Monday, October 30, 2017

ಹಿಜಾಬ್ - by ಗುರುಪ್ರಸಾದ್ ಕಾಗಿನೆಲೆ - ನನ್ನ ಓದು.

[[ ಹಿಜಬ್ - by  ಗುರುಪ್ರಸಾದ್ ಕಾಗಿನೆಲೆ - ನನ್ನ ಓದು.]]


"ನಾಗರೀಕತೆಯ ಸಂಭ್ರಮ ಹೆಚ್ಚುತ್ತಿದ್ದಂತೆಯೇ ಅಂತರಾಳದಲ್ಲಿ ಒಂಟಿತನ, ಬೇಸರ, ತಲ್ಲಣ ವಿಜೃಂಭಿಸುತ್ತಲೇ ಉಳಿದಿವೆ. ತಾನು ಕಟ್ಟಿದ ನಾಗರೀಕ ನಾಗಪಾಶಗಳ ನಡುವೆಯೂ ಆತ ತನಗೇ ತಾನು ಪರಕೀಯನೆನಿಸುತ್ತಿರುವಾಗ... ನಿಸರ್ಗದ ಮಡಿಲಿಗೂ ಎರವಾಗಿ ಅಖಿಲ ವಿಶ್ವಪ್ರಕೃತಿ ಪ್ರಪಂಚದಿಂದಲೂ ತಾನು ಪ್ರತ್ಯೇಕನೆಂಬ ಅಸಹಾಯಕತೆಯ ಅರಿವೂ ಮನುಷ್ಯನನ್ನು ಕಾಡುತ್ತಿರುತ್ತದೆ.
ಅಶಕ್ತನೂ ಏಕಾಕಿ. ಸಮರ್ಥನೂ ಏಕಾಕಿ.ಸೆರೆಮನೆಯಲ್ಲಿ ಬಿದ್ದವನೂ ಏಕಾಕಿ.ಅರಮನೆಯಲ್ಲಿ ಇದ್ದವನೂ ಏಕಾಕಿ.
ಮಾನವನು ಮಾನವತೆಯಿಂದ ಮಾತ್ರ ಈ ಅಸಹಾಯಕತೆಯನ್ನು ನೀಗಿಕೊಳ್ಳಬಹುದು. ಸಾಹಿತ್ಯ ಈ ನೋವಿಗೆ ನಾಲಗೆಯನ್ನು ನೀಡಬಹುದು."

ಈ ವಿಷಯವನ್ನು ನಾನು ಇತ್ತೀಚೆಗೆ ಹಳೆಯ ಸಾಕ್ಷಿ ಪತ್ರಿಕೆಯ ಒಂದು ಲೇಖನದಲ್ಲಿ ಓದಿದೆ. ಪರಕೀಯ ಪ್ರಜ್ಞೆ ಎಂಬ ವಿಷಯದ ಬಗ್ಗೆ ಮನಮುಟ್ಟುವಂತೆ ಬರೆದವರು ಶ್ರೀ ಗೌರೀಶ ಕಾಯ್ಕಿಣಿಯವರು. ( ಅನೇಕ ಪ್ರಕಾಶನವು ಅಡಿಗ ಸಂಕಥನದಲ್ಲಿ ಈ ಪತ್ರಿಕೆಗಳನ್ನು ಮರುಪ್ರಕಟಿಸಿದೆ. http://adiga.sankathana.com/category/sakshi/)


ಮಹಾನಗರದಲ್ಲಿ ಕೆಲಸದಲ್ಲಿರುವ ಇಬ್ಬರು ಮಕ್ಕಳ ಅಮ್ಮನಾದ ನಾನು ಈ ನಗರ ಜೀವಿತದಿಂದ ಪಡೆದುಕೊಂಡಿದ್ದು ಸಾಕಷ್ಟು ಇದೆ. ಅದರಲ್ಲಿ ಬಹುಪಾಲು ತಲ್ಲಣವೇ ಇದೆ. ಹಳೆಯ ಕಾಲದ ನನ್ನ ಮೆದುಳಿನ ಮಾದರಿಗೆ ಈಗಿನ ಕೆಲವು ನಡಾವಳಿಗಳು ಒಪ್ಪಿಕೊಳ್ಳಲು ಕಷ್ಟವಾಗುತ್ತಿರುತ್ತದೆ. ಎಲ್ಲರೂ ರೆಡೀ ಗೆಟ್ ಸೆಟ್ ಗೋ.. ಅಂತ ಓಡುತ್ತಿರುವಾಗ ನಾನು ಪಕ್ಕದಲ್ಲಿ ನಿಲ್ಲಲು ಬಯಸಿದರೆ ನನ್ನ ತಲೆಯೇ ಸಾಕಷ್ಟು ಕೆಟ್ಟಿರಬಹುದು ಎಂದು ನನಗೇ ಅನಿಸುವಷ್ಟು ಹೊಸಕಾಲದ ಮೆದುಳಿನ ಭಾಗವೂ ಕೆಲಸ ಮಾಡುತ್ತಿರುವುದರಿಂದ ಇದನ್ನ ಅಪ್ಪಿಕೊಳ್ಳದೇ ಬೇರೆ ದಾರಿಯೂ ಇಲ್ಲ. ಇದರ ಮಧ್ಯ ಗೌರೀಶರು ಬರೆದ ಮಾತು "ಸಾಹಿತ್ಯವು ಈ ನೋವಿಗೆ ನಾಲಗೆಯನ್ನು ನೀಡಬಹುದು.."(ಇದು ಬರೆದು ಮೂರ್ನಾಲ್ಕು ದಶಕಗಳೇ ಕಳೆದಿವೆ) ಇವತ್ತಿಗೂ ಅವತ್ತಿಗಿಂತ ಹೆಚ್ಚಾಗಿ ಪ್ರಸ್ತುತವಾಗುವ ದೇಶಕಾಲಾತೀತ ಸ್ಥಿತಿಯಲ್ಲಿ ನಾವಿದ್ದೇವೆ. ನೋವಿಗೆ ನಾಲಗೆಯಷ್ಟೇ ಅಲ್ಲದೆ ಸಾಹಿತ್ಯವು ನೋವಿಗೆ ಹೆಗಲಾಸರೆಯೂ ಆಗಿದೆ ಎಂಬುದನ್ನು ನಾನು ಖಡಾಖಂಡಿತ ಹೇಳಬಯಸುತ್ತೇನೆ. ಅದಿಲ್ಲದೆ ಎಂದೋ ಕಡಲತಡಿಯಲ್ಲಿ ಗೌರೀಶರು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿ ಬರೆದಿಟ್ಟ ವಿಚಾರಗಳು ಈಗ ಜಗತ್ತಿನ ಪುಟ್ಟ ಜಗಲಿಕಟ್ಟೆಯಾಗಿರುವ ಬೆಂಗಳೂರಿನ ಓರ್ವ ಕೆಲಸಗಿತ್ತಿ ಅಮ್ಮನಿಗೆ ಇದು ನನ್ನ ವಿಚಾರವೂ ಆಗಿದೆ ಎನ್ನಿಸಿದ್ದು. 
              ಈಗೊಂದು ವಾರದ ಹಿಂದೆ ಓದಿದ ಗುರುಪ್ರಸಾದ್ ಕಾಗಿನೆಲೆಯವರು ಬರೆದ "ಹಿಜಾಬ್" ನಿಜಕ್ಕೂ ಬರಿಯ ಸೋಮಾಲೀ ನಿರಾಶ್ರಿತರ ಬಗ್ಗೆ ಮಾತ್ರ ಅಲ್ಲ. ಮನುಷ್ಯ ತಾನೇ ತಾನಾಗಿ ನಿರಾಶ್ರಿತರ ದಂಡೆಯ ಪರಕೀಯ ಬಂದರಿನಲ್ಲಿ ಹೇಗೆ ಲಂಗರು ಹಾಕಿಕೊಳ್ಳುತ್ತಾನೆ ಎಂಬುದರ ಬಗ್ಗೆ ಬರೆದಿರುವುದು ಅನಿಸುತ್ತಲೇ ಇರುವುದೆ ಸಾಕ್ಷಿ.
ಒಂದು ವಿಚಾರ ಮತ್ತು ಸಾಹಿತ್ಯ ಕೃತಿ ಅದನ್ನು ಆಡಿ, ಬರೆದು ಪ್ರಕಟಿಸಿದ ಕೂಡಲೆ ಅದು ಓದಿದವರೆಲ್ಲರ ಮಡಿಲಿಗೆ ಬಂದ ಮಗುವಾಗುತ್ತದೆ. ಅದು ನಮ್ಮ ಮನದಂಗಳದಲ್ಲಿ ಹೇಗೆ ಬೆಳೆದು ನಮ್ಮನ್ನು ಆವರಿಸಿಕೊಳ್ಳುತ್ತದೆ ಅಥವಾ ದಾಟಿಸುತ್ತದೆ ಎಂಬುದನ್ನು ಅನುಭವಿಸಿ ಮಾತ್ರ ತಿಳಿಯಬಹುದಾಗಿದೆ.
ಹಿಜಾಬ್ - ಕನ್ನಡಕ್ಕೆ ಹೊಸದೆನ್ನುವ ಕಟ್ಟೊಣ ಮತ್ತು ವಿಷಯವೈವಿಧ್ಯವನ್ನು ಪರಿಚಯಿಸುತ್ತಿದೆ. ಈ ಮೊದಲು ಅನುವಾದಗಳ ಮೂಲಕ ಪ್ರಪಂಚದ ವಿವಿಧ ಕಥೆಗಳು ಆಯಾಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಬಂದಿವೆ. ಇದು ಹಿಜಾಬ್ ನಲ್ಲಿ ಲೇಖಕರ ಅನುಭವಪಾಕಕ್ಕೆ ಸಿಕ್ಕಿ ಹದವಾಗಿ ಕನ್ನಡದ ಕನ್ನಡಕದೊಳಗೆ ಕಂಡ ಹೊರದೇಶ, ಪರಕೀಯತೆ ಮತ್ತು ಅಲ್ಲಿರುವ ಇನ್ನಿತರ ನಿರಾಶ್ರಿತತೆ ಈ ಬಗ್ಗೆ ಮನೋಜ್ಞವಾಗಿ ಮೂಡಿಬಂದಿದೆ.
ಗುರುಪ್ರಸಾದರ ಬರವಣಿಗೆಯಲ್ಲಿ ಹಿಡಿತವಿದೆ. ಒಳ್ಳೆಯ ಕನ್ನಡವಿದೆ. ದಟ್ಟ ದೇಸೀ ಪಾತಳಿಯಲ್ಲಿ ಚಿಗುರಿಚಿಗುರಿ ನಿಂತ ಹೊರದೇಶದ ಪೈನ್ ಮರಗಳ ಸಾಲಿನ ನೆರಳುಹಾದಿಯಿದೆ. ಇಲ್ಲಿನ ಶರದೃತುವಿನ ನೆನಪಿನಂಗಳದಲ್ಲಿ ಅಲ್ಲಿನ ಎಲೆಯುದುರುವ ಕಾಲದ ಬಣ್ಣಬಣ್ಣದ ಎಲೆಗಳಿವೆ. ಇಲ್ಲಿನ ಮಾಗಿಚಳಿಯ ಇಬ್ಬನಿಯೊಡನೆ ಅಲ್ಲಿನ ಹಿಮಾಚ್ಛಾದಿತ ಹೊರಾಂಗಣ ಜಾಕೆಟ್ ತೊಟ್ಟು ಕೂತಿದೆ ಎನ್ನಿಸುವಂತೆ ಈ ಕಥೆಗಳಲ್ಲಿನ ವಿವರಗಳು ಆಪ್ತವಾಗಿ ಕಟ್ಟಲ್ಪಟ್ಟಿದೆ. ಭಾವೋದ್ವೇಗವಿಲ್ಲದ ಅಂತಃಕರಣದ ಸೆಲೆಯ ಜಿನುಗು ಕಥೆಯುದ್ದಕ್ಕೂ.

ಗುರು ಎಂಬ ಉತ್ತಮಪುರುಷ (first person)ದಲ್ಲೆ ಮೊದಲಿಂದ ಕೊನೆಯವರೆಗೆ ತೊಡಗುವ ಈ ಕಥೆ ನಿರೂಪಕನ ಮನವನ್ನು ಮೆಟ್ಟಿಲು ಮೆಟ್ಟಿಲಾಗಿರುವ ರಂಗಸ್ಥಳದಂತೆ ತೆರೆದಿಟ್ಟಿದೆ. ಒಂದೊಂದು ಸಾಲು ಒಳಹೊಕ್ಕ ಹಾಗೆ ಇನ್ನೊಂಚೂರು ಈ ಕಥೆಯಲ್ಲಿ ನಡೆಯುವ ರುದ್ರರಮಣೀಯ ತಲ್ಲಣದ ನಾಟಕದ ವೇದಿಕೆಯ ಸಮೀಪಕ್ಕೆ ಹೋಗುತ್ತೇವೆ.

  • ಅಮೆರಿಕಾ ಎಂಬ ಸ್ವರ್ಗದ ಗ್ರೀನ್ ಕಾರ್ಡಿನ ಮೋಹಕ್ಕೆ ಭಾರತೀಯರು ಪಡುವ ಪಡಬಾರದ ಪಾಟಲುಗಳು,
  • ಸೋಮಾಲೀ ನಿರಾಶ್ರಿತರ ಅಭದ್ರತೆ.
  • ಇಲ್ಲಿಯೇ ಬೆಳೆದ ಮೊದಲ ಜನರೇಶನ್ನಿಗೆ ಓದು ಮತ್ತು ಆಹಾರ ಕೊಟ್ಟ ಆತ್ಮವಿಶ್ವಾಸ ಹಾಗೂ ಎಡಬಿಡಂಗಿತನ
  • ಯಾವುದೇ ಊರಿನಲ್ಲೂ ಧರ್ಮವೆಂಬ ಅಫೀಮಿನ ತಿರುಗಣಿಗೆ ಸಿಕ್ಕಿಬಿದ್ದವರ ತ್ರಿಶಂಕು ಸ್ಥಿತಿ ಇವುಗಳನ್ನ ಈ ಕಥೆ ಮನಮುಟ್ಟುವಂತೆ ತೆರೆದಿಡುತ್ತದೆ.

ಕಾದಂಬರಿಯ ಮುಖ್ಯ ಸ್ರೋತ ನಿರಾಶ್ರಿತತೆಯೇ ಆದರೂ... ಜನಾಂಗನಿಂದನೆಗಳ ಸೂಕ್ಷ್ಮಚಿತ್ರಣ, ಇರುವ ರೂಲುಗಳನ್ನೆ ಉಪಯೋಗಿಸಿಕೊಂಡು ತಮಗೆ ಬೇಕಾದ ಹಾಗೆಯೇ ತಾವಿರುವ ಅಮಾನುಷ ನಾಗರೀಕತೆ ಇಲ್ಲಿ ಚೊಕ್ಕವಾಗಿ ಬರೆಯಲ್ಪಟ್ಟಿದೆ. ಆ ಪುಟ್ಟ ನಗರದ ಮೇಯರ್ ಬರೆಯುವ ಪತ್ರ ಜಗತ್ತಿನ ಅಸಹಿಷ್ಣುತೆಗಳೆಲ್ಲದರ ಮಾದರಿಯ ಹಾಗೆ ತೋರಿತು ನನಗೆ.

ನಾನು ಈ ಮೊದಲು ಉದ್ಧರಿಸಿದ ಗೌರೀಶರ -" ಸೆರೆಮನೆಯಲ್ಲಿ ಬಿದ್ದವನೂ ಏಕಾಕಿ, ಅರಮನೆಯಲ್ಲಿ ಇದ್ದವನೂ ಏಕಾಕಿ" ಎಂಬ ವಾಕ್ಕು ದೇಶಾಂತರವನ್ನು ಮೀರಿ ನಿಜವಾಗುತ್ತ ಹೋಗುವುದನ್ನು ಈ ಕಾದಂಬರಿಯ ಓದು ನನಗೆ ಮನಗಾಣಿಸಿತು. ಈ ಎಲ್ಲ ವಿಚಾರಗಳನ್ನೆಲ್ಲ ಬದಿಗಿಟ್ಟು ಸುಮ್ಮನೆ ಓದಬೇಕೆನಿಸಿದರೂ ಸಹ ಹಿಜಾಬ್  - ಕೈಯಲ್ಲಿ ಹಿಡಿದ ಮೇಲೆ ಕೆಳಕ್ಕಿಡಲಾರೆ ಅನ್ನಿಸುವಷ್ಟು ತೀವ್ರವಾಗಿ ಆವರಿಸಿಕೊಳ್ಳುವ ಗತಿಯಲ್ಲಿ ಸಾಗುತ್ತದೆ. ಇಂಗ್ಲಿಷ್ ಕ್ರೈಮ್ ಥ್ರಿಲ್ಲರುಗಳಲ್ಲಿರುವ ಪೇಸ್ ಅನ್ನು ಗುರುಪ್ರಸಾದ್ ಕನ್ನಡಕ್ಕೆ ಪರಕೀಯವೆನ್ನದ ಹಾಗೆ ಪರಿಚಯಿಸಿದ್ದಾರೆ. ಅದು ನನಗೆ ಖುಷಿಯಾಯಿತು. ಥ್ರಿಲ್ ಇಲ್ಲಿ ಗತಿ ಮಾತ್ರ. ಕಥೆಯಲ್ಲಿ ರೋಚಕತೆಯನ್ನು ಆಭರಣವಾಗಿಸಿಲ್ಲ. ಅದು ಸರಳ ಸಹಜ ತೆರೆದುಕೊಳ್ಳುವಿಕೆ. ಜಲಪಾತವೊಂದು ತನ್ನೆಲ್ಲ ವೇಗದಲ್ಲೂ ಸಹಜ ಪಾತವನ್ನು ನಮ್ಮ ಮನಸ್ಸಿಗೆ ತಂದು ಮೆತ್ತಗಾಗಿಸುವ ಹಾಗೆ ಈ ಕಥೆಯ ಮಾರ್ದವತೆಯೇ ಅದರ ವಿಶಿಷ್ಟತೆ ಕೂಡ.

ಇಷ್ಟೆಲ್ಲ ಹೇಳಿದ ಮೇಲೆ ಇನ್ನೊಂದು ಅಜೀಬ್ ವಿಷಯ ಇದೆ. ಕಥೆಗಾರ ಮೊದಲಿಗೆ words, as is well known are the great foes of reality. ಎಂಬ ಜೋಸೆಫ್ ಕಾನ್ರಡ್ ಮಾತನ್ನು ಬರೆದಿದ್ದಾರೆ. ಅವರು ಈ ಮಾತನ್ನು ಪುಸ್ತಕದಲ್ಲಿ ಪದೇ ಪದೇ ಬರುವ ಮಾಧ್ಯಮಗಳ ಅತ್ಯುಪಯೋಗ ಮತ್ತು ನಮಗೆ ಬೇಕಾದ ಮಾತನ್ನು ನಾವೇ ಹೇಳಿಸುವ ಸಂಧಿಗ್ಧ ಪರಿಸ್ಥಿತಿಗಳ ಬಗ್ಗೆ ಉದ್ಧರಿಸಿರಬಹುದು.
ಆದರೆ ಅದೇ ಪದಗಳೇ ವಾಸ್ತವದ ಗಾಯಕ್ಕೆ ನೋವಿನ ಮುಲಾಮು ಸವರಿದ ಹಾಗೆ ಲೇಖಕನಿಗೆ ಈ ಕೃತಿಯ ಮೂಲಕ ಒಲಿದಿವೆ. ನೋವಿನ ನಾಲಗೆ ಅಭಿವ್ಯಕ್ತಿಯ ಸ್ವಾತ್ರಂತ್ರವೂ ಹೌದು ಹರಣವೂ ಹೌದು ಎಂಬುದನ್ನು ಮರುನಿರೂಪಿಸಿದ ಅತ್ಯಂತ ಅಚ್ಚುಕಟ್ಟು ಕಾದಂಬರಿ ಇದು.

ಹಿಜಾಬ್  ಓದಿ. ನಿಮಗೆ ಏನನಿಸುತ್ತೆ ಹಂಚಿಕೊಳ್ಳಿ.

1 comment:

sunaath said...

ಸಿಂಧು, ಹಿಜಾಬದ ಅಂತರಂಗವನ್ನು ಹಾಗು ಗುರುಪ್ರಸಾದರ ಲೇಖಕಿಯ ಬಗೆಗೆ ಉತ್ತಮ ಪರಿಚಯ ನೀಡಿದ್ದೀರಿ. ಪ್ರಪಂಚದ ಎಲ್ಲ ಅನುಭವಗಳೂ ನಮಗೆ ವೈಯಕ್ತಿಕವಾಗಿ ದಕ್ಕುವದಿಲ್ಲ. ಇಂತಹ ಕೃತಿಗಳನ್ನು ಓದುವದರಿಂದ ಈ ಅನುಭವಗಳು ನಮ್ಮವಾಗುತ್ತವೆ.
ನಿಮಗೆ ಧನ್ಯವಾದಗಳು.