Tuesday, December 17, 2013

ಮರ್ಮರ..

ಅಗೂಲಕೆ ಹರಡಿ
ಅಲ್ಲಲ್ಲಿ ಬಿಳಲಾಗಿ
ಅಂಗಳ ತುಂಬ ನೆರಳಾಗಿ
ಮಣೆ, ಈಳಿಗೆ ಮಣೆ, ಅಡಿಕೆ ಸುಲಿಯುವ ಮಣೆಗಳ
ಹಲಗೆಯಾಗಿ
ಸುಮ್ನೆ ಇಳಿಸಿದ ಕಡಿರಾಡಿನ ರೀಪು ಪಕಾಶಿಯಾಗಿ
ಗಾಳಿ ಬೀಸಿದಾಗೆಲ್ಲ ತುಯ್ದಾಡಿ
ಚಳಿಗಾಲದಲ್ಲಿ ಗುಡಿಸಿದಾಗ ತುಂಬಿದ ಬುಟ್ಟಿಯ ಎಲೆಯಾಗಿ
ದನ ಕರಗಕ್ಕೆ ಕೊಟ್ಟಿಗೆ ಸೊಪ್ಪಾಗಿ
ಸಗಣಿಯೊಡನೆ ಸೇರಿ ಕೊಳೆತು
ತೋಟಕ್ಕೆ ಗನಾ ಗೊಬ್ಬರವಾಗಿ
ರಜೆಗೆ ಬಂದ ಮಕ್ಕಳ
ಆಟಕ್ಕೆ ತೊನೆದು ತೂಗಿದ ಗೆಲ್ಲಾಗಿ
ವಿಸ್ತರವ ಅಳೆಯುವ ಹಕ್ಕಿ ಕುಲಕ್ಕೆ
ಉಣಿಸುವ ಹಣ್ಣಾಗಿ
ಸಂಜೆಗೆ ಮರಳಿದವಕ್ಕೆ
ಗೂಡುಗೂಡಾಗಿ
ಮನೆವಿಸ್ತರಣೆಗೆ ಅಡ್ಡಗಾಲಾಗಿ
ಅಂಗಳಕ್ಕೊಂದು
ಗಡಿಗುರುತಾಗಿ, ಬಯಲಲೆವ ಬೂತಗಳಿಗೆ
ಒಡಲಾಗಿ
ಇರಲೆಬೇಕಾಗಿ
ಒಮ್ಮೊಮ್ಮೆ ಬೇಡಾಗಿ ಅನಿಸಿದ್ದು
ದಶಕಗಟ್ಟಲೆ
ಬೇರೂರಿ ಉಳಿದಿದ್ದು
ನೆಲದ ತೊಟ್ಟಿಲಲ್ಲಿ ಮೊಗವರಳಿ
ಆಕಾಶದ ತೆಕ್ಕೆಯಲ್ಲಿ ಮೊಗಹುದುಗಿಸಿ
ಮಳೆಗೆ ಮೈಯೊಡ್ದಿ
ಗಾಳಿಗೆ ಮೈದೂಗಿ
ಸಂಕ್ರಮಣಗಳನ್ನೆಣಿಸಿದ
ಮರ
ಮೊನ್ನೆ ಸಾಕಾಗಿ ಉರುಳಿತು.
ನಿನ್ನೆ ಫೋನು,ಜೆಸಿಬಿ,ಗರಗಸಗಳ ಸದ್ದು
ಇವತ್ತು ಖಾಲಿ ಅಂಗಳ,

ಬಂದು ಹಾರಿಹೋಗುವ ಹಕ್ಕಿಗಳ ರೆಕ್ಕೆಯ ಸದ್ದು.

4 comments:

sunaath said...

ಸಿಂಧು,
ನಿಮ್ಮ ಮನಸ್ಸುಗಳಿಗೂ ಈ ಮರ ಆಶ್ರಯ ನೀಡಿತ್ತಲ್ಲವೆ? ಇದೀಗ ಖಾಲಿ ಅಂಗಳ!
ರಮ್ಯ ಭಾವನೆಗಳನ್ನು ನವ್ಯ formatನಲ್ಲಿ ಚಿತ್ರಿಸುವ ಕೌಶಲ್ಯದಲ್ಲಿ ನೀವು ಅಪ್ರತಿಮರು.

VENU VINOD said...

ವಿಷಾದಭಾವ...
ಅಷ್ಟೇ ಹೊರತು ಇನ್ನೇನಿಲ್ಲ...
:(

Badarinath Palavalli said...

ತುಂಬ ಒಳ್ಳೆಯ ಕವನ.

ಸಿಂಧು sindhu said...

ಪ್ರಿಯ ಕಾಕಾ, ವೇಣು, ಮತ್ತು ಬದ್ರಿನಾಥ್,

ನಿಮ್ಮ ಸ್ಪಂದನೆಗಳಿಗೆ ಧನ್ಯವಾದ.
ಮರ ಮತ್ತು ಮನುಷ್ಯರು ಕೆಲವೊಮ್ಮೆ ಒಂದೇ ಅನ್ನಿಸಿಬಿಡುತ್ತದೆ.
ಕೆಲವರು ಹಾಗೆ ಬದುಕಿರುತ್ತಾರೆ.

ಪ್ರೀತಿಯಿಂದ,
ಸಿಂಧು