Monday, June 25, 2007

ರುಚಿ..

ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.

ಸೊಪ್ಪು ಮಾರುವ ಹೆಂಗಸು, ಉಳಿದ ಕೊತ್ತಂಬರಿ ಕಟ್ಟನ್ನು ಬಾಳೆಯೆಲೆಯಲ್ಲಿ ಜೋಪಾನವಾಗಿ ಸುತ್ತಿಟ್ಟು, ಉಳಿದ ಸೊಪ್ಪನ್ನ ಹಾಗೆ ಒದ್ದೆಯ ಗೊಣಿಬಟ್ಟೆಯಲ್ಲಿ ಮುಚ್ಚಿ ಮಂಕರಿಗೆ ತುಂಬಿ, ನೋಟು ಚಿಲ್ಲರೆಗಳನ್ನು ಎಣಿಸಿ, ತನ್ನ ಪುಟ್ಟ ಪರ್ಸಿಗೆ ತುಂಬಿ, ಮತ್ತೊಂದ್ಸಲ ಆ ಜಾಗವನ್ನೆಲ್ಲ ನೋಡಿ, ಮನೆಗೆ ಹೊರಟಿದ್ದಾಳೆ.

ತಳ್ಳು ಗಾಡಿಯ ತರಕಾರಿ ಸಾಬರಿಗೆ ತುಂಬ ಖುಶಿ, ಇವತ್ತು ತಂದ ಟೊಮೆಟೊ ಎಲ್ಲ ಖಾಲಿ. ಉಳಿದ ಕೆಲವು ಕೊಳೆತ ಟೊಮೆಟೊಗಳನ್ನು ಅಲ್ಲಿ ಚರಂಡಿಯ ಬದಿಗಿದ್ದ ಅಗಲ ಕಲ್ಲಿನ ಮೇಲೆ ಸುರಿದು, ಖಾಲಿಯಾಗಿ ಹಗುರಾದ ಗಾಡಿಯನ್ನು, ತುಂಬಿಕೊಂಡು ಭಾರವಾದ ಜೋಬಿನ ಹಿತದಲ್ಲಿ ತಳ್ಳುತ್ತಿದ್ದಾರೆ.. ಬೀಬಿ ಏನಡಿಗೆ ಮಾಡಿರಬಹುದು ಅನ್ನುವ ಯೋಚನೆ ಈಗ ಗಾಡಿ ಖಾಲಿಯಾದ ಮೇಲೆ ಬಂತು. ಈವತ್ತು ಶುಕ್ರವಾರ, ಸುರಮಾ ಹಚ್ಚಿದ ಅವಳ ಕಣ್ಣುಗಳು ಪರದೆಯೊಳಗಿಂದ ಎಂದಿಗಿಂತ ಹೆಚ್ಚು ಪ್ರೀತಿಯಿಂದ ಮಿನುಗುವುದನ್ನು ನೆನಪಿಸಿಕೊಂಡು ಮನಸ್ಸು ನವಿರೆದ್ದಿತು. ಅಲ್ಲೆ ಬರುತ್ತಿದ್ದ ನನಗೆ ಅದು ಅವರ ಮಿರುಗುವ ಕಪ್ಪು ಗಡ್ಡದಲ್ಲಿ, ತುಟಿಯ ಹತ್ತಿರ ಕೊಂಚವೆ ಅರಳಿದ್ದ ಹೂನಗುವಿನಲ್ಲಿ ಇಣುಕಿ ಕಾಣುತ್ತಿತ್ತು.

ಅಲ್ಲಿ ತಿರುವಿನಲ್ಲಿ ಮಲ್ಲಿಗೆ ಹೂ, ಬಾಳೆಹಣ್ಣು ಮಾರುವ ಅಜ್ಜಿ, ದಿನದ ವ್ಯಾಪಾರ ಮುಗಿದ ಸಮಾಧಾನದಲ್ಲಿ, ರಸ್ತೆಯಾಚೆಗಿನ ಗಾಡಿಯಿಂದ ಮಸಾಲಪುರಿ ತಗೊಂಡು ಸವಿಯುತ್ತ ಕೂತಿದ್ದಳು. ಸವಿದದ್ದು ಅವಳ ನಾಲಗೆ, ರುಚಿ ಕಂಡದ್ದು ನನ್ನ ಕಣ್ಣು..

ಪುಟ್ಟ ಮೆಲಮೈನ್ ತಟ್ಟೆಯಿಂದ ಹಬೆಯಾಡುತ್ತಿರುವ ಮಸಾಲೆಯಲ್ಲಿ ಅವಳ ದಿನದ ದಣಿವು ಆವಿಯಾಗುತ್ತಿತ್ತು. ಗಾಢವಾಗಿ ಬರುವ ಮಸಾಲೆ ಪರಿಮಳದಲ್ಲಿ, ಮಲ್ಲಿಗೆ ಮೊಗ್ಗು ಪೋಣಿಸಿದ ಬೆರಳ ಘಮ ಉಯ್ಯಾಲೆಯಾಡುತ್ತಿತ್ತು. ಅಲ್ಲಿ ಗಾಡಿಯ ಬದಿಯಲ್ಲಿ ಬಾಲ ಮಡಚಿ, ಅವಳನ್ನೆ ನೋಡುತ್ತ ಕೂತಿದ್ದ ಬೀದಿನಾಯಿಯ ಬಾಯಿಗೆ ಸಿಗುವಂತೆ ಒಂದು ಪುರಿ ತುಂದನ್ನು ಎಸೆಯುತ್ತ, ಲೋಕದ ಹಣ್ಣೆಲ್ಲವನ್ನು ಸವಿದವರ ಭಾವದಲ್ಲಿ ಅಜ್ಜಿ ಅ ತಿಂಡಿಯನ್ನು ಸವಿಯುತ್ತಿದ್ದಳು.

ಆ ಮಸಾಲ ಪುರಿ ಎಷ್ಟು ರುಚಿಯಾಗಿತ್ತಂದರೆ, ಅವನ ಜೊತೆ ಇನ್ನೇನು ಮಳೆ ಬೀಳಲಿದೆ ಅನ್ನುವ ಸಂಜೆಯಲ್ಲಿ ಗಾಂಧಿಬಜಾರಿನ ಫ್ಲೈ ಓವರಿನ ಪಕ್ಕದ ಕಟ್ಟೆಯಲ್ಲಿ ಕೂತು ತಿನ್ನುವ ಸ್ಪೆಶಲ್ ಮಸಾಲಪುರಿಗಿಂತ ರುಚಿಯಾಗಿ, ಮಳೆ ಹನಿಯುವಾಗ ಬ್ಯೂಗಲ್ ರಾಕಿನ ಮಂಟಪದ ನೆರಳಲ್ಲಿ ಜೊತೆಯಾಗಿ ಕೂತು ತಿನ್ನುವ ಚುರುಮುರಿಗಿಂತ ಹಿತವಾಗಿ, ಬೇಸಗೆಯ ಸಂಜೆಯಲ್ಲಿ ಮೆಚ್ಚಿನ ಹೋಟೆಲಿನಲ್ಲಿ ತಿನ್ನುವ ಮಸಾಲೆ ದೋಸೆಗಿಂತಲು ಸ್ವಾದಿಷ್ಟವಾಗಿ ಇತ್ತು.. ಅವಳ ತೃಪ್ತಿ ತುಂಬಿದ ಮುಖ, ಸಂತುಷ್ಟಗೊಂಡ ಕಣ್ಣು, ಕೊರಳ ಶಂಖದಿಂದ ಬಂದ ಪುಟ್ಟ ತೇಗಿನಲ್ಲಿ ದಾಟಿ ಹೊರಹೋದ ದಿನದ ಸುಸ್ತು, ಎಲ್ಲವೂ ಆ ರುಚಿಯನ್ನ ನನಗೆ ದಾಟಿಸಿ ಹೇಳಿದವು.
ಅವಳು ಮಸಾಲೆ ಪುರಿ ಗಾಡಿಯವನಿಗೆ ದುಡ್ಡು ಕೊಡಲು ಹೋದಾಗ ಎರಡು ಪುಟ್ಟ ಪೂರಿಯನ್ನು ಇಸಿದು, ತನ್ನ ಪುಟ್ಟ ಪರ್ಸಿನೊಳಗಿಟ್ಟುಕೊಂಡಳು. ಮತ್ತೆ ಗಡಿಬಿಡಿಯಲ್ಲಿ ಬಂದು ಎಲ್ಲ ಸೇರಿಸಿಕೊಂಡು, ಗಾಡಿ ದೂಡುತ್ತ ಮನೆ ಕಡೆ ಹೊರಟಳು.

ಸೊಸೆ ಬಯ್ಯುತ್ತಾಳೆ ಅಂತ ಗೊತ್ತಿದ್ರೂ ಬಾಗಿಲಲ್ಲಿ ಪುಟ್ಟ ಜಮಖಾನೆಯಲ್ಲಿ ಕೂತು ಆಡುತ್ತ ಕಾದಿರುವ ಮೊಮ್ಮಗನಿಗೆ ಈ ಪೂರಿ ಮುರಿದು ತಿನ್ನಿಸದೆ ಹೋದರೆ ಅವಳು ಹೇಗೆ ಅಜ್ಜಿಯಾಗುತ್ತಾಳೆ, ನೀವೆ ಹೇಳಿ. ಅದು ಹೇಗೆ ಅಜ್ಜಿ ಇಷ್ಟು ಪ್ರೀತಿಯಿಂದ ನೆನಪಿಟ್ಟು ತಗೊಂಡು ಹೋಗುವ ಪುಟ್ಟ ಪೂರಿಯಲ್ಲಿ ರೋಗಾಣುವಿರುತ್ತದೆ? ಅಮ್ಮ ಎಷ್ಟೆ ಬೈದರೂ ಅಜ್ಜ ನನಗೆ ತಂದುಕೊಟ್ಟ ಗಟರ್ ಪಕ್ಕದ ಅಯ್ಯಂಗಾರ್ ಬೇಕ್ರಿ ರೊಟ್ಟಿಯಿಂದ ನನಗೆ ಹೇಗೆ ಯಾವತ್ತೂ ಅನಾರೋಗ್ಯವಾಗಲಿಲ್ಲವೋ ಹಾಗೆ. ಅಜ್ಜಿ ಎತ್ತಿಟ್ಟುಕೊಂಡ ಪುಟ್ಟ ಪೂರಿಗಳು ಅಪ್ತವಾಗಿ, ಮನದಲ್ಲಿ ರುಚಿಯಾದ ಪರಿಮಳ ನೆನಪುಗಳು ಹಬೆಯಾಡಿದವು..

ಇಲ್ಲಿ ರಸ್ತೆಯ ಪಕ್ಕ, ನಾರುವ ಊರಿನ ಗಬ್ಬು ನಾಳಗಳ ಮಧ್ಯೆ, ಚಂದ್ರನಿರದ ರಾತ್ರಿಯಲ್ಲಿ, ಪುಟ್ಟದಾಗಿ ಮಿನುಗಿದ ಅಜ್ಜಿ, ನಿನಗೆ ಪ್ರೀತಿಯ ನಮನ.

9 comments:

ಶ್ರೀನಿಧಿ.ಡಿ.ಎಸ್ said...

uhun! :(
chitra chennagide!:), baraha ... uhun:(

Sushrutha Dodderi said...

ಪ್ಚ್.. ಇಲ್ಲಪ್ಪಾ.. not from Sindhu's pen..
ಚ್ವಪ್ಪಾನು ಇಷ್ಟ ಆಗಲ್ಲೆ ಅಕ್ಕಾ..

Shree said...

ನಂಗಿಷ್ಟವಾಯ್ತು ಸಿಂಧು... ಅಜ್ಜಿಯ ಚೇತನವನ್ನು ಎತ್ತಿ ಹಿಡಿಯುವ ಕೊನೆಯ ವಾಕ್ಯವಂತೂ.. ಸುಪರ್ಬ್....!!!

ನಂದಕಿಶೋರ said...

ಸಿಂಧು.
ನೀವು ಹಲ್ದೀರಾಮ್ ಅವರ ಕಿತ್ತಳೆ ಬರ್ಫಿ/ಹಲ್ವ ತಿಂದಿದ್ದೀರಾ? ನಾನು ತಿಂದಿದ್ದೇನೆ. ಅದು ನಾಗಪುರದಲ್ಲಿ ಮಾತ್ರ ಸಿಗೋದಂತೆ. ಅದು ತಿಂದಾಗ ಎಂಥಾ ಅನುಭವ ಆಗತ್ತೆ ಗೊತ್ತಾ- ಅಯ್ಯೋ ಇಷ್ಟು ಸವಿಯಾಗಿರೋದನ್ನು ಒಂದೇ ಸಲ ತಿನ್ಬೇಕಲ್ವಾ, ನಾಳೆಗಾದ್ರೂ ಇದ್ದಿದ್ರೆ- ಅಂತ ಅನಿಸ್ತದೆ. ಅದೊಂಥರ ಪೂರ್ತಿಯಾಗಿ ಆವರಿಸಿಕೊಳ್ಳುವ, ಎದೆಯಲ್ಲೇನೋ ಜಿನುಗುವಂಥ ರುಚಿ. ಈ ನಿಮ್ಮ ಬರಹವನ್ನೋದಿದಾಗ ಆ ನೆನಪು ಒತ್ತೊತ್ತಿಕೊಂಡು ಬಂತು. ಅಮ್ಮಾ, ಅದೇನು ನೋಟಗಳು, ಏನು ನೇವರಿಕೆಗಳು...ಆ ಹಿತವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಜಗತ್ತೆಲ್ಲವೂ ರುಚಿಯಿಂದ ತುಂಬಿದಂಥ ಭಾವ.
ಇಷ್ಟು ರುಚಿಯಾದ ಬರಹಕ್ಕಾಗಿ ಚಿರಋಣಿ ಅಂತ ರುಚಿಹೀನವಾಗಿ ಹೇಳಲಿಕ್ಕೆ ನಿಜಕ್ಕೂ ಮನಸು ಬಾರದು. ಏನು ಮಾಡಲಿ!

ಭಾವಜೀವಿ... said...

ಹೇಳಲು ಬಹಳವೇನಿಲ್ಲದಿದ್ದರೂ ತರಕಾರಿ ಸಾಬರ ಮುಖದಲ್ಲಿ ಅರಳಿದ್ದ ಹೂನಗೆ, ಅಜ್ಜಿಯ ಮಲ್ಲಿಗೆ ಮೊಗ್ಗನ್ನು ಪೋಣಿಸಿದ ಕೈಬೆರಳುಗಳಲ್ಲಿ ಉಯ್ಯಾಲೆಯಾಡುವ ಪರಿಮಳ ಮುಂತಾದ ಚಿಕ್ಕ ಚಿಕ್ಕ ಭಾವ ಬಣ್ಣದ ಚಿತ್ರಗಳು ಮನಸ್ಸಿಗೆ ಮೃದು ಘಮವನ್ನು ತಾಗಿಸಿ ಕಚಗುಳಿ ಇಟ್ಟವು... ಒಟ್ಟಿನಲ್ಲಿ ಇಷ್ಟ ಆಯ್ತು..!!

Anonymous said...

ಅಕ್ಕಾ,

ನೋಟಗಳಾಚಿನ ಚಿತ್ರವನ್ನ ಅರ್ದ ತೋರಿಸಿದ ಹಂಗೆ ಇದ್ದು.

ಏನೋ ಹೇಳಕೆ ಹೋಗಿ ಅದನ್ನ ಹೇಳದು ಬ್ಯಾಡ ಅಂತ ನಿರ್ಧರಿಸಿ ಅರ್ದ್ರಕ್ಕೆ ತುಂಡರಿಸಿ ಅಲ್ಲಿಗೆ ಮುಗಿಸಿದ್ದೆ.

ರಾಜೇಶ್ ನಾಯ್ಕ said...

ಮೊಸರು ತರಲು ಹೋದಾಗ ಗಮನಿಸಿದ್ದು ಇಂತಹ ಸುಂದರ ಲೇಖನದ ಜನ್ಮಕ್ಕೆ ಕಾರಣವಾಗಿದೆಯಲ್ಲ! ಅಜ್ಜಿಯ ಪ್ರೀತಿಗೆ ಸಾಟಿಯಿಲ್ಲ..ಎಂಬರ್ಥ ಕೊಡುವ ಕೊನೆಯ ಚರಣ ಹಿಡಿಸಿತು.

ಸಿಂಧು sindhu said...

ಶ್ರೀನಿಧಿ,

:) ಹಾಗಾಗುತ್ತೆ, ಮತ್ತು ಹಾಗಾಗಲೇ ಬೇಕು.. :)

ಸು,
ನನ್ನ ಕೈಯಿಂದಲೇ ಬರೆದಿದ್ದು..
ಎಲ್ಲ ಬರಹಗಳು ಎಲ್ಲರಿಗೂ ಇಷ್ಟ ಆಗುವುದಿಲ್ಲ.. :(

ಶ್ರೀ,
ಮೆಚ್ಚುಗೆಗೆ ಥ್ಯಾಂಕ್ಸ್,
ಅವಳ ಚೇತನವೇ ನನ್ನ ಬರಹವನ್ನು ಎತ್ತಿ ಹಿಡಿದಿರುವುದು.

ಯಾತ್ರಿಕ,
ತಿಂದಿಲ್ಲ ನಾನು ಆ ಬರ್ಫಿ. :(
ರುಚಿಯಾದ ಬರಹವನ್ನು ಚಪ್ಪರಿಸಿಕೊಂಡು ತಿನ್ನಬೇಕಷ್ಟೇ.. ಏನು ಮಾಡಲಿ ಅಂತ ಯೋಚಿಸುತ್ತಾ ಕೂರಬಾರದು.. ಅಲ್ಲದೇ ರುಚಿಯಾಗಿದೆ ಅಂತ ಮಾಡಿದವರಿಗೆ ಹೇಳಿದಿರಲ್ಲಾ ಅದು ದೊಡ್ಡ ಮಾತು. ಅಡಿಗೆಯವಳು ಖುಷಿಯಾಗಿ ಇನ್ನೊಂದು ಬರಹದ ಪಾಕ ಕಟ್ಟುತ್ತಿದ್ದಾಳೆ.. :)

ಭಾವಜೀವಿ,
:)


ರಂಜು,
ನಂಗೆ ಕಂಡಷ್ಟನ್ನ ನಾನು ಹೇಳಿದೆ. ನಿನ್ನ ನೋಟ ದಾರಿ ಮುಂದಿದೆ.. ಮತ್ತು ಇದು ನನಗೆ ಹೊಸ ತಿಳಿವು.

ರಾಜೇಶ್,
ನಿಮ್ಮ ಚಾರಣದ ನೋಟಕ್ಕಿಂತಲೇ ಇದು?
ಹೌದು ಈ ಬರಹದ ಹೂರಣ ಮತ್ತು ಚೇತನ ಆ ಅಜ್ಜಿ, ಅವಳ ಇದ್ದುದರಲ್ಲೆ ಚಂದ ಕಟ್ಟುವ ಬದುಕು, ಮತ್ತು ತಾನು ತೃಪ್ತಿಯಿಂದ ತೇಗುವಾಗ, ನೆನಪಿಟ್ಟುಕೊಂಡ ಮೊಮ್ಮಗುವಿನ ನೆನಪು-ಪ್ರೀತಿ.

Supreeth.K.S said...

ಬೀದಿ ಬದಿಯ ಮಸಾಲೆ ಪುರಿಯ ರುಚಿಯಿದ್ದದ್ದು ಅಜ್ಜಿಯ ದಿನದ ದುಡಿಮೆಯ ಹಬೆಯಲ್ಲಾ ಅಥವಾ ಮಸಾಲೆಪೂರಿ ಅಂಗಡಿಯವನ ದುಡಿಮೆಯ ಹಬೆಯಲ್ಲಾ? ಅಥವಾ ರುಚಿಯಿದ್ದದ್ದು ಮೊಮ್ಮಗುವಿಗಾಗಿ ಪೂರಿಯನ್ನು ತೆಗೆದಿರಿಸಿಕೊಂಡ ಅಜ್ಜಿಯ ಕೈಯಲ್ಲಾ....