Monday, October 25, 2010

ಮಹೇಶ ಇನ್ನು ನೆನಪು!!


ಬದುಕಿಗೆಷ್ಟೊಂದು
ಭಾಷ್ಯ ಬರೆಯಬಹುದು..
ಇದು ಇದೇ, ಇದು ಇದಲ್ಲ
ಎಂಬ ತರ್ಕವ ಮಣಿಸಿ, ಜಯಿಸಿ,
ನಾಳೆಯು ನನ್ನದೆಂಬ
ಭರವಸೆಯ ಬೆನ್ನತ್ತಿ
ಇಂದು ಕನಸಿನಲ್ಲಿ ಜಾರುತ್ತಾ
ಆಹ್
ಸಾವಿಗೊಂದೇ ಸಾಲು
ತರ್ಕಕ್ಕೆ ಮೀರಿದ್ದು
ಚರಮಗೀತೆ.
ಕುವೆಂಪುರ ವಾಲಿಯೆಂದ ಮಾತಿನ ನೆನಪು
ಸಾವ್ ಗಾಳಿ ತೂರಲರಿವಪ್ಪುದಯ್...
ನಾವು ಗಟ್ಟಿಯೆಂದರಿತುದು ಜೊಳ್ಳು
ಜೊಳ್ಳೆಂದರಿತುದೇ ಗಟ್ಟಿ!

ಆತ್ಮೀಯ ಮಹೇಶನಿಗೆ ಕೊಡದೆ ಉಳಿದ ಅಪ್ಪುಗೆಯೊಂದಿಗೆ, ಆಡದೆ ಉಳಿದ ಮಾತುಗಳೊಂದಿಗೆ, ಹಂಚಿಕೊಳ್ಳದೆ ಉಳಿದ ನಗೆಯೊಂದಿಗೆ, ನಮ್ಮೆಲ್ಲ ನಲ್ಮೆಯ ಕ್ಷಣಗಳನ್ನು ತೋಯಿಸಿಯೇ ತೀರುವೆನೆಂಬ ಹಟ ತೊಟ್ಟಿರುವ ದುಃಖದೊಂದಿಗೆ ಈ ಸಾಲುಗಳ ಅರ್ಪಣೆ.

ಮಾತೆತ್ತಿದ್ದರೆ ಮನೆಗೆ ಕರೆವವರು
ಉಂಡು ಹೋಗಿರೆಂದವರು
ಚಟುವಟಿಕೆಗೆ ಕೊನೆಮೊದಲಿಲ್ಲದವರು
ಮಲಗಿದ್ದಾರಿಲ್ಲಿ ಮಿಸುಕಾಡದೆ
ಕಣ್ಣು ಮುಚ್ಚಿಹರಂತೆ,
ಚೈತನ್ಯಶೀಲ ಬದುಕಿನ
ದಾರಿಯದು
ಇದ್ದಕಿದ್ದಂತೆ ತುಂಡರಿಸಿ
ಆವರಿಸಿತೆಲ್ಲ ಮೌನ,ಕತ್ತಲು,ಜಡತೆ, ಸಾವು
ಇದು ಅನ್ಯಾಯ.
ಚಂದ ಚಿತ್ರವ ಕೊರೆದು ಕತ್ತರಿಸಿ
ಫ್ರೇಮಲ್ಲಿಟ್ಟು ಕೊಟ್ಟ ಕೈಗಳ
ಕಟ್ಟಿ ಮಲಗಿಸಿ ಚೌಕಟ್ಟಿ-
ನೊಳಗೆ ನೂಕಿದ ವಿಧಿಯೆ
ಇದೂ ಒಂದು ವಿಧಾನವೆ?

ನೋವು,ಶೂನ್ಯಗಳಲ್ಲಿ ಮುಳುಗಿರುವ ಅವನ ಕುಟುಂಬಕ್ಕೆ ಧೈರ್ಯ ಮತ್ತು ಸ್ಥೈರ್ಯವನ್ನು ಬಯಸುತ್ತಾ
ಪ್ರೀತಿಯಿಂದ,
ಸಿಂಧು

Friday, October 15, 2010

ಅಂಗೈಯಲ್ಲಿನ ನಕ್ಷತ್ರ

ಮಬ್ಬುಗತ್ತಲ ಇಳಿಸಂಜೆ
ಪುಟ್ಟಕಣ್ಣಿನ ದೀಪ
ಸೊರಗಿದ್ದೂ ಸೊಗಯಿಸಿದ
ಬಿಳಿಬಿಳಿ ಅಂಗೈಯನ್ನು
ನಿನ್ನ ತಿಳಿಗೆಂಪು ಬೆರಳುಗಳ
ಮಿಂಚಲ್ಲಿ ತೋಯಿಸುತ್ತ
ಅಂದೆ ನೀನು
ತಾರಗೆಯೊಂದು ಬಿದ್ದಿಹುದು
ಅಂಗೈಯೊಳಗೆ
ಆ ಕ್ಷಣದ ರಮ್ಯತೆಗೆ
ಅದರೊಳಗಣ ಆರ್ದ್ರತೆಗೆ
ಅರಳಿದ ಭಾವ
ಧನ್ಯತೆಯೊಂದೇ
ಇಳಿಸಂಜೆಗಳ ಕಾಲವಳಿದು
ರಾತ್ರಿಕಳೆದು
ಮುಂಜಾವಗಳು ನಿದ್ದೆಯಲ್ಲಿಳಿದು
ಈಗ ಬಿರುಬೇಸಗೆಯ ಹಗಲು

ಬಾನೆದೆಯ ಕತ್ತಲಲ್ಲಿ ಮಿನುಗುವ ತಾರಗೆಯ
ನೋಡಿ
ಬೆಳಕಿನ ಲೋಕದ ಅಂಗೈಗೆ
ಬಿದ್ದವಳ ನೆನಕೆ,
ಮಿಂಚು ಹೊಳೆವುದೇ ಕತ್ತಲಲ್ಲಿ
ನೆರವೇರಿದ್ದ್ದಕ್ಕಿಂತಲೂ
ನಿರೀಕ್ಷೆಯಲ್ಲೇ ಸುಖ
ಎಲ್ಲ ನವ್ಯ ನವ್ಯೋತ್ತರಗಳಿಗೂ
ಅಡಿಗರ ಮೋಹನ ಮುರಳಿಯದೇ ಭಾಷ್ಯ!

ಸುಯ್ದು ನಿಟ್ಟುಸಿರು
ಸೋತ ಕತ್ತನ್ನ ಹಗೂರ ಎತ್ತುತ್ತ
ಕಣ್ದೆರೆದರೆ
ಮಳೆನಿಂತ ಕಪ್ಪುನೀಲಿ ಬಾನೊಡಲಲಿ
ಹೊಳೆ ಹೊಳೆವ ತಾರೆ
ರಸ್ತೆಯಂಚಲಿ
ಘಮಘಮಿಸಿ ಇಳಿಬಿದ್ದ
ಆಕಾಶ ಮಲ್ಲಿಗೆ!

Tuesday, September 7, 2010

ಶ್ರಾವಣದಲ್ಲೇ ಮಾಗಿ!

ಹೊಸ ಆಫೀಸು, ಹೊಸ ಜೊತೆಗಾರರು, ಮ್ಯಾನೇಜರು ಮತ್ತು ಒಂದಿಬ್ಬರು ಟೀಮಿಗಳನ್ನ ಬಿಟ್ಟರೆ ಇನ್ಯಾರ ಪರಿಚಯವೂ ಇರಲಿಲ್ಲ. ಮಧ್ಯಾಹ್ನ ಬೇರೆ ಬೇರೆ ಟೀಮಿನ ಎಲ್ಲರೂ ಒಟ್ಟಿಗೆ ಊಟಕ್ಕೆ ಹೊರಟೆವು. ನಾನು ಕ್ಯಾಂಟೀನಿನಲ್ಲಿ ಉದ್ದುಕೆ ಜೋಡಿಸಿದ ಟೇಬಲ್ಲಿನ ಈಚೆ ತುದಿಯಲ್ಲಿ ಕೂತು ಎಲ್ಲರ ಮಾತು ಕೇಳಿಸಿಕೊಳ್ಳುತ್ತ, ನನ್ನ ಧ್ವನಿಯನ್ನೂ ತುತ್ತಿನ ಜೊತೆಗೆ ಸೇರಿಸಿ ಒಳಕ್ಕೆ ತಳ್ಳುತ್ತಿದ್ದೆ.
ಎಲ್ಲರೂ ಅವರಷ್ಟಕ್ಕೆ ಇಂಗ್ಲಿಷಿನಲ್ಲಿ ಆ ವಾರ ರಿಲೀಸಾಗಲಿರುವ ಸಿನಿಮಾದಿಂದ ಹಿಡಿದು, ಮೂಲಿ ಪರಾಟ ಮಾಡುವುದು ಹೇಗೆ ಮತ್ತು ಉದ್ದ ಜಡೆಯನ್ನ ಲ್ಯಾಕ್ಮೆ ಶಾಂಪೂ ಬಳಸಿ ಸಂಭಾಳಿಸುವುದು ಹೇಗೆ ಮೊದಲಾದ ವಿಷಯಗಳಲ್ಲಿ ಮುಳುಗಿದ್ದರು. ಎಲ್ಲ ವಯಸ್ಸು, ಅನುಭವ, ಆಕಾರ, ಆಸಕ್ತಿಗಳು ಕಲಸಿಕೊಂಡಿದ್ದ ಗಜಿಬಿಜಿಯ ಗುಂಪು. ನಾನು ಅಯ್ಯೋ ಇವರಲ್ಯಾರೂ ಕನ್ನಡದವರ ಹಾಗೇ ಕಾಣ್ತಾ ಇಲ್ವಲ್ಲ ಹೆಂಗಪ್ಪಾ ಗೆಳೆತನ ಬೆಳಸೋದು ಅಂದುಕೊಂಡು ಸುಮ್ಮನುಳಿದೆ.
ಪಕ್ಕದಲ್ಲಿ ಕುಳಿತ ಸಹೋದ್ಯೋಗಿಗೆ ಎಲ್ಲರ ಮಾತುಗಳ ನಡುವೆ ನನ್ನ ದ್ವನಿ ಕೇಳದಿರುವುದು ಅದು ಹೇಗೋ ಗಮನಕ್ಕೆ ಬಂದು, ಹಾಗೇ ಇಂಗ್ಲಿಷಿನಲ್ಲಿ ಒಂದು ಸಾಲಿನ ಇಂಟ್ರೋ ಹಾಕಿದರು. ಅಷ್ಟಕ್ಕೆ ಸುಮ್ಮನುಳಿಯದೆ, ಇನ್ಫಿಯಿಂದ ಬಂದವಳು ಮತ್ತು ಚಾರಣ ಪ್ರಿಯೆ ಅನ್ನುವ ವಿಶೇಷಣ ಸೇರಿಸಿಬಿಟ್ಟರು. ಎಲ್ಲರೂ ಮತ್ತೊಮ್ಮೆ ಗಜಿಬಿಜಿಯಲ್ಲಿ ಹಾಯ್ದರು. ನಾನು ತಿರುಗಿಸಿ ಹಾಯೆಂದೆ.
ಊಟ ಮುಗಿದು ಕೈತೊಳೆದು ಮೆಟ್ಟಲಿಳಿಯುವಾಗ ಎತ್ತರಕ್ಕೆ, ದೊಡ್ಡ ಆಕಾರದಲ್ಲಿದ್ದ ಹುಡುಗ ಬಂದು, ಇಂಗ್ಲಿಶಿನಲ್ಲಿ ನೀವು ಇನ್ಫೀನಾ, ನನ್ನ ಒಂದು ಉಸಿರಿನ ಉತ್ತರ ಹೌದು, ಟ್ರೆಕ್ಕಿಂಗ್ ಗ್ರೂಪಿದ್ಯಾ ಮತ್ತೆ ಹೌದು, ನೇಟಿವ್ ಯಾವುದು - ಮೊದಲ ಬಾರಿಗೆ ನಾನು ಬೆಂಗಳೂರು ಅಂತಂದೆ. ಈ ಬೇರೆ ಬೇರೆ ಭಾಷೆಯ ಜನರಿಗೆ ನಮ್ಮ ಸಾಗರ ಎಲ್ಲಿ ಎಂದು ಹೇಳಿಕೊಡುವ ತಾಳ್ಮೆ ಇರಲಿಲ್ಲ ನನಗೆ. ನನ್ನ ಅನಾಸಕ್ತಿ ಆತನಿಗೂ ತಟ್ಟಿರಬಹುದು. ಸೀಯಾ ಅಂತಂದು ಹೊರಟು ಹೋದ. ಸಧ್ಯ ಅಂತ ನಾನು ಬೇಗ ಮೆಟ್ಟಿಲಿಳಿದು ಸಾಗಿದೆ.
ಮುಂದೆರಡು ದಿನಗಳಲ್ಲಿ ಅವನು ಕನ್ನಡದವನು ಅಂತ ಗೊತ್ತಾಗಿ ನೆಮ್ಮದಿಯೊಂದು ಚಿಗುರೊಡೆಯಿತು. ಆಮೇಲಿನ ದಿನಗಳಲ್ಲಿ ಕೆಲಸ, ತಮಾಷಿ,ಡ್ಯಾನ್ಸು, ಸಿನಿಮಾ, ಸುತ್ತಾಟ, ಚಾರಣ, ಪ್ರವಾಸ ಅಂತ ಚಟುವಟಿಕೆಗಳು ತುಂಬಿ ತುಳುಕಿದವು.
ಆ ಸಹೋದ್ಯೋಗಿಯ ಭಾಷೆ, ನಡವಳಿಕೆ, ಆಸಕ್ತಿ, ಉತ್ಸಾಹ ಎಲ್ಲದರಲ್ಲೂ ಕನ್ನಡತನ ಮತ್ತು ಸಂಸ್ಕೃತಿ ಅಚ್ಚೊತ್ತಿದ್ದವು. ದಿನದಿನದಿಂದ ದಿನಕ್ಕೆ ಅಯ್ಯೋ ಬಿಟ್ಟರೆ ಸಾಕಪ್ಪಾ ಅನ್ನಿಸಿದ ಕ್ಷಣದಿಂದ ನಮ್ಮ ಸ್ನೇಹಸಂಬಂಧ ಇವತ್ತು ಯಾಕೆ ಬರಲಿಲ್ಲ ಅಂತ ಯೋಚಿಸುವಲ್ಲಿಯವರೆಗೆ ಬಂದಿತು. ಅದೆಲ್ಲಕ್ಕೂ ಆ ಮನುಷ್ಯನ ಸ್ನೇಹ, ಸೌಜನ್ಯ,ಪರಿಸರ ಪ್ರೇಮ, ಸಾಮಾಜಿಕ ಕಾಳಜಿ, ಮತ್ತು ಬದ್ಧತೆಗಳು ಕಾರಣವಾದವು.
ಟೆಕ್ಕಿಗಳು ಎಂದರೆ ಟೆಕ್ ಪ್ರಪಂಚದ ಸರಹದ್ದಲ್ಲೆ ಇರುವ ನನಗೂ ಒಂದು ಅಳತೆ ದೂರದಲ್ಲೆ ನಿಲ್ಲಬಯಸುವ ಸಂಶಯ. ಭಾಷೆ,ದೇಶ,ಸಂಸ್ಕೃತಿಗಳು ಕೊನೆಯ ಬೆಂಚಲ್ಲಿರಬಹುದು ಅನ್ನುವ ಅನುಮಾನದ ನೆಲೆ ನನ್ನ ಈ ನಡವಳಿಕೆಯ ನೆಲೆಗಟ್ಟು. ಅದನ್ನು ಸುಳ್ಳು ಮಾಡಿ ಜೊತೆಯಾದ, ನನ್ನ ಭಾವಕೋಶವನ್ನು ವಿಸ್ತರಿಸಿದ ಸ್ನೇಹಿತರು ಈಗ ಸಾಕಷ್ಟಿರುವುದರಿಂದ ಈಗ ನಾಲ್ಕೂವರೆ ವರ್ಷಗಳ ಹಿಂದಿದ್ದ ನನ್ನ ಮನಸ್ಥಿತಿ ಬದಲಾಗಿದೆ. ಅದಕ್ಕೆ ದೊಡ್ಡ ಕೊಡುಗೆ ಈ ಗೆಳೆಯ.
ಈ ಎಲ್ಲ ವಿಷಯಗಳನ್ನೂ ನಾನೆಂದೂ ಯೋಚಿಸಿರಲೆ ಇಲ್ಲ. ಅವನು ನನ್ನ ಸ್ನೇಹಿತನಾಗಿರುವುದು, ಮತ್ತು ಮನಸ್ಸಿಗೆ ಬಂದ ವಿಷ್ಯಗಳನ್ನ, ಹಸಿರನ್ನ, ಭಾವೋದ್ವೇಗಗಳನ್ನ, ಪಯಣವನ್ನ, ಫೋಟೋಗಳನ್ನ, ಮತ್ತು ಎಷ್ಟೊಂದೆಲ್ಲ ಮಾತುಕತೆಗಳನ್ನ, ವಿಶೇಷವಾಗಿ ಅವನಮ್ಮ ಮಾಡಿಕೊಟ್ಟ ಅದ್ಭುತ ತಿಂಡಿಗಳನ್ನ ಹಂಚಿಕೊಂಡು ತಿನ್ನುವಾಗೆಲ್ಲ ಆ ಸಂಬಂಧ ಎಷ್ಟು ಸಹಜವಾಗಿ ಆಪ್ತವಾಗಿತ್ತು ಅಂದರೆ ಅದಕ್ಕೆ ವಿಶ್ಲೇಷಣೆಯ, ಆಲೋಚನೆಯ ಅವಶ್ಯಕತೆ ಇರಲಿಲ್ಲ. ಅದು ತನ್ನಿಂತಾನೇ ಅವತ್ತು ತಪ್ಪಿಸುಕೊಳ್ಳುತ್ತಾ ಹೊರಳಿನಿಂತ ಮೆಟ್ಟಿಲು ದಾರಿಯನ್ನ ಹತ್ತಿ, ಇಬ್ಬರ ಒಳಜಗತ್ತಿನಲ್ಲಿ ಒಂದು ಆಪ್ತನೆಲೆ ಕಂಡುಕೊಂಡು ಬಿಟ್ಟಿತ್ತು.
ಈಗ ಕೆಲತಿಂಗಳುಗಳ ಮುಂಚೆ ಅವನು ಬೇರೆ ಕೆಲಸ, ಬೇರೆ ಊರು, ಬೇರೆಯದೇ ಅಕ್ಷಾಂಶಕ್ಕೆ ಹೊರಡುವ ಮಾತು ಬಂದಾಗ ಎರಡು ದಿನ ನನಗೆ ಪ್ರತಿಸ್ಪಂದನೆಯೇ ಹೊಳೆಯಲಿಲ್ಲ.
ಬೇಸರವಾದ ಕೂಡಲೆ, ಹಸಿವಾದ ಕೂಡಲೆ, ಪಯಣದ ಯೋಚನೆ ಬಂದಕೂಡಲೇ ಮತ್ತು ಪಯಣವೊಂದರಿಂದ ನಾನಾಗಲೀ ಅವನಾಗಲೀ ವಾಪಸ್ ಬಂದ ಕೂಡಲೆ, ಹಬ್ಬದ ಮರುದಿನ, ಹೊಸ ಓದಿನ ಮರುಕ್ಷಣ, ಫ್ಲಿಕರ್ ಅಪ್ಲೋಡ್ ಆದಕೂಡಲೇ ಅಲ್ಲಿ ಅವನ ಕ್ಯೂಬಿನ ಗೋಡೆಗಳಿಗೊರಗಿ ಒಂದಿಷ್ಟು ಹೊತ್ತು ಮಾತನಾಡುವುದಿತ್ತು. ಅದು ಹೆಚ್ಚು ಕಮ್ಮಿ ವೈಸಿವರ್ಸಾ ಕೂಡ.
ದಿನದಿನವೂ ನೋಡದೆ ಇದ್ದರೂ ಅಲ್ಲೆಲ್ಲೋ ಕಂಡೊಡನೆ ಒಂದು ನೆಮ್ಮದಿಯ ನಗೆ ಹಿತವಾದ ನೋಟವಿರುತ್ತಿತ್ತು. ಅವನು ವೀಕೆಂಡಿನ ಹೊಸಚಾರಣದ ಪ್ಲಾನು ಹೇಳುತ್ತಿದ್ದಂತೆ ಕೇಳುವುದಿಲ್ಲ ಎಂಬ ಹುಸಿಮುನಿಸಿನ ನನ್ನ ಮೊಗವಾಡದ ಹಿಂದೆ ಕಾತರದ ಕಿವಿಯಿತ್ತು. ಅವನ ಹಿರಿನಗುವಿನ ಒಳಗೆ ನನ್ನ ಕೇಳುಗಿವಿಗೆ ಕತೆಯುಣ್ಣಿಸುವ ಅಕ್ಕರೆಯಿರುತ್ತಿತ್ತು.
ಕನ್ನಡದ ಘಟ್ಟ ಕಾಡುಗಳ ನೆನಪು, ಹಸಿರಿನ ಮಾತು, ವನಸಿರಿಯ ಚಿತ್ರಗಳು, ಓದು-ಬರಹ ಎಲ್ಲಕ್ಕೂ ಒಂದು ಸಂವೇದನಾಶೀಲ ಕಟ್ಟೆಯಂತೆ (ಸೆನ್ಸಿಬಲ್ ಕಾರ್ನರ್ ಈಸ್ ಮೋರ್ ಕರೆಕ್ಟ್) ಒದಗಿದ, ನನ್ನ ತಮ್ಮಮತ್ತುಬಾಳಗೆಳೆಯನ ಅಂಶಗಳನ್ನು ಅಷ್ಟಷ್ಟು ಬೆರೆಸಿ ಮಾಡಿದಂತೆನಿಸುವ ಈ ಕಿರಿಯ ಗೆಳೆಯ ಇನ್ನು ಏಳು ಸಮುದ್ರದಾಚೆಗಿನ ರಾಜಕುಮಾರ.
ಚಾಟಿ’ದೆ ಎನ್ನುವುದು ಮೇಲಿನ ಮಾತು. ನಮ್ಮ ಭಾವಜಗತ್ತಿಗೆ ಹೊಸ ಸೇತುವೆ ಬೇಕಿಲ್ಲ. ಆದರೂ ಭೌತಿಕ ಜಗತ್ತಿನಲ್ಲಿದು ದೂರದ ಬದುಕು. ಹೊರಗೆ ಮಳೆ ಹನಿಯುತ್ತಿದ್ದರೂ ಒಳಗೆ ಗಾಜಿನ ಗೋಡೆಯೀಚೆ ಕುಳಿತವಳಿಗೆ ಮುಟ್ಟಲಾಗದೆ ಉಳಿಯುವ ಸಾದೃಶ್ಯವೇಕೋ ನೆನಪಾಗುತ್ತಿದೆ.
ಇಲ್ಲಿಯವರೆಗೆ ಅನುಭವಿಸಿದ ಸ್ನೇಹದ ಕ್ಷಣಗಳು ಇನ್ನು ಮುಂದಿನ ಅಂತರವನ್ನ ತುಂಬಿಕೊಡುವಷ್ಟು ಸಶಕ್ತವಾಗಿರುವ ಅರಿವು ಈ ವಿದಾಯವನ್ನ ಸಹನೀಯಗೊಳಿಸುತ್ತಿದೆ.
ನಾನು ತುಂಬ ಇಷ್ಟಪಟ್ಟ ಸೆಪ್ಟೆಂಬರು ಅದ್ಯಾಕೋ ಈ ವರ್ಷ ಇದ್ದಕ್ಕಿದ್ದಂತೆ ವಿದಾಯದ ತಿಂಗಳಾಗಿ ಬದಲಾಗಿಬಿಟ್ಟಿದೆ.
ಶ್ರಾವಣದ ಕೊನೆ ಕೊನೆಗೆ ಕಳೆದ ಕಾಲದ ಕೊಂಡಿಗಳು ಒಂದೊಂದಾಗಿ ಜರುಗುವಾಗ ಒಳಗೆ ಮನದಲ್ಲಿ ಎಲೆಯುದುರುವ ಕಾಲ ನಡೆಯುತ್ತಿದೆ. ಕಳೆದ ದಿನಗಳ ಹಚ್ಚಹಸಿರಿನ ನೆನಪು, ಅಕ್ಕರೆಯ ದೀಪದ ಬೆಳಕಲ್ಲಿ ಬಂಗಾರದಂತೆ ಹೊಳೆಯುತ್ತಿವೆ.
ವಿದಾಯದ ಮಬ್ಬುಗತ್ತಲಿಗೆ ಬೆಳಕಾಗಿ ನಿಲ್ಲುವುದೆ ನೆನಪು?!
ಉಳಿದದ್ದೇನೇ ಇರಲಿ.
ನಾನು ಸಿರಿವಂತೆ.
ಹಿರಿತನದ ಹಿರಿಕಿರಿಯ ಜೀವಗಳ ಗೆಳೆತನದ ಡೆಪಾಸಿಟ್ಟುಗಳು
ಒಳಗೆ ಕಾಲನ ತಿರುಪಿಗೆ ಸಿಕ್ಕದಂತೆ ಬೆಚ್ಚಗೆ ಮರಿಹಾಕುತ್ತಲಿವೆ ನಿರಂತರ.

ನಲ್ಮೆಯ ಗೆಳೆಯಾ,
ಅಕ್ಕರೆಯ ಅಪ್ಪುಗೆಯ ವಿದಾಯ.
ಅಮ್ಮ ಅಪ್ಪನಿಟ್ಟ ಹೆಸರು
ಅನ್ವರ್ಥವಾಗಲಿ - ಸುಜಯ.
ಒಳಿತು, ನೆಮ್ಮದಿ,
ಸಂಕಟವ ಸಹಿಸುವ ಶಕ್ತಿ
ನೋವಿನ ಕ್ಷಣಗಳನ್ನ ಮರೆಸುವಷ್ಟು ನಲಿವು
ನಿನ್ನದಾಗಿರಲಿ,
ಅವಳು ಸ್ವಲ್ಪ ಜಾಸ್ತಿನೇ ಬೇಗ ಸಿಗಲಿ,
ಎಂಬುದೆನ್ನ ಆಶಯ.

Wednesday, September 1, 2010

ಚೈತನ್ಯದ ಸಿರಿಬುಗ್ಗೆಗೊಂದು ನವುರು ವಿದಾಯ

ಮಳೆಗಾಲ ಅಂತ ಕರೆಯಲು ಬರದ ಆದರೆ ಆಗಾಗ ಸಿಕ್ಕಾಪಟ್ಟೆ ಮಳೆಸುರಿದು ಮೋಡ ಮುಚ್ಚಿಕೊಳ್ಳುವ ಈ ದಿನಗಳಲ್ಲಿ, ನನ್ನ ಕಾರ್ಯಕ್ಷೇತ್ರದ ಒಂದು ಹೊಂಗಿರಣ ದೂರದ ಪಥದೆಡೆಗೆ ಹೊರಟಿದೆ. ಸ್ನೇಹವೆಂದು ಹೇಳಲು ಬರದ, ಆದರೆ ವ್ಯಾವಹಾರಿಕ ಸಂಬಂಧವನ್ನು ಮೀರಿದ, ಅಚ್ಚರಿ-ಮೆಚ್ಚುಗೆ ಮತ್ತು ಅಕ್ಕರೆ ತುಂಬಿರುವ ಸಂಬಂಧವೊಂದು ದಿಕ್ಕು ಬದಲಿಸುತ್ತಿದೆ. ಕಣ್ಣಿದಿರುಗಿರುವುದೇ ಸಂಬಂಧ ಎಂಬ ವ್ಯಾಖ್ಯಾನದಿಂದ ನಾವು ನೆಟ್ ಯುಗದ ಮಂದಿ ಹೊರಬಂದು ತುಂಬ ವರ್ಷಗಳಾದವು. ಸಮಭಾಜಕವೃತ್ತದ ಇಕ್ಕೆಲಗಳಲ್ಲು ಚಾಚಿನಿಂತ ಸ್ನೇಹದ ಹರವು, ಸಂಬಂಧಗಳ ಹರಿವು ಪುಟ್ಟ ಮನೆಯ ಮೂಲೆಯ ಕಂಪ್ಯೂಟರ್ ಪರದೆಯ ಮೇಲೆ ವಿಸ್ತರಿಸುತ್ತಿದೆ.
ಆದರೆ ಈಗ ನಾಲ್ಕೂವರೆ ವರ್ಷಗಳಿಗೂ ಮಿಕ್ಕಿ ದಿನದಿನವೂ ಒಡನಾಡಿದ ಹಿರಿಯ ಸಹೋದ್ಯೋಗಿ ಕಾರ್ಯಕ್ಷೇತ್ರದ ನಿಲುವುಗಳಿಂದಾಗಿ ದೂರವಾಗಲಿದ್ದಾರೆ. ವಯಸ್ಸಿನ ಅಂತರಗಳನ್ನ ದಾಟಿ ನಮ್ಮ ಮನಮನದ ಮೂಲೆಯಲ್ಲಿ ಉತ್ಸಾಹದಿಂದ ಓಡಾಡಿ, ಬೇಕೋ ಬೇಡವೋ ನನ್ನಂತಹ ಮುಚ್ಚುಗ ಸ್ವಭಾವದವಳನ್ನೂ ಎಲ್ಲರೊಡನೆ ಬೆರೆಯುವಂತೆ ಮಾಡಿದ, ಸಕಲ ಆಟಗಳ ಮುಂಚೂಣಿಯಲ್ಲಿ ಓಡುವ, ಚೈತನ್ಯವನ್ನು ಜೀನುಗಳಲ್ಲಿಯೇ ಹೊತ್ತುಕೊಂಡು ಬಂದಿರಬಹುದಾದ ಈ ಒಡನಾಡಿ ಮುಂದಿನ ಕೆಲದಿನಗಳಲ್ಲಿ ಬೇರೆ ಹೋಗಲಿದ್ದಾರೆ. ಸಹೋದ್ಯೋಗಿ ಎಂದರೆ ನಮ್ಮ ನಡುವಿನ ಅನುಬಂಧವನ್ನು ದೂರವಿರಿಸಿದಂತೆ, ಹಿರಿಯಕ್ಕನೆಂದರೆ ಆ ಮಗುಸದೃಶ ಚೈತನ್ಯಕ್ಕೆ ಸರಪಳಿ ಬಿಗಿದಂತೆ, ಸ್ನೇಹಿತೆ ಎನ್ನಲು ಹೋದರೆ ಆಕೆಯ ತಿಳುವಳಿಕೆ ಮತ್ತು ಪ್ರೌಢತೆಯನ್ನ ಕಿರಿದುಗೊಳಿಸಿದಂತೆ, ಇವೆಲ್ಲವನ್ನೂ ಮೀರಿ ಅಳತೆಗಳನ್ನು ಹೊರತಾಗಿಸಿ ಜೊತೆಜೊತೆಗೆ ನಡೆದು ದಾರಿ ಹೊರಳುವಲ್ಲಿ ನಗೆಮೊಗದಿ ಭಾರಹೃದಯದಿ ಹೊರಡುತ್ತಿರುವ ಈ ಮೂರ್ತರೂಪ ಜೀವನ್ಮುಖತೆಯನ್ನ ಏನೆಂದು ಕರೆಯಲಿ ಹೊಳೆಯುತ್ತಿಲ್ಲ.
ಬದಲಾವಣೆಯೆ ಜಗದ ನಿಯಮ, ಇಲ್ಲಿ ಯಾರೂ ಮುಖ್ಯರಲ್ಲ ಎಂಬ ಅಲಿಖಿತ ಕಾರ್ಪೋರೇಟ್ ನಿಯಮಗಳು ಅರಿವು ಬೆನ್ನಿಗಿದ್ದೂ ಈ ವಿದಾಯ, ಈ ಹೊರಳುವಿಕೆ ಮನಸ್ಸಿಗೆ ಅತ್ಯಂತ ತ್ರಾಸು ಕೊಡುತ್ತಿದೆ. ಇನ್ನೊಂದೆರಡು ವಾರ ಸುತ್ತಲಿನ ವಾತಾವರಣ ಭಿನ್ನವಾಗೆನಿಸಿ, ಮತ್ತದೇ ಏಕತಾನತೆಗೆ ಹೊರಳಿಕೊಳ್ಳುವುದು ನನಗೆ ಗೊತ್ತು. ಆದರೆ ಈ ಚೈತನ್ಯ ಬರಿಯ ಆಫೀಸು ಸಮಯದಲ್ಲಿ ಮಾತ್ರ ನನ್ನ ಮೇಲೆ ಪ್ರಭಾವ ಬೀರಿದ್ದರೆ ಎರಡುವಾರದ ಕೊರಗು ಕರಗಿ ಹೊಸಗಾಳಿ ಹೊಸದಿನಚರಿಗೆ ಮನ ಒಗ್ಗಿಕೊಳ್ಳುತ್ತಿತ್ತೇನೋ.
ಚಿಕ್ಕಂದಿನಲ್ಲಿ ಎಲ್ಲೋ ಯಾವುದೋ ಮನೆಯಂಗಳದ ಅಂಚಿಗೆ ಒತ್ತಾಗಿ ಬೆಳೆದು ಘಮ್ಮಗೆ ಅರಳಿದ ಸುಳಿಹೂವಿನ ಗೊಂಚಲು ಮತ್ತದರ ಘಮ, ಇವತ್ತಿಗೂ ಯಾವುದೇ ಆಹ್ಲಾದದ ಸಂಗತಿ ಸಂಭವಿಸಿದಾಗ ನನ್ನನ್ನು ಆವರಿಸಿಕೊಳ್ಳುತ್ತದೆ. ಉಂಹೂಂ ಅಷ್ಟು ಹೂಗಿಡಗಳ ರಾಶಿ ನಮ್ಮನೆಯಂಗಳದಲ್ಲಿದ್ದರೂ ಒಂದು ಸುಳಿಹೂವಿನ ಗಿಡವೂ ಇರಲಿಲ್ಲ. ಅದ್ಯಾರ ಮನೆಯ ಅಂಗಳದಂಚೋ ಗೊತ್ತಿಲ್ಲ ಕಂಪೌಂಡ್ ಮೂಲೆಯಲ್ಲಿ ಒತ್ತಾಗಿ ಬೆಳೆದ ಪೊದೆಗಳೂ ಅವುಗಳಿಂದ ಪರಿಮಳವೇ ನಾಜೂಕು ಬಳುಕು ಪಡೆದು ಹೊರಟಂತೆ ಎಸಳು ಎಸಳಾಗಿ ಅರಳಿಕೊಂಡಿದ್ದ ಸುಳಿಹೂವಿನ ಗೊಂಚಲುಗಳೂ, ಅಷ್ಟು ದೂರಕ್ಕೆ ನಡೆದರೂ ಅವುಗಳಿಂದ ತೇಲಿಬರುತ್ತಿದ್ದ ಪರಿಮಳವೂ ಅವತ್ತು ನೋಡಿದ್ದಕ್ಕಿಂತ ಗಾಢವಾಗಿ ನನ್ನ ಭಿತ್ತಿಯಲ್ಲಿ ಅಚ್ಚೊತ್ತಿ ಕೂತಿದೆ. ಎಷ್ಟೇ ಗಬ್ಬೆದ್ದು ಹೋಗಿದೆ ಅಂತ ಬಯ್ದುಕೊಂಡಿರುವ ಈ ಅಡ್ಡಾದಿಡ್ಡಿ ಬದುಕಿನ ಅನಿವಾರ್ಯ ಅಯಾಚಿತ ದಿನಚರಿಯಲ್ಲಿ ಯಾವುದೋ ಬಗೆಯಲ್ಲಿ ಆ ಆಹ್ಲಾದ ಮರುಕಳಿಸುತ್ತಲೇ ಇದೆ. ಇರುತ್ತದೆ.
ಹಾಗೆಯೇ ಈ ಜೀವನ್ಮುಖೀ ಚೈತನ್ಯ ದಿನದಿನದ ಕಾರ್ಯಕ್ಷಮತೆಯ ಮೂಲಕ, ಅಂತಃಕರಣದ ಮೂಲಕ, ಗಟ್ಟಿಯೆಂದರೆ ಗಟ್ಟಿ ಅಂತ ಯಾರೂ ಥಟ್ಟನೆ ಹೇಳಿಬಿಡಬಹುದಾದಷ್ಟು ಮನೋಸ್ಥೈರ್ಯದ ಮೂಲಕ, ಹೊಸತನ್ನು ಸದಾ ಹುಡುಕುವ ಅನ್ವೇಷಣಾಸಕ್ತಿಯ ಮೂಲಕ, ಅಂದುಕೊಂಡಿದ್ದನ್ನು ಮಾಡಿಯೇ ಬಿಡುವ ಛಲದ ಮೂಲಕ, ನೋವು ಇರುವುದು ಬೆನ್ನಿಗೆ ಕಟ್ಟಿಕೊಂಡು ಹೋರಾಡಲಷ್ಟೇ - ನಗುವನ್ನು ಹುದುಗಿಸಿಡಬೇಕಿಲ್ಲ ಅಂತ ತೋರಿಸಿಕೊಡುವ ಮೂಲಕ, ಆತ್ಮಸಾಕ್ಷಿಗೆ ತಕ್ಕಂತೆ ಬದುಕು - be true to yourself - ಎಂಬುದನ್ನ ಇಂಚಿಂಚೂ ಸಾಧಿಸಿ ತೋರಿಸುವ ಇವರಿಂದ ನಾನು ಕಲಿತದ್ದು ಇಷ್ಟೇ, ಅರ್ಥೈಸಿಕೊಂಡಿದ್ದು ಇಷ್ಟೇ ಎಂದು ಹೇಳಲಿಕ್ಕಿಲ್ಲ. ಇವರು ಇನ್ನು ನನ್ನ ದಿನಚರಿಯ ಮೂರ್ತರೂಪದಲ್ಲಿರುವುದಿಲ್ಲ ಎಂಬುದಷ್ಟೇ ನಿಜ.
ನನ್ನ ಬದುಕಿನ ಅಂತಃಪ್ರಜ್ಞೆಯನ್ನು ಇಷ್ಟೊಂದು ಪ್ರಭಾವಿಸಿದ ಈಕೆ ನನ್ನ ನಡೆನುಡಿಗಳಲ್ಲಿ ಅಂದೆಂದೋ ಹುಟ್ಟಿದ ಸುಳಿಹೂವಿನ ಗಂಧದಂತೆಯೇ ಆವರಿಸಿಕೊಂಡಿರುತ್ತಾರೆ ಎಂಬ ಅರಿವು ಈ ವಿದಾಯವನ್ನ ಸಹನೀಯವಾಗಿಸಿದೆ.
ಈ ಚೇತನದ ಬಗ್ಗೆ ಮಾತಲ್ಲಿ ಹಿಡಿಯಬಹುದಾದಷ್ಟನ್ನು ಇಲ್ಲಿಡುವ ಪ್ರಯತ್ನ ಮಾಡಿದ್ದೇನೆ. ಮಾತಿಗೆ ಸಿಕ್ಕದ್ದು ಅಳವಿಗೆ ಮೀರಿದ್ದು ಇನ್ನೂ ಬಹಳವಿದೆ.


ಚೈತನ್ಯದ ಸಿರಿಬುಗ್ಗೆಯೇ,
ನಿಮಗೆ ನಲಿವು ನೆಮ್ಮದಿಯ ಆಶಿಸುತ್ತಾ
ಅಕ್ಕರೆ,
ಕಿರಿಮುತ್ತು,
ಬಿರಿನಗು,
ಹಿರಿಯಪ್ಪುಗೆ
ಮತ್ತು ಆಹ್ಲಾದದ ಗೊಂಚಲುಗಳ ಹಿಂದ
ಅಡಗಿಸಿಟ್ಟ ಬಿಸಿಕಂಬನಿಯೊಡನೆ
ನವುರಾದ ವಿದಾಯ.
ಮತ್ತೆ ಮತ್ತೆ ಸಿಗೋಣ.
Dreams are given to u only to make them come true.

Monday, August 2, 2010

ವಿಕ್ಷಿಪ್ತ, ಅ-ಕ್ಷರ..

ಆಶಾಢದ ಕೊನೆಗೆ
ತೆರೆದಂತೆ ಕಂಡ
ತುಸು ಹೊಸ ದಾರಿ
ಸುತ್ತಿ ಬಳಸಿ ನಡೆದು
ಕೊನೆಗೆ
ಹಳೆಯ ಹೆದ್ದಾರಿಗಿಳಿದು
ಪಯಣ ಅಸಹನೀಯವಾಗಿ
ನಿಲ್ದಾಣದ ನೆರಳಿಗಿಳಿಯದೆ
ಕವಲೊಡೆದು
ಹೊರಟಾಗ
ಕಣ್ಣ ಕೊನೆಗೆ
ಶ್ರಾವಣದ ಹನಿ.
ಏನ ಹೇಳಲಿ
ಮತ್ತೆ ಮತ್ತೆ -
ಬರ’ದ ಬದುಕಿಗೆ
ನೆರೆಹಾವಳಿಯ ನೆರವು
ನೆನಪು ಸಂತ್ರಸ್ತ,
ಆ ಕಳೆದ ಕಾಲ ವ್ಯಸ್ತ, ವ್ಯರ್ಥ!
ಋತುವಿಲಾಸಕ್ಕೆ
ಸಂದ
ವಿಕ್ಷಿಪ್ತ ವಿಲಾಪವಿದು
ಪ್ರತೀ ತಿಥಿಯಲ್ಲೂ
ಅ-ಕ್ಷರವಾಗುತ್ತಾ
ಅದು ಹೇಗೋ
ಒಳಗಿನ ಕುದಿ ಕಳೆದು
ಆರುತಿರುವ ಬೆಂಕಿಯಂತಹ ನೆನಪು!

Friday, July 9, 2010

ನೆನಪು ನೇವರಿಕೆ

ಅಮ್ಮನಿಲ್ಲದೆ ನಿದ್ದೆ ಬರಲೊಲ್ಲದೆಂಬವಳ
ಮಗ್ಗುಲಿಗೆ ಅವುಚಿ ಮಲಗಿಸಿ;
ಶಾಲೆಯಂಗಳದ ಧೂಳು
ಹೊದ್ದು ಮನೆಗೆ ಬರುವವಳ
ಬಾಯಿ ಬಡಿಗೆಗೆ
ಎರಡು ಹಿಡಿ ಅವಲಕ್ಕಿ
ಮೇಲೆ ಮೊಸರು ಬೆಲ್ಲ ಕರುಣಿಸಿ;
ರಾತ್ರಿಯಿಡೀ ಯಕ್ಷಗಾನ ನೋಡಿ
ತಲೆನೋವು ಬಂತೇ
ಅರ್ಧ ಕಡಿ ನಿಂಬೆಹಣ್ಣೂ
ಎರಡು ಚಮಚ ಕೊಬ್ರಿ ಎಣ್ಣೆ
ಹಚ್ಚಿ ತಿಕ್ಕಿ,
ಬಿಸಿ ಬಿಸಿ ಸುರಿನೀರ ತಲೆಸ್ನಾನ;
ಕುಣಿಕುಣಿದು ನಲಿದ ಕಾಲು ನೋವೆ
ರಬ್ನಿಸಾಲ್ ಹಚ್ಚಿ ತಿಕ್ಕಿ,
ಹಳೆಸೀರೆಯಿಂದ ಕಿತ್ತ ಫಾಲ್ಸ್
ಸುತ್ತಿ;
ಇವತ್ತು ಪರೀಕ್ಷೆ,
ಬೆಳಗಿಂಜಾವಕ್ಕೆದ್ದು
ಓದುತ್ತ ಕೂತವಳ
ಕೈಗೆ ಬಿಸಿಬಿಸಿ ಚಾ ಹಿಡಿಸಿ;
ಮಧ್ಯಾಹ್ನದ ಊಟ ಗಡದ್ದಾಯಿತೇ
ಮಡಿಚಿ ರೆಡಿ ಮಾಡಿಟ್ಟ
ಕವಳದಲ್ಲರ್ಧ ಸಲ್ಲಿಸಿ;
ಬೆಳೆಸಿದವಳು,
ಬೆಳೆದು ನಿಂತ ಮೇಲೆ
ಅರೆಬೆರಗು,ಅರೆಮೆಚ್ಚುಗೆ,ಉಳಿದೆಲ್ಲ ಪ್ರೀತಿ
ಎರೆದವಳು,
ವರ್ಷವೆರಡರ ಹಿಂದೆ
ಯಾತ್ರೆ ಮುಗಿಸಿ ಹೋಗಿಬಿಟ್ಟಳು.
ಬಿಳಿಬಿಳಿ ಕಣ್ಣು,ಪುಟ್ಟ ಜಡೆ,
ಸುಕ್ಕು ಮೈ, ಮುಗ್ಧ ನಗು
ಎಲ್ಲ ಪ್ರೀತ್ಯಾದರಗಳ
ನೆನಪಿನಂಚಿಗೆ ಹೊಳೆದು
ನಿಲ್ಲುವುದು
ಹೊರಡುವ ಮೊದಲು
ಕಿರಿಹಿಡಿದು ನೋಡಿದ ನೋಟ
ಏನು ಹೇಳಬೇಕಿತ್ತು ಅಮ್ಮಮ್ಮಾ?!
ನನಗೆ ಈಗ ಅನ್ನಿಸುತ್ತಿರುವುದೆಲ್ಲ
ನೀನು ಹೇಳದೆ ಉಳಿದಿದ್ದಾ!
ಆಚೆಮೊನ್ನೆ ತಿಥಿಯಾಯಿತು,
ನಿನ್ನೆ ವಡೆ,ಸಿಹಿ ಸಿಕ್ಕಿತು.

ಹತ್ತಕ್ಕೆ ಕಳಕೊಂಡ ಮುಗ್ಧತೆಯ
ಸಾವಿನಂಚು ಮರಳಿ ಕೊಟ್ಟಿತೆ?
ಆಟವಾಡುವ ಮನಸ ಜಗ್ಗಿ ನಿಲ್ಲ್ಲಿಸಿ
ಕೆಲಸಕೆಳೆದ ಕೈಯನ್ನ
ವೃದ್ಧಾಪ್ಯ ಕ್ಷಮಿಸಬಹುದೆ?
ಬದುಕು ಸಲ್ಲಿಸದೆ ಹೋಗಿದ್ದನ್ನು
ತಿಥಿಯಲ್ಲಿ ಪಡೆಯಬಹುದೆ?
ಎಲ್ಲ ವಿಶೇಷ ಸಿಟ್ಟು,ದ್ವೇಷಗಳು
ಕೊನೆಯ ದಿನಗಳಲ್ಲಿ
ನಿನ್ನ "ಹೋಕ್ಯಳ್ಲಿ ಬಿಡು"ವಿನಲ್ಲಿ
ಒಂದೊಂದಾಗಿ ಕಳಚಿಕೊಂಡಾಗ
ಹೀಗಂದುಕೊಂಡೆ,
ಕಾಲ ಮಾಗುತ್ತಾ ಕಳೆಯುತ್ತದೆ!