Showing posts with label ಆಹ್ಲಾದ. Show all posts
Showing posts with label ಆಹ್ಲಾದ. Show all posts

Tuesday, September 27, 2011

ಸುಗಂಧ ಸಮೀರ

ಸುಮ್ಮಗೆ ನೆಲದ ಮೇಲೆ
ಕಾಯುತ್ತ ಕೂತವಳ
ಎದಿರು
ಸಗ್ಗದಿಂದಿಳಿದಂತೆ
ನೀನು
ಹಾಜರಿ ಹಾಕಲು -
ಮೋಡವಾಗಿ ಬನಿಇಳಿವ
ಮೊದಲೇ
ಈ ಹನಿ
ಶರಧಿಯೊಳಗೆ ತಲ್ಲಣಿಸಿ
ಆವಿಯಾಗಿತ್ತೆಂಬ ಅರಿವು.
ಎಳೆಯ ಕಾಲದಿ ಬಿತ್ತಿದ
ಮೊಳಕೆಮೂಡದ ಬೀಜ
ಏರುಬದುಕಿನ ಬಿರುಹಾದಿಯಲಿ
ನೆರಳಿಗೆ ಹೊರಳಿದರೆ ತಂಗಾಳಿ
ಸೂಸುವ ಎಲೆಮರ,
ನೆನಪ ಗಂಧ ತೇಯುವ
ಕಲ್ಲು ಮನದ ಸುತ್ತ ಸುಳಿವ
ಸುಗಂಧಿತ ಸಮೀರ.
ನೀನು ಮೊನ್ನೆಯ ನಿಜ.
ಇವತ್ತೂ ನಿಜವೇ.
ಕಳೆದ ಕಾಲದ ಕನ್ನಡಿಯಲಿ
ನಿತ್ಯ ನೂತನ
ಮಂದಹಾಸವರಳಿಸುವ
ಮುಟ್ಟಲಾಗದ ನಿಜ.
ನಿಲುಕಲಾರದ ಅಳುಕಲ್ಲು
ಸವರಿ ಸಂತೈಸಿಕೊಳ್ಳುವೆ
ಕವಿತೆ ಬರೆವ ಲಹರಿ
ಅಲ್ಲು ಇಲ್ಲು ಎಲ್ಲೂ.
ಪೋಣಿಸಿದ ಅರಳು ಮೊಗ್ಗು
ಆಹ್ಲಾದ
ಕನಸು ಮನಸು
ನನಸಲ್ಲೂ!