Saturday, June 18, 2016

ಯಾವುದು ಬೇಕೋ ಅದು ಬೇಡ.

ಪುಡಿಯಾದರೆ, ಮುಂದೆ ದಾರಿ,
ಇಲ್ಲದೆ ಇದ್ದರೆ ದರಿ -
ಎಂದ ಹಾಗಿತ್ತು ಅವರು;
ಅಥವಾ ನನಗೆ ಹಾಗೆ ಕೇಳಿದ್ದಿರಬಹುದು;
ಯಾವುದನ್ನೂ ಹಚ್ಚಿಕೊಳ್ಳದ ನನಗೆ
ಈ ಮಾತ್ಯಾಕೋ ಪಥ್ಯವಾಗಿ
ಪುಡಿಯಾಗುವ ಹಂಬಲ.
ಆದರದು ಬರಿಯ ಹಂಬಲ,
ಚಂಚಲ,
ಎಚ್ಚರದ ನಡೆ ಎಡಬಲ.

ಪೆಟ್ಟು ಬಿದ್ದಾಗಲೆಲ್ಲ
ಮುಲುಗುಟ್ಟುವ ಕಲ್ಲು,
ಪುಟಿದೇಳುವ ಸಿಟ್ಟು,
ಕುಟ್ಟಬಹುದೆ ಹೀಗೆ?!
ಹೇಳಬಹುದೆ ಹಾಗೆ?!
ಅಡ್ರಿನಲೈನ್ ಸ್ರಾವ
ಕಡಿಮೆಯಾಗುತ್ತಾ ಬಂದ ಹಾಗೆ
ಇನ್ನೊಂಚೂರು ಗಟ್ಟಿ ಕುಟ್ಟಲೇನಾಗಿತ್ತು ಧಾಡಿ
ಕಬ್ಬಿಣ ಕಾದಾಗಲೆ ಬಡಿ
ಪುಡಿಗಟ್ಟಿಸಲೆಂದೆ ಕಟ್ಟಿದ ಜೋಡಿ
ಇರಬಹುದೆ ಇದೇ ಗುರುವಿನ ಮೋಡಿ
ಅಂತೆಲ್ಲ ಅನ್ನಿಸುತ್ತದೆ..

ಆದರೇನು..
ಬಿಟ್ಟ ಬಿರುಕು ಕೂಡಿ
ಕಲ್ಲು ಮೊದಲಿಗಿಂತ ಗಟ್ಟಿ
ಮತ್ತೊಂದು ಪೆಟ್ಟಿಗೆ
ಇನ್ನಷ್ಟು ತೀಕ್ಷ್ಣ ಪ್ರತಿಕ್ರಿಯೆ
ಎಷ್ಟೇ ಒಡ್ಡಿ ಕೊಳ್ಳ ಬಯಸಿಯೂ
ಬಯಲಿಗೆ ಬಿದ್ದ ಕೂಡಲೆ
ಕಾಪಿಟ್ಟುಕೊಳ್ಳಲು ಬಯಸುವ
ಶತಶತಮಾನದ ಕ್ರಿಯೆ ಮತ್ತು ಕರ್ಮ-
ಒರಟಾಗಿದೆಯೆಂದು ಭಾವಿಸಿರುವ ಸೂಕ್ಷ್ಮ ಚರ್ಮ.

1 comment:

sunaath said...

ಮನದ ನೂರೆಂಟು ಭಾವನೆಗಳನ್ನು, ಮಗ್ಗಲುಗಳನ್ನು ಕವನಿಸುವ ನಿಮ್ಮ ಪ್ರತಿಭೆಗೆ ಅಭಿನಂದನೆಗಳು.