Thursday, February 20, 2014

ನೋಡದ ನೋಟ..

ಮಾಸ್ತರರ ಚೂಪು ನೋಟ
ಗೆಳತಿಯರಿಬ್ಬರ ನಗೆಚಾಟಿಕೆ ಮಾತ
ಕತ್ತರಿಸಿಬಿಟ್ಟಿತು
ತಮ್ಮನೊಡನೆ ಸುಖಾಸುಮ್ಮನೆ
ಕ್ಯಾತೆ ತೆಗೆದು ಕೂಗಾಡುತ್ತಿದ್ದ ಪುಟ್ಟ ಅಕ್ಕ
ಸಂಧ್ಯಾವಂದನೆಯ ಅಪ್ಪನ ಹಿರಿನೋಟ
ತೂರಿ..
ಮೆತ್ತಗೆ ಸುಮ್ಮನಾದಳು.
ವಸಂತ ಮೆಲ್ಲಡಿಯಿಟ್ಟ
ಮೈ ಹೊರಗೆ ತಿರುಗುವಾಗ
ಹರಿವ ಮೆಚ್ಚು ನೋಟಕ್ಕೆ
ತಲೆ ಕೆಳಗೆ ಹಾಕಿ ಸಿಗ್ಗು ಮೂಡಿತು
ಅತ್ತಿತ್ತ ಹರಿವ ಕಣ್ಣು ಸಿಕ್ಕಿಸಿ
ಹಿಡಿದ ಆ ಮೊದಲ ನೋಟ
ಹೇಳಬಹುದು ಇದಕ್ಕೆ ಮಾಟ.
ಗೊತ್ತಿತ್ತು ಇದು ಮೊದಲೆ
ಹೋಗಲಿಬಿಡು ಎಂದ ಅಮ್ಮನ ನೋಟ
ಕಣ್ಣೊರಸಿ ಅರಳಿಸಿದ ನೊಂದ ನೋಟಕ್ಕೆ
ಢೀ ಇಟ್ಟ ಭರವಸೆಯ ಪೂರ ನೋಟ
ಏರು ಹಾದಿಯ ಕತ್ತಲೆಗೂ
ಅಪ್ಯಾಯತೆ ತಂದಿಟ್ಟ ಅವನ ನೋಟ
ಮುಗ್ಧತೆಯ ತುಂಬಿ ತುಳುಕಿಸಿದ
ಪಾಪು ನೋಟ...
ಮುಚ್ಚುವುದಕ್ಕೆ ಚಣ ಮೊದಲು
ಮತ್ತೆ ಬಿಟ್ಟು ಎಂದೆಂದಿಗೂ ಮುಚ್ಚಿದ ಆ ನೋಟ,
ಅತ್ತ ಕಣ್ಗಳ ಒರೆಸಿ
ಮುತ್ತಿಕ್ಕಿ ಕತೆ ಹೇಳಿ ನಗಿಸಿದ ಅಜ್ಜನ ನೋಟ,
ಬದಿಯಿಂದ ನೀನು ನೋಡಿಯೇ ಒದ್ದಾಡುತ್ತಿರುವೆ
ಇನ್ನು ಎದುರಾ ಎದುರೆ ಇರುಕಿಸಿಕೊಂಡಿದ್ದರೆ ಗತಿಯೇನೆ ಎಂದ ಶಾಯರಿ ನೋಟ....
ಎಲ್ಲವನ್ನೂ ಒಂದೆಡೆ ಹಾಕಿ ತುಲಾಭಾರ ಮಾಡುತಿರುವೆ
ಉಂಹೂಂ
ಈ ಯಾವುದೂ
ಇವತ್ತು ಬೆಳಗ್ಗೆ
ನೋಡದೆ ಕಳಿಸಿಕೊಟ್ಟ
ಆ ನೋಟಕ್ಕೆ
ಎಳೆತಕ್ಕೆ
ಸಮನಾಗುತಿಲ್ಲ.
ಅದರ ಹರಿತವೇ ಬೇರೆ
ಅದು ಕತ್ತರಿಸುವ
ಮೂಲದ್ರವ್ಯವೇ ಬೇರೆ.
ಅದರ ಸಾಂದ್ರತೆಯೇ ಬೇರೆ.
ಸಧ್ಯ ಹೊರಟುಬಿಟ್ಟೆ ಎಂದು
ನಿಸೂರಾಗುವ ಮೊದಲೆ
ಹಿಡಿದ ಆ ಖಾಲಿಭಾವ
ಯಾವುದರಿಂದಲೂ ತುಂಬುವದಿಲ್ಲ.

ಗೊತ್ತು ನಿನಗೆ
ಅಮ್ಮ ಹೊರಟಿದ್ದಾಳೆ ಆಫೀಸಿಗೆ
ಏನೆ ಗೋಳ್ಕರೆದರೂ..
ಮರುಳು ಮಾಡಿ
ಕಣ್ಣು ತಪ್ಪಿಸಿ
ಹೋಗಿಯೇ ಹೋಗುವಳು
ನೋಡಿ ಕಣ್ತುಂಬಿಸಿಕೊಳ್ಳಲಿ ಏಕೆ
ಅನಿಸಿತೇ!!?

ಗೊತ್ತು ನನಗೆ-
ನೋಟವಿದೆ ಆಟಿಕೆಯ ಮೇಲೆ,
ನೋಟವಿದೆ ಹಾಡು ಪರದೆಯ ಮೇಲೆ,
ಕಾಣುತ್ತಿರುವುದು ಮಾತ್ರ ಬೇರೆಯೇ ಬೇರೆ.
ನೋಡದ ನೋಟವೂ
ಹೀಗೆ ಕಾಡುತ್ತದೆ 
ಎಂಬ ಅರಿವಲಿ
ಮನಸು ತತ್ತರ

ನಿರುತ್ತರ...

Tuesday, February 18, 2014

ವೈರುಧ್ಯ ವೈಶಿಷ್ಟ್ಯ

ಶುಕ್ಲ ಬಿದಿಗೆಯಲ್ಲಿ
ಮೂಡುವ ಬಿಂಬವೇ
ಕತ್ತಲಿಂದಲ್ಲವೇ
ನಿನ್ನ ಕಮನೀಯತೆಗೆ
ಆ ಮನೋಹರ ಹೊಳಪು!
ದಿನದಾಗಸದಿ ತೇಲಿಬಂದರೆ
ವರಕವಿಯ ಪದ್ಯಸಾಲಾದೀಯ
ಕತ್ತಲಿರಲಿ ಸುತ್ತಮುತ್ತೆಲ್ಲ

ಮಿನುಗುತಿರಲಿ ರಾತ್ರಿಯೆಲ್ಲ.

Tuesday, February 11, 2014

ತಧೀಂ ಧಿನಕ ಧೀಂ

ದೀಪವಾರಿ
ರಂಗದಲ್ಲಿ ಕತ್ತಲೆ,
ಗುಜುಗುಜು ನಿಂತು
ಪಿಸುಗುಡುವಿಕೆ.
ಅಲ್ಲಲ್ಲಿ ಸಾಲು ಮಧ್ಯೆ
ಎಡವುತ್ತಾ
ಕುರ್ಚಿ ಹುಡುಕಿ ಕೂರುವಷ್ಟರಲ್ಲಿ,..

ಎರಡು ಪುಟಾಣಿ ಕೈ ಜೋಡಿಗಳಲ್ಲಿ
ಪಟಪಟಿಸುವ ತೆರೆಯ ಸೂಚನೆ,
ಇನ್ನೇನು ಒಡ್ಡೋಲಗ ಶುರು,
ಹೌದೆನ್ನಲು ಹಾರ್ಮೋನಿಯಂ ಶ್ರುತಿ
ಕಂಚಿನ ಕಂಠದಿಂ ಹರಿವ ಬನಿ
ದೇವರ ದೇವ ಶಿಖಾಮಣಿಯ
ಹೆಜ್ಜೆ ಹಾಕಿಸುತಿದೆ.
ದನಿಯ ದೈವ
ಲಾಸ್ಯದಲ್ಲಿ ಮೈಗೂಡಿದ ಹಾಗೆ.

ತೆರೆಯ ಹಿಂದೆ
ಕಿರೀಟಿಯ ಒಡ್ಡೋಲಗ
ಮುಂದೆ ನಲಿವ
ಬಾಲ ಗೋಪಾಲರು
ಕತ್ತಲೆಯ ವೃತ್ತದ
ಮಧ್ಯೆ ಬೆಳಗುವ
ತಧೀಂ ದಿನ್ನಕ ಧೀಂ


ಅರೆ! ಎಷ್ಟು ಸುಲಭ,
ಸಮಸ್ಯಾ ನಿವಾರಣೆ!
ಭಿನ್ನಾಭಿಪ್ರಾಯವೇ?
ಯುದ್ಧ ಹೂಡು,
ತುಂಬ ತಲೆಬಿಸಿಯೇ?
ವಿದೂಷಕನ ಕರೆ,
ಪರಿಸ್ಥಿತಿ ಬಿಗಡಾಯಿಸಲು
ಕೃಷ್ಣಗೇ ಮೊರೆ,
ಅಲ್ಲಲ್ಲಿ ನವಿಲು ಕುಣಿದ
ಹಾಗೆ ಸ್ತ್ರೀವೇಷ ಬೇರೆ!

ಕಥೆಯಿಲ್ಲಿ ನೇಪಥ್ಯ
ಆಹಾ ಅಲ್ಲಿ ನೋಡು
ಕೇದಿಗೆಮುಂದ್ಲೆಯವನ ಕಣ್ಣ ಭಾಷೆ
ಕಿರೀಟಿಯ ಹೆಜ್ಜೆ ಗೆಜ್ಜೆ
ಎಂಥಾ ಭಾಗ್ವತಿಕೆ ಮಾರಾಯಾ..
ಚೆಂಡೆಯಂತೂ.. ಆಹಾಹ ಅಗದೀ ಬೆಸ್ಟು
ರಂಗಕ್ಕೆ ಕತ್ತಲಾವರಿಸಿದಾಗ
ತೆರೆದ ಕಣ್ಣು
ಮತ್ತೆ ಆಟ ಮುಗಿಯುವವರೆಗೆ
ಮುಚ್ಚಿದ್ರೆ ಕೇಳು!

ತೆರೆ ಸರಿಸಿ ಬಂದಾಗಿದೆ
ಕುಣಿತ ಚಂದಗಾಣಿಸಬೇಕು
ಮಾತು ಮೈಮರೆಸಬೇಕು
ಯಕ್ಷಲೋಕವನ್ನ ಇಲ್ಲಿ
ಬಯಲ ಮಧ್ಯೆ
ಕಟ್ಟಿಕೊಡಬೇಕು.


ಚೌಕಿಯಲ್ಲಿ ಬಣ್ಣ ಕಳಚಿ
ಹೊರಟ ಮೇಲೆ
ಮುಂದಿನ ಮಾತು.
ಯಕ್ಷ ಲೋಕದಿಂದಿಳಿದ
ಬಣ್ಣಗಳ ನೇರ್ಪು ಮಾಡುತ್ತ
ರಂಗದಿಂದ ದೂರವುಳಿದೂ
ನಟಿಸಬೇಕು
ಮಾತಲ್ಲಿ ಮನೆಕಟ್ಟಬೇಕು
ನೋವುಗಳ ಜತನದಿಂ ಎತ್ತಿಟ್ಟು
ಮುಂದಿನ ಮೇಳದ ಕರೆಬರುವವರೆಗೆ
ನಗುವ ಪುರಂದರ ವಿಠಲನಿಗೆ ಕಾಯಬೇಕು.

ಅಲ್ಲಿ ತಧೀಂ ಧಿನಕ ಧೀಂ
ಇಲ್ಲಿ ಧೀಂ ತಧೀಂ ಧಿನಕ...

Thursday, February 6, 2014

ಪರಪುಟ್ಟಿ..

ತೊರೆಪಕ್ಕದಿ
ಕಾಡ ಅಂಚಲಿ
ಹಸಿರಾಗಿ ಬೆಳೆದ ಮರದ
ಕೊಂಬೆತುಂಬ
ತಿಳಿಗುಲಾಬಿ ನೇರಳೆ ಹೂಗಳ
ಹೊತ್ತ ಆ ಗಿಡಗುಚ್ಛದ ಹಣ್ಣು
ಹೂರಸ ಸಿಹಿಸಿಹಿ.
ಬೆಳಗಿನ ಉಪಾಹಾರಕ್ಕೆ
ಅದನುಂಡ ಕಾಗಕ್ಕನ
ಕೊಕ್ಕಿಗೆ ಅಂಟಿತು ಬೀಜ
ಆಮೇಲಿಷ್ಟು ಹಾರಾಟ
ಅಲ್ಲಲ್ಲಿ ನೀರು ಎರಚಾಟ
ಬಿಸಿಲ ಪೊರೆವಾಟ
ಮುಗಿಸಿ
ಮಧ್ಯಾಹ್ನದೂಟ
ಇದೀಗ
ಇನ್ನೊಂದು ಹಣ್ಣಿನ ಮರ
ಬಲು ಜತನದಿ ಬೆಳೆಸಿದ ಕಸಿಮರ
ಕಾಟಲ್ಲ, ಹಾದಿಬದಿಯದಲ್ಲ
ಮನೆಯ ತೋಟದಿ
ಸುಪೋಷಣೆಯ ಎಳೆಮರ.
ಹಣ್ಣು ತಿಂದಾಯಿತು.
ಕೊಕ್ಕಲ್ಲಿ ಅಂಟಿದ್ದ ಬೆಳಗಿನ ಬೀಜ
ಮರದ ಕಾಂಡಕ್ಕೆ.
ವಾರ ಕಳೆಯಿತು.
ಬೀಜ ಮೊಳಕೆಯೊಡೆದು
ತೊಗಟೆಯ ಅಂಟಿ ಹಿಡಿದು
ಎಳೆ ಚಿಗುರು.
ವರ್ಷಗಳಳಿದವು
ಸುಪುಷ್ಟ ಮರದ
ಹೆಗಲೇರಿದ ಬೀಜಸಂತಾನ
ಈಗ ಮೈತುಂಬ.
ಮರದ ಜೀವರಸವುಂಡು
ಬೆಳೆಬೆಳೆವ ಬಂದಳಿಕೆ.
ಜೀವರಸವ ಹೀರಗೊಟ್ಟ
ಮರ ಈಗ ಮೊರೋಸ್ (morose).
ಎಳೆಬೀಜ, ಚಿಗುರು
ಬಣ್ಣ ಬಣ್ಣದ ಹೂಗುಚ್ಛ
ಹೊದ್ದ ಮೊದಲ ದಿನಗಳು
ಮುಗಿದು ಈಗ
ಮೈಸೋಲುವ ಕಾಲ.

ನಮ್ಮ ತನ
ಅರಿವಾಗುವ
ಚಣದ ಕಾಲದ ಮುಳ್ಳು ಬಲು ಚೂಪು.

ಅರಿವಿರದೆ ಹಬ್ಬಿ ಕೊರೆದೆ.
ಸಾಧ್ಯವಾದರೆ ಕ್ಷಮೆಯಿರಲಿ.

ದುಃಖ ಏನೆಲ್ಲ ಕಲಿಸುತ್ತದೆ!
ಎಂದೋ ಕಲಿತು ಮರೆತ
ಬಾಟನಿಯನ್ನೂ.
mistletoe
Web Courtesy: http://thetrustygardener.com

Wednesday, February 5, 2014

ಕನಸಿನ ನಿಯಮ..

ರೋ ರೋ ರೋ ಅ ಬೋಟ್
ಜೆಂಟ್ಲಿ ಡೌನ್ ದಿ ಸ್ಟ್ರೀಮ್...
ಮೆರಿಲಿ ಮೆರಿಲಿ ಮೆರಿಲಿ ಮೆರಿಲಿ
ಲೈಫ್ ಈಸ್ ಬಟ್ ಅ ಡ್ರೀಮ್..


ಇದೇ ಸರಿ.

(ನೀರಿದ್ದರೆ)
ನಿಧಾನಕ್ಕೆ.. ಆ ಹರಿವಲ್ಲಿ
ನವುರಾಗಿ..
ಮುಳುಗೇ ಹೋಗುತ್ತೇನೆ ಎನ್ನಿಸಿದರೂ
ತೇಲುತಿರುವೆ ಎಂಬಂತೆ..
ಹುಟ್ಟು ಹಾಕಬೇಕು,
ಕನಸಲ್ಲಾದರೂ
ಅಳದೆ ಇರಬೇಕು.
ಅಳುಕು ಮರೆಯಬೇಕು.

ಎಚ್ಚರದ ಮಾತು
ಈಗ ಬೇಡ.

Friday, January 31, 2014

ಸೃಷ್ಟಿ ನಿಯಮ.

ನನ್ನ ಗ್ರಹಗತಿಗಳು ಹೇಗಿವೆ
ನೋಡಿ ಹೇಳೆಂದು
ಕೈಬಿಡಿಸಿ ನಿನ್ನ ಕೈಯೊಳಗಿಟ್ಟೆ.
ಅಂಗೈಯಲ್ಲೆ ತಾರಗೆಯೊಂದು ಬಿದ್ದಿರೆ
ಹೇಳಲಿ ನಾನಾದರೂ ಏನೆಂದು
ನೀನು ಮುಗುಳ್ನಗು ಬಿರಿದೆ.
ಓಹ್..
ಮಬ್ಬುಸಂಜೆಯ ಆಗಸದಿ
ಮೂಡಿದ ಬಿದಿಗೆಯ ಬಿಂಬ
ಒಂದರೆಗಳಿಗೆ
ಸುತ್ತಲ ಜಗತ್ತು ಫೇಡ್ ಆಯಿತು.

ಮಳೆಯೊದ್ದೆ ಹಾದಿಯುದ್ದಕೆ
ತೂಗಿತೊನೆಯುವ ಮರಮರಸಾಲು
ನೋವ ಮರೆತು ನಡೆನಡೆವ ಕಾಲು
ಕೆಂಪಿಮಣ್ಣಿನ
ಇದ್ದಿಲೊಲೆಯ ಮೇಲೆ
ನೊರೆನೊರೆಯಾಗಿ ಉಕ್ಕಿದ
ಬಿಳಿಬಿಳಿ ಹಾಲು
ಚಿತ್ರಿಸಿದಂತಹ
ಮಾತು

ದನಿಯೊಡೆಯದೆಯೆ ಮೀಟಿದ
ಬರಿಯ ಭಾವತಂತು
ಹೇಳಲಿ ಹೇಗೆ
ನಾನಾದರೂ ಈಗ ಏನು ಎಂತು?


ಅವತ್ತು
ಅಲ್ಲಿ
ಎಷ್ಟು ಪಯಣಿಸಬೇಕಿತ್ತೋ
ಇವತ್ತು
ಇಲ್ಲಿ ಅಷ್ಟೇ ನೆಲೆಯಾಗಬೇಕಿದೆ.

ಚಿಗುರು ಹಳದಿಯಾಗಬೇಕಿರುವುದೇ ಸೃಷ್ಟಿ ನಿಯಮ.