Monday, August 8, 2011

ಹೂಕಣಿವೆಯ ಹಾದಿ..


ನಿರಾಕರಣದ
ಚಂದ
ಬೆಟ್ಟ ಬಯಲು ನದಿ ಕಂದರಗಳಲಿ
ಹೊರಳುತ್ತಿದ್ದರೆ
ಊರ ಜಾತ್ರೆಯ ಗದ್ದಲಕೆ
ಹೊಂದಿಕೊಂಡ ನನ್ನ ಕಂಗಳಿಗೆ
ಬೆರಗಿನ ಪೊರೆ,
ಅಂಚಲಿ ಹೊಳೆದವು,
ಕಂಬನಿ ಜೋಡಿ
-
ನೋಡದೆ ಉಳಿದೆನೇ ಇಷ್ಟುದಿನ
ನೋಡಲಾಯಿತಲ್ಲಾ ಈಗಾದರೂ, ಇಷ್ಟಾದರೂ
-
ಬಾನೆತ್ತರಕೆ ಚಿಮ್ಮುವ
ಭುವಿಯ ಬಯಕೆ
ಒತ್ತರಿಸಿ ಖಂಡಾಂತರಗೊಂಡ
ತುಂಡುಗಳೂ ಅಖಂಡವೆನಿಸುವ
ವೈರುಧ್ಯ
ಎಲ್ಲ ಮೀರಬಲ್ಲೆ ಎನ್ನುವ
ನನ್ನ ಒಳಗ ಹಣಿಯುವ
ಮಣಿಸಿಯೇ ತೀರುವ
ನಿಡುದಾರಿ,
ಸೋತು ಕಾಲ್ ಚೆಲ್ಲಿದೊಡನೆ
ನೇವರಿಸುವ ಕುಳಿರು
ಅಲ್ಲ
ಇದನೆಲ್ಲ ಮಾತಿಗಿಡುವ
ನನ್ನ ಹಟವೇ
ಅಲ್ಲಿ ಕುಸಿದು ಕೂತಾಗ ನೀನೆಲ್ಲಿದ್ದೆ?
ಇರಲಿ ಬಿಡು
ಒಣಪೊಗರಿಗೆ ಈಗ ನೆಗಡಿಯಾಗಿದೆ,
ಏನಾದರಾಗಲಿ,
ಹೂಕಣಿವೆಯ ಹಂಬಲು ಕೊಂಚ ಹರಿದಿದೆ,
ಅರಳುಕಣಿವೆಯ ನೋಡಿ ತಣಿದಿದೆ.
ಲಕ್ಷ ಪಯಣಿಗರಲ್ಲಿ ಗುರಿ ಸೇರುವವರು
ಒಬ್ಬಿಬ್ಬರಂತೆ,
ನನ್ನದು ಪಯಣದ್ದೇ ಭಾಗ್ಯ.
ಗುರಿ ಯಾರಿಗೆ ಬೇಕು
ಪಯಣ ಮುಗಿಯದೆ ಇರಬೇಕು.

ನಿರಾಕರಣವ ಧೇನಿಸಿ
ಒಪ್ಪಿಗೆಗೆ ಹಟವಿಡಿಯುವ ನಾ ಮಳ್ಳಲ್ಲವೇ?
ಸಾಲು ಸಾಲು ಅಚಲ
ಸಾರಿ ಸಾರಿ ತಿಳಿ ಹೇಳಿಯೂ
ಕುಗ್ಗುವ ಕುದಿಯುವ ಈ ಬಗೆಗೆ ಮದ್ದಿಲ್ಲವೇ?
ಎತ್ತರದಿ ಮುಗಿಲು ಮುದ್ದಿಸಿ
ಆಳದಿ ಹೊನಲು ರಮಿಸುವ
ಈ ಬದುಕಿಗೆ ಇದೇ ಒಂದು
ಬರೆದಿಡದ ಭಾಷ್ಯವೇ?!
ಎಲ್ಲ ಚಂದಗಳ ನಿವಾಳಿಸಿ ಒಗೆಯಲು
ಕಿಡಿ ಇಲ್ಲ ಇಲ್ಲಿ,
ಭಾವಬಯಕೆಗಳ ಮೇರುತುದಿಯಲಿ
ಎಲ್ಲ ಮೀರಿದ, ತೀರಿದ ಹಿಮತೃಪ್ತಿ!
ಗಮ್ಯಕ್ಕಿಂತ ದಾರಿಯೇ ಸೊಗಸು
ಎಂಬ ಲೌಕಿಕವೆ ಲೇಸು.

(ಈ ಅಲ್ಪಳ ಬಯಕೆ ತೀರಿಸಿದ ಸಮಸ್ತ ಆತ್ಮೀಯರಿಗೆ, ಸೋಕಿಸಿಕೊಂಡ ಭೂರಮೆಗೆ, ನಿರುಕಿಸಿ ನಕ್ಕ ಬಾನಿಗೆ, ತಂಪಗೆ ಹರಿದ ನೀರಿಗೆ, ಕಂಪಲಿ ಮುಳುಗಿಸಿದ ಕಣಿವೆಗೆ, ಅತ್ತೂ ಕರೆದೂ ಜೊತೆಗೂಡಿದ ಸೃಷ್ಟಿಗೆ, ಜತೆ ಬಂದ ಬಿದಿಗೆಯ ಬಿಂಬಕ್ಕೆ
ಮತ್ತೆ ಮತ್ತೆ ಶರಣು. )

2 comments:

sunaath said...

ಸಿಂಧು,
ಇದು ಪಯಣದ ಕವನ. ಸೊಗಸಾದ ಈ ಕವನ ನೀಡಿ, ನನಗೆ ಸಂತೋಷ ಉಣಿಸಿದ ನಿಮಗೆ ನನ್ನ ಶರಣು.

ತೇಜಸ್ವಿನಿ ಹೆಗಡೆ said...

BhagyavE Sari... Very Lucky :)