Tuesday, July 2, 2013

ಹೂ-ಬಲ...

ಸಂಜೆಯಿಡೀ..
ಭೋರೆಂದು ಸುರಿವ ಮಳೆಗೆ
ಗೋಣು ಬಗ್ಗಿಸಿ ನಿಂತ
ಪಾರಿಜಾತ ಮರದ
ಗೆಲ್ಲುಗಳಲ್ಲಿ ಅಲ್ಲಲ್ಲೇ
ಅರೆಬಿರಿವ ಪಾರಿಜಾತ..

ಹೂಬಿರಿವ ಸದ್ದು ಕೇಳುವುದಿಲ್ಲ,
ಕಿವಿಗೆ ಸ್ಕಾರ್ಫ್ ಬಿಗಿಯಲಾಗಿದೆ.

ಸುರಿವ ಮಳೆಯ ತಡೆದ
ಎಳೆಮೊಗ್ಗ ಎಸಳುಗಳು
ಬೆಳಗು ಮುಂಚಿನ ನಸುಗಾಳಿಗೆ
ಉದುರಿದವು ನೆಲದೊಡಲಿಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ

ಗಂಧಶಾಲಿನೀ ಬೆಳಗು
ಎಂದು ಕವಿಯ ಮೆಸೇಜು,
ದಾರಿ ಬದಿಯ ಮರದ ಕೆಳಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ
ತುಂಬುತ್ತಿರುವುದು
ಆಯುವ ಅಜ್ಜನ ಜಾಲರಿಬುಟ್ಟಿ.

ಗಿಡದಿಂದ, ನೆಲದಿಂದ,
ಬುಟ್ಟಿಯಿಂದ, ದೇವರ ಪದತಳದಿಂದ
ಮಣ್ಣು ಸೇರಿದ ಹೂವಿ-
ನ ಗಂಧ ಗಾಳಿ ಪಾಲಾದರೂ
ಭಾವಕೋಶದಿ ನಿತ್ಯ ಗಂಧಿ.

ಸುರಿಮಳೆಗೆ ಬಗ್ಗಿ ನಿಂತು
ಭರಿಸಿದ ಹೂವು
ನಸುಗಾಳಿಗೆ ಉದುರಿತು
ಎಂಬುದು
ಮಾರಲ್ ಆಫ್ ದ ಸ್ಟೋರಿ.