Monday, November 3, 2008

ಸ್ಪಂದನೆ..

ನನ್ನ ಭಾವಲಹರಿಗೆ ಸ್ಪಂದಿಸಿದ ಮತ್ತು ಸ್ಪಂದಿಸುತ್ತಲೇ ಇರುವ ಎಲ್ಲರಿಗೂ ಪ್ರೀತಿಯ ವಂದನೆಗಳು.
ಕೆಲಸ ಮತ್ತು ವೈಯಕ್ತಿಕ ಒತ್ತಡಗಳಿಂದ ಪ್ರತಿಸ್ಪಂದನೆ, ಬ್ಲಾಗ್ ಬರಹ ಮತ್ತು ಓದು ಎರಡೂ ತುಂಬ ನಿಧಾನವಾಗಿಬಿಟ್ಟಿದೆ.

ನನ್ನ ಲಹರಿಗೆ (ಹಿಂದಿನ ಬರಹ/ಕವಿತೆ) ಸ್ಪಂದಿಸಿದವರಲ್ಲಿ ಹೆಚ್ಚಿನವರು ನಾನು ಬ್ಲಾಗ್ ಮುಚ್ಚುತ್ತಿದ್ದೇನಾಗಿ ತಿಳಿದುಕೊಂಡಿದ್ದೀರಿ. ಆ ಅರ್ಥ ಬರುವ ಹಾಗೆ ಬರೆದಿದ್ದರೆ ಕ್ಷಮಿಸಿ.

ನಾನು ಬರೆಯುವುದು ನನ್ನ ಮನದ ಮೇಲೆ ಹಾಯುವ ಎಷ್ಟೋ ಕಾಲದ ಮತ್ತು ದಿನದಿನವೂ ಘಟಿಸಿದ ನೆನಪುಗಳನ್ನ ನೇವರಿಸಿದ ಭಾವಲಹರಿಯನ್ನ. ಓದಿದ ನೀವೂ ಇದನ್ನ ಪ್ರೀತಿಯಿಂದ ಆಸ್ಥೆಯಿಂದ ನೇವರಿಸಿದ್ದೀರಿ ಪ್ರತಿಸ್ಪಂದಿಸಿದ್ದೀರಿ. ಎಷ್ಟೋ ಬಾರಿ ಈ ಎಲ್ಲವೂ ನಾನಂದುಕೊಂಡ ಆಯಾಮವನ್ನು ದಾಟಿ ಇನ್ನೆಲ್ಲೋ ಸಾಗಿವೆ. ಬಿಟ್ಟ ಬಾಣದ ಗತಿಯಲ್ಲಿ ಬರೆದ ಮಾತುಗಳು ನನ್ನ ಪರಿಧಿ ಮೀರಿ ಸಾಗುತ್ತವೆ ನಾಟುತ್ತವೆ. ಇದು ಎಲ್ಲರ ಬರಹದ ಮಿತಿ ಮತ್ತು ಸಾಮರ್ಥ್ಯ. ಹೀಗಾದಾಗ ಭಾವುಕ ಮನಸ್ಸು ಗೊಂದಲದಲ್ಲಿ ಬೀಳುತ್ತದೆ. ತಾರ್ಕಿಕ ನೆಲೆಗಟ್ಟು ಗಟ್ಟಿಯಿರದ ಭಾವಸಂವೇದನೆಗಳು ದಿಕ್ಕೆಡುತ್ತವೆ. ಹೀಗಿದ್ದೂ ತಡವರಿಸಿಕೊಂಡೂ ಭಾವಲಹರಿಗಳು ಹರಿಯುತ್ತಲೇ ಇರುತ್ತವೆ. ಇದರ ಜೊತೆಗೆ ನನ್ನ ಕೆಲಸದ ಒತ್ತಡ, ವೈಯಕ್ತಿಕ ಒತ್ತಡಗಳು ಇನ್ನೊಂದಿಷ್ಟು ಒಜ್ಜೆ ಹೇರಿವೆ.

ಬರೆಯದೆ ಕೂರಬಹುದಾದ ಹುಟ್ಟಲ್ಲ ನನ್ನದು. ಬರೆಯಲು ಬಿಂಕ ಬಿಗುಮಾನವೆರಡೂ ಇಲ್ಲ. ಬರೆದಾಗ ಇಲ್ಲಿ ಖಂಡಿತ ಹಂಚಿಕೊಳ್ಳುತ್ತೇನೆ. ನಿಮ್ಮ ಅನಿಸಿಕೆಗಳಲ್ಲಿ ಕಲಿಯಬಯಸುತ್ತೇನೆ.

ಮೊದಲೆ ಹೇಳಿದ ಹಾಗೆ ಇದು - ಆಶೆಯೆಂಬ ತಳ ಒಡೆದ ದೋಣಿಯ ದೂರ ತೀರ ಯಾನ. ಎಲ್ಲೂ ಮುಳುಗಬಹುದು. ತೇಲಿ ಇನ್ನೆಲ್ಲೋ ಸಾಗಲೂ ಬಹುದು. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ.. ಎಂಬ ಸಾಲು ದೋಣಿಯ ಹುಟ್ಟಾಗಿರುವುದು ನನ್ನ ಯಾನದ ಅದೃಷ್ಟವಿರಬಹುದು.

ಪ್ರೀತಿಯಿರಲಿ
ಸಿಂಧು