ಕವಡೆ ಬೀಸಿದಾಗಲೆಲ್ಲ
ಬಿದ್ದಿದ್ದು ವಚ್ಚಿ,
ಒಂದೊಂದೇ ಹೆಜ್ಜೆ ಇಟ್ಟು
ಮುನ್ನಡೆದ ಬದುಕ
ಹಾದಿಯ ತುಂಬ
ಬಿಸಿಲು ನೆರಳಾಟ;
ಯಾರದೋ ಕಣ್ ಸೆಳೆದು,
ಕವಡೆ ಜೋತಿಷ ನುಡಿಯೆ,
ಬರುವ ದಕ್ಷಿಣೆಗೆ
ಸರಿಹೋದೀತು
ಸೆಟ್ಟರಂಗಡಿಯ ಲೆಕ್ಕ.
ದಿನಕೊಂದು ಹೊತ್ತು ಉಂಡರೆ
ಅದೇ ಸುಖ;
ಕವಡೆಯ ಬೀಸಿ
ತಮ್ಮ ನಾಳೆಯ ತಾವೆ ತಿಳಿವವರು
ಕೂರುವರು ಇಲ್ಯಾಕ?!
ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ -
ಇಂದೇ!
ತಿಳಿಯುವ ತಿಣುಕಾಟವಿಲ್ಲ
ಬರಿದೆ
ಬದುಕಬೇಕಿದೆ!
ಜೋತಿಷ ಕೇಳಿದ ಮಂದಿ
ಪಾರ್ಕು ದಾಟುವ ಮುನ್ನವೆ
ಮರೆತವರು;
ನಾನು ಮರೆಯುವ ಹಾಗಿಲ್ಲ
ನನ್ನ ಮೂಗಿಗೇ ಕವಡೆ...
ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ;
ಉಂಹೂಂ -
ಬರೀ ವಚ್ಚಿ,
ಪ್ರತೀ ಸಲಿಯೂ
ಬೆರಳಸಂದಿಯಲೆ ನುಸಿದು ಹೋಗುವ
ಗಿಚ್ಚಿ..
ನೋಟ್ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ
-
ʼನೋಟ್ ಬುಕ್ಕಿನ ಕಡೆಯ ಪುಟʼ ಈ ಹಾಸ್ಯಪಂಚವಿಂಶತಿಯನ್ನು ಬರೆದ ಶ್ರೀಮತಿ ಜಯಶ್ರೀ
ದೇಶಪಾಂಡೆಯವರಿಗೆ ಹಾಗು ಪ್ರಕಟಿಸಿದ ಶ್ರೀ ಅಣಕು ರಾಮನಾಥರಿಗೆ ಅಭಿನಂದನೆಗಳನ್ನು ಹಾಗು
ಧನ್ಯವಾದಗಳನ್ನು ಮ...