Monday, February 11, 2019

ವ್ಯಾಕರಣ

ನೀನು ನನ್ನ ಬದುಕಿನ ಮಹಾಪ್ರಾಣ
ಅನ್ನುವುದೆಲ್ಲ ನಿಜ.
ಆದರೆ ಬದುಕಿನ ಕಾಗುಣಿತದಲ್ಲಿ
ತಲೆಗಟ್ಟು, ಇಳಿ, ಕೊಂಬು,
ದೀರ್ಘ, ಅನುಸ್ವಾರ, ವಿಸರ್ಗ,
ಅರ್ಕಾವತ್ತು, ಮತ್ತು ಒತ್ತಕ್ಷರಗಳ
ಹಿಂಡೇ ಇದೆ.
ನಾನು ಬದುಕೆಂಬ ಭಾಷೆಯನ್ನು ಹಿಂಡುತ್ತ ಇರುವಾಗ
*ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು*
ಎಂದು ಕೆ.ಎಸ್.ನ. ಕವಿತೆ ಓದಿದೆ.
ಈಗ ಭಾಷೆಯನ್ನು ಮರೆತಿರುವೆ
ಹಿಂಡುವ ಬದುಕಿನ ತಿರುಗಣಿಗೆ
ನನ್ನನು ನಾನೇ ಒಪ್ಪಿಸಿಕೊಂಡಿರುವೆ
ಒಮ್ಮೊಮ್ಮೆ ಗಾಳಿ ಬೀಸುವುದು
ಕಥೆ ಕವಿತೆ ಇಂಪುಲಿ ಮತ್ತು ಮಕ್ಕಳನಗೆಯಂತೆ.
ಮರೆತಿದ್ದರೂ ಎಲ್ಲ ವ್ಯಾಕರಣ
ತಿರುಗತಲಿಹುದು ಗಾಣ
ಅದಕೆ ನೀನೇ ಕಾರಣ.

1 comment:

sunaath said...

ಬದುಕಿನ ಗಾಣ
ನಗುತ ಹೊರುವವನೇ
ಜಾಣ!