Monday, May 12, 2014

ಬೃಹತ್...!

ರಾಜರಿಗೇ ರಾಜನಂತೆ,
ರಾಜ್ಯಗಳ ಗೆದ್ದನಂತೆ,
ಸೀಮೆಗಳ ಸೇರಿಸಿ,
ಮೇರೆಗಳ ವಿಸ್ತರಿಸಿದನಂತೆ.
ಗೆಲುವ ಕಂಡರಿಸುವ
ಹಂಬಲ ಹೊತ್ತು..
ವರುಷಗಟ್ಟಲೆ
ಸಾವಿರಶಿಲ್ಪಿಗಳ
ಉಳಿಪೆಟ್ಟಿನಲಿ
ಮೂಡಿತು
ಬೃಹದ್ದೇಗುಲ!

ಎಲ್ಲ ದೊಡ್ಡವು
ಆವರಣ, ಪ್ರಾಕಾರ
ಕಮಾನು,ಗೋಪುರ
ನಂದಿ,ಸ್ತಂಭ, ಸ್ಥಾವರ ಲಿಂಗ!
ಚೋಳಶಿಲ್ಪಕಲೆ, ಹಿರಿಯ ರಾಜನ ಖ್ಯಾತಿ!

Photo courtesy - web (southindiatemples.net)
ಕಾಲ ಹೊರಳಿತು.
ದೇಹವಳಿಯಿತು.
ಬಣಗಳ ಪಂಗಡಗಳ ಧರ್ಮಗಳ
ಯುದ್ದಕೆ ಪಕ್ಕಾದ
ಬೃಹತ್ ದೇಗುಲ
ಪೆಟ್ಟಾದರೂ ಮೀಸೆ ಮಣ್ಣಾಗದ ಹಾಗೆ
ಮುಜರಾಯಿ ಇಲಾಖೆಯ
ಕಾಯಕರ್ಮದಲಿ
ಮತ್ತಷ್ಟು ಗರಿಗೆದರಿ.

ಹಳೆಯ ಕತೆ ಹೇಳಲು:
ರಾಜರ ಕತೆ,
ಸೋತವರ ಕತೆ, ಗೆದ್ದವರ ಕತೆ
ಊರು ಬಿಟ್ಟವರ ಕತೆ,
ಬಂದು ಸೇರಿದವರ ಕತೆ,
ನೋಡಿ ಹೋಗುವವರ ಕತೆ,
ಹೋಗುವಾಗ ತಿರುಗಿ ನೋಡಿ ಹೋಗುವವರ ಕತೆ,,,,
ಹೇಳಲೆಂದೇ ಉಳಿದಿದೆ.
ಉಳಿದಿದ್ದಷ್ಟೇ ಅಲ್ಲ,
ಅಳಿದಿದ್ದೇ -
ಹೇಳುವ ಕತೆಗಳು

ಸಾಕಷ್ಟಿವೆ.