Wednesday, October 12, 2011

'ಹೊಸ'ಬಗೆ!

ಸುಳಿದು ನಿನ್ನ ನೆನಪು
ಕತ್ತಲ ಮನದಂಗಳದ ತುಂಬ ದೀಪದ ಬೆಳಕು
ಸುತ್ತ ಚಳಿಯ ಸಂಜೆ
ಕಾಲು ಚಾಚಿ ಒಲೆಯ ಮುಂದೆ
ನಿನ್ನ ನೆನಪಿನ ಕಾವು
ಅಕಾಲದ ಸಂಜೆ ಮಳೆಗೆ ನೆಂದ ರಸ್ತೆ
ಎದೆಯಲ್ಲಿ
ಮೇಲೇಳುವ
ಬೆಚ್ಚನೆ ಸ್ಪರ್ಶದ ಸ್ಮ್ರತಿಯ ಹಬೆ
ಒಂದು ಮಾತಿನ ಮೊದಲ ಪದ ಮಾತ್ರ ನಿನ್ನದು
ದನಿಯಾಗದೆ ಉಳಿದ ವಾಕ್ಯ
ನನಗೆ ಕೇಳಿದ್ದು ಹೇಗೆ,
ನಾನು ಹೇಳಲು ಬಾಯಿ ತೆರೆದದ್ದನ್ನ
ನೀನು ಆಡಿದ ಹಾಗೆ,
ಆಡದೆಯೆ ಉಳಿದೂ ಎಲ್ಲ ಅಂತರ್ಗತವಾದ ನಗೆ,
ಆ ನಗೆಬಿಂಬದ ಬೆಳದಿಂಗಳ ಬೆನ್ನಿಗೆ
ಕಡುಗಪ್ಪು ಆಕಾಶದ ಬಗೆ,
ಬಗೆಯಲು ಹೆದರಿಕೆ ನನಗೆ
ಉಳಿಯದೆ ಆಡಿದ ಮಾತು
ಆಡಬಾರದ್ದೇ ಅಂತಲೂ ಗೊತ್ತು ನಿನಗೆ.
ಇದು 'ಹೊಸ'ಬಗೆ!

5 comments:

ಸೀತಾರಾಮ. ಕೆ. / SITARAM.K said...

ಉತ್ತಮ ನವ್ಯ ಪ್ರಯೋಗ ...ಮತ್ತು ಪ್ರಯತ್ನ

sunaath said...

ಸಿಂಧು,
ಓದುಗರ ಎದೆಯಲ್ಲೂ ಸಹ ಹಣತೆಗಳನ್ನು ಹಚ್ಚಿಡುವ ಕವನ ಇದು. ಆದುದರಿಂದ ನಾನು ಧನ್ಯವಾದಗಳನ್ನು ಹೇಳಲೇ ಬೇಕು.
ಮತ್ತೊಂದು ಮಾತು: ಭಾಸ ಕವಿಯ ‘ಮಧ್ಯಮ ವ್ಯಾಯೋಗ’ ನಾಟಕವನ್ನು ನೀವು ಓದಿರಬಹುದು. ಆ ನಾಟಕದ ಕೊನೆಯಲ್ಲಿ ಹಿಡಿಂಬೆಯು ಭೀಮಸೇನನ ಕಿವಿಯಲ್ಲಿ ‘ಏನೋ’ ಪಿಸುಗುಟ್ಟುತ್ತಾಳೆ. ಅದು ಕೊನೆಯವರಗೂ ನಾಟಕದಲ್ಲಿ ಗುಟ್ಟೇ. ಪ್ರೇಕ್ಷಕರು ಅದನ್ನು ಊಹಿಸಿಕೊಳ್ಳಬೇಕಷ್ಟೆ!
ನಿಮ್ಮ ಕವನದ ಈ ಸಾಲುಗಳನ್ನು ನೋಡಿದಾಗ ನನಗೆ ಆ ನಾಟಕ ನೆನಪಾಯಿತು:
“ನಾನು ಹೇಳಲು ಬಾಯಿ ತೆರೆದದ್ದನ್ನ
ನೀನು ಆಡಿದ ಹಾಗೆ,
ಆಡದೆಯೆ ಉಳಿದೂ ಎಲ್ಲ ಅಂತರ್ಗತವಾದ ನಗೆ,”

ಕನಸು ಕಂಗಳ ಹುಡುಗ said...

ಹೌದು ಸಿಂಧು.....
ಇದು ಹೊಸ ಬಗೆಯೇ.......

ಖುಷಿ ಕೊಡುವಂತಹ ಸಾಲುಗಳು..... ಜೈ...........

ಚುಕ್ಕಿಚಿತ್ತಾರ said...

ಸಿ೦ಧು...
ಚ೦ದದ ಕವಿತೆ..!
ತಡಗಳಲೆ ಅಶ್ವಿನಿ ನಾನೂ ಕ್ಲಾಸ್ ಮೇಟ್ ಹೌದು. ನೀನು ಅವ್ಳ ಚಿಕ್ಕಪ್ಪನ ಮಗ್ಳಾ..? ನಾನು ಫೇಸ್ ಬುಕ್ ನಲ್ಲಿದ್ದಿ.
vijayashree nataraj

thanks..

ಸಿಂಧು sindhu said...

@ಸೀತಾರಾಮ್
ಧನ್ಯವಾದಗಳು. ನಿಮ್ಮ ಸಲಹೆಗಳಿಗೆ ಸ್ವಾಗತ.

@ಪ್ರಿಯ ಸುನಾಥ್,
ನೀವು ಕಾಮೆಂಟಿಸದೆ ತುಂಬ ದಿನವಾಗಿದ್ದು ನೋಡಿ ಊರಲ್ಲಿದ್ದೀರೋ ಇಲ್ಲವೋ ಅಂತ ಯೋಚಿಸುತ್ತಿದ್ದೆ. ನನ್ನ ಹೋಮ್ ವರ್ಕ್ ನೋಡುವ ಮೇಷ್ಟರೆ ಇಲ್ಲವಲ್ಲಾ ಅಂದ್ಕೋತಾ ಇದ್ದೆ.

ಕವಿತೆಯ ಬಗ್ಗೆ
ನಿಮ್ಮ ಅಭಿಮಾನದ ಮಾತುಗಳು ನನಗೆ ಹೊಸ ಭರವಸೆ ಹುಟ್ಟಿಸುತ್ತವೆ. ಈ ನಾಟಕ ನಾನು ಓದಿಲ್ಲ. ಓದುತ್ತೇನೆ.
ಹೇಳಿದ್ದಕ್ಕೆ ನಮಸ್ತೇ.

@ ಕನಸು ಕಂಗಳ ಹುಡುಗ
ನಿಮ್ಗೆ ಖುಶಿಯಾಗಿದ್ದಕ್ಕೆ ನಂಗೂ ಖುಸಿ.

@ನಂಗೆ ತುಂಬ ಖುಶಿಯಾತು. ಅದೇ ವಿಜಯಶ್ರೀ ಅಂತ. ನಾನು ಅಶ್ವಿನಕ್ಕನ ಚಿಕ್ಕಪ್ಪನ ಮಗಳೇ. ನಿಂಗ ಹತ್ತನೇ ಕ್ಲಾಸಲ್ಲಿ ಇದ್ದಿದ್ದಿ ನಾನು ಹೈಸ್ಕೂಲಿಗೆ ಬಪ್ಪಕ್ಕಾರೆ.
ಫೇಸುಬುಕ್ಕಲ್ಲಿ ಸೇರಿಸಿದ್ದಿ.
ಹಿಂಗೆ ಸಿಗ್ತಾ ಇರನ.

ಪ್ರೀತಿಯಿಂದ,
ಸಿಂಧು