ ಮೊಸರನ್ನ ಬಡ್ಸಿ ಆದ್ ಮೇಲೆ ನಿಧಾನಕ್ಕೆ ಅಂತು. ಅಪ್ಪಿ ಈ ಸಲ ದೀಪಾವಳಿಗೆ ಬಪ್ದಿಲ್ಲೆ. ನಾಕ್ ಜಾತ್ಕ ಕಳ್ಸಿದ್ಯ ಯಾವುದೂ ಇಷ್ಟ ಆಗಲ್ಲೆ. ಇಲ್ಲೆ ಯಾರ್ನಾರೂ ಹುಡ್ಕ್ಯಂಡ್ರೆ ಅಡ್ಡಿಲ್ಯಾ ಅಮಾ ಅಂದ. ಎಂತ ಮಾಡವು ಅಚ್ಲಾ.. ನಂಬದಿ ಚೊಲೋ ಇಪ್ಪ ಹೆಣ್ ಮಕ್ಳು ಎಲ್ರಿಗೂ ಇಂಜಿನೀಯರ್ರೆ ಆಗವು. ಬ್ಯಾಂಗ್ಳೂರಾಗೆ ಇರವು. ಇಲ್ದೆ ಇದ್ರೆ ಫಾರಿನ್ನಿಗೆ ಹೋಗವಡ. ಡೆಲ್ಲಿ, ಉತ್ತರ ದೇಶ ಅಂದ್ರೆ ಅಪ್ಪ ಅಮ್ಮನೇ ಒಪ್ಪದಿಲ್ಲೆ. ಹೋಗಿ ಬಂದು ನೋಡಕ್ಕಾಗದಿಲ್ಲೆ ಅಂತ. ಲೆಕ್ಚರ್ರು ಅಂದ್ರೆ ಒಳ್ಳೆ ಪಗಾರ ಅಂದ್ರೆ ಗೌರ್ಮೆಂಟ್ ಕೆಲ್ಸಲ್ದಲಾ. ಅಂದ್ ಬುಡ್ತ. ಎಂತ ಹೇಳಕ್ಕು ಹೇಳೆ ಗೊತಾಗದಿಲ್ಲೆ. ಎನ್ ಮಕ್ಳೂ ಮದ್ವೆ ಆಗಕ್ಕಿರೆ ಬೆಂಗ್ಳೂರೇ ಆಗವು ಹೇಳಿ ಆಗಿದ್ವಲೆ....ಎಷ್ಟೆಷ್ಟು ಗನಾ ಜನನ್ನ ತೋರ್ಸಿರೂ ಬೆಂಗ್ಳೂರು ಬೆಂಗ್ಳೂರು ಹೇಳೇ ಕೂತಿಕ್ಕಿದ್ದ. ಈಗ್ ನೋಡು ಊರಿಗೆ ಬರದು ಸಸಾರವಲೆ. ಮೂರ್ ವರ್ಷಕ್ಕೊಂದ್ಸರೆ ಬತ್ತ. ಅಪ್ಯೇ ಅಡ್ಡಿಲ್ಲೆ. ಡೆಲ್ಲೀಲಿದ್ಕಂಡೂ ಮೂರ್ನಾಕ್ ಸರೆ ಬತ್ತ. ಎಂಗಕ್ಕೆ ಇನ್ನೂ ಎಷ್ಟ್ ದಿನ ನೆಡೀತು ಹೇಳಲೆ ಗೊತ್ತಾಗದಿಲ್ಲೆ. ಈಗೀಗ ಆಳಿನ್ ಸಮಕ್ಕೂ ನಿಂತಕಂಡು ತ್ವಾಟದ್ ಕೆಲ್ಸ ಮಾಡಲಾಗದಿಲ್ಲೆ ಇವ್ರಿಗೆ. ಮುಂಚೆ ಕೊನೆ ಕೊಯ್ಯವ ಬರ್ದೇ ಇದ್ರೂ ಇವೇ ಮಾಡಿದ್ದೂ ಇದ್ದು. ಈ ಕಗ್ಗಾಡಿನ್ ಮೂಲೆ ಹಳ್ಳಿ ಅಂದ್ರೆ ಆಳ್ ಮಕ್ಕಗೂ ಈಗ್ ಸಸಾರವೇಯ. ಎಮ್ಮನೆ ತ್ವಾಟಕ್ಕ್ ಬರಾ ನಾಕ್ ಆಳಿನ ಮಕ್ಕವೂ ಕಾಲೇಜ್ ಮೆಟ್ಲು ಹತ್ತದವೇಯ. ಹಂಗಂತ ಬರಕತ್ತೇನ್ ಆಗಲ್ಲೆ. ಅಲ್ಲೇ ನಗ್ರದಾಗೆ ಪ್ಯಾಟೆ ತಿರಗ್ ಕ್ಯಂಡೇ ಕಾಲ ಕಳೀತ.

ಎಂಗವಾದ್ರೂ ಎಷ್ಟೋ ಅಡ್ಡಿಲ್ಲೆ. ಆ ಆಳ್ ಗಳ್ ಗತಿ ಯಾರಿಗೂ ಬ್ಯಾಡ. ದುಡ್ಡೆ ತಿಂದ್ ತಿಂದೇ ಕರಗ್ ಹೋಗ್ತು. ಕುಡ್ತ ಬೇರೆ. ಹುಶಾರಿಲ್ಲೆ ಅಂದ್ರೆ ಅಡ್ವಾನ್ಸ್ ಇಸ್ಕಂಡ್ ಮೇಲೇ ಡಾಕ್ಟ್ರ ಮನೆ ಕಡೆ ಹೊಂಡದು. ಮಳೇಲಿ ಮಣ್ಣಾಗೆ ಕೆಲ್ಸ ಮಾಡ್ ಮಾಡ್ ಕಾಲಂತೂ ಎಂತಕೂ ಬರದಿಲ್ಲೆ. ಸೊಂಟ ಮಾತೇ ಕೇಳದಿಲ್ಲೆ. ಹೆಂಗೋ ಮುಂಚಿಂದ ಕೆಲ್ಸ ಮಾಡಿದ್ ಅಭ್ಯಾಸದಾಗೆ ಮಾಡ್ಕ್ಯೋತ ಕಾಲ ತಳ್ತಾ ಇದ್ದ. ದೊಡ್ಡ ರೋಗ ಎಂತಾರೂ ಬಂದ್ರೆ ಹಂಗೇ ಕಾಡಿನ್ ಕಡೆ ಮುಖ ಮಾಡದು ಅಂತ್ಲೇ ಅರ್ಥವಡ. ನಮ್ ಕೊಟ್ಗೆ ಕೆಲ್ಸಕ್ಕೆ ಬಪ್ಪಾ ತಿಮ್ಮಿ ಹೇಳ್ತಿತ್ತು.ಅವ್ರ್ ಮಕ್ಕಾಗೂ ಮದ್ವೆ ಇಲ್ಲೆ. ಹೆಣ್ ಮಕ್ಕ ಇದ್ದವೆಲ್ಲ ಓದ್ದವು ಪ್ಯಾಟೇಲಿ ಕೆಲ್ಸಕ್ ಸೇರ್ಕ್ಯಂಡ್ ಹಂಗೇ ಯಾರ್ ಯಾರನ್ನೋ ಮದ್ವೆ ಆಗ್ ಬುಟಿದ. ಕೆಲ್ಸ ಇಲ್ದೆ ಅಲ್ಕೋತ ಇರ ಈ ಗಂಡ್ ಮಕ್ಕಕ್ಕೆ ಮದ್ವಿಗೆ ಯಾರೂ ಸಿಕ್ತ್ವಿಲ್ಲೆ.. ವಯಸ್ಸೇನೋ ಆಯ್ದು. ಒಬ್ಬಂವಾ ಅದೇನೋ ರೇಪ್ ಕೇಸ್ನಾಗೆ ಜೈಲಿಗೂ ಹೋಗ್ ಬಂದಾತು.. ಕಾಲ ಹಾಳಾಗೋಯ್ದು. ಇಷ್ಟ್ ಮಾತ್ರ ಗೊತ್ತಿದ್ದು. ಎಂತಕೆ ಹೆಂಗೆ ಸಮ ಮಾಡವು ಅಂತ್ ಮಾತ್ರ ಅರ್ಥನೇ ಆಗದಿಲ್ಯೆ.
ಚೆನಾಗಿ ಓದಿ ಬರ್ದು ಕೆಲ್ಸಕ್ಕೆ ಸೇರ್ಕ್ಯಂಡ ಗಂಡ್ ಮಕ್ಕಳಿಗೂ ಹೆಣ್ ಸಿಗದಿಲ್ಲೆ.
ಸರ್ಕಾರಿ ಸಬ್ಸಿಡಿಲೀ ಶಾಲೆ ಮುಗ್ಸಿ, ಲಾಚಾರಾದವಕ್ಕೂ ಸಿಗದಿಲ್ಲೆ

ಹೋಗ್ಲಿ ಸುಮ್ನೆ ನಮ್ ಪಾಡಿಗ್ ನಾವಿದ್ಕಂಬುಡನ ಅಂದ್ರೆ ವಯಸ್ಸೊಂದು ಹೆದರ್ಸ್ ಕೋತ ಹೋಗ್ತು..ಯಾವ ರಾಮ, ಬುದ್ದ ಬರವೋ ಗೊತ್ತಾಗದಿಲ್ಲೆ. ಬೌಶ ಇದಕ್ಕೇ ಕಲಿಗಾಲ ಅಂತ ಹೇಳ್ತಿದ್ವೇನ ಹಿಂದಿನವು... ಮಾತು ತುಂಡರಿಯಿತು.

ಶೂರಿ.. ಮಿಯಾಂವನ್ಕೋತ ಅತ್ತೆ ಕಾಲು ಬಳಸಕ್ಕೆ ಶುರು ಮಾಡ್ತು. ಇದೊಂದಿದ್ದಲೇ ದಿನ ತಳ್ಳಕ್ಕೆ ಕಷ್ಟ ಆಗದಿಲ್ಲೆ ತಗ.. ಬಾರೆ ಶೂರಮ್ಮ.. ಹಾಯಿ ಹಾಕ್ತಿ ಅಂದ್ಕೋತ ಒಂದ್ ಕೈಯಾಗೆ ಹಾಲಿನ್ ದಬರಿ ಇನ್ನೊಂದ್ ಕೈಯ್ಯಾಗೆ ಎಮರ್ಜೆನ್ಸಿ ಲ್ಯಾಂಪ್ ಹಿಡ್ಕಂಡು ಶ್ರೀಮ್ತತ್ತೆ ಮುಂದೆ ಮುಂದೆ ಕತ್ಲೆ ಸೀಳ್ಕ್ಯೋತ ಲಾಯದ್ ಕಡೆ ಹೋದ. ಅವಳ್ ಹಿಂದೆ ಶೂರಿ ನೆರಳಾಗಿ ಬಾಲ ಅಲ್ಲಾಡಿಸ್ಕ್ಯೋತ ವಯ್ಯಾರದಾಗೆ.. ಹೋತು.

ಸುಮ್ನೆ ಅವ್ಳ ಮಾತಿನ್ ಮಳೇಲಿ ತೋಯ್ಸಿಕೋತ ಕೂತಿದ್ದ ಮಾವ ಅಂದ. ಪ್ಯಾಟೇ ಜನ ಅಪ್ಪಿ ಫ್ರೆಂಡ್ಸು ಇಲ್ಲಿಗ್ ಬಂದ್ರೆ ಎಷ್ಟು ಖುಶ್ಯಾಗಿ ಇದ್ಕಂಡ್ ಹೋಗ್ತ. ನಿಮ್ಮನೆ ಹೋಮ್ ಸ್ಟೇಗೆ ಹೇಳಿ ಮಾಡ್ಸಿದ್ ಜಾಗ ಅಂದಿಕ್ ಹೋಗ್ತ. ಎಲ್ಲೀ ಹೋಮು ಎಲ್ಲೀ ಸ್ಟೇ ಕೂಸೆ ಹಿಂಗೇ ಆದ್ರೆ ನಂಗವೇ ಯಾವ್ದಾದ್ರೂ ಓಲ್ಡ್ ಏಜ್ ಹೋಮಿಗೆ ಸೇರವು ಕಾಣ್ತು.. ಅವನ್ ತಮಾಶಿನೇ ಅವನ್ ಗೋಳು ಹೊಯ್ಕ್ಯಂಡ್ ಹಂಗೆ ಮಾವ ಸುಮ್ನಾದ.

ಮನ್ಯಾಗೆ ಅಮ್ಮ ಅಪ್ಪಯ್ಯಂದು ಇದೇ ಲೈನಾಗೆ ಬಪ್ಪ ಮಾತುಕತೆ ನೆನ್ಪಾತು. ಹಳ್ಳಿಮನೆಯ ಚಂದಗಂಭೀರ ಅಣ್ಣಗೆ ಅತ್ತಿಗೆ ಒಬ್ಳು ಸಿಗದೇ ಹೋಗಿರುವುದು ನೆನ್ಪಾಗಿ ರಾತ್ರೆಯ ಕತ್ತಲೆಯೇ ಅಪ್ಯಾಯ ಅನ್ಸಕ್ಕೆ ಶುರುವಾತು.
ಕನೆಕ್ಷನ್ ತಪ್ಪದು ಎಲ್ಲಿ. ಓದಿದ್ರಲ್ಲೋ ಓದ್ದೇ ಇರೋದ್ರಲ್ಲೋ, ಓದಿ ಕೆಲ್ಸಕ್ಕೆ ಸೇರೋದ್ರಲ್ಲೋ, ಹಳ್ಳೀ ಮನೇಲಿ ಇರೋದ್ರಲ್ಲೋ.. ಜಗತ್ತಿನ ವಾಸನೆಗಳಿಗೆ ಮೂಗೊಡ್ಡೋದ್ರಲ್ಲೋ ಅಥ್ವಾ ಹಳ್ಳಿಮನೆಯ ಬೇಲಿಯೊಳಗೆ ಹಿತ್ತಲು ಮಾಡ್ಕ್ಯಂಡು ಕೊಟ್ಟಿಗೆ ನೋಡ್ಕ್ಯಂಡು ನಿತ್ತ್ ಬುಡೋದ್ರಲ್ಲೋ.. ರೀಸರ್ಚುಗಳಲ್ಲಿ ತುಂಬ್ಸಿ ಬಿಸಾಕುವ ಹೆಣ್ಣು ಗಂಡು ರೇಶ್ಯೋದಲ್ಲೋ, ಟೀವಿ ನೆಟ್ಟುಗಳ ಮೂಲ್ಕ ಒಳಗೊಳಗೇ ಗೆದ್ದಲು ಹಿಡ್ದೋಗಿರೋ ಜೀವನದೃಷ್ಟೀಲೋ...ಯಾವ್ದೂ ಅರ್ಥವಾಗದ ಗೋಜಲು. ಎಲ್ಲ ಅಂದ್ಕಂಡ್ ಹಂಗೇ ನಡ್ದ ನಂಗೇ ಇಷ್ಟು ಗೋಜ್ಲು ಆಪ್ ದಾರೆ ಈ ಅತ್ತೆ ಮಾವಂಗೆ, ಎನ್ ಅಮ್ಮ ಅಪ್ಪಯ್ಯಂಗೆ, ಹಿಂಗೇ ಹಳ್ಳಿಗಳ್ ತುಂಬ ಉಳ್ಕೋತ್ ಹೋಗಿರೋ ಹಿರೇ ಜೀವಗಳಿಗೆಲ್ಲರಿಗೂ ಇನ್ನೆಷ್ಟು ಗೋಜ್ಲು, ನೋವ್ವು ಆಗಿರ್ಲಾಗ. ಅಷ್ಟೇ ಅಲ್ಲ ಅತ್ತೆ ಹೇಳ್ದಂಗೆ ಈಗ್ ಮುದ್ಯಾಗ್ತಾ ಇರ ಆಳ್ ಮಕ್ಕಳ್ ಗತಿ ಎಂತು..ಎಲ್ಲದೂ ಅರ್ಥ ಕೊಡದ ಉತ್ತರ ಮೂಡ್ಸದ ಪ್ರಶ್ನೆಗಳೇ.. ಅಯ್ಯೋ ರಾತ್ರೆಯೇ ಹೆದರ್ಸೋ ಬೆಳ್ಗೆಗಿಂತ ನೀನೇ ಚಂದ.. ಅಂದುಕೊಳ್ತ ಎದ್ದು ಹೋಗಿ ಹಿತ್ಲಲ್ಲಿ ಕೈತೊಳ್ದು ಮುಗ್ಸ ಹೊತ್ತಿಗೆ ಮತ್ತೆ ಮಳೆ ಹಿಡ್ಕಂಡ್ಚು. ಕತ್ಲೆಲಿ ಮುಳುಗಿದ್ ಮನೆ ನೀರಲ್ಲೂ ಮುಳುಗ್ಲಕ್ಕು ಅನ್ಸ ಅಷ್ಟು ಜೋರಾಗಿ ಮಳೆ.
ಕೊಟ್ಗೆಯೊಳಗೆ ದನಕರ ಬಾಯಾಡಾ ಸದ್ದು. ಮನ್ಸಿಗೆ ಬದ್ಕಿಗೆ ಒಳಗೊಳಗೇ ಗೆದ್ಲು ಹಿಡೀತಾ ಇದ್ರೂ, ಕೊಟ್ಗೆಲಿಪ್ಪ ಜೀವಗಳ್ನ ಹೊಟ್ಟೇಲುಟ್ಟಿದ್ ಮಕ್ಳು ಅಂಬ ಹಂಗೆ ನೋಡ್ಕ್ಯಳ ಈ ಅತ್ತೆ ಮಾವನ್ನ, ಇವ್ರಂಗೆ ಬದುಕ್ತಾ ಇರಾ ಸಾವ್ರಾರು ಹಳ್ಳಿಜೀವಗಳ್ನ ನೆನ್ಸಿ ಒಳಗೆಲ್ಲಾ ಒದ್ದೊದ್ದೆ.

ಎಲ್ಲ ಸೌಕರ್ಯ ಇದ್ಗಂಡೂ, ಟ್ರಾಫಿಕ್ಕಲ್ಲಿ ಕೆಂಪ್ದೀಪ ಬರಕ್ಕಿರೆ ಸಿಗ್ನಲ್ಲಿಗೆ ಬಂದು ನಿಂತ್ರೆ, ಒಂದಿನ ನೀರು ಬರ್ದೆ ಹೋದ್ರೆ, ಎರಡು ಗಂಟೆ ಲೋಡ್ ಶೆಡ್ಡಿಂಗ್ ಆದ್ರೆ, ಅಂದ್ಕಂಡ್ ದಿನ ಸಿನ್ಮಾ ನೋಡಕ್ಕೆ ಹೋಗಕ್ಕೆ ಆಗ್ದೆ ಇದ್ರೆ, ಅಪ್ರೈಸಲ್ಲು ಇಳಿಮುಖ ಆದ್ರೆ, ಬದುಕೇ ಮುಗ್ದೋದಂಗೆ ಎರಡ್ ಮೂರ್ ದಿನ ಸಿಡಿಸಿಡಿ ಮಾಡ್ಕ್ಯಂಡು, ಯಾವ ಕೆಲ್ಸಾನೂ ಮನ್ಸಿಟ್ಟು ಮಾಡ್ದೆ ಇರೋ ನನ್ನ ಜಮಾನಾದ ಕಲರ್ ಫುಲ್ ಬ್ರೈಟ್ ಲೈಫು - ಈ ಜಲವರ್ಣದ ಮೆದು ನೀಲಿಯಲ್ಲಿ, ಹಸಿರಲ್ಲಿ, ತೊಟ್ಟಿಕ್ಕುವ ಜೀವನಪ್ರೀತಿಯಲ್ಲಿ ಕರಗಿ ಫೇಡ್ ಆಗೋತು.

ಲಾಯದ್ ಬಾಗ್ಲ ಹತ್ರ ಬರಕ್ಕಿರೆ ಒಂದ್ ಮಿಂಚ್ ಬೇರೆ ಮಿಂಚ್ತು. ಅಲ್ಲೆ ಪಕ್ದಾಗೆ ದಿಪ್ಪಾಗಿ ಹೂತುಂಬಿ, ಎಲ್ಲ ಹೂವ್ನೂ ಕೆಳಮುಖ ಮಾಡಿ ನಿತ್ಕಂಡಿದ್ ಪಾರಿಜಾತ ಗಿಡ ನಕ್ಷತ್ರ ಕಡ್ಡಿ ಹಂಗೆ ಹೊಳತ್ತು. ನಾಳೆ ಬೆಳ್ಗೆ ಮಳೆ ನಿಂತ್ ಮೇಲೆ ಎನ್ ಚಂದ ನೋಡು.. ಅಂಬ ಹಂಗೆ.

ಬಿರ್ಸಾಗಿ ಬೀಳ ಮಳಿಗೆ ಬಗ್ ನಿಂತ್ಕಂಬದೊಂದೇ ಪರಿಹಾರ ಅಂತ ಹೇಳ್ತಾ ಇದ್ದೋ ಏನೋ ಅದು.

Friday, October 17, 2014

ಮರಗಟ್ಟು!

ಯಾವತ್ತೋ ಯಾರೋ
ಯಾವ ಯೋಜನೆಗೋ
ಬೀಜವೆಸೆದ ನೆನಪು,
ಬಿಸಿಲು ಕುಗ್ಗಿ ಮೋಡ ಕಟ್ಟಿ
ಮಳೆ ಸುರಿದ ತಂಪು,
ಒಳಗಿನ ಕುದಿ ಕಳೆದು
ಮೊಳಕೆಯೆದ್ದು ಈಗಷ್ಟು
ವರ್ಷ
ಬೀದಿ ಬದಿಯ ಕುರಿ-ದನ
ಆಡು ಮಕ್ಕಳ ಕರುಣೆಯಲಿ
ಚಿಗುರು ರೆಂಬೆಯಾದ ಸೊಂಪು,
 
ಪಕ್ಕದ ರಸ್ತೆ ಅಗಲವಾಗುವಾಗ
ಬೊಡ್ದೆ ಕತ್ತರಿಸಿದ ಹಾಗೆ
ಅಳಿದುಳಿದ ಕೊರಡಲ್ಲಿ
ಮತ್ತೆ ಚೈತ್ರ
ಮರಳಿದ ಹಾಗೆ
ಈ ಸಲದ ಯುಗಾದಿಯ
ಬಿಸಿಲು ಹೊಡೆಯಲು
ಹಸಿರು ನೆರಳು ಕೊಡೆ ಸೂಸಿದೆ
ನೆಳಲ ಕೆಳಗೆ ನಿಲ್ಲಲು
ಗಾಳಿಯೊಂದು ಸುಯ್ದರೆ
ಮತ್ತೇರಿಸುವ ಹೊಂಗೆ ಹೂವಿನ ಚಂದಸ್ಸು!
ಹುಲು ಮನುಜನಿಗೇನು,
ಮಹಾನಗರದ ಮಾಲ್ ಭರಿತ ಡಿಯೋಡರೆಂಟಲ್ಲಿ
ತುಂಬಿಕೊಂಡ ನಾಸಿಕಗವಿಯಲ್ಲಿ
ಜಾಗವಿದೆಯೋ ಇಲ್ಲವೋ
ಯುಗ ಯುಗಾದಿಗಳಿಂದ
ವರಕವಿಗಳಿಂದ
ಮೈತಡವಿಸಿಕೊಂಡ ದುಂಬಿದಂಡಿಗೆ
ಅದೇ ಮತ್ತು ಮತ್ತೆ ಮತ್ತೆ ಗಮ್ಮತ್ತು!
 
ಕೆತ್ತಿ ಕೆತ್ತಿ ಬಿಟ್ಟರೂ
ಸುತ್ತ ಡಾಮರನ್ನೇ ಇಟ್ಟರೂ
ಹೊಗೆಯೊಂದೇ ನೇವರಿಸಿದರೂ
ಕೆಳಗೆ ನಿಂತು ಮರು ಮಾತಾಡದೇ ನಡೆದರೂ
ಬಿಸಿಲು ಕುಡಿದು ಕುಡಿದೇ
ಚಿಗುರಿ ಚಿಗುರಿ ಹರಡುವ ಮರವೇ
ಹಿರಿಯರೇಕೆ
"ಮರಗಟ್ಟು" ಎಂಬ ನುಡಿಗಟ್ಟು ಬರೆದರು?
 
ಒಂದು ನಲ್ನುಡಿಗೆ
ಮೆತ್ತನೆ ಸ್ಪರ್ಶಕ್ಕೆ
ಒಲವೂಡುವ ನೋಟಕ್ಕೆ
ಕಣ್ಣ ಮಿಂಚಿಗೆ ಹಂಬಲಿಸುವ ಮನವೇ -
ಮರಗಟ್ಟು,
ಕತ್ತರಿಸಿ ಕೊಯ್ಯಿಸಿಕೊಂಡರೇನು
ಆಗಸಕೆ ಮುಖವೆತ್ತು.
ದೊರಗು ಮೈಯ
ಕಾಂಡ ಹೊತ್ತ
ಹಸಿರು ಹಸಿರು ಒಡಲ
ತುಂಬ ಬಿಳಿ ಬಿಳಿ ಮುತ್ತು.

Wednesday, October 8, 2014

ಇಬ್ಬಗೆ

ಎಲ್ಲ ಮುಗಿದ ಹಾಗೆ
ಅಂದ್ಕೊಂಡ ಆ ದಿನಗಳಲ್ಲಿ,
ಕತ್ತಲೆಕಾನ್ ಬದುಕಿನಲ್ಲಿ,
ಬೆಳಕು ಹರಿಯಿತು.
ಹೌದು,
ಉದೂದ್ದಕೆ ನೆರೆಯಾಗಿ..
ಈಜು ಮತ್ತು ಲೈಫ್ ಜಾಕೆಟ್ಟಿನ
ಸುಳಿವೂ ಇಲ್ಲದೆ,
ಸಡಿಲ ಮೈಯಲ್ಲಿ ಸುಮ್ಮಗೆ,
ಇಳಿಬಿದ್ದೆ.
ಹರಿದಷ್ಟೂ ಹರವು!

ನಿಲ್ಲ ಬೇಕು,
ಒಡ್ಡು ಬೇಕು,
ಹರಿವ ಪಾತ್ರ ಹೀಗಿರಬೇಕು,
ಎಲ್ಲ ಯಾಕೆ ಬೇಕು?
ಎಂದೆಲ್ಲ ಭಾಷಣ ಬಿಗಿವ ವಯಸ್ಸು
ಮುಗಿದು,,,

ಹೊಳೆ
ಕೆರೆಯಾಗಿದೆ.
ಸುತ್ತ ಕೆರೆಗಳ ನೀರು ಹರಿದು,
ತುಂಬಿ ತುಳುಕಿ,
ಒಡ್ಡು ದಾಟಿ,
ಸಣ್ಣಕೆ ಧಾರೆಯಾದ
ಹರಿವಿನ ಕಟ್ಟೆಯ
ಮೇಲೆ ಮಕ್ಕಳು
ಕಾಲಾಡಿಸಿ ನಗುತ್ತಾರೆ,

ಹೂಳೆತ್ತುವ ದಿನ
ಹತ್ತಿರ ಬರುತ್ತಿರುವ
ನೆನಕೆ!

ಇಲ್ಲ ಮಳೆ ಬೇಡ,
ನೆರೆಯೇ ಬೇಕು
ಎಂದು ಹಟ ಮಾಡುವ
ಮನಸ್ಸು,
ಯಾವ ಹಟಕ್ಕೂ ಬಗ್ಗದ
ಜ್ಞಾನವೈರಾಗ್ಯ ವಯಸ್ಸು.

ದೂರದೂರಿನ
ಹೊಳೆಯೊಂದರ ಹೊಳವು:
ಮರೆತುಬಿಡು ಮನಸ್ಸು, ವಯಸ್ಸು
ಸುಮ್ಮನೆ ಕೂರುವುದೇ ತಪಸ್ಸು
ಅಷ್ಟಾದರೆ...
ನೆರೆ ಬಂದ ಹಾಗೆ
ತೊರೆ ಸಿಕ್ಕ ಹಾಗೆ.

ಅಷ್ಟಾಗುವುದೆ?! 

Monday, August 25, 2014

ಅನುತ್ತರಾ

ಅದುಮಿಟ್ಟ ಅಸಹನೆ,
ಅವಡುಗಚ್ಚಿದ ದುಃಖ,
ಅಡಗಿಸಿಟ್ಟ ಕೀಳರಿಮೆ,
ಎಲ್ಲವನ್ನ ಉಂಡು
ಹೂಹೂವಿನ ಚಿತ್ರದ
ಮಿದು ಹತ್ತಿಬಟ್ಟೆ ಹೊದ್ದ
ಕ್ರೌರ್ಯ-ವು,
ನಿನ್ನ ಪುಟಿದು ನಿಲ್ಲುವ
ಎಳೆ ಬೆನ್ನಿಗೊಂದು ಸೆಳೆದು
ಬಾರಿಸಿದ್ದು ತಪ್ಪು ಮಗಳೆ.

ಇವತ್ತು,
ಗೊತ್ತಾಗದೆ ಅಥವಾ ಗೊತ್ತಾಗಿಯೇ
ಕ್ಷಮಿಸಿ
ನಕ್ಕು ಮುದ್ದಿಸಿ,
ಕೆನ್ನೆಗೊಂದು ಹೂಮುತ್ತೊತ್ತಿ
ಅಳಿಸಿಬಿಟ್ಟೆ ನನ್ನ ನೀನು.



ಮುಂದೊಮ್ಮೆ ನಾಳೆ,
ವರುಷಗಳು ಕಳೆದು,
ಗೊತ್ತಾದಾಗ,
ಕ್ಷಮಿಸಬೇಡ ನೀನು
ಕ್ಷಮಿಸಲೂಬಾರದು.
ಹೊರಲಾರೆ ಕ್ಷಮೆಯ ಭಾರ ನಾನು. :(

ಪುಟ್ಟಿಗೆ ಹೊಡೆದೆ ಎಂದಲ್ಲ,
ಹೊಡೆಯಬಾರದಿತ್ತು ಎಂದೂ ಅಲ್ಲ,
ಎಲ್ಲೋ ಇರಿದಿದ್ದಕ್ಕೆ ಇಲ್ಲಿ ಹೊಡೆಯುವುದು,
ಯಾತರದೋ ಅಸಹನೆ
ಇಳಿದಾರಿಯಲಿ ಎದುರುಬೀಳದಲ್ಲಿ
ಹರಿಬಿಟ್ಟಿದ್ದು ಹೇಗೆ ಸರಿ?


ಎಲ್ಲಕಿಂತ ಪ್ರೀತಿಯ ಅಮ್ಮ ಎಂದು
ನೀನು ಹೊಂದಿಸಿಕೊಂಡೆ,
ಎಂದರೂ
ನೀನು ಇದೇ ದಾರಿಯ
ಪಥಿಕಳಾಗಬಾರದು.

ಹೌದು,
ಮುಂದೊಮ್ಮೆ ಇದನೋದಿ
ಗೊತ್ತಾದಾಗ ನೀನು
ನನ್ನ ಕ್ಷಮಿಸಬಾರದು,
ಕ್ಷಮಿಸುತ್ತ ಇದೇ
ಹಾದಿಯ ನೀನು
ಹಿಡಿಯಬಾರದು.
ಅದ ಕಲಿಯಬಾರದು.

ಕೆಲವು ಸಲ,
ಕ್ಷಮಿಸುವುದಕ್ಕಿಂತ
ಕ್ಷಮಿಸದಿರುವುದು ಹೆಚ್ಚು ಅಗತ್ಯ.

Monday, July 14, 2014

ನಮ್ಮನೇ ದಿನಚರೀಲಿ...ಬೆಳ್ಗೆ

ಬೆಳ್ಗೆ ನಮ್ಮನೇ ದಿನಚರೀಲಿ ಈ ತರ ಎಲ್ಲಾ ನಡ್ಯತ್ತೆ.

"ಅಮ್ಮಾ
ನಂಗೆ ಒಂದು ಪೆನ್ ಬೇಕು.
ಸಂಜೆ ಆಫೀಸಿಂದ ಬಂದ್ ಮೇಲೆ ಸ್ವಲ್ಪ ಹೊತ್ತು ಕೂತ್ಕೊ.
ಮುಖ ತೊಳ್ಕೋ.
ಕುಕ್ಕರ್ ಇಟ್ಟು ಏನಾದ್ರೂ ತಿನ್ನಕ್ ಕೊಟ್ಟು
ನೀನೂ ಏನಾರು ಚೂರ್ ತಿನ್ನು. ಟೀ ಕುಡಿ.
ಆಮೇಲೆ ಇಬ್ರೂ ಜ್ಯೋತೀಸ್ ಹೋಗೋಣ ಅಮ್ಮ.
ಅಲ್ಲಿ ಆ ಪೆನ್ ಇರ್ಬೋದು."

[ಇದು ಸ್ನಾನದ ಮಧ್ಯದ ಮಾತುಕತೆ.
ಹಾಗಾಗಿ ಬೇಕುಗಳ ಸಾಲು ಬಂದ್ ಕೂಡ್ಲೆ
ನಾನು ಜೋರಾಗಿ ಮೈತಿಕ್ಕಿ ಅವಳು ಒಂದ್ಸಲ
ಜೋರಾಗಿ ಕೂಗಿ.. ಎಲ್ಲ ಆಗುತ್ತೆ ಮದ್ ಮಧ್ಯ]

ನನ್ನ ಬಾಯಿ 'ಆ' ಅಂತ ಕಳ್ದಿರತ್ತೆ. ಹುಬ್ಬು ಪ್ರಶ್ನಾರ್ಥಕ ಚಿಹ್ನೆ.
ಈಗ ಮೊದಲಿಗಿಂತ ಸ್ವಲ್ಪ ಮೆದು ದನಿ, ಅನುನಯದ ಬನಿ.

"ಅದೇನೂ ಅಂದ್ರೆ, ಅಕ್ಸ್ಮಾತ್ ಕರೆಂಟ್ ಹೋಗ್ಬಿಟ್ರೆ ಬರಿಯೋಕ್ ಆಗಲ್ಲ ಅಲ್ವಾ.
ಈ ಪೆನ್ನಲ್ಲಿ ಒಂದು ಲೈಟಿರತ್ತೆ.
ಅದೇ ಬರಿಯಕ್ಕ್ ಬರೋದನ್ನ ಒತ್ತಿದ್ ಕೂಡ್ಲೆ ಪೆನ್ನು ಬರುತ್ತಲ್ವಾ
ಆಗ ಲೈಟೂ ಹತ್ಕೊಳತ್ತೆ. ಬೇಕಾರೆ ಕತ್ಲಲ್ಲೂ ಬರೀಬೋದು."
ಈಗ ನಾನು ನಗಬೇಕೋ ಅಳಬೇಕೋ?

ನಕ್ಕರೆ ಕೂಡಲೇ ಜ್ಯೋತೀಸ್ ಹೋಗಬೇಕಾಗತ್ತೆ.
ಆಗ ಅವಳಿಗೆ ನಗು ಮತ್ತು ನನಗೆ ಇನ್ನೇನು ಅಳು ಬರುವ ಕ್ಷಣ.
ನಾನು ಮರುಮಾತಾಡದೆ ಕೊನೆಯ ತಂಬಿಗೆ ನೀರು ಆ ಪುಟ್ ಪುಟಾಣಿ ಮೈಗೆ ಹೊಯ್ದು


ಮೆತ್ತನೆ ಟವೆಲ್ಲಲ್ಲಿ ಒರಸಿ, ಒಂಚೂರು ಜೋರಾಗಿನೇ ಬಾತ್ರೂಮಿನಿಂದ ದಬ್ಬಿಕೊಂಡು ಹೊರಗೆ ಬರುತ್ತೇನೆ.

ನಾನು ಈ ಮಾತುಕತೆಯ ಮಧ್ ಮಧ್ಯೆ ಬರುವ ಉದ್ಗಾರಗಳು, ಅನುನಯಗಳನ್ನೆಲ್ಲಾ ಇಲ್ಲಿ ಬರೆಯಲು ಹೋಗಿಲ್ಲ. :)

Friday, July 4, 2014

ನಿನ್ನೆಯ ಸಂದೂಕದಿಂದ ತೂರಿಬಂದ ಒಂದು 'ಓಹ್' ಕ್ಷಣ!

ಟ್ರಾಫಿಕ್ಕು ತಪ್ಪಿಸಲು
ಹಳೆಯ ಓಣಿಯಲ್ಲಿ
ಓಡಿದ ಆಟೋ,
ಅಲ್ಲಿ ಮರಗಳ ಮರೆಯಲ್ಲಿ
ಎತ್ತರದ ಕಟ್ಟಡ,
ಹೊಗೆ,ರಶ್ಶು,ಹಾರ್ನು,
ಮೋಡಗಟ್ಟಿದ ಸಂಜೆ,
ತಡವಾದ ಅರ್ಜೆಂಟು,
ಕಾಯಲೇಬೇಕಾದ ದೊಡ್ಡ ಸಿಗ್ನಲ್ಲು,
ಎಲ್ಲ ಮಸುಕಾಗಿ......


ಒಂದು ಚಳಿಗಾಲದ ಇಳಿಮಧ್ಯಾಹ್ಯ-
ಕಾರಿಡಾರಿನುದ್ದಕೂ
ಟೇಬಲ್ಲು ಕುರ್ಚಿ,
ಗೋಡೆಗಳ ಮರೆಮಾಚಿದ
ಪುಸ್ತಕದ ಬೀರು,
ಕಿಟಕಿಪಕ್ಕದಲಿ
ಕುಳಿತಿಹಳು ನಿನ್ನೆ
ಹಸಿರುಚೂಡಿಯ ಮೇಲೆ ಬಿಳಿಬಿಳಿ ಚುಕ್ಕಿ,
ಪುಸ್ತಕದ ಪುಟಗಳಲಿ ಹಾರುತಿಹ ಹಕ್ಕಿ,
ಇನ್ನೆಲ್ಲೋ ಮೂಲೆಯಲಿ ಕೂತು ಓದುತ
ನೋಡಿದವನಿಗೆ ಅಚ್ಚರಿ,ಖುಶಿ ಉಕ್ಕಿ,
ಪುಟಗಳಲ್ಲೆ ಮುಳುಗಿದವಳಿಗೂ ತಟ್ಟಿ
ಭಾವದೊರತೆಯೊಂದು ಬನಿಯಿಳಿದ
ಘಳಿಗೆ!


ಆ ಹಳೆಓಣಿಯ
ನೆನಪಿನ ಕೋಣೆಯ
ಬಾಗಿಲು ದಬ್ಬಿದಾಗ....
ಇಲ್ಲಿ ಅರ್ಜೆಂಟಲ್ಲಿ,ರಶ್ಶಲ್ಲಿ.
ಟ್ರಾಫಿಕ್ಕಲ್ಲಿ.....


ಅವಳ ಹಳೆ ಹಸಿರುಬಿಳಿಚುಕ್ಕೆ ಬಟ್ಟೆ,
ಅವನ ನೀಲಿಗೀಟಿನ ಅರ್ಧತೋಳಿನಂಗಿ,
ಎಲ್ಲಕ್ಕೂ ಮಿಗಿಲಾಗಿ
ತುಟಿಯಂಚಲಿ ಅರಳಿ,
ಕಣ್ಣಲ್ಲಿ ಬೆಳಗಿ,
ಆತ್ಮಕ್ಕೇ ಆಹ್ಲಾದ ಬೆರೆಸಿದ
ನಗೆಹೂಗೊಂಚಲು.


ಓಹ್
ಎಲ್ಲ ಗೊತ್ತೆಂದುಕೊಳ್ಳುವುದೆಷ್ಟು ತಪ್ಪು!!


ಅವತ್ತು
ನೀನು ನಗದಿದ್ದರೆ,
ನನ್ನ ಒಪ್ಪದಿದ್ದರೆ,
ಇವತ್ತು ಈ ನೆನಪಿರುತ್ತಿರಲಿಲ್ಲ. ಜೊತೆಗೆ ನಾನೂ.

Friday, June 27, 2014

ಸಂಸರ್ಗ

ಸೊಟ್ಟಕೆ
ಅಂಕು ಡೊಂಕಾಗಿ
ಕೆಲಕಡೆ ದಪ್ಪಗಾಗಿ
ಮತ್ತೊಂದೆಡೆ ಹರವಾಗಿ
ಬೆಳೆದ ಬಳ್ಳಿಯಲೊಂದು
ಮೊಗ್ಗು
ಬಳ್ಳಿಗೆ ಹಸಿರು ಕಡಿಮೆ
ಸೊಂಪಿಲ್ಲ
ನೆರಳೂ ಇಲ್ಲ
ಘಮ ಕೇಳಲೇಬೇಡಿ.
ಬೇಕೋ ಬೇಡವೋ
ಎಂಬ ಹಾಗೆ.

ಇನ್ನೂಬಿರಿಯದ
ಮೊಗ್ಗು
ಇಷ್ಟು ದೂರಕ್ಕೇ
ಘಮ್ಮೆಂದು
ಎಸಳಿನ ನಾಜೂಕು
ಮ್ಯಾಕ್ರೋ ಲೆನ್ಸಿಗೆ ಗೊತ್ತು.
ಅರಳುವ ಮುನ್ನ
ಒಳಗೆ ಬಣ್ಣ
ತಿಳಿಯಾಗಿ ಹರಡಿಕೊಳ್ಳುವ ಹೊತ್ತು
ಪಕಳೆಗಳ
ಮಧ್ಯದಿ ಬಣ್ ಬಣ್ಣದ
ರೇಣು ಹೊತ್ತ ಶಲಾಕೆ
ಇದು ಈ ಬಳ್ಳಿಯದೇ ಹೂವೇ?!
ಒಣ ಬಳ್ಳಿಗೇ
ಸಂಭ್ರಮವೊಂದು ಆವರಿಸಿದ
ಹಾಗೆ.

ನಾರೂ ಸ್ವರ್ಗಕ್ಕೆ ಹೋದ ಬಗೆ
ಓದಿ ತಿಳಿದಿದ್ದು
ಈಗ ಗೊತ್ತಾಗುವ ಸಮಯ.

Wednesday, June 25, 2014

ರಾತ್ರಿರಾಣಿ

ರಾತ್ರಿರಾಣಿಗೆ
ಮತ್ತೇರಿಸುವ ಸುಗಂಧ,
ಮಾರುದೂರಕ್ಕೆ ಮಾತ್ರ!
ಬಳಿಗೇ ಹೋದರೆ,
ಕಡುಹಸಿರು ಎಲೆಗಳ ಮೇಲೆ
ರಂಗೋಲಿಎಳೆಯಿಟ್ಟ ಹಾಗೆ,
ಹತ್ತಿರದಿ ಮೂಗೊತ್ತಿ
ಮೂಸಿದರೂ ಪರಿಮಳವಿಲ್ಲ.
ಗಾಳಿಗೊಡ್ಡಲೆಂದೇ
ಸೂಸುವ ಘಮ!

ಅದ್ಯಾಕೋ ಹಳೆ
ಝೆನ್ ಕತೆ ನೆನಪಾಗುತ್ತೆ,
ಚಿಟ್ಟೆ,ಸಂತಸ, ಮತ್ತು ಹಿಡಿದಿಡಲು ಕಷ್ಟಪಡುವ ಹುಡುಗೀ
ಹಸಿಯಾಗಿ,ಬಿಸಿಯಾಗಿ,ಮಾಗಿ-
ಬಿಡಲು

ಇವಳು ಬೇಂದ್ರೆಕವಿತೆಯಲ್ಲ.
ಹುಸಿಯಾಗಿ ಉಳಿಯುವ
ಹಗಲುಗನಸು.

ಸಂಜೆಯು ಇರುಳಿನಲ್ಲಿ
ಇಳಿಯುವ ಹೊತ್ತಿಗೆ,
ನೀರುಣಿಸಲು ಹೋದ ತಪ್ಪಿಗೆ,
ಅರೆಬಿರಿದ ಮೊಗ್ಗೆ ಮೊಗ್ಗೆ.
ಸುಮ್ಮನಿರಲು ಬಿಡದೆ
ಪದಗಳ ಹೆಣಿಗೆಗೆ
ಕಾರಣ..
ಕಿವಿಯಲಿ ಕಾಲೂರಿದ ಹಾಗೆ
ಎಲ್ಲದರಲ್ಲೂ ತೂರಿ ಬರುವ
ಈ ಉದ್ದ ಮೂಗೇ..

Wednesday, June 4, 2014

ಹೀಗೆಲ್ಲಾ ಇರುತ್ತೆ...

ಮೊದಲ ಸಲ -
   ಮುಖ ಉಬ್ಬಿ,
   ಕಣ್ ತುಂಬಿ ತುಳುಕಿ,
   ಹಲ್ಲು ಕಚ್ಚಿ,
   ಇಡಲಾರದೆ ಇಟ್ಟ ಹೆಜ್ಜೆ,
   ನೋಟ ಕಿತ್ತಿಡದೆ-,
   ಇರಿಯುತ್ತಾ,
  ಯಾರದೋ ಕೈಯಲ್ಲಿ-
  ಕೈಯಿಡಿಸಿಕೊಂಡು,
  ಬಾಗಿಲಿಂದ ಮರೆಯಾಗುವವರೆಗೂ
  ಬಗೆದು ತಿಂದ
  ಕಣ್ಗಳು.


ಎರಡನೆಯ ಸಲ -
   ಕಿತ್ತಿಡಲೇ ಬೇಕಿದ್ದಿದ್ದು
   ಗೊತ್ತಿದ್ದೇ,
   ತುಳುಕದೆ ತುಂಬಿಕೊಂಡ ಕಣ್ಗಳು.
   ತಿರುಗಿದರೆ ತುಳುಕೀತೆಂದು,
   ನೋಡದೆ,
   ಭರಭರನೆ ನಡೆದು,
   ಬಾಗಿಲಿಂದ
   ಮರೆಯಾಗುವ ಮೊದಲೊಮ್ಮೆ
   ಹಣಿಕಿದ್ದು.

ಮೂರನೆಯ ಸಲ-
   ನವಿಲಿನ ಕುಣಿತವಲ್ಲದಿದ್ದರೂ
   ಹೊಸದರ ನಿರೀಕ್ಷೆಯ
   ನಲಿವಿನ ನಡಿಗೆ.
   ಕಣ್ಣು ಹರಿದಾವು
   ಅತ್ತಿತ್ತ,
   ಹಳಬರ ಹುಡುಕುತ್ತ,
   ಒಳಗಿನ ಹುಮ್ಮಸ ಹೊರಗೂ.

ಆಹಾ..! ಗೆದ್ದೆನೆಂದು
ಬೀಗುವಂತಿಲ್ಲ,
ದಾರಿಯುದ್ದಕೂ
ಸಡಿಲವಾಗಿ ಹಿಡಿದ
ಮೆದು ಕೈ,
ಬಿಡಿಸಿಕೊಳ್ಳುವಾಗ
ಬಿಗಿಯಾಗಿದ್ದು .............
ಅಮ್ಮ ಮಗಳಿಗೆ ಮಾತ್ರ ಗೊತ್ತು.

ಇಂದು ನನ್ನ ಸೃಷ್ಟಿ ಶುಭದಾಯಿನಿಗೆ ಶಾಲೆ ಶುರು. ಪ್ಲೇಹೋಮು, ಎಲ್-ಕೆಜಿ ಮುಗಿಸಿ ಈಗ ಯೂ-ಕೆಜಿ.

Monday, May 12, 2014

ಬೃಹತ್...!

ರಾಜರಿಗೇ ರಾಜನಂತೆ,
ರಾಜ್ಯಗಳ ಗೆದ್ದನಂತೆ,
ಸೀಮೆಗಳ ಸೇರಿಸಿ,
ಮೇರೆಗಳ ವಿಸ್ತರಿಸಿದನಂತೆ.
ಗೆಲುವ ಕಂಡರಿಸುವ
ಹಂಬಲ ಹೊತ್ತು..
ವರುಷಗಟ್ಟಲೆ
ಸಾವಿರಶಿಲ್ಪಿಗಳ
ಉಳಿಪೆಟ್ಟಿನಲಿ
ಮೂಡಿತು
ಬೃಹದ್ದೇಗುಲ!

ಎಲ್ಲ ದೊಡ್ಡವು
ಆವರಣ, ಪ್ರಾಕಾರ
ಕಮಾನು,ಗೋಪುರ
ನಂದಿ,ಸ್ತಂಭ, ಸ್ಥಾವರ ಲಿಂಗ!
ಚೋಳಶಿಲ್ಪಕಲೆ, ಹಿರಿಯ ರಾಜನ ಖ್ಯಾತಿ!

Photo courtesy - web (southindiatemples.net)
ಕಾಲ ಹೊರಳಿತು.
ದೇಹವಳಿಯಿತು.
ಬಣಗಳ ಪಂಗಡಗಳ ಧರ್ಮಗಳ
ಯುದ್ದಕೆ ಪಕ್ಕಾದ
ಬೃಹತ್ ದೇಗುಲ
ಪೆಟ್ಟಾದರೂ ಮೀಸೆ ಮಣ್ಣಾಗದ ಹಾಗೆ
ಮುಜರಾಯಿ ಇಲಾಖೆಯ
ಕಾಯಕರ್ಮದಲಿ
ಮತ್ತಷ್ಟು ಗರಿಗೆದರಿ.

ಹಳೆಯ ಕತೆ ಹೇಳಲು:
ರಾಜರ ಕತೆ,
ಸೋತವರ ಕತೆ, ಗೆದ್ದವರ ಕತೆ
ಊರು ಬಿಟ್ಟವರ ಕತೆ,
ಬಂದು ಸೇರಿದವರ ಕತೆ,
ನೋಡಿ ಹೋಗುವವರ ಕತೆ,
ಹೋಗುವಾಗ ತಿರುಗಿ ನೋಡಿ ಹೋಗುವವರ ಕತೆ,,,,
ಹೇಳಲೆಂದೇ ಉಳಿದಿದೆ.
ಉಳಿದಿದ್ದಷ್ಟೇ ಅಲ್ಲ,
ಅಳಿದಿದ್ದೇ -
ಹೇಳುವ ಕತೆಗಳು

ಸಾಕಷ್ಟಿವೆ.

Thursday, April 24, 2014

ಕು ಹೂ ಗೀತ

ಇವಳು
"ಸ್ಥವಿರಗಿರಿಯ ಚಲನದಾಸೆ",
ಇವನು
"ಗಂಗಾವತರಣ".
ಇವಳು
ಕಲರವದ ಮರುದನಿ ಹಕ್ಕಿ.
ಇವನು
ಹಕ್ಕಿ ಕೂತ ರೆಂಬೆ.
ಇವಳು
ಬೆಳ್ಳಿ ಮೂಡಿತೋ ಕೋಳಿ ಕೂಗಿತೋ.
ಇವನು
ಎಮ್ಮೇ ನಿನಗೆ ಸಾಟಿಯಿಲ್ಲ.
ಇವಳು
ದೊಡ್ಡವರೆಲ್ಲ ಜಾಣರಲ್ಲ.
ಇವನು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ.
ಇವಳು
ದಂಡೆಗೆ ಹುಲಿಮುದ್ದು
ಮಾಡಿ ಮತ್ತೆ ಮತ್ತೆ ಬರುವ
ಸಮುದ್ರೆ.
ಇವನು
ಸಮುದ್ರೆಗೆ
ಕಾದು ಕೂತ
ದಂಡೆ.
ಇವರಿಬ್ಬರ ಸಂಗಾತ
ದಲ್ಲಿ
ನಾವು
ತೆರೆಯಿಳಿತ ತೆರೆಯೇರು,
ಸಂಭ್ರಮದ ಈಜುಮುಳುಗು,
ಒಮ್ಮೊಮ್ಮೆ
ನೀರು ಕುಡಿದು ನೆತ್ತಿ ಹತ್ತಿ,
ಮತ್ತೆ ನಗುನಗುತ್ತ
ಅಳುನುಂಗಿದ

ಮೆರ್ರಿ ಗೀತ. 

ಪುತಿನ ಅಂದ ಹಾಗೆ
ಕೂ ಗೀತ. ಹೂ ಗೀತ. ಕುಹೂ ಗೀತವು.


Monday, April 21, 2014

ಸಾಂತ್ವನ

ನೀನು,
ನಿನ್ನೆ,
ಪೇಟೆಬೀದಿಯ ಮಧ್ಯೆ,
ನನ್ನ ಹರುಕುಬಟ್ಟೆಯನ್ನೂ ಕಿತ್ತೊಗೆದು
ಚಪ್ಪಲಿಯಲ್ಲಿ ಹೊಡೆದುಬಿಟ್ಟೆ.
ಒಂದು ಕಣ್ಣಿನಲ್ಲಿ ನೀರು ಸುರಿದವು-
ಅವಮಾನಕ್ಕೆ,
ಮುಚ್ಚಿಟ್ಟುಕೊಂಡಿದ್ದು
ಬಯಲಾದ ಅಸಹಾಯಕತೆಗೆ,
ಹೊದಿಸಿದ ನೀನೇ
ಕಿತ್ತೊಗೆದ ವಿಪರ್ಯಾಸಕ್ಕೆ.
ಇನ್ನೊಂದು ಕಣ್ಣಲ್ಲಿ ಹನಿಗಳೊಡೆದವು-
ಜನ ಬಂದು,
ಮೈಮುಚ್ಚಿ,
ಕಣ್ಣಲ್ಲೇ ಛೇ ಪಾಪ
ಎಂದಿದ್ದಕ್ಕೆ.

ಪಯಣವೆಂದು
ಭ್ರಮಿಸಿ
ನಿಂತಲ್ಲೇ ನಿಂತಿದ್ದಕ್ಕೆ
ಇದೇ ತಕ್ಕ ಮರ್ಯಾದೆ.

ಕೃತಜ್ಞತೆ ಕೈಕಟ್ಟುತ್ತದೆ.
ದನಿ ಮೂಡದ
ಮಾತುಗಳ
ಬಳ್ಳಿಸಾಲು
ಕಾಗದವಲ್ಲದ ಕಾಗದದಲ್ಲಿ
ಬೆಂಕಿ ಹಚ್ಚುತ್ತದೆ.
ಹೊಗೆಯಿಲ್ಲ,
ಬರಿಯ ಉರಿ ಮಾತ್ರ,
ಕಿಡಿಯೂ ಮರಳದ
ಹಾಗೆ.. ಬೂದಿ ಕೂಡ ಇಲ್ಲ,
ಒಮ್ಮೊಮ್ಮೆ

ಉರಿಯೇ ಸಾಂತ್ವನ.

Friday, April 11, 2014

ಅನುಕ್ತ

ಧುಮ್ಮಿಕ್ಕುತ್ತದೆ
ಧಾರೆ
ಹೊಮ್ಮುತ್ತದೆ
ಜ್ವಾಲೆ
ಸುಯ್ಯುತ್ತದೆ
ಅಲೆ....

ಒಡ್ಡು
ಕಟ್ಟೆ
ದಂಡೆ.. ಗಳಿಗೆ ಸುಳಿಸುಳಿದು-
ತಡೆಯುತ್ತದೆ,
ಹಿಮ್ಮೆಟ್ಟುತ್ತದೆ,
ಮರಳುತ್ತದೆ,

ತುಟಿಗಳಲ್ಲಿ
ನೇತಾಡುವ ಮಾತು..
ತಿರುಗಿ
ಬಂದ ಕಡೆಗೆ ಹೋಗುತ್ತದೆ.

ಹೇಳುವುದಕ್ಕೂ
ಕೇಳುವುದಕ್ಕೂ

ಸಮಯವಿಲ್ಲ.

Monday, April 7, 2014

ಖುಶಿ ಕದ್ದಿಟ್ಟಿದೇನೆ... ರುಚಿ ನೋಡದೆಯೇ...

ಗಾಢ ಕತ್ತಲೆಯ ಒಡಲಿಗೆ,
ಸಾಲುದೀಪದ ಬೆಳಕಿನ ಅಂಚು,
ಕತ್ತಲೆಯನ್ನೇ
ಆಪ್ತವಾಗಿಸುವ ಸಂಚು!

ಟೇಬಲ್ಲಿನ ಮೇಲೆ,
ಮೂಲೆಯಲ್ಲಿ,
ತರಿಸಿಟ್ಟ ಹೊಸ ಪುಸ್ತಕ.
ಪುಟ ಬಿಚ್ಚಿಲ್ಲ,
ಇನ್ನೂ.
ಶುರು ಮಾಡಿದರೆ,
ಮುಗಿದು ಹೋಗುವ ಭಯ.

ಈ ಜನ್ಮದಲ್ಲಿ
ಇದು ಮೊದಲ ಬಾರಿ.
ಅನಿಸಿದ್ದು ಮಾಡದೆ,
ಮುಗಿದು ಹೋಗಬಹುದು
ಎಂದು ತಡೆದಿರುವುದು...!


ಕೋಡಗನ ಕೋಳಿ ನುಂಗಿತ್ತಾ
ಎಂಬ ಶರೀಫಜ್ಜನ ಮಾತು
ಬರಿಯ ಫ್ಯಾಂಟಸಿಯಿಂದ
ನಿಜಕ್ಕೆ ಹೊರಳಿಕೊಳ್ಳುವ
ಹೊತ್ತು......
ಹೌದು ವಯಸ್ಸಾಯಿತು.
ಬಿಸಿಲಿಗೆ ಬಯ್ಯುವುದಕ್ಕೆ
ಮುಂಚೆ,
ಹೆಪ್ಪುಗಟ್ಟಿ ಮೋಡವಾಗುತ್ತಿರುವ
ಗಾಳಿಯ ಅರಿವಾಗಿ
ಸುಮ್ಮನಾಗುವ ಹೊತ್ತು.
ಮುಂದೆಂದೋ ಸುರಿಯಲಿರುವುದಕ್ಕೆ
ಇಂದಿನಿಂದಲೇ ಕಾಯುವ ಹೊತ್ತು.

Wednesday, April 2, 2014

ಕರವಸ್ತ್ರದಂತ ಕವಿತೆ!

ಹುಲ್ಲು ಮುಚ್ಚಿದ
ಹೆಜ್ಜೆ ಮೂಡದ
ಹಾದಿ.

ನೀಲಿಯಲಿ ನೆಲೆಸಿ,
ನೆತ್ತಿ ಸುಡುವವನ
ತಪ್ಪಿಸಿ,
ನೇವರಿಸಿದ
ಮರಹೊದಿಕೆಯ
ಕಡುಹಸಿರು
ನೆರಳು,

ಆರೋಹದ
ನಡುವೆ
ತಿಳಿಹಳದಿ,ಗುಲಾಬಿ
ನೀಲಿ, ಬಿಳಿ, ನೇರಳೆ
ಹೂ ಹೊದ್ದ
ಬಯಲು.

ಬೆವರಿಳಿದು
ಉರಿಯಾಗಿ
ಕಿರಿಹಿಡಿದ ಕಣ್ಣಿಗೆ
ಕಂಡ ಪಯಣದ ಸೊಗಸೇ
ಸೊಗಸು!

ಕಳೆದಿದ್ದು ಎಲ್ಲಿ
ಗಮ್ಯವೆಂದುಕೊಂಡ
ನಿಲುಗಡೆಯಲ್ಲೇ?

ಅದೇಕೋ
ಕಣ್ಣುರಿ,
ಹನಿ ಹೊರಬರದಂತೆ
ತಡೆದು.
ನೆನಪಿನ ಕರವಸ್ತ್ರಕ್ಕೆ
ಸದಾ ಕೆಲಸ,
ಒದ್ದೆಯಾದಷ್ಟೂ
ಒಣಗಿಸುತ್ತದೆ

ಬೆಂಗಳೂರಿನ ಬಿಸಿಲು.

Tuesday, April 1, 2014

ಇಫ್ ವಿಂಟರ್ ಕಮ್ಸ್... ಕೆನ್ ಸ್ಪ್ರಿಂಗ್ ಬೀ ಫಾsssರ್ ಬಿಹೈಂಡ್...? - ಶೆಲ್ಲಿ.

ಅರ್ಧಕ್ಕೆ ಮಡಿಚಿಟ್ಟ ಪುಸ್ತಕ ಸೆಳೆಯುತ್ತದೆ.
ಆದರೇನು ಮಾಡಲಿ ಒಗ್ಗರಣೆಯ ಸಾಸಿವೆ ಸಿಡಿದ ಮೇಲೇ ಪಾತ್ರೆ ಮುಚ್ಚಿಟ್ಟು ಆ ಬದಿಗೆ ಹೊರಳಬೇಕು.
ಅಷ್ಟರಲ್ಲಿ ಇವಳಿಗೆ ಕಕ್ಕ ಬಂದು ಅಮ್ಮಾ ಆsssssತೂ... ತೊಳೆದು, ಕೈತೊಳೆದು, ಅವಳ ಕೈತೊಳೆಸಿ, ಈ ಕಡೆಗೆ ಬರುವಾಗ ಅಕ್ಕನೆಂದರೆ ಪ್ರೀತಿಯ ತಮ್ಮನ ಚಡ್ಡಿಯಲ್ಲಿ ಸುಸ್ಸೂ ಆಗಿಬಿಟ್ಟಿದೆ.
ಚಡ್ದಿ ತೆಗೆದು ನೆಲ ಒರೆಸಿ ಬೇರೆ ಚಡ್ಡಿ ಬದಲಾಯಿಸುವಷ್ಟರಲ್ಲಿ ಇವನಿಗೆ ಟೀ ಕುಡಿಯುವ ಸಮಯ.
ಟೀ ಮುಗಿಯುವಾಗ ಗೆಳತಿಯ ಫೋನು ಬೆಳಗ್ಗಿಂದ ಮೂರು ಸಲಿ ಮಿಸ್ ಕಾಲ್ ಆಗಿಯೂ ಈಗ ಎತ್ತದಿದ್ದರೆ ಎಂಬ ಹಿಂಜರಿಕೆಯಲ್ಲಿ ಮಾತು ಶುರು.
ಮಾತು ಮುಗಿಯುವಾಗ ಕುಕ್ಕರಿನಲ್ಲಿ ಅನ್ನ ಬೆಂದಿದೆ. ಓಹ್ ಮಜ್ಜಿಗೆ ಕಡೆಯಲು ಮರೆತು ಹೋಗಿದೆ.
ಕಡೆದ ಮಜ್ಜಿಗೆಗೆ ಶುಂಠಿ ಚೂರು ಜಜ್ಜಿ, ಕರಿಬೇವೆನೆಸಳು ಸೇರಿಸಿ, ದಿವಾನೆಯ ಮೇಲೆ ಬಿದ್ದುಕೊಂಡಿರುವ ಸಾಪ್ತಾಹಿಕ ಪುರವಣಿಯ ಪುಸ್ತಕ ವಿಮರ್ಶೆಯಲ್ಲಿ ಒಂದು ಮುಗಿಯುವಷ್ಟರಲ್ಲಿ ಮಧ್ಯಾಹ್ನದ ಗಿರಣಿ ಶುರು.
ಎಳೆಯದಕ್ಕೆ ಮಮ್ಮು ನುರಿದು, ತುಸು ಬೆಳೆದವಳಿಗೆ ಕಲೆಸಿಟ್ಟು ಬಾಯಿ ಕಳೆಸಿ ಊಟ ಮುಗಿಯುವಷ್ಟರಲ್ಲೀ ಟಾಮ್ ಅಂಡ್ ಜೆರೀ ಎಪಿಸೋಡೇ ಮುಗಿದಿದೆ.
ಈಗ ದೊಡ್ಡವನ, ಮಕ್ಕಳ ಅಪ್ಪನ ಬಾರಿ. ಭಾನುವಾರವಾದರೂ ಹಪ್ಪಳ ಮುರಿಯದೆ ಉಣ್ಣುವುದು ಹೇಗೆ ಎಂದರೂ ಗೊತ್ತೆನಗೆ.
ಈ ನಿನ್ನಡಿಗೆಯ ಚಂದಕ್ಕೆ ಹಪ್ಪಳವಾದರೂ ಇದ್ದರೆ ಹೇಗೋ ಒಳಗೆ ತಳ್ಳಬಹುದು ಎಂಬ ಅಂದಾಜು ಅವನದೆಂದು. :)
ಎಲ್ಲರ ಊಟ ಮುಗಿದು ಚಿಕ್ಕದನ್ನು ಹೇಗೆ ಹೇಗೋ ಮಂಚಾಲೆಗೆ ಹತ್ತಿಸಿ ಒಂದು ಪುಟೀ ನಿದ್ದೆಯನ್ನೂ ಮುಗಿಸಿ ಬಂದು, ನನ್ನ ಊಟ ಮಾಡುವಾಗ.. ಆಹಾ ಏಮಿ ರುಚಿ.. (ಕುಂವೀ ಟೈಟಲ್ಲು ಕದ್ದರೇ ಆ ರುಚಿ ಸಿಗುವುದು, ಹೇಗೂ ಸೃಜನಶೀಲ ಕದಿಯುವಿಕೆಯೇ ಸೊಗಸು) ಯಾಕಂದರೆ ನನ್ನ ಊಟಕ್ಕೆ ಜೊತೆಗಿರುವುದು ಇಡೀ ಪುರವಣಿ, ಮತ್ತು ಅಕಸ್ಮಾತ ಮುಗಿದು ಹೋದರ ಅದೇ ಅರ್ಧಕ್ಕೆ ಮಡಿಚಿಟ್ಟ ಪುಸ್ತಕ.
ಹೀಗೆಲ್ಲ ಇರುವಾಗ, ಓದಿ ಅದರ ಬಗ್ಗೆ ಬರೀ ಎಂದರೆ ಹೇಗೆ???
ಹೆಚ್ಚೆಂದರೆ ಸ್ಟೇಟಸ್ ಹಾಕಬಹುದು.
ಹಾಗಂತ ಕತೆ ಒಳಗಿಳಿದಿಲ್ಲವೆಂದುಕೋಬೇಡಿ. ಅದಿದೆ ಹೊರಳಾಡುತ್ತ ಒಳಗಿನ ಮನದ ಮೆತ್ತೆಯ ಮೇಲೆ.
ಅಲ್ಲಲ್ಲಿ ತಿವಿಯುತ್ತ ಇನ್ನಲ್ಲಲ್ಲಿ ಮುದಗೊಳಿಸುತ್ತಾ, ಬರಿಯ ಕಾಗದದ ಮೇಲಿನ ಇಂಕಲ್ಲ ಅದು. ಮಾತನಾಡುವ ಭಾವಗಳು. ಎಲ್ಲಿ ಓದಿದ ಮನವು ಮಾತ ಹೊರಡಿಸುವುದೋ ಅಲ್ಲಿ ಕಿವಿಯಾಗುವ ಭಾವಗಳು.
ಚಳಿ ಮುಗಿದು ಬೇಸಿಗೆಯ ಬಿರುವಿಗೆ ಸೂಸುವ ಹೊಂಗೆ ಮರದ ನೆರಳಿನ ಗಾಳಿಯ ಕುಳಿರುಗಳು.
ಹೌದು. ಚೈತ್ರ ವೈಶಾಖ ವಸಂತವನ್ನ ನಾನು ಓದಿದ್ದು ಹೀಗೇ. ಎರಡು ಗಂಟೆಯಲ್ಲಿ ಒಂದೇ ಸಲಕ್ಕೆ ಬಿಡುಬೀಸಾಗಿ ಮುಗಿಸಿದ ಮೊದಲ ಓದನ್ನು ವಾರಗಟ್ಟಲೆಯ ಮರುಓದಾಗಿಸಿ ಅನುಭವಿಸಿದ್ದು.
ಓದಿ ಮುಗಿದ ಮೇಲೆ ಅನ್ನಿಸಿದ್ದು - ಹಾಡಿ ಹಾಡಿ ಬೇಸರಾಗಿ ನೆಲಕೆಸೆದಳು ಕೊಳಲನು.. - ಎಂಬ ಮಾತು ಗಂಡು,ಹೆಣ್ಣು, ಮಾಲೀಕ-ಕೆಲಸಗಾರ, ಬರಹಗಾರ, ಓದುಗ, ಮತ್ತು ಎಲ್ಲ ಪೂರಕ ಸಂಬಂಧಗಳಿಗೂ ಅನ್ವಯಿಸುತ್ತದೆ. ಜೋಗಿ ಕತೆಯ ಎಲ್ಲ ಚಾಪ್ಟರುಗಳಿಗೆ ಇಂತಹುದೇ ಕವಿಸಾಲುಗಳನ್ನ ಶೀರ್ಷಿಕೆಯಾಗಿಟ್ಟಿದ್ದಾರೆ.
ಹಾಗೆಂದೇ ಕತೆ ತನ್ನ ಸಾಲುಗಳಲ್ಲಿ ಮಾತ್ರ ನಿಲ್ಲದೆ ಅದನ್ನು ಮೀರಿದ ಭಾವೋತ್ಕರ್ಷವನ್ನು ಹುಟ್ಟಿಸುತ್ತದೆ.
ಕೊಳ್ಳುಬಾಕ ಸಂಸ್ಕೃತಿಯ ಮುಖವನ್ನ ಹೊತ್ತೂ ಅದರೊಳಗಿನ ಶಚೀತೀರ್ಥವನ್ನ, ಕೊಳದಿ ಮುಳುಗಿದ ಉಂಗುರವನ್ನ, ಉಂಗುರವ ನುಂಗಿದ ಮೀನನ್ನ, ತೋರಲು ದಂಡೆಯ ಮೇಲೇ ಕೂತೇ ಕಪ್ಪೆಕಲ್ಲು ಎಸೆಯುತ್ತಿರುವ ಕತೆಗಾರಿಕೆಯ ಸೊಗಸನ್ನ ಕಟ್ಟಿಕೊಡುತ್ತದೆ.
ಚಿಟ್ಟೆಯಾಗಿ ಮಸಿಯಿಲ್ಲದ ಅಡುಗೆ ಮನೆಯೊಳಗೆ ಬರುವ ಭಾವಭೃಂಗವನ್ನ ಒಳಾಂಗಣ ಗಿಡದ ವೊಲು ಕಾತರಿಸುವ, ಕಥಾನಾಯಕಿ ಹಂಬಲಿಸುವ ಪರಿ ಎಲ್ಲೂ ನಡೆದೀತು. ಮಲೆನಾಡಿನ ಮಕ್ಕಳು ಬಾರದ ಹಳೆಮುದುಕಿಗೂ ಅನಿಸೀತು. ಅಥವಾ ಐಟಿ ಕ್ಯೂಬಿನ ಇಂಗ್ಲಿಷ್ ಪಲುಕಿನ ನಡುವಯದವಳಿಗೂ, ಮಕ್ಕಳು ಮನೆ ಆಫೀಸುಗಳ ನಡುವೆ ದೊಂಬರಾಟ ನಡೆಸುವ ನನ್ನಂತವಳಿಗೂ... ಬೇರು ಕತ್ತರಿಸಿ, ಬೊನ್ಸಾಯ್ ಕುಂಡದ ಆಕೃತಿಗೆ ಹೊಂದಿ ಬೆಳೆದ ಎಲ್ಲ ಚಿಗುರುವಿಕೆಗಳಿಗೂ ಅನಿಸುವ ಹಾಗೆ. ಹುಡುಗಿಗೆ ಮಾತ್ರವೇ ಅಲ್ಲ ಇದು ಹುಡುಗನೊಳಗೂ ಹೊಕ್ಕು ಕಾಡುವ ಹಾಗೆ...
ಹಂಬಲ,ತಲ್ಲಣ ಮತ್ತು ಪ್ರತೀಕ್ಷೆಗಳ ಬದುಕಿಗೆ.. ಊಹೆಗೆ ಮೀರಿದ ಅಂತ್ಯವನ್ನ ಭರಿಸಲು ತತ್ತರಿಸುವ ಎಲ್ಲ ಭಾವಸ್ಪಂದ ಮನಸುಗಳಿಗೆ ಕಲಕುವ ಹಾಗೆ
ಚೈತ್ರ-ವೈಶಾಖ... ವಸಂತ. ಹೌದು ಎಲ್ಲ ಹಿಮಂತಗಳ ಕೊನೆಗೆ ಚಿಗುರೆಬ್ಬಿಸುವ ವಸಂತವಿದೆ ಎನ್ನುವ ಮಾತನ್ನೇ ಬೈಂಡಿಂಗ್ ವೈರಿನ ಹಾಗೆ ಹೊಲಿದುಕೊಂಡ ಕತೆ ಬಲು ಬೇಗ ಮುಗಿಯಿತು. ಬಹುಶಃ ಕತೆಯಾಚೆಗಿನದ್ದನ್ನು ನಾನು ಧ್ಯಾನಿಸುತ್ತ ಕೂರಲು ಸಮಯ ಸಿಗಲಿ ಎಂದಿರಬೇಕು.
ಕತೆಗಾರನಿಗೆ ಕರುಣೆ ಜಾಸ್ತಿ. ಕ್ರೌರ್ಯಕ್ಕಿಂತ ಒಂದು ನೂಲು ಕರುಣೆಯೇ ಜಾಸ್ತಿ.
ಅರ್ಧಕ್ಕೆ ಮಡಿಚಿಟ್ಟ ಪುಸ್ತಕ ಪೂರ್ತಿ ಮುಗಿದಿದೆ. ಈ ಭಾನುವಾರ ಅರ್ಧ ಮಡಿಚಿಟ್ಟ ಪುಸ್ತಕವಿಲ್ಲದೆಯೆ ಅದದೇ ಕೆಲಸ ಪುನರಾವರ್ತನೆಯೊಡನೆ ನಡೆಯಿತು. ಮುಗಿದ ಪುಸ್ತಕ ಒಳಗೊಳಗೇ ನನ್ನನ್ನು ಓದುತ್ತಿರುವ ಪರಿಗೆ ಸ್ವಲ್ಪ ಕಂಗಾಲು ಬಿದ್ದಿರುವುದು ಈ ಕ್ಷಣದ ಸತ್ಯ.

ನಗುವ ಪುರಂದರ ವಿಠಲ ಬರಬಹುದೆಂದು ಕಾಯುತ್ತಾ..

Tuesday, March 4, 2014

ಮರುದಿನ..

ತಾವರೆ ದಳ
ಮಾವಿನ ಹಣ್ಣು
ಬಣ್ಣದ ಚಿಗುರು
ಬೇವಿನ ಎಸಳು-
ಗಳೆಲ್ಲಾ
ಮುದುಡಿ
ಸುಕ್ಕಾಗಿ
ಇಳಿಬಿದ್ದು
ಮಂಕಾಗಿದ್ದವು
ಎರಡು ದಿನ;

ಇಂದು, ಮತ್ತೆ,
ನೇಸರನೆಡೆಗೆ
ತಿರುತಿರುಗಿ ಅರಳಿದೆ ಕೆಂದಾವರೆ,
ಹಣ್ಣು ಕಳಿತು,
ಚಿಗುರಿಗೆ ಬಣ್ಣವಿಳಿದು,
ಎಸಳು ನಳನಳಿಸುತ್ತ,
ಭುವಿಗೆ 
ನಂದನವಿಳಿದ ನೋಟ!
ಮೊನ್ನೆ ಎರಡು ದಿನ
ಜ್ವರ ಬಂದು ಮಲಗಿದವ
ಇವತ್ತು ಮನೆ ತುಂಬ 
ಓಡಾಟ.
ನಿದ್ದೆಗೆಟ್ಟ ಅಮ್ಮನಿಗೆ
ಆಫೀಸು ಕುರ್ಚಿಯೇ
ತಲ್ಪಗಿಲ್ಪ ಮೆರೆದಾಟ.

ಲಕ್ಷ್ಮೀನಾರಾಯಣ ಭಟ್ಟರ ಮಲಗೋ ಮಲಗೆನ್ನ ಮರಿಯೇ ಗೀತೆಯ ರೂಪಕಗಳಿಂದ ಈ ಪೋರನನ್ನು ಅಲಂಕರಿಸಲಾಗಿದೆ.

Thursday, February 20, 2014

ನೋಡದ ನೋಟ..

ಮಾಸ್ತರರ ಚೂಪು ನೋಟ
ಗೆಳತಿಯರಿಬ್ಬರ ನಗೆಚಾಟಿಕೆ ಮಾತ
ಕತ್ತರಿಸಿಬಿಟ್ಟಿತು
ತಮ್ಮನೊಡನೆ ಸುಖಾಸುಮ್ಮನೆ
ಕ್ಯಾತೆ ತೆಗೆದು ಕೂಗಾಡುತ್ತಿದ್ದ ಪುಟ್ಟ ಅಕ್ಕ
ಸಂಧ್ಯಾವಂದನೆಯ ಅಪ್ಪನ ಹಿರಿನೋಟ
ತೂರಿ..
ಮೆತ್ತಗೆ ಸುಮ್ಮನಾದಳು.
ವಸಂತ ಮೆಲ್ಲಡಿಯಿಟ್ಟ
ಮೈ ಹೊರಗೆ ತಿರುಗುವಾಗ
ಹರಿವ ಮೆಚ್ಚು ನೋಟಕ್ಕೆ
ತಲೆ ಕೆಳಗೆ ಹಾಕಿ ಸಿಗ್ಗು ಮೂಡಿತು
ಅತ್ತಿತ್ತ ಹರಿವ ಕಣ್ಣು ಸಿಕ್ಕಿಸಿ
ಹಿಡಿದ ಆ ಮೊದಲ ನೋಟ
ಹೇಳಬಹುದು ಇದಕ್ಕೆ ಮಾಟ.
ಗೊತ್ತಿತ್ತು ಇದು ಮೊದಲೆ
ಹೋಗಲಿಬಿಡು ಎಂದ ಅಮ್ಮನ ನೋಟ
ಕಣ್ಣೊರಸಿ ಅರಳಿಸಿದ ನೊಂದ ನೋಟಕ್ಕೆ
ಢೀ ಇಟ್ಟ ಭರವಸೆಯ ಪೂರ ನೋಟ
ಏರು ಹಾದಿಯ ಕತ್ತಲೆಗೂ
ಅಪ್ಯಾಯತೆ ತಂದಿಟ್ಟ ಅವನ ನೋಟ
ಮುಗ್ಧತೆಯ ತುಂಬಿ ತುಳುಕಿಸಿದ
ಪಾಪು ನೋಟ...
ಮುಚ್ಚುವುದಕ್ಕೆ ಚಣ ಮೊದಲು
ಮತ್ತೆ ಬಿಟ್ಟು ಎಂದೆಂದಿಗೂ ಮುಚ್ಚಿದ ಆ ನೋಟ,
ಅತ್ತ ಕಣ್ಗಳ ಒರೆಸಿ
ಮುತ್ತಿಕ್ಕಿ ಕತೆ ಹೇಳಿ ನಗಿಸಿದ ಅಜ್ಜನ ನೋಟ,
ಬದಿಯಿಂದ ನೀನು ನೋಡಿಯೇ ಒದ್ದಾಡುತ್ತಿರುವೆ
ಇನ್ನು ಎದುರಾ ಎದುರೆ ಇರುಕಿಸಿಕೊಂಡಿದ್ದರೆ ಗತಿಯೇನೆ ಎಂದ ಶಾಯರಿ ನೋಟ....
ಎಲ್ಲವನ್ನೂ ಒಂದೆಡೆ ಹಾಕಿ ತುಲಾಭಾರ ಮಾಡುತಿರುವೆ
ಉಂಹೂಂ
ಈ ಯಾವುದೂ
ಇವತ್ತು ಬೆಳಗ್ಗೆ
ನೋಡದೆ ಕಳಿಸಿಕೊಟ್ಟ
ಆ ನೋಟಕ್ಕೆ
ಎಳೆತಕ್ಕೆ
ಸಮನಾಗುತಿಲ್ಲ.
ಅದರ ಹರಿತವೇ ಬೇರೆ
ಅದು ಕತ್ತರಿಸುವ
ಮೂಲದ್ರವ್ಯವೇ ಬೇರೆ.
ಅದರ ಸಾಂದ್ರತೆಯೇ ಬೇರೆ.
ಸಧ್ಯ ಹೊರಟುಬಿಟ್ಟೆ ಎಂದು
ನಿಸೂರಾಗುವ ಮೊದಲೆ
ಹಿಡಿದ ಆ ಖಾಲಿಭಾವ
ಯಾವುದರಿಂದಲೂ ತುಂಬುವದಿಲ್ಲ.

ಗೊತ್ತು ನಿನಗೆ
ಅಮ್ಮ ಹೊರಟಿದ್ದಾಳೆ ಆಫೀಸಿಗೆ
ಏನೆ ಗೋಳ್ಕರೆದರೂ..
ಮರುಳು ಮಾಡಿ
ಕಣ್ಣು ತಪ್ಪಿಸಿ
ಹೋಗಿಯೇ ಹೋಗುವಳು
ನೋಡಿ ಕಣ್ತುಂಬಿಸಿಕೊಳ್ಳಲಿ ಏಕೆ
ಅನಿಸಿತೇ!!?

ಗೊತ್ತು ನನಗೆ-
ನೋಟವಿದೆ ಆಟಿಕೆಯ ಮೇಲೆ,
ನೋಟವಿದೆ ಹಾಡು ಪರದೆಯ ಮೇಲೆ,
ಕಾಣುತ್ತಿರುವುದು ಮಾತ್ರ ಬೇರೆಯೇ ಬೇರೆ.
ನೋಡದ ನೋಟವೂ
ಹೀಗೆ ಕಾಡುತ್ತದೆ 
ಎಂಬ ಅರಿವಲಿ
ಮನಸು ತತ್ತರ

ನಿರುತ್ತರ...

Tuesday, February 18, 2014

ವೈರುಧ್ಯ ವೈಶಿಷ್ಟ್ಯ

ಶುಕ್ಲ ಬಿದಿಗೆಯಲ್ಲಿ
ಮೂಡುವ ಬಿಂಬವೇ
ಕತ್ತಲಿಂದಲ್ಲವೇ
ನಿನ್ನ ಕಮನೀಯತೆಗೆ
ಆ ಮನೋಹರ ಹೊಳಪು!
ದಿನದಾಗಸದಿ ತೇಲಿಬಂದರೆ
ವರಕವಿಯ ಪದ್ಯಸಾಲಾದೀಯ
ಕತ್ತಲಿರಲಿ ಸುತ್ತಮುತ್ತೆಲ್ಲ

ಮಿನುಗುತಿರಲಿ ರಾತ್ರಿಯೆಲ್ಲ.

Tuesday, February 11, 2014

ತಧೀಂ ಧಿನಕ ಧೀಂ

ದೀಪವಾರಿ
ರಂಗದಲ್ಲಿ ಕತ್ತಲೆ,
ಗುಜುಗುಜು ನಿಂತು
ಪಿಸುಗುಡುವಿಕೆ.
ಅಲ್ಲಲ್ಲಿ ಸಾಲು ಮಧ್ಯೆ
ಎಡವುತ್ತಾ
ಕುರ್ಚಿ ಹುಡುಕಿ ಕೂರುವಷ್ಟರಲ್ಲಿ,..

ಎರಡು ಪುಟಾಣಿ ಕೈ ಜೋಡಿಗಳಲ್ಲಿ
ಪಟಪಟಿಸುವ ತೆರೆಯ ಸೂಚನೆ,
ಇನ್ನೇನು ಒಡ್ಡೋಲಗ ಶುರು,
ಹೌದೆನ್ನಲು ಹಾರ್ಮೋನಿಯಂ ಶ್ರುತಿ
ಕಂಚಿನ ಕಂಠದಿಂ ಹರಿವ ಬನಿ
ದೇವರ ದೇವ ಶಿಖಾಮಣಿಯ
ಹೆಜ್ಜೆ ಹಾಕಿಸುತಿದೆ.
ದನಿಯ ದೈವ
ಲಾಸ್ಯದಲ್ಲಿ ಮೈಗೂಡಿದ ಹಾಗೆ.

ತೆರೆಯ ಹಿಂದೆ
ಕಿರೀಟಿಯ ಒಡ್ಡೋಲಗ
ಮುಂದೆ ನಲಿವ
ಬಾಲ ಗೋಪಾಲರು
ಕತ್ತಲೆಯ ವೃತ್ತದ
ಮಧ್ಯೆ ಬೆಳಗುವ
ತಧೀಂ ದಿನ್ನಕ ಧೀಂ


ಅರೆ! ಎಷ್ಟು ಸುಲಭ,
ಸಮಸ್ಯಾ ನಿವಾರಣೆ!
ಭಿನ್ನಾಭಿಪ್ರಾಯವೇ?
ಯುದ್ಧ ಹೂಡು,
ತುಂಬ ತಲೆಬಿಸಿಯೇ?
ವಿದೂಷಕನ ಕರೆ,
ಪರಿಸ್ಥಿತಿ ಬಿಗಡಾಯಿಸಲು
ಕೃಷ್ಣಗೇ ಮೊರೆ,
ಅಲ್ಲಲ್ಲಿ ನವಿಲು ಕುಣಿದ
ಹಾಗೆ ಸ್ತ್ರೀವೇಷ ಬೇರೆ!

ಕಥೆಯಿಲ್ಲಿ ನೇಪಥ್ಯ
ಆಹಾ ಅಲ್ಲಿ ನೋಡು
ಕೇದಿಗೆಮುಂದ್ಲೆಯವನ ಕಣ್ಣ ಭಾಷೆ
ಕಿರೀಟಿಯ ಹೆಜ್ಜೆ ಗೆಜ್ಜೆ
ಎಂಥಾ ಭಾಗ್ವತಿಕೆ ಮಾರಾಯಾ..
ಚೆಂಡೆಯಂತೂ.. ಆಹಾಹ ಅಗದೀ ಬೆಸ್ಟು
ರಂಗಕ್ಕೆ ಕತ್ತಲಾವರಿಸಿದಾಗ
ತೆರೆದ ಕಣ್ಣು
ಮತ್ತೆ ಆಟ ಮುಗಿಯುವವರೆಗೆ
ಮುಚ್ಚಿದ್ರೆ ಕೇಳು!

ತೆರೆ ಸರಿಸಿ ಬಂದಾಗಿದೆ
ಕುಣಿತ ಚಂದಗಾಣಿಸಬೇಕು
ಮಾತು ಮೈಮರೆಸಬೇಕು
ಯಕ್ಷಲೋಕವನ್ನ ಇಲ್ಲಿ
ಬಯಲ ಮಧ್ಯೆ
ಕಟ್ಟಿಕೊಡಬೇಕು.


ಚೌಕಿಯಲ್ಲಿ ಬಣ್ಣ ಕಳಚಿ
ಹೊರಟ ಮೇಲೆ
ಮುಂದಿನ ಮಾತು.
ಯಕ್ಷ ಲೋಕದಿಂದಿಳಿದ
ಬಣ್ಣಗಳ ನೇರ್ಪು ಮಾಡುತ್ತ
ರಂಗದಿಂದ ದೂರವುಳಿದೂ
ನಟಿಸಬೇಕು
ಮಾತಲ್ಲಿ ಮನೆಕಟ್ಟಬೇಕು
ನೋವುಗಳ ಜತನದಿಂ ಎತ್ತಿಟ್ಟು
ಮುಂದಿನ ಮೇಳದ ಕರೆಬರುವವರೆಗೆ
ನಗುವ ಪುರಂದರ ವಿಠಲನಿಗೆ ಕಾಯಬೇಕು.

ಅಲ್ಲಿ ತಧೀಂ ಧಿನಕ ಧೀಂ
ಇಲ್ಲಿ ಧೀಂ ತಧೀಂ ಧಿನಕ...

Thursday, February 6, 2014

ಪರಪುಟ್ಟಿ..

ತೊರೆಪಕ್ಕದಿ
ಕಾಡ ಅಂಚಲಿ
ಹಸಿರಾಗಿ ಬೆಳೆದ ಮರದ
ಕೊಂಬೆತುಂಬ
ತಿಳಿಗುಲಾಬಿ ನೇರಳೆ ಹೂಗಳ
ಹೊತ್ತ ಆ ಗಿಡಗುಚ್ಛದ ಹಣ್ಣು
ಹೂರಸ ಸಿಹಿಸಿಹಿ.
ಬೆಳಗಿನ ಉಪಾಹಾರಕ್ಕೆ
ಅದನುಂಡ ಕಾಗಕ್ಕನ
ಕೊಕ್ಕಿಗೆ ಅಂಟಿತು ಬೀಜ
ಆಮೇಲಿಷ್ಟು ಹಾರಾಟ
ಅಲ್ಲಲ್ಲಿ ನೀರು ಎರಚಾಟ
ಬಿಸಿಲ ಪೊರೆವಾಟ
ಮುಗಿಸಿ
ಮಧ್ಯಾಹ್ನದೂಟ
ಇದೀಗ
ಇನ್ನೊಂದು ಹಣ್ಣಿನ ಮರ
ಬಲು ಜತನದಿ ಬೆಳೆಸಿದ ಕಸಿಮರ
ಕಾಟಲ್ಲ, ಹಾದಿಬದಿಯದಲ್ಲ
ಮನೆಯ ತೋಟದಿ
ಸುಪೋಷಣೆಯ ಎಳೆಮರ.
ಹಣ್ಣು ತಿಂದಾಯಿತು.
ಕೊಕ್ಕಲ್ಲಿ ಅಂಟಿದ್ದ ಬೆಳಗಿನ ಬೀಜ
ಮರದ ಕಾಂಡಕ್ಕೆ.
ವಾರ ಕಳೆಯಿತು.
ಬೀಜ ಮೊಳಕೆಯೊಡೆದು
ತೊಗಟೆಯ ಅಂಟಿ ಹಿಡಿದು
ಎಳೆ ಚಿಗುರು.
ವರ್ಷಗಳಳಿದವು
ಸುಪುಷ್ಟ ಮರದ
ಹೆಗಲೇರಿದ ಬೀಜಸಂತಾನ
ಈಗ ಮೈತುಂಬ.
ಮರದ ಜೀವರಸವುಂಡು
ಬೆಳೆಬೆಳೆವ ಬಂದಳಿಕೆ.
ಜೀವರಸವ ಹೀರಗೊಟ್ಟ
ಮರ ಈಗ ಮೊರೋಸ್ (morose).
ಎಳೆಬೀಜ, ಚಿಗುರು
ಬಣ್ಣ ಬಣ್ಣದ ಹೂಗುಚ್ಛ
ಹೊದ್ದ ಮೊದಲ ದಿನಗಳು
ಮುಗಿದು ಈಗ
ಮೈಸೋಲುವ ಕಾಲ.

ನಮ್ಮ ತನ
ಅರಿವಾಗುವ
ಚಣದ ಕಾಲದ ಮುಳ್ಳು ಬಲು ಚೂಪು.

ಅರಿವಿರದೆ ಹಬ್ಬಿ ಕೊರೆದೆ.
ಸಾಧ್ಯವಾದರೆ ಕ್ಷಮೆಯಿರಲಿ.

ದುಃಖ ಏನೆಲ್ಲ ಕಲಿಸುತ್ತದೆ!
ಎಂದೋ ಕಲಿತು ಮರೆತ
ಬಾಟನಿಯನ್ನೂ.
mistletoe
Web Courtesy: http://thetrustygardener.com

Wednesday, February 5, 2014

ಕನಸಿನ ನಿಯಮ..

ರೋ ರೋ ರೋ ಅ ಬೋಟ್
ಜೆಂಟ್ಲಿ ಡೌನ್ ದಿ ಸ್ಟ್ರೀಮ್...
ಮೆರಿಲಿ ಮೆರಿಲಿ ಮೆರಿಲಿ ಮೆರಿಲಿ
ಲೈಫ್ ಈಸ್ ಬಟ್ ಅ ಡ್ರೀಮ್..


ಇದೇ ಸರಿ.

(ನೀರಿದ್ದರೆ)
ನಿಧಾನಕ್ಕೆ.. ಆ ಹರಿವಲ್ಲಿ
ನವುರಾಗಿ..
ಮುಳುಗೇ ಹೋಗುತ್ತೇನೆ ಎನ್ನಿಸಿದರೂ
ತೇಲುತಿರುವೆ ಎಂಬಂತೆ..
ಹುಟ್ಟು ಹಾಕಬೇಕು,
ಕನಸಲ್ಲಾದರೂ
ಅಳದೆ ಇರಬೇಕು.
ಅಳುಕು ಮರೆಯಬೇಕು.

ಎಚ್ಚರದ ಮಾತು
ಈಗ ಬೇಡ.