Tuesday, March 4, 2014

ಮರುದಿನ..

ತಾವರೆ ದಳ
ಮಾವಿನ ಹಣ್ಣು
ಬಣ್ಣದ ಚಿಗುರು
ಬೇವಿನ ಎಸಳು-
ಗಳೆಲ್ಲಾ
ಮುದುಡಿ
ಸುಕ್ಕಾಗಿ
ಇಳಿಬಿದ್ದು
ಮಂಕಾಗಿದ್ದವು
ಎರಡು ದಿನ;

ಇಂದು, ಮತ್ತೆ,
ನೇಸರನೆಡೆಗೆ
ತಿರುತಿರುಗಿ ಅರಳಿದೆ ಕೆಂದಾವರೆ,
ಹಣ್ಣು ಕಳಿತು,
ಚಿಗುರಿಗೆ ಬಣ್ಣವಿಳಿದು,
ಎಸಳು ನಳನಳಿಸುತ್ತ,
ಭುವಿಗೆ 
ನಂದನವಿಳಿದ ನೋಟ!
ಮೊನ್ನೆ ಎರಡು ದಿನ
ಜ್ವರ ಬಂದು ಮಲಗಿದವ
ಇವತ್ತು ಮನೆ ತುಂಬ 
ಓಡಾಟ.
ನಿದ್ದೆಗೆಟ್ಟ ಅಮ್ಮನಿಗೆ
ಆಫೀಸು ಕುರ್ಚಿಯೇ
ತಲ್ಪಗಿಲ್ಪ ಮೆರೆದಾಟ.

ಲಕ್ಷ್ಮೀನಾರಾಯಣ ಭಟ್ಟರ ಮಲಗೋ ಮಲಗೆನ್ನ ಮರಿಯೇ ಗೀತೆಯ ರೂಪಕಗಳಿಂದ ಈ ಪೋರನನ್ನು ಅಲಂಕರಿಸಲಾಗಿದೆ.

2 comments:

sunaath said...

ಆ ಕೆಂದಾವರೆ ನಿಮ್ಮ ಮಮತೆಯ ಮನವೇ ಅಲ್ಲವೆ?
ಆ ನೇಸರ ನಿಮ್ಮ ಪುಟ್ಟ ಪೋರನೇ ಅಲ್ಲವೆ?
ಇಲ್ಲಿ ಅರಳಿದ ಕವನ ನಿಮ್ಮ ನೆಮ್ಮದಿಯ ರೂಪವೇ ಅಲ್ಲವೆ?

Badarinath Palavalli said...

ಭಟ್ಟರು ಪ್ರಯೋಗಶೀಲ ಕವಿ ಹೃದಯೀ. ತಮ್ಮ ಈ ಕವಿತೆಗೆ ಅಲ್ಲಿಂದ ಎಳೆ ದೊರೆತದ್ದು ನಮಗೂ ಖುಷಿೀ ಕೊಡುವ ಸಂಗತಿಯೇ ಸರಿ.