Monday, July 27, 2015

ಕಲಾಮಜ್ಜನಿಗೆ ನಮನ.

ನಮ್ಮ ಮಹಾನಗರದ ಶಾಲೆಗಳು
ತುಂಬ ಸೊಫೆಸ್ಟಿಕೇಟೆಡ್ದು.
ಅಗಲಿದ ಹಿರಿಚೇತನಕ್ಕೆ ನಮಿಸಿ
ಸರ್ಕಾರ ರಜೆ ಘೋಷಿಸಿದ್ದು
ಇವತ್ತು ರಾತ್ರಿಯೇ ಇನ್ಬಾಕ್ಸಿಗೆ ಬರುತ್ತೆ;
ಇವತ್ತು ಲೇಟಾಗಿ ಮಲಗಿದ ಪುಟ್ಟನಿಗೆ ನಾಳೆ ಬೇಗೆದ್ದರೂ ಶಾಲೆಯಿಲ್ಲ.

ನನ್ನೂರಿನ ಕೆರೆದಡದ ಶಾಲೆಗಳ ನಿಲುವೇನೋ ಗೊತ್ತಿಲ್ಲ;

ಹಳ್ಳಿಯೂರಿನ ಕನ್ನಡ ಶಾಲೆ ಹೇಗೋ ಗೊತ್ತಿಲ್ಲ.;
ಅಲ್ಲಾದರೂ ಇರಬಹುದು -
ನಿವೃತ್ತಿಯ ಹತ್ತಿರತ್ತಿರದ ಮೇಷ್ಟರು ಕೆಲವರು
ಅರ್ಧಕ್ಕೆ ಧ್ವಜ ಹಾರಿಸಿ
ಮೌನವಂದನೆ ಮಾಡಿಸಿ
ಬಂದವರಲ್ಲೇ ಒಬ್ಬಳ ಹತ್ತಿರ
ಆ ಚೇತನದ ಬಗ್ಗೆ ನಾಕಾರು ಮಾತಾಡಿಸಿ
ಮಕ್ಕಳಿಗೆ ಕಾಣಿಸದ ಹಾಗೆ ಕಣ್ಣೊರೆಸಿಕೊಳ್ಳುವವರು...ಅಲ್ಲಾದರೂ ಇರಬಹುದು..

ಅಲ್ಲಿವರೆಗೆ ಪಿಸುಗುಟ್ಟುತ್ತ
ಸರತಿ ಕೆಡಿಸಿ ಓಡಲು ಸಿದ್ಧ
ಪುಟ್ ಪುಟಾಣಿ ಕಣ್ಗಳು
ಇದನ್ನೆಲ್ಲ ಗಮನಿಸಿ
ಗಪ್ ಚಿಪ್ಪಾಗಿ ಸರತಿಯಲ್ಲಿ ನೆಟ್ಟಗೆ ನಿಲ್ಲಬಹುದು;
ಒಂದೆರಡು ಸಪೂರ ಜೀವಗಳ
ಕಣ್ಣು ಮಂಜಾಗಬಹುದು;
ಮುಂದೆಂದೋ ವಿಂಗ್ಸ್ ಆಫ್ ದಿ ಫೈರ್ ಆಗಿ ನಿಲ್ಲಬಹುದು.
ನಿಲ್ಲಲಿ.

ಮಹಾನಗರದ ಪುಟ್ಟನಿಗೆ ಇವೆಲ್ಲ ಸಿಗುವುದಿಲ್ಲ. ಬರಿಯ ರಜೆ.

ಎಲ್ಲದಕ್ಕೂ - ಗರಿಮೆಗೂ ಮತ್ತು ಅಂತಃಕರಣಕ್ಕೂ.

ಕಲಾಮಜ್ಜನಿಗೆ ನಮನ.

1 comment:

sunaath said...

ನಮ್ಮ ಹಳ್ಳಿಯ ಶಾಲೆಗಳ ಸಂಸ್ಕೃತಿ ಹಾಗು ನವನಾಗರಿಕ ಪಟ್ಟಣಗಳ ನಾಗರಿಕತೆಯ ವ್ಯತ್ಯಾಸವನ್ನು ಸರಿಯಾಗಿ ಕವನಿಸಿದ್ದೀರಿ. ಏನೇ ಆದರೂ, ಕಲಾಮರ ನಿಧನವು ಅನೇಕ ವಿದ್ಯಾರ್ಥಿಗಳಲ್ಲಿ ಕಣ್ಣೀರನ್ನು ತರಿಸಿದೆ. ನನ್ನ ಮೊಮ್ಮಗಳು ರಾತ್ರಿ ಹತ್ತೂವರೆಗೆ ನನಗೆ ಫೋನು ಮಾಡಿ, ಗದ್ಗದಿತ ಧ್ವನಿಯಲ್ಲಿ ಈ ದುಃಖದ ಸಮಾಚಾರವನ್ನು ತಿಳಿಸಿದಳು.