ಮಬ್ಬುಗತ್ತಲ ಇಳಿಸಂಜೆ
ಪುಟ್ಟಕಣ್ಣಿನ ದೀಪ
ಸೊರಗಿದ್ದೂ ಸೊಗಯಿಸಿದ
ಬಿಳಿಬಿಳಿ ಅಂಗೈಯನ್ನು
ನಿನ್ನ ತಿಳಿಗೆಂಪು ಬೆರಳುಗಳ
ಮಿಂಚಲ್ಲಿ ತೋಯಿಸುತ್ತ
ಅಂದೆ ನೀನು
ತಾರಗೆಯೊಂದು ಬಿದ್ದಿಹುದು
ಅಂಗೈಯೊಳಗೆ
ಆ ಕ್ಷಣದ ರಮ್ಯತೆಗೆ
ಅದರೊಳಗಣ ಆರ್ದ್ರತೆಗೆ
ಅರಳಿದ ಭಾವ
ಧನ್ಯತೆಯೊಂದೇ
ಇಳಿಸಂಜೆಗಳ ಕಾಲವಳಿದು
ರಾತ್ರಿಕಳೆದು
ಮುಂಜಾವಗಳು ನಿದ್ದೆಯಲ್ಲಿಳಿದು
ಈಗ ಬಿರುಬೇಸಗೆಯ ಹಗಲು
ಬಾನೆದೆಯ ಕತ್ತಲಲ್ಲಿ ಮಿನುಗುವ ತಾರಗೆಯ
ನೋಡಿ
ಬೆಳಕಿನ ಲೋಕದ ಅಂಗೈಗೆ
ಬಿದ್ದವಳ ನೆನಕೆ,
ಮಿಂಚು ಹೊಳೆವುದೇ ಕತ್ತಲಲ್ಲಿ
ನೆರವೇರಿದ್ದ್ದಕ್ಕಿಂತಲೂ
ನಿರೀಕ್ಷೆಯಲ್ಲೇ ಸುಖ
ಎಲ್ಲ ನವ್ಯ ನವ್ಯೋತ್ತರಗಳಿಗೂ
ಅಡಿಗರ ಮೋಹನ ಮುರಳಿಯದೇ ಭಾಷ್ಯ!
ಸುಯ್ದು ನಿಟ್ಟುಸಿರು
ಸೋತ ಕತ್ತನ್ನ ಹಗೂರ ಎತ್ತುತ್ತ
ಕಣ್ದೆರೆದರೆ
ಮಳೆನಿಂತ ಕಪ್ಪುನೀಲಿ ಬಾನೊಡಲಲಿ
ಹೊಳೆ ಹೊಳೆವ ತಾರೆ
ರಸ್ತೆಯಂಚಲಿ
ಘಮಘಮಿಸಿ ಇಳಿಬಿದ್ದ
ಆಕಾಶ ಮಲ್ಲಿಗೆ!
ಭಾಷೆ ಎನ್ನುವುದು ಯಂತ್ರವೂ ಹೌದು, ಮಂತ್ರವೂ ಹೌದು.
-
ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರೆಲ್ಲ ಕಾಡಾಡಿಗಳಾಗಿದ್ದರು. ಅವರು ಸಣ್ಣ ಸಣ್ಣ
ಗುಂಪುಗಳಲ್ಲಿ ಬೇಟೆಗಾಗಿ ಸಂಚರಿಸುವಾಗ, ಅವರಿಗೆ ತಮ್ಮ ಸನಿಹದಲ್ಲಿಯೇ ‘ಹುಲಿ’ ಇದೆ ಎನ್ನುವ
ಸುಳಿವು...
5 comments:
ಸಿಂಧು,
ನಿಮ್ಮ ಕವನಗಳು ತುಂಬ ಖುಶಿ ಕೊಡುತ್ತವೆ. ಅಡಿಗರು ನವ್ಯಕಾವ್ಯವನ್ನು ಪ್ರಾರಂಭಿಸಿದ ಬಳಿಕ, ಅನೇಕರು ನವ್ಯದ labelನಲ್ಲಿ ಏನೇನೋ ಬರೆದರು. ಕವನದ ಸಾಲುಗಳನ್ನು ಕಿತ್ತಾಡಿ, ಅದೇ ನವ್ಯ ಎಂದು ಕರೆದರು. ಆದರೆ,ಅಡಿಗರ ನಂತರದಲ್ಲಿ, ನಿಮ್ಮದೇ ನಿಜವಾದ ನವ್ಯಕಾವ್ಯ ಎಂದು ನನಗೆ ಅನಿಸುತ್ತದೆ. ಶುಭಾಶಯಗಳು.
ಚಿಂಧಕ್ಕ...
"ಮಿಂಚು ಹೊಳೆವುದೇ ಕತ್ತಲಲ್ಲಿ
ನೆರವೇರಿದ್ದ್ದಕ್ಕಿಂತಲೂ
ನಿರೀಕ್ಷೆಯಲ್ಲೇ ಸುಖ
ಎಲ್ಲ ನವ್ಯ ನವ್ಯೋತ್ತರಗಳಿಗೂ
ಅಡಿಗರ ಮೋಹನ ಮುರಳಿಯದೇ ಭಾಷ್ಯ!
ಸುಯ್ದು ನಿಟ್ಟುಸಿರು
ಸೋತ ಕತ್ತನ್ನ ಹಗೂರ ಎತ್ತುತ್ತ
ಕಣ್ದೆರೆದರೆ
ಮಳೆನಿಂತ ಕಪ್ಪುನೀಲಿ ಬಾನೊಡಲಲಿ
ಹೊಳೆ ಹೊಳೆವ ತಾರೆ
ರಸ್ತೆಯಂಚಲಿ
ಘಮಘಮಿಸಿ ಇಳಿಬಿದ್ದ
ಆಕಾಶ ಮಲ್ಲಿಗೆ! "
ಕತ್ತಲ ಆಗಸದಲ್ಲಿ ನಕ್ಷತ್ರ ಕಾಣಿಸುವ ಸಾಲುಗಳು. ಈಗ ಹಗೂರ ಕತ್ತೆತ್ತಿ ನೋಡು, ನನ್ನ ಅಂಗೈಯೊಳಗೂ ಅಂಥದೇ ನಕ್ಷತ್ರ, ಅದು ನೀ ಬರೆದ ನಕ್ಷತ್ರವೇ.
ಬರೆಯುತ್ತಿರು ಪ್ಲೀಸ್.
ಸಿಂಧು ಮೇಡಂ
ನಿಮ್ಮ ಕವನದ ಸಾಲುಗಳು ತುಂಬಾ ಇಷ್ಟವಾಯಿತು
"ಮಿಂಚು ಹೊಳೆವುದೇ ಕತ್ತಲಲ್ಲಿ
ನೆರವೇರಿದ್ದ್ದಕ್ಕಿಂತಲೂ
ನಿರೀಕ್ಷೆಯಲ್ಲೇ ಸುಖ.."
ಸುಖದ ಬಾನೇರಿ
ಪ್ರೀತಿಯ ತೇರಿನಲ್ಲಿ
ಸಾಗುವ ಕನಸೇ
ಮಧುರ..
ಮನಕ್ಕೆ ಮುದ ತರುವ ಕವನ ಕೊಟ್ಟದ್ದಕ್ಕೆ ಧನ್ಯವಾದಗಳು.
ಅನ೦ತ್
ಒಳ್ಳೆಯ ಕವನ..
ಚೆನ್ನಾಗಿದೆ.
Post a Comment