Friday, December 28, 2007

ನನ್ಹೀ ಕಲೀ

ಮೇರೆ ಘರ್ ಆಯೀ ಏಕ್ ನನ್ಹೀ ಪರೀ..

ತುಂಬಿ ಹರಿಯುತ್ತಿರುವ ಕಂದು ಯಮುನೆ.. ಅಮ್ಮನಂತೆ ಕರುಣೆಯಿಂದ ನನ್ನ ದುಃಖಕ್ಕೆ ಕಣ್ಣು ತುಂಬಿ ತುಳುಕಿಸುತ್ತಿರುವ ಮೋಡಕಪ್ಪಿನ ಬಾನು, ಹಿನ್ನೆಲೆಗೆ ಆ ಬಿಳಿಯ ಭವ್ಯ ಸ್ಮಾರಕ.. ನಮ್ಮೆಲ್ಲ ಕವಿಕಲ್ಪನೆಗಳ ಉಯ್ಯಾಲೆಯಲ್ಲಿ ಜೀಕಿ ಜೀಕಿ ತೂಗಿದ ತಾಜ್ ಮಹಲ್ಲು.

ಅತ್ತಿತ್ತ ನೋಡಿದೆ. ಯಾರೋ ಇಬ್ಬರು ಹೆಂಗಸರು ಮಿನಾರುಗಳ ಕುಸುರಿ ಚಂದ ನೋಡುತ್ತ ನಿಂತಿದ್ದರು. ಸಣ್ಣ ತುಂತುರಿತ್ತು. ಎಲ್ಲ ಪ್ರವಾಸಿಗಳೂ ಮಹಲಿನ ನೆರಳಲ್ಲಿ, ಒಳಗೆ ನಿಂತು ಸವಿಯುತ್ತಿದ್ದರು. ಇದು ಹಿಂಭಾಗವಾದ್ದರಿಂದ ಅಷ್ಟು ದಟ್ಟಣೆಯಿರಲಿಲ್ಲ.
ಹೋಗಿ ಬರ್ತೀಯಾ..ಹುಶಾರಾಗಿರು ಅಂತ ಕಣ್ತುಂಬಿದ ಅಮ್ಮನ ನೆನಪಾಯಿತು. ಮಾತಾಡದೆ ಕಣ್ಣ ತುಂಬ ನನ್ನನ್ನೇ ತುಂಬಿಕೊಂಡು ನೋಡುತ್ತ ನಿಂತ ಅಪ್ಪ ಮತ್ತವನ ಬೆಚ್ಚನೆ ಕೈಹಿಡಿತ ನೆನಪಾಯಿತು. ಕಂಡ ಕನಸೆಲ್ಲದರ ನೂರು ರೂಪ ಕ್ಯಾಲಿಡೋಸ್ಕೋಪಿನ ಚಿತ್ತಾರಗಳಂತೆ ಬಂದು ಹೋಯಿತು. ಎಲ್ಲ ಮುಗಿದ ಮೇಲಿನ್ನೇನು ಎಂಬ ಭಾವ ಒತ್ತರಿಸಿಬಂತು.ಕಣ್ಣು ಮುಚ್ಚಿದವಳು ಕಂಪೌಂಡ್ ಹತ್ತಿ ಹಾರಿಯೇಬಿಟ್ಟೆ..ಆಹ್ ಹೊದೆದ ದುಪ್ಪಟ್ಟಾ ಗಾಳಿಗೆ ತೇಲಿ ಹೋಯಿತು. ತಣ್ಣನೆ ಕೊರೆವ ಗಾಳಿ ಮೈಸೋಕಿದ್ದಷ್ಟೇ ಅಷ್ಟರಲ್ಲೇ ಬಿದ್ದಿದ್ದೆ ನೀರಿಗೆ. ಯಮುನೆಯೆಂಬ ಸಾವಿನ ಸುಳಿಗೆ.. ನೀರು ಕಣ್ಣು ಮೂಗಲ್ಲೆಲ್ಲ ತುಂಬಿ ಉಸಿರು ಕಟ್ಟಿ ಎದೆಯನ್ನು ಯಾರೋ ಒತ್ತರಿಸಿ ಹಿಡಿದಿದ್ದಾರೆನ್ನಿಸುವಷ್ಟು ತಳಮಳ. ಕಣ್ಣೆಲ್ಲ ಉರಿ. ಮುಚ್ಚಿಕೊಂಡರೆ ಕತ್ತಲು ಭಯ. ಆಹ್ ಒಂದು ಉಸಿರು ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಒಂದ್ಸಲ ಯಮುನೆಯ ಅಪ್ಪುಗೆಯಲ್ಲಿ ನನ್ನೇ ನಾನು..ಎಲ್ಲ ಕತ್ತಲಾಗಿ...

ಮಳೆ ನಿಂತ ನಿರಭ್ರ ನೀಲಿ ಹತ್ತಿರದಲ್ಲಿ ಬಿಳಿಯ ಎತ್ತರದ ಮಿನಾರು ತಣ್ಣನೆ ನೆಲ ಹಣೆಯ ಮೇಲೆ ಬೆಚ್ಚನೆ ಕೈ.. ಅಮ್ಮನಂತ ಚಂದ ಹೆಂಗಸೊಬ್ಬರ ಮುಖ ಮಸುಕು ಮಸುಕಾಗಿ ಕಣ್ಣು ತುಂಬಿತು. ಆಗಯೀ ಆಗಯೀ.. ಸುತ್ತಲ ಗೊಣಗಾಟ.. ಹರಿವ ಯಮುನೆಯಲ್ಲಿ ಮುಳುಗಿದವಳನ್ನ ಈಜುಗಾರ ಪ್ರವಾಸಿಯೊಬ್ಬ ನೋಡಿ ಹಿಡಿದು ಮೇಲೆ ತಂದಿದ್ದ.. ಮಿನಾರುಗಳ ಚಂದ ನೋಡುತ್ತಿದ್ದ ಇಬ್ಬರು ಹೆಂಗಸರೂ ಓಡಿ ಬಂದು ನನ್ನ ಉಸಿರಾಟವನ್ನು ರೀಸಸಿಕೇಟ್ ಮಾಡಿ ಬದುಕಿನ ಬೇಲಿಯೊಳಗೆ ಎಳೆದುಕೊಂಡಿದ್ದರು..ಅಲ್ಲಿ ಜನ, ಮಾತು, ಮೊನಚು, ಸೆಕ್ಯುರಿಟಿ ಎಲ್ಲವನ್ನೂ ನಿಭಾಯಿಸಿದ ಅವರಿಬ್ಬರೂ ನನ್ನ ಆಗ್ರಾದ ಗಲ್ಲಿಯೊಂದರ ಹಳೇ ಮನೆಯ ಹೊರಕೊಠಡಿಯ ಮಂಚದ ಮೇಲೆ ಮಲಗಿಸಿ, ಇಲ್ಲೇ ಬರುತ್ತೇವೆ ಸ್ವಲ್ಪ ಆರಾಂ ಮಾಡು ಅಂದು ಹೋದರು. ಅಯ್ಯೋ ಬದುಕಿಸಿಬಿತ್ರಲ್ಲ ಇವರು ಅಂತ ನಂಗೆ ಹತಾಶೆಯಾಗಿದ್ದರೂ, ಎಲ್ಲರಂತೆ ಚುಚ್ಚದೆ, ಮೊನಚು ನೋಟ ಬೀರದೆ ಸುಮ್ಮನೆ ಜೊತೆ ಕೊಟ್ಟ ಆ ಇಬ್ಬರೂ ಯಾಕೋ ಇಷ್ಟವಾಗತೊಡಗಿದರು. ಮೂಗೆಲ್ಲ ಉರಿಯುತ್ತಿತ್ತು. ಸುಸ್ತು. ನಿದ್ದೆ ಬಂದಿತ್ತು.

ಎಚ್ಚರಾದಾಗ ಅವರು ಅಲ್ಲೆ ಕೂತು ಅವತ್ತು ತೆಗೆದ ಫೋಟೊಗಳನ್ನು ನೋಡುತ್ತ ಕೂತಿದ್ದರು. ನಾನು ಮಾತಾಡದೆ ಎದ್ದು ಅವರ ಪಕ್ಕ ಹೋಗಿ ಕೂತೆ. ಹಸಿರ್ಹಸಿರು ಅಗಲಗಲ ಎಲೆಗಳ ಮೇಲೆ ಬಿರಿದ ಅಚ್ಚಮಲ್ಲಿಗೆಯಂತ ಮೆಲ್ನಗು ನಕ್ಕು ನನಗೂ ತೋರಿದರು ಫೋಟೋಗಳನ್ನ. ಮರುದಿನ ಅವರು ಹೊರಟಾಗ ನಾನೂ ಹೊರಟೆ. ಬಸ್ಸು ಕಂಡು ಕೇಳರಿಯದ ಉತ್ತರ ಪ್ರದೇಶದ ಚಿಕ್ಕ ಊರೊಂದಕ್ಕೆ ತಂದುಬಿಟ್ಟಿತು. ಅವರನ್ನೇ ಹಿಂಬಾಲಿಸಿದ ಕಾಲ್ಗಳು ನಿಂತ ಪುಟ್ಟ ಬೀದಿಯ ಹಳೇ ಮನೆಯ ಬಾಗಿಲಲ್ಲಿ ಹೆಸರಿತ್ತು "ಉದಯಮಹಲ್"

ಒಳಗೆ ಕಾಲಿಟ್ಟೊಡನೆ ಕಂಡ ವಿಶಾರ ಹಜಾರದಲ್ಲಿ ಅಲ್ಲಲ್ಲಿ ಗುಂಪಾಗಿ ಆಡುತ್ತಿದ್ದ ಮಕ್ಕಳು ಓಡೋಡಿಬಂದರು. ದೀದಿಮಾ, ಬಾಯಿಮಾ ಅಂತ ಕೂಗುತ್ತಾ..ಅವರಿಬ್ಬರು ಆ ಮಕ್ಕಳೊಂದಿಗೆ ಮಗುವಾದರು. ಅಂದು ಸಂಜೆ ಅವರ ಕೊಠಡಿಗೆ ನನ್ನ ಕರೆದ ದೀದಿಮಾ - ಹೇಳು ಬೇಟೀ ಯಾಕೆ ಹಾಗೆ ಮಾಡಲಿಕ್ಕೆ ಹೋದೆ - ಅಂತ ಕೇಳಿದರು. ಯಾರು ಕೇಳಿದರೂ ಹೇಳಬಾರದೆಂದುಕೊಂಡಿದ್ದೆಲ್ಲ ಮರೆತುಹೋಯಿತು.

ನನ್ನ ಹಳವಂಡಗಳನ್ನ ಬಿಚ್ಚಿಟ್ಟೆ. ಹೇಗೆ ಎಷ್ಟು ಪ್ರೀತಿಯ ಅಪ್ಪ ಅಮ್ಮನ ಪ್ರೀತಿಗೆ ಬೆನ್ನು ತೋರಿ ನಯವಂಚಕನ ಬಲೆಗೆ ಬಿದ್ದೆ. ಪ್ರೀತಿ ತೋರಿದ ಜೀವಗಳ ಸಲಹೆಯನ್ನ ಹೇಗೆ ಕಾಲಲ್ಲೊದ್ದೆ? ಅವನ ಬೆನ್ನ ಹಿಂದೆ ಹೇಗೆ ನನ್ನ ಮನಸ್ಸು ಆಳಸುಳಿಯೊಳಗಿಳಿದಂತೆ ಹೊರಟುಬಿಟ್ಟಿತು. ಎಲ್ಲ ಓದು, ಕೆಲಸ, ಜವಾಬ್ದಾರಿಯ ಮರೆತು ಅವನ ಸೋಗಿಗೆ ಹೇಗೆ ಮರುಳಾದೆ. ಅವನ ಬಯಕೆಯ ಗಾಳಕ್ಕೆ ನನ್ನ ಪ್ರೀತಿಮೀನು ಹೇಗೆ ಸಿಕ್ಕಿ ನುಲಿದಾಡಿತು ಮತ್ತು ನನ್ನ ಈ ಎಲ್ಲ ತಿಕ್ಕಲುತನವನ್ನೂ ನುಣ್ಣಗೆ ನೆಕ್ಕಿ ನೀರು ಕುಡಿವಂತೆ ಅವನು ಹೇಗೆ ಉಲ್ಟಾ ಹೊಡೆದ, ಮುಖ ಮೇಲೆತ್ತಿ ಬದುಕುವ ಆಸೆ ಪಟ ಹೇಗೆ ಪಲ್ಟಿಯಾಗಿ ಬಿದ್ದು ಚಿಕ್ಕಚೂರಾಯಿತು ಎಲ್ಲ ಹೇಳಿದೆ..ಇಷ್ಟೆಲ್ಲ ಆಗಿ ಅಪ್ಪ ಅಮ್ಮನ ಹೊಟ್ಟೆಗೆ ಬೆಂಕಿ ಸುರಿದು ನಾನು ಬದುಕಬೇಕಾ, ತಿರುಗಿ ಹೋಗಬೇಕಾ, ನಾನು ಮಾಡಿದ್ದೇ ಸರಿ ಅಲ್ವಾ.. ಈಗೇನು ಮಾಡಲಿ ನಾನು ಹೇಳಿ ಅಂತ ಮಾತು ಮುಗಿಸಿದೆ.

ಒಂದೈದು ನಿಮಿಷ ಮಾತಾಡಲಿಲ್ಲ. ಎದ್ದು ಕಿಟಕಿಯ ಬಳಿ ಹೋಗಿ ನಿಂತು ನನ್ನ ಕರೆದರು. ಪಕ್ಕಕ್ಕೆ ಹೋದವಳಿಗೆ ಅಲ್ಲಿ ಅಂಗಳದಲ್ಲಿ ಕಣ್ಣಾಮುಚ್ಚೆ ಆಡುತ್ತಿದ್ದ ಪುಟಾಣಿಗಳಲ್ಲಿ ಬಾಯ್ ಕಟ್ ಮಾಡಿಕೊಂಡು ಗುಂಡುಗುಂಡಗೆ ಇದ್ದವಳನ್ನ ತೋರಿ ಹೇಳಿದರು - ಅವಳು ಆಶಾ, ಅಮ್ಮ ಅಪ್ಪ ಮೀರತ್ತಿನ ಹಳ್ಳಿಯೊಂದರಲ್ಲಿ ಜೀತದಾಳುಗಳು. ಎಂಟು ವರ್ಷದ ಇವಳನ್ನ ಚಂಡೀಗರದ ಶ್ರೀಮಂತನಿಗೆ ಮದುವೆಗೆ ತಯಾರಿ ಮಾಡಿದ್ದರು. ಅಲ್ಲಿನ ಗ್ರಾಮಸೇವಾ ಸಂಘದ ಸಹಾಯಕಿಯಿಂದ ಆಗಬಹುದಾಗಿದ್ದ ಅನ್ಯಾಯ ತಪ್ಪಿ ಇವಳು ಸುರಕ್ಷಿತ ಬೆಳವಣಿಗೆಯಲ್ಲಿ ಬೆಳೆಯುವ ಮಗು. ಅವರಪ್ಪ ಅಮ್ಮ ಅತ್ತು ಕರೆದು ಮಾಡಿದರು. ನಮಗೆ ಓದಿಸೋಕ್ಕಾಗಲ್ಲ, ತುತ್ತಿಗೇ ಕಷ್ಟಪಡುವ ಜನ ನಾವು ಓದಿಸಿ ಮುಂದೆ ತರುವ ಚೈತನ್ಯ ಇಲ್ಲವೆಂದು. ನಮ್ಮ ಸಂಸ್ಥೆ ಜೊತೆಯಾಯಿತು. ಇವತ್ತು ೪ನೇ ತರಗತಿ ಓದುವ ಈ ಪುಟಾಣಿ ಕ್ಲಾಸಿಗೇ ಫಸ್ಟ್. ಚಂದ ಹಾಡುವ ಇವಳು ಇಂಡಿಯನ್ ಐಡಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇನ್ನೊಂದೆರಡು ತಿಂಗಳಲ್ಲಿ ಭಾಗವಹಿಸುತ್ತಾಳೆ. ಅವಳ ಕಣ್ಣಿನ ಹೊಳಪು ನೋಡು ಅದನ್ನ ನೋಡ್ತಾ ಇದ್ದರೆ ಅವಳ ನೋವಿನ ಕತೆ ನೆನಪಾಗುತ್ತಾ?

ಅಲ್ಲಿ ಮೂಲೆಯಲ್ಲಿ ದೊಡ್ಡವಳ ಹಾಗೆ ಕೂತುಕೊಂಡು ಎಲ್ಲರೂ ಗಲಾಟೆ ಮಾಡದ ಹಾಗೆ ಆಟವಾಡಿಸುತ್ತಿರುವ ಆ ಹುಡುಗಿ ನೋಡು. ವಸಂತಿ - ಕಾನ್ಪುರದ ಹಳ್ಳಿಯವಳು. ತುಂಬ ಬಡತನದ ಮನೆಯ ಅಪ್ಪ ಅಮ್ಮ ಊರಿನ ಜಮೀನ್ದಾರೀ ಅಟ್ಟಹಾಸಕ್ಕೆ ಬಲಿಯಾದರು. ಗಂಡನನ್ನು ಕೊಂದ ಜಮೀನ್ದಾರನ ವಿರುದ್ಧ ಕೇಸು ಹಾಕಿದ ಹೆಂಡತಿಯನ್ನ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಂದರು. ಆಟವಾಡಲು ಹೋಗಿದ್ದ ಮಗು ವಸಂತಿ ಮನೆಗೆ ಬಂದು ಕಂಗಾಲಾಗಿದ್ದರೆ ಅಲ್ಲಿನ ಸ್ವಸಹಾಯ ಮಹಿಳಾ ಮಂಡಲ ರಕ್ಷಿಸಿ ನಮಗೆ ತಂದುಕೊಟ್ಟರು. ಅವಳು ಈಗ ಏಳನೇ ತರಗತಿ. ಚೆನ್ನಾಗಿ ಓದುತ್ತಾಳೆ. ಭಾಷೆಗಳನ್ನು ಚೆನ್ನಾಗಿ ಮಾತಾಡುವ ಇವಳಿಗೆ ಭಾಷಾ ಶಾಸ್ತ್ರ ಕಲಿಯುವಾಸೆ. ಇವರಿಬ್ಬರೇ ಏನಲ್ಲ ಇಲ್ಲಿರುವ ಎಲ್ಲ ಪುಟ್ಟ ಮಕ್ಕಳ ಹಿಂದೂ ಒಂದೊಂದು ಗಾಢ ನೋವಿನ ಹಿನ್ನೆಲೆ. ಹಾಗೇ ಬಿಟ್ಟರೆ ಹೊಸಕಿಹೋಗಬಹುದಾಗಿದ್ದ ಈ ಹೂಗಳಿಗೆ ಚೂರೇ ಚೂರೂ ಜೊತೆಕೊಟ್ಟಿದ್ದಕ್ಕೆ ಅವರ ಕಲಿಕೆಗೆ ದಾರಿಯಾಗಿದ್ದಕ್ಕೆ ಹೇಗೆ ಹೊರಗಿನ ಎಲ್ಲ ನೋವು ಒತ್ತಡಗಳನ್ನು ಅದುಮಿ ಮೇಲೆ ಚಿಮ್ಮಿದ್ದಾರೆ ನೋಡಿದೆಯಾ? ಅವರ ನೋವು ಕಲಿಸಿದ ಪಾಠ ತುಂಬ ದೊಡ್ಡದು.

ಇಗೋ ಇಲ್ನೋಡು ಈ ಫೋಟೋ ಹೇಗನ್ನಿಸ್ತದೆ ನಿಂಗೆ? - ಒಂದು ಫ್ರೇಮ್ ಹಾಕಿದ ಕಪ್ಪುಬಿಳುಪು ಫೋಟೋ ಕೊಟ್ಟರು. ಐದು ನಗೆಮುಖಗಳು. ಅಪ್ಪ ಅಮ್ಮ ಮತ್ತು ಮೂವರು ಮಕ್ಕಳು. ಅರೇ ಇದೇನು ಅಮ್ಮ ದೀದಿಮಾನೆ.. ನೀವೇ ಅಲ್ಲವಾ...ಅವರನ್ನೇ ನೋಡಿದೆ.

ಸದಾ ಕಿರುನಗೆಯಿಂದ ಮಿನುಗುವ ಆ ಕಣ್ಣುಗಳು ಇದ್ದಕ್ಕಿದ್ದಂತೆ ಬ್ಲಾಂಕಾಗಿ ಹೋದವು. ನನ್ನ ಕೇಳು ಅಂತ ಉಬ್ಬಿ ನಿಂತಿರುತ್ತಿದ್ದ ಹಣೆಯ ಮೇಲೆ ಪುಟ್ಟ ಪುಟ್ಟ ನಿರಿಗೆಗಳು. ಮುದ್ದಾದ ಮುಖ ಬಾಡಿದ ಹಾಗೆ. ಅದು ನನ್ನದಾಗಿದ್ದ ಕುಟುಂಬ. ೮೪ ಡಿಸೆಂಬರ್ ಮೂರರ ಚುಮುಚುಮು ಚಳಿಯ ಬೆಳಗಿನಲ್ಲಿ ಧೂಳೀಪಟವಾಗಿ ಹೋಯಿತು. ಯೂನಿಯನ್ ಕಾರ್ಬೈಡ್ ಎಂಬ ಅನ್ನ ಹಾಕಿದ ಕಂಪನಿಯೇ ನನ್ನೆಲ್ಲವನ್ನೂ ಕಸಿದುಕೊಂಡ ರಾಕ್ಷಸನಾಯಿತು. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ಮನೆಗೆ ಬರಲಿಲ್ಲ. ಮಕ್ಕಳು ಕಣ್ಣುರಿ ಎದೆನೋವೆಂದು ಮಲಗಿದವರು ಒಬ್ಬೊಬ್ಬರಾಗಿ ಭೀಕರ ನೋವು ರೋಗಕ್ಕೆ ತುತ್ತಾಗಿ ಒಂದು ವರ್ಷದಲ್ಲೇ ಸತ್ತು ಹೋದರು. ಎಲ್ಲ ಮೀಥೈಲ್ ಐಸೋಸೈನೇಟ್ ಎಂಬ ವಿಷಾನಿಲ ಮತ್ತು ಬೇಜವಾಬ್ದಾರಿ ಕಂಪನಿಯೊಂದರ ಕಾರಣದಿಂದ. ನಂಗೆ ಜೀವನವೇ ರೋಸಿಹೋಗಿ ಬಿದ್ದು ಸಾಯೋಣವೆಂದು ಮನೆಯಿಂದ ಓಡಿಬಂದೆ. ಮನೆಯೆನ್ನುತ್ತಾರಾ ಅದನ್ನ? ಇಡೀ ಊರಿಗೆ ಊರೇ ಸ್ಮಶಾನವಾಗಿ ಹೋಗಿತ್ತು.

ಒಂದೇ ಸಲಕ್ಕೆ ಸಾವಿರಗಟ್ಟಲೆ ಜನಸತ್ತು ಹೋದರು. ದಿನಾ ದಿನಾ ಒಂದೊಂದು ಪರಿಚಯದ ಮನೆಯಲ್ಲಿ ಸಾವಿನ ಆಲಾಪ. ಬದುಕುಳಿದವರ ಕತೆ ಕೇಳುವುದು ಬೇಡ ಹೆಸರು ಗೊತ್ತಿಲ್ಲದ ನೂರು ರೋಗಗಳು, ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖ.. ಹುಚ್ಚು ಹುಚ್ಚೇ ಹಿಡಿಯುವಂತಾಗಿತ್ತು ನನಗೆ. ಅವರ ದನಿಯ ಕಂಪನ ನನಗೆ ಗೊತ್ತಾಗುವಷ್ಟಿತ್ತು. ಎರಡು ವರ್ಷಗಳ ನಂತರವೂ ಪರಿಹಾರ ಬರಲಿಲ್ಲ. ಬದುಕು ನಿರಾಶ್ರಿತರ ಕ್ಯಾಂಪಿನಲ್ಲಿ ದಿನದೂಡುತ್ತಿತ್ತು. ಅಲ್ಲಿ ಇನ್ಯಾರೋ ತಲೆಹಿಡುಕರು. ಬೆಂದಮನೆಯಲ್ಲೇ ಗಳಹಿರಿಯುವವರು. ರೋಸಿದ ಬದುಕು ಸಾಕಾಗಿ ಹೋಯಿತು.

ಹೀಗೇ ತಳ್ಳಿದ ದಿನಗಳ ಕೊನೆಗೆ ಒಬ್ಬ ದಯಾಳು ಮಹಿಳೆ ಸಿಕ್ಕಿದರು. ನನಗೆ ನರ್ಸಿಂಗ್ ಗೊತ್ತಿತ್ತು. ಬಾ ಅಂತ ಕರೆದುಕೊಂಡು ಹೋದವರು ದೂರದ ಜಬ್ಬಲ್ ಪುರದಲ್ಲಿ ನಿರ್ಮಿಸಿದ್ದ ಕ್ಯಾಂಪಿಗೆ ಸೇರಿಸಿದರು. ಅಲ್ಲಿ ಈ ವಿಷಾನಿಲ ದುರಂತಕ್ಕೆ ಸಿಕ್ಕಿ ಮನೆ, ಜನ, ಆರೋಗ್ಯ ಕಳೆದುಕೊಂಡು ನರಳುತ್ತಿದ್ದ ಜನರ ಶುಶ್ರೂಷೆ ಮಾಡಬೇಕಾಗಿತ್ತು. ಇನ್ನೊಬ್ಬರ ನೋವೊರೆಸುತ್ತ ನನ್ನ ನೋವು ಸಹನೀಯವಾಯಿತು. ನಮಗೆಲ್ಲ ನಮ್ಮ ನಮ್ಮ ದುಃಖಗಳೇ ದೊಡ್ಡದಾಗಿ ಭೂತದಂತೆ ಕಾಡುತ್ತವೆ. ಆದರೆ ಒಂದು ಗಳಿಗೆ ಸುಮ್ಮನೆ ನಿಂತು ಸುತ್ತ ನೋಡು - ನಿರ್ಗತಿಕರು, ಓದಿಲ್ಲದವರು, ಆರೋಗ್ಯವಿಲ್ಲದವರು, ಕಣ್ಣು, ಕೈ ಕಾಲಿಲ್ಲದವರು, ಬುದ್ಧಿಮಾಂದ್ಯರು, ತಮ್ಮದಲ್ಲದ ತಪ್ಪಿಗೆ ಬದುಕಿನ ವ್ರಣವನ್ನು ಹೊತ್ತು ತಿರುಗುವವರು..
ನಮ್ಮಂತ ಸೋತು ನಿಂತವರ ಜೊತೆಯೂ ಆಶ್ರಯವೆನ್ನಿಸುವಷ್ಟು ಸಹಾಯ ಬೇಕಾದವರು ಎಲ್ಲಿ ನೋಡಿದರೂ ಕಾಣಸಿಗುತ್ತಾರೆ.

ನನ್ನ ಆರೋಗ್ಯ, ಓದು, ಸಿಕ್ಕ ಚಂದದ ಬಾಲ್ಯ, ಕೆಲವೇ ವರ್ಷಗಳಾದರೂ ಉಂಡ ಕುಟುಂಬ ಜೀವನದ ನೆಮ್ಮದಿ ಇವೆಲ್ಲ ನನ್ನಲ್ಲಿ ಎಂತಹ ಕಷ್ಟವನ್ನೂ ಎದುರಿಸಿ ನಿಲ್ಲುವ ಬದುಕನ್ನ ಪ್ರೀತಿಸುವ ಸಹನೆ ಬೆಳೆಸಬೇಕು ಅಲ್ಲವಾ? ಕಷ್ಟದಲ್ಲಿ ತೆವಳುತ್ತಿರುವವರಿಗೆ ಹುಲ್ಲುಕಡ್ಡಿಯೇ ಆದರೂ ಬಯಸಿದ ಆಸರೆ ಕೊಡಲಾಗದಾ? ಐದಾರು ವರ್ಷಗಳು ಆ ಕ್ಯಾಂಪಲ್ಲಿ ಕಳೆದ ಅನುಭವ ನನ್ನ ಬದುಕನ್ನ ತಿದ್ದಿತು. ರೋಸಿಹೋಗಿದ್ದ ಬದುಕು ನೂರೆಂಟು ಜೀವಗಳಿಗೆ ತಂಪು ನೆರಳನ್ನು ಕೊಟ್ಟ ಪವಾಡ ನೋಡಿದವಳಿಗೆ ಇನ್ನೂ ಏನೇನು ಮಾಡಬಹುದೆನ್ನುವ ಉಮೇದು ಹುಟ್ಟಿತು.

ಅಷ್ಟರಲ್ಲಿ ಪರಿಚಯವಾಯಿತು ನನ್ಹಿ ಕಲಿ ಅನ್ನುವ ಈ ಸಂಸ್ಥೆ. ದಯಾಳುವಾದ ಅದೃಷ್ಟವಂತರು ಕೊಡಮಾಡಿದ ದೇಣಿಗೆಯಲ್ಲಿ ಒಂದೊಂದೇ ಪುಟ್ಟ ಹೂವಿಗೆ ನೀರೆರೆದು, ಮಣ್ಣೂಡಿ, ಕೋಲು ಕೊಟ್ಟು ನಿಲ್ಲಿಸುವ ಕೆಲಸ. ಒಂದೊಂದು ಮಗುವಿನ ವರ್ಷದ ಖರ್ಚು ಸಾವಿರ ಚಿಲ್ಲರೆ ಬರುತ್ತದೆ. ಶಾಲೆಗೆ ಕಳಿಸಲಾರದ ಬಡ ತಂದೆತಾಯಿಗಳನ್ನು ಗುರುತಿಸಿ, ಅವರಿಗೆ ತಿಳಿಹೇಳಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವ ಕೆಲಸ. ಅವರ ಶಾಲೆಯ ವೆಚ್ಚವನ್ನ ವರ್ಷಪೂರ್ತಿ ಬರಬಹುದಾದ ಇತರೇ ವೆಚ್ಚವನ್ನ ನನ್ಹಿ ಕಲಿ ನೋಡಿಕೊಳ್ಳುತ್ತದೆ. ಒಬ್ಬ ದಯಾಳು ಒಂದು ಮಗುವನ್ನು ಸ್ಪಾನ್ಸರ್ ಮಾಡಬಹುದು. ವರ್ಷಕ್ಕೆ ಅಥವಾ ಹಲವರ್ಷಗಳಿಗೆ. ನನ್ಹಿ ಕಲಿ ಆ ಮಗು ಸರಿಯಾಗಿ ಶಾಲೆಗೆ ಹೋಗಿ ಓದಿ ಬರೆದು, ಓದು ಮುಂದುವರಿಸುವಂತೆ, ವಿದ್ಯಾವಂತೆಯಾಗುವಂತೆ ನೋಡಿಕೊಳ್ಳುತ್ತದೆ. ಹೀಗೇ ದೇಶದ ತುಂಬಾ ಮತ್ತು ದೇಶದ ಹೊರಗೂ ಇರುವ ಪುಣ್ಯವಂತರು ಜೀವನಪ್ರೀತಿಯವರು ಕೊಟ್ಟ ಸಹಕಾರ ಮತ್ತು ಸಹೃದಯತೆಯಿಂದ ಇವತ್ತು ನಮ್ಮ ಹಳ್ಳಿಗಳ ನೂರಾರು ಹೆಣ್ಣು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ತೀರಾ ಬಡತನ ಕಷ್ಟ ಮತ್ತು ಅನ್ಯಾಯಕ್ಕೆ ಸಿಲುಕಿದವರಿಗೆ ಅನಾಥರಿಗೆ ಆಶ್ರಯವಾಗಿ ಈ ಉದಯಮಹಲ್ಲಿದೆ. ಉಳಿದೆಲ್ಲ ಮಕ್ಕಳೂ ಅವರವರ ಮನೆಯಲ್ಲಿದ್ದೇ ಶಾಲೆಗೆ ಹೋಗುತ್ತಾರೆ. ನಮ್ಮ ಸ್ವಯಂಸೇವಕರು, ಅಲ್ಲಲ್ಲಿ ಇದ್ದು ಅವರ ದೇಖರೇಖೆ ನೋಡುತ್ತಾರೆ.

ಈಗ ಹೇಳು ನೀನು ಸಾಯಬೇಕಿತ್ತಾ? ಅವನ್ಯಾವನೋ ತಲೆಕೆಟ್ಟವನು ನಿನ್ನ ಭಾವನೆಗಳ ಜೊತೆ ಆಟಾಡಿದ ಅಂತ, ಬದುಕೇ ಬೇಡಾ ಅಂತ ತಳ್ಳಿ ನಡೆಯುವ ಧಾರ್ಷ್ಟ್ಯವೇನು? ನಿನ್ನ ಸಮೃದ್ಢ ಬಾಲ್ಯ, ಕಲಿತ ಓದು, ತುಂಬು ಆರೋಗ್ಯವನ್ನ, ಒಂದು ಪುಟ್ಟ ಹೂವನ್ನೂ ಅರಳಿಸದೆ ನಗಿಸದೆ ಯಮುನೆಯ ಪಾಲು ಮಾಡಹೊರಟಿದ್ದೆಯಲ್ಲಾ - ಎತ್ತಿ ಬೆಳೆಸಿದ ನಿನ್ನಪ್ಪ ಅಮ್ಮನಿಗೆ ತೋರಿದ ಅತಿ ಹೇಯ ಅವಮರ್ಯಾದೆಯಲ್ಲವಾ ಇದು? ನಿನಗೆ ಕೊಟ್ಟ ಬದುಕನ್ನ ತಿರಸ್ಕರಿಸಿ ನಡೆಯುವುದ್ಯಾವ ಮಹಾ ಘನಂದಾರಿ ಕೆಲಸ. ಯಾರ್ ಬೇಕಾದ್ರೂ ಮಾಡಬಹುದು. ಆ ನೋವನ್ನ ಮೆಟ್ಟಿ ನಿಂತು ಇನ್ನೊಬ್ಬರ ನೋವಿಗೆ ಹೆಗಲು ಕೊಡುವ ಕೆಲಸವಿದೆಯಲ್ಲಾ ಅದು ದೇವರ ಕೆಲಸ. ಪ್ರೀತಿಯಿಂದ ಆದರಿಸಿದ ಬದುಕಿನ ಕೆಲವೇ ಘಳಿಗೆಗಳಿಗೆ ನಾವು ಸಲ್ಲಿಸಬಹುದಾದ ಒಂದು ಪುಟ್ಟ ಕೃತಜ್ಞತೆ. ನಿನ್ನ ಒಂದು ನಗು, ಒಂದು ಬೆಚ್ಚನೆ ಸ್ಪರ್ಶ ಯಾವ ನೊಂದ ಜೀವದ ಮನವನ್ನ ಅರಳಿಸುತ್ತದೆಯೋ ಯಾರು ಬಲ್ಲರು?

ನನ್ನ ಕಣ್ಣಲ್ಲಿ ನೀರಿಳಿಯುತ್ತಿತ್ತು. ಹತ್ತಿರ ಹೋಗಿ ಅವರನ್ನು ಬಳಸಿಕೊಂಡು ಹೇಳಿದೆ. ದೀದಿಮಾ ನೀವು ನನ್ನ ದಾರಿಗೆ ಬೆಳಕಾದಿರಿ. ಊರಿಗೆ ಹೋದವಳು ನನ್ಹಿ ಕಲಿಯರನ್ನು ಸ್ಪಾನ್ಸರ್ ಮಾಡುತ್ತೇನೆ. ಅಷ್ಟೆ ಯಾಕೆ ನಮ್ಮೂರಿನ ಹಳ್ಳಿಗಳಲ್ಲಿ ನಿಮ್ಮ ನನ್ಹಿ ಕಲಿಯ ಶಾಖೆ ತೆರೆಯೋಣ. ನನ್ನ ನೋವಿನ ಹೊರತಾಗಿಯೂ ಇರುವ ಬದುಕಿನ ನೂರು ಸವಿಚಿತ್ರಗಳನ್ನ, ಪುಟ್ಟ ಪುಟ್ಟ ಹೂಗಳ ಅರಳುವಿಕೆಯನ್ನ ಅನುಭವಿಸುತ್ತ ಬಂದ ಬದುಕನ್ನು ಪ್ರೀತಿಯಿಂದ ಬದುಕುತ್ತೇನೆ. ಮಾತಾಡಲು ಇನ್ನೇನಿದೆ.. ಅಲ್ಲಿ ಹೂಗಳಿವೆ. ನಾನು ನೀರುಣಿಸಬೇಕಿದೆ.

ದೀದಿಮಾನ ನೀರು ತುಂಬಿದ ಕಣ್ಣಲ್ಲಿ ಹೊಸಹೊಳಪು.

ಊರಿಗೆ ಬಂದವಳು ತೋಟವನ್ನೇ ಮಾಡಿದೆ. ನಾನೊಬ್ಬಳೇ ಅಲ್ಲ ಎಲ್ಲ ಸ್ನೇಹಿತರಿಗೂ ಹೇಳಿದೆ.
ಹತ್ತು ವರ್ಷಗಳ ಕೃಷಿಯಲ್ಲಿ ಜೊತೆಯಾಗಿ ಬಂದು ಸಂಗಾತಿಯೂ ಆದವನು ಸುಧಾಂಶು ಎಂಬ ಸುಹೃದ. ಮುದ್ದು ಮಗ ಸುಹಾಸ ಇದ್ದಾನೆ. ಇವತ್ತು ಅವನಿಗೆ ಜೊತೆಯಾಗಿ ಬೆಳೆಯಲು, ಬೆಹ್ರಾಮ್ ಪುರದ ಕಲಿ - ಸುಹಾನೀ ಬರುತ್ತಿದ್ದಾಳೆ.

ಮೇರೇ ಘರ್ ಆಯೀ ಏಕ್ ನನ್ಹಿ ಪರೀ - ಅಂತ ಅವಳು ಬಂದ ಕೂಡಲೇ ಹಾಡಲು ಹೇಳಿಕೊಡುತ್ತಿದೇನೆ ಸುಹಾಸನಿಗೆ..

ಈ ಲಿಂಕಿನಲ್ಲಿ ನನ್ಹಿ ಕಲಿಯ ಹೆಚ್ಚಿನ ವಿವರವಿದೆ. http://www.ashanet.org/projects/project-view.php?p=729 ನೋಡಿ ನೀವೂ ಹೂವರಳಿಸಬಹುದು.

Thursday, December 13, 2007

ಚಾಂದ್ ಸೀ ಮೆಹಬೂಬಾ

ಚಾಂದ್ ಸೀ ಮೆಹಬೂಬಾ ಹೋ ತುಮ್ ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ...

ತುಂಬು ಚಂದಿರನಂತ ಹುಡುಗಿಯಿರಬಹುದೆ ಅವಳು ಅಂದುಕೊಂಡಿದ್ದೆ ಅವತ್ಯಾವತ್ತೋ ಅಮ್ಮ ತಂದಿಟ್ಟುಕೊಂಡ ಭಾವಗೀತೆಯ ಕ್ಯಾಸೆಟ್ಟಿನಲ್ಲಿ ಬಾರೆ ನನ್ನ ದೀಪಿಕಾ ಕೇಳಿದಾಗ.. ನನಗೆ ಆಡುವ ವಯಸ್ಸು..ಮತ್ಯಾವತ್ತೋ ಹೈಸ್ಕೂಲಿನ ಕ್ಲಾಸ್ ಮೇಟಿಗೆ ನೋಟ್ ಬುಕ್ಕು ಕೊಟ್ಟಿದ್ದು ನೋಡಿದ ಗೆಳೆಯರು ಚುಡಾಯಿಸಿದಾಗ ನಕ್ಕು ಸುಮ್ಮನಾಗಿದ್ದೆ ಗೊತ್ತಿತ್ತು ಇವಳಲ್ಲ ಅವಳು ಅಂತ. ಕಾಲೇಜಿಗೆ ಹೋಗುವಾಗ ಎಲ್ಲರೂ ಕಣ್ಣೆತ್ತಿ ನೋಡಬೇಕೆಂದು ಚಂದವಾಗಿ ಟ್ರಿಮ್ಮಾಗಿ ಹೋಗಿದ್ದು ಹೌದು, ಆದ್ರೆ ಅವಳು ಸಿಗಲೇಬೇಕೆಂದೇನೂ ಅಲ್ಲ.. ರಜೆಯಲ್ಲಿ ಊರಲ್ಲಿ ಅಕ್ಕತಂಗಿಯರು ಚುಡಾಯಿಸುವಾಗ, ಅಣ್ಣ ಅವನ ಇಂಜಿನಿಯರಿಂಗ್ ಗೆಳತಿಯರ ವಿಷಯ ಹೇಳುವಾಗ ಮನದಲ್ಲಿ ಪ್ರೀತಿಗೂಡಿನ ಮೊದಲ ಕಡ್ಡಿ.. ಅಮ್ಮ ಆಗಾಗ ತಂದಿಡುವ ಹೊಸ ಹೊಸ ಭಾವಗೀತಗಳಿಂದ ಅಲ್ಲಲ್ಲಿ ಕಡ್ಡಿ ಕದ್ದು ಗೂಡು ಒಂದು ಶೇಪಿಗೆ ಬರುತ್ತಿತ್ತು.. ಕನಸೆಲ್ಲ ಕಣ್ಣಲ್ಲಿ ನೆಲೆಯಾಗಿ ಬಂದ ಗಳಿಗೆಯಂತೋ ಏನೋ ಅಲ್ಲೆ ಮನೆ ಮಾಡಿ ಸುಬ್ಬಾ ಭಟ್ಟರ ಮಗಳಿಗೆ ಕಾಯತೊಡಗಿದೆ!

ಅವತ್ತು ಕಾರಿಡಾರಲ್ಲಿ ಜೋರು ಜೋರಾಗಿ ಬೀಸು ಹೆಜ್ಜೆ ಬೀಸುಗೈ ಮಾಡುತ್ತ ನಡೆದವನ ನೋಟ್ ಬುಕ್ಕಿಗೆ ನಿನ್ನ ದಾವಣಿ ಸಿಕ್ಕಿದ್ದು ಹ್ಯಾಗೆ. ಸಿಕ್ಕ ದಾವಣಿಯನ್ನು ಬಿಡಿಸಿಕೊಳ್ಳುತ್ತ ಸಿಡುಕುಗಣ್ಣಲ್ಲಿ ನೋಡಿದ ನಿನ್ನ ನೋಟ ನನ್ನ ಸಿಕ್ಕಿಸಿಹಾಗಿದ್ದು ಹೇಗೆ? ಯಾರು ಹೇಳಬಲ್ಲರು ಇದನ್ನ..
ಅಂತೂ ಇಂತೂ ಜೋಪಾನ ಮಾಡಿ ಕಟ್ಟಿದ ಗೂಡಲ್ಲಿ ನಿನ್ನೆಡೆಗಿನ ಪ್ರೀತಿಮೊಟ್ಟೆ.. ಕಾವು ಕೊಡುತ್ತೀಯಾ ನೀನು? ಹೇಗೆ ಕೇಳಲಿ ಅಂತ ಗೊತ್ತಾಗದೆ ಒಂದ್ವಾರ ಒದ್ದಾಡಿದೆ..ಬೆಳಿಗ್ಗೆ ಕ್ರಿಕೆಟ್ ಪ್ರಾಕ್ಟೀಸಿಗೆ ಹೋದ್ರೆ ಎಲ್ಲಾ ಬಾಲುಗಳೂ ವೈಡೇ..ಬ್ಯಾಟಿಂಗಲ್ಲಿ ಪ್ರತಿಸಲವೂ ಮೊದಲ ಬಾಲಿಗೇ ಔಟು.. ಕೋಚ್ ಗೆ ಸಿಟ್ಟು ಏನಪ್ಪಾ ಕ್ಯಾಪ್ಟನ್ ಆಗಿ ಹೀಗ್ ಮಾಡಿದ್ರೆ ಹೇಗೆ? ಏನಂತ ಹೇಳಲಿ ನಾನು.. ನನ್ನ ಗುರಿಯೆ ತಪ್ಪೋಗಿದೆ ಅಂತಲೆ ಗುರಿಯೊಂದು ಹೊಸತಾಗಿ ಮೂಡಿದೆ ಅಂತಲೆ? ಡಿಫೆನ್ಸೇ ಇಲ್ಲದೆ ಬರಿಗೈಯಲ್ಲಿ ನಿಂತಿದೀನಿ ಅವಳಿಗಾಗಿ, ಭ್ಯಾಟಿಂಗ್ ಹೆಂಗ್ ಮಾಡಲಿ ಅಂತಲೇ?
ಏನೋ ಒಟ್ಟು ಆ ವಾರ ಕಳೆದೆ.

ಮುಂದಿನ ವಾರ ಅವಳೇ ಬರಬೇಕಾ. ಲೈಬ್ರರಿಯಲ್ಲಿ ನಾನು ತಗೊಂಡ ಪುಸ್ತಕವೇ ಅವಳಿಗೆ ಬೇಕಿತ್ತಂತೆ. ಲೈಬ್ರರಿಯನ್ ಕೊಟ್ಟ ಡೀಟೈಲ್ಸ್ ತಗೊಂಡು ನನ್ನತ್ರ ಬಂದಿದ್ದಳು..
ಓಹ್ ನೀನಾ ಅನ್ನುವ ಅನ್ನುವ ಅಚ್ಚರಿತುಂಬಿದ ಕಣ್ಣುಗಳ ಆಳಕ್ಕೆ ಇಳಿದವನಿಗೆ ಮತ್ತೆ ಮೇಲೆ ಬರಲಾಗಲಿಲ್ಲ. ನಾನೇನೂ ಹೇಳದೆ ಅವಳಿಗೆ ಗೊತ್ತಾಗಿಹೋಗಿತ್ತು. ಅವಳ ಕೆನ್ನೆಕೆಂಪು ನಂಗೆ ಅದನ್ನೇ ಸಾರಿ ಸಾರಿ ಹೇಳಿತು.. ತಗೋಳಿ ಅಂತ ನೋಟ್ ಬುಕ್ ಕೊಡಕ್ಕೆ ಹೋದೆ - ಅವಳು ಎಳೆಚಿಗುರಿನಂತ ಬೆರಳುಗಳಲ್ಲಿ ಆ ಮುದ್ದಾದ ಬಾಯಿ ಮುಚ್ಚಿಕೊಂಡು ನಗುನಗುತ್ತ ತಲೆಯಾಡಿಸಿ ಹೊರಟು ಹೋದ ಮೇಲೆ ಗೊತ್ತಾಯಿತು. ಅವಳಿಗೆ ಬೇಕಿರುವುದು ನನ್ನ ನೋಟ್ ಬುಕ್ಕಲ್ಲ ಲೈಬ್ರರಿಯಲ್ಲಿ ತಗೊಂಡು ಎರಡು ವಾರ ಡ್ಯೂ ಆಗಿರೋ ಪುಸ್ತಕ ಅಂತ.. ಏನ್ ಮಚ್ಚಾ ಅಂತ ಗೆಳೆಯರು ಕಂಬಕಂಬಗಳ ಸಂದಿಯಿಂದ ಹೊರಬರುತ್ತಿದ್ದರೆ ಏನು ಉತ್ತರ ಕೊಡಲೂ ಹೊಳೆಯುತ್ತಿಲ್ಲ. ಕುಳಿತಲ್ಲಿ ಅವಳು, ನಿಂತಲ್ಲಿ ಅವಳು, ನೋಡಿದಾ ಕಡೆಯೆಲ್ಲ ಅವಳೇ ಅವಳು.. ವೈದೇಹಿ ಏನಾದಳೋ ಎಂದು ಪರಿತಪಿಸುವ ರಾಮನಿಗಾದರೂ ಗೊತ್ತಿತ್ತು ಅವಳು ಎಲ್ಲಿ ಹೋಗಿದ್ದರೂ ನನ್ನವಳೇ, ನನಗಾಗೇ ಕಾಯುವಳೆಂದು.. ನಾನು ಅವಳು ಮಿಂಚುಕಣ್ಣನ್ನ ಮಿಂಚಿಸಿ ಅಲ್ಲಲ್ಲಿ ಓಡಾಡುವಾಗ ಆ ಕಣ್ಣ ಮಿಂಚು ನಂಗೇನಾ ಇನ್ಯಾರಿಗಾದ್ರೂ ತಾಗುತ್ತಿದೆಯಾ ಅಂತ ನೋಡಬೇಕಿತ್ತು.

ಇಷ್ಟೆಲ್ಲ ಆಗಿ ಇನ್ನೇನೇನೋ ಆಗಿ ಮಿಂಚುಕಣ್ಣಿನ ತಂಪು ತಿಂಗಳಿನ ಅವಳು ಹೂಗೊಪ್ಪಲಿನ ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ಸೀತೆಯಂತ ಗೊತ್ತಾಯಿತು. ಅತ್ರಿಯವರ ಹಾಡು ಕಿವಿಯಲ್ಲಿ ಗುನುಗುತ್ತಿದ್ದರೆ, ನಾನು ಅವಳಷ್ಟೇ ಬೆಳ್ಳಗಿದ್ದೇನಾ, ಎಲ್ಲಾದರೂ ಅವಳ ಕೂದಲಿಗೆ ಹೋಲಿಸಿಕೊಂಡುಬಿಟ್ಟರೆ ಅಂತ ದಿಗಿಲಾಗುತ್ತಿತ್ತು.. ಸಧ್ಯ ನಮ್ದು ಜೋಯಿಸರ ಮನೆಯಲ್ವಲ್ಲಾ ಅಂತ ಸಮಾಧಾನ..

ಆಮೇಲೆ ನಡೆದಿದ್ದು ನಾನು ಬದುಕಿಡೀ ನೆನಪಿನಲ್ಲಿ ಸವಿಯಬಹುದಾದ ಮಾಧುರ್ಯದ ದಿನಗಳು. ಬೈಕಿರಲಿಲ್ಲ, ಒಂದೊಂದ್ಸಲ ಎರಡು ಕಾಫಿಗೆ ದುಡ್ಡಿರ್ತಿರಲಿಲ್ಲ, ಸಿನಿಮಾಕ್ಕೆ ಊರಲ್ಲಿ ಹೋಗುವಂತಿರಲಿಲ್ಲ, ಬೇರೆ ಊರಿಗೆ ಜೊತೆಯಾಗಿ ಹೋಗಿಬರುವ ಪಯಣದ ಬಸ್ ಸ್ಟಾಂಡಿಗೆ ಇಬ್ಬರೂ ಜೊತೆಯಾಗಿ ಹೋಗಿ ಬಸ್ ಹತ್ತುವಂತಿಲ್ಲ, ಸಂಜೆ ನೆನಪಾದರೆ ಮೆಸೇಜು ಕುಟ್ಟಲು ಮೊಬೈಲ್ ಇರಲಿಲ್ಲ, ಮನೆಯ ಫೋನಿಗೆ ಕರೆಮಾಡಲು ಧೈರ್ಯವಿರಲಿಲ್ಲ, ಎಲ್ಲೂ ನನ್ನ ಪ್ರೀತಿಯ ಮೊಟ್ಟೆಗೆ ಕಾವು ಸಿಕ್ಕಿ ಮರಿಯಾಗುತ್ತಿರುವ ಸುಳಿವನ್ನೂ ಬಿಟ್ಟುಕೊಡುವಂತಿರಲಿಲ್ಲ.. ಆದರೆ ಆ ಕಾವು - ಆಹ್ ಎಷ್ಟು ಹಿತ.. ಕಾರಿಡಾರಿನಲ್ಲಿ ನಡೆಯುತ್ತ ಅಲ್ಲಿ ನನ್ನೆಡೆ ಹೊರಳುವ ಮಿಂಚುನೋಟದಲ್ಲಿ - ಹಗಲಿನಲಿ ಕಾಣುವುದು ನಿಮ್ಮಾ ಕನಸೂ, ಇರುಳಿನಲಿ ಕಾಡುವುದು ನಿಮ್ಮ ನೆನಪೂ - ರತ್ನಮಾಲಾರ ದನಿ ಉಲಿಯುತ್ತಿತ್ತು.. ನಿನದೇ ನೆನಪೂ ದಿನವೂ ಮನದಲ್ಲೀ ಅಂತ ಗುಂಯ್ ಗುಡುವ ಪಿ.ಬಿ.ಶ್ರೀನಿವಾಸರ ದನಿಯ ಹಾಡು ನನ್ನ ಮನಸು.. ಮಳೆಗಾಲದಲ್ಲಿ ಬೆಚ್ಚಗೆ ಒಲೆಮುಂದೆ ಕೂತಂತೆ, ಉರಿಬೇಸಿಗೆಯಲ್ಲಿ ನೇರಳೆಮರದ ಅಡಿಯಲ್ಲಿ ಕೂತು ಹೆಕ್ಕಿ ತಿಂದ ಹಣ್ಣರುಚಿಯಂತೆ, ತಂಪಿನಂತೆ, ಮಾಗಿಚಳಿಯ ಬೆಳಗಲ್ಲಿ ಮೈಸುತ್ತಿಕೊಂಡ ಕಂಬಳಿಯಂತೆ - ಹೀಗೇ ಅಂತ ಹೇಗೆ ಹೇಳಲಿ..

ಈಗೇನ್ ಗೊತ್ತಾ, ಬೇಕೆಂದಾಗ ಸುತ್ತಲು ಬೈಕಿದೆ, ಸಂಜೆ ಯಾವ ರೆಸ್ಟುರಾದಲ್ಲಿ ಬೇಕಾದರೂ ಕೂತು ತಿನ್ನಬಹುದಾದ ಬ್ಯಾಲನ್ಸಿದೆ,ಕೆಲಸವಿದೆ, ಯಾರು ನೋಡಿ ಕೇಳಿದರೂ ಉತ್ತರಿಸುವ ಧೈರ್ಯವಿದೆ," ಯಾಕೋ ನಿಂಗೆ ಯಾರೂ ಇಷ್ಟ ಆಗ್ತಿಲ್ಲ,ಹೋಗ್ಲಿ ನೀನೇ ಹುಡುಕ್ಕೋ" ಅಂತ ಹೇಳುವ ಅಮ್ಮ ಇದಾಳೆ.. ಆದ್ರೇನ್ ಮಾಡಲಿ

ನನ್ನ ಸೀತಾದೇವಿ ಬೇರೆ ರಾಮನನ್ನೇ ಹುಡುಕಿಕೊಂಡುಬಿಟ್ಟಿದ್ದಾಳೆ! ಕಾರಣ ಅವಳು ಹೇಳಲಿಲ್ಲ , ಹೇಳುವುದಿಲ್ಲ. ನನಗೆ ಬೇಡವೂ ಬೇಡ.

ಪಿಲಿಯನ್ ತುಂಬುವುದಿಲ್ಲ, ರೆಸ್ಟುರಾ ತಿಂಡಿ ಯಾವತ್ತಿಗೂ ಇನ್ನೊಂದ್ಸ್ವಲ್ಪ ಹೊತ್ತಿರಲಿ, ಈಗ್ಲೇ ಖಾಲಿಯಾಗುವುದು ಬೇಡ ಅನ್ನಿಸುವುದಿಲ್ಲ, ಸಿನಿಮಾಗೆ ಕ್ಯೂ ನಿಂತು ಅಡ್ವಾನ್ಸ್ ಟಿಕೆಟ್ ಖರೀದಿಸುವ ಉತ್ಸಾಹವಿಲ್ಲ, ಯಾರು ನೋಡಿದರೇನು ಬಿಟ್ಟರೇನು ಅನ್ನುವ ಅಸಡ್ಡಾಳತನ.. ಅಮ್ಮನ ಸಲಹೆಗೆ ಹುಂ ಅನ್ನುವ ಬಿಗುಮಾನದ ಹೊರತಾಗಿ ಇನ್ನೇನಿದೆ.. ನನ್ನ ಹಕ್ಕಿ ಮೊಟ್ಟೆ ಮರಿಯಾದ ಕೂಡಲೇ ಪುರ್ರಂತ ಹಾರಿಹೋಗಿದೆ. ಮರಿಗೆ ನನ್ನ ನೆನಪಿನ ತುತ್ತಿನೂಟ.. ಗೂಡಿನ ಕಡ್ಡಿ ಒಂದೊಂದೇ ಬೀಳುತ್ತಿದೆ. ಚಳಿಗಾಲಕ್ಕೆ ಬೆಚ್ಚಗಿರಿಸಲು ಹತ್ತಿಪುರುಳೆ ತರಬೇಕೆನಿಸುತ್ತಿಲ್ಲ.. ಈಗ ಭಾವಗೀತೆಗಳ ಮೆರವಣಿಗೆ ಮುಗಿದು ಗಝಲುಗಳ ಸಂಜೆಪಯಣ.. ಚಮಕ್ತೇ ಚಾಂದ್ ಕೋ ಟೂಟಾ ಹುವಾ ತಾರಾ ಬನಾಡಾಲಾ..

ಇಲ್ಲ ನನಗೆ ಸಿಟ್ಟಿಲ್ಲ ದುಃಖವಿಲ್ಲ, ಏನೂ ಇಲ್ಲದ ಭಾವವನ್ನು ಭರಿಸುವ ತಾಕತ್ತಿಲ್ಲ. ಹೊಸದೊಂದು ಗೂಡಿನ ನೆನಪು ಮೈಯನ್ನು ಮುಳ್ಳಾಗಿಸುತ್ತದೆ. ದೇವಾನಂದನ ತರ - ತೇರೇ ಘರ್ ಕೇ ಸಾಮ್ನೇ - ಅಂತ ಅವಳ ಮನೆ ಮುಂದೇನೇ ಮನೆ ಮಾಡ್ಕೊಂಡ್ ಬಿಡಲಾ ಅಂತ ಯೋಚಿಸಿ ನನ್ನಷ್ಟಕ್ಕೆ ನಾನೆ ನಗುತ್ತೇನೆ.. ಉಂಹುಂ ನನ್ನ ದಾರಿಯಲ್ಲ ಅದು..

ಅವಳ ಗೂಡು ಬೆಚ್ಚಗಿರಲಿ.

ನಾನು ಮುಸಾಫಿರ್ ಹುಂ ಯಾರೋ.. ಅಂತ ಗುನುಗುವ ಕಿಶೋರನ ಉಲಿಯಾಗಿದ್ದೇನೆ. ಗೂಡಿನ ಯೋಚನೆ ಇಲ್ಲದೆ ಹಾಯಾಗಿದ್ದೇನೆ..

ಚಾಂದ್ ಸೀ ಮೆಹಬೂಬಾ ಹೈ ವೋ - ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ.. ಆದ್ರೆ.. ಚಂದಿರನಷ್ಟೇ ದೂರ.. ಚಂದಿರನಷ್ಟೇ ಹತ್ತಿರ..

(ತಪ್ಪು ತಿದ್ದಿದ ತ್ರಿವೇಣಿಯಕ್ಕನಿಗೆ ಆಭಾರಿ)

Tuesday, December 11, 2007

ವೈಶಾಲಿಯಲ್ಲಿ...

ಬುದ್ಧನ ಊರಂತೆ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು, ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ. ಸುತ್ತ ನೋಡಿದಲ್ಲಿ ಹಸಿರು, ಸಮೃದ್ಧಿ, ಗಂಟೆಗೊರಳ ಕಾಮಧೇನುಗಳ ನಲ್ದಾಣ, ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ, ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ.. ಮೆರೆದ ಜಾಗವಂತೆ.. ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು. ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು. ಆ ಎಲ್ಲ ಕನಸಿನಂತಹ ದಿನಗಳ ನೆರಳು ಬಿದ್ದಿರುವ ಜಾಗದ ಗಾಳಿಯನ್ನೊಮ್ಮೆ ಉಸಿರೊಳಗೆ ಸೇರಿಸಬೇಕೆಂದು..

ಇಲ್ಲ ಅಯ್ಯೋ ಇದಲ್ಲ ಇದಲ್ಲ ಅದು...

ನಿನ್ನೆ ಕೆಲಸ ಮುಗಿಸಿ ಹಗುರಾದವಳು ಕೆಲಕ್ಷಣಗಳ ಮಟ್ಟಿಗೆಂದು ಟೀವಿ ಹಾಕಿ ಹೈರಾಣಾಗಿ ಹೋದೆ. ಆ ನನ್ನ ವೈಶಾಲಿಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಟ್ರಾಕ್ಟರಿಲ್ಲ, ಎತ್ತಿಲ್ಲ ಅಂತ ಹೇಳಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದರು. ಹಿಂದೆ ಅವರನ್ನು ಮ್ಯಾನೇಜ್ ಮಾಡುತ್ತ ನಿಂತಿದ್ದ ಅಜ್ಜನಂತ ರೈತ.. ಅವನ ಮನೆಯಲ್ಲೂ ಮಕ್ಕಳಿರಬಹುದು! ಅವನಿಗದು ಬೇಕಿಲ್ಲ. ಮಾಲೀಕ ಕೊಟ್ಟ ಜೀತದ ಮಕ್ಕಳನ್ನು ಮನುಷ್ಯರಂತೆ ನೋಡಬೇಕೆಂದಿಲ್ಲ.. ಮಾಲಿಕ ಖುಶಿಯಾಗಬೇಕು. ನೆಲ ಉತ್ತಬೇಕು. ಫಸಲು ಬೆಳೆಯಬೇಕು..ಮನೆಯಲ್ಲಿ ತುತ್ತಿನ ಚೀಲ ತುಂಬಬೇಕು. ಆ ಪುಟ್ಟ ಜೀವಗಳು..ಅಪ್ಪ ಅಮ್ಮರೆಂದೋ ಮಾಡಿದ ಸಾಲಕ್ಕೆ ಅಕ್ಷರಶಃ ನೊಗ ಹೊರುತ್ತಿದ್ದಾರೆ. ಅವರಪ್ಪ ಅಮ್ಮ ಆರಿಸಿ ಕಳಿಸಿದ ನೇತಾ ಯೂನಿಯನ್ ಮಿನಿಸ್ಟರ್ (ರೂರಲ್ ಡೆವಲಪ್ ಮೆಂಟ್ ಬೇರೆ) ಆಗಿ ಮನೆಯಲ್ಲಿ ಕ್ರಿಸ್ಮಸ್ ರಜೆಗೆ ಯಾವ ರೆಸಾರ್ಟಿಗೆ ಮಕ್ಕಳನ್ನು ಕರೆದುಕೊಂಡು ಹೋಗಲೆಂದು ಯೋಚನೆ ಮಾಡುತ್ತಿರುತ್ತಾನೆ. ಅವನ ತಮ್ಮನೇ ಆದ ಜಮೀನ್ದಾರ ನಡೆಸುವ ಈ ಅಮಾನುಷ ಕೃತ್ಯ ಅವನಿಗೆ ಗೊತ್ತೇ ಇಲ್ಲ. ಮೀಡಿಯಾ ಪ್ರಶ್ನೆ ಮಾಡಿದರೆ - ಇಲ್ಲಪ್ಪ ನನ್ ತಮ್ಮ ಊರಲ್ಲಿ ಏನು ಕೆಲಸ ಮಾಡುತ್ತಿರುತ್ತಾನೋ ಇಲ್ಲಿ ದಿಲ್ಲಿಯಲ್ಲಿ ಕೂತ ನನಗೇನು ಗೊತ್ತು.. ನನಗೇನು ಸಂಬಂಧ? ಇದೆಲ್ಲ ಪ್ರತಿಪಕ್ಷದವರ ಕುತಂತ್ರ ಅಂತ ಸಬೂಬು ಹೇಳುತ್ತಾನೆ..

ಮಕ್ಕಳು ಎಳೆಯಲಾರದ ನೇಗಿಲನ್ನು, ಎಳೆದುಕೊಂಡು ಮುನ್ನಡೆಯುತ್ತಿದ್ದಾರೆ, ಹಿಂದೆ ಹಸಿವಿನ ಚೀಲ ತುಂಬಬೇಕಾಗಿರುವ ಇನ್ಯಾವನೋ ರೈತ ಕೈಯಲ್ಲಿ ಬಾರುಕೋಲು ಹಿಡಿದು ತುತ್ತಿನ ಚೀಲ ತುಂಬಹೊರಟಿದ್ದಾನೆ, ಇವರನ್ನೆಲ್ಲ ಬಳಸಿಕೊಂಡ ಜಮೀನುದಾರ ಇಲ್ಲಿ ಟ್ರಾಕ್ಟರ್ ಬರೋಲ್ಲ, ಎತ್ತು ಇಲ್ಲ, ಇರುವ ಆಳುಮಕ್ಕಳನ್ನ ಬಳಸದೆ ಇನ್ನೇನ್ ಮಾಡಲಿ, ಅವರಿಗೆ ಸಂಬಳ ಕೊಡ್ತೇನಲ್ಲ ಅಂತ ನಿರ್ಲಜ್ಜನಾಗಿ ಹೇಳುತ್ತಾ ಮೀಸೆ ಸವರುತ್ತಿದ್ದಾನೆ..

ಹುಲಿಯಂತ ಹುಲಿಯೂ ಹಸಿವಾದಾಗ ಆಕ್ರಮಣ ಮಾಡುತ್ತದೆಯಲ್ಲವೆ! ಇವನು ಯಾವ ಜಾತಿ?!(species)

ಎಲ್ಲೂ ನಡೆಯಬಾರದ ಕ್ರೌರ್ಯದ ಪರಮಾವಧಿ - ವೈಶಾಲಿಯಲ್ಲಿ, ಬುದ್ಧನ ಊರಲ್ಲಿ, ಗಣತಂತ್ರದ ಮೊದಲ ಉಲಿ ಹಬ್ಬಿದಲ್ಲಿ.. ನಾವೆತ್ತ ಹೋಗುತ್ತಿದ್ದೇವೆ?!

ನನಗೇನು ಮಾಡಬೇಕೋ ಗೊತ್ತಾಗುತ್ತಿಲ್ಲ :(

Monday, December 10, 2007

ಹೂವಿನಂತ ಕವಿತೆ

ಹೂವಿನಂತ ಕವಿತೆ
ಹಕ್ಕಿಯಾಗಿ ಹಾರಿಬಂದು
ಚೀಂವ್ ಗುಟ್ಟಿದ ಸಂಜೆ
ನೀಲಿ ಆಗಸದಲ್ಲಿ
ಕೆಂಪಿ ಸೂರ್ಯ ಮುಳುಗಿ
ಚಳಿಯ ಹೊದಿಕೆಯಿಂದಿಣುಕಿ
ನಗುವ ತಾರಾವಳಿ;


ಹಬೆಯಾಡುವ ಕಾಫಿ ಗ್ಲಾಸಿನಲ್ಲಿ
ಮತ್ತೆ
ಹೂವಿನಂತ ಕವಿತೆ
ಬೆಚ್ಚನೆ ನೆನಪಾಗಿ ಪಿಸುಗುಟ್ಟಿ
ರಸ್ತೆ ತುಂಬೆಲ್ಲ ಬೆಳಕಾಗಿ
ಪಾದಪಥದ ನಸುಗತ್ತಲಲ್ಲಿ
ಗೆಳೆಯರ ನಗುವಿನ ಗೀತಾವಳಿ;


ಹಕ್ಕಿ ಹಾರಿ ಹೋಗಿ
ನೆನಪು ಮಸುಕಾಗಿ
ಹೂವಿನಂತ ಕವಿತೆ
ಪದಗಳಷ್ಟೇ ಆಗಿ..
ಅಷ್ಟೇ ಮತ್ತೇನಿಲ್ಲ..
ಕಾಯುತ್ತಿದ್ದೇನೆ ಹೂವಿನಂತ ಕವಿತೆ
ಹಕ್ಕಿ ಹಾಗೆ ಹಾರಿ ಬರಬಹುದಾದ ಸಂಜೆಗೆ!

Wednesday, December 5, 2007

ಏಕಪಾತ್ರಾಭಿನಯ..

ಮನೆ ತುಂಬ ಜನ. ಇಷ್ಟು ದಿನ ಮಲಗೇ ಇರುತ್ತಿದ್ದ ಅಮ್ಮ ಇವತ್ತು ಚಂದ ಡ್ರೆಸ್ ಮಾಡಿಕೊಂಡು, ಹೊಸಾ ಪಾಪುನೆತ್ತಿಕೊಂಡು ಕೂತಿದಾಳೆ. ಬಂದವರೆಲ್ಲರನ್ನು ಮಾತಾಡಿಸುತ್ತ. ಎಲ್ಲರೂ ಪಾಪುವಿನ ಕೆನ್ನೆ ಅಮುಕುವವರೆ. ಚೆನಾಗಿದ್ನಲೆ ಮಗರಾಯ.. ಚಾನ್ಸ್ ಹೊಡೆದ್ ಬಿಟ್ಯಲಾ. ಅಡ್ದಿಲ್ಲೆ ಮನೆಗೊಬ್ಬ ಪುಟ್ಟ ಯಜಮಾನ.. ಹಂಗೆ ಹಿಂಗೆ. ಇವಳು ದೊಡ್ಡ ದೊಡ್ಡ ಕಂಬಗಳ ನಡುಮನೆಯ ಕತ್ತಲ ಕಂಬವೊಂದರ ಹಿಂದೆ ರೇಷ್ಮೆ ಫ್ರಾಕೊಂದು ಹಾಕಿಕೊಂಡು.. ಕೆನ್ನೆಗೆ ಕೈ ಕೊಟ್ಟು..ಯೋಚನೆಯಲ್ಲಿ ಮುಳುಗಿ..ಅಮ್ಮಮ್ಮ ನೋಡಿದವಳೆ ಹತ್ತಿರ ಬಂದು ಏನಾತೆಂದು ಕೇಳುವುದಕ್ಕಿಲ್ಲ. ಕಣ್ಣಕೊಳದ ಹನಿ ತುಳುಕಿಬಿಟ್ಟಿತು. ಈಗ ತಮ್ಮ ಬಂದನಲ್ಲ ನಾನಿನ್ಯಾರಿಗೂ ಬ್ಯಾಡ ಅಲ್ದಾ? ಯಾರೂ ನನ್ ಕೆನ್ನೆ ಹಿಂಡದೇ ಇಲ್ಲೆ.. ಅಮ್ಮಮ್ಮನಿಗೆ ತಡೆಯಲಾಗದ ನಗು. ಚಿಕ್ಕಿ ಹೇಳ ಹಾಳು ಮೂಳು ಕತೆ ಕೇಳಿ ಕೇಳಿ ಹಿಂಗಾಗಿರದು ನೀನು. ಯಾರಿಗೂ ಬ್ಯಾಡ ನೀನು ಅಂತ ಹೇಳಿದ್ ಯಾರು? ಎಲ್ರಿಗೂ ನೀನಿನ್ನು ಜಾಸ್ತಿ ಬೇಕು. ಅಮ್ಮನ್ನ ನೋಡಿಕೊಳ್ಳಕ್ಕೆ, ತಮ್ಮನ್ನ ಎತ್ತಿಕೊಳ್ಳಕ್ಕೆ, ಆಟ ಆಡಕ್ಕೆ, ಅವನ ಜೊತೆಜೊತೆಗೆ ಸ್ಕೂಲಿಗೆ ಹೋಗಕ್ಕೆ, ಎಲ್ಲಿಗೆ ಹೋದರೂ ಜೊತೆಯಾಗಿ ಬರೋ ಆ ತಮ್ಮನ ಜೊತೆ ಜೊತೆಗೇ ನಗ್ತಾ ಬರಲಿಕ್ಕೆ ಎಲ್ಲಕ್ಕೂ ನೀನೇ ಬೇಕು. ಮಳ್ ಮಳ್ ಯೋಚನೆ ಮಾಡಡ ಬಾ...ಒಂದು ಹಾಡು ಹೇಳ್ತಿ ಬಾ...
ಹೆಣ್ಣೀನ ಜನುಮಕ್ಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರೂ ಸಭೆಯೋಳಗೇ
ಬೆನ್ನು ಕಟ್ಟುವರೂ
ಸಭೆಯೊಳಗೆ
ಸಾವೀರ ಹೊನ್ನ ತುಂಬುವರು ಉಡಿಯೊಳಗೇ..
ಅವಳು ಹಾಡಿನ ಇಂಪಲ್ಲಿ ನೆಂದು ಹೊಸದಾಗಿ ಅರಳಿದಳು. ಅಮ್ಮನ ಹತ್ತಿರ ಹೋಗಿ ಆ ಗುಂಡು ಗುಂಡು ಪಾಪುವಿನ ಕೆನ್ನೆ ಹಿಂಡಿದಳು.

ಅವಳ ಸಂಜೆಗಳನ್ನ ಅವನು ತುಂಬಿದ. ಅವನ ಸಂಜೆಗಳಲ್ಲಿ ಅವಳು. ಇಬ್ಬರ ಸಂಜೆಗಳ ತುಂಬ ಮಾತು, ನಗೆ, ಇದ್ದ ಬದ್ದ ಆಟ, ಕುಸ್ತಿ, ಜಗಳ, ಸಿಟ್ಟು, ಅಳು, ಪೆಟ್ಟು, ಅವುಚಿಕೊಂಡು ನಿಂತ ಗಳಿಗೆಗಳು, ಮಾತು ಮುರಿದ ದಿನಗಳು, ಮುರಿದ ಮೂರು ದಿನಕ್ಕೆ ಸೇರಿಕೊಂಡ ಸರಪಳಿಗಳು, ಕತೆ, ಸಿನಿಮಾ, ಹಾಡು, ಯಕ್ಷಗಾನ, ನಾಟಕ, ಏಕಪಾತ್ರಾಭಿನಯ, ಪತ್ತೇದಾರಿ ಕತೆಗಳು, ಕೋರ್ಟು ಶಾಲೆಗಳ ಆಟ, ರಜೆಯಲ್ಲಿ ಊರಿಗೆ ಓಟ, ಎಲ್ಲಿ ಹೋದರೂ ಅವಳ ಬೆನ್ನಿಗೆ ಅವನು, ಅವನ ಕೈ ಹಿಡಿದು ಅವಳು.. ಅವಳು ಸುಮ್ಮನೆ ಮೂಲೆಯಲ್ಲಿ ಕೂತು ಪುಸ್ತಕದ ಮೇಲೆ ಪುಸ್ತಕ, ಅವನು ಅಂಗಳದಲ್ಲಿ ಆಟದ ಮೇಲೆ ಆಟ, ಅವಳು ಮೆತ್ತಗೆ ಯಾರಿಗೂ ಬೇಸರವಾಗದಂತೆ ಅರಳಿ..ಅವನು ಜೋರಾಗಿ ಎಲ್ಲರ ಕಣ್ಣು ಅವನ ಮೇಲಿರುವಂತೆ ಬೆಳಗಿ... ಆ ದಿನಗಳ ತುಂಬ ಹುಳಿ-ಸಿಹಿಯ,ಕಾರ ಒಗರುಗಳ ಅನನ್ಯ ರಸಭಾವ.. ರಸ ಕೆಡಲು ಹೊರಟರೆ ಅಮ್ಮನ ಗುದ್ದು, ಸಲಹೆ, ಕತೆಗಳ ಪ್ರಿಸರ್ವೆಂಟ್..

ಒಂದಿನ ಏನೋ ಹುಳುಕು ಮಾಡಿ ಅವನನ್ನ ಸಿಕ್ಕಿಸಿ ಹಾಕಿದ್ದಳು ಅವಳು. ಅಮ್ಮನಿಂದ ಎರಡು ಒದೆ ಬಿದ್ದಿತ್ತವನಿಗೆ. ಮುಖ ಚಪ್ಪೆ ಮಾಡಿ ನಿಂತ ಪುಂಡನ ನೋಡಿ, ಇವಳ ಮುಖ ಪೇಲವ. ನೋಡಿದ ಅಮ್ಮನಿಗೆ ಗೊತ್ತಾಯಿತು ಹುಳುಕು.. ಒಂದು ರುಚಿ ರುಚಿಯಾದ ಟೀ ಮಾಡಿ ಕೊಟ್ಟು ಕೈಗೆರಡೆರಡು ಬೆಣ್ಣೆ ಬಿಸ್ಕೆಟ್ ಇಟ್ಟು ಇವತ್ತೊಂದು ಕತೆ ಹೇಳ್ತೀನಿ ಅಂತ ಕೂತಳು..

ಚಪ್ಪೆ ಮುಖದವರಿಬ್ಬರೂ ಅಮ್ಮನ ಬದಿ ಬದಿಗೆ..ಕಿವಿಯಾಗಿ..

ಒಂದೂರಲ್ಲಿ ಒಂದು ದೊಓಓಓಡ್ಡ ಮಾವಿನ ಮರ. ಆ ಊರಿಗೆ ಬರುವ ಎಲ್ಲರೂ ಮಾವಿನ ಮರವನ್ನ ದಾಟಿಕೊಂಡೇ ಬರಬೇಕು. ಎಲ್ಲರೂ ನೋಡಿ ಆಹಾ ಅಂತೇಳಿ ಹೋಗ್ತಿದ್ದರು. ಆ ಸಲ ಬೇಸಿಗೆ ಶುರುವಾಗುತ್ತಿದ್ದ ಹಾಗೆ ಮಾವಿನ ಮರದ ತುಂಬ ತೂಗಿ ಬಿದ್ದ ಬಂಗಾರ ಬಣ್ಣದ ಹಣ್ಣುಗಳು. ಪರಿಮಳವಂತೂ ಅರ್ಧ ಮೈಲಿ ದೂರಕ್ಕೇ ಬರುತ್ತಿತ್ತು. ಅಲ್ಲಿ ಬರುವವರೆಲ್ಲ ಆಸೆಯಿಂದ ಹಣ್ಣು ಕಿತ್ತು ಇನ್ನೇನು ಸಿಪ್ಪೆ ಕಚ್ಚುತ್ತಾ ಬಾಯಲ್ಲಿಡಬೇಕು.. ಅಷ್ಟರಲ್ಲಿ ಕಾಣಿಸಿಕೊಳ್ಳುತ್ತದೆ ಹಣ್ಣಿನೊಳಗೆ ಹುಳ.. ಥೂ ಅಂತ ಎಸೆದು ಇನ್ನೊಂದು ಹಣ್ಣು ಕಿತ್ತು ನೋಡಿದರೆ ಅದರಲ್ಲೂ ಹುಳ.. ಓ ಈ ರೆಂಬೆಯೇ ಸರಿಯಿಲ್ಲ ಅಂತ ಆ ಬದಿಗೆ ಹೋಗಿ ಅಲ್ಲಿ ಕಿತ್ತು ನೋಡಿದರೆ ಅದರಲ್ಲೂ.. ಹೀಗೇ ಬಂದವರೆಲ್ಲ ಕಿತ್ತು ನೋಡಿದ ಎಲ್ಲ ಹಣ್ಣಲ್ಲೂ ಹುಳ..ಎಲ್ಲರೂ ಛೀ ಥೂ ಅಂತ ಬಯ್ಯುತ್ತಾ ಅಯ್ಯೋ ಹುಳುಕು ಮಾವಿನ ಮರಾ ಇದು.. ಎಂತಕ್ಕು ಪ್ರಯೋಜ್ನವಿಲ್ಲ ಅನ್ನುತ್ತಾ ಹೋಗುತ್ತಿದ್ದರೆ ಮರದ ಕಣ್ಣಲ್ಲಿ ನೀರು..
ಆಂ ಮರದ ಕಣ್ಣಾಗೆ ನೀರಾ? ಅವನಿಗೆ ಆಶ್ಚರ್ಯ.
ಮರದ ಕಣ್ಣೆಲ್ಲಿರ್ತಮಾ ಅವಳ ಪ್ರಶ್ನೆ.


ಹೌದಲ್ಲಾ ಅಮ್ಮ ಯೋಚಿಸಿದಳು.. ಅದೂ ಅದೂ ಮರದ ಕಾಂಡದಿಂದ ರೆಂಬೆಗಳು ಹೊರಡ್ತಲಾ ಅಲ್ಲಿರ್ತು. ಅದು ಎಲ್ಲರಿಗೂ ಕಾಣಾ ಕಣ್ಣಲ್ಲ. ಕತೆ ಹೇಳುವವರಿಗೆ ಮಾತ್ರ ಕಾಣಿಸ್ತು ಅವಳ ಸಮಜಾಯಿಷಿ. ಸರಿ ಮುಂದೆ ಕೇಳಿ.
ಆ ಬೇಸಿಗೆಯಿಡೀ ಯಾರೂ ಆ ಮರದ ಹಣ್ಣು ಮುಟ್ಟಲಿಲ್ಲ. ಮುಟ್ಟುವುದಿರಲಿ ಅದರ ಹತ್ತಿರವೂ ಬರದೆ ಥೂ ಹುಳುಕ್ ಮಾವಿನ ಮರ ಅಂತ ಬೈದುಕೊಂಡು ಅದನ್ನ ಬಳಸದೆ ದೂರದ ದಾರೀಲಿ ಹೋಗ್ ಬಿಡುತ್ತಿದ್ದರು. ಒಂದಿನ ಒಬ್ಬವ ಋಷಿ ಬಂದ.

ಬಂದವನೇ ಈ ಹುಳುಕು ಮಾವಿನ ಮರ ನೋಡಿ ಕೇಳಿದ - ಯಾಕೆ ಮರವೇ ಬರೀ ಹುಳುಕು ಹಣ್ಣುಗಳು ಏನಾಯಿತು ನಿಂಗೆ ಏನು ಪಾಪ ಮಾಡಿದ್ದೆ. -
ಮರ ಅಳುಮುಖ ಮಾಡಿಕೊಂಡು ಹೇಳಿತು. ಹೋದ ಜನ್ಮದಲ್ಲಿ ನಾನು ಬರೀ ಹುಳುಕುತನ ಮಾಡ್ತಾ ಇದ್ದೆ. ಚಾಡಿ ಹೇಳಿಕೊಂಡು, ಯಾರನ್ನೂ ಸಹಿಸದೆ, ಎಲ್ಲರ ಹತ್ತಿರವೂ ಜಗಳ ಮಾಡಿಕೊಂಡು, ಯಾವುದನ್ನೂ ಯಾರ ಹತ್ತಿರವೂ ಹಂಚಿ ತಿನ್ನದೇ, ನಾನೇ ದೊಡ್ ಮನುಷ್ಯ ಅಂದ್ಕಂಡು ಶ್ರೀಮಂತಿಕೇಲಿ ಬದುಕಿದ್ದೆ. ಯಾರಿಗೂ ಸಹಾಯ ಮಾಡದೆ, ಎಷ್ಟು ಸಾಧ್ಯವೋ ಅಷ್ಟು ಕಷ್ಟ ಕೊಟ್ಟು, ಸುಳ್ಳು ಹೇಳಿ ಖುಷಿ ಪಡ್ತಾ ಇದ್ದೆ. ಅಣ್ಣ, ತಮ್ಮ, ಅಕ್ಕ ತಂಗಿ ಎಲ್ರಿಗೂ ಮೋಸ ಮಾಡ್ಕೋತ, ನೋವು ಕೊಡ್ತಿದ್ದೆ... ಅದಕ್ಕೆ ಈ ಜನ್ಮದಲ್ಲಿ ಹುಳುಕು ಮಾವಿನ ಮರ ಆಗಿ ಹುಟ್ಟಿ ಬಿಟ್ಟಿದೀನಿ. ನಾನು ಮಾಡಿದ ಹುಳುಕೆಲ್ಲ ನನ್ನೇ ತಿಂತಿದೆ ಈಗ. ಯಾರೂ ಮುಟ್ಟೋಲ್ಲ ನನ್ನ. ನೋಡಿದವರೆಲ್ಲ ಛೀ ಥೂ ಅಂತ ಹೋಗ್ತಿರ್ತಾರೆ..


ಆಂ ಹಂಗಾ.. ಅಯ್ಯೋ ನಾನ್ ನಿನ್ನತ್ರ ಮಾತಾಡಲ್ಲಪ್ಪ.. ಆಮೇಲೆ ನಂಗೂ ಹುಳುಕುಬುದ್ಧಿ ಬಂದ್ ಬಿಡತ್ತೆ ಅಂತ ಋಷಿ ಕೂಡ ಬಿಟ್ಟು ಹೋಗಿಬಿಡುತ್ತಾನೆ.
ಅವರಿಬ್ಬರೂ ಪಿಳಿಪಿಳಿ ಅಮ್ಮನ್ನೇ ನೋಡ್ತಿದಾರೆ.
ಅಮ್ಮ ಕತೆ ಮುಗೀತು. ನೋಡಿದ್ರಾ ಹುಳುಕು ಬುದ್ಢಿ ಮಾಡವ್ರಿಗೆ ಏನು ಗತಿ ಬರ್ತು ಅಂತ.. ಅಂತ ಕೇಳಿದಳು. ಇಬ್ಬರೂ ಹೌದೌದು. ನಾವು ಇನ್ಯಾವತ್ತೂ ಹಂಗೆ ಮಾಡಲ್ಲಮ್ಮಾ..ಅಂತ ಒಪ್ಪಿಕೊಂಡರು.


ಸಂಜೆಯೊಂದು ಮೆತ್ತಗೆ ಮನೆಯ ಹಿಂದಿನ ಹಿತ್ತಲ ಹಿಂದೆ ಸೂರ್ಯಮಾಮಾನ ಹಿಂದೆ ಹಿಂದೆ ಓಡುತ್ತಿದೆ. ಅಂಗಳದಲ್ಲಿ ಅವರಿಬ್ಬರ ಬ್ಯಾಡ್ ಮಿಂಟನ್ ಆಟದ ಕೊನೆಯ ಚರಣ. ಮಬ್ಬುಗತ್ತಲಲ್ಲಿ ಅವಳು ಬೀಸಿ ಹೊಡೆದ ಹೊಡೆತಕ್ಕೆ ಕಾಕ್ ಹಂಚಿನ ಮೇಲೆ ಹೋಗಿ ಬಿದ್ದುಬಿಟ್ಟಿತು. ಈಗ ಅದನ್ನು ಕೆಳಗಿಳಿಸುವ ಆಟ. ಅವನು ಒಂದು ಉದ್ದದ ಕೋಲು ಹಿಡಕೊಂಡು ಎರಡು ಮೂರು ಇಟ್ಟಿಗೆ ಸೇರಿಸಿ ಹತ್ತಿ ನಿಂತು ಕಾಕ್ ನ ಎಳೆದು ಬೀಳಿಸಲು ನೋಡ್ತಿದಾನೆ. ಇವಳು ಕಣ್ಣು ಮೇಲೆ ಮಾಡಿ ಸೂರಂಚಿಗೆ ನಿಂತು, ಬಂತೂ ಬಂತೂ, ಇನ್ನೋಚೂರು ಎಳಿ, ಅಲ್ಲೇ ಸ್ವಲ್ಪ ಬಲಕ್ಕೆ..ಹಾಂ ಹಾಂ ಅಂತಾ ಇದ್ದ ಹಾಗೆ ಆ ಕಾಕ್ ಬಿದ್ದೇ ಬಿಟ್ಟಿತು ಕಿರೀ ಹಿಡಿದು ನೋಡುತ್ತಿದ್ದ ಕಣ್ಣಿನ ಮೇಲೆ ಕಾಕಿನ ಹಿಂಭಾಗ ಬಿದ್ದ ಕೂಡಲೇ ಅಮ್ಮಾ, ಕಣ್ಣೂ ಕಣ್ಣೂ.. ಅಂತ ಕೂಗಿಕೊಳ್ಳುತ್ತ ಕಣ್ಣು ಮುಚ್ಚಿಕೊಂಡು ಓಡಿಹೋಗಿ ಮನೆಮೆಟ್ಟಿಲ ಮೇಲೆ ಕುಕ್ಕರಿಸಿದಳು. ಅವನು ಇಟ್ಟಿಗೆ ಇಳಿದು ಗಡಬಡಿಸಿ ಓಡಿಬಂದ. ಹಿತ್ತಿಲ ಬಾವಿಯಿಂದ ನೀರು ಸೇದುತ್ತಿದ್ದ ಅಮ್ಮ ಓಡಿಬಂದು ಒದ್ದೆ ಕೈಯಲ್ಲೇ ಅವನ ಬೆನ್ನಿಗೊಂದು ಗುದ್ದು ಕೊಟ್ಟು ಏನ್ ಮಾಡಿದ್ಯೋ ಅಕ್ಕಂಗೆ ಅಂತ ಸಿಟ್ಟು ಮಾಡಿ, ಎಂತಾತು ಅಂತ ಕೇಳಿದಳು. ಅವನು ಬೆನ್ನ ಮೇಲಿನ ಗುದ್ದು ಗುದ್ದೇ ಅಲ್ಲ ಅನ್ನೋ ಹಾಗೆ ಅಮ್ಮನ ಹತ್ತಿರ ಅವಳ ಕೈ ಹಿಡಿದುಕೊಂಡು ಕಾಕ್ ಕಣ್ಣಿಗೆ ಬಿದ್ ಬಿಡ್ತಮ್ಮಾ ನಾನೇನೂ ಮಾಡಲ್ಲೆ ಅನ್ನುತ್ತಿದ್ದರೆ, ಕಣ್ಣು ಮುಚ್ಚಿ ಅಳುತ್ತಿದ್ದ ಅಕ್ಕನೂ ಇಲ್ಲ ಅವನೇ ಮಾಡಿದ್ದು ಅಂತ ಹೇಳಬೇಕೆಂದುಕೊಂಡವಳು ಹುಳುಕು ಮಾವಿನ ಮರದ ನೆನಪಾಗಿ, ಹೌದೆಂದು ತಲೆಯಾಡಿಸಿದಳು. ಕತ್ತಲಾದ ಮೇಲೆ ಆಟ ಆಡಡಿ ಅಂದ್ರೆ ಕೇಳಾ ಮಕ್ಳಾ ನೀವು, ಈಗ ಕಣ್ಣಿಗೇನಾದ್ರೂ ಆದ್ರೆ ಅಮ್ಮನಿಗೆ ಆತಂಕ.. ಸ್ವಲ್ಪ ಕೊತ್ತಂಬರಿ ಬೀಜ ನೆನೆಸಿ ಅವಳ ಮುಚ್ಚಿದ ಕಣ್ಣಿಗೆ ಕರ್ಚೀಫಿನಿಂದ ನೀರು ಬಿಟ್ಟು ತಮ್ಮನಿಗೆ ಅದನ್ನು ಹೇಗೆ ಮಾಡುವುದು ಅಂತ ತೋರಿಸಿ ಅಮ್ಮ ಮತ್ತೆ ನೀರು ತುಂಬಲು ಹೋದಳು.

ಅವನ ಹತ್ತಿರ ಒಂದು ಚಂದದ ಪಾಟಿ. ಕಪ್ಪು ಪಾಟಿಯ ಸುತ್ತಲೂ ಕೇಸರಿ ಬಣ್ಣದ ಪ್ಲಾಸ್ಟಿಕ್ ಚೌಕಟ್ಟು. ವಿಶೇಷ ಏನಪಾ ಅಂದ್ರೆ, ಕಲ್ಲು ಕಡ್ಡೀಲಿ ಬರದ್ರೂ ಅಕ್ಷರ ಗುಂಡಕೆ ನೀಟಾಗಿ ಆಗ್ತು ಅದರಲ್ಲಿ. ಇನ್ನು ಬೆಣ್ಣೆ ಕಡ್ಡಿ ವಿಷ್ಯ ಕೇಳದೇ ಬೇಡ. ಅವಳಿಗೆ ಅದರ ಮೇಲೇ ಕಣ್ಣು. ಆದ್ರೇನು ಮಾಡದು ಅದು ಅವ್ನ ಪಾಟಿ. ಅಲ್ದೇ ಅವನಿಗೆ ಇನ್ನೂ ನೋಟ್ ಬುಕ್ಕಲ್ಲಿ ಬರಿಯೋ ಕ್ಲಾಸೂ ಅಲ್ಲ. ಹಂಗಾಗಿ ಅವ್ನು ಅದನ್ನ ಸುಮ್ನೆ ಕೇಳಿದ್ರೆ ಕೊಡದಿಲ್ಲೆ. ಅಂಬಾರ್ ಕಟ್ಟು, ಬೋಟಿ, ಕಾರಕಿತ್ಲೆ ಏನೋ ಇಂತ ಆಸೆ ತೋರ್ಸೇ ಪಾಟಿ ಇಸ್ಕಳಕ್ಕಾಗದು. ಒಂದಿನ ಅವ್ಳು ಅಮ್ಮನ ಹತ್ರ ಹಟ ಮಾಡ್ದ. ಅಮ್ಮಾ ನಂಗೂ ಅದೇ ಪಾಟಿನೇ ಬೇಕು. ಅವನ ಅಕ್ಷರ ಹೆಂಗೂ ಏನಷ್ಟು ಚೆನಾಗಿಲ್ಲೆ. ಅವನಿಗೆ ಬೇರೆ ಪಾಟಿ ಕೊಡ್ಸು ನೀನು. ಅಮ್ಮಂಗೆ ಸಿಟ್ ಬಂತು.
ಎಂತದೆ ನಿಂದು ರಗಳೆ. ಅವನ ಹಳೇ ಪಾಟಿ ಮೇಲೆ ನಿಂದ್ಯಾಕೆ ಕಣ್ಣು. ನಿಂಗೆ ಅಷ್ಟೊಳ್ಳೆ ಲೇಖಕ್ ಬುಕ್ಕಿದ್ದು. ಅವನ ಎಲ್ಲ ಪುಸ್ತಕ, ಚೀಲ, ಪೆನ್ನು, ಕಡ್ಡಿ, ಟೋಪಿ, ಸಾಕ್ಸು ಎಲ್ಲ ನೀನು ಹಾಕಿ ಬಿಟ್ಟಿದ್ದು.. ಅದೊಂದು ಪಾಟಿ ಅವನಿಗೇ ಅಂತ ಕೊಡಿಸಿದ್ರೆ ಅದ್ರ ಮೇಲೆ ಕಣ್ಣಾ ನಿಂದು? ಇದನ್ನೇ ಹುಳುಕು ಬುದ್ದಿ ಅನ್ನದು. ಹುಳುಕು ಬುದ್ದಿ ಮಾಡಿದ್ರೆ ಏನಾಗ್ತು ಗೊತ್ತಿದ್ದಲಾ..
ಅವಳು ತೆಪ್ಪಗಾದಳು. ಹೌದೆನ್ನಿಸಿತು. ಸುಮ್ಮನೆ ಮೂಲೆಯಲ್ಲಿ ಕೂತು ಕೇಳುತ್ತಿದ್ದ ಅವನ ಪಕ್ಕ ಹೋಗಿ ಕೂತು, ಕೈಗೆ ಕೈ ಹೊಸೆದಳು. ತಪ್ಪಾಯಿತೆಂಬಂತೆ, ಸಿಟ್ಟಿಲ್ಲವೆಂಬಂತೆ, ಮತ್ತೆ ಜೊತೆಯಾಗುವಂತೆ. ಅವನು ಎಂದಿನ ನಗೆಮುಖದ ಗುಂಡ..
ಆಟಕ್ಕೆದ್ದ.


ಸಾಬರಂಗಡಿಯ ಪುಟಾಣಿ ಸೈಕಲ್ಲಿಗೆ ಗಂಟೆಗೆ ಐವತ್ತು ಪೈಸೆ ಕೊಟ್ಟು ರಸ್ತೆಯಲ್ಲಿ ತಳ್ಳಿಕೊಂಡು ಹೋಗಿ, ಕಾಂಪ್ಲೆಕ್ಸಿನ ಪಾಗಾರ ಕಳೆದ ಕೂಡಲೆ ಸಿಗುವ ದೊಡ್ಡ ಮೈದಾನದಲ್ಲಿ ಅವರಿಬ್ಬರ ಸೈಕಲ್ ಕಲಿಯಾಟ.. ದೊಡ್ಡಕೆ ಹರಡಿರುವ ಹುಲ್ಲು ಮೈದಾನದಲ್ಲಿ ಎಳೆಬಿಸಿಲಿನ ಸಂಜೆಯಲ್ಲಿ ಪುಟಾಣಿ ಸೈಕಲ್ ಮೇಲೆ ಬ್ಯಾಲೆನ್ಸ್ ಮಾಡುತ್ತ ಅವಳು, ಹಿಂದೆ ಕ್ಯಾರಿಯರ್ ಹಿಡಿದು ಓಡುತ್ತ ಬರುತ್ತಿರುವ ಅವನು.. ಮೈದಾನದಂಚಿಗೆ ಮನೆಗೆ ಹೊರಟಿರುವ ಸೂರ್ಯ, ಬೇಗ ಬೇಗ ಹೋಗಲು ಮನಸ್ಸಾಗದೇ ಅವರಾಟವನ್ನು ನೋಡುತ್ತ ಆ ಎಳೆಮೈಗಳನ್ನು ಬೆಚ್ಚಗಾಗಿಸುತ್ತ ಚೂರು ಚೂರೇ ಮುಳುಗುತ್ತಿದ್ದ.. ಓ ರಾಧಾಕೃಷ್ಣ ಬಸ್ ಬಂತು. ಇನ್ನೇನು ಐದು ನಿಮಿಷಕ್ಕೆ ಟೈಮ್ ಆಗೋಗ್ತು. ಬಾ ಸೈಕಲ್ ವಾಪಸ್ ಕೊಡನ ಅವಳು. ಅಡ್ಡಿಲ್ಲೆ ಬಿಡೇ ನಾನೊಂದು ಲಾಸ್ಟ್ ರೌಂಡ್ ಹೋಗ್ತಿ. ಆಮೇಲೆ ಕೊಡಾನ. ಅವಳಿಗಿಷ್ಟವಿಲ್ಲ. ಆದ್ರೂ ಹೂಂ ಅಂದಳು. ಕೊನೆಯ ಒಂದು ರೌಂಡ್ ಅಂದವನು ಮೂರ್ನಾಕು ರೌಂಡ್ ಮುಗಿಸಿ ಬಂದು ಸೈಕಲ್ ವಾಪಸ್ ಕೊಟ್ಟಾಗ ಗಂಟೆಯ ಮೇಲೆ ಹತ್ತು ನಿಮಿಷವಾಗಿ ಅಂಗಡಿಯವನು ಬಯ್ದ. ಅವಳಿಗೆ ಅವಮಾಆಆಆಆನ. ಅವನು ಏ ಬಿಡೇ ಅದೆಲ್ಲ ಯಾಕೆ ತಲೆಬಿಸಿ.. ದಾರಿಯಲ್ಲಿ ಕಲ್ಪನೆಯ ಬಾಲನ್ನು ಸ್ಪಿನ್ ಬೌಲ್ ಮಾಡುತ್ತ ಕುಣಿಯುತ್ತ ಹೋಗುವ.. ಅವಳು ಮುಖ ದುಮ್ಮಿಸಿಕೊಂಡು ಸುಮ್ಮನೆ ಅವನ ಹಿಂದೆ.

ಹೈಸ್ಕೂಲಿನಲ್ಲಿ ಮಧ್ಯಾಹ್ನದ ಬೆಲ್ ಹೊಡೆದು ಮೊದಲ ಪೀರಿಯಡ್ಡಿಗೆ ಕಾಯುತ್ತ ಕೂತಿದ್ದಾಳವಳು ಹತ್ತನೇ ಕ್ಲಾಸಿನ ಮೊದಲ ಬೆಂಚಲ್ಲಿ. ಇದ್ದಕ್ಕಿದ್ದಂತೆ ಓಡಿಬಂದು ಅವಳ ಕ್ಲಾಸಿಗೆ ನುಗ್ಗಿದವನು ಅವಳ ಮುಂದಿದ್ದ ಜ್ಯಾಮಿಟ್ರಿ ಬಾಕ್ಸ್ ಎತ್ತಿಕೊಂಡು ಓಟ. ಗೊತ್ತವನಿಗೆ ಬೆಲ್ ಹೊಡೆದ ಮೇಲೆ ಅಕ್ಕ ಹೊರಗೆ ತನ್ನನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಅವಳಿಗೆ ಸಿಟ್ಟು, ಕ್ಲಾಸಿನ ಉಳಿದೆಲ್ಲ ಕಣ್ಣೂ ತನ್ನನ್ನೇ ನೋಡುತ್ತಿರುವ ಎಚ್ಚರದ ಅವಮಾನ..

ಎರಡನೇ ಪಿರಿಯಡ್ ಮುಗಿದು ಮೂರರ ಬೆಲ್ಲಾಗುವಾಗ ಮತ್ತೆ ಓಡುತ್ತ ಬಂದವನು ಬಾಕ್ಸು ಅವಳ ಮುಂದಿಟ್ಟು, ಬಿಎನ್.ಪಿ ಪಿರಿಯಡ್ ಇತ್ತೇ ಮಾರಾಯ್ತಿ. ಗೊತ್ತಿದ್ದಲ ಜಾಮಿಟ್ರಿ ಬಾಕ್ಸಿಲ್ದೇ ಇದ್ರೆ ಏನ್ ಗತಿ ಅಂತ ಅದಕ್ಕೇ... ತುಂಟ ಮುಖದಲ್ಲಿ ಸಮಾಧಾನದ ನಗು ಬೀರುತ್ತ ಮತ್ತೆ ತಿರುಗಿ ಅವನ ಕ್ಲಾಸಿನತ್ತ ಓಡಿ ಹೋದ. ಸಿಟ್ಟೆಲ್ಲ ಇಳಿದು ಹೋಗಿ, ಪಾಪವೆನ್ನಿಸುವಂತೆ. ಸಂಜೆ ಸ್ಕೂಲು ಬಿಟ್ಟ ಕೂಡಲೇ ಕೆರೆ ಏರಿ ಮುಗಿದು ರೈಲ್ವೆ ಹಳಿ ದಾಟಿದ ಕೂಡಲೆ ಡಬ್ಬಲ್ ರೈಡು. ಅವಳು ಉದ್ದ ಅಕ್ಕ ಅವನು ಪುಟ್ಟ ತಮ್ಮ.

ಇಲ್ಲಿ ನಿಂತರೆ ಟಿಪ್ಪೂ ಸುಲ್ತಾನ್, ಇಲ್ಲಿ ನಿಂತರೆ ಮದಕರಿ ನಾಯಕ.. ಅವನು ಪುಟ್ಟ ಮುಖದ ಮೇಲಿನ ದೊಡ್ಡ ಮೀಸೆಯಡಿಯಿಂದ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಗರ್ಜಿಸುತ್ತಿದ್ದ..ಮನೆಯ ಕಪಾಟು ತುಂಬ ಪುಟ್ಟ ಪುಟ್ಟ ಬಹುಮಾನದ ಕಪ್ಪುಗಳು. ಅವಳು ಕಪಾಟಿನ ಹೊರಗೆ ನೋಡುತ್ತ ನೋಡುತ್ತ..

ವರ್ಷಗಳುರುಳಿದಂತೆಲ್ಲ ಬದುಕಿನ ಏಕಪಾತ್ರಾಭಿನಯದಲ್ಲಿ ಇಬ್ಬರಿಗೂ ಅವರವರದ್ದೇ ಪಾಲು. ಅವನು ಒಬ್ಬಳೆ ನಿಂತ ಅಕ್ಕನಿಗೆ ಅಣ್ಣನಾಗಿ,ಗೆಳೆಯನಾಗಿ,ಅಪ್ಪನಾಗಿ,ಟೀಚರ್ರಾಗಿ.. ಅವಳು ಬೆಳೆಯುವ ತಮ್ಮನಿಗೆ ಅಮ್ಮನಾಗಿ, ಗೆಳತಿಯಾಗಿ, ತಂಗಿಯಾಗಿ, ಸ್ಟೂಡೆಂಟಾಗಿ.. ಅವನ ಮಾರ್ಕೆಟಿಂಗ್ ಟೆಕ್ನಿಕ್ಸುಗಳಿಗೆ ಬಕ್ರಾ ಆಗಿ..ಅವನು ಅವಳ ಕತೆಗಳಿಗೆ ಬೋಲ್ಡಾಗಿ.. ಅವಳ ಕಣ್ಣೀರ ಕ್ಷಣಗಳಿಗೆ ಅವನು ಮೌನ ಸ್ಪಂದನವಾಗಿ, ಅವನ ದುಗುಡದ ಕ್ಷಣಗಳಲ್ಲಿ ಅವಳು ಪದಗಳನ್ನು ಹೆಣೆಯದ ಖಾಲಿ ಗೆರೆಯಾಗಿ, ಜೀಟಾಕಿನಲ್ಲಿನ ಪ್ರೈಂ ಕಾಂಟ್ಯಾಕ್ಟುಗಳಾಗಿ.. ನೆಮ್ಮದಿಯ ದಿನಗಳ ನಲಿವಿನ ಪಂಚ್ ಲೈನಾಗಿ..ದಿನದಿನದ ಪಯಣದಲ್ಲಿ ಜತೆಯಾಗಿ, ವೀಕೆಂಡಿನ ಟ್ರೆಕ್ಕುಗಳಲ್ಲಿ ಒಬ್ಬರಿನ್ನೊಬ್ಬರಿಗೆ ಗೈಡಾಗಿ, ಕ್ಯಾಮೆರಾ ಕಣ್ಣಾಗಿ. ಒಂದೇ ಜೀನ್ಸು ಕೇಪ್ರಿ ಇಬ್ಬರಿಗೂ ಬರುವಷ್ಟು ಬೆಳೆದ ಜೀವಗಳಾಗಿ, ಅವಳ ಬರಹಗಳಿಗೆ ಅವನು ಮೈಕ್ರೋಸ್ಕೋಪಾಗಿ, ಅವನ ಅಭಿನಯಕ್ಕೆ ಅವಳು ಬೆರಗಿನ ನೋಡುಗಳಾಗಿ.. ಅವಳ ಸಹಾಯಕ್ಕೆ ಅವನು ಪ್ರೀಮಿಯಂ ಆಗಿ, ಅವನ ನೆರವಿಗೆ ಅವಳು ಸೆಕ್ಯೂರಿಟಿಯಾಗಿ...ನಿಂತು ನೋಡಿದಲ್ಲೆಲ್ಲ ಹಲವು ಹನ್ನೆರಡು ಪಾತ್ರಗಳು.

ಅವನು ಉದ್ದಕೆ ದೊಡ್ಡಕೆ ಅಣ್ಣನಂತಿರುವ ತಮ್ಮ. ಅವಳು ಕುಳ್ಳಕೆ (ಸ್ವಲ್ಪೇ ಸ್ವಲ್ಪ ಡುಮ್ಮಕೆ) ತಂಗಿಯಂತಿರುವ ಅಕ್ಕ..
ಅಮ್ಮ ಬಾಗಿಲವಾಡಕ್ಕೆ ಒರಗಿ ನಿಂತು, ಬೈಕು ಹತ್ತಿ ಕುಳಿತ ಅವರ ನೋಡಿ ನಸುನಗೆ ಬೀರುತ್ತಾಳೆ; ಈ ಪಯಣಕ್ಕೆ ಹುಳುಕಿನ ಸೋಂಕಿಲ್ಲ..
ಎಲ್ಲೋ ಇದ್ದಿರಬಹುದಾದ ಕಸರನ್ನೂ ಹಿಂಡಿ ತೆಗೆದ ಅಮ್ಮನ ನೆರಳ ಹಾದಿ..

Tuesday, December 4, 2007

ಮಂಜು..

ಕಣ್ಣು ಮಂಜಾಗಿದೆ..

ನಿಟ್ಟಿಸಿ ನೋಡಿದಾಗ
ದಟ್ಟವಾಗಿ ಕಂಡಿದ್ದ ಹಸಿರುಗುಡ್ಡದ
ಹೊರಮೈ ನೋಟವೂ ಗೊತ್ತಾಗದ ಹಾಗೆ


ಅವತ್ತು ಮಳೆನಿಂತ ಸಂಜೆ
ನೋಟಕ್ಕೇ ರಂಗೇರಿದ್ದ ಕೆನ್ನೆ ಕೆಂಪು ಕರಗಿ
ನಿನ್ನ ಗುರುತೂ ಹಿಡಿಯದ ಹಾಗೆ


ಬರೆದು ಬರೆದು ರಾಶಿ ಹಾಕಿದ
ಕಾಪಿ ಪುಸ್ತಕದ ಪುಟ್ಟ ಕೊಂಕು ತಿದ್ದಿದ ಕಣ್ಣು
ಪೇಪರಿನ ಹೆಡ್ ಲೈನ್ಸ್ ಓದಲು ತಡಬಡಿಸುವ ಹಾಗೆ


ಮಳೆಹನಿವ ಮಧ್ಯಾಹ್ನ
ಕಿಟಕಿಯಾಚೆಗೆ ಕಂಡ ಹಸಿರ ಮಧ್ಯದ ಹಳದಿ
ಕಂದಿದ ಹಾಗೆ..


ಗೋಡೆ ಕುಸಿದ ಹಾಗೆ
ನೆರಳು ಕವಿದ ಹಾಗೆ


ಪುಟ್ಟದೊಂದು ಹೊಸ್ತಿಲೂ ದೊಡ್ಡ ಸಂಕದ ಹಾಗೆ
ಜಗುಲಿ ಅಂಗಳ ಮನೆಯಾಚೆಗಿನ ಮೈದಾನವೆಲ್ಲ ಒಂದಾದ ಹಾಗೆ


ಸುತ್ತ ಇರುವುದೆಲ್ಲ ಇಲ್ಲದ ಹಾಗೆ
ಎಲ್ಲೂ ಇಲ್ಲದ ಯಾರೋ ಸುಳಿದಾಡಿದ ಹಾಗೆ


ಹೀಗೆ..
ಮಂಜಾಗಿದೆ
ಕಣ್ಣು,ಮನಸ್ಸು,ಬುದ್ಧಿ
ಹೊರಗೆ ಕಂಡಿದ್ದೊಂದು,
ಕಾಣಬಯಸುವುದೊಂದು
ಒಳಗೆ ಪ್ರತಿಫಲಿಸುವುದೇ ಇನ್ನೊಂದು..


ಒಂದು ಸಂತಸವೆಂದರೆ
ಮಂಜುಗಣ್ಣಿಗೆ ಕಂಡೂ ಕಾಣದೆಯೂ
ನೀನಿದ್ದೀಯ ಜತೆಗೆ
ಹೆಜ್ಜೆ ಎಡವದ ಹಾಗೆ
ಕಾಣದ್ದೆಲ್ಲವೂ ಕಾಣಿಸುವ ಹಾಗೆ!

Wednesday, November 21, 2007

ಕ್ಷಮಿಸು ಅನಘಾ...

ಕ್ಷಮಿಸು ಅನಘಾ,

ನಂಗೆ ನಿನ್ನ ಹುಟ್ಟಿಸೋದಿಕ್ಕೆ ಧೈರ್ಯವಿರಲಿಲ್ಲ.
ತುಂಬ ಇಷ್ಟವಿತ್ತು ಆದರೆ ಮನಸ್ಸಿರಲಿಲ್ಲ.
ನನಗೆ ನೀನು ಬೇಕೇಬೇಕಿತ್ತು ಆದರೆ ನನ್ಕೈಲಿ ಸಾಧ್ಯವಿರಲಿಲ್ಲ.

ನಿನ್ನ ಸ್ಪಂದನಗಳಿಗೆ ನಾನು ತುಂಬ ವರ್ಷಗಳಿಂದ ಆಸೆಯಿಂದ ಕಾದಿದ್ದಕ್ಕೋ ಏನೋ ಅಥವಾ ನನ್ನ ಕನಸುಗಳೆಲ್ಲಾ ನಿನ್ನ ಬಣ್ಣಗಳಿಂದಲೇ ಮಿರುಗುತ್ತಿದ್ದುದಕ್ಕೋ ಏನೋ, ನೀನು ನಿಜವಾಗಿ ಮೊಳಕೆಯೊಡೆದಾಗ ನಾನು ಅಧೀರಳಾಗಿಬಿಟ್ಟೆ. ಕತ್ತಲ ಕಣಿವೆಯ ಹಾದಿಯಲ್ಲಿದ್ದ ನಾನು ನಿನ್ನ ತುಂಬು ಬೆಳಕಿಗೆ ಹೆದರಿಬಿಟ್ಟೆ.

ನಾನು ಜನಕ್ಕೆ ಹೆದರಿರಲಿಲ್ಲ ಅನಘಾ, ನಿನ್ನ ಅಪ್ಪನನ್ನು ಮುತ್ತುವ ಕತ್ತಲೆಗೆ ಹೆದರಿದ್ದೆ. ಅವನಿಲ್ಲದ ಬದುಕು ನನಗೆ ಬೇಕಿರಲೇ ಇಲ್ಲ. ನೀನು ಅಪ್ಪ, ಅಮ್ಮ ಇಬ್ಬರೂ ಇಲ್ಲದ ಇನ್ನೊಂದು ಮಗುವಾಗುವುದನ್ನು ನಾನು ಕಲ್ಪಿಸಲೂ ಅಸಾಧ್ಯವಿತ್ತು.

ಬರೀ ಚಿಗುರಾಗಿದ್ದ ನಿನಗೆ ಆಗ ನನ್ನ ಸ್ಪಂದನಗಳಷ್ಟೇ ಗೊತ್ತಾಗುತ್ತಿತ್ತು ಅಲ್ಲವಾ? "ಛಿ ಕಳ್ಳಿ' ಎಂದರೆ ಇನ್ನೂ ಮೂಡಿರದಿದ್ದ ನಿನ್ನ ಕಿವಿ _ "ಇನ್ನಷ್ಟು. . ಮತ್ತಷ್ಟು .. ಮಾತಾಡು" ಅಂತ ತೆರೆದುಕೊಳ್ಳುತ್ತಿತ್ತು, ನನ್ನ ಕಣ್ಣೀರು ಧಾರೆಯಾಗಿ "ಪಾಪೂ ಸಾರಿ " ಅಂತ ನಾನು ಹಲುಬುತ್ತಿದ್ದರೆ, ಇನ್ನೂ ಅರಳಿರದಿದ್ದ ನಿನ್ನ ಕಣ್ಣು ಒದ್ದೆಯಾಗುತ್ತಿತ್ತು ಅಲ್ಲವಾ? ನಂಗೊತ್ತು ಅನಘಾ.. ಸ್ವಲ್ಪೇ ದಿನಗಳೇ ಆಗಿದ್ರೂ ನಾನು ಅಮ್ಮನಾಗಿದ್ದೆ.

ಆತಂಕ ಉಸಿರುಗಟ್ಟಿಸಿದ್ದರೂ ಆ ದಿನಗಳಲ್ಲಿ ಅದೇನೋ ಜಾದೂ ಇತ್ತು. ಅಂತಿಂಥದಲ್ಲ. ಆಗ ಬದುಕು ಉರಿದು ಬೂದಿಯಾಗಿಸುವಷ್ಟು ಬೇಸರದ ಉರುವಲಿತ್ತು, ಕುಡಿಯಲು ಕಣ್ಣೀರಿತ್ತು, ತಿನ್ನಕ್ಕೆ ನಿರಾಶೆಯಿತ್ತು, ಮಲಗಲು ತಳಮಳದ ಹಾಸಿಗೆ, ಹೊದೆಯಲು ಸಂಕಟ. ನಡೆದಾಡುತ್ತಿರುವುದು ನನ್ನದಲ್ಲ ಬೇರೆಯಾರದೋಕಾಲು ಎಂಬ ಅಸಡ್ಡಾಳತನವಿತ್ತು. ಈ ಎಲ್ಲದರ ಮಧ್ಯೆಯೂ ಪುಟ್ಟ ಮಕ್ಕಳ ಕುಲುಕುಲು, ಚಿತ್ತಾರದ ಮೋಡ, ಮಿನುಗುವ ನಕ್ಷತ್ರ , ಮಳೆಹನಿಯ ಹಾಡು, ಹಕ್ಕಿಯ ಚಿಲಿಪಿಲಿ, ಬಿಳಿಗಡ್ಡ, ಸುಕ್ಕುಮೋರೆಯ ಅಜ್ಜ ಅಜ್ಜಿಯರ ನಗು ಇದೆಲ್ಲಾ ನೋಡಲು ಸಾಧ್ಯವಾಗಿದ್ದು ನಿನ್ನ ಜಾದೂವಿನಿಂದ, ಎದೆಗೊತ್ತಿಹಿಡಿದು ತಲೆನೇವರಿಸಿದ ನಿನ್ನಪ್ಪನ ಕಣ್ಣಿನಿಂದ ಅನಘಾ. ನಾವಿಬ್ಬರೂ ಈ ಜಾದೂ ನೋಡಿ ಮುದಗೊಂಡಿದ್ದು ನಿನ್ನ ಪ್ರಭಾವಳಿಯಿಂದ.

ಅಷ್ಟೇ ಅಲ್ಲ ಅನಘಾ...
ನಮಗೆ ಬದುಕಬೇಕು ಅನ್ನಿಸಿತ್ತು! ! !

ನಿನ್ನ ಪುಟ್ಟ ಬೆರಳು ಹಿಡಿದು ಹೆಸರಿರದ ಹಸಿರು ಬಯಲಲ್ಲಿ - ಕಾಲು ಸೋಲುವವರೆಗೆ, ನಿನ್ನಪ್ಪನಿಗೆ ನಿದ್ದೆಗಣ್ಣಾಗುವವರೆಗೆ, ನಿದ್ದೆಯಲ್ಲೂ ನಗುವ ನಿನ್ನ ಕೆನ್ನೆಗಳ ಮೇಲೆ ಚುಕ್ಕಿಗಳ ಬೆಳಕು ಪ್ರತಿಫಲಿಸುವವರೆಗೆ. . . . ನಡೆಯುತ್ತಿರಬೇಕು . . . . ಯಾವಾಗಲೂ ಅನ್ನಿಸಿತ್ತು. ಕನಸು ಚೆಂದವಿತ್ತು ಅನಘಾ ಆದರೆ ವಾಸ್ತವ ಹೆದರಿಕೆ ಹುಟ್ಟಿಸುತ್ತಿತ್ತು. ಒಲೆ ಉರಿಯುವಲ್ಲಿ ಬೀಜಬಿತ್ತಿ ನೀರೆರದದ್ದು ನಂದೇ ತಪ್ಪು ಅನಘಾ, ಈ ನನ್ನ ಮೂರ್ಖತನವನ್ನು ದಯವಿಟ್ಟು ಕ್ಷಮಿಸು.

ನಿನ್ನ ಕಳೆದುಕೊಳ್ಳಲೇಬೇಕು ಅಂತ ತೀರ್ಮಾನಿಸಿದ ದಿನ ಅನಘಾ .. . ನಾನು, ನಿನ್ನಪ್ಪ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ತಮಾಷೆ ಮಾಡಿಕೊಂಡು ನಗುತ್ತಿದ್ದೆವು. ಎಂದೂ ಇಲ್ಲದಷ್ಟು ಮಾತಾಡಿದ್ದೆವು. ಸುಮ್ಮನಿದ್ದರೆ ಎಲ್ಲಿ ಇನ್ಯಾವತ್ತೂ ಮಾತಾಡುವುದಿಲ್ಲವೋ, ನಗದಿದ್ದರೆ ಉಕ್ಕಿಬರಲೆತ್ನಿಸುತ್ತಿರುವ ಅಳುವಿನಲ್ಲಿ ಎಲ್ಲಿ ಕೊಚ್ಚಿ ಹೋಗುತ್ತೀವೋ ಅನ್ನುವ ಹೆದರಿಕೆಯಿಂದ. ನನಗೆ ಬೇಜಾರಾಗಿದೆ ಅಂತ ಅವನಿಗೆ ಗೊತ್ತಿತ್ತು, ಅವನು ಮುದುಡಿಹೋಗಿದ್ದ ಅಂತ ನನಗೆ ಗೊತ್ತಿತ್ತು. ಇಬ್ಬರಿಗೂ ಇದು ಗೊತ್ತಿದ್ದೂ ಗೊತ್ತಿಲ್ಲದ ಹಾಗೇ. . . ಇದ್ದೂ ಇಲ್ಲದ ಹಾಗೆ ಇದ್ದೆವಮ್ಮಾ,

ಮಡಿಕೇರಿಯ ಮಂಜು ಹೊದ್ದ ಕಾನು ತುಂಬ ಚಂದವಿತ್ತು. ಜಿಟಿಜಿಟಿ ಹನಿಯುತ್ತಿದ್ದ ಮಳೆಯಂತೂ ಆಕಾಶಕ್ಕೂ ಭೂಮಿಗೂ ಮಧ್ಯೆ ಸಡಗರದ ಪಯಣದ ಮೋಜಲ್ಲಿ ಮುಳುಗಿತ್ತು. ಆದಿನ ಉಂಹೂಂ ರಾತ್ರೆ ಅಥ್ವಾ ಸಂಜೆ ಅಥ್ವಾ ಬೆಳಿಗ್ಗೆಮುಂಚೆ. .. ಇಲ್ಲ ಬಹುಶಃ ಮಧ್ಯಾಹ್ನ .. ... ಯಾವಾಗ ಮರೀ ನೀನು ಹುಟ್ಟಿದ್ದು?

ಸತ್ಯಕ್ಕೂ ಅನಘಾ ಅದಾಗಿ ತಿಂಗಳಮೇಲೆ ನೀನು ಹುಟ್ಟಿರಬಹುದು ಎಂಬ ಮೊದಲ ಸಂಶಯ ನನಗೆ ಬಂದಾಗ ಮೊದಲು ಉಂಟಾಗಿದ್ದು ಸಂಭ್ರಮ ಅನಘಾ. ಆವತ್ತು ಬೆಳಿಗ್ಗೆ ನಿಧಾನವಾಗಿ ಓಡಾಡಿದೆ, ಹಾಲು ನಾನೇ ಕೇಳಿ ಕುಡಿದೆ. ಹೊಟ್ಟೆ ತುಂಬ ಊಟಮಾಡಿದೆ. ಆಫೀಸಿಗೆ ಜಂಭದಿಂದ ಹೊರಟೆ. ಅಷ್ಠೇ ಅನಘಾ ಅಲ್ಲಿವರೆಗೂ ಅದೆಲ್ಲಿ ಅಡಗಿಕೊಂಡಿತ್ತೋ ನನ್ನ ಹೆದರಿಕೆಯ ಭೇತಾಳ, ಆಮೇಲೆ ಬೆನ್ನು ಬಿಡಲೇ ಇಲ್ಲ. ಇವತ್ತಿಗೂ ಬಿಟ್ಟಿಲ್ಲ ಅನಘಾ, ನಾನು ಹಗುರಾಗಿ ನಿಂತ ಯಾವ ಕ್ಷಣವಿದ್ದರೂ ಬಂದು ತೆಕ್ಕೆಹಾಕಿಕೊಳ್ಳುತ್ತದೆ.

ತುಂಬ ವರ್ಷಗಳಿಂದ ನಿನ್ನ ಚೆಂಬೆಳಕಿಗೇ ಕಾದಿದ್ದೆ ಅನಘಾ, ಆದರೆ ನಿನ್ನ ಬೆಳಕಿಗೆ ನಾನು ಮನೆಯಾಗದೇ ಹೋದೆ. ನಾನು ತುಂಬ ಹಂಬಲಿಸಿದ್ದ ನಿನ್ನನ್ನ, ಧೈರ್ಯ ಸಾಲದೇ ಹೊರದಬ್ಬಿದ್ದಕ್ಕೆ ಕ್ಷಮಿಸು ಪುಟ್ಟೀ.. ನನಗೆ ನಿನ್ನ ಮಾತು ಕಿತ್ತುಕೊಳ್ಳುವವರ ಹೆದರಿಕೆಯಿತ್ತು. ನಿನ್ನ ನಗುವನ್ನು ಕಸಿಯುವವರ ಭಯವಿತ್ತು. ನಿನ್ನ ಸಂತಸಗಳಿಗೆ ಕಿಚ್ಚಿಡುವವರ ಅಂಜಿಕೆಯಿತ್ತು. ನಿನ್ನನ್ನೆತ್ತಿ ಲಾಲಿಹಾಡಲು ಕಾಯುತ್ತಿದ್ದ ನಿನ್ನಪ್ಪನ ದನಿಯನ್ನು ಅವರು ಅಡಗಿಸುತ್ತಿದ್ದರು; ಅವನ ಕಣ್ಣ ಬೆಳಕನ್ನವರು ನಂದಿಸುತ್ತಿದ್ದರು, ನಿನ್ನ ನೋಡಲು ನಂಗೆ ಕಣ್ಣೇ ಇರುತ್ತಿರಲಿಲ್ಲವಲ್ಲಾ ಪುಟ್ಟೀ, ನಿನ್ನ ಬೆರಳನ್ನು ಹಿಡಿಯಹೊರಟ ನನ್ನ ಕೈಯನ್ನವರು ಕಟ್ಟುತ್ತಿದ್ದರು, ನನ್ನ ಅರಿವಿನಾಚೆಯ ಲೋಕದಲ್ಲಿ ನನ್ನ ಕೂಡಿಹಾಕುತ್ತಿದ್ದರು. ನಾನು ಎಂದಿಗೂ ಅಮ್ಮನೇ ಆಗುತ್ತಿರಲಿಲ್ಲ.

ನಾನು, ನಿನ್ನಪ್ಪ ತುಂಬ ಬಯಸಿದ ನಿನ್ನನ್ನ,
ನಮ್ಮ ಬದುಕಿನ ಬೆಳದಿಂಗಳನ್ನ
ನಿನ್ನ ಇರುವಿಕೆಯನ್ನ
ನಿಯಂತ್ರಿಸಿದ ಕೈ ನಮ್ಮದಾಗಿರದೇ ಇನ್ಯಾರದ್ದೋ ಆಗಿದ್ದು ತುಂಬ ಅನ್ಯಾಯ ಅನಘಾ.

ಯಾರದೋ ನಿಯಂತ್ರಣಕ್ಕೆ ಸಿಕ್ಕಿ ನಿನ್ನ ಕಳೆದುಕೊಂಡಾಗ ನಾವಿಬ್ಬರೂ ಅಸಹಾಯಕ ಭಿಕಾರಿಗಳಾಗಿಬಿಟ್ಟಿದ್ದೆವು. ಅನಘಾ, ನೀನು ಹೋದಾಗಿನಿಂದ ನಮ್ಮನ್ನು ಕವಿದು ನಿಂತ ಕತ್ತಲೆಗೆ ಕೊನೆಯೇ ಇಲ್ವೇನೋ ಅನ್ನಿಸಿದೆ.
ಕಗ್ಗತ್ತಲ ಧ್ರುವದಲ್ಲಿ ನಿರಾಶೆಯ ಹಿಮದಲ್ಲಿ ಹೆಪ್ಪುಗಟ್ಟುತ್ತಿದ್ದೀವಿ.

ನೀನಿದ್ದ ದಿನಗಳ ಜಾದೂವಿನ ಒಂದೇ ಒಂದು ಅಂಶ ಎಲ್ಲೋ ಮೂಲೆಯಲ್ಲಿ ಅಡಗಿ ಕುಳಿತಿದೆ. ಆಗಾಗ ಕತ್ತಲು ಕವಿದ ಆಕಾಶದಲ್ಲಿ ಫಳ್ಳೆಂದು ಮಿಂಚಿ ಮರೆಯಾಗುತ್ತದೆ. ಪಿಸುನುಡಿಯುತ್ತದೆ. " ಕೃಷ್ಣಪಕ್ಷ ಮುಗಿದ ಕೂಡಲೇ ಅನಘಾ ಬರ್‍ತಾಳೆ " ಅಂತ.
ಹೌದಾ ಅನಘಾ? ಈ ಕೃಷ್ಣಪಕ್ಷ ಮುಗಿಯುತ್ತಾ? ನಿನ್ನಪ್ಪನಿಗೆ ತುಂಬ ದಿಗಿಲು."ಇಲ್ಲಿ ಎಷ್ಟು ಕತ್ತಲೇಂದ್ರೆ ಅನಘಾ ಅಕಸ್ಮಾತ್ ಬಂದ್ರೂ ನಾವು ಕಾಣಿಸ್ತೀವಾ" ಅಂತ. ಮರುಗಳಿಗೇಲಿ ಅವನೇ ಸಮಾಧಾನ ಮಾಡಿಕೊಳ್ಳುತ್ತಾನೆ. "ಅವಳು ಬೆಳದಿಂಗಳಲ್ವಾ, ನಮಗಂತೂ ಕಾಣಿಸುತ್ತಾಳೆ" ಅಂತ.

ಒಂದು ಬಾರಿ ಸುರಿದ ನಿನ್ನ ಧಾರೆಯನ್ನ ಹಿಡಿದಿಡಲಾಗದ ಅಸಹಾಯಕತೆ ನನ್ನ ಮಂಜುಗಟ್ಟಿಸಿದೆ ಅನಘಾ. ಇಲ್ಲಿ ಬಿಸಿ ಇರುವುದು ಒಂದೇ - ಕಣ್ಣೀರು.

ನಿನ್ನ ಅಮ್ಮನಾಗಲಾರದವಳು.
(ಕೊನೆಯ ಮಾತು - ಕ್ಷಮೆಯಿದೆಯೇ?.. ಇಲ್ದೇ ಇದ್ರೂ ಪರವಾಗಿಲ್ಲ, ಇದೆ ಅಂತ ಹೇಳು ಸಾಕು)

Tuesday, November 6, 2007

ಮಾತು-ಮೌನ

ಹುಲುಸಾಗಿ ಬೆಳೆದ ಮಾತಿನ ಬೆಳೆ,
ಭೂಮಿ ಹುಣ್ಣಿಮೆ ಕಳೆದು,
ಭೂರೆ ಅಭ್ಯಂಜನ ಸುರಿದು,
ಮಾಗಿಯ ಇಬ್ಬನಿಯ ಮೆದ್ದು,
ಸಂಕ್ರಮಣದ ಎಳೆಬಿಸಿಲ ಹೊದ್ದು
ಕಾಯುತ್ತ ಕೂತಿತ್ತು
ನಿನ್ನ ನಲುಮೆಯ ಕೊಯ್ಲಿಗೆ


ನೀನ್ಯಾಕೆ ಕೊಯ್ಲು ಬೇಸರವುಕ್ಕಿ
ಸುಮ್ಮನೆ ಕತ್ತರಿಸಿ
ಕಾಳೊಕ್ಕದೆ
ಮೌನ ಬಿತ್ತಿಬಿಟ್ಟೆ?!


ಇನ್ನೂ ಮಳೆಯ ಹದ ಕಾಣದ
ಬಿರುನೆಲದಲ್ಲಿ
ಬಿಮ್ಮಗೆ ಮೊಳಕೆಯೊಡೆದ ಮೌನ
ಒಕ್ಕದೇ ಹೋಗಿ
ಎಲ್ಲ ಕಾಳೂ ಜೊಳ್ಳಾಗಿ
ಮಾತು ಸಸಾರವಾಗಿ
ಕೇಳುವವರಿಲ್ಲದೆ ಬಿದ್ದು
ನಿದ್ದೆ ಎಚ್ಚರದ ನಡುವಿನ ಪಯಣ


ದೀಪಾವಳಿಯಂತೆ, ಹೊಸವರ್ಷ, ಹೊಸಬದುಕಂತೆ,
ನಿನ್ನ ಜೊತೆಬೆಳಕಿಲ್ಲದೆ ಇನ್ಯಾವ ದೀಪವಿದ್ದರೇನಂತೆ..?!


ಹೋಗಲಿ ನಸುನಗುವೊಂದೆರಡ ಬಿಸಾಕು
ನಿನ್ನ ನಲ್ದನಿಯ ಜೊತೆಯಿಲ್ಲದ
ಬೆಂದ ಮನಸಿಗಿಷ್ಟು ತಂಪು ಸೇಚನ..


--------------------
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ..
(ಜಿ.ಎಸ್.ಎಸ್ ಅಥವಾ ಕಣವಿಯವರ ಸಾಲು, ಯಾರದೆಂದು ಸರಿಯಾಗಿ ಗೊತ್ತಿಲ್ಲ)

Monday, November 5, 2007

ಮಗುಗಳ ಮಾಣಿಕ್ಯ

ಈ ಕತೆಯೊಳಗಿನ ಮಾಣಿಕ್ಯ ಈಗ ತಾನೇ ನಂಗೆ ಫೋನಲ್ಲಿ ಹೆಚ್ಚೂ ಕಮ್ಮಿ 10 ವರ್ಷಗಳ ನಂತರ ಮಾತಾಡಕ್ಕೆ ಸಿಕ್ಕಿದ. ಸಿಗಲು ಕಾರಣವಾದ ಭಾರತತ್ತೆಗೆ, ಅವನು ಅಲ್ಲಿಗೆ ಬರಲು ಕಾರಣವಾದ ಅವನ ಪ್ರಾಜೆಕ್ಟಿಗೆ..ಬಿಲಿಯನ್ ಥ್ಯಾಂಕ್ಸ್.

ದೀಪಾವಳಿಯ ರಜೆ ಕಳೆದು ವಾಪಸ್ ಬೆಂಗಳೂರಿಗೆ ಬಂದ ಕೂಡಲೇ ಅವನ ಮನೆಗೆ ಓಡಿ ಹೋಗುವವಳಿದ್ದೇನೆ.. ಅವನು ಈ ವರ್ಷ ಎಸ್ಸೆಸ್ಸೆಲ್ಸಿ.. :) ಉದ್ದ್ ದ್ದ್ ದ್ದಾಆಆಆಆಅಕ್ಕೆ ಬೆಳೆದಿದಾನಂತೆ.. !

ಫಲೂಡ ಎಲ್ಲಿರಬಹುದು.. ನಮ್ಮನೇಲಂತೂ ಒಂದು ಜೋಕಾಲಿಯಿದೆ.. :)

Wednesday, October 31, 2007

ಮಕ್ಕಳೆಂಬ ಮಾಯಾದೀಪ..

ಸುಜಯ್ ಈ ಬರಹ ನಿಮಗೇ! ಈಗ ಒಂಚೂರು ನಗಿ ನೋಡೋಣ... :)

ಅವಳು ಕುಳ್ಳಗಿದ್ದಳು. ಅಲ್ಲಿದ್ದವರೆಲ್ಲಾ ಕುಳ್ರೆ.. ಕನ್ನಡ ಶಾಲೆಯ ಐದನೇ ಕ್ಲಾಸಿನ ಮಕ್ಕಳು. ಮುಂದಿನ ಎರಡು ಸಾಲು ತುಸು ಕುಳ್ಳಗಿದ್ದ ಮಕ್ಕಳಿಗೆ, ಹಿಂದಿನ ಸಾಲುಗಳು ಉದೂದ್ದವರಿಗೆ.ಅವಳು ಮುಂದಿನ ಸಾಲಿನ ಮುಂದಿನ ಹುಡುಗಿ. ತುಂಬ ಮೆದು ಮತ್ತು ವಿನಾಕಾರಣ ಗಾಬರಿಗೊಂಡುಬಿಡುವವಳು. ದೊಡ್ಡ ದೊಡ್ಡ ಕಣ್ಣು, ಉದ್ದ ಜಡೆಗಳು, ಬಣ್ಣ ಬಣ್ಣದ ಫ್ರಾಕು ಬಂಗಾರದ ಬಳ್ಳಿಯ ಹಾಗೆ ಕಂಡವಳಿಗೆ ಸ್ವರ್ಣಲತಾ ಅಂತ ಅಪ್ಪ ಅಮ್ಮ ಹೆಸರಿಟ್ಟಿದ್ದರು.

ನಮ್ಮ ಉದ್ದೂದ್ದ ಮಕ್ಕಳಿಗೆ ಪಾಪದವಳ ಹಾಗಿರುವ ಸ್ವರ್ಣಲತಾ ಆಟಕ್ಕೆ ದಾರಿ. ಒಂದಿನ ಅವಳು ತುಂಬ ಸೀರಿಯಸ್ಸಾಗಿ ಜಾಸ್ತಿ ಟೈಮ್ ತಗೊಂಡು ಟೀಚರ್ ಕೊಟ್ಟ ಅಭ್ಯಾಸ ಬರೆಯುತ್ತಿದ್ದರೆ, ಹಿಂದೆ ಕುಳಿತ ಗೆಳತಿಯರು ಬೇಗ ಬೇಗ ಬರೆದು ಮುಗಿಸಿ, ಪಾಟಿಚೀಲದಲ್ಲಿದ್ದ ಯಾವುದೋ ದಾರದೆಳೆ ತೆಗೆದು ಅದರ ತುದಿಗೆ ಕಲ್ಲಿನಕಡ್ಡಿ ಮತ್ತು ಮುರಿದು ಹೋಗಿದ್ದ ಪ್ಲಾಸ್ಟಿಕ್ ಕ್ಲಿಪ್ಪು ಕಟ್ಟಿ ಇನ್ನೊಂದು ತುದಿಯನ್ನ ಸ್ವರ್ಣಳ ತೂಗಾಡುವ ಜಡೆಗೆ ಕಟ್ಟಿದರು. ಸ್ವರ್ಣ ಅರ್ಧ ಗಾಬರಿ ಅರ್ಧ ಯೋಚನೆಯಲ್ಲಿ ಬರೆಯುತ್ತ ಕೂತಿದ್ದಾಳೆ ಗೊತ್ತೇ ಆಗಿಲ್ಲ.

ಹೊರಗೆ ಪಕ್ಕದ ಕ್ಲಾಸಿನ ಟೀಚರನ್ನು ಮಾತಾಡಿಸಲು ಹೋಗಿದ್ದ ಶುಭಾವತಿ ಟೀಚರ್, ಮುಗಿಸಿದ್ರಾ ಅಂತ ಕೇಳ್ತಾ ಬಂದವರು ಮೊದಲು ಸ್ವರ್ಣನ್ನೇ ಕರೆದರು. ಮುಂದಿನ ಬೆಂಚಿನ ಮೊದಲ ಹುಡುಗಿ. ಅವಳು ಡಯಾಸ್ ಹತ್ತಿರ ಹೋಗುತ್ತಿದ್ದ ಹಾಗೆ ಕಿಸಿಕಿಸಿ ನಗು; ಮೊದಲು ಭಾಗ್ಯ ಬಾಯಿಗೆ ಕೈ ಅಡ್ಡ ಹಿಡಿದು ನಕ್ಕರೆ, ಹಿಂದೆ ಕೂತ ವಸು, ಲಕ್ಷ್ಮಿ ತಲೆ ತಗ್ಗಿಸಿ ನಗುತ್ತಿದ್ದಾರೆ. ರೂಪ ಸಿಂಧು ನಗು ಅಂದ್ರೆ ಗೊತ್ತಿಲ್ಲವೇನೋ ಅನ್ನೋ ಹಾಗೆ ಸೀರಿಯಸ್ ಮುಖ ಮಾಡಿಕೊಂಡು ಒಳಗೊಳಗೇ ನಗುತ್ತಿದ್ದಾರೆ. ಇವರೆಲ್ಲ ಹೀಗೆ ನಗ್ತಾ ಇದ್ರೆ, ಹುಡುಗರು ಸುಮ್ಮನಿರೋದು ಹ್ಯಾಗೆ ಹೇಳಿ? ರಘುರಾಮಂಗೇನೋ ಅನುಮಾನ ಬಂತು, ಭಾಗ್ಯನ್ನೇ ನೋಡಿದ, ಭಾಗ್ಯನ ಕಣ್ಗಳು ಸ್ವರ್ಣಳ ಜಡೆ ಮೇಲೆ. ಓಹೋ ಗೊತ್ತಾಗೇ ಹೋಯ್ತು. ಪಕ್ಕದಲ್ಲೇ ಕೂತ ನವೀನನ್ನ ತಿವಿದು ತೋರಿಸಿದ. ನವೀನ ನಗೋದ್ರಲ್ಲಿ ಎಕ್ಸ್ ಪರ್ಟ್. ಅವನು ಹಿಂದಿನ ಬೆಂಚಿನ ರಾಘು, ನೂರುಲ್ಲ,ಜಗದೀಶನ್ನ ಕಣ್ ಸೆಳೆದ.

ಇವರಾಟಾ ನೋಡ್ತಾ ಇದ್ದ ಉಳಿದವರೂ ಈಗ ನಗತೊಡಗಿದರು. ಇಡೀ ಕ್ಲಾಸಿಗೆ ಕ್ಲಾಸೇ ಒಂದೇ ಮುಖವಾಗಿ ನಗುವಿನ ತೆರೆ ಹೊದ್ದು ಕೂತಿತು. ಶಬ್ಧದ ಕಾವಿಗೆ ಒಡೆದೇ ಹೋಗುತ್ತೇನೋ ಎಂಬಂತೆ ಎಲ್ಲರೂ ಸದ್ದಿಲ್ಲದೆ ನಗುತ್ತಿದಾರೆ. ಶುಭಾವತಿ ಟೀಚರ್ ಟೇಬಲ್ ಮೇಲೆ ನೋಟುಬುಕ್ಕು ನೋಡ್ತಾ ಇದಾರೆ. ಅವರ ಪಕ್ಕದಲ್ಲಿ ಸ್ವರ್ಣ ಕ್ಲಾಸಿಗೆ ಬೆನ್ನು ಹಾಕಿ, ಪುಸ್ತಕವನ್ನೇ ನೋಡುತ್ತಾ ಹೆದರಿಕೆಯಲ್ಲಿ ನಿಂತಿದಾಳೆ. ಟೀಚರ್ ಏನೋ ಒಂದೆರಡು ಕಾಗುಣಿತ ಗುರುತು ಹಾಕಿದವರು, ಪರಾಇಲ್ಲ, ಮುಂದಿನ ಸಲ ಒಂದೂ ತಪ್ಪಿಲ್ದಂಗೆ ಬರೀಬೇಕು ಅಂತ ತಲೆ ಎತ್ತಿದರು. ಸರಿ ಸರಿ ಅಂತ ಸ್ವರ್ಣ ತಲೆಯಲ್ಲಾಡಿಸುವಾಗ, ಟೀಚರ್ ಕ್ಲಾಸನ್ನೂ ಕ್ಲಾಸನ್ನು ಆವರಿಸಿದ ನಗುವಿನ ತೆರೆಯನ್ನು ಅದರ ಕೇಂದ್ರವನ್ನೂ ಗಮನಿಸಿಬಿಟ್ಟರು. ಅವರಿಗೂ ನಗು ಬಂದ್ ಬಿಡ್ತು. ಅವರನ್ನೇ ನೋಡ್ತಿದ್ದ ಸ್ವರ್ಣ ಗಾಬರಿಯಾಗ್ ಬಿಟ್ಟಳು.

ಯಾರ್ರೇ ಅದು ಹಂಗ್ ಮಾಡಿದ್ದು, ಕೋಪ ನಟಿಸುತ್ತ ಟೀಚರ್ ಕೇಳಿದರೂ ಅವರ ದನಿಯಲ್ಲಿ ನಗುವಿತ್ತು. ಈಗ ನಿಧಾನವಾಗಿ ಸ್ವರ್ಣಂಗೆ ಎಲ್ರೂ ತನ್ನೇ ನೋಡಿ ನಗ್ತಿದಾರೆ ಅಂತ ಗೊತ್ತಾಯ್ತು. ಯಾಕೆ ಏನು ಅಂತ ಗೊತ್ತಿಲ್ಲ ಅವಳಿಗೆ ಅಳುವೇ ಬಂದ್ ಬಿಡ್ತು. ಟೀಚರ್ ಗೆ ಪಾಪ ಅನ್ನಿಸಿ, ನೋಡು ದಾರ ಕಟ್ಟಿದಾರೆ ಬಿಚ್ಕೋಮ್ಮಾ ಅಂತಾ ಇದ್ದ ಹಂಗೆ ಸ್ವರ್ಣ ತಡೆಹಿಡಿದಿದ್ದ ನೀರು ಕಣ್ಣಿಂದ ಕೆಳಗುರುಳೇ ಬಿಟ್ಟಿತು. ಕಾಡಿಗೆ ಹಚ್ಚಿದ್ದ ಆ ದೊಡ್ಡ ದೊಡ್ಡ ಕಣ್ಣುಗಳು ಪುಟ್ಟ ಪುಟ್ಟ ನಲ್ಲಿಯಂತೆ ಧಾರಾಕಾರ ನೀರು. ಒಂದು ಕೈಯಲ್ಲಿ ಕಣ್ಣೊರೆಸುತ್ತಾ ಇನ್ನೊಂದು ಕೈಯಲ್ಲಿ ಆ ದಾರ ಬಿಡಿಸಲು ಕಷ್ಟಪಡುತ್ತಿದ್ದರೆ ಅಲ್ಲಿಯವರೆಗೂ ನಗುತ್ತಿದ್ದ ಇಡೀ ಕ್ಲಾಸಿಗೆ ಇದ್ದಕ್ಕಿದ್ದಂತೆ ಎತ್ತಿ ಬಿಸಾಡಿದಂತಾಯಿತು.

ರೂಪ, ವಸು ಓಡಿ ಹೋಗಿ ದಾರ ಬಿಡಿಸಿಕೊಟ್ಟು ಅವಳನ್ನ ಕರೆದುಕೊಂಡು ಬಂದು ವಾಪಸ್ ಬೆಂಚಲ್ಲಿ ಕೂರಿಸಿದರು. ಭಾಗ್ಯ ಎದ್ದುಹೋಗಿ ಟೀಚರ್ ಕೈಯಿಂದ ನೋಟ್ ಬುಕ್ಕು ತಗೊಂಡು ಬಂದಳು. ಲಕ್ಷ್ಮಿ ತನ್ನ ಕಸೂತಿ ಹಾಕಿದ ಕರ್ಚಿಫ್ ಕೊಟ್ಟಳು. ಸಿಂಧು ಬ್ಯಾಗಲ್ಲಿ ಸಂಜೆ ಆಟವಾಡಬೇಕಾದ್ರೆ ಅಂತ ಎತ್ತಿಟ್ಟುಕೊಂಡಿದ್ದ ಚಿಕ್ಕಿಯನ್ನ ಸುನೀತಾ ಮೂಲಕ ಸ್ವರ್ಣಳಿಗೆ ಕಳಿಸಿದಳು. ಹುಡುಗರೆಲ್ಲ ಇದ್ದಕ್ಕಿದ್ದಂಗೆ ಗಂಭೀರವಾಗಿ ತಮ್ಮ ತಮ್ಮ ಅಭ್ಯಾಸದಲ್ಲಿ ಮುಳುಗಿಹೋದವರ ಹಾಗೆ ಕೂತುಕೊಂಡರು. ಟೀಚರ್ ಕೂಡಾ ಹುಡುಗರ ನೋಟ್ಸ್ ಪರಿಶೀಲನೆ ಮಾಡತೊಡಗಿದರು. ಹತ್ತು ನಿಮಿಷದಲ್ಲಿ ರಿಸೆಸ್ ಬೆಲ್ಲಾದ ಕೂಡಲೆ ಟೀಚರ್ ಹೊರಟುಹೋದರು.

ಎಲ್ಲರೂ ಸ್ವರ್ಣಳ ಸುತ್ತ ಅವಳಿಗಿಷ್ಟವಾಗಲಿ ಅಂತ ಏನೇನೋ ಕಸರತ್ತು ಮಾಡಿದರು.ಯಾವಾಗಲೂ ಎಲ್ಲರ ಹತ್ತಿರವೂ ಸಿಟ್ಟು ಮಾಡಿಕೊಂಡೇ ಇರುವ ಪ್ರೇಮ, ಅವಳ ಬ್ಯಾಗಿಂದ ಒಂದು ಮಾವಿನ ಮಿಡಿ ತೆಗೆದು ಸ್ವರ್ಣಳ ಕೈಗಿತ್ತಳು. ಅವಳ ಬಾಡಿ ಹೋದ ಮುಖ ಚೂರು ಚೂರಾಗೆ ಅರಳಿ ಮತ್ತೆ ಹೂವಾಯಿತು. ಬಂಗಾರದ ಬಳ್ಳಿಯಲ್ಲಿ ಕಿರುನಗೆಯ ಹೂವರಳಿ..

ಇದೆಲ್ಲ ಯಾಕೆ ನೆನಪಾಯಿತೆಂದರೆ ಒಂದು ಪುಸ್ತಕ ಓದ್ತಾ ಇದೀನಿ. "ಕೈಟ್ ರನ್ನರ್" ಅಂತ ಖಾಲಿದ್ ಹುಸೇನಿ ಯವರು ಬರೆದ ಕಾದಂಬರಿ. ಇಬ್ಬರು ಪುಟ್ಟ ಗೆಳೆಯರು ಅವರ ಮಧ್ಯದ ವಿನಾಕಾರಣ ಪ್ರೀತಿ, ಸಿಟ್ಟು ಹತಾಶೆ, ಕುಟುಂಬ ಜೀವನ, ಸುಮ್ಮನೆ ಹೂವರಳಿದಂತೆ ಇದ್ದ ಊರೊಂದು ಅಕ್ಕಪಕ್ಕದವರ ದುರಾಸೆಯಿಂದ ಯುದ್ಧಭೂಮಿಯಾಗಿ ಇವತ್ತು ಜಗತ್ತಿನ ಪವರ್ ಫುಲ್ ದೇಶಗಳನ್ನೇ ನಡುಗಿಸುವ ಉಗ್ರಗಾಮಿ ದೇಶವಾಗಿ ಬದಲಾದ ಹೃದಯಸ್ಪರ್ಶಿ ಚಿತ್ರಣ.. ಹೌದು ಇದು ಆಫ್ಗಾನಿಸ್ತಾನದಲ್ಲಿ ನಡೆವ ಕತೆ. ಇನ್ನೂ ಪೂರ್ತಿ ಮುಗಿಸಿಲ್ಲ.. ಪುಸ್ತಕದ ಪುಟಪುಟವೂ ಒಂದು ಮಾರ್ದವ ಅನುಭೂತಿಯನ್ನು ಕಟ್ಟಿಕೊಡುತ್ತದೆ.

ಮಕ್ಕಳು ಹೇಗೆ ಏನು ಗೊತ್ತಿಲ್ಲದೆ ಯಾವುದೋ ಇನ್ನೊಂದು ಪುಟ್ಟ ಮನಸ್ಸನ್ನ ಹೇಗೆ ಮುದುಡಿಸುತ್ತಾರೆ ಮತ್ತು ಮಕ್ಕಳು ಹೇಗೆ ಒಂದು ಪುಟ್ಟ ಖುಷಿಯಲ್ಲಿ ಏನೆಲ್ಲ ದುಃಖವನ್ನು ಮರೆತುಬಿಡುತ್ತಾರೆ..! ಡಯಾಸಿನ ಮೇಲೆ ಅಳುತ್ತಿದ್ದ ಸ್ವರ್ಣ ಗೆಳತಿಯರೆಲ್ಲ ಜೊತೆಗೂಡಿದ ಕೂಡಲೆ ಒಂದು ಪುಟ್ಟ ಚಿಕ್ಕಿಯಿಂದ, ಮಾವಿನ ಮಿಡಿ ಚೂರಿಂದ ಎಷ್ಟು ಖುಷಿ ಪಡುತ್ತಾಳಲ್ಲವಾ?

ಈ ಕಾದಂಬರಿ ಮಕ್ಕಳೆಂಬ ಮಾಯಾದೀಪದ ಬೆಳಕಲ್ಲಿ ಮನುಷ್ಯನ ನೂರೆಂಟು ಒಳಮುಖಗಳನ್ನ, ಸಂಬಂಧ,ಧರ್ಮ, ರಾಜಕೀಯದ ಹಲವು ಹತ್ತು ಮಗ್ಗುಲುಗಳನ್ನ ಅನನ್ಯವಾಗಿ ಕಟ್ಟಿಕೊಡುತ್ತದೆ. ಅಷ್ಟೆ ಅಲ್ಲ ನಮಗೆ ಪರಿಚಯವೇ ಇಲ್ಲದ ಪ್ರೀತಿ ಹುಟ್ಟಿಸುವ ಕಾಬೂಲಿವಾಲರನ್ನ ಅನಾವರಣಗೊಳಿಸುತ್ತದೆ.ರಷ್ಯನ್ ದಾಳಿಗೂ ಮೊದಲು ಇದ್ದ ಸಾದಾ ಸೀದಾ ಆಫ್ಘಾನಿಸ್ತಾನ, ರಷ್ಯನ್ ದಾಳಿಯಲ್ಲಿ ಪುಡಿಗೊಂಡ ಆಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ಧರ್ಮಾಂಧತೆಯಲ್ಲಿ ಉಸಿರುಕಟ್ಟಿ ನೇತಾಡುತ್ತಿರುವ ಆಫ್ಘಾನಿಸ್ತಾನದ ಒಂದು ಅಪರೂಪದ ಚಿತ್ರಣವಿಲ್ಲಿದೆ. ಹೇಗಾದರೂ ಮಾಡಿ ಪುರುಸೊತ್ತು ಮಾಡಿ ಓದಿ.

ಕಾದಂಬರಿಯ ಬಗ್ಗೆ ಒಂದಿಷ್ಟು ರಿವ್ಯೂ ಅದೂ ಇದೂ ವಿವರಗಳು ಇಲ್ಲಿವೆ. ಮತ್ತೊಂದು ವಿಶೇಷ ಅಂದ್ರೆ ಇದು ಸಿನಿಮಾ ಕೂಡಾ ಆಗ್ತಿದೆ. ಡಿಸೆಂಬರಲ್ಲಿ ರಿಲೀಸ್ ಅಂತ ಹಾಕಿದಾರೆ.

Thursday, October 18, 2007

ಗಡೀಪಾರು ಗವಾಕ್ಷಿ

ಸಂಜೆಯ ಸೂರ್ಯ ಬೆಂಕಿ ಕಿರಣಗಳ ಶಾಲು ಹೊದ್ದು ಪಶ್ಚಿಮದ ಗೂಡಿಗೆ ಹತ್ತಿರವಾಗುತ್ತಿದ್ದ. ಸ್ವಲ್ಪ ಮೊದಲು ನಿಂತ ಮಳೆಯಿಂದಾಗಿ, ಸಾಯಂಕಾಲದ ದೀಪ ಹಚ್ಚಲು ಕೈಕಾಲು ಮುಖ ತೊಳೆದ ಹುಡುಗಿಯಂತೆ ಫ್ರೆಷ್ಷಾಗಿದ್ದ ಭೂಮಿ. ಆಕಾಶದ ತುಂಬ ಇನ್ನೂ ಚದುರಿರದ ಬಿಳಿ ಬಿಳಿ ಮೋಡ. ಸಂಜೆ ಇಷ್ಟು ಚಂದ ಇದ್ದರೆ ಅಂಶು ಎಷ್ಟೇ ತಡಮಾಡಿ ಬಂದರೂ ಕಾಯುತ್ತೇನೆ ಅಂದ್ಕೊಂಡು ಕಲ್ಲು ಬೆಂಚಿಗೆ ಹಾಗೇ ಒರಗಿ ಪಾರ್ಕಿನ ಬೇಲಿಯಾಚೆಗಿದ್ದ ರಸ್ತೆಗೆ ಕಣ್ಣು ಬಿಸಾಕಿ ಕೂತೆ.

ವಿಧ ವಿಧವಾದ, ರಂಗುರಂಗಿನ, ಹಲವು ವಾಹನಗಳು ಮೂತಿಯುಬ್ಬಿಸಿ ಸುಂಯ್ ಅಂತ ಹೋಗ್ತಿದ್ರೆ, ಕೈನಿ, ಬೈಕುಗಳು ನಾವೇನು ಕಡ್ಮೆ ಎಂದು ಜುಮ್ ಅಂತ ಓವರ್‌ಟೇಕ್ ಮಾಡ್ತಿವೆ. ಆಟೋರಾಜರಂತೂ ಬಡಪಾಯಿ ಪ್ರಯಾಣಿಕ ಪ್ರಜೆಗಳು ಕೈ ಅಡ್ಡ ಹಾಕಿರುವುದನ್ನು ಲಕ್ಷಿಸದೆ ರಾಜಗಾಂಭೀರ್ಯ ಮತ್ತು ವೇಗಗಳಿಂದ ತಮ್ಮ ಹಿರಿಮೆಗೆ ತಕ್ಕಂತೆ ಸಾಗುತ್ತಿವೆ. ನೀವು ಮಾತ್ರ ರಸ್ತೆಯಿಡೀ ಸವಾರಿ ಮಾಡ್ತಿದ್ರೆ, ನಾವೇನು ನಿಲ್ದಾಣದಲ್ಲೇ ಇರ್ಬೇಕಾ ಎಂದು ಗುರುಗುಟ್ಟುವ ಸಿಟಿಬಸ್ಸುಗಳು, ನಿಮ್ದು ಸ್ಪೀಡಾದ್ರೆ ನಮ್ದು ಸೌಂಡು ಅಂತ ಹಾರನ್ನಿಸುವ ಲಾರಿಗಳು, ಈ ಎಲ್ಲ ಮೋಟಾರುಗಳ ಮಧ್ಯೆ ಶಿಲಾಯುಗದ ಗಾಂಭೀರ್ಯದಿಂದ ತಲೆತಗ್ಗಿಸಿ ಅಲ್ಲೊಂದು ಇಲ್ಲೊಂದು ಎತ್ತಿನ ಗಾಡಿ... ಇಲ್ಲಿ ಪಾರ್ಕಿನ ಕಾಲುಹಾದಿಯಲ್ಲಿ ಸೈಕಲ್ ಕಲಿವ ಚಿಣ್ಣರು, ಹುಲ್ಲಿನ ಮೇಲೆ ಕುಳಿತು ಗಹಗಹಿಸಿ ನಕ್ಕು ವ್ಯಾಯಾಮ ಮಾಡುತ್ತಿರುವ ಅಜ್ಜ ಅಜ್ಜಿಯರು.. ಸುತ್ತಮುತ್ತಲು ನೂರೆಂಟು ಚಿತ್ರಗಳ ಗ್ಯಾಲರಿಯಾಗಿ ಭಾಸವಾಯಿತು.

ಸೂರ್ಯ ಮನೆಗೆ ಹೋಗ್ತಾ ಹಾಗೇ ಬಿಟ್ಟು ಹೋದ ಬಣ್ಣದ ಕ್ಯಾನ್ವಾಸಿನ ಮೇಲೆ ರಾತ್ರಿ ತನ್ನ ಕಪ್ಪುನೀಲಿ ತೆರೆ ಹೊದೆಸತೊಡಾಗಿತು. ಅಲ್ಲಲ್ಲಿ ಒಂದೊಂದು ಮಿನುಗು ಚುಕ್ಕಿ. ಅಲ್ಲಿ ದೂರದ ತಿರುವಿನಲ್ಲಿ ಮಿನುಗಿದ ದೀಪ ಅಂಶುನ ಬೈಕಿಂದಾ? ನೋಡಲು ಬಗ್ಗಿದೆ - ಅಲ್ಲ. ಈ ಮಾರಾಯ ಇನ್ನೂ ಎಷ್ಟು ಹೊತ್ತಿಗೆ ಬರ್ತಾನೋ ಅಂದುಕೊಳ್ತಾ ತಲೆಯೆತ್ತಿದೆ. ನನ್ನ ನೋಟದ ನೇರಕ್ಕೇ ಆಕಾಶದ ನೀಲಿಯಲ್ಲಿ ಒಂದು ಬಿಳೀ ವರ್ತುಲವಿತ್ತು. ಬಿಳಿಯೆಂದರೆ ಬಿಳಿಯಲ್ಲ, ಬೂದುಬಣ್ಣ, ಅಂಚು ಮಾತ್ರ ಅಚ್ಚ ಬಿಳಿ. ಆಕಾಶದ ಗವಾಕ್ಷಿಯಂತೆ ಕಾಣುವ ಇದನ್ನು ಅಂಶುಗೆ ತೋರಿಸಿ ವಿವರ ಕೇಳಬೇಕು ಅಂದುಕೊಂಡೆ.

"ಮೇಡಂ ಅದು ಗವಾಕ್ಷಿಯೇ, ಆದ್ರೆ ಆಕಾಶದ್ದಲ್ಲ, ಗಡೀಪಾರುಗವಾಕ್ಷಿ" ಅಂತ ಒಂದು ಆಳದ ದನಿ ಕೇಳಿಸಿತು. ಒಂದರೆ ಕ್ಷಣ ಭಯದಿಂದ ಕೂದಲು ನಿಮಿರಿ "ಅಂಶು" ಅಂತ ಸಿಟ್ಟಿನಿಂದ ಪಕ್ಕಕ್ಕೆ ತಿರುಗಿದರೆ ಅಲ್ಲಿ ಯಾರಿಲ್ಲ.

ಮಾತಾಡಿದ್ದು ನಾನು ಮೇಡಂ.. ಮತ್ತದೇ ವಿಲಕ್ಷಣ ದನಿ. ನನ್ನೆದೆ ಬಡಿತ ನನಗೇ ಕೇಳುತ್ತಿತ್ತು. 'ಇನ್ಯಾವತ್ತೂ ಸೂರ್ಯ ಮುಳುಗಿದ ಮೇಲೆ ಅಂಶುಗೆ ಕಾಯಲ್ಲ, ಭೂಮಿತಾಯಾಣೆಗೂ ಅಂದುಕೊಳ್ತಾ ಆ ದನಿಯ ದಿಕ್ಕಿಗೆ ತಿರುಗಿದೆ. ಅಲ್ಲಿ ಬೆಂಚಿನ ಪಕ್ಕದಲ್ಲಿ, ತೂಗಿ ನಿಂತಿದ್ದ ಆಕಾಶಮಲ್ಲಿಗೆಯ ಮರದಡಿಯಲ್ಲಿ ಎರಡು ಕಣ್ಣುಗಳು ಫಳಫಳಿಸುತ್ತಿದ್ದವು. ಹೆದರಿಕೆಯಿಂದ ಎದ್ದು ನಿಂತುಕೊಂಡೆನಾದರೂ ಹೆಜ್ಜೆ ಮುಂದಡಿಯಿಡಲಾಗಲಿಲ್ಲ. ಈ ಹಾಳು ಕಣ್ಣೋ ಬೇರೆ ಕಡೆಗೆ ನೋಡುತ್ತಲೂ ಇಲ್ಲ. ಈಗಷ್ಟೇ ಹೊತ್ತಿಕೊಂಡ ಬೀದಿದೀಪದ ಬೆಳಕು ಆತನ ಮೇಲೆ ಬೀಳುತ್ತಿತ್ತು. ಮಧ್ಯವಯಸ್ಕನ ಹಾಗಿದ್ದ. ತಿಳಿಬಣ್ಣದ ಬಟ್ಟೆ, ಆ ಮರಕ್ಕೊರಗಿ ಕೂತಿದ್ದ. ಮಬ್ಬುಗತ್ತಲ ಹಿನ್ನೆಲೆ ಭಯ ಹುಟ್ಟಿಸುತ್ತಿತ್ತಾದರೂ ಅವನನ್ನು ನೋಡಿ ಭಯವಾಗಲಿಲ್ಲ.

'ಭಯ ಯಾಕೆ ಮೇಡಂ? ನೀವು ಕಾಯುತ್ತಿರುವವರು ಇನ್ನು ಐದ್-ಹತ್ತು ನಿಮಿಷದಲ್ಲಿ ಬರ್ತಾರೆ. ಅವ್ರಿಗೆ ಈ ಗವಾಕ್ಷಿ ಬಗ್ಗೆ ಏನೂ ಗೊತ್ತಿಲ್ಲ" ಅಂದವನ ಮುಖದಲ್ಲಿ ನಗು ಕಾಣಿಸಿತಾ..? 'ಲೇ ಚಂದೂ, ಚಂದನಾ, ಮಂಕೇ, ಸುಮ್ನೇ ಇಲ್ಲಿಂದ ನಡೆದು ಅಲ್ಲಿರೋ ಬಸ್‌ಸ್ಟಾಪಲ್ಲಿ ನಿಂತರೆ ೪೩ ಬರತ್ತೆ. ಬೇಡ, ಇವತ್ತು ಆಟೋಲೆ ಹೋಗು, ಇಲ್ಲಿ ನಿಲ್ಬೇಡವೇ ಅಂತ ಮನಸ್ಸು ಛೀಮಾರಿ ಹಾಕುತ್ತಿದ್ರೆ, ನಾನು ಪಾರ್ಕಿನ ಗೇಟಿನ ಕಡೆಗೆ ಹೆಜ್ಜೆ ಕಿತ್ತಿಟ್ಟೆ. ಆ ಮರ ದಾಟುವಾಗ ಅದ್ಯಾವ ಭಂಡತನವೋ ಅಲ್ಲಿ ನಿಂತು "ಅದೇನದು ಗಡೀಪಾರು ಗವಾಕ್ಷೀಂದ್ರೆ? ಅದ್ಯಾಕೆ ಅಲ್ಲಿದೆ? ಅದ್ರ ಬಗ್ಗೆ ನಿಮಗೇನು ಗೊತ್ತು? ಕೇಳಿಯೇಬಿಟ್ಟೆ. ಆವನು ಕೊಟ್ಟಿದ್ದು ಉತ್ತರವೋ ಕವಿತೆಯೋ ಅರ್ಥವಾಗಲಿಲ್ಲ.


"ಹೂಗನಸ ಬಿತ್ತಿ ಬೆಂಕಿಬೆಳೆ ಬೆಳೆದ ಕನಸಿಗ,
ಕನಸುಗಳ ಸಾಮ್ರಾಜ್ಯದಿಂದ
ಗಡೀಪಾರಾದ.
ಮುಖವಿಲ್ಲದ ಜನಸಂದಣಿಯಲ್ಲಿ
ನೆಮ್ಮದಿಯ ನಗುವನರಸುತ್ತಕಳೆದುಹೋದ.."


ಮತ್ತೆ ಅವನೇ ಮಾತಾಡಿದ - ನಿಮಗೆ ಕಾಣಿಸುವ ಆ ವರ್ತುಲದ ಹಿಂದಿರುವುದು ಕನಸುಗಳ ಸಾಮ್ರಾಜ್ಯ, ಅದು ಆ ಸಾಮ್ರಾಜ್ಯದ ಗವಾಕ್ಷಿ. ಅಲ್ಲಿಂದ ಗಡೀಪಾರಾದವರೆಲ್ಲ ಆ ಗವಾಕ್ಷಿಯಿಂದಾನೇ ಈ ಕಡೆ ಬಂದು ಬೀಳೋದು. " ನಾನು ತಬ್ಬಿಬ್ಬಾದೆ. ಕನಸು, ಕನಸಿನ ಸಾಮ್ರಾಜ್ಯ ಅರ್ಥವಾಯ್ತು. ಈ ಗಡೀಪಾರು-ಗವಾಕ್ಷಿ ಎಲ್ಲ ಗೊಂದಲವಾಗ್ತಿದೆ. 'ನೀವೂ' ಅಷ್ಟರಲ್ಲಿ ಆತನೇ ಹೇಳಿದ.
'ನಾನೂ ಅಲ್ಲಿಂದ ಈಗ ೨೦ ವರ್ಷಗಳ ಕೆಳಗೆ ಗಡೀಪಾರಾಗಿ ಈ ಕಡೆ ಬಂದು ಬಿದ್ದೆ. ಆಗಾಗ ಇಲ್ಲಿ ಬಂದು ಕೂತು ಬರಿಯ ಗವಾಕ್ಷಿ ನೋಡಿ ಮನೆಗೆ ವಾಪಸಾಗ್ತೀನಿ. ನಿಮಗೆ ಪೂರ್ತಿ ಅರ್ಥವಾಗೋ ಹಾಗೆ ಹೇಳ್ಬೇಕಾದ್ರೆ ತುಂಬ ಸಮಯ ಬೇಕು. ನಿಮಗೆ ಆ ಗವಾಕ್ಷಿ ಕಾಣಿಸ್ತಾ ಇದೆ ಅನ್ನೋದೆ ಅರ್ಧ ವಿಷಯ ಅರ್ಥವಾದ ಹಾಗೆ. ಅಲ್ನೋಡಿ ನಿಮ್ಮವರು ಬರ್ತಿದ್ದಾರೆ. ನಾನು ಹೊರಟೆ. ನಾವು ನಾಳೆಯಲ್ಲ ನಾಡಿದ್ದು ಇಲ್ಲೇ ಸಿಗೋಣ.. ಅಂದವನೇ ಸರ್ರನೆದ್ದು ಆ ಪಾರ್ಕಿನ ಕತ್ತಲೆಯಲ್ಲಿ ಕಳೆದು ಹೋದ.

ಸಾರಿ ಚಂದೂ ತುಂಬ ಕಾಯಿಸ್ಬಿಟ್ಟೆ.. ಅಂತ ಓಡುತ್ತ ಬಂದ ಅಂಶುವಿಗೆ ಆಕಾಶ ತೋರಿಸಿ ಕೇಳಿದೆ. ಅಲ್ಲಿದೆಯಲ್ಲಾ ಗವಾಕ್ಷಿ, ಆ ಬಿಳೀ ವರ್ತುಲ ಅದೇನದು? ಯಾವ ವರ್ತುಲಾನೇ? ಅಲ್ಲಾ ನಾನು ಲೇಟಾಗಿ ಬಂದೆ ಅಂತ, ನೀನು ಹೀಗೆಲ್ಲ ತಮಾಷಿ ಮಾಡ್ಬೇಡ. ಬಾ ಕಾಫಿ ಕುಡೀತಾ ಮಾತಾಡೋಣ..
ಸುಮ್ಮನಾದೆ. ಮಾತು ಪ್ರಶ್ನೆಗಳನ್ನ ನಾಡಿದ್ದಿಗೆ ಕಾದಿಡೋಣ ಅನಿಸಿತು.

ಬೆಳಿಗ್ಗೆ ಎಂಟೂಮುಕ್ಕಾಲಿಗೆ ಜೆ.ಸಿ.ರಸ್ತೆಯ ಸಿಗ್ನಲ್ಲಿನಲ್ಲಿಳಿದು ಸರಸರನೆ ನಡೆಯುತ್ತಿದ್ದೆ. ಅಂಗಡಿಗಳೆಲ್ಲ ಆಗತಾನೆ ಕಣ್ಣು ತೆರೆಯುತ್ತಿದ್ದವು. ನಮ್ಮೆಲ್ಲರ ವಾಹನಗಳನ್ನು ಪುಷ್ಪಕವಿಮಾನದಂತೆ ಮಾರ್ಪಡಿಸುವ ಆಟೋ ಸಲಕರಣೆಗಳ ಅಂಗಡಿಗಳಿದ್ದವು ಇಕ್ಕೆಲದಲ್ಲಿ. ತಲೆಗೆ ಬಲೆಬಲೆಯ ಬಿಳೀ ಟೋಪಿ ಹಾಕಿದ ದೊಡ್ಡ ಪೋರ, ಅವನಂಗಡಿಯ ಕರಿ ಬಿಳಿ ಮ್ಯಾಟ್ರೆಸ್ ಎಳೆದು ರಸ್ತೆಗೆ ಕಾಣಿಸುವ ಹಾಗೆ ಕಟ್ಟಿಡುತ್ತಾ, ಪಕ್ಕದ ಅಂಗಡಿಯಲ್ಲಿ ವೆಂಕಟ್ರಮಣನ ಫೋಟೋಕ್ಕೆ ಮಲ್ಲಿಗೆ ಮಾಲೆ ಕೊಳ್ಳುತ್ತಿದ್ದ ಇನ್ನೊಂದ್ ಸ್ವಲ್ಪ ದೊಡ್ಡ ಪೋರನಿಗೆ ನಕ್ಕು ಕುಶಲೋಪರಿ ವಿಚಾರಿಸುತ್ತಿದ್ದ. ನಕ್ಕೋ ಬೇ, ನಿನ್ನೇದು ರಾತ್ರೆ ಶಟ್ರ್ ಎಳ್ಕೊಂಡಿ ಹೋಗೋಷ್ಟೊತ್ತಿಗೆ ಟಿಕೇಟ್ ಎಲ್ಲಾ ಸೋಲ್ಡ್ ಔಟು.. ಹಾಂ ಅದೇ ನನ್ಮಗಂದು ಡಬ್ಬಾ ಸಿನ್ಮಾ, ದುಡ್ಯೋ ಮಗಾ ಯಾವನು ಬ್ಲಾಕಲ್ಲಿ ತಕೊಂಡು ನೋಡ್ತದೆ.. ಈವತ್ತು ಜಲ್ದೀ ಹೊಲ್ಟ್ರೆ ನೋಡಬೈದು..ಮುಂದೆ ಕೇಳಿಸಲಿಲ್ಲ. ರಸ್ತೆ ದಾಟಬೇಕಿತ್ತು.

ದಾಟುವಾಗ ಗಮನಿಸಿದೆ. ನನ್ನ ಪಕ್ಕದಲ್ಲೇ ಒಬ್ಬ ಅಜ್ಜ.. ದಾಟಿಸಬೇಕೇನೋ ಅಂದ್ಕೊಂಡೆ. ನನ್ನನ್ನ ಗಮನಿಸಿದ ಅವನ ಮುಖದಲ್ಲಿ ನಸುನಗು.

ಎಲ್ಲಾರ್ಗೂ ದಾಟ್ಸೋ ನಂಗೇ ಸಹಾಯನೇನಮ್ಮಾ? ಅಷ್ಟು ವಯಸ್ಸಾದ ಹಾಗೆ ಕಾಣ್ತೀನಾ? ನಂಗೆ ಸಂಕೋಚವಾಯಿತು. ಇಲ್ಲಜ್ಜ, ವಯಸ್ಸಾದ ಹಾಗೇಂತಲ್ಲ. ನೀವು ಆಚೆ ಈಚೆ ನೋಡುತ್ತಾ ನಿಧಾನ ಮಾಡ್ತಿದ್ರಲ್ಲಾ ಅದಕ್ಕೇ... ನಾನು ನಿಂಗೇ ಕಾಯ್ತಿದ್ದೆ ಕಣಮ್ಮೋ..ನಂಗೆ ಯೋಚನೆಯಾಯಿತು. ಮತ್ತೆ ಆತನನ್ನು ದಿಟ್ಟಿಸಿದೆ. ವಯಸ್ಸು ತನ್ನ ಛಾಪನ್ನ ಚೆನ್ನಾಗೇ ಒತ್ತಿತ್ತು. ನಿರಿಬಿದ್ದ ಚರ್ಮ, ಹಣ್ಣಾದ ಕೂದಲು, ವಯಸ್ಸಿನ ಭಾರದಿಂದ ಬಾಗಿದ ಬೆನ್ನು.. ಆ ಮುಖದಲ್ಲಿನ ಹೊಳೆವ ಕಣ್ಗಳೆರಡು ಮಾತ್ರ ಅಜ್ಜನ ಜೀವಂತಿಕೆಯನ್ನು, ಚೈತನ್ಯವನ್ನು ಸಾರಿ ಹೇಳುತ್ತಿತ್ತು. ಓದಿಕೊಂಡವರ ಹಾಗೆ ಕಾಣಲಿಲ್ಲ. .. ನನ್ನ ಮನಸ್ಸನ್ನು ಓದಿದವರ ಹಾಗೆ ಹೇಳಿದ ಅವನು.

ಹೌದ್ ತಾಯೀ, ನಾನು ಶ್ಯಾನೆ ಓದ್ಕಂಡಿಲ್ಲ. ಇಂಗೇ ಕನ್ನಡ ಪ್ಯಾಪ್ರು, ಬಿಲ್ಲು, ಅಡ್ರೆಸ್ಸು, ಓದ್ಬಲ್ಲೆ. ಹೆಬ್ಬೆಟ್ಟಲ್ಲ... ಅಂಗೂ ಇಂಗೂ ಏನಾದ್ರೂ ಅರ್ಜಿ ಕೊಡೋವಾಗ ತೆಪ್ಪಾದ್ರೂ ನಾನೇ ಬರ್ದಾಕ್ತೀನಿ.. ಇಬ್ಬರೂ ರಸ್ತೆ ದಾಟಿ ನನ್ನ ಆಫೀಸಿನ ಕಡೆ ನಡೆಯುತ್ತಿದ್ದೆವು. ನಂಗೆ ಆತನ ಮೊದಲ ಮಾತು ನೆನಪಾಯ್ತು.
ಏನ್ ಕೆಲಸ ಮಾಡೋದಜ್ಜಾ ನೀವು ಕೇಳಿದೆ..
ಅವನು ನಕ್ಕ. ಈ ಪ್ರಪಂಚದ ಯಾವಾರ ಮುಗುಸ್ ಕೊಂಡು ಒಂಟೋಯ್ತಾರಲ್ಲವ್ವಾ - ಅಂತೋರನ್ನ ಕಳ್ಸೋದಕ್ಕೆ ನಮ್ ವಾಹ್ನಾನೇ ಆಗ್ಬೇಕು.. ಬದುಕಿದ್ದಾಗ ಎಂತ ಲಗ್ಷುರಿ ಗಾಡೀನೇ ಇಟ್ಗಂಡಿರ್ಲಿ.. ಸತ್ತೋದ್ ಮ್ಯಾಕೆ ಯಾವೋನ್ನೂ ಕಾರ್ ಹತ್ಸಾಕಿಲ್ಲ. ನಮ್ಮ ಬಣ್ಣ ಹಾರೋದ್ ಡಬ್ಬಾ ಗಾಡೀಲೆ ಸಾಗ್ಸಾದು... ಶವವಾಹನ.. ಹಾಂ ಅದೇಯಾ..ಯಾಕ್ತಾಯೀ ಈಗ ನನ್ನೋಡಿ ಎದ್ರುಕೆ ಆಗ್ತೈತಾ?
ಇಲ್ಲಜ್ಜಾ, ಮತ್ತೆ ನೀನ್ಯಾಕೆ ನಂಗೆ ಕಾಯ್ತಾ ನಿಂತಿದ್ದೆ ಅಲ್ಲಿ..?
ಓ ಅದಾ.. ನಿನ್ನೆ ನಿಂಗೆ ಪಾರ್ಕಾಗೆ ಸಿಕ್ಕಿದ್ನಲ್ಲ ಅದೇನೋ ಆಕಾಸ್ವ ನೋಡ್ಕೊಂಡು ಕಯಿತೆ ಮಾತಾಡ್ತಾನಲ್ಲ ಅಂವ ಹೇಳ್ದ ಅದ್ಕೆ..
ಮೈ ಜುಮ್ಮೆಂದಿತು. ಅವನು ಏನು ಹೇಳ್ದ? ನಿಮ್ಗೆಲ್ಲ ನಾನು ಇಲ್ಲಿ ಓಡಾಡೋದು ಹೇಗೆ ಗೊತ್ತು... ನಾನು ಒಳಗೊಳಗೇ ಅಧೀರಳಾದೆ.

ಹೆದ್ರಕೋಬೇಡ ತಾಯೀ, ನಿಂಗೇನೂ ಕ್ಯಟ್ಟದ್ ಮಾಡಕ್ ಬರ್ಲಿಲ್ಲ ನಾನು. ಅಂವಂಗೆ ನಾಳೆ ತಂಕಾ ತಡ್ಯಕ್ಕಾಗಿಲ್ಲ. ಇವತ್ತು ಬರಕ್ಕೆ ಡೂಟಿ ಐತಲ್ಲ. ಅಂಗಾಗೆ ನಂಗ್ ಯೋಳ್ದ.. ನಾವೆಲ್ಲ ಎಂಗಿದ್ರೂ ಕಂಡ ಕನಸು ಮುಕ್ಕಾಗಿ ಏನುಳದೈತೋ ಅದ್ರಾಗೆ ಬದುಕೋ ಗುಂಪಿಗೆ ಸೇರಿದೋರಲ್ವಾ.. ಅಷ್ಟರಲ್ಲಿ ನನ್ನ ಆಫೀಸಿನ ಮುಂದಿದ್ದೆವು. ನಾನು ಅಜ್ಜನ ಮುಖ ನೋಡಿದೆ. ಸಾವಿರಗಟ್ಟಲೆ ಸಾವು-ಕರೆಗಳನ್ನು ಗೋಳು-ಕರೆಗಳನ್ನು ನೋಡಿ, ಕೇಳಿ, ಪಕ್ಕಾಗಿದ್ದ ಅವನ ಹಣೆಯ ಗೆರೆಗಳು ನನ್ನನ್ನು ಅಲ್ಲೇ ನಿಲ್ಲಿಸಿದವು. ಹಣ್ಯಾಗ್ ಏನೈತಿ ನಮ್ಮವ್ವಾ? ನೀವು ಓದಕ್ಕಲ್ತವ್ರು, ಕಂಪೂಟ್ರಿನಾಗೆ ಕ್ಯಲ್ಸ ಮಾಡವ್ರು ತಿಳ್ಕಂಡಿರೋದನ್ನ ಈ ಬಡ ಡ್ರೇವರ್ ಏನ್ ಯೋಳ್ತಾನೆ.. ಅದೂ ಹೆಣ ಸಾಗ್ಸೋನು.. ಅದಿರ್ಲಿ ನಮ್ಮುಡುಗ ಏನಂದಾ ಅಂತ ಯೋಳ್ಬುಡ್ತೀನಿ ಅಲ್ದೆ ನಿಮ್ಗೂ ಹೊತ್ತಾಯ್ತದೆ ಕ್ಯಲ್ಸ ಮಾಡವ್ರನ್ನು ಯಾವತ್ತೂ ತಡ್ದು ನಿಲ್ಲಿಸ್ಬಾಡ್ದು.. ಪೂಜೆ ನಿಲ್ಸಿದಷ್ಟೇ ಪಾಪ ಸುತ್ಗೋತ್ತದೆ ಅಲ್ಲೇನ್ರವಾ? ಅವನ ಮುಖದಲ್ಲಿ ಹೊಳೆದಿದ್ದು ಯಾರು ಬಸವಣ್ಣನವರಾ?

ಅಷ್ಟರಲ್ಲಿ ಅಜ್ಜ ಮಾತಿನ ಮಳೆಗರೆದ.. ಅದೂ ನೀವು ಎಳೇಜನ ಯಾನ್ ಯಾನೋ ಕನ್ಸು ಕಾಣ್ತೀರಲ್ರವ್ವಾ ಹಿಂತಾದ್ನೇ ಓದಬೇಕು, ಹಿಂತಲ್ಲೆ ಓದ್ ಬೇಕು, ಹಿಂತಾ ಕ್ಯಲ್ಸನೇ ಇಡೀಬೇಕು, ಸಂಬಳ ಇಂಗಿಂಗೇ ಇರ್ಬೇಕು, ಗೆಣೆಕಾರನೋ ಗೆಣೆಕಾತಿನೋ ಇರಬ್ಯಾಕು, ಇಂಗಿಂಗೇ ಇರಬ್ಯಾಕು.. ಇಂಗೇ ಯಿನ್ನೂ ಯೇನೇನೋ.. ಅಂತ ಕನ್ಸು ಕಾಣೋವ್ರೆಲ್ಲ ಒಂದ್ಕಡೆ ಇರ್ತಾರಂತೆ. ನಿಮ್ಗೆಲ್ಲ ನಂಬ್ರು ಹಾಕೋ ಮ್ಯಾಷ್ಟ್ರು ಅವತ್ತು ತಲಕ್ಯಟ್ಟು ನಂಬ್ರು ಸರೀಗೆ ಒಗೀಲಿಲ್ಲಾಂದ್ರೆ, ಅಪ್ಲಿಕೇಸನ್ನು ಕೊಟ್ಗಂಡು ನಿಂತ್ರೆ ನಿಂತಾವ ಫೀಸ್ ಕೊಡಾಕಾಗಾಕಿಲ್ಲ ಹೋಗಯ್ಯೋ ಅಂತ ಸೀಟ್ ಕೊಡ್ದೆ ಕಳ್ಸಿದಾಂದ್ರೆ, ಅಗ್ಲೂ ರಾತ್ರೆ ಕೂತ್ಕಂಡ್ ಓದಿ, ನಂಬ್ರಾನೂ ತ್ಯಗ್ದು, ಹಿಂಟ್ರೂನಾಗೆಲ್ಲ ಚಲೋ ಮಾಡಿದ್ರೂ ಜಾತಿನೋ, ಸಿಫಾರ್ಸೋ ಯಾವ್ದೋ ಸರೀಗಾಗ್ಲಿಲ್ಲ ಅಂತ ಕ್ಯಲ್ಸ್ ತ್ಯಪ್ಪೋದ್ರೆ.. ಸಿಕ್ಕಿದ್ ಕೆಲ್ಸದಾಗೂ ತಿಂಗಳ್ ನಡ್ಸೋದೇ ಕಷ್ಟ ಆಗೋದ್ರೆ, ಎಲ್ಲಾನೀನೇ ಅಂತ ಕಣ್ಣಾಗ್ ಕಣ್ಣಿಟ್ಟು ನೋಡುದ್ ಗೆಣೆಕಾರ ಯೋನೋ ಕಾರ್‍ಣಾನೇ ಕೊಡ್ದೆ ಉಲ್ಟಾ ಒಡುದ್ರೆ.. ಹಿಂಗೇ.. ಕಂಡಿದ್ ಕನುಸೆಲ್ಲ ನೋಡ್ತಾ ನೋಡ್ತಾ ನೀರ್ ಗುಳ್ಳೆ ತರಾ ಒಡುದ್ ಹೋಗುತ್ತಲ್ಲವ್ವಾ ಆವಾಗ, ಅಲ್ಲಿ ಕನಸಿನ ರಾಜ್ಯದಾಗೆ ಇರಾಕಾಗಾಕಿಲ್ಲ. ಯಾಕ್ ಯೋಳಿ.. ಅಲ್ಲಿರೋರೆಲ್ಲಾ ಕನಸು ಕಾಣ್ತಿರ್ತಾರೆ ಅದನ್ನ ಸುಳ್ಳು ಅಂತ ಯೋಳೋಕ್ಕಾಗಲ್ಲ, ನಮ್ಮ ಕನಸು ಮುರುದ್ ಬಿದ್ದಿದ್ದನ್ನ ತಡ್ಕೊಳಾಕ್ಕಾಗಲ್ಲ.. ಸೂಕ್ಷ್ಮಸ್ತರು ಅಂಗೇ ಬದುಕೋ ದಾರಿ ಬರ್ ಬಾದಾಗೋಗಿ, ಯಂಗ್ ಬಂತೋ ಅಂಗೆ ಜೀವ ತೇಯ್ತಾರೆ.. ಕೊನೆಗೊಂದಿನ ನನ್ ಗಾಡೀ ತಾವ... ಸ್ವಲ್ಪ ಮಂಡಬುದ್ದಿಯೋರು.. ಅಲ್ ಕಂಡ್ತಲಾ ನಿಮ್ಗೆ ಗವಾಕ್ಷಿ ಅದ್ರಾಗೆ ತೂರ್ಕೊಂಡ್ ಬಂದು ಈ ಕಡೆ ಯಾವಾರದ್ ಪ್ರಪಂಚದಾಗೆ ಬೀಳ್ತಾರೆ. ಅಷ್ಟ್ ದಿನ ಅನುಭೋವ್ಸಿದ್ದ ಕನಸು ಅವ್ರಿಗೆ ಏನೋ ಮಾಡ್ಬೇಕು ಅನ್ನೋ ಹಪಾಹಪಿ ತುಂಬಿರುತ್ತೆ. ಮುರುದ್ ಬಿದ್ದು ಮಣ್ ಪಾಲಾದ ಕನ್ಸು ಯಾವಾರ ಕಲ್ಸಿರುತ್ತೆ. ಎಂಗೋ ಹಣೇ ಬರಾ ಬದಲಾಯಿಸ್ ಕ್ಯಂಡು ತಮಗೇ ಬೇಕಾದಂಗೆ ಬದುಕಾದ್ ಕಲ್ತ್ ಬುಡ್ತಾರೆ.. ಉಂಹೂಂ.. ಹಳೇ ಕನ್ಸಿನ ಸಾವಾಸಕ್ಕೇ ಓಗಂಗಿಲ್ಲ.. ಮಣ್ಣು ಪಾಲಾದ್ದು ಮತ್ತೆ ಇವ್ರ ತಾವ ಬರಂಗಿಲ್ಲ..
ಹೂವ ಇವತ್ತು ನಕ್ಕೊಂಡು ಸೆಂದಾಕ್ ಕಾಣ್ತದೆ. ವಾರದ್ ಮ್ಯಾಲೆ ಅದ್ನ ಅಂಗೇ ನೀರ್ನಾಗೆ ಇಟ್ರೆ ಕೊಳ್ತು ನಾರ್‍ತದೆ. ಎಸ್ದು ಬುಡ್ಬೇಕೂ. ಮುರುದ್ ಬಿದ್ದ ಕನ್ಸು ಅಂಗೇ ಅಲ್ಲವ್ರಾ?

ಅದ್ಸರಿ ಅಜ್ಜಾ ನಿಂಗೆ ಹ್ಯಾಗೆ ಈ ವಿಷ್ಯ ಎಲ್ಲಾ ಗೊತ್ತಾತು.. ಐ ಮೀನ್, ಆ ಗವಾಕ್ಷಿ, ಮುರುದು ಬಿದ್ದ ಕನ್ಸು.. ಅದೆಲ್ಲಾ.

ಆಗ ಅವನು ಬಣ್ಣಗೆಟ್ಟ ಹಲ್ಲುಗಳೆಲ್ಲ ಕಾಣುವಂತೆ ನಕ್ಕ ನಗು ಒಂದೆರಡೇ ಹಲ್ಲು ಹುಟ್ಟಿ ನಗುವ ಮಗುವಿನಷ್ಟೇ ಇಷ್ಟವಾಯಿತು. ಈಗ ಬೆಳ್‌ಬೆಳಿಗ್ಗೆ ಇಂಗೆ ಟಿಪ್-ಟಾಪಾಗಿ ಕಾಣ್ತಾ ಇದೀನವ್ವಾ ನಾನು. ಸಂಜಿ ಮ್ಯಾಕೆ ಆಗಿದ್ರೆ ನೀನು ನನ್ನ ರಸ್ತೆ ದಾಟ್ಸೊದಿರ್ಲಿ, ಹತ್ರದಲ್ಲೂ ಹೋಗ್ತಾ ಇರ್ಲಿಲ್ಲ. ನಂಗು ಒಬ್ಬ ಮಗ ಅದಾನೆ. ಅವ್ನೂ ಇಂಗೆ ಓದೋ ಕನ್ಸು ಮುರೀತು. ಅದು ಮುರುದ್ರೆನು ಮೆಕ್ಯಾನಿಕ್ ಆಗಿ ಹೊಸ ಕನ್ಸು ಫಿಟ್ ಮಾಡ್ತೀನಿ ಅಂತ ಹೊಂಟ. ಅವ್ನು ಜ್ವಾಪಾನ ಮಾಡಿದ್ದ ಅದ್ಯಾವ್ದೋ ಕಾಲೇಜುಡುಗಿ, ಆ ಕನ್ಸಿನ ಪೋವ್ರಿಗೆ ಗೇರ್ ಹಾಕಕ್ಕಾಗ್ದೆ ಒಂಟೋದ್ಳು. ನನ್ಮಗ ಕನ್ಸೇ ಕಂಡಿಲ್ಲ ಅನ್ನೋ ಅಂಗೆ ಬದಕಕ್ಕೆ ಪ್ರಯತ್ನ ಪಟ್ಟ ಯಾನ್ ಮಾಡದು. ಅವ್ನೂ ಅದೇ ಪರ್ಪಂಚದಾಗೆ ಉಳ್ದ್ ಬುಟ್ಟಿದ್ದ. ಎಲ್ಲರ ಕನಸೂ ಬಣ್ಣ ಕಟ್ಗಂಡು ಜುಂ ಅಂತ ಇಮಾನದ ಸ್ಪೀಡ್ನಾಗೆ ಹೋಯ್ತಾ ಇರ್ವಾಗ ಇವಂಗೆ ತನ್ನ ಗಾಡಿ ಪಂಚರ್ರಾದದ್ದು ತಡ್ ಕಳಾಕ್ಕಾಗಿಲ್ಲ.. ಅಂಗೇ ಸಂಜೆ ಮೇಲೆ ಒಂದೊಂದೇ ಜಾಮ್ ತಕ್ಕಳ್ಳಾದ್ ಕಲ್ತ. ನನ್ ಹೆಂಡ್ರು ಮಗನ್ನ ಯಂಗಾರಾ ಮಾಡಿ ಓದ್ಸಿ ಬೇರೆ ಕೆಲ್ಸಕ್ಕೆ ಹಚ್ಬೇಕು ಈ ಸಾವಿನ ವಾಹ್ನದ ಸವಾಸ ಬ್ಯಾಡ ಅಂದ್ಕಂಡು ಇದ್ ಬದ್ದಿದ್ದೆಲ್ಲಾ ಅಡಾ ಇಟ್ಟಿದ್ಲು. ಅವಳಿಗೆ ಉಸಾರಿಲ್ದಿದ್ದಾಗ ಡಾಕುಟ್ರ ತಾವ ಕರ್ಕಂಡ್ ಹೋದ್ರೆ ಅಂವಾ ನನ್ ಜೇಬ್ನಾಗೆ ಕಣ್ಣಿಟ್ಟ.. ಯಾವ್ ರಿಪೋರ್‍ಟ್ ಏನ್ ಕಾಣ್ತದೆ. ಯಾವ ವಾಹನ ಅಂದ್ರೆ ಮಾರು ದೂರ ಓಡ್ತಿದ್ಲೋ ಅದ್ರಾಗೆ ಅವಳನ್ನ ಸಾಗ್ಸಿ ಆಯ್ತು.. ಈಗ ದಿನಾ ಸಂಜೆ ಇಬ್ರೂ ಒಂದೇ ಕಡೆ ಕೂತ್ಕಂಡು ಒಟ್ಟೇ ತುಂಬ ಕುಡ್ ಕಂಡು ಮನೀಗೆ ಯಂಗೋ ಓಯ್ತೀವಿ. ಬಡ್ಡೀಮಗಂದು ಕನ್ಸು ಕೈ ಕೊಟ್ಬುಡ್ತು ನನ್ ಮಗಂಗೆ. ತಡ್ಕಂಡು ನಿಂತು ಮುಂದೋಗಕ್ಕಾಗದಂಗೆ ಜೋಲಿ ಒಡ್ದುಬುಡ್ತು. ಇದೆಲ್ಲ ಮಗುವಿನ ನಗು ನಗುತ್ತಲೇ ಹೇಳ್ತಾ ಇದ್ದ ಅಜ್ಜ.
ಈಗ ಅವನ ನಗುವಲ್ಲಿ ಸುಟ್ಟಗಾಯದ ವಾಸನೆ ಬರತೊಡಗಿತು. ಅಲ್ಲೆ ಸಂದಿಯಲ್ಲಿ ಕೀವು ಸೋರಿ.. ಅಯ್ಯೋ ನನ್ನ ತಲೆ ತಿರುಗುತ್ತಿದೆ...

ಎಚ್ಚರಾದಾಗ ನಮ್ಮ ಆಫೀಸ್‌ಬಾಯ್ ವೆಂಕಟ್ ಇದ್ದ. ಏನ್ ಮೇಡಂ, ಉಶಾರಿಲ್ವಾ, ಯಾಕ್ ಬರಕ್ಕೋದ್ರಿ.. ಆಟೋ ಮಾಡಿ ಮನೆಗೆ ಕಳಿಸ್ಲಾ ಅನ್ನುತ್ತಿದ್ದರೆ ನಾನು ಸುಮ್ಮನೆ ತಲೆಯಾಡಿಸಿದೆ. ಅಜ್ಜ, ಗವಾಕ್ಷಿ, ನೆರಳಿನಂತಹ ಮನುಷ್ಯ.. ಕನಸು.. ಎಲ್ಲ ನೆನಪಾಯಿತು. ಅಮಾನುಷವಾಗಿ ಕೊಚ್ಚಿಸಿಕೊಂಡ ಕನಸುಗಳ ಬರ್ಬರ ಗಾಯಗಳು ನೆನಪಾಗಿ ಉರಿಯಿಂದ ಚೀರತೊಡಗಿದೆ. ಯಾರೋ ತಲೆಗೆ ತಣ್ಣೀರು ತಟ್ಟುತ್ತಿದ್ದರು. ನನಗೆ ಉಕ್ಕಿ ಬರುವ ದುಃಖವನ್ನು ಬೆಚ್ಚಗೆ ಕಣ್ಣೀರಲ್ಲಿ ಕಳೆಯಬೇಕಿತ್ತು. ಎಷ್ಟೆಲ್ಲಾ ಇದ್ದೂ ಅಂಶೂನ ಹತ್ತಿರ ಅದು ಹಾಗಿಲ್ಲ, ಇದು ಬೇಕು ಅಂತ ಹಟ ಮಾಡುವ ನನ್ನ ಪೆದ್ದುತನವನ್ನ ವಾಂತಿ ಮಾಡಿಕೊಳ್ಳಬೇಕಿತ್ತು. ಏನೋ ಒಂದು ಸರಿಹೋಗದೆ ಇದ್ದರೆ ಸತ್ತು ಹೋಗಿಬಿಡಲಾ ಅಂತ ಎದ್ದು ಬರುವ ಆಲೋಚನೆಗಳನ್ನೆಲ್ಲ ಕತ್ತು ಹಿಡಿದು ಅಂಡಿನ ಮೇಲೆ ಒದ್ದು ಹೊರದಬ್ಬಬೇಕಿತ್ತು. ಇದ್ದ ಖುಷಿಯನ್ನು ನೋಡದೆ, ಇರದಿರುವ ಯಾವುದಕ್ಕೋ ಹಪಹಪಿಸುವ ಹಳಹಳಿಕೆಯನ್ನು ನೆಲದ ಮೇಲೆ ಬೀಳಿಸಿ ಹೊರಳಾಡಿಸಿ ಅಳಿಸಬೇಕಿತ್ತು. ತುಂಬಿನಿಂತಿರುತ್ತಿದ್ದ ಸುತ್ತಲಿನ ಕೆರೆ ಬಾವಿಗಳು ಖಾಲಿಯಾಗಿದ್ದನ್ನ ನೋಡದೆ, ಸಾಹಿತ್ಯ ಕ್ಷಾಮದ ಬಗ್ಗೆ ಗೊಣಗಾಡುವ ವಿವೇಕವನ್ನ, ಅಟ್ಟಿಸಿಕೊಂಡು ಹೋಗಿ ಹೊಡೆಯಬೇಕಿತ್ತು.. ಆದರೆ ಎಲ್ಲ ಸೇರಿ ನನಗೆ ತಣ್ಣೀರು ತಟ್ಟುತ್ತಿದ್ದರು. ಗಾಳಿ ಹಾಕುತ್ತಿದ್ದರು. ರುಚಿಯಾದ ನಿಂಬೆಹುಳಿ ಸೋಡಾ ಕುಡಿಸುತ್ತಿದ್ದರು.ನೆರಳಲ್ಲಿ ಮಲಗಿಸುತ್ತಿದ್ದರು.. ನಾನು ಏನೇನು ಮಾಡಬೇಕಿತ್ತೋ ಎಲ್ಲ ಮರೆತು ಹಾಯಾಗಿ ಮಲಗಿದೆ..ಅಲ್ಲಿ ಗಡ್ಡದ ಸಾಬರ ಅಂಗಡಿನೆರಳಿನಲ್ಲಿ. ಎದ್ದಾಗ ಮಧ್ಯಾಹ್ನವಾಗಿತ್ತು.. ಬಿರುಬಿಸಿಲಿನಲ್ಲಿ ಅದ್ದಿ ತೆಗೆದ ನೀಲಿ ಆಕಾಶ. ಮೋಡದ ತುಣುಕಿರಲಿಲ್ಲ. ಗವಾಕ್ಷಿಯ ಸ್ಕೆಚ್ ಕೂಡ ಇರಲಿಲ್ಲ. ಹೊಟ್ಟೆಯಲ್ಲಿ ಚೂರುಚೂರಾದ ಕನಸುಗಳ ಸಂಕಟ ಸುಳಿತಿರುಗುತ್ತಿತ್ತು.

ಮರುದಿನ ಎಂದಿನಂತೆ ಯಾವ ವಿಶೇಷಗಳೂ ಘಟಿಸದೆ ಕಳೆಯಿತು. ಸಂಜೆಗೆ ಅಂಶುಗೆ ಕಾಯುತ್ತಾ, ಲೈಬ್ರರಿಯ ಮುಂದಿನ ಪಾರ್ಕಿನಲ್ಲಿ ಕುಳಿತೆ. ಅತ್ತಿತ್ತ ನೋಡಿದೆ. ಅವತ್ತು ಕಂಡ ವಿಲಕ್ಷಣ ವ್ಯಕ್ತಿ ಕಾಣಲಿಲ್ಲ. ಅಜ್ಜನ ಜೊತೆ ಮಾತಾಡಿದಾಗಿನಿಂದ ಅವನ ಬಗ್ಗೆ ಕುತೂಹಲ ಜಾಸ್ತಿಯಾಗಿತ್ತು. ಅದಕ್ಕೇ ಅಂಶು ಬೇಡವೆಂದರೂ ಇವತ್ತು ಹಟ ಮಾಡಿ ಪಾರ್ಕಿನಲ್ಲಿ ಕುಳಿತು ಕಾಯುತ್ತಿದ್ದೆ.
ಕತ್ತಲೆ ಮೆಲ್ಲಡಿಯಿಡುತ್ತಾ ಬಂದು ಸಂಜೆಯಾಕಾಶವನ್ನು ತಬ್ಬುತ್ತಿದ್ದಳು. ಅಲ್ಲೊಂದು ಇಲ್ಲೊಂದು ಮಸುಕು ನಕ್ಷತ್ರ. ಸಾರಿ ಮೇಡಂ... ಬೆಚ್ಚಿ ಬಿದ್ದೆ. ಅವನೇ ಇವತ್ತು ಸ್ವಲ್ಪ ಬೆಳಕಿನಲ್ಲೇ ಕಾಣಿಸಿಕೊಂಡುಬಿಟ್ಟ. ಹೀಗೇ ಎಂದು ಹೇಳಲಾಗದ ವ್ಯಕ್ತಿತ್ವ. -ನಿನ್ನೆ ಅಜ್ಜನ ಮಾತುಗಳನ್ನು ನಿಮಗೆ ತಡೆದುಕೊಳ್ಳಲಾಗಲಿಲ್ಲವಂತೆ. ತೊಂದರೆಯಾಗಿದ್ದಕ್ಕೆ ಕ್ಷಮಿಸಿ. ಇವತ್ತು ಆದಷ್ಟು ಬೇಗ ನಿಮಗೆ ಕಷ್ಟವಾಗದ ಹಾಗೆ ಸರಳವಾಗಿ ವಿವರಿಸಿಬಿಡುತ್ತೇನೆ.. ನಾನು ಬೆಂಚಲ್ಲಿ ಸರಿದು ಕೂತು ಅವನನ್ನೂ ಕೂರಲು ಸೂಚಿಸಿದೆ.. ಅವನು ತಲೆಯಲ್ಲಾಡಿಸಿ, ಆಕಾಶಮಲ್ಲಿಗೆಯ ಮರಕ್ಕೆ ಆನಿಕೊಂಡು ನಿಂತು ಮಾತಾಡತೊಡಗಿದ. ನಾನು ಕಿವಿಯಾದೆ.

ನನ್ನದೊಂದು ಕನಸಿನ ಎಲ್ಲೆ ದಾಟದ ಸಾಮಾನ್ಯ ಲೋಕವಿತ್ತು. ಎಲ್ಲರಂತೆ ಗ್ರಾಜುಯೇಶನ್, ಒಳ್ಳೆ ಕಂಪನಿಯಲ್ಲಿ ಕೆಲಸ. ಅಪ್ಪ ಅಮ್ಮ ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಅದ್ಯಾರ ನೆರಳು ಬಿತ್ತೋ ಅವಳು ಕಂಡಳು. ಬೇಕೇ ಬೇಕು ಅನ್ನಿಸಿದಳು. ನಾನು ಅದುವರೆಗೂ ಮಾಡಿರದ ಸರ್ಕಸ್ಸೆಲ್ಲಾ ಮಾಡಿ ಅವಳನ್ನು ಒಲಿಸಿದೆ. ನಿಜವಾಗ್ಲೂ ಅವಳು ಆಗಷ್ಟೇ ಇಬ್ಬನಿಯಲ್ಲಿ ಮಿಂದು, ಸೂರ್ಯನ ಬೆಳಕಿಗೆ ನವಿರೇಳುತ್ತಿದ್ದ ಅರಳು ಮೊಗ್ಗಂತೆ ಇದ್ದಳು. ಹಾಲು-ಸುಣ್ಣ ಗೊತ್ತಾಗದವಳು ಅಂತ ಅವಳಮ್ಮ ಹೇಳುತ್ತಿದ್ದರು. ಅದನ್ನ ನಾನೂ ಇವತ್ತಿಗೂ ಒಪ್ಪುತ್ತೇನೆ. ಮನೆಯಲ್ಲಿ ಅಪ್ಪ ಅಮ್ಮ ಗಲಾಟೆ ಮಾಡಿದರು. ಅವರ ಮನೆಯಲ್ಲೂ ಏನು ಇಷ್ಟವಿರಲಿಲ್ಲ. ಬೆಳ್ಳುಳ್ಳಿಯೂ ತಿನ್ನದವಳು, ಮಾಂಸದಡಿಗೆಯ ಮನೆಯಲ್ಲಿ ಏನು ತಿಂದಾಳೆಂಬ ಆತಂಕ.. ಮೊಗ್ಗಿಗೆ ಅರಳುವ ಸಂಭ್ರಮ, ಬೇರಿನ ಮಣ್ಣು ಸಡಿಲಾದದ್ದು ತಿಳಿಯಲಿಲ್ಲ. ನನಗೆ ಅರಳು ಮೊಗ್ಗನು ಬೊಗಸೆಯಲ್ಲಿ ಹಿಡಿದು ನಲಿವ ಖುಷಿ, ಮೊಗ್ಗಿನ ಜೀವಸೆಲೆಯ ಸ್ಪಷ್ಟ ಕಲ್ಪನೆಯಿಲ್ಲ.. ಪ್ರೀತಿಯ ಮಂಜುತೆರೆಯ ಜೊತೆಗೆ, ಎಲ್ಲರನ್ನೂ ಎದುರಿ ಹಾಕಿಕೊಂಡು ಏನೋ ಸಾಧಿಸುತ್ತಿದ್ದೇವೆಂಬ ಹಮ್ಮಿನ ನೆರಳುಗತ್ತಲೆಯಿತ್ತು. ಅಪ್ಪ ಅಮ್ಮ ಬೆನ್ನು ತಿರುವಿದರೇನಂತೆ, ಲಗಾಟಿ ಹೊಡೆಯುವಾಗಲೂ ಜೊತೆಗೇ ನಿಲ್ಲುವ ಸ್ನೇಹಿತರು ನಮ್ಮ ದಾರಿಗೆ ದೀಪವಿಟ್ಟರು. ಪುಟ್ಟ ಮನೆ ಹಿಡಿದು, ಅವಳಿಗಿಷ್ಟವಾಗಬಹುದೆಂಬ ಅಂದಾಜಿನ ಮೇಲೆ ಸಜ್ಜು ಮಾಡಿದೆ. ಬೆತ್ತದ ಕುರ್ಚಿಗಳು, ಕಂಬಳಿ ಹಾಸಿಗೆ, ಪುಟ್ಟ ಪುಟ್ಟ ಹೂವಿರುವ ಪಿಂಗಾಣಿ ಪಾತ್ರೆ ಸೆಟ್ಟು, ಗೋಡೆಯಲ್ಲಿ ಹೂಗೊಂಚಲು ಹಿಡಿದ ಪುಟ್ಟ ಮಕ್ಕಳ ಜೋಡಿ ಫೋಟೋ, ನೀಲಿ ಬಣ್ಣದ ಕರ್ಟನ್ನು.. ಅವಳು ಕಣ್ಣ ಹನಿ ತೊಡೆದು, ಮೆಲ್ನಗುತ್ತಾ ಹೊಸಿಲು ದಾಟಿ ಬಂದಳು. ರಾತ್ರೆಗೆ ಮಿನುಗು ನಕ್ಷತ್ರ, ಬೆಳಿಗ್ಗೆ ಉದಯರವಿ, ಮಧ್ಯಾಹ್ನ ಬಿಸಿಲಿನಲ್ಲೂ ನೆರಳು, ಸಂಜೆ ರಂಗುತುಂಬಿದ ಆಕಾಶದೊಡನೆ ಬೀಸಿ ಬರುವ ತಂಗಾಳಿ... ನಾವು ತೆಗೆದುಕೊಂಡ ಯಾವ ನಿರ್ಧಾರದಲ್ಲಿ ಅಪ್ರಾಮಾಣಿಕತೆ ಇತ್ತೋ, ಹೊರಳಿದ ಯಾವ ದಾರಿಯಲ್ಲಿ ಜಾರಿಕೆ ಇತ್ತೋ, ಇಟ್ಟ ಯಾವ ಹೆಜ್ಜೆ ಟೊಳ್ಳಾಗಿತ್ತೋ, ಇವತ್ತಿಗೆ ಸರಿಯಾಗಿ ಗೊತ್ತಾಗುತ್ತಿಲ್ಲ, ಆದರೆ ಇದ್ದದ್ದು ಹೌದು ಗಟ್ಟಿಯೆಂದು ಹಿಡಿದ ಕಾಳು ಜೊಳ್ಳು.. ಅದರ ಆಘಾತ ತಡೆದುಕೊಳ್ಳದ ಪ್ರೀತಿ ಮುದುಡಿ ಹೋಗಿ, ಕತ್ತಲ ಬೆನ್ನಿಗಾತು ನಿಂತು ಕಣ್ಣೀರಿಟ್ಟಿತು. ನಾವಿಬ್ಬರೂ ಮತ್ತೆ ಸೇರಿಸಲಾಗದಂತೆ ಒಡೆದು ಹೋದೆವು.

ಚಿತ್ರಕ್ಕೆ ಫ್ರೇಮಷ್ಟೇ ಇತ್ತು. ಸ್ಕೆಚ್ಚು ಪೂರ್ತಿಯಾಗಿ ಬಣ್ಣ ತುಂಬುವುದರೊಳಗೆ ಅವಳು ಕನಸಿನ ಕ್ಯಾನ್ವಾಸಿನ ಪುಟ ತಿರುಗಿಸಿ ಅದೇ ಹೊಸ್ತಿಲಿನಿಂದ, ಕಣ್ಣು ತುಂಬಿದ ನೀರು ಕೆಳಗಿಳಿಯುತ್ತಿದ್ದರೆ, ತಿರುಗಿ ನೋಡದೆ ಹೊರಟೇ ಹೋದಳು. ಅಷ್ಟು ಪ್ರೀತಿ ಮಾಡಿದ ನಾನು ಹೊಡೆದರೆ ತಪ್ಪಾ, ಅವಳು ನಕ್ಕರೆ ಮನೆಯಲ್ಲೇ ನಗಬೇಕು ಅಂತನ್ನಿಸಿದ್ದು ಸುಳ್ಳಲ್ಲ, ನಕ್ಕರೆ ಮಲ್ಲಿಗೆಯರಳಿದಂತ ಅನುಭವ ಕೊಡುವ ಅವಳು ಹೊರಗೆ ಗುಂಪಲ್ಲಿ ನಕ್ಕರೆ, ಎಲ್ಲಿ ಕಳಕೊಂಡೇನೋ ಎಂಬ ಭಯ.. ಅವಳು ಕೆಲಸಕ್ಕೆ ಹೊರಟರೆ, ಇನ್ನು ಖರ್ಚಿಗೆ ನನ್ನ ಕೇಳಲ್ವಲ್ಲಾ, ಎಂಬ ಆತಂಕ, ನಾನು ಬೇಡದೇ ಹೋಗಿಬಿಟ್ಟರೆ ಏನು ಮಾಡಲಿ ಅಂತ ಕಳವಳ.. ಜಾಜಿ ಮಲ್ಲಿಗೆಯನ್ನ ಬಯಸಿದರಷ್ಟೇ ಸಾಲದು, ಜೋಪಾನವಾಗಿ ಹಿಡಿದಿಡುವ ನಾಜೂಕುತನ ಬೇಕು.. ನಾನು ಒಡ್ಡ. ಅವಳನ್ನ ನೋಯಿಸಿದ್ದು ಸತ್ಯ. ಆದ್ರೆ ನಾನೂ ನೊಂದೆನಲ್ಲ.. ನಂದು ಲೆಕ್ಕಾಚಾರ ಜಾಸ್ತಿ. ಬದುಕಲು ಬೇಕೇ ಬೇಕಲ್ಲ... ಏನೋ ಈಗ ಲೆಕ್ಕ ಹಾಕಿ ಏನುಪಯೋಗ.. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಬರೆದುಕೊಳ್ಳುವ ಲೀಗಲ್ ಕೌನ್ಸೆಲರ್'ಗಳ ಮುಂದೆ ನಮ್ಮ ಕನಸಿನ ಬದುಕಿನ ಪಕಳೆಗಳನ್ನು ಒಂದೊಂದಾಗಿ ಬಿಡಿಸಿಟ್ಟು, ಭಗವದ್ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುವೆನೆಂಬ ಸುಳ್ಳಾಡುತ್ತಾ, ಕಪ್ಪು ಅಕ್ಷರಗಳಿಂದ ತುಂಬಿರುವ ಬಿಳಿ ಪೇಪರಿನಲ್ಲಿ ಸಹಿ ಹಾಕುವ ಕ್ಷಣದಲ್ಲಿ ನನಗೆ ಅವಳ ಕಡೆ ತಿರುಗಬೇಕೆನಿಸಲಿಲ್ಲ. ಅವಳ ನಾಜೂಕು ಬೆರಳುಗಳು ನಡುಗುತ್ತಾ ಸಹಿ ಹಾಕುತ್ತಿದ್ದುದು ಕಣ್ಣಂಚಿನಲ್ಲಿ ಕಾಣುತ್ತಿತ್ತು. ಈಗ ಎಲ್ಲ ಮುಗಿದು ೨೦ ವರ್ಷಗಳಾಗಿವೆ. ನಮ್ಮ ದಾರಿ ಬೇರೆಯಾಗಿ, ಗುರಿ ಚದುರಿದೆ. ಆಮೇಲೆ ಮತ್ತೆ ಜೊತೆಯಾದ ಅಮ್ಮ ಅಪ್ಪನ ಆಯ್ಕೆಗೆ ತಲೆಬಾಗಿ, ಅವರ ಆಯ್ಕೆಯ ಹೆಂಡತಿ, ಮಕ್ಕಳೊಂದಿಗೆ ನನ್ನ ಸಂಸಾರ. ಇವಳು ಆಕಾಶದ ಚಿಕ್ಕೆಯಲ್ಲ, ಮನೆಯ ಗೋಡೆಯ ಭದ್ರತೆಯಲ್ಲಿ ಬೆಳಗುವ ದೀಪ.

ಎಲ್ಲಾದರೂ ಒಬ್ಬನೆ ಇದ್ದಾಗ ಸಂಜೆಗತ್ತಲಲ್ಲಿ ಹೊಳೆವ ಶುಕ್ರತಾರೆಯ ಮಿನುಗಲ್ಲಿ ಅವಳ ನೆನಪು. ಕನಸಿನ ಸಾಮ್ರಾಜ್ಯದಿಂದ ಗಡೀಪಾರಾಗಿ ಈಚೆಗೆ ಜನಜಂಗುಳಿಯಲ್ಲಿ ಬಂದು ಬಿದ್ದ ನನಗೆ, ಅವಳು ತಿರುಗಿಸಿ ಹೊರಟ ಕ್ಯಾನ್ವಾಸಿನಲ್ಲಿ ಎಂದೂ ಮೂಡದ ಚಿತ್ರದ ಬಯಕೆ. ಹೂಗನಸುಗಳ ಬೀಜವೆಂದುಕೊಂಡೇ ಬಿತ್ತಿದೆ.. ಬೆಳೆದುನಿಂತ ಬೆಂಕಿಬೆಳೆಯ ನಡುವೆ ಹೂಗೊಂಚಲನ್ನು ಹುಡುಕಿ ಸುಸ್ತಾಗಿ ಮನೆಗೆ ಹೊರಡುತ್ತೇನೆ ಹತಾಶೆಯಿಂದ ಗವಾಕ್ಷಿಯನ್ನೇ ನೋಡುತ್ತಾ.. ದಿನವೂ ಸಿಗುವ ಜನರಲ್ಲಿ ಅವಳ ಕಣ್ಣಮಿಂಚು ಹುಡುಕುತ್ತಾ, ಮನೆಯಲ್ಲಿ ಗೂಡಲ್ಲಿ ಬೆಚ್ಚಗೆ ಬೆಳಗುವ ದೀಪದ ಕಂಗಳೆದುರು ಬಯಲಾಗುತ್ತೇನೆ. ದೀಪ ಸುಡುತ್ತದೆ, ಹೊರಗೆ ರಾತ್ರಿಯ ಗಾಳಿಯಲ್ಲಿ ತಿಂಗಳನ ಮೊರೆಹೋಗುತ್ತೇನೆ, ಅವನು ನನ್ನ ನೋಡಲಾರದೆ, ಮೋಡದ ಮೊರೆಹೋಗುತ್ತಾನೆ.. ಗೊತ್ತು ನನಗೆ ಉಳಿದಿರುವುದು ದೀಪದ ಬೆಳಕಷ್ಟೇ ಅಂತ, ಆದರೂ ನಕ್ಷತ್ರದ ಆಸೆ.. ನನ್ನ ಮಿತಿಯ ನೆನಪು ಹರಡುತ್ತಾ ಗಡೀಪಾರು ಗವಾಕ್ಷಿ.. ಅದರಾಚೆಗೆಲ್ಲೋ ಅವಳ ಹೊರಳು... ಅವನ ಸ್ಪಷ್ಟ ದನಿ ಒಡೆಯಿತು, ಮುಂದೆ ಮಾತಿಲ್ಲ... ಕೆಲನಿಮಿಷಗಳ ಮೌನ ಇಬ್ಬರ ನಡುವೆ ಗಾಢವಾಗಿ ಹರಡಿತು.

ಮತ್ತೆ ಮಾತಾಡಿದ.. ಮೊನ್ನೆ ನೀವಿಲ್ಲಿ ಕುಳಿತ ಭಂಗಿ ಮೊದಲ ಬಾರಿ ಆಫೀಸಿನ ಗಾರ್ಡನ್ನಿನಲ್ಲಿ ಅವಳನ್ನು ಕಂಡ ದಿನವನ್ನ ನೆನಪಿಸಿತು. ನಿಮಗೂ ನನ್ನ ಗಡೀಪಾರು ಗವಾಕ್ಷಿ ಕಂಡದ್ದರಿಂದ ನಿಮ್ಮೊಡನೆ ಮಾತಾಡಬಹುದು ಅನ್ನಿಸಿತು. ಹಲವರುಷಗಳ ನೆನಪಿನ ಹೊರೆ ಇಂದು ಇಳಿಸಿ ಹಗುರಾಗಿದ್ದೇನೆ. ಸಹನೆಯಿಂದ ಕೂತು ಕೇಳಿದ್ದಕ್ಕೆ ಥ್ಯಾಂಕ್ಸ್ ..., ಉತ್ತರವಾಗಿ ನಾನು ಏನನ್ನೂ ಹೇಳುವ ಮೊದಲೇ ಬೆನ್ನುತಿರುಗಿಸಿ ಹೊರಟೇ ಹೋದ..

ಕೆಲನಿಮಿಷ ಕಾಲುಹಾದಿಯನ್ನೇ ನಿಟ್ಟಿಸಿದ ನಾನು ಆಕಾಶದತ್ತ ನೋಡಿದರೆ, ಗವಾಕ್ಷಿಯ ವರ್ತುಲ ಮಸುಕಾಗುತ್ತಾ ಇತ್ತು.. ಓಹ್, ಅಂಶು ಬೇಲಿಯಾಚೆಗೆ ರಸ್ತೆಯಲ್ಲಿ ಗಾಡಿ ಹಾರ್ನ್ ಮಾಡುತ್ತಾ ನನ್ನ ಕರೆಯುತ್ತಿದ್ದ.

Friday, October 12, 2007

ಕೆಂಪಿಕಣ್ಣು...

ದೀಪದ ಕುಡಿಗಳಂತ ಕಣ್ಣಂಚಲ್ಲಿ ಈಗಲೋ ಆಗಲೋ ಬೀಳುವಂತೆ ತುಂಬಿ ನಿಂತ ಹನಿ, ಮುದ್ದಾದ ಉದ್ದ ಮೂಗಿನ ತುದಿ ಕೆಂಪಗೆ ಕುಂಕುಮ ಸವರಿದಂತೆ, ಯಾವಾಗಲೂ ಕತೆ ಕಟ್ಟುವ ತುಂಟ ಬಾಯಿ, ತುಟಿ ಬಿಗಿದು ಸಿಡುಕಿಕೊಂಡು.. ಅಮ್ಮನಿಗೆ ನಗು ಬಂತು. ಆದರೆ ನಗುವಂತಿಲ್ಲ. ತುಟಿಗಳನ್ನ ಉಮ್ ಅಂತ ಬಿಗಿಹಿಡಿದು, ಕೆನ್ನೆಯನ್ನ ಕಷ್ಟಪಟ್ಟು ಒಳಗೆಳೆದುಕೊಂಡು ನಿಲ್ಲಿಸಿ, ಕಣ್ಣನ್ನ ಆದಷ್ಟೂ ಅಗಲ ಮಾಡಿಕೊಂಡು ಮಗಳನ್ನ ಸೀರಿಯಸ್ ಆಗಿ ನೋಡಿದಳು. ಮಗಳಿಗೋ ತುಂಬ ವಿಶ್ವಾಸ ಕಣ್ಣಂಚಿನಲ್ಲಿ ನಿಂತಿರುವ ಹನಿ ಕೆಳಗೆ ಉರುಳುತ್ತಿದ್ದಂತೆಯೇ ಅಮ್ಮನ ಮುಖ ಸಡಿಲವಾಗುತ್ತದೆ, ದನಿ ನವಿರಾಗುತ್ತದೆ, ಕೈ ತನ್ನನ್ನ ಬಳಸುತ್ತದೆ ಮತ್ತು ತಾನೂ ಇಷ್ಟೊತ್ತೂ ಹಟ ಮಾಡುತ್ತಿರುವ ಬಿಸ್ಕೇಟನ್ನ ಅಮ್ಮ ಅಲ್ಲಿ ನಾಗಂದಿಗೆಯ ಮೇಲಿಟ್ಟ ಸಿಲ್ವರ್ ಡಬ್ಬಿಯಿಂದ ತೆಗೆದು ಕೊಟ್ಟೆ ಕೊಡುತ್ತಾಳೆ.. ಹನಿ ಉದುರಿಸಲೋ ಬೇಡವೋ.. ಅಮ್ಮನ ಮುಖ ನೋಡಿದಳು.

ಉಂಹುಂ ಬಿಗಿದುಕೊಂಡೆ ಇದೆ.. ಓ ಇನ್ನೇನು ನಗುತ್ತಾಳೆ ಬಾಯಿ ತೆರೆಯಿತು..
ಅಮ್ಮನ ಬಾಯಿಂದ ಆ ಭಯಾನಕ ಶಬ್ಧ ಬಂದುಬಿಟ್ಟಿತು.. "ಕೆಂಪಿಕಣ್ಣು ಗೊತ್ತಲ್ದಾ.. ಹಟ ಮಾಡ ಮಕ್ಕಳಿಗೆ ಎಂತ ಮಾಡ್ತು ಅಂತ ಮರ್ತೋತಾ ಪುಟ್ಟೀ?...

ಕಣ್ಣಂಚಿನ ಹನಿ ಅಲ್ಲೆ ನಿಂತುಬಿಟ್ಟಿತು. ಭಯದಿಂದ ಕಣ್ಣು ಅಗಲವಾದರೂ ಪುಟ್ಟಿಗೆ ಸುಮ್ಮನಿರಲಾಗಲಿಲ್ಲ.. ಆ ಬಾಯಿ ಕೇಳಿಯೂ ಕೇಳಿಸದ ಹಾಗೆ "ಎಂತಾ ಮಾಡ್ತು" ಕೇಳೇ ಬಿಟ್ಟಿತು.

ಈಗ ಅಮ್ಮನ ಮುಖ ಸಡಿಲಾಯಿತು. ಬಗ್ಗಿ ಪುಟ್ಟಿಯನ್ನ ಎತ್ತಿ ಸೊಂಟಕ್ಕೆ ಹಾಕಿಕೊಂಡು ಮೆತ್ತಿನ ಮೆಟ್ಟಿಲ ಕೆಳಗಿದ್ದ ದೊಡ್ಡ ಕಿಟಕಿಯ ತಳಿಯಲ್ಲಿ ಕೂತಳು ಅಮ್ಮ. ಹೊರಗೆ ಕಿಟಕಿಯಿಂದಾಚೆಗೆ ಬಯಲ ಕೊನೆಗೆ ದಕ್ಷಿಣ ರೈಲ್ವೆಯ ಕೊನೆಯ ಸ್ಟೇಷನ್ನಿನ ಮರದ ಬೇಲಿಗಳು, ಹಸಿರಗಿಡಗಳ ಜೊತೆಗೆ ಮಾತುಕತೆ ನಡೆಸಿದ್ದವು. ಬೇಲಿ ಪಕ್ಕದ ಹಾದಿಯಲ್ಲಿ ಪ್ಲೈವುಡ್ ಫ್ಯಾಕ್ಟರಿಯ ಮೊದಲ ಶಿಫ್ಟು ಮುಗಿಸಿ ಹೋಗುತ್ತಿರುವ ಹಳ್ಳಿಯವರು... ಎಂತಾಗ್ತು ಅಂದ್ರೇ...

ಒಂದೂರಲ್ಲಿ ಒಂದು ಪುಟ್ಟ ಮನೆ, ನಮ್ಮನೇ ತರದ್ದೇ, ಬೀದಿಗೇ ಹೊಂದಿಕೊಂಡು ಅಂಗಡಿ, ದಾಟಿದ ಕೂಡಲೆ, ಜಗಲಿ, ಆಮೇಲೆ ನಡೂಗಿನ ಕೋಣೆ,ಮೆತ್ತಿ ಮೆಟ್ಲು, ಆದ್ ಕೂಡ್ಲೆ ಅಡಿಗೆ ಮನೆ, ಅಲ್ಲೇ ದೇವರ ಗೂಡು, ಆಮೇಲೆ ಪುಟ್ಟ ಅಂಗಳ, ಅಂಗಳದ ಕೊನೆಗೆ ಬಚ್ಚಲು ಮನೆ, ಅದರಾಚೆಗೆ ಕೊಟ್ಟಿಗೆ.. ದಾಟಿಕೊಂಡು ಹೋದ್ರೆ ಬಾವಿಯ ಬಯಲು..

ಗೊಬ್ರಗುಂಡಿ ಅಂಚಿನ ತೊಂಡೆಬಳ್ಳೀನೂ ಇತ್ತನೂ ಅಮಾ?
ಹೂಂ ಯಾವಾಗಲೂ ಹೂಮಿಡಿ ಬಿಡ್ತಿದ್ದ ತೊಂಡೆಬಳ್ಳಿ..
ಆಮೇಲೆ..

ಆಮೇಲೆಂತು, ಆ ಮನೇಲಿ, ಅಜ್ಜ, ಅಮ್ಮಮ್ಮ, ಅಪ್ಪ, ಅಮ್ಮ, ಮತ್ತೆ ಪುಟ್ಟಿ ಇದ್ದಿದ್ರು. ಅಷ್ಟಮಿ ಹಬ್ಬಕ್ಕೆ ಅಂತ ಅಜ್ಜ ಅಮ್ಮಮ್ಮ ಹಾರೆಗೊಪ್ಪಕ್ಕೆ ಹೋಗಿದ್ದರು. ಅವತ್ ರಾತ್ರೆ ಅಮ್ಮ ಊಟಕ್ಕೆ ರೊಟ್ಟಿ ಮಾಡಿದ್ದಳು. ಅಪ್ಪ ಅಂಗಡಿ ಬಾಗಿಲು ಹಾಕಿ - ಹಾಂ ಅದೇ ಹಲಗೆ ಹಲಗೆ ಬಾಗಿಲಿಂದೇ ಅಂಗಡಿ ಅವರದ್ದೂ- ಊಟಕ್ಕೆ ಬಂದು ಕುಳಿತರೆ, ಪುಟ್ಟಿನೂ ಜೊತೆಗೆ. ಅಮ್ಮ ಅಪ್ಪಂಗೆ ಮೂರು ರೊಟ್ಟಿ ಹಾಕಿದಳು, ತನಗೆ ಅಂತ ಎರಡು ರೊಟ್ಟಿ, ಪುಟ್ಟಿಗೆ ಒಂದು ರೊಟ್ಟಿ. ತಟ್ಟೆ ನೋಡಿದವಳೇ ಪುಟ್ಟಿಯ ಗಲಾಟೆ ಶುರುವಾಯಿತು. ನಂಗೆ ಇನ್ನೂ ಒಂದು ರೊಟ್ಟಿ ಬೇಕೂ..ಊಂ... ಅಮ್ಮ ನಯವಾಗಿ ಹೇಳಿದಳು, ಇಲ್ಲ ಪುಟ್ಟೂ ಮಕ್ಕಳಿಗೆ ಒಂದೇ ರೊಟ್ಟಿ, ರಾತ್ರೆ ಹೊತ್ತು ಜಾಶ್ತಿ ತಿಂದರೆ ಹೊಟ್ಟೆನೋವು ಬಂದು.. ಉಂಹೂಂ ಪುಟ್ಟಿ ಕೇಳೋದಿಲ್ಲ. ರಾಗ ದೊಡ್ಡದು ಮಾಡಿ, ತಟ್ಟೆ ದೂಡಿ ನೆಲಕ್ಕೆ ಕಾಲು ಬಡಿದು ಅಳತೊಡಗಿದಳೂ.. ನಂಗೆ ಒಂದ್ ರೊಟ್ಟಿ ಬ್ಯಾಡಾ ಹುಂ ಹೂಂ.. ಎರ್‍ಡೇ ಬೇಕು.. ಅಪ್ಪಂಗಾದ್ರೆ ಮೂರ್ ಹಾಕಿದ್ದೆ, ನಿಂಗೆ ಎರಡು, ನಂಗ್ಯಾಕೆ ಒಂದೇ... ಊಂ...ಪುಟ್ಟೂ ಮಕ್ಕಳು ಹಂಗೆಲ್ಲಾ ಹಟ ಮಾಡಾಲಾಗ, ಜಾಣೆ ಅಲ್ದಾ ನೀನು, ನಾಳೆನೂ ಮತ್ತೆ ರೊಟ್ಟೀನೇ ಮಾಡ್ತಿ, ಅವಾಗ ಮತ್ತೆ ತಿನ್ನು.. ಊಂಹೂಂ.. ನಂಗೆ ಎರಡು ಇಲ್ಲಾ ಮೂರು ರೊಟ್ಟಿ ಇವತ್ತೇ ಬೇಕೂ,, ಈಗ್ಲೇ.. ಈಗ ಅವಳು ನೆಲಕ್ಕೆ ಬಿದ್ದು ಹೊರಳಾಡಿ ಅಳತೊಡಗಿದಳು. ಅಪ್ಪ ಇನ್ನೂ ತಟ್ಟೆಗೆ ಕೈಇಟ್ಟಿರಲಿಲ್ಲ. ಗಂಭೀರವಾಗಿ ಹೇಳಿದರು. ಪುಟ್ಟೂ ಹಿಂಗೇ ಹಟಾ ಮಾಡಿದ್ರೆ ಹೊರಗಡೆ ಹಾಕಿ ಬಾಗಿಲು ಹಾಕ್ ಬಿಡ್ತಿ ನೋಡು. ಆಮೇಲೆ ನಾವೆಲ್ಲಾ ಮಲ್ಗಿದ ಮೇಲೆ ಕೆಂಪಿಕಣ್ಣು ಬಂದು... ಪುಟ್ಟಿಗೆ ಯಾರ ಮಾತೂ ಆಗುತ್ತಿಲ್ಲ. ಈಗ ಅಳುತ್ತ ಅಳುತ್ತ ಗಲಾಟೆ ಶುರು ಮಾಡಿಬಿಟ್ಟಳು. ಕೆಂಪಿಕಣ್ಣೂ ಇಲ್ಲೆ ಎಂತೂ ಇಲ್ಲೆ. ಹೊರಗಾಕಿದ್ರೂ ಅಡ್ಡಿಲ್ಲೆ ನಂಗೆ ಒಂದ್ ರೊಟ್ಟಿ ಬೇಡಾ, ಎರಡೇ ಬೇಕು.. ಅವರಿಬ್ಬರು ಸಮಾಧಾನ ಮಾಡಿ, ಬಯ್ದು ಸಿಟ್ಟು ಮಾಡಿ ಏನು ಮಾಡಿದರೂ ಪುಟ್ಟಿ ಬಿದ್ದುಕೊಂಡಲ್ಲಿಂದ ಏಳುತ್ತಲೇ ಇಲ್ಲ. ಅವಳಮ್ಮ ಕೊನೆಗೆ ಹೋಗಲಿ ಇನ್ನೊಂದರ್ಧ ರೊಟ್ಟಿ ಹಾಕ್ತಿ ಆಮೇಲೆ ರಾತ್ರೆ ಹೊಟ್ಟೆನೋವೂಂತ ಅತ್ರೆ ನಾನೇನು ಕೇಳದಿಲ್ಲೆ ಅಂತ ಹೇಳಿ ಅವಳ ತಟ್ಟೆಗೆ ಇನ್ನರ್ಧ ರೊಟ್ಟಿ ಹಾಕಿದರು. ಆದ್ರೂ ಪುಟ್ಟಿಯ ಹಟ ನಿಲ್ಲಲಿಲ್ಲ. ಅಳ್ತಾನೇ ಇದ್ದಾಳೆ. ಈಗ ಅಪ್ಪಂಗೆ ನಿಜವಾಗಲೂ ತುಂಬ ಸಿಟ್ಟು ಬಂದ್ ಬಿಡ್ತು.

ಎದ್ದು ಮಲಗಿ ಹೊರಳಾಡುತ್ತಿದ್ದ ಪುಟ್ಟಿಯನ್ನು ಎತ್ತಿಕೊಂಡು ಹೊರಗೆ ಹೋಗಿ ಬಾಗಿಲು ತೆಗೆದು ಹೊರಗೆ ಹಾಕಿ ಒಳಗಿನಿಂದ ಚಿಲುಕ ಹಾಕಲು ಹೊರಟವರು ಮತ್ತೆ ಕೇಳಿದರು.. ಪುಟ್ಟೂ ಈಗಲಾದರೂ ಹಟ ನಿಲ್ಲಿಸ್ತೀಯ ಅಥವಾ ಹೊರಗೇ ಇರ್ತೀಯ? ಪುಟ್ಟಿಗೆ ಈಗ ಇನ್ನೂ ಸಿಟ್ಟು ಬಂತು, ನಾನೇನು ಒಳಗೆ ಬರೋಲ್ಲ. ನಂಗೆ ಮೂರು ರೊಟ್ಟಿ ಕೊಡೋ ಹಾಗಿದ್ರೆ ಮಾತ್ರ ಒಳಗೆ ಬರೋದು... ಅಂತ ಅಲ್ಲೆ ಮುಂದಿನ ಕಟ್ಟೆಯಲ್ಲಿ ಕೂತು ಮತ್ತೆ ಅಳತೊಡಗಿದಳು. ಸರಿ ಹಾಗಾದ್ರೆ ಅಂತ ಅಪ್ಪ ಬಾಗಿಲು ಹಾಕಿಕೊಂಡು ಒಳಗೆ ಹೋದರು.

ಅಮ್ಮಾ ಅವಳು ಒಬ್ಳೇ ಅಲ್ಲೆ ಕತ್ತಲಲ್ಲಿ ಇದ್ಲಾ ನಮ್ಮ ಪುಟ್ಟಿಯ ಭಯದ ಪ್ರಶ್ನೆ.
ಅಮ್ಮ ಪುಟ್ಟಿಯನ್ನ ಇನ್ನೂ ಹತ್ತಿರ ಎಳೆದುಕೊಂದು ಹೇಳುತ್ತಾಳೆ. ಇಲ್ಲೆ ಮಗಾ ಆವಾಗಿನ್ನೂ ರಸ್ತೆ ಲೈಟೆಲ್ಲ ಹಂಗೇ ಇತ್ತು. ಅಷ್ಟೆಲ್ಲ ಕತ್ತಲೆ ಇರಲಿಲ್ಲ. ಆ ಪುಟ್ಟಿಗೆ ನಿಜವಾಗ್ಲೂ ತುಂಬ ಹೆದರಿಕೆ ಏನೂ ಆಗಲಿಲ್ಲ ಮತ್ತೆ ಸಿಟ್ಟು ಹಟ ಬೇರೆ ಇತ್ತಲ್ಲಾ ಹೆದರಿಕೆ ಇನ್ನೂ ಶುರುವಾಗಿರಲಿಲ್ಲ.
ಆಮೇಲೇನಾತಮ್ಮಾ?
ಹುಂ ಇನ್ನೇನು..

ಆ ಅಪ್ಪ ಅಮ್ಮ ಇಬ್ರೂ ಊಟ ಮಾಡಿದರು. ಅಮ್ಮ ಗೋಮೆ ಹಚ್ಚಿ, ಅಡಿಗೆ ಮನೆಯ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ನೆಲ ಒರೆಸಿ, ಬಚ್ಚಲು ಒಲೆಗೆ ಬೆಳಗಿನ ಬೆಂಕಿಗೇಂತ ಕಟ್ಟಿಗೆ ಪುರುಳೆ ಎಲ್ಲ ತುಂಬಿ ಕೊನೆಕೊನೆಯ ಕೆಲಸ ಮಾಡುತ್ತಿದ್ದಳು. ಅಪ್ಪ ನೀಟಾಗಿ ಹಾಸಿಗೆ ಹಾಸಿ, ಅವತ್ತಿನ ಲೆಕ್ಕ ಎಲ್ಲ ಬರೆದು ಮುಗಿಸುವಾಗ ಅಮ್ಮ ಎಲ್ಲ ಕೆಲಸ ಮುಗಿಸಿ ಬಂದಳು.

ಪುಟ್ಟಿ ಏನಾದ್ಲಮ್ಮಾ? ನಮ್ಮ ಪುಟ್ಟಿಗೆ ಹೆದರಿಕೆ ಕುತೂಹಲ ಎರಡೂ ತಡೆಯಲಾಗುತ್ತಿಲ್ಲ.

ತಡಿ ಹೇಳ್ತೀನಿ. - ಅವಳು ಅಲ್ಲಿ ಹೊರಗೆ ಕೂತಿದ್ಲಲ್ಲ ಸೊಲ್ಪ ಹೊತ್ತಿಗೆ ಅವಳಿಗೆ ದೂರದಲ್ಲಿ ಪೋಲಿಸ್ ಸ್ಟೇಷನ್ ತಿರುವಿನ ಹತ್ತಿರ ಎರಡು ಕೆಂಪು ಕಣ್ಣುಗಳು ಹೊಳೆಯುತ್ತ ಕಾಣಿಸಿತು. ಜೋಗದ ಕಡೆಯಿಂದ ಬರುತ್ತಿರುವ ಸ್ಕೂಟರ್ ಇರಬಹುದು ಅಂದ್ಕೊಂದಳು. ಆದರೂ ಸ್ವಲ್ಪ ಹೆದರಿಕೆ ಶುರುವಾಗಿತ್ತು. ಈಗ ಅಳು ನಿಂತು ಬಿಟ್ಟಿತು.

ಅದು ಕೆಂಪಿಕಣ್ಣೇ ಅಲ್ದಾ ಅಮಾ, ನಂಗೊತ್ತಿದ್ದು.. ನಮ್ ಪುಟ್ಟಿಯ ನಡುಗುವ ಧ್ವನಿ..
ಅಮ್ಮ ಕತೆಯ ಜೋಷಲ್ಲಿ ತೇಲುತ್ತಿದ್ದವಳು ಪುಟ್ಟಿಯ ಮುಖ ನೋಡುತ್ತ ಹೇಳಿದಳು. ಹೌದು ತಡೀ ಪೂರ್ತಿ ಹೇಳಕ್ಕೆ ಬಿಡದಿಲ್ಯಲ ನೀನು, ಇಷ್ಟೇ ಸಾಕಾ ಕತೆ ಇನ್ನೂ ಮುಂದೆ ಹೇಳ್ಲಾ...
ಓ, ನಂಗೆ ಈ ಸಲಾನೂ ಅದು ಕೆಂಪಿಕಣ್ಣಾ ಅಂತ ಗೊತ್ತಿಲ್ಯಲ.. ಏನು ಬರ್ತು ಬಂದ್ ಮೇಲೆ ಏನು ಮಾಡ್ತು ಅಂತ ನೋಡನ.. ಹೇಳಮ್ಮಾ...
ಸರಿ ಹಂಗಂದ್ರೆ ಕೇಳು..

ಹೊಳೀತಾ ಇರೋ ಕಣ್ಣು ಈಗ ಹತ್ರಾನೆ ಬಂದ್ ಬಿಡ್ತು. ಎಲ್ಲರ ಮನೆಯ ಬಾಗಿಲೂ ಹಾಕಿಕೊಂಡಿದೆ. ಹೆಚ್ಚೂ ಕಮ್ಮಿ ಎಲ್ಲ ಮನೇಲೂ ಲೈಟೆಲ್ಲ ಆಫ್ ಆಗಿದೆ.ಮಲಗ್ ಬಿಟ್ಟಿದಾರೆ. ಆ ಕಡೆ ಮಿಲ್ಲಿನ ಮುಂದಿದ್ದ ಕಂಬದ ಲೈಟಿನ ಬೆಳಕಲ್ಲಿ ಈಗ ಬರೀ ಕೆಂಪಿಕಣ್ಣಷ್ಟೆ ಅಲ್ಲ ಕಣ್ಣ ಹತ್ತಿರ ಕೆಳಗೆ ಹೊಳೆಯುವ ಮೀಸೆ, ಪಟ್ಟೆ ಪಟ್ಟೆ ಮೈ, ಚೂರೆ ಚೂರು ತೆಗೆದುಕೊಂಡ ಹಾಗೆ ಇರೋ ಬಾಯಲ್ಲಿ ಬೆಳ್ಳಗೆ ಹೊಳೆವ ಕೋರೆ ಹಲ್ಲು, ದಪ್ಪ ಬಳ್ಳಿಯಂತೆ ಆ ಕಡೆ ಈ ಕಡೆ ತೊನೆದಾಡುವ ಬಾಲ... ಎಲ್ಲ ಒಂದೊಂದೇ ಕಾಣಿಸತೊಡಗಿತು. ಪುಟ್ಟಿಯ ಹಟ ಕೂಡ್ಲೆ ಕಾಲ್ ಕಿತ್ತಿತು. ಹೆದರೀಕೆಂದ್ರೆ ಹೆದರಿಕೆ. ಅಳಕ್ಕೂ ಹೆದರಿಕೆ. ಕೂತಲ್ಲಿಂದ ಏಳಕ್ಕೂ ಆಗ್ತಾ ಇಲ್ಲ. ಇನ್ನೇನು ಜೂಜನ ಮನೆ ದಾಟಿದ್ರೆ, ಕಿಲಾರದವರ ಮನೆ ಆಮೇಲೆ ಪೇಪರಜ್ಜನ ಮನೆ, ಅದಾದ್ ಮೇಲೆ ನಮ್ಮನೇನೆ ಅಂತ ಗೊತ್ತಾಗೋತು ಪುಟ್ಟಿಗೆ.

ಹೆಂಗೆಂಗೋ ಎದ್ದವಳು ಬಾಗಿಲ ಹತ್ರ ಹೋಗಿ ನಿಂತ್ಕಂಡು ಅಳ್ತಾ ಅಳ್ತಾ ಅಮ್ಮನ್ನ ಕರೆದಳು. ಅಮ್ಮಾ ಇನ್ಯಾವತ್ತು ಹಟ ಮಾಡಲ್ಲ ಬಾಗುಲ್ ತೆಗೆಯಮ್ಮಾ, ಕೆಂಪಿಕಣ್ ಬರ್ತಾ ಇದೆ ನಂಗೆ ಹೆದ್ರಿಕೆ ಅಮ್ಮಾ, ಒಳ್ಳೇವ್ಳಾಗಿರ್ತೀನಿ ಒಳಗೆ ಕರ್ಕೊಳ್ಳಮ್ಮಾ, ಊಟ ಮಾಡಕ್ಕೆ ಹಟ ಮಾಡಲ್ಲಮ್ಮಾ... ಜೋರಾಗಿ ಅತ್ತಳು. ಅಳುತ್ತಳುತ್ತ ನೋಡಿದರೆ ಕೆಂಪಿಕಣ್ಣು ಜೂಜನ ಮನೆ ದಾಟಿ ಕಿಲಾರದ ಮನೆಯವರ ಹತ್ತಿರ ಬರ್ತಿದೆ... ಅಯ್ಯೋ, ಈಗ ಬಾಗಿಲ ಹೊರಗಿನ ಚಿಲಕವನ್ನ ಅಲ್ಲಾಡಿಸಿ ಅಳುತ್ತಾ ಕರೆದಳು ಅಮ್ಮಾ, ಅಪ್ಪಯ್ಯಾ ಹಟ ಮಾಡುಲ್ಲ ನಾನು ಒಳಗೆ ಕರ್ಕೊಳ್ಳೀ.... ಹೂಂ.....

ಅಮಾ ಒಳಗಡೆ ಅಪ್ಪ ಅಮ್ಮಂಗೆ ಕೇಳ್ಸೇ ಇಲ್ವಾ ಅಮಾ ಅವಳು ಅಳ್ತಾ ಇದ್ದಿದ್ದು.. ಕೆಂಪಿಕಣ್ ಬಂದ್ ಬುಟ್ರೆ ಏನ್ ಮಾಡ್ತಾಳಮ್ಮಾ ಅವ್ಳು... - ನಮ್ ಪುಟ್ಟಿಯ ಕಳಕಳಿಯ ಪ್ರಶ್ನೆ
ಸ್ವಲ್ಪ ತಡಿ.. ಮುಂದೆ ಹೇಳಕ್ಕೋ ಬ್ಯಾಡದೋ... ಹೂಂ ಹೇಳು..

ಅಷ್ಟೊತ್ತಿಗೆ ಹಿಂದ್ಗಡೆ ಕೊಟ್ಟಿಗೇಲಿ ಗೌರಿದನದ ಕರ ಬೆಳ್ಳಿ ಎಂತಕೋ ಅಂಬಾ ಅಂತ ಕೂಗ್ತಿತ್ತು. ಅಡಿಗೆ ಮನೇಲಿದ್ದ ಅಮ್ಮಂಗೆ, ಲೆಕ್ಕ ಬರೀತಾ ಇದ್ದ ಅಪ್ಪಂಗೆ ಇದೆಲ್ಲ ಕೇಳಿಸಲೇ ಇಲ್ಲೆ...
ಆದ್ರೆ ಅಮ್ಮ ಕೆಲ್ಸ ಮುಗಿಸಿ ನಡುಗಿನ ಕೋಣೆಗೆ ಬಂದಾಗ ಅವಳಿಗೆ ಬಾಗಿಲ ಚಿಲಕ ಅಲ್ಲಾಡಿಸಿ ಅಳುವ ಪುಟ್ಟಿಯ ಶಬ್ದ ಕೇಳಿಸಿತು. ಓಡುತ್ತ ಓಡುತ್ತ ಬಂದ ಅಮ್ಮ ಬಾಗಿಲು ತೆಗೆದಳು..
ಹೊರಗಡೆ ಇದ್ದ ಪುಟ್ಟಿಗೆ ಈಗ ಅಳಲೂ ಆಗುತ್ತಿಲ್ಲ. ಹೆದರಿಕೆಯಿಂದ ಮೈಯೆಲ್ಲ ಬೆವೆತುಹೋಗಿದೆ. ಕೆಂಪಿಕಣ್ಣು ಪೇಪರಜ್ಜನ ಮನೆಯ ಹತ್ತಿರ ಬಂದ್ ಬಿಟ್ಟಿದೆ.

ಅಷ್ಟೊತ್ತಿಗೆ ಬಾಗಿಲು ತೆಗೆದ ಅಮ್ಮ, ಪುಟ್ಟಿಯನ್ನ ಎತ್ತಿಕೊಂಡು ಬಾಗಿಲು ಹಾಕಿದಳು.ಅಮ್ಮನನ್ನ ಗಟ್ಟಿಯಾಗಿ ಹಿಡಿದುಕೊಂಡ ಪುಟ್ಟಿ ತಪ್ಪಾಯ್ತಮ್ಮಾ ಇನ್ಯಾವತ್ತೂ ಹಟ ಮಾಡಲ್ಲ, ನನ್ನ ಕೆಂಪಿಕಣ್ಣಿಗೆ ಕೊಡಬೇಡಾ.. ಅಂತ ಅಳುತ್ತಳುತ್ತ ಹೇಳಿದಳು. ಪುಟ್ಟಿಯ ಕಣ್ಣೊರೆಸಿದ ಅಮ್ಮ, ಅಡಿಗೆ ಮನೆಗೆ ಎತ್ತಿಕೊಂಡೇ ಹೋಗಿ, ತಟ್ಟೆಯಲ್ಲಿದ್ದ ರೊಟ್ಟಿಯನ್ನ ಬೆಲ್ಲ ತುಪ್ಪ ಹಚ್ಚುತ್ತಾ ಪುಟ್ಟಿಗೆ ತಾನೆ ತಿನ್ನಿಸಿದಳು. ರೊಟ್ಟಿ ಮುಗಿದ ಕೂಡಲೆ ಹಾಲು ಕೊಟ್ಟರೆ ಪುಟ್ಟಿ ಯಾವ ವೇಷನೂ ಮಾಡದೆ ಸುಮ್ಮನೆ ಹಾಲು ಕುಡಿದಳು. ಅಮ್ಮ ಬಚ್ಚಲಿಗೆ ಕರೆದುಕೊಂಡು ಹೋಗಿ ಅವಳ ಬಾಯಿ ತೊಳೆಸಿ, ಉಶ್ ಮಾಡಿಸಿ ಬರುವಷ್ಟರಲ್ಲಿ ಪುಟ್ಟಿಯ ಕಣ್ಣು ಮುಚ್ಚಿಕೊಂಡು ಹೋಗುತ್ತಿತ್ತು. ನಿದ್ದೆ ಬಂದೇ ಬಿಟ್ಟಿದೆ. ಎತ್ತಿಕೊಂಡು ಹೋಗಿ ಅಪ್ಪ ಹಾಸಿಟ್ಟಿದ್ದ ಹಾಸಿಗೆಯಲ್ಲಿ ಮಲಗಿಸಿ, ಬೆಚ್ಚಗಿನ ಬೆಡ್ ಶೀಟ್ ಹೊದಿಸಿ, ತಾನೂ ಮಲಕ್ಕೊಂಡಳು. ಅಪ್ಪ ಕವಳ ಉಗಿಯಲು ಎದ್ದು ಹೊರಗೆ ಹೋದ..

ಇಷ್ಟೊತ್ತೂ ಗಾಬರಿ, ಕುತೂಹಲದಿಂದ ಪ್ರಶ್ನೆ ಕೇಳುತ್ತಿದ್ದ ನಮ್ಮ ಪುಟ್ಟಿ ಈಗ ಸುಮ್ಮನಾಗಿಬಿಟ್ಟಿದ್ದಾಳೆ. ಆ ಹೂವಿನ ಎಸಳುಗಳಂತ ಕಣ್ಣುಗಳ ತುಂಬ ಏನೋ ಯೋಚನೆ. ಮೆತ್ತನೆ ಗಲ್ಲದ ಮೇಲೆ ತೋರುಬೆರಳು ಬೇರೆ. ಸುಮ್ಮನೆ ಮಗಳನ್ನು ದಿಟ್ಟಿಸಿ ನೋಡಿದ ಅಮ್ಮನಿಗೆ ತುಂಬ ಮುದ್ದು ಬಂತು. ಪುಟ್ಟಿಯನ್ನು ಇನ್ನೂ ಹತ್ತಿರಕ್ಕೆ ಎಳೆದುಕೊಂಡು ಆ ಕೆನ್ನೆಯ ಮೇಲೆ ಮುತ್ತೂ ಕೊಟ್ಟುಬಿಟ್ಟಳು.
ಆಮೇಲೆ ನಿಧಾನವಾಗಿ ಹೇಳಿದಳು ನೋಡಿದ್ಯಾ ಹಟಾ ಮಾಡೋ ಮಕ್ಕಳಿಗೆ ಏನಾಗ್ತು ಅಂತ. ಕೆಂಪಿಕಣ್ ಬಂದ್ರೆ ಅಷ್ಟೇ..

ತಲೆಯನ್ನ ಒಂದು ಕಡೆಗೆ ವಾರೆ ಮಾಡುತ್ತಾ ಪುಟ್ಟಿ ಅಮ್ಮನ ಕುತ್ತಿಗೆಯನ್ನ ಎರಡೂ ಕೈಗಳಿಂದ ಬಳಸಿ ಉಲಿದಳು. ಅಮ್ಮಾ ನಾನು ಯಾವ್ದಕ್ಕೂ ಹಟ ಮಾಡೊಲ್ಲ, ಆದ್ರೆ ನೀನು ಯಾವತ್ತಾದ್ರೂ ನಾನ್ ಹಟ ಮಾಡಿದ್ರೆ ಕೆಂಪಿಕಣ್ಣಿಗ್ ಮಾತ್ರ ನನ್ ಕೊಡಬೇಡಮ್ಮಾ.. ಈ ಕತೆ ನೆನಪ್ ಮಾಡು, ಆಮೇಲೆ ನಾನು ಹಟ ಮಾಡಲ್ಲ... ನಾನು ಒಳ್ಳೇವಳು ಅಲ್ವಾ ಅಮ್ಮಾ.. ಈಗ ನಂಗೇನು ಬಿಸ್ಕೆಟ್ ಬೇಡ. ಸಂಜಿಗೆ ಹಾಲು ಕುಡಿಯೋ ಹೊತ್ತಿಗೆ ಕೊಡು ಪರವಾಗಿಲ್ಲ..

ಬಂದ ನಗುವನ್ನು ಕಷ್ಟಪಟ್ಟು ತಡೆದ ಅಮ್ಮ - ಹೌದಪ್ಪಾ ನಮ್ಮನೆ ದೇವ್ರ ಗುಣ ನಮಗೆ ಗೊತ್ತಿಲ್ಲವೇ.. ನೀನು ಒಳ್ಳೆಯವಳೇ.. ಆ ಹಟ ಒಂದು ಪೂರ್ತಿ ಬಿಟ್ಟರೆ ಅಪ್ಪಟ ಬಂಗಾರ - ಅನ್ನುತ್ತಾ ಪುಟ್ಟಿಯ ಕೆನ್ನೆ ತುಂಬ ಮುತ್ತಿನ ಗೊಂಚಲು ಬಿಡಿಸಿ....


ಇಲ್ಲಿ ಜನತುಂಬಿದ ಮಾಲ್ ಹೊರಗೆ ನಿಂತು ಅವನಿಗೆ ಕಾಯುತ್ತಿದ್ದೇನೆ. ಪಕ್ಕದಲ್ಲಿ ಮಗುವೊಂದು ಹೊರಳಾಡಿ ಅಳುತ್ತಿದೆ ಸೂಪರ್ ಮ್ಯಾನ್ ಗನ್ ಬೇಕೇ ಬೇಕು ಅಂತ.. ಅಮ್ಮ ಏನೇನೋ ಹೇಳಿ ರಮಿಸುತ್ತಿದ್ದಾಳೆ. ಮಗು ಕೇಳುತ್ತಿಲ್ಲ. ನನ್ನವನು ಬರುವವರೆಗೆ ಕೆಂಪಿಕಣ್ಣಿನ ಕತೆ ಹೇಳಲಾ ಅಂದ್ಕೊಂಡೆ.. ಅಷ್ಟೊತ್ತಿಗೆ ಮಗುವಿನ ಅಪ್ಪ ಬಂದವರು ಅಮ್ಮನಿಗೆ ಬೈದರು.. ಏನ್ ಮಮ್ಮೀ ನೀನು.. ಮಗೂ ಅಳ್ತಾ ಇದ್ರೆ ಕೇಳಿದ್ ಕೊಡಸೋದು ಬಿಟ್ಟು, ಏನೋ ಉಪದೇಶ ಮಾಡ್ತಾ ಇದ್ದೀಯಲ್ಲಾ? ಕೇಳಿದ್ ಕೊಡ್ಸಕ್ಕೆ ಎನ್ ಪ್ರೊಬ್ಲೆಮ್ ನಿಂಗೆ. ಕಮ್ ಹನೀ.. ಏನ್ ಬೇಕು ನಿಂಗೆ.. ಹಿಡ್ಕೋ ಇದನ್ನ ಅಂತ ತುಂಬಿ ತುಳುಕುತ್ತಿದ್ದ ಆಟದ ಸಾಮಾನಿನ ಚೀಲವನ್ನ ಹೆಂಡತಿಗೆ ಕೊಟ್ಟು, ಮಗುವನ್ನು ಎತ್ತಿಕೊಂಡು ಮತ್ತೆ ಮಾಲ್ ಒಳಕ್ಕೆ ಹೋದರು.

ನನ್ನ ಕೆಂಪಿಕಣ್ಣಿನ ದೃಷ್ಟಿ ಮಂಕಾಗಿ, ಹೊಳಪು ಕಳೆದುಕೊಂಡು ಮುಂದೆ ಹೋಗಲಾರದೆ ಅಲ್ಲೆ ಮಲಗಿಬಿಟ್ಟಿತು. ಈಗ ಮಕ್ಕಳಿಗೆ ಕತೆ ಹೇಳುವಷ್ಟಿಲ್ಲ. ವಿಡಿಯೋ-ಗೇಮಲ್ಲಿ ಸೀಡಿಯಲ್ಲಿ ಅವರಿಗೆ ಬೇಕಾದ್ದನ್ನ ಅವರೇ ಆಯ್ಕೆ ಮಾಡಿಕೊಂಡು ನೋಡುತ್ತಾರೆ. ಬೇಕಾದ್ದನ್ನ ಕೇಳಿದ ಕೂಡಲೆ ಕೊಡಿಸಲು ಅಪ್ಪ ಅಮ್ಮ ಹಗಲೂ ರಾತ್ರೆ ದುಡಿಯುತ್ತಾರೆ. ಊಟದ ತಟ್ಟೆ ಚಮಚ ಚಾಕು ಹಿಡಿದುಕೊಂಡು ಆಯಾ ನಿಂತಿರುತ್ತಾಳೆ. ನೂಡಲ್ಸ್, ವೇಫರ್ಸ್, ಐಸ್ ಕ್ರೀಂ, ಪಿಝಾ ಗಳನ್ನ ಎಷ್ಟು ತಿಂದರೂ ಯಾರು ಕೇಳುವವರೇ ಇಲ್ಲ. ಮೆಡಿಕ್ಲೈಮ್ ಇದೆಯಲ್ಲ..

ಇಲ್ಲಮ್ಮಾ ನಂಗೆ ನಿನ್ ಕತೆ ಬೇಕು..ಹೇಳ್ದೆ ಇದ್ರೆ ನಾನ್ ಊಟ ಮಾಡೊಲ್ಲ ಅಂತ ಇನ್ನೂ ಮೂಡದ ಜೀವವೊಂದು ಮೋಡ ಮರೆಯಿಂದ ಪಿಸುಗುಡುತ್ತ ನನ್ನ ಸಂತೈಸುತ್ತಿದೆ. ೧೫ ವರ್ಷದ ಹಳೆಯ ಚಂದಮಾಮ ಪುಸ್ತಕಗಳನ್ನ ಬುಕ್ ಬೈಂಡ್ ಮಾಡಿಸಿ ಹಿಡಿದು ಬರುತ್ತಿರುವ ನನ್ನವನನ್ನ ನೋಡಿ ಮನಸ್ಸಿಗೆ ಏನೋ ಸಮಾಧಾನ. ಸಿಗ್ನಲ್ ದಾಟುವಾಗ ನೋಡಿದೆ. ಅಲ್ಲಿ ಲೈಟುಕಂಬದ ಹಿಂದೆ ಹೊಳೆಯುತ್ತಿರುವುದೇನು.. ಕೆಂಪಿಕಣ್ಣೇ.. ನೀನಿದ್ದೀಯಲ್ಲಾ, ನಂಗೇನು ಭಯವಿಲ್ಲ..ಮತ್ತೆ ಬರುತ್ತೇನೆ ಅಂತ ಕಣ್ಣು ಮಿಟುಕಿಸುತ್ತಿತ್ತು..

Thursday, September 6, 2007

ಊರು, ಅಜ್ಜಿ, ಮಳೆ ಮತ್ತು ಅಜ್ಜನ ನೆನಪು...

ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್ತ ಮಾತಿಲ್ಲದೆ ಜೊತೆಯಾಗಿ ನಿಂತ ಬಿಳಿಬಿಳಿ ಕಟ್ಟಡಗಳು ಕೆರೆಯಾಚೆಗಿನ ರಸ್ತೆಯಂಚಿನ ದೊಡ್ಡ ದೊಡ್ಡ ಮರಗಳು ಎಲ್ಲವೂ ಮಳೆಯ ಸೋನೆಗೆ ಮೈಯೊಡ್ಡಿ ಸೊಂಪಾಗಿ ಕಾಣುತ್ತಿತ್ತು. ತುಂಬ ದಿನಗಳ ನಂತರ ಊರಿಗೆ ಹೋಗಿದ್ದೆ. ಎಲ್ಲ ಅವತ್ತು ೧೫ ವರ್ಷಗಳ ಮುಂಚೆ ಒಂದು ಮಳೆಗಾಲದಲ್ಲಿ ನಾನು ಹೊರಟಾಗ ಇದ್ದಂತೆಯೇ ಕಂಡರೂ ಎಲ್ಲ ಬೇರೆಯೇ ಅಂತ ಗೊತ್ತಾಗುತ್ತಿತ್ತು. ಕಳೆದಕಾಲದೊಡನೆ ಬದಲಾದ ಊರು ಮತ್ತು ನಾನು..

ಅಜ್ಜಿಗೆ ಸ್ವಲ್ಪ ಹುಷಾರಿರಲಿಲ್ಲ. ನನಗೆ ನೋಡಲೇಬೇಕೆನ್ನಿಸಿತ್ತು. ಎಷ್ಟೇ ಫೋನಿನಲ್ಲಿ ಮಾತಾಡಿದರೂ ನನ್ನ ಸ್ವರದ ಅಂದಾಜಿನ ಮೇಲೆ ಮಾತನ್ನು ಊಹಿಸುವ ಇಳಿವಯಸ್ಸಿನ ಅರೆಕಿವುಡು. ನನಗೆ ಅವಳ ಜೊತೆಕೂತು ಮಾತುಕತೆ ಹೊಸೆಯಬೇಕಿತ್ತು. ಬೆನ್ನ ಹಿಂದೆ ಜಗ್ಗಿನಿಂತ ಎಲ್ಲ ಕೆಲಸಗಳನ್ನೂ ರಿಕ್ವೆಸ್ಟ್ ಮಾಡಿ ಬದಿಗೆ ಸರಿಸಿ ರಾತ್ರಿ ಬಸ್ಸು ಹತ್ತಿದೆ. ಹಣ್ಣು ಮುಖದ ತುಂಬ ಹೂನಗೆ ಹೊತ್ತವಳು ಕಾದಿದ್ದಳು.. ಯಾವಯಾವುದೋ ವಿಷಯದಲ್ಲಿ ಶುರುವಾದ ಎಲ್ಲ ಮಾತಿನ ಹಾದಿಗಳೂ ಸಾವಿನ ಮನೆಯ ಜಗುಲಿಗೇ ಹೋಗಿ ಸೇರುತ್ತಿತ್ತು. ಅವಳ ಓರಗೆಯವರನೇಕರು, ಚಿಕ್ಕವರು ಮತ್ತು ದೊಡ್ಡವರು ಸಾಕಷ್ಟು ಜನ ಗಂಟು ಮೂಟೆ ಕಟ್ಟಿದ್ದರು. ಒಬ್ಬೊಬ್ಬರು ಹೋದಾಗಲೂ ಮೊದಲ ಆತಂಕ ನೆಕ್ಸ್ಟ್ ನಾನೇ ಏನೋ ಅನ್ನುವುದೇ. ಎರಡನೆಯದು ಯಾವ ಬಗೆಯ ಸಾವು..? ಆಸ್ಪತ್ರೆಯಲ್ಲಿ ಜೀವರಸವನ್ನೂ(ಗ್ಲೂಕೋಸ್) ಹಿಂಡುವ ನೋವಿನೊಂದಿಗೆ ಜೀವದೊಳಗೆ ಬಿಟ್ಟುಕೊಳ್ಳುತ್ತಾ ಬಿಡಲಾರದೆ ಜೀವ ಬಿಡುವುದೋ, ಇಲ್ಲಾ ಮನೆಯಲ್ಲಿ ಬೆಳಿಗ್ಗೆ ತಿಂಡಿ, ಸ್ನಾನ ಚಾ ಆಗಿ ಅಡಿಕೆ ಕುಟ್ಟಿಕೊಂಡು ಎಲೆ ನೀವಿ ಸುಣ್ಣ ಹಚ್ಚುವಾಗ ಗೊತ್ತಾಗದಂಗೆ ಜೀವ ಹೋಗುವುದೋ.. ನೇರವಾಗಿ ಹೀಗೇ ಆಗಲಿ ಎನ್ನುವ ಧೈರ್ಯವಿಲ್ಲವಾದರೂ ಅವಳ ಮನಸ್ಸಿನ ತುಂಬ ಕಾಡಿನಿಂತ ಆಸೆ ಅದೇ.. ಚಿಕ್ಕಂದಿನ ನೆನಪುಗಳಿಂದ ಹಿಡಿದು ಇವತ್ತಿನ ಮಾತ್ರೆಗಳು, ಡಾಕ್ಟರವರೆಗೆ, ಎಲ್ಲ ಮಾತಾಡುತ್ತ ಕೂತೆವು. ನಾಲ್ಕೈದು ಲೋಡು ಕವಳ ಖರ್ಚಾಯಿತು. ಅಂಗಳದಲ್ಲಿ ಮಳೆ ನಮ್ಮ ಮಾತಿಗೆ ಹನಿ ಹಾಕುತ್ತಿತ್ತು.ನಾನು ವಿಮಾನದಲ್ಲ್ ಊರುಗಳಿಗೆ ಹೋಗುವುದನ್ನು ಮತ್ತೆ ಮತ್ತೆ ಕೇಳಿದಳು. ಅವಳಿಗೆ ವಿಮಾನದಲ್ಲಿ ಹೋಗಿನೋಡಬೇಕೆಂಬಾಸೆ ಆದರೆ ಭಯ :)

ಮಧ್ಯಾಹ್ನ ಊಟವಾಗಿ ಅವಳು ಮಲಗಿದ ಮೇಲೆ ನಾನು ಚಿಕ್ಕಪ್ಪನ ಜೊತೆ ಅಜ್ಜನೂರಿಗೆ ಹೋದೆ. ಅದು ಅಜ್ಜನಷ್ಟೇ ಹಿತವಾಗಿ, ಪ್ರೀತಿಯಿಂದ ಕಾದು ನಿಂತಿತ್ತು. ಊರ ಹತ್ತಿರದ ತಿರುವು, ಸೇತುವೆ, ಮೈದಾನ, ಶಾಲೆ, ನೀರಿರದ ಬಾವಿ ಮತ್ತು ದೂರದ ಬೋರ್ ವೆಲ್,ಬೃಹದಾಕಾರದಲ್ಲಿ ನಿಂತ ಬೂತಪ್ಪನ ಮರ, ಮನೆಯಾಚೆಗಿನ ಪುಟ್ಟ ಹಸಿರುಗುಡ್ಡ, ಗುಡ್ಡದ ಮೇಲಿನಿಂದ ಕಾಣಬರುವ ಶರಾವತಿಯ ಹಿನ್ನೀರು, ಊರ ಮೈದಾನದ ಕೊನೆಗೆ ದೊಡ್ಡದಾಗಿ ಆವರಿಸಿ ನಿಂತ ಮನೆ, ಮನೆಯ ಸುತ್ತಲ ಗೇರುಮರಗಳು ಎಲ್ಲವೂ ಅಜ್ಜನ ನೆನಪನ್ನ ಗೊಂಚಲು ಗೊಂಚಲಾಗಿ ಹೊತ್ತು ನಿಂತಿದ್ದರೆ, ಮನಸು ಒಳಗೇ ಸರಿಯುತ್ತಿತ್ತು.

ಹಳ್ಳಿಯ ಮನೆಯಲ್ಲಿ ಯಾರೂ ಇಲ್ಲದ ದಿನಗಳಲ್ಲಿ ಅಜ್ಜ ಮತ್ತು ಪುಟ್ಟ ನಾನು ಸಾಗರದಿಂದ ಬಸ್ಸಿಗೆ ಬಂದು, ಅಲ್ಲಿಂದಲೇ ತಂದುಕೊಂಡಿರುತ್ತಿದ್ದ ಫ್ಲಾಸ್ಕಿ ನ ಟೀ ಕುಡಿದು ಬಿಸ್ಕತ್ ತಿನ್ನುತ್ತಿದ್ದ ಸಮಯ, ಗದ್ದೆ ತೋಟಗಳ ಮೇಲುಸ್ತುವಾರಿಗೆ ಹೋಗುವ ಅಜ್ಜನ ಬಾಲದಂತ ನಾನು, ಗದ್ದೆಯಲ್ಲಿ ಹೆದರಿಸುವ ಏಡಿ, ತೋಟದಲ್ಲಿರುತ್ತಿದ್ದ ಭಯಾನಕ ಆಕಾರದ ಜೇಡಗಳು, ಕಟ್ಟಿ ನಿಂತ ಗದ್ದೆಯ ಬದುವಲ್ಲಿ ಅಲ್ಲಲ್ಲಿ ಪುಟ್ಟ ಜಲಪಾತದಂತೆ ಹರಿಯುವ ನೀರು, ಈ ಹೊತ್ತಿನಲ್ಲಿ ಯಾವ್ಯಾವುದೋ ಗಿಡದ ನಡುವೆ ಅಡಗಿಕೊಂಡು ಬಿರಿದಿರುವ ಗೌರಿ ಹೂಗಳು, ಮರವ ತಬ್ಬಿ ಸೊಗಯಿಸುವ ಸೀತಾಳೆ ದಂಡೆಗಳು, ಅಜ್ಜನೆಂದರೆ ಭಕ್ತಿಯನ್ನೇ ತೋರುವ ನರಸ, ಉಡಾಫೆ ಕತೆ ಹೊಡೆಯುವ ಕೇಶವ.. ತೋಟದ ಹಾಳಿಗಳ ಮಧ್ಯೆ ಅಲ್ಲಲ್ಲಿ ಹರಿಯುವ ತೋಡುಗಳು ಎಲ್ಲ ಒಟ್ಟೊಟ್ಟಿಗೆ ನೆನಪಾದವು. ಅಜ್ಜನಿಲ್ಲ ಅಂತ ಬೇಸರಿಸಿ ಕಣ್ಣೀರಿಡಲೋ ಅಥವಾ ಸುತ್ತೆಲ್ಲ ಕಾಣುವ ಈ ಚಂದ ಸಂಗತಿಗಳ ಪ್ರತಿ ಹೊರಳಲ್ಲೂ ಹೊಳೆವ ಅವನ ನೆನಪನ್ನ ನೇವರಿಸಿ ಮುದ್ದಾಡಲೋ?! ಈ ಎಲ್ಲ ಸಂಗತಿಗಳನ್ನ ನನ್ನ ಮಡಿಲಿಗಿಟ್ಟು, ಕಣ್ಣು ನೋಡಲು ಒಂದು ವಿಶಾಲ ಆಕಾಶವನ್ನು ಕೊಟ್ಟ ಅವನಿಗೆ ನನ್ನ ಪ್ರೀತಿಯ ನಮನ.

ಅತ್ತೆ ಮಾಡಿಕೊಟ್ಟ ಟೀ ಕುಡಿದು ಹಾಗೇ ಗದ್ದೆಯ ಕಡೆ ಹೊರಟೆವು. ಅಲ್ಲಿ ತೋಟವನ್ನಾಸಿ ಹೋಗುವಾಗ ಕಾಣಿಸಿತು - ಬ್ರಹ್ಮ ಕಪಾಲದ ಕಮರಿ.. ಚಿಕ್ಕವಳಿದ್ದ ನನ್ನನ್ನು ಅಜ್ಜ ಜೊತೆಗಿರಲಿ ಅಂತ ಕರೆದುಕೊಂಡು ಹೋಗುತ್ತಿದ್ದ ಹಳ್ಳಿಗೆ. ಆದರೆ ನನ್ನನ್ನು ಎತ್ತಿಕೊಳ್ಳಲಾಗುತ್ತಿರಲಿಲ್ಲ ಅವನಿಗೆ. ನನ್ನನ್ನ ನಡೆಸಿಕೊಂಡು ಏರುತಗ್ಗಿನ ಹಾದಿಯಲ್ಲಿ ಗದ್ದೆ ತೋಟ ಎಲ್ಲ ಹಾಯಬೇಕಲ್ಲ, ಅದಕ್ಕೊಂದು ಉಪಾಯ ಕಂಡುಹಿಡಿದಿದ್ದ. ಕತೆ ಹೇಳುವುದು. ಮನೆಯಿಂದ ಹೊರಡುವಾಗ ಒಂದು ಕತೆ ಶುರು ಮಾಡಿಬಿಡುವುದು. ಆಮೇಲೆ ದಾರಿಯುದ್ದಕ್ಕೂ ಅಲ್ಲಲ್ಲಿ ಇಷ್ಟಿಷ್ಟೇ ಕತೆ ಹೇಳುತ್ತ ಹೋಗುವುದು, ನಡು ನಡುವೆ ಅವನ ಕೆಲಸ, ಕೆಲಸದವರ ಜೊತೆ ಮಾತು, ಇತ್ಯಾದಿ. ನಾನು ಕಾಲುನೋವೆಂದು ನೆನಪು ಮಾಡಿದ ಕೂಡಲೆ ಅಜ್ಜ ನನಗೆ ಅಲ್ಲೆ ನಿಂತಿದ್ದ ಮರವನ್ನೋ, ಅದ್ಯಾವುದೋ ಹೂವನ್ನೋ, ದೂರದಲ್ಲೆಲ್ಲೋ ಕೇಳಿಬಂದ ಹಕ್ಕಿಗೊರಳನ್ನೋ ತೋರಿಸಿ/ಕೇಳಿಸಿ, ಅದನ್ನ ಅವನು ಹೇಳುತ್ತಿದ್ದ ಕತೆಯಲ್ಲಿ ಸೇರ್‍ಇಸಿ ಇದು ಅದೇ ಮರ, ಅವಳು ಮುಡಿಯುತ್ತಿದ್ದ ಹೂವು, ಆಗ ಹಾಡಿದ್ದ ಹಕ್ಕಿಯ ಸಂತತಿ ಹೀಗೆ ಕತೆ ಕಟ್ಟುತ್ತಿದ್ದ. ನಂಗೆ ಅಜ್ಜನ ಬರಿಯ ಕತೆಗಳೆಂದರೇ ಕಲ್ಪನೆಯ ಕುದುರೆ ಸವಾರಿಯ ಹಾಗೆ.. ಅದರ ಜೊತೆಗೆ ಜೀವಂತವಾಗಿ ಎದುರು ನಿಂತಿರುವ ಅಥವಾ ಕಾಣುವ ಯಾವುದೋ ಆ ಕತೆಯಲ್ಲಿದೆ ಅಂದರೆ ಡಬ್ಬಲ್ ಇಷ್ಟ. ಕಾಲುನೋವು ಮರೆತುಹೋಗುತ್ತಿತ್ತು. ಕಲ್ಪನೆಯ ಕುದುರೆಯ ನಾಗಾಲೋಟಾಕ್ಕೆ ರೆಕ್ಕೆಗಳ ಬಡಿತವೂ ಸೇರುತ್ತಿತ್ತು.. ಹೀಗೇ ಅವನು ಹೇಳಿದ ಕತೆಯೊಂದರ ಸನ್ನಿವೇಶ ನಾವು ನಮ್ಮ ತೋಟ ಹೊಕ್ಕುವಾಗ ಸಿಗುವ ಚಿಕ್ಕ ದರಿ. ಭೂಮಿ ಅಥವಾ ಮಣ್ಣ ಗುಡ್ಡ ಅಲ್ಲಲ್ಲಿ ಕುಸಿದು ಆಗಿರುವ ಪುಟ್ಟ ಪುಟ್ಟ ಹೊಂಡಗಳಿಗೆ ನಮ್ಮಲ್ಲಿ ದರೆ/ದರಿ ಅನ್ನುತ್ತಾರೆ. ಪ್ರತಿ ಮಳೆಗಾಲ ಬಂದಾಗಲು ಇದು ಸ್ವಲ್ಪ ಅಗಲವಾಗುವುದುಂಟು.. ಕುಸಿದ ಮಣ್ಣು ಮತ್ತಷ್ಟು ಕುಸಿದು.. ಇದನ್ನು ದಾಟಿ ಆಚೆಹೋಗಲು ಬಿದ್ದ ಅಡಿಕೆಮರಗಳನ್ನು ಕಡಿದುಸೇರಿಸಿ ಸೇತುವೆ ಮಾಡಿರುತ್ತಾರೆ. ಅದನ್ನು ನಮ್ಮ ಕಡೆ ಸಂಕ ಎಂದು ಕರೆಯುತ್ತಾರೆ.

ನಾವು ಈಗ ಪಟ್ಟಣದಲ್ಲಿ ಪೇಟೆಯಲ್ಲಿ ಸುರಕ್ಷಿತ ರಸ್ತೆ ಸೇತುವೆಗಳಲ್ಲಿ ಓಡಾಡುವವರಿಗೆ ಇದನ್ನು ನೋಡಿದರೆ ಗಾಬರಿಯಾಗಿ ಕಾಲಿಡಲು ಭಯವಾಗುತ್ತದೆ. ಆದರೆ ಇಲ್ಲೇ ಬೆಳೆದ ಜೀವಗಳು ಸುಮ್ಮನೆ ಸಪಾಟು ರಸ್ತೆಯಲ್ಲೇ ನಡೆದ ಹಾಗೆ ಸಹಜವಾಗಿ ದಾಟಿಹೋಗುತ್ತಾರೆ. ಅಂತಹ ಒಂದು ಸಂಕವನ್ನು ನಾನು ಅಜ್ಜನ ಕೈಹಿಡಿದು ದಾಟುತ್ತಿದ್ದೆ. ಆದರೆ ದಾಟುವಾಗೆಲ್ಲ ತುಂಬ ಭಯ. ಸಾಕಷ್ಟು ಉದ್ದ ಮತ್ತು ಆಳವಾಗಿದ್ದ ದರೆಯದು. ಅಜ್ಜ ತನ್ನ ಕಲ್ಪನೆಯನ್ನೆಲ್ಲ ಖರ್ಚು ಮಾಡಿ ತುಂಬ ಎಕ್ಸೈಟಿಂಗ್ ಆಗಿರುವ ಕತಾ ಸನ್ನಿವೇಶಗಳನ್ನು ಹೇಳುತ್ತಿದ್ದ. ನಾನು ಹೂಂಗುಡುತ್ತಾ ಭಯವಾದರೂ ಕತೆ ಕೇಳುತ್ತಾ ಹೇಗೆ ಹೇಗೋ ದಾಟುತ್ತಿದ್ದೆ. ಅಂತ ಒಂದು ಕತೆಯ ಸನ್ನಿವೇಶ ಇದು. ಬ್ರಹ್ಮ ಹತ್ಯಾದೋಷ ಹತ್ತಿದ ಶಿವನ ಕೈಗೆ ಅಂಟಿಕೊಂಡ ಬ್ರಹ್ಮಕಪಾಲವು ಅವನನ್ನು ಏನು ಮಾಡಲೂ ಬಿಡುತ್ತಿರಲಿಲ್ಲ. ಊಟ ಮಾಡಲು ಹೋದರೆ ಕಪಾಲವೇ ತಿಂದುಬಿಡುತ್ತಿತ್ತು, ಕೈಯಲ್ಲೇ ಇತ್ತಲ್ಲಾ, ನೀರು ಕುಡಿಯಲು ಹೋದರೂ ತಾನೇ ಕುಡಿಯುತ್ತಿತ್ತು, ಒಟ್ಟಲ್ಲಿ ಯಾವ ಕೆಲಸವನ್ನೂ ಮಾಡಗೊಡುತ್ತಿರಲಿಲ್ಲ. ಒಂದೇ ಪರಿಹಾರವೆಂದರೆ ಆ ಕಪಾಲವನ್ನು ಇನ್ನೊಬ್ಬರ ಕೈಗೆ ಅವರು ಒಪ್ಪಿದರೆ ದಾಟಿಸುವುದು, ಆದರೆ ಅದಕ್ಕೆ ಯಾರೂ ಸಿಗಲಿಲ್ಲ. ಯಾರು ತಾನೆ ಹೀಗೆ ಜೀವಹಿಂಡುವ ಕಪಾಲವನ್ನು ಇಷ್ಟಪಟ್ಟು ತಗೋತಾರೆ? ಹೀಗೆ ಕಷ್ಟಪಡುತ್ತಿರುವ ಶಿವನ ಗೋಳು ನೀಗಿಸಲು ವಿಷ್ಣು ಒಂದು ಸಕ್ಕತ್ತಾಗಿರುವ ಉಪಾಯ ಮಾಡಿದ. ಒಂದು ದೊಡ್ಡ ಪ್ರಪಾತದ ಆಚೆ ಈಚೆ ವಿಷ್ಣು ಶಿವ ಇಬ್ಬರೂ ನಿಂತುಕೊಂಡರು. ವಿಷ್ಣುವಿನ ಕೈಗೆ ಶಿವ ಕಪಾಲವನ್ನು ದಾಟಿಸಬೇಕಿತ್ತು, ಶಿವ ಕೈ ಮುಂದೆ ನೀಡಿ ಕಪಾಲವನ್ನು ಕಳಿಸಲು ರೆಡಿಯಾದರೆ, ವಿಷ್ಣುವೂ ಕೈ ಮುಂದೆ ನೀಡಿ ಕಪಾಲವನ್ನು ಪಡೆಯಲು ರೆಡಿಯಾಗಿದ್ದನು. ಇಬ್ಬರ ಮಧ್ಯೆ ಪ್ರಪಾತ. ಶಿವನ ಕೈಯನ್ನ ಕಪಾಲ ಬಿಟ್ಟು ಇನ್ನೇನು ವಿಷ್ಣುವಿನ ಕೈಯನ್ನು ಹಿಡಿಯಬೇಕು, ಕ್ಷಣಾರ್ಧದಲ್ಲಿ ವಿಷ್ಣು ಕೈ ವಾಪಸ್ ತಗೊಂಡ್ ಬಿಡುತ್ತಾನೆ. ನೆಗೆಯುತ್ತಿರುವ ಬ್ರಹ್ಮಕಪಾಲ ಆಳವಾದ ಕಮರಿಗೆ ಬೀಳುತ್ತದೆ. ಅದು ಎಷ್ಟು ದೊಡ್ಡದು ಮತ್ತು ಆಳ ಅಂದರೆ ಕಪಾಲಕ್ಕೆ ಇನ್ನು ಮೇಲೆ ಬರಲಾಗುವುದಿಲ್ಲ. ಅದು ಎಷ್ಟು ದೊಡ್ಡದು ಆಳ ಅಂದರೆ ನಾವೀಗ ದಾಟುತ್ತಿದೇವಲ್ಲ ಇದೇ ದರಿಯೇ.. ಮತ್ತು ನಾನು ಈಗ ಬೇಗಬೇಗ ಸಂಕ ದಾಟದೇ ಇದ್ದರೆ ಅಲ್ಲೇ ಕೆಳಾಗೆ ತೆವಳುತ್ತಿರುವ ಬ್ರಹ್ಮಕಪಾಲ ಯಾರು ಸಿಗುತ್ತಾರೋ ಅವರ ಕೈ ಹಿಡಿದುಕೊಂಡುಬಿಡುತ್ತದೆ. ಹಾಗೆಲ್ಲ ನಿಧಾನವಾಗಿ ದಾಟುವುದು ನಾನೇ ಆಗಿದ್ದರಿಂದ ನಾನೇ ಅದರ ಈಸಿ ಟಾರ್ಗೆಟ್. ನಂಗೆ ಸಿಕ್ಕಾಪಟ್ಟೆ ಹೆದರಿಕೆ ಮತ್ತು ಕುತೂಹಲ. ಅಷ್ಟು ಹೆದರಿಕೆಯಲ್ಲಿ ದಾಟುವ ನಾನು, ಅಲ್ಲಿ ಕೆಳಗೆ ತೆವಳುತ್ತಿರುವ ಕಪಾಲ ಕಾಣುತ್ತದೆಯಾ ಅಂತ ನೋಡಲು ಮರೆಯುತ್ತಿರಲಿಲ್ಲ. ಸಂಕ ದಾಟಿದ ಮೇಲೆ ಸ್ವಲ್ಪ ದೂರ ಅದೇ ದರೆಯ ಗುಂಟ ಸಾಗಬೇಕು. ಕಾಲು ದಾರಿಯಲ್ಲಿದ್ದರೂ ನನ್ನ ಕಣ್ಣು ದರೆಯೊಳಗಿರುತ್ತಿತ್ತು, ಬ್ರಹ್ಮ ಕಪಾಲ ಹುಡುಕುತ್ತಾ. ಒಬ್ಬಳೇ ಅಲೆಯಲು ಹೊರಡುವ ನನ್ನನ್ನು ಈ ಜಾಗಕ್ಕೆಲ್ಲ ಒಬ್ಬಳೆ ಬರದಿರಲು ಅಜ್ಜ ಉಪಯೋಗಿಸುವ ರಾಮಬಾಣವೂ ಕೂಡ ಅದೇ ಬ್ರಹ್ಮಕಪಾಲವೇ ಆಗಿತ್ತು ಎಷ್ಟೋ ವರುಷಗಳವರೆಗೆ.

ನಾನು ಸ್ವಲ್ಪ ದೊಡ್ಡವಳಾಗಿ ಆ ಕತೆಯೊಳಗಿನ ಕತೆ ಅರ್ಥವಾದ ಮೇಲೆ, ಇನ್ನೂ ಪುಟ್ಟವನಿದ್ದ ತಮ್ಮನನ್ನು ಅಲ್ಲೆಲ್ಲ ಸುತ್ತಾಡಿಸಿ ಈ ಕತೆ ಹೇಳಿ ಹೆದರಿಸಿದ್ದಿದೆ. ಹೆದರಿಸಿ ಅಭಯ ತೋರಿ ಅವನ ಕೈಯಲ್ಲಿದ್ದ ಕಾಡು ಹಣ್ಣು ಹೂವು ಗಿಟ್ಟಿಸಿಕೊಂಡಿದ್ದಿದೆ. ಆಮೇಲೆ ಇಬ್ಬರೂ ಇದನ್ನೆಲ್ಲ ಜೋಕು ಮಾಡಿ ನಗುವಷ್ಟು ದೊಡ್ಡವರಾದ ಮೇಲೆ ಅಲ್ಲಿ ಹೋದಾಗ ಪ್ರತಿಬಾರಿಯೂ ಬ್ರಹ್ಮಕಪಾಲದ ಕಮರಿಯನ್ನು ಸುಮ್ಮನೆ ಹೋಗಿ ಹಾದುಬಂದಿದ್ದಿದೆ. ಅಜ್ಜನ ತಿಥಿಗೆ ಹೋದರೆ ನನಗೆ ಗೊತ್ತು ಅಜ್ಜ ಮನೆಯಂಗಳದ ನೈವೇದ್ಯಕ್ಕೆ ಬರುವುದಿಲ್ಲ.. ಅಲ್ಲಿರುತ್ತಾನೆ ಬ್ರಹ್ಮಕಪಾಲದ ಸಂಕ ದಾಟಲು ಬರುವ ಮೊಮ್ಮಕ್ಕಳ ಕೈಹಿಡಿದು ಕತೆ ಹೇಳಿ ದಾಟಿಸಲು. ಅದಕ್ಕೆ ನಾನು ಅಲ್ಲೆ ಮರಗಳ ನೆರಳಲ್ಲಿ ಸಂಕದ ಆಸುಪಾಸು, ತೋಟ ಸುತ್ತುತ್ತಿರುತ್ತೇನೆ, ಅಜ್ಜನ ಕೈ ಬಳಸಲು.

ಈ ಎಲ್ಲ ನೆನಪನ್ನು ಹೊತ್ತು ಸಂಕ ದಾಟುವಾಗ ಈ ಸಲದ ಮಳೆಗೆ ತುಂಬ ಮಣ್ಣು ಕುಸಿದು ದರೆ ಅಗಲವಾದದ್ದು ಕಾಣಿಸಿತು. ಸಂಕ ದೊಡ್ಡದು ಮಾಡಲೇ ಬೇಕಿರಲಿಲ್ಲ. ದರೆಯ ಸುತ್ತಿ ಬಳಸಿ ಹಾಯುವ ದಾರಿಯನ್ನೇ ಎಲ್ಲರೂ ಉಪಯೋಗಿಸಿ ಸಂಕ ಹ್ಯಾಪುಮೋರೆ ಹಾಕಿಕೊಂಡಿತ್ತು.

ಹೀಗೇ ಏನೇನೋ ನೆನಪು ಮಾಡಿಕೊಳ್ಳುತ್ತಾ ಅಲ್ಲೆಲ್ಲ ತಿರುಗಿ ಮನೆಗೆ ವಾಪಸಾಗುವಾಗ ಅಲ್ಲೊಂದಿಷ್ಟು ಕಡು ಹಸಿರಿನ ಗಿಡಗಳ ನಡುವೆ ದಟ್ಟ ಹಳದಿಕೆಂಪಿನ ಡಿಸೈನಿನಲ್ಲಿ ಚೆಲುವಾಗಿ ಅರಳಿನಿಂತ ಗೌರಿಹೂಗಳು ಕಾಣಿಸಿ ಅಜ್ಜನನ್ನೇ ನೋಡಿದ ಖುಷಿಯಾಯಿತು.

Monday, August 20, 2007

ಪಚ್ಚೆಕಲ್ಲು ಪಾಣಿ ಪೀಠ...

ನಾವಿಬ್ಬರೂ ಶಾಲೆ ಮುಗಿಸಿ ಬಂದು ಪಾಟಿ ಚೀಲ ಬಿಸಾಕಿ, ಕೈ ಕಾಲು ತೊಳ್ಕೊಂಡು, ಅಮ್ಮ ಕೊಟ್ಟ 'ಬಾಯಿಬಡಿಗೆ' ಗುಳುಂ ಮಾಡಿ, ಹಾಲುಟೀ ಕುಡಿದು ಓಟ ಹೊರಗೆ.. ಅಲ್ಲಿ ರಸ್ತೆಬದಿಯ ಅಂಗಳದಲ್ಲಿ, ರೇಣುಕ,ಶಿವು,ತಾರ,ಶಾಯಿನಾ,ಲಕ್ಷ್ಮಣ,ದುರ್ಗಪ್ಪ ಎಲ್ಲ ಸೇರಿ ಕತ್ತಲು ಕವಿಯುವವರೆಗೆ ಬಾಯಿಗೆ ಬಂದ ಆಟ ಆಡಿ ಮಣ್ಣಧೂಳಿನ ತೆರೆಹೊದ್ದು ಗೋಧೂಳಿಯಲ್ಲಿ ಮನೆಗೆ ಬರುವ ಪುಟ್ಟ ಕರುಗಳಂತೆ ಬಂದ ಮೇಲೆ.. ಮತ್ತೆ ಕೈಕಾಲು ತೊಳೆದು.. ಈ ಸಲ ಹಿಮ್ಮಡಿ ನೆನೆಯುವ ಹಾಗೆ ಎಚ್ಚರಿಕೆಯಿಂದ ಕಾಲು ತೊಳೆಯಬೇಕು ಇಲ್ಲದಿದ್ದರೆ ಬಚ್ಚಲ ಒಲೆಯ ಬುಡದಲ್ಲೆಲ್ಲೋ ಬೆಚ್ಚಗೆ ಕುಳಿತ ಶನಿಮಹಾತ್ಮ ನಳನ ಹಿಮ್ಮಡಿ ಕಚ್ಚಿಹಿಡಿದಹಾಗೆ ಹಿಡಕೊಂಡು ಬಿಡುತ್ತಾನೆ.. ಆಮೇಲೆ ಅಷ್ಟೆ..!

ಇಬ್ಬರೂ ಗೋಣಿಚೀಲಕ್ಕೆ ಕಾಲು ಒರೆಸುತ್ತಾ ಒಳಗೆ ಬಂದರೆ ಅಮ್ಮ ಆಗಷ್ಟೇ ದೀಪಕ್ಕೆ ಎಣ್ಣೆತುಂಬುತ್ತಾ ಹತ್ತಿಸುತ್ತಿದ್ದಾಳೆ. ಒಂದು ಊದುಬತ್ತಿ ಬೇರೆ. ಈಗ ಅಮ್ಮನದ್ದು ಮಾತಿಲ್ಲ ಸಂಜ್ಞೆ. ನಾವಿಬ್ಬರೂ ಸಿಕ್ಕಾಪಟ್ಟೆ ಒಳ್ಳೆಯವರ ಹಾಗೆ ಕೈ ಮುಗಿದು ಅಮ್ಮನ ಮುಖದ ಮೇಲೆ ಬೆಳಕಿನಾಟ ಹಚ್ಚಿರುವ ದೀಪದ ಪುಟ್ಟ ಉರಿಯನ್ನೇ ನೋಡುತ್ತಾ ನೋಡುತ್ತಾ ನಿಜವಾಗಲೂ ತುಂಬ ಒಳ್ಳೆಯವರಾಗಿಬಿಡುತ್ತಿದ್ದೆವು. ಅಮ್ಮನ ಅಹವಾಲು ಮುಗಿದು ನಮ್ಮ ಕಡೆ ತಿರುಗಿದ ಕೂಡಲೆ, ನಮ್ಮ ಬಾಯಿ ತಾನೆತಾನಾಗಿ ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ.. .ಎಂದು ಒಪ್ಪುವಾ ವಿಘ್ನೇಶ್ವರನಿಗೆ ನಮಸ್ಕರಿಸಿ, ಪಾರ್ವತಿ, ಶಾರದೆ, ಅನ್ನಪೂರ್ಣೆ, ಗುರುರಾಯರನ್ನೆಲ್ಲ ಓಲೈಸಿ ಮುಗಿಸುವಾಗ ನಾವು ಶಿರಬಾಗಿ ನಮಿಸಿ ಎದ್ದವರು ಮತ್ತೆ ವಾಪಸ್ ಕಿರಾತರಾಗಿ ಬಿಡುತ್ತಿದ್ದೆವು. ಗೂಡಿನಲ್ಲಿದ್ದ ಇಡಗುಂಜಿ ಗಣಪತಿಯಂತೂ ನಮ್ಮನ್ನು ನೋಡಿದಾಗಲೆಲ್ಲ ಕಿರುನಗು..

ಬೇಸಿಗೆ ರಜೆಯ ಆಟೋಟ್ಟಹಾಸದ ಸಂಜೆಗಳಲ್ಲಿ, ಊರಲ್ಲಿ, ಸಂಜೆಯ ಆಟ ಮುಗಿದು ಮನೆಗೆ ಬಂದು ಕಾಲ್ತೊಳೆದು ದೇವರ ಮನೆಯ ಮುಂದೆ ಅಕ್ಕನ ಜೊತೆ ತಾಳ ಹಿಡಿಯಲು ನಾವಿಬ್ಬರೂ ಕುಸ್ತಿ ಮಾಡಿ ಕೂರುವಷ್ಟರಲ್ಲಿ ಅವಳು ಒಪ್ಪಾಗಿ ಬಂದು ಕೂತು -ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ ಅಂತ ಶುರುಮಾಡುತ್ತಿದ್ದಂತೆ ನಾವು ನಮ್ಮ ಕಿತಾಪತಿ ಮರೆತು ಆ ಹಾಡಿನ ಎಳೆಯನ್ನೇ ಹಿಡಿದು ರಾಮ ಪಟ್ಟಾಭಿಷೇಕದಲ್ಲಿ ನಲಿಯುತ್ತಾ, ನಮ್ಮ ಮನೆಗಳಲ್ಲಿ ಪರಿಚಿತವಿರುವ ಎಲ್ಲ ದೇವರನ್ನೂ ಓಲೈಸಲು ವಿಧವಿಧದ ಭಜನೆಗಳನ್ನು ಗುನುಗುತ್ತಾ ಇದ್ದರೆ ಅಲ್ಲಿ ಪೀಠದ ಮೇಲೆ ದೀಪದ ಸಣ್ಣ ಬೆಳಕಿನಲ್ಲಿ ಹೊಳೆಯುವ ಎಲ್ಲ ದೇವಾನುದೇವತೆಗಳೂ, ಮನೆಯಲ್ಲಿ ಅಲ್ಲಲ್ಲಿ ಅವರವರ ಕೆಲಸದಲ್ಲಿರುವ ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಅಮ್ಮಮ್ಮ ಎಲ್ಲರೂ ಸುಪ್ರಸನ್ನರಾಗಿ ಎಂತಹ ಬಂಗಾರದ ಮಕ್ಕಳಾಗುತ್ತಿದ್ದೆವು.

ಎಲ್ಲ ಕಿರಾತಬುದ್ಢಿ, ತುಂಟತನ, ಹೊಟ್ಟೆಯುರಿ, ಎಲ್ಲ ಸಂಜೆಯ ಕತ್ತಲಲ್ಲಿ ಕರಗಿ, ಬೆಳಕಿನ ಪುಟ್ಟ ಹಾಡಿನೆಳೆ ಹಿಡಿದು ಕಿನ್ನರಲೋಕದ ದಾರಿಯಲ್ಲಿ ದೇವರ ದೇವ ವಾಸುದೇವನ ಕೊಳಲ ನೆನಪಿನಲ್ಲಿ ನಮ್ಮ ಪಯಣ.

ಮೊನ್ನೆ ಅಲ್ಲಿ ರಾಮಮಂದಿರದಲ್ಲಿ (ಇದು ಭಜರಂಗೀ ರಾಮನಲ್ಲ..! ಬಾಪೂಜೀಯ ರಾಮ) ಎಲ್ಲ ದೊಡ್ಡಮಕ್ಕಳು ಅವರವರ ಮಕ್ಕಳು ಮೊಮ್ಮಕ್ಕಳೊಂದಿಗೆ ಕೂತು ಕಮಲನಯನ ಮಾಧವಾ ಕಮಲಾನಯನ ಮಾಧವಾ.. ಅಂತ ಹಾಡುತ್ತಿದ್ದರು. ಸುತ್ತಲ ಶಬ್ಧಮಯ ಬದುಕಿನ ಅಗಾಧ ಕತ್ತಲೆಯು ನಾದಮಯ ಬದುಕಿನ ಪುಟ್ಟ ಬೆಳಕೊಳಗೆ ಕರಗುತ್ತಿತ್ತು. ದೊಡ್ಡವರ ಸಣ್ಣತನಗಳೆಲ್ಲಾ ಆ ಪುಟ್ಟಬೆಳಕಿನ ಆಪ್ತತೆ, ಸುನಾದದ ಇಂಪಿನ ಮುಂದೆ ನಾಚಿ ಹಿಂದೆಸರಿದು ಮಗುಮನಸ್ಸಿನ ವಿಶಾಲತೆಗೆ ಜಾಗಬಿಟ್ಟಿದ್ದವು. ಒಬ್ಬರು ಧರೆಯೊಳಗೆ ನಾರದ ಹಂಚಿದ ಹರಿನಾಮವನ್ನು ಉಲಿದರೆ, ಇನ್ನೊಬ್ಬರು ಹರಿನಾಮದ ಸುಧೆಯ ಹಂಚುತ್ತಿದ್ದರು, ಪುರಂದರವಿಠಲನ ಅವತಾರ ವರ್ಣಿಸುವ ಸವಿ ಉಲಿಯ ಕೊಳಲಿತ್ತು, ಎಲ್ಲರ ಮೃದು ಉಲಿಯ ದನಿಗೆ ಸಾಥಿಯಾಗಿ ತಾಳವಿತ್ತು. ಅವರು 'ತಂಬೂರಿ ಮೀಟಿದವ ಭವಾಬ್ಧಿ ದಾಟಿದವ..' ಅಂತ ಹಾಡುತ್ತಾ ಪುಟ್ಟ ಪುಟ್ಟ ನೋವಿನ ಹೊಳೆಗಳನ್ನ ಮೆದುದನಿಯ ಹಾಡು ಹೆಜ್ಜೆಗಳಲ್ಲಿ ದಾಟುತ್ತ ಹೋಗುತ್ತಿದ್ದರು.

ನಾನು, ಓದಿದ ಎಲ್ಲ ಶಾಸ್ತ್ರಗಳ ತರ್ಕ ಲೆಕ್ಕ ಹಾಕುತ್ತಾ ಮಗುವಾಗಲಾಗದೆ ಇಲ್ಲೆ ನಿಂತಿದೀನಿ. ಪುಟ್ಟ ಹೊಳೆದಾಟಲು ಹಾಡಿನ ಹರಿಗೋಲಿಲ್ಲ. ನಂಬಿಕೆಯ ದೋಣಿಗೆ ತಳವೇ ಇಲ್ಲ. ಭವಾಭ್ಧಿ ದಾಟುವುದು ಹೇಗೆ?! ಅಬ್ಧಿ ಇದೆಯೋ ಇಲ್ಲವೋ, ದಿನದಿನದ ಬದುಕಿನ ಪುಟ್ಟ ಪುಟ್ಟ ಹೊಡೆತಗಳನ್ನು ತಾಳಿಕೊಂಡು ಮುಂದೆಹೋಗಲು ಆ ಎರಡು ಪುಟ್ಟ ತಾಳಗಳು, ಎಂದೋ ಯಾರೋ ಭಾವೋದ್ದೀಪನೆಯಲ್ಲಿ ಬರೆದಿಟ್ಟ ಸರಳಸಾಲುಗಳು ಎಷ್ಟು ಗಟ್ಟಿ ಸೇತುವೆಯಾಗುತ್ತವೆಯಲ್ಲವೆ?

ಮನಸ್ಸಿನ ಕಿರಾತತನದ ಕತ್ತಲನ್ನು ಓಡಿಸಲು, ಅಮ್ಮನ ಹಾಗೆ ಬೆಚ್ಚಗೆ ಅರಳಿರುವ ಪುಟ್ಟ ದೀಪದ ಬೆಳಕಿಗೆ ಮಾತ್ರ ಸಾಧ್ಯವಲ್ಲವೇ?


ನನಗೆ ಗೊತ್ತಿಲ್ಲ. ಕತ್ತಲು ಬೆಳಕಿನ ಮಧ್ಯದಲ್ಲಿ ನಾನು ಬೆಳಕಿಗಾಗಿ ಕಾದಿದ್ದೇನೆ. ಕೈ ಹಿಡಿದು ನಡೆಸುವ ಬೆಳಕೋ, ನಾನೇ ಹುಡುಕಿಕೊಂಡು ಹೋಗಿ ಹಚ್ಚಬೇಕಿರುವ ಸ್ವಿಚ್ಚೋ ಕಾಲವೇ ಹೇಳಬೇಕು.

ನಮ್ಮ ಸಂಜೆಗಳ ತುಂಬ ಮಾಲ್ ಗಳ ಕಣ್ಣುಕುಕ್ಕುವ ಜಗಮಗ ಬೆಳಕು, ಹಾರ್ನ್, ಮತ್ತು ರಿವರ್ಸ್ ತೆಗೆಯುವ ವಾಹನಗಳ ಹಾಡು, ಸೀರಿಯಲ್ಗಳ ಟೈಟಲ್ ಹಾಡು, ರಿಯಾಲಿಟಿ ಶೋಗಳ ಶ್ರೀಕಿಂಗ್ ರಾಕ್ ಮತ್ತು ಪಾಪ್.. ಕೊನೆಯ ಪಕ್ಷ ಸುಮ್ಮನೆ ಕೂತು ಹಕ್ಕಿಪಕ್ಕಿಗಳ ಚಿಲಿಪಿಲಿ ಕೇಳಲೂ ಇಲ್ಲ. ಪಕ್ಕದ ಮನೆಯವರ ಮ್ಯೂಸಿಕ್, ರಸ್ತೆಯ ಮೇಲಿನ ಗಲಾಟೆ...

ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತೀರವು ಅಲ್ಲಿದೆ. ದಾರಿಸಾಗಲು ಭಜನೆಯ ಹರಿಗೋಲೆಲ್ಲಿದೆ?

Wednesday, August 8, 2007

ಸೌಜನ್ಯದ ಮಿತಿ..

ಮಾತು ಬರುವುದು ಎಂದು ಮಾತನಾಡುವುದು ಬೇಡ..

ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ ಅದಕೆ ಕಂಡ ನೋಟ
ಸಮುದ್ರದಂಥ ಪ್ರಾಣಿ..


ಇದು ಪ್ರಿಯ ಶ್ರೀ ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಯ ಸಾಲುಗಳು ಮತ್ತು ದಿನದಿನವೂ ಹೊಸದಾಗಿ ಹೊಳೆವ ತಿಳಿವಳಿಕೆಯ ಬೆಳಕು. ನನ್ನ ಮನದ ಕತ್ತಲಲ್ಲಿ ಆಗೀಗ ಮಿಂಚುತ್ತದೆ. ಮಿಂಚಿ ಮರೆಯಾಗದಂತೆ ಕಾಯಬೇಕಿದೆ.

Tuesday, August 7, 2007

ತಾಜ್ ಮಹಲಿನ ಮುಂದೆ..

ಇಲ್ಲಿಯವರೆಗೆ ಕೇಳಿದ, ಓದಿದ, ಮಾಧ್ಯಮಗಳಲ್ಲಿ ಪ್ರಚಾರ ಪಡೆದ ತಾಜ್ ಮಹಲನ್ನು ನೋಡಲು ಹೋಗುವ ಮೊದಲು, ಇದು ಅದ್ಭುತಗಳಲ್ಲಿ ಒಂದು ಎಂಬ ಭಾವನೆಯಷ್ಟೆ ಇತ್ತು. ತಿಳುವಳಿಕೆಯೆ ಹಾಗೆ - ಹರಿವ ನೀರು.

ಅಲ್ಲಿ ಮೊದಲ ಬಾಗಿಲು (ಮುಖ್ಯದ್ವಾರ) ದಾಟುತ್ತಿದ್ದಂತೆ ಕಣ್ಣಿಗೆ ಮೊದಲು ಬಿದ್ದಿದ್ದು ಅಗಾಧ ಜನಸ್ತೋಮ. ಉರಿವ ಬಿಸಿಲಲ್ಲಿ ಕಣ್ಣು ಕಿರಿದಾಗಿಸಿ ದಿಟ್ಟಿಸಿದರೆ ನಮ್ಮ ಪುಟ್ಟ ಪುಟ್ಟ ದೇಹಗಳ ಮುಂದೆ ಭವ್ಯವಾಗಿ ಅಕಾಶವೆ ಹಿನ್ನೆಲೆಯಾಗಿ ನಿಂತ ಅಪೂರ್ವ ಸ್ಮಾರಕ.. ಅದು ಅವರ್ಣನೀಯ, ಅಭೂತಪೂರ್ವ ಮತ್ತು ಅಪ್ರತಿಮ.. ಇಷ್ಟು ಮಾತ್ರ ಹೇಳಲು ಗೊತ್ತಾಗುತ್ತಿರುವುದೂ ನನ್ನ ಪುಣ್ಯ. ಮಂತ್ರಮುಗ್ಧತೆ ಮತ್ತು ಮೂಕವಿಸ್ಮಯ ಶಬ್ಧಾರ್ಥಗಳನ್ನು ಅವತ್ತು ಅನುಭವಿಸಿದೆ. ಇದರ ಬಗ್ಗೆ ಏನು ಬರೆದರೂ ಕಡಿಮೆ, ಏನು ಮಾತಾಡಿದರೂ ಕಡಿಮೆ. ಒಮ್ಮೆಯಾದರೂ ಅದರ ಮುಂದೆ ನಿಂತು ನೋಡಲೇಬೇಕಾದ ಅತ್ಯಪೂರ್ವ ಸ್ಮಾರಕ.

ಎಷ್ಟು ಚಂದ ಅನ್ನಿಸುವುದರ ಜೊತೆಗೆ, ಕಾಲ ಕೆಳಗಿನ ನೆಲ, ಸಮುದ್ರದಂಚಿನ ಮರಳತಡಿಯಂತೆ ಕುಸಿಯುವ ಅನುಭವವಾಯಿತು. ಇಷ್ಟು ಸೊಗಸಾದದ್ದನ್ನ ಯಾರೋ ಒಬ್ಬರು ಹೊಂದಿದರೆ, ಸುತ್ತೆಲ್ಲರಿಗೂ ಅದನ್ನ ಕಿತ್ತುಕೊಳ್ಳಲೇಬೇಕೆಂಬ ಹಂಬಲವಾಗಿದ್ದರಲ್ಲಿ, ಅಪ್ಪ/ಅಣ್ಣ, ಮಗನೆಂದು ನೋಡದೆ ದ್ವೇಷ ಸಾಧಿಸುವುದರಲ್ಲಿ, ಇಂತಹ ಇನ್ನೊಂದು ಇರಬಾರದು ಎಂಬ ದುರಾಶೆಯಲ್ಲಿ, ಇಂತಹದನ್ನೆ ಇನ್ನೊಂದು ಮಾಡಿದರೆ ಎಂಬ ಭಯದಲ್ಲಿ - ಶಕ್ತಿವಂತರು ಶಕ್ತಿಹೀನರ ಕೈ ಕತ್ತರಿಸಿದ್ದರಲ್ಲಿ, ಗಡಿಗಳ ಮೀರಿ ನಡೆದ ಹೊಡೆದಾಟದಲ್ಲಿ, ಯುದ್ಧದಲ್ಲಿ, ಬ್ರಿಟಿಶರ ಮ್ಯೂಸಿಯಮ್ಮುಗಳಲ್ಲಿ ಹೆಸರಿಲ್ಲದೆ ಅಡಗಿ ಕುಳಿತ ಅಮೂಲ್ಯ ಸಂಗ್ರಹವಾಗುವುದರಲ್ಲಿ, ಏನೇನೂ ಅಶ್ಚರ್ಯವಿಲ್ಲ ಎಂಬ ವಿಷಾದದ ನೆರಳು ನನ್ನನ್ನ ಅಲುಗಾಡಿಸಿಬಿಟ್ಟಿತು.

ನಾವು ಹೊಗಿದ್ದು ಅಲ್ಲಿನ ಬಿರುಬೇಸಿಗೆಯ ಸಮಯ, ಬರಿಕಾಲಲ್ಲೆ ಸ್ಮಾರಕ ಸುತ್ತಬೇಕು ಬೇರೆ, ಕಾಲೆಲ್ಲ ಹೆಚ್ಚೂಕಡಿಮೆ ಟೋಸ್ಟ್ ಮಾಡಿಟ್ಟ ಬ್ರೆಡ್ ನಂತಾಗಿತ್ತು. ಬಿಸಿಲು ಬೀಳುವಲ್ಲಿ ಸುಡುವ ಅಮೃತಶಿಲೆಯ ನೆಲ, ಸ್ಮಾರಕದ ನೆರಳು ಬಿದ್ದಲ್ಲೆಲ್ಲ ತಣ್ಣಗೆ ನದಿದಂಡೆಯಂತಿತ್ತು.

ಸ್ಮಾರಕ ಸುತ್ತುವಾಗ ಹಿಂಬದಿಯಲ್ಲಿ ಸೊರಗಿ ಹರಿವ ಯಮುನೆಯಿದ್ದಳು. ಸೊರಗಿದ ಹರಿವು ನಮ್ಮ ಸೊರಗಿರುವ ಸಾಮಾಜಿಕ ಬಧ್ಧತೆಯ ನಿರೂಪವಾಗಿ ಕಂಡರೆ, ಸೊರಗಿ ಹರಿವಾಗಲೂ ತಂಪು ಗಾಳಿಯನ್ನ ಮೆಲ್ಲಗೆ ಮುಟ್ಟಿಸಿ ಹೊಗುವ ಅವಳ ರೀತಿ, ಪ್ರಕೃತಿಯ ಹಿರಿತನಕ್ಕೆ ತಾಯ್ತನಕ್ಕೆ ಅನುರೂಪವಾಗಿ ಅಲೆಗಳಲ್ಲಿ ಹೊರಳುತ್ತಾ ಸಾಗಿದಂತಿತ್ತು.

ತಾಜಮಹಲ್ ನಮ್ಮೆಲ್ಲ ಕವಿಜನರ ಹಲವು ಭಾವಾಭಿವ್ಯಕ್ತಿಗಳಲ್ಲಿ ಪ್ರತಿಸಲವೂ ಹೊಸದಾಗಿ ಅರಳಿ ನಿಂತ ಭಾವಶಿಲ್ಪವೂ ಹೌದು.

ಈ ಅಭೂತಪೂರ್ವ ಶಿಲ್ಪರಚನೆಯ ಮುಂದೆ ಈಗಷ್ಟೆ ಕಣ್ಣುಬಿಡುತ್ತಿರುವ ನನಗೆ ಅನಿಸಿದ್ದು, ಇದು ಅನುಪಮ, ಅವರ್ಣನೀಯ. ಮಾತಿಲ್ಲದೆ ನಿಂತು ತಲೆಬಾಗುವುದಷ್ಟೆ ನಾನು ಸಲ್ಲಿಸಬಹುದಾದ ಗೌರವ - ಅತ್ಯಪೂರ್ವ ರಚನೆಗೆ, ಅದನ್ನು ಕಂಡರಿಸಿದ ಸಾವಿರಗಟ್ಟಳೆ ಶಿಲ್ಪಿಗಳಿಗೆ, ಉದ್ದೇಶ ಏನೆ ಇದ್ದರೂ ಮತ್ತು ಕೃತ್ಯಗಳು ಹೀನಾಯವಾಗಿದ್ದರೂ ಇಂತಹುದೊಂದು ಸೃಜನಶೀಲ ಮತ್ತು ಅಪೂರ್ವ ಕಲಾಕೃತಿಯ ರಚನೆಗೆ ಮನಸ್ಸು ಮಾಡಿದ ಮುಘಲ್ ಅಧಿಪತಿಯ ಆ ಒಂದು ನಿರ್ಧಾರದ ಗಳಿಗೆಗೆ.

Thursday, August 2, 2007

ಕವಿಸಮಯ


ಕಣ್ಣಲ್ಲಿ
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...




ಹಾಲ್ನೊರೆಯ ಸೂಸಿದ್ದು
ಅವಳಾ?!
ಬಿಟ್ಟರೆ ಹರಿವ ಅವಳ
ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!


ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು
ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ
ಮಾತಿಲ್ಲದ ತಲೆಬಾಗು.


ಫೋಟೋ ಕೃಪೆ - ಪ್ರಭು - floatingcreeper@gmail.com

Wednesday, August 1, 2007

ಒಂದು ಮುರಿದು ಬಿದ್ದ ದೋಣಿ, ದಕ್ಕಲಾಗದ ನೋಟ ಮತ್ತು ಹೊರಳು ದಾರಿ..

ಯಾಕೆ ಎಲ್ಲ ಸಲವೂ ನಾನು ನಿನ್ನ ನೆನಪಿಸಿಕೊಂಡರೆ, ಇಷ್ಟು ವರ್ಷದ ನಂತರವೂ, ಅದೇ ಅಸಹನೆ? ನನಗೆ ಬರುವ ಸಿಟ್ಟು ಯಾರ ಮೇಲೆ, ಬದುಕಿನ ಯಾನಕ್ಕೆ ಲಗಾಟಿ ಹೊಡೆದು ಬಿದ್ದು ಹೋಗುವಂತ ಹಾಯಿ ಕಟ್ಟಿದ ನಿನ್ನ ಮೇಲಾ? ಅಥವಾ ಅಂತದೊಂದು ಹಾಯಿಯನ್ನು ನೀನು ಕಟ್ಟುವಾಗ ಸುಮ್ಮನೆ ನಸುನಗುತ್ತ ಒಪ್ಪಿಕೊಂಡು, ಹರಿವಿಗೆ ಬಿದ್ದ ನನ್ನ ಮೇಲಾ?
ಈ ವ್ಯತ್ಯಾಸದ ನಡುವಣ ಗೆರೆ ತುಂಬ ಸೂಕ್ಷ್ಮ. ಇದು ನಿನಗೆ ನನಗಿಂತ ಚೆನ್ನಾಗಿ ಗೊತ್ತು. ಮತ್ತು ಈ ಅರಿವನ್ನೇ ಉಪಯೋಗಿಸಿ, ಇದು ಗೊತ್ತಾಗದ ನನ್ನಂತ ಬೆಪ್ಪಳನ್ನು ಕೆಲದಿನಗಳ ಕಾಲ ಕಣ್ಣೀರ ಪ್ರವಾಹಕ್ಕೊಡ್ಡಿದೆ, ತಪ್ಪಿತಸ್ಥಳು ನಾನು ಮಾತ್ರ ಎಂಬ ಭಾವನೆಗಳ ಬಂಡೆಗಳಿಗೆ ನನ್ನ ಭಾವದ ದೋಣಿ ಮತ್ತೆ ಮತ್ತೆ ಡಿಕ್ಕಿ ಹೊಡೆದು, ಹಣ್ಣಾಗಿ ಹೋದೆ. ಗೊತ್ತಿದ್ದ ನೀನು, ಹಿಮ್ಮುಖ ಹರಿಗೋಲು ಹಾಕಿ ಬೇರೆ ಸೆಳವಲ್ಲಿ ಹರಿದು ಹೋಗುವಾಗಲೂ, ಹಣ್ಣಾಗಿ ಕುಳಿತ ನಾನು ಕುರುಡೂ ಆಗಿದ್ದೆ.

ನೀನು ಕೆಟ್ಟವನಲ್ಲ, ಗೊತ್ತು ನನಗೆ. ಆದರೆ ನೀನು ಚಾಣಾಕ್ಷ ಎಂಬ ತಿಳಿವಳಿಕೆ ಬಂದಾಗಿನಿಂದ, ಎಲ್ಲ ಸಂಬಂಧಗಳನ್ನೂ, ಭಾವನೆಗಳನ್ನೂ ವ್ಯವಹಾರಬದ್ಧತೆಯಲ್ಲಿ ನೇಯ್ದು ಲಾಭಾಂಶವನ್ನು ಹುಶಾರಿಯಿಂದ ಬದಿಗಿಟ್ಟು ನಿನ್ನ ಬ್ಯಾಲೆನ್ಸ್ ಹೆಚ್ಚು ಮಾಡಿಕೊಳ್ಳುತ್ತೀಯ, ಮತ್ತು ಅದಕ್ಕೆ ಎಲ್ಲ ಒಳದಾರಿಗಳೂ ಗೊತ್ತು ನಿನಗೆ ಅಂತ ಗೊತ್ತಾದಾಗಿನಿಂದ ನಾನು ದಿಕ್ಕೆಟ್ಟು ಹೋದೆ. ನಮ್ಮ ಯಾನದಲ್ಲಿ ಎದುರು ಅಲೆಗಳೇ ಉಳಿದು, ಒಬ್ಬೊಬ್ಬರೂ ಒಂದು ದಿಕ್ಕಿಗೆ ಕೈಗೋಲು ನಡೆಸಿ, ದಾರಿ ಕಷ್ಟವಾಯಿತು. ಗಳಿಸಿಕೊಳ್ಳುವ ಪಿತೂರಿಯ ಈಟಿಗೆ ಸಿಕ್ಕಿ ಹಾಯಿ ಲಗಾಟಿ ಹೊಡೆದು ಹರಿದೇ ಹೋಯಿತು. ಅಪನಂಬಿಕೆಗಳ ಕಲ್ಲು ಹರಿವಲ್ಲಿ ದೋಣಿ ಅಲೆದಾಡಿ, ತೀರವೆಂದು ಕರೆಯಬಹುದಾದಲ್ಲಿಗೆ ಬಂದು ನಿಂತಾಗ, ನಮ್ಮಿಬ್ಬರ ದಾರಿ ಒಡೆದು ಹೋಗಿ, ಇವತ್ತು ನಾವು ಅಪರಿಚಿತರಿಗಿಂತ ಹೆಚ್ಚು ದೂರ.

ಈ ಬೀದಿಯಲ್ಲಿ ನಡೆದರೆ ನಿನಗೆ ಸಿಗಬಹುದು ಎಂಬ ಕಾರಣಕ್ಕೆ, ನಾನು ಅಲ್ಲಿಗೆ ಹೋಗುವುದೇ ಇಲ್ಲ. ನೀನು ಸಡನ್ ಆಗಿ ಎದ್ರು ಬಂದರೆ ನನ್ನ ಮುಖದಲ್ಲರಳುವುದು ನಗುವೇ. ಆದರೆ, ನೀನು ಸಡನ್ ಆಗಿ ಎದುರು ಬಂದು ನಿಲ್ಲುವ ಒಂದರೆ ಕ್ಷಣ ಮುಂಚೆ ನೀನು ಸಿಗಬಹುದು ಅಂತ ಅನ್ನಿಸಿದರೆ, ತಕ್ಷಣ ತಿರುಗಿ ಬೇರೆ ದಾರಿಯಲ್ಲಿ ತಾನೇ ತಾನಾಗಿ ನಡೆದು ಹೋಗಿಬಿಡುತ್ತೇನೆ.. ನಿನ್ನ ಬಗ್ಗೆ ಸಿಟ್ಟಿಲ್ಲ, ಆದರೆ ನಿನ್ನನ್ನು ಸಹಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಬದಲಾವಣೆಯೇ ನನ್ನ ಬದುಕು.

ನಿನ್ನ ಬಗ್ಗೆ ಏನೇ ಬರೆದರೂ ನಾನ್ಹೀಗೆ ಬಿರುನುಡಿಯನ್ನೇ ಯಾಕೆ ಬರೆಯಬೇಕು ಅಂತ ಕೇಳುತ್ತೀ ನೀನು.. ಆದರೆ ಎಷ್ಟೇ ಇಷ್ಟವಿದ್ದರೂ ಒಂದರೆ ಕ್ಷಣದ ನಲ್ನುಡಿಯಾಡಿ, ನಿನ್ನ ಮನದಲ್ಲಿ ಹೊಸ ಆಸೆ ಬೀಜಕ್ಕೆ ನೀರೆರೆಯುವ ಕ್ಷಮೆ, ದಾರ್ಷ್ಟ್ಯ, ಮತ್ತು ಸಹನೆ ನನ್ನಲ್ಲಿಲ್ಲ.
ನಿನಗರಿವಾಗದೆ ಇಲ್ಲೆ ನಿಂತು ಮೌನವಾಗಿ, ನಿನಗೊಂದು ಸಂತಸಮಯ ದಿನ, ಹಾಯಾದ ಬದುಕನ್ನು ಆಶಿಸುವುದಷ್ಟೇ ನನ್ನ ಸಾಮರ್ಥ್ಯ ಮತ್ತು ಮಿತಿ.

ನಿನಗೆ ಚಂದದೊಂದು ಹೊಸಾ ಬದುಕಿರಲಿ
ಕನಸುಗಳ ನನಸಾಗಿಸುವ ಶಕ್ತಿಯಿರಲಿ,
ನನ್ನ ನೆನಪು ಮರೆತುಹೋಗಲಿ,
ರಾತ್ರಿ ಮಲ್ಗಿದ ಕೂಡಲೆ ಒಳ್ಳೆ ನಿದ್ದೆ ಬರಲಿ
ಮತ್ತು ಒಳ್ಳೆಯದಾಗಲಿ.

Tuesday, July 31, 2007

ಹೀಗೇ ಸುಮ್ಮನೆ..

ಭಾರವಾದ ನಿಟ್ಟುಸಿರು,
ಹೆಪ್ಪುಗಟ್ಟಿದ ಮೌನ,
ದುಃಖಕ್ಕೆ ಆಸರೆಯಾಗಿ ಗಾಳಿ ತೀಡದೆ ನಿಂತು,
ಸುತ್ತೆಲ್ಲ ಬಿಸಿಯಾಗಿ ಸೆಖೆಯೇರಿ,
ಇನ್ನೇನು ಹನಿಯಬೇಕು ಕಣ್ಣಂಚು,
ಅದೋ ಮೊಬೈಲಿನಲಿ ಮಿಂಚು!

ಹನಿಯ ಕಣ್ಣಂಚಲೆ ತಡೆದು
ಉದಾಸವಾಗಿ ಫೋನೆತ್ತಿಕೊಂಡು
ಡಿಸ್ ಪ್ಲೇ ನೋಡಿದರೆ
ನೀರಂಚಲಿ ಕುಳಿತು
ಹನಿವ ಮಳೆಯ, ಸುಳಿವ ಕುಳಿರ್ಗಾಳಿಯ

ಸೊಗವನ್ನು
ಹೂವರಳಿದ ಸಹಜತೆಯಲ್ಲಿ

ಬಣ್ಣಿಸುವ ಆ ಮೆಸೇಜು..
ದುಃಖ ಕರಗಿ,
ಮೌನ ಹಗುರಾಗಿ
ಮನದ ತುಂಬ ಹಗೂರಭಾರದ ನೆನಪು.
ನಿಸೂರಾಗಿ ಹಾಯತೊಡಗಿದ ಗಾಳಿಯಲಿ ತಂಪು.
ಸುತ್ತೆಲ್ಲ ವಿಷಯಗಳಲ್ಲಿ ಅದೇನೋ ಹೊಸ ಒನಪು...

ಪುಟ್ಟ ದೀಪದ ಚೆಂಬೆಳಕು,
ಹಿತರಾಗದ ಮುದನೀಡುವ ಹಾಡು,
ಮಳೆ, ಹೂವು, ಹಕ್ಕಿ, ಕಾಡು,
ಹೊಳೆ,ಕಡಲು,ಬೆಟ್ಟದ ಬೀಡು
ಎಲ್ಲ ಚಂದದ ಸಂಗತಿಗಳ
ಒಟ್ಟಂದದ ಆಪ್ತ ಪ್ರಭಾವಲಯ
ಹರಡಿದ ನಿನಗೆ ಅರ್ಪಿತವೀ
ತಡೆ ಹಿಡಿದಿಟ್ಟ ಕಣ್ಣ ಹನಿ..

Monday, July 23, 2007

ರಾಜಧಾನಿಯಿಂದ ರಾಜಧಾನಿಗೆ...

ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತಿಲ್ಲಿಗೆ

ತಿರುಗಿ ನೋಡಿ ದಾಖಲು ಮಾಡಿಕೊಳ್ಳಲೂ
ಪುರುಸೊತ್ತಿರದಷ್ಟು ಕೆಲಸದ ನಡುವೆ, ಕಂಡ
ನೂರೆಂಟು ನೋಟಗಳು,
ಅವುಗಳಾಚೆಗೆ ಹೊಳೆವ ಹಲವಾರು ಚಿತ್ರಗಳು
ಎಲ್ಲ ಮೆಮೊರಿ ಕಾರ್ಡಿನಲ್ಲಿವೆ,
ಈ ವಾರ ಕಾದಿರುವ ಕೆಲಸದೊತ್ತಡದ ನಡುವೆ
ಒಂದೊಂದಾಗಿ ಪಡಿಮೂಡಲು ಕಾಯುತ್ತಾ..

ಹೋಗಿದ್ದೆಲ್ಲಿಗೆ ಬಂದಿದ್ದೆಲ್ಲಿಗೆ?
ಅದೇ ದಿಲ್ಲಿಗೆ.. ಮತ್ತೆ ಬೆಂಗಳೂರಿಗೆ..
ಪುಣ್ಯವೆಂದರೆ ಹೊರಟ ಜಾಗಕ್ಕೆ
ಮತ್ತೆ ಬಂದು ಸೇರಿರುವುದು.
ಅದೇ ಜಾಗ, ಅದೇ ಮನೆ,
ಹೊರಟಾಗ
ಮೊಗ್ಗು ಮೂಡಿದ್ದ ಗಿಡದ ತುಂಬ
ಈಗ
ಬಿರಿದು ನಿಂತ ಹೂಚೆಲುವು..

ನಾಲ್ಕಾರು ತಿಳಿವಿನ ಹೊಳವು
ಸುತ್ತ ಹರಡಿ..
ಮಳೆನಿಂತ ಬೆಳಗು.

Tuesday, July 10, 2007

ಹಿಡಿದಿಡಲಾಗದ ಚಿತ್ರಗಳು..

ಫ್ರೇಮಿನಲ್ಲೊಂದು ರೋಚಕ ತಿರುವು..
ಬಗ್ಗಿ ನೋಡಿದ್ದಿದ್ದರೆ ಕಣಿವೆಯ ಹಸಿರು ಗದ್ದೆ
ತಲೆಯೆತ್ತಿದರೆ ಮೋಡ ಮುತ್ತಿಕ್ಕುವ ಬೆಟ್ಟಸಾಲು..

ಓಹ್, ರಂಜಕತೆಯ ಬಣ್ಣ ಖಾಲಿಯಾಗಿ
ಕರಿಗೆರೆಯೆಳೆಯುವ ಇದ್ದಿಲ ಚೂರು ಮುಗಿದುಹೋಗಿ
ಒಳಗೂ ಹೊರಗೂ ಸುರಿವ ಮಳೆಗೆ-
ಬಿಳಿಯ ಹಾಳೆ ಒದ್ದೆ!
ಫ್ರೇಮಿನ ಅಂಟು ಲಡ್ಡಾಗಿ,
ಅಲುಗಾಡುತ್ತಿದೆ
ಗೋಂದಿನ ಟ್ಯೂಬು ಚಪ್ಪಟೆ..

ಬಿಡಿಸಲಾಗದ ಚಿತ್ರಗಳನ್ನು
ತುಂಬಲಾಗದ ಬಣ್ಣಗಳನ್ನು
ಊಹಿಸುತ್ತ ಮುದಗೊಂದು,
ಎಚ್ಚರದಿ ಖಿನ್ನವಾಗಿ
ಕೈಚಲ್ಲಿ ಕೂತು ದಿಟ್ಟಿಸುವುದಷ್ಟೆ ಉಳಿದದ್ದು
ಮಾತು ದೂರ,
ಮೌನ ಭಾರ..

ಮುರಿದು ಬಿಸಾಡಿದ ಕ್ರೇಯಾನ್ ಹಿಡಿದ
ರದ್ದಿ ಆಯುವ ಪುಟ್ಟನ ಕೈಯಲ್ಲಿ
ನನಗೆಂದೂ ಗೊತ್ತಿರದ ಬಣ್ಣದ ಛಾಯೆ!
ಅವ ಬಿಡಿಸಬಹುದಾದ ಚಿತ್ರದಲ್ಲಿ
ನನ್ನ ಕೈ ಮೀರಿದ ರೇಖೆಗಳ ಮಾಯೆ!

ಎಲ್ಲ ಚಿತ್ರಗಳಾಚೆಗುಳಿಯುವುದು ನನ್ನ ಕವಿಗುರುವಿನ ಇನ್ನೊಂದು ಚಿತ್ರ
"ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕೆ ಕಂಡ ನೋಟ ಸಮುದ್ರದಂಥ ಪ್ರಾಣಿ"

Friday, July 6, 2007

ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

..ಚಡಪಡಿಕೆ ಶುರುವಾಗಿತ್ತು..ರುಟೀನ್ ಇರೋದೇ ಮುರಿಯಕ್ಕೆ ಎನ್ನುವ ಧ್ಯೇಯವಾಕ್ಯದ ಗೆಳೆಯರ ಪುಟ್ಟ ಗುಂಪು ನಮ್ಮದು. ಮುರಿಯುವ ದಾರಿ - ಗಜಿಬಿಜಿಯಿಂದ ದೂರಕ್ಕೆ, ಹಸಿರು ಹೊದ್ದ ಕಾಡಿನ ಮಡಿಲಿಗೆ ಹೋಗಿ, ಇಲ್ಲ ನಂಗೇನೂ ಗೊತ್ತಾಗ್ತಾ ಇಲ್ಲ, ಅಲ್ಲಿ ಏನ್ ನಡೀತಾ ಇದೆ - ಸರಿಯಾಗಿ ಕೆಲಸ ಮಾಡದ ಕೋಡ್, ಪೂರ್ತಿ ಮುಗಿಸಿರದ ರಿಪೋರ್ಟ್, ಹಾಗೇ ಉಳಿಸಿದ ಬಗ್, ಬಗೆಹರಿಯದ ಬಜೆಟ್ ಅನಲಿಸಿಸ್, ಎಲ್ಲ ಏನೋ ಗೊತ್ತಿಲ್ಲ, ಅಂತ ಕಣ್ಣು ಮುಚ್ಚಿಕೊಂಡು ಹಾಲುಕುಡಿವಂತೆ, ನಾವು ಕಾಡಿನ ಮಡಿಲು ಹುಡುಕಿ ಹೊರಡುತ್ತೇವೆ. ಅದೇನು ಕಡಿದಾದ ಬೆಟ್ಟದ ಕಷ್ಟಸಾಧ್ಯ ಚಾರಣವೇ ಆಗಬೇಕಿಲ್ಲ. ಎಲ್ಲಿ ಸರಳ ದಿನಚರಿಯ, ಹಸಿರ ನೆರಳೋ ಅಲ್ಲಿಗೆ ನಾವು.. ಒಂದು ದೀರ್ಘ ಪ್ರಯಾಣ, ಬೆಳಗಾ ಮುಂಚೆಯ ಬಸ್ ಸ್ಟಾಂಡ್ ಹೋಟೆಲಿನ ಗಬ್ಬು ಆದರೆ ಬಿಸಿಯಾದ ಕಾಫಿ, ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಶಟ್ಲಿನಲ್ಲಿ, ಎದ್ದೆದ್ದು ಹಾರಿ ಕೂರುತ್ತ, ಊರಿಂದ ದೂರಾಗಿ ಮನೆಯಲ್ಲೇ ಊರಿರುವ ಹಳ್ಳಿಯ ತಪ್ಪಲು ಸೇರುವುದು ನಮ್ಮನ್ನು ಸದಾ ಹಿಡಿದಿಟ್ಟ ಆಕರ್ಷಣೆ.. ಅಲ್ಲಿ ಬೆಟ್ಟವಿದ್ದರೆ, ದಟ್ಟ ಕಾನಿದ್ದರೆ, ಜಲಪಾತವಿದ್ದರೆ ಮುಗಿದೇ ಹೋಯಿತು.. ಹೋಗಲೇಬೇಕು.. ಮಳೆಯಾ, ಬಿಸಿಲಾ, ಚಳಿಯಾ ಅದೇನಡ್ದಿಲ್ಲ ಬಿಡಿ, ಮಳೆಯಲ್ಲಿ ಒದ್ದೆಯಾಗಿ ನಡೆದು ಬಂದು, ಬೆಚ್ಚಗೆ ಬಟ್ಟೆ ಬದಲಾಯಿಸಿ ಕೂರದಿದ್ದರೆ, ಮಳೆಯ ಮಜಾ, ಹೋಗಲಿ ಬೆಚ್ಚಗಿರುವುದರ ಮಜಾ ಹ್ಯಾಗೆ ಗೊತ್ತಾಗುತ್ತದೆ..?! ಅದಿರಲಿ, ಚಳಿಯಲ್ಲಿ ನಡುಕ ಬರುವಾಗ, ಕಾಲಿಗೆ ಸಾಕ್ಸ್ ಹಾಕಿ, ಬೆಚ್ಚನೆ ಸ್ವೆಟರ್, ಟೋಪಿ ಧರಿಸಿ ಕೂತು ಚಳಿಯನ್ನೇ ಸಿಪ್ ಮಾಡುವ ಮಜಾ.. ಬಿಸಿಲಲ್ಲಿ ಬೆವರಿಳಿದು, ಉಸಿರು ಭಾರವಾಗಿ, ಉಪ್ಪುಪ್ಪು ಬೆವರು ಕಣ್ಣಿಗಿಳಿದು ಉರಿಯಾಗಿ, ಬೆನ್ನ ಹೊರೆಯನ್ನ ಹೊರಲಾರದೆ ಹೊತ್ತು ಆ ಬೆಟ್ಟದ ತುದಿ ಸೇರಿ ಬೀಸಿ ಬರುವ ತಂಗಾಳಿಗೆ ಒಪ್ಪಿಸಿಕೊಂಡು, ಸುತ್ತಲ ಚಂದದಲ್ಲಿ ಮಾತು ಹೊರಡದೆ ಕೂತು ಹಗುರಾಗುವ ಕ್ಷಣದ ಖುಶಿ.. ಇದೆಲ್ಲದರ ಮುಂದೆ ಇನ್ನೇನಿದೆ..? ಅಬ್ಬಬ್ಬಾ ಅಂತ ಹಾಯಾಗಿ ಕೂತ ಕ್ಷಣದಲ್ಲಿ, ಇದನ್ನ ಇವತ್ತು ಇಷ್ಟೊತ್ತಿಗೆ ಮುಗಿಸಿ ರಿಪೋರ್ಟ್ ಕಳಿಸಬೇಕು ಎನ್ನುವ ಧಾವಂತವಿಲ್ಲ.. ಅಲ್ಲದೆ, ಪ್ರಕೃತಿಯ ಶಕ್ತಿ ಮತ್ತು ಭವ್ಯತೆಗೆ ಮಣಿದು ಮೆತ್ತಗಾದ ಕ್ಷಣಗಳಲ್ಲಿ ಎಲ್ಲ ಖಾಲಿಯಾಗಿ ಮತ್ತೆ ಎಲ್ಲ ತುಂಬಿಕೊಂಡ ಅದ್ವೈತ ಭಾವ..

ಹಾಗೇ ಕಳೆದ ವಾರ ನಾವು ನಾಲ್ವರು ಮುತ್ತೋಡಿ - ಭದ್ರಾ ಅಭಯಾರಣ್ಯ, ಚಿಕ್ಕಮಗಳೂರಿಗೆ ಹೊರಟೆವು.. ತುಂಬು ಮಳೆ, ಚಂದ ಕಾಡು, ಅಲ್ಲಲ್ಲಿ ಹೊಳವಾದಾಗ ಮರದಿಂದ ಮರಕ್ಕೆ ಉಲಿಯುತ್ತ ಹಾರುವ ಥರಾವರಿ ಹಕ್ಕಿಗಳು.. ನೆಂದು ಹೊಳೆವ ಹಸಿರ ಜೀವಗಳು..ಕೆಂಪಗೆ ತುಂಬಿ ಹರಿವ ಸೋಮವಾಹಿನಿ, ಅದರಲ್ಲಿ ಅದ್ದಿ ತೇಲಿ ಬರುತ್ತಿರುವ ದೊಡ್ಡ ದೊಡ್ಡ ಮರದ ಚಿಕ್ಕ ದೊಡ್ಡ ಕಾಂಡಗಳು.. ಸೋರುತ್ತಿದ್ದ ಕಾಟೇಜುಗಳು, ನೀಟಾಗಿ ಆಹ್ವಾನಿಸುತ್ತಿದ್ದ ಜಗುಲಿಯ ಮೇಲೆ ಬೆತ್ತದ ಖುರ್ಚಿಗಳು, ಯುನಿಫಾರ್ಮಿನ ಮೇಲೆ ಅರ್ಧ ತೋಳಿನ ಸ್ವೆಟರ್ ಹಾಕಿ, ತಲೆಗೆ ಮಳೆಟೊಪ್ಪಿಗೆ ಹಾಕಿದ ಫಾರೆಸ್ಟ್ ಆಫೀಸಿನವರು.., ಅಲ್ಲಿದ್ದ ಊಟದ ಮನೆಯಿಂದ ಬೆಚ್ಚಗೆ ಹೊರಹೋಗುತ್ತಿದ ಕಟ್ಟಿಗೆ ಒಲೆಯ ಹೊಗೆ, ಹೊಗೆ ಮಾತ್ರ ಯಾಕಮ್ಮ ನಾನೂ ಹೋಗ್ ಬೇಕ್ ಅಂತ ಮೈ ತುಂಬ ಸ್ವೆಟರ್ ತೊಟ್ಟ ಇನ್ನೂ ಮಾತು ಬರದ ಕಂದನೊಂದು ಹೊಸ್ತಿಲ ದಾಟಲು ಮಾಡುತ್ತಿರುವ ಕಸರತ್ತು, ಅಲ್ಲಿ ಸುತ್ತ ಬೆಳೆದಿದ್ದ ಹೂಗಿಡಗಳ ರಸಕುಡಿಯಲು ಮಳೆ ಕಡಿಮೆಯಾದ್ ಕೂಡಲೆ ಹಾರಿ ಬಂದು ಬಗ್ಗಿ ಕೂತು ಹೂವೊಳಗೆ ಕೊಕ್ಕಿಟ್ಟ ಪುಟಾಣಿ ಹಕ್ಕಿ.. ಯಾವ ರಸವನ್ನ ಸವಿಯುವುದು.. ಯಾವುದನ್ನ ಬಿಡುವುದು.. ಅಲ್ಲ ಬಿಡಲಿಕ್ಕೆ ಆದೀತಾ? ನೋಡುತ್ತ ನೋಡುತ್ತ ಸವಿಯುತ್ತ ನಾವು ಜಾರಿ ಹೋಗಿ ಮಾಯಾಲೋಕ ಸೇರಿದ್ದೆವು.. ನಾಳೆ ಊರಿಗೆ ವಾಪಸಾಗಲೇಬೇಕು ಎಂಬ ಎಚ್ಚರದ ಜಗುಲಿಯ ಮೇಲೆ ನಾವು ಆ ಚಂದದ ಜಾಗದ ಸೊಗದಲ್ಲಿ ನೇಯ್ದ ಮಾಯಾಚಾಪೆ ಹಾಸಿ ಕೂತಿದ್ದೆವು.. ನಮ್ಮ ತೇಲುವಿಕೆಯ ಸಮಗ್ರ ನೋಟವನ್ನು ಮತ್ತೆ ಕಟ್ಟಲು ಅಸಾಧ್ಯವಾದರೂ ಕೆಲ ಹಕ್ಕಿನೋಟಗಳನ್ನು ಹೇಗಾದರೂ ಮಾಡಿ ಬರೆದಿಟ್ಟು ಮತ್ತೆ ಮತ್ತೆ ಮೆಲುಕು ಹಾಕಬೇಕೆಂಬ ಸ್ವಾರ್ಥ...

ಪ್ರಕೃತಿಯ ಚಂದ ಮತ್ತು ಗಂಭೀರ ನಿಲುವನ್ನ ಪದರಪದರವಾಗಿ ಬಿಡಿಸಿಟ್ಟ ಹಾಗಿನ ಮುತ್ತೋಡಿ ಕಾಡು, ಚಿಕ್ಕಮಗಳೂರಿನಿಂದ ಸುಮಾರು ೪೦-೪೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಹೋಗುವಾಗ ಬಸ್ಸಲ್ಲಿ ಹೋದರೆ, ನಮಗೆ ಅಲ್ಲಿನ ಚಂದ ಕಾಡಿನ ಜೊತೆಗೆ, ಅಲ್ಲಿ ಹಳ್ಳಿಯಲ್ಲಿ ದುಡಿದು ಬದುಕುವ ಎತ್ತರದ ಜೀವಗಳ ಕಿರುನೋಟ ಸಿಕ್ಕೀತು. ಕಾಡೆಂದರೆ ಬರೀ ಕಾಡಲ್ಲ ಅಲ್ಲಿ ಕಾಡು, ಹಳ್ಳಿ, ದುಡಿಮೆ, ಕಷ್ಟ, ತಂಪು ಮಳೆ, ಏರು ತಗ್ಗಿನ ಹಾದಿ ಎಲ್ಲ ಸೇರಿದ ಬದುಕಿನ ಹಾಡು.. ನೋಡಲು ಚಣಕಾಲ ನಿಂತರೆ ಕೇಳಿಸೀತು.. ಇಂಗ್ಲಿಷ್ ಹೆಸರೊಂದರಲ್ಲಿ ಜನಪ್ರಿಯವಾದ ನಮ್ಮದೇ ಕಾಡಿನ ಬಣ್ಣದ ಹಕ್ಕಿಯನ್ನು ನೋಡುವ ನಿಶ್ಚಲ ರೀತಿಯಲ್ಲಿ, ಅಲುಗಾಡದೆ, ಅದರದ್ದೇ ಒಂದು ಭಾಗವಾಗಿ, ಅಲ್ಲಿನ ಹೊಂದಿಕೆ ಕೆಡಿಸದೆ, ನೋಡ ಹೊರಟರೆ ಕಣ್ಣಿಗೆ ಸಿಕ್ಕುವ ನೋಟಗಳು, ಬರೆದಿಡಲಾಗದ್ದು.. ಅಲ್ಲಲ್ಲಿ ಕಾಫಿ ಎಸ್ಟೇಟುಗಳು, ಸುರಿಮಳೆಯಲ್ಲೂ ಉಟ್ಟ ಸೀರೆಯ ಮೇಲೆ ತುಂಬು ತೋಳಿನ ದೊಗಲೆ ಅಂಗಿ, ಹಾಳೆ ಟೋಪಿ, ಬಿಗಿಯಾಗಿ ಹಿಡಿದ ಪುಟ್ಟಕತ್ತಿಯೊಡನೆ, ಬಸ್ಸು ಹತ್ತಿ ಮುಂದಿನೂರಿನ ಎಸ್ಟೇಟ್ ಕೆಲಸಕ್ಕೆ ಹೊರಟ ಹೆಂಗಳೆಯರನ್ನು ನೋಡಿ ನಾನು ಬೆರಗಾದೆ. ಬೆಚ್ಚಗೆ ಮನೆಯಲ್ಲೆದ್ದು, ಬಿಸಿನೀರು ಸ್ನಾನ ಮಾಡಿ, ಎಲ್ಲ ಒಳ್ಳೆಯ ಬೆಚ್ಚನೆ ಅಂಗಿ ಹಾಕಿ, ಮನೆ ಮುಂದೆ ಬರುವ ಕ್ಯಾಬ್ ಹತ್ತಿ ಎ.ಸಿ.ಆಫೀಸಿನ ಮುಂದೆ ಇಳಿಯುವ ಸೌಲಭ್ಯದಲ್ಲಿ ಇದಿಲ್ಲ ಅದಿಲ್ಲ ಅಂತ ಕೊಂಕು ತೆಗೆಯುವ ನಮ್ಮ ನಡವಳಿಕೆ ನೆನಪಾಗಿ ನಾಚಿಕೆಯಾಯಿತು. ಓಹ್ ಎಷ್ಟು ಕಷ್ಟ ಅಂತ ಅನುಕಂಪದ ನನ್ನ ನೋಟವನ್ನ ಕತ್ತರಿಸಿ ಬಿಸಾಕಿದ್ದು ನನ್ನ ಪಕ್ಕ ಕೂತ ಅವಳ ಜೋರುನಗೆ. ಅದು ಬಸ್ಸೆಲ್ಲ ಹರಡಿ, ಸುತ್ತ ನಿಂತ ಜೊತೆಗಾತಿಯರ ನಗುವಿನಲ್ಲಿ ಮಾರ್ದನಿಸಿ, ಕಂಡಕ್ಟರನ ಕೀಟಲೆಯಲ್ಲಿ ಮೊಗ್ಗೊಡೆದಿತ್ತು.. ಕಷ್ಟ ಈಚೆ ದಡದಲ್ಲಿ ನಿಂತವರಿಗೆ.. ಅನುಕೂಲಗಳು ಹುಟ್ಟಿದಾಗಿನಿಂದ ಅಭ್ಯಾಸವಾದವರಿಗೆ, ಆಚೆ ದಡದ ಅವರಿಗದು ಸಹಜ ಬದುಕು, ಅಲ್ಲೂ ನಗು, ಕೀಟಲೆ, ಸಮಾಧಾನ, ಪ್ರೀತಿಯ ಮೊಗ್ಗು, ಅಲ್ಲೊಂದು ಇಲ್ಲೊಂದು ಬಿಕ್ಕು, ಶೀತ ಜ್ವರ, ಕಂತ್ರಾಟುದಾರನ ಹತ್ತಿರ ಬೈಗುಳ.. ಎಲ್ಲ ಸಹಜವಾಗಿ.. ನಮ್ಮ ರಾಜಧಾನಿಯಲ್ಲಿ ನಡೆವಂತೆ ಇಲ್ಲಿ ಮೇಕಪ್ಪಿಲ್ಲ, ಬಿನ್ನಾಣವಿಲ್ಲ, ಸೋಗಿನ ಭಾವಪ್ರದರ್ಶನವಿಲ್ಲ... ಕಪ್ಪು ಮೋಡ, ತಂಪು ಮಳೆ, ಕುಳಿರು ಚಳಿ, ಚುರು ಚುರು ಬಿಸಿಲು, ಕಾಲಕ್ಕೆ ತಕ್ಕಂತೆ ಹೊಂದಿ ನಡೆವ, ಅಳಲೂ ನಗಲೂ ಹೊತ್ತು ಗೊತ್ತಿಲ್ಲದ ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

ನಾವು ಬಸ್ಸಿಳಿದು ಮುತ್ತೋಡಿ ಸೇರಿ ಹಕ್ಕಿಯ ಪ್ರಾರ್ಥನಾ ಗೀತೆಗೆ ತಲೆಯಾಡಿಸಿ, ಮಧ್ಯಾಹ್ನದ ಊಟವನ್ನು ಗೊತ್ತು ಮಾಡಿ ಅಲ್ಲಿ ಹೊಳೆಯಂಚಿನ ಕಾಟೇಜಿನ ಜಗುಲಿಯಲ್ಲಿ ಕೂತೆವು.. ಸೌಂದರ್ಯದ ಪ್ರತಿಫಲಿತ ಬಿಂಬಗಳು ಎಲ್ಲೆಲ್ಲೂ.. ಯಾವ ರಾಗಕ್ಕೂ ಸೇರದ ಮಧುರ ಉಲಿಗಳು ಸುತ್ತೆಲ್ಲೂ.. ಊಟವಾಗಿ ಮಳೆ ಕಡಿಮೆಯಾಗಿ, ನಾವು ಬೆಟ್ಟದ ಮೇಲಿನ ತಂಗುದಾಣಕ್ಕೆ ಹೊರಟೆವು.. ದಾರಿಯಲ್ಲಿ ಆನೆ ನಡೆದ(ದ್ದೇ) ದಾರಿ.. ಮಳೆಯ ನೂಲಿಗೆ ಹಕ್ಕಿಗೊರಳ ರಾಗದೆಳೆ ಸೇರಿಸಿ ನೇಯ್ದ ಹಸಿರು ಉಡುಗೆಯ ತೊಟ್ಟ ಕಾಡು.. ಅಲ್ಲಲ್ಲಿ ಕೆಂಪು ಚಿಗುರಿನ ಚಿತ್ತಾರ, ಕಂದು ತೊಗಟೆಯ ಅಂಚು.. ಯಾವ ಸೂಪರ್ ಮಾಲ್ ನ, ಫ್ಯಾಷನ್ ಡಿಸೈನರ್ ನೇಯಬಲ್ಲಳು ಇದನ್ನ?


ಬೆಟ್ಟದ ಮೇಲೆ ಒಂಟಿ ಮನೆಯಂತಹ ತಂಗುದಾಣ. ಕರೆಂಟಿಲ್ಲ, ಮೊಬೈಲ್ ಸಿಗ್ನಲ್ ಸಿಗುವುದಿಲ್ಲ.. :) ಬೆಚ್ಚನೆ ವರಾಂಡದಲ್ಲಿ ಹಾಕಿದ ಆರಾಮಕುರ್ಛಿಯಲ್ಲಿ ಕೂತು, ಉದ್ದುದ್ದ ಕಿಟಕಿಗಳ ಗಾಜಿನಿಂದ ಮಳೆಯ ಕುಣಿತ, ನೆಲದ ಜೀವಿಗಳ ಏರಿಳಿತ, ಸ್ಪಂದನಗಳನ್ನ ನೋಡುತ್ತಾ ಸಂಜೆ ಕಳೆದೆವು. ಮಳೆ ನಿಂತಾಗೆಲ್ಲ ಹಕ್ಕಿ ಹಾಡು.. ಮುಗಿಯುವಷ್ಟರಲ್ಲಿ ಮಳೆಯ ತಾನ.. ಯಾವ ಕಚೇರಿಯಲ್ಲೂ ಕೇಳಿರದ ಗಾನಸುಧೆ ಸವಿದೆವು. ಸೂರ್ಯನ್ನ ಯಾರಿಗೂ ಗೊತ್ತಾಗದ ಹಾಗೆ ಮನೆಗೆ ಕಳಿಸಿದ ಸಂಜೆ, ಇಂಚಿಂಚೇ ಕತ್ತಲೆಯನ್ನ ನಮ್ಮಂಗಳಕ್ಕೆ ದೂಡುತ್ತಿತ್ತು.. ನೋಡನೋಡುತ್ತ ಪೂರ್ತಿ ಆವರಿಸಿದ ಕತ್ತಲ ಚೆಲುವನ್ನ ಇಮ್ಮಡಿಸಲು ಮೋಡದ ಮರೆಯಲ್ಲೇ ಕೂತು ಕಿರ್‍ಅಣ ಹಾಯಿಸುವ ಚಂದ್ರ, ಇವತ್ತು ರಜಾ ಅಂತ ಕಣ್ಣಿಗೆ ಕಾಣದ ಹಾಗೆ ಬಾನಿನೂರಿನ ಮೋಡಮನೆಗಳಲ್ಲಿ ಬೆಚ್ಚಗೆ ಕೂತ ಚಿಕ್ಕೆರಾಶಿ.. ಕಂಡಿದ್ದು, ಕಾಣದ್ದು, ಕಾಣಬೇಕೆಂದು ಬಯಸಿದ್ದು, ಕಾಣಲಾಗದೆ ಹೋಗಿದ್ದು.. ಎಲ್ಲವೂ ತುಂಬ ಚಂದ ಇತ್ತು.. ಕತ್ತಲೆಯೇ ಆದ್ಮೇಲೆ ಇನ್ನೇನು ಅಂತ ನಗೆದೀಪದ ಕುಡಿ ಬೆಳಗಿದ ಗೆಳೆಯನಿಗೆ ಜೊತೆಯಾಗಿ ನಾವು ಮೂವರೂ ಜೋಕಿನ ಎಣ್ಣೆ ಸುರಿದು, ಸುತ್ತಲೂ ನಗೆಹಬ್ಬದ ಬೆಳಕಿನೋಕುಳಿ..
ಹಂಚಿನ ಮೇಲೆ ಬೋಲ್ ನುಡಿಸುವ ಮಳೆಯನ್ನು ಕೇಳುತ್ತಾ ರಾತ್ರಿ ಬೆಚ್ಚಗೆ ಮಲಗಿ, ಬೆಳಿಗ್ಗೆ ಏಳುವಾಗ, ಮೂಡಣದಲ್ಲಿ ಬೆಳಕಿನ ಘರಾನಾದ ಪೂರ್ವಿ ರಾಗ.. ನಾವೆನು ಕಡಿಮೆ ಅಂತ ಉಲಿದುಲಿದು ತೇಲುವ ಹಕ್ಕಿಗೊರಳಿನ ಪಹಾಡೀ.... ನೋಡುತ್ತ ನೋಡುತ್ತ ಪೂರ್ವಿ, ಕಲ್ಯಾಣಿಯಾಗಿ, ಮಲ್ಹಾರದ ಮಳೆ ಸುರಿದು, ನಾವು ರಾಗಗಳ ಅವರೋಹಣದಲ್ಲಿ ಸೇರಿ ಕೆಳಗೆ ಅರಣ್ಯ ಕಛೇರಿಗೆ ಇಳಿದು ಬಂದೆವು.. ಮತ್ತೆ ಕೆಲಸಮಯದಲ್ಲಿ ಸಹಜಯಾನದ ತುಂಗಾ ಎಕ್ಸ್ ಪ್ರೆಸ್, ಹತ್ತಿ ಕುಲುಕಾಡಿ, ಚಿಕ್ಕಮಗಳೂರಿನ ಗಿಜಿಗುಟ್ಟುವ ಬಸ್ ಸ್ಟಾಂಡಿಗೆ ಕಾಲಿಡುವಾಗ ಮಳೆ ನಿಂತು ಬಿಸಿಲೇರಿ, ಓಹ್ ಒಂದ್ಗಂಟೆಗೆ ಬಸ್ ಸಿಕ್ಕಿದ್ರೆ ಬೇಗ ಮನೆಗ್ ಹೋಗಿ, ಮಲಗೆದ್ದು ಬೆಳಿಗ್ಗೆ ಬೇಗ ಆಫೀಸಿಗೆ ಹೊರಟು ಆ ರಿಪೋರ್ಟ್ ಒಂದು ಮುಗಿಸ್ ಬಿಟ್ರೆ ಆಯ್ತಪ್ಪಾ .. ಎಲ್ಲ ರಾಗಗಳೂ ಕಳೆದು ಬೆಳಕಿನ ರಾಜಧಾನಿಯ ಝಗಮಗ, ಜೀವನಯೋಗ.. (ಜೀವನ ದೊಂಬರಾಟ ಅಂತ ಬರೆಯಬೇಕೆನ್ನಿಸಿತು.. ಹಾಗೆ ಬರೆದರೆ ಬರೆದ ಪ್ರಾಸಕ್ಕೆ ಮತ್ತು ಆದರಿಸಿ ತೆಕ್ಕೆಗೆಳೆದುಕೊಂಡ ಬದುಕಿನ ಪ್ರೀತಿಗೆ ಮೋಸವಾಗಬಹುದೆನ್ನಿಸಿ.. )

Tuesday, July 3, 2007

ದೀಪಗಳು..

ಇನ್ನೇನು ಮಳೆ ಬರುವ ಸೂಚನೆಯಲ್ಲಿ ಕಪ್ಪುಗಟ್ಟಿದ ಮೋಡ, ಇನ್ನೆಲ್ಲೋ ಮಳೆಬಿದ್ದ ಕುರುಹಾಗಿ ತೀಡಿ ಬಂದ ತಂಗಾಳಿಯ ಆ ಸಂಜೆ ನಾನು ಮತ್ತು ತಮ್ಮ ಗಾಂಧಿ ಬಜಾರಿಗೆ ಹೊರಟಿದ್ದೆವು. ಊರಿಗೆ ಹೊರಟ ಅವನಿಗೆ ಅಲ್ಲಿರುವ ಪುಟ್ಟ ಮಕ್ಕಳಿಗೆ ಆಟ ಸಾಮಾನು, ಕತೆ ಪುಸ್ತಕ ಕೊಳ್ಳಬೇಕಿತ್ತು. ಗಡಿಬಿಡಿಯಲ್ಲಿ ಪಾರ್ಕ್ ಮಾಡಿ, ಇಳಿದು ಪುಸ್ತಕದಂಗಡಿ ಹೊಕ್ಕರೆ ಅಲ್ಲಿ ಕುರ್ಚಿಯಲ್ಲಿ ಪುಸ್ತಕವೊಂದನ್ನು ಹಿಡಿದು ಏನೋ ಮಾತಾಡುತ್ತ ಕುಳಿತ ನನ್ನ ಪ್ರೀತಿಯ ಕತೆಗಾರ. ಅಲ್ಲಲ್ಲಿ ಜನರಿದ್ದರು. ಹೇಗೆ ಮಾತಾಡುವುದೆಂಬ ಸಂಕೋಚದಲ್ಲಿ, ಆಚೆ ಬದಿಯಾಸಿ ಪುಸ್ತಕ ಆರಿಸಿ, ನಿದಾನವಾಗಿ ಗಲ್ಲೆಯ ಕಡೆ ಬಂದು ಅವರ ಕಣ್ಣೋಟಕ್ಕೆ ಸಿಕ್ಕಿಬಿದ್ದೆ.


ನನ್ನ ಮನದೊಳಗಣ ಖುಷಿ, ಮೈಯೆಲ್ಲ ಆವರಿಸಿ, ಮುಖಮಂಡಲದಲ್ಲಿ ನಗೆಹೂವಿನ ಗೊಂಚಲರಳಿ ತುಂಬ ದಿನಗಳ ಬಳಿಕ ನೋಡಲು ಸಿಕ್ಕಿದ ಅವರನ್ನು ವಿಷ್ ಮಾಡಿತು. ಅವರೋ ಕಡಲತೀರದವರಲ್ಲವಾ, ಪ್ರೀತಿಯ ರಾಶಿ; ಅಲೆಅಲೆಯಾಗಿ ನುಗ್ಗಿಬಂದ ಹಿಗ್ಗು ಅವರ ಮಿಂಚುಕಣ್ಣಿಂದಿಳಿದು, ಕನ್ನಡಕ ತೆಗೆಸಿ, ಹತ್ತಿರ ಬಂದು ಬಳಸಿ ಹಿಡಿಯಿತು.

ನನಗೆ ಟೇಬಲ್ ಮೇಲೆ ಕುಳಿತು ಅಜ್ಜನ ಕತೆ ಕೇಳುತ್ತಾ ಬೇರೆ ಲೋಕಕ್ಕೆ ತೇಲಿ ಹೋದ ಹಾಗೆ, ತುಂಬ ಇಷ್ಟವಾದ ಅಣ್ಣನ ತೋಳತೆಕ್ಕೆಗೆ ಸಿಕ್ಕಿದ ಹಾಗೆ, ತುಂಬದಿನಗಳಿಂದ ದೂರದೂರಲ್ಲಿದ್ದ ಗೆಳತಿ ಅಚಾನಕ್ ಸಿಕ್ಕಿ ಮಾತುಕತೆಯಾಡಿದ ಹಾಗೆ, ಈಗಷ್ಟೇ ಮಳೆ ನಿಂತು, ಬಿಸಿಲು ಹರಡಿ ಕಾಮನ ಬಿಲ್ಲು ಮೂಡಿದ ಹಾಗೆ.. ಎಲ್ಲ ಆಪ್ತ ಅನುಭವಗಳ ಒಟ್ಟಂದದ ಹಾಗೆ... ಮಾತು ಬರದೆ ಬರಿದೆ ನಕ್ಕೆ. ಮಾತ ಬದಲು ಅವರು ನಕ್ಕರು. ಹಾಗೆ ಒಂದಷ್ಟು ಅವರ ತಿಳಿವಿನ ಸವಿ ಸವಿದು, ನಾಲ್ಕೆಂಟು ಹಿತಮಾತನಾಡಿ, ಸುತ್ತರಿದಿದ್ದ ಯಾವ್ಯಾವುದೋ ಸೀರಿಯಸ್ ವಿಷಯಗಳಿಂದ ಕೆಲಕ್ಷಣಗಳ ಮಟ್ಟಿಗೆ ಮರೆಯಾಗಿ ಹಗುರ್‍ಆಗಿ.. ಹೇಗೆ ಹೇಳಲಿ ಆ ಕ್ಷಣಗಳ ಮಾಧುರ್ಯವನ್ನು..
ಇಳಿಸಂಜೆಯಲ್ಲಿ ಪುಟ್ಟ ದೀಪವೊಂದು ದೇವರಗೂಡಿನಲ್ಲಿ ಬೆಳಗಿ ಕತ್ತಲನ್ನ ಇಂಚಿಂಚೇ ತಳ್ಳಿದಂತ ಹಿತವಾದ ಬೆಳಕಲ್ಲಿ ಅದ್ದಿ ಹೋದೆ.



ಅದಾಗಿ ಮಾರನೆಯ ದಿನ, ಮನೆಯಲ್ಲಿ ಗಂಡನೊಡನೆ ಕೂತು ಬಿಸಿಬಿಸಿ ಕಾಫಿ ಕುಡಿಯುತ್ತಾ, ಚಾನಲ್ ತಿರುಗಿಸುತ್ತಿದ್ದಾಗ ಅಚಾನಕ್ ಆಗಿ ಮನಸು ಗಾಂಧಿ ಬಜಾರು ಅಂತ ಬರೆದ ಪ್ರೀತಿಯ ಕವಿ ನಿಸಾರ್ ಅಹಮದ್ ಕಂಡರು. ಅಲ್ಲೆ ನಿಂತು ಅವರನ್ನು ಸವಿದೆವು. ಅಸ್ಖಲಿತ ಕನ್ನಡ, ಎಲ್ಲೂ ಗ್ರಂಥಸ್ಥವೆನ್ನಿಸದೆ ಆದರೆ ಕವಿತೆಯ ಸೊಗದಿಂದ ಹೊರಬರುವ ಸಹಜ ಮಾತುಗಳು, ಅವರ ಹಲವೆಂಟು ಕವಿತೆಗಳಲ್ಲಿ ಮಿಂದು ಬಂದ ಅನುಭವ. ಆ ಕಾರ್ಯಕ್ರಮ ನಡೆಸಿಕೊಟ್ಟವರು ಯಾರೋ ತಿಳಿಯಲಿಲ್ಲ ಗಬ್ಬಾಗಿ ಮಾತಾಡಿದರು. ನಿಸಾರ್ ಅಂತಹ ಹಿರಿಯ ಚೇತನದ ಮಾತನ್ನು ಅವರು ಅಲ್ಲಲ್ಲಿ ತಡೆಹಿಡಿದು ಪಾತಿ ಮಾಡಿ ಹರಿಯಬಿಡುತ್ತಿದ್ದರು. ತುಂಬ ಇರಿಟೇಟ್ ಆಗುತ್ತಿತ್ತು ನೋಡುತ್ತಿದ್ದ ನನಗೆ.. ಅಷ್ಟರಲ್ಲೆ ಅವರು ಏನೇ ಮಾಡಿದರೂ ಸರಳವಾಗಿ, ನೇರವಾಗಿ ಮಾತಾಡುತ್ತಿದ್ದ ನಿಸಾರರ ಹಿರಿತನದ ಮಾತುಗಳು ಮನಕ್ಕೆ ತಂಪೆರೆಯುತ್ತಿದ್ದವು. ಕಾರ್ಯಕ್ರಮದ ಉದ್ದೇಶ ತುಂಬ ಗೊಂದಲಮಯವಾಗಿತ್ತು, ಆದರೆ ಚಾನಲ್ ತಿರುಗಿಸದೆ ಕೂತು ನೋಡುವಂತೆ ಮಾಡಿದ್ದು ಕವಿವರ್ಯರೇ. ನಿರ್ವಾಹಕ ಎಲ್ಲೂ ಮಧ್ಯದಲ್ಲಿ ಮಾತಾಡದೆ, ಅವರಿಗೇ ಮಾತಾಡಲು ಬಿಟ್ಟಿದ್ದರೆ ಚೆನ್ನಾಗಿತ್ತು ಅನ್ನುವಷ್ಟು ಚೆನ್ನಾಗಿ ನಡೆಸಿಕೊಟ್ಟರು. ನಿಸಾರರು ಹೇಗೆ ಮುಸ್ಲಿಂ ಸಂವೇದನೆ ಎಂಬ ಜಾಡಿಗೆ ಬೀಳದೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕವಿತೆ ಬರೆದರು ಅನ್ನುವುದು ಹಿಗ್ಗಾಡಿ ಜಗ್ಗಾಡಿ ಕೇಳಿದ ಕಾರ್ಯಕ್ರಮ ನಿರ್ವಾಹಕನ ಪ್ರಶ್ನೆಗಳ ಸಾರಾಂಶ. ಮತ್ತದೇ ಬೇಸರದ ಪ್ರಶ್ನೆಗೆ ನಿಸಾರರು ಬೆಣ್ಣೆ ಕದ್ದ ಕೃಷ್ಣನ ಹಾಡು ಬರೆದಂತೆ ನವಿರಾಗಿ, ಮೇಲೆಸೆದ ಕಲ್ಲು ಮತ್ತೆ ಕೆಳಗೆ ಬೀಳುವಷ್ಟು ಸಹಜವಾಗಿ ಉತ್ತರಿಸಿದರು. ಕುಲವನ್ನಾಧರಿಸಿ ಕವಿಯನ್ನು, ಕವಿತೆಯನ್ನು ಅಳೆಯುವ ಮಾಪನದ ಬಗ್ಗೆ ಅವರಿಗೆ ಕಿರಿಕಿರಿಯಾಗಿತ್ತು. ಬೆಳೆದ ವಾತಾವರಣವನ್ನು ಸಹಜವಾಗಿ ತಂದರೆ ಆ ಬಗ್ಗೆ ಕುಹಕವಾಡುವ ಸಧ್ಯದ ಸಾಹಿತ್ಯ ಪರಿಸ್ಥಿತಿಯ ಬಗ್ಗೆ ನೋವಿತ್ತು. ಹಳೆಯ ದಿನಗಳ ಧೀಮಂತ ಚರ್ಚೆ ವಿಮರ್ಶೆಗಳ ಬಗ್ಗೆ ಪ್ರೀತಿಯಿತ್ತು.
ನಾನು ಏನು ಹೇಳಲು ಹೊರಟೆ ಅಂದರೆ, ಇಲ್ಲಿಯವರೆಗೆ ಒಂದು ದಿನಕ್ಕೂ, ಅವರ ಕವಿತೆ ಓದಿದಾಗ, ಹಾಡು ಕೇಳಿದಾಗ ನಾನು ಅವರನ್ನು ನಿಸಾರ್ ಎಂದು ಅನುಭವಿಸಿದ್ದೆನೇ ಹೊರತು, ಆಹಾ ಎಷ್ಟು ಚಂದ ಕನ್ನಡದಲ್ಲಿ ಬರೆವ ಮುಸ್ಲಿಂ ಕವಿ ಎಂದಲ್ಲ. ಇದು ನಾವು ಬಹುಪಾಲು ಕನ್ನಡಿಗರ ಅನುಭವ ಕೂಡಾ. ಹೀಗಿದ್ದೂ ಮತ್ತೆ ಮತ್ತೆ ಅವರನ್ನು ಈ ಭೂಮಿಕೆಗೆ ಎಳೆತರುವ ಸಣ್ಣತನ ಬೇಸರ ತಂದಿತು.



ಅವರು ಸ್ವಲ್ಪ ಕಿರಿಕಿರಿಯಾಗಿದ್ದರೂ, ಲೋಕವೇ ಹೀರದಿರು ದುಂಬಿಯೊಲು ಹೂವ ಎಂದು ಕೇಳುವ ಒಲವಿನ ಬಳ್ಳಿಯಂತೆ ಮೈದುಂಬಿ ನಮಗಾಗಿ ಮಾತಾಡುತ್ತಿದ್ದರು, ನಿರ್ವಾಹಕರ ಪ್ರಶ್ನೆಯ ರಗಳೆಗೆ ಮತ್ತೆ ಸಿಕ್ಕಿಬೀಳುವ ಅರಿವಿದ್ದೂ, ಗಾಳಿಯಲಿ ಗಂಧದಂತೆ ತೇಲುವ ಚೇತನವಾಗಿ..


ಈ ಎರಡೂ ಭಿನ್ನ ದರ್ಶನಗಳು. ಒಂದು ಮನದ ಕತ್ತಲಲ್ಲಿ ಬೆಚ್ಚಗೆ ಮಿನುಗಿದ ದೀಪ, ಇನ್ನೊಂದು ಬುದ್ಧಿಯ ಕತ್ತಲೆಯಲ್ಲಿ ಹೊಳೆದು ಬೆಳಗಿದ ದೀಪ. ಎರಡೂ ಬೆಳಕುಗಳನ್ನುಂಡು ಇಲ್ಲಿ ಈಗ ಸ್ವಲ್ಪ ಬೆಳಕಿದೆ. ಆರದಂತೆ ಕಾಯುತ್ತ ಆ ಬೆಳಕನ್ನು ಅಕ್ಷರವಾಗಿಸುವ ನಮ್ರ ಪ್ರಯತ್ನ. ಆ ಚೇತನಗಳ ಬೆಳಕು ಸೋಂಕಿ ನನ್ನ ಚೈತನ್ಯ ಪುಳಕಿತಗೊಂಡಿದೆ.