Tuesday, December 17, 2013

ಮರ್ಮರ..

ಅಗೂಲಕೆ ಹರಡಿ
ಅಲ್ಲಲ್ಲಿ ಬಿಳಲಾಗಿ
ಅಂಗಳ ತುಂಬ ನೆರಳಾಗಿ
ಮಣೆ, ಈಳಿಗೆ ಮಣೆ, ಅಡಿಕೆ ಸುಲಿಯುವ ಮಣೆಗಳ
ಹಲಗೆಯಾಗಿ
ಸುಮ್ನೆ ಇಳಿಸಿದ ಕಡಿರಾಡಿನ ರೀಪು ಪಕಾಶಿಯಾಗಿ
ಗಾಳಿ ಬೀಸಿದಾಗೆಲ್ಲ ತುಯ್ದಾಡಿ
ಚಳಿಗಾಲದಲ್ಲಿ ಗುಡಿಸಿದಾಗ ತುಂಬಿದ ಬುಟ್ಟಿಯ ಎಲೆಯಾಗಿ
ದನ ಕರಗಕ್ಕೆ ಕೊಟ್ಟಿಗೆ ಸೊಪ್ಪಾಗಿ
ಸಗಣಿಯೊಡನೆ ಸೇರಿ ಕೊಳೆತು
ತೋಟಕ್ಕೆ ಗನಾ ಗೊಬ್ಬರವಾಗಿ
ರಜೆಗೆ ಬಂದ ಮಕ್ಕಳ
ಆಟಕ್ಕೆ ತೊನೆದು ತೂಗಿದ ಗೆಲ್ಲಾಗಿ
ವಿಸ್ತರವ ಅಳೆಯುವ ಹಕ್ಕಿ ಕುಲಕ್ಕೆ
ಉಣಿಸುವ ಹಣ್ಣಾಗಿ
ಸಂಜೆಗೆ ಮರಳಿದವಕ್ಕೆ
ಗೂಡುಗೂಡಾಗಿ
ಮನೆವಿಸ್ತರಣೆಗೆ ಅಡ್ಡಗಾಲಾಗಿ
ಅಂಗಳಕ್ಕೊಂದು
ಗಡಿಗುರುತಾಗಿ, ಬಯಲಲೆವ ಬೂತಗಳಿಗೆ
ಒಡಲಾಗಿ
ಇರಲೆಬೇಕಾಗಿ
ಒಮ್ಮೊಮ್ಮೆ ಬೇಡಾಗಿ ಅನಿಸಿದ್ದು
ದಶಕಗಟ್ಟಲೆ
ಬೇರೂರಿ ಉಳಿದಿದ್ದು
ನೆಲದ ತೊಟ್ಟಿಲಲ್ಲಿ ಮೊಗವರಳಿ
ಆಕಾಶದ ತೆಕ್ಕೆಯಲ್ಲಿ ಮೊಗಹುದುಗಿಸಿ
ಮಳೆಗೆ ಮೈಯೊಡ್ದಿ
ಗಾಳಿಗೆ ಮೈದೂಗಿ
ಸಂಕ್ರಮಣಗಳನ್ನೆಣಿಸಿದ
ಮರ
ಮೊನ್ನೆ ಸಾಕಾಗಿ ಉರುಳಿತು.
ನಿನ್ನೆ ಫೋನು,ಜೆಸಿಬಿ,ಗರಗಸಗಳ ಸದ್ದು
ಇವತ್ತು ಖಾಲಿ ಅಂಗಳ,

ಬಂದು ಹಾರಿಹೋಗುವ ಹಕ್ಕಿಗಳ ರೆಕ್ಕೆಯ ಸದ್ದು.

Thursday, December 12, 2013

ಮರದೊಳಗೆ ಮರ ಹುಟ್ಟಿ...

|| ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಲಾಗದ ಹಣ್ಣು ಬಲು ರುಚಿ...||

ಅಡಿಗೆ ಮನೆಯಲ್ಲಿ ಒಂದು ಬದಿಗೆ ಅದಿರುತ್ತದೆ.
ಕಟ್ಟೆಯ ಮೇಲೋ, ಪಾತ್ರೆಯ ಸಂದಿಗೋ, ಸ್ಟೋವಿನ ಕೆಳಗೋ, ಪಾತ್ರದ ಸ್ಟಾಂಡಿನ ಕೊಂಡಿಗೋ ನೇತಾಡುತ್ತಿರುತ್ತದೆ.
ಅದು ಸ್ವಚ್ಛವಾಗಿರುತ್ತದೆಯಾದರೂ ನೋಡಲು ಹಾಗೆನಿಸುವುದಿಲ್ಲ.
ಅದಿಲ್ಲದೆ ಕೆಲಸ ಸಾಗುವುದೂ ಇಲ್ಲ. ನೋಡಲು ಬೇಕೇ ಬೇಕೆನಿಸಿರುವುದಿಲ್ಲ ಅಷ್ಟೆ.
ಪಾತ್ರೆ ಇಳಿಸುವಾಗ, ತರಕಾರಿ ಹೆಚ್ಚಿ ಮುಗಿಸಿದ ಕೂಡಲೆ, ಚಾ ಮಾಡಿದ ತಟ್ಟೆಯನ್ನ ಸಿಂಕಲ್ಲೆ ತೊಳೆದಿಟ್ಟು ಬಿಸ್ಕಿಟು ಡಬ್ಬಿ ಹುಡುಕುವ ಮೊದಲು,
ಚಪಾತಿ ಲಟ್ಟಿಸಿ, ಮಣೆಯನ್ನ ಸ್ಟಾಂಡಿಗೆ ಸೇರಿಸಿ ಉದುರಿದ ಹಿಟ್ಟನ್ನು ಒರೆಸುವಾಗ
ಅಚಾನಕ್ ಉಕ್ಕಿದ ಹಾಲಲ್ಲದ್ದಿದ ಸ್ಟೋವನ್ನು ಸಂಭಾಳಿಸಲು
ಪಾಕ ಕುದಿಯುವಾಗಲೇ ಮೀಟಿದ ಬೆಲ್ಲು ಕೇಳಿಸಿ ಬಾಗಿಲು ತೆಗೆಯಲು ಹೋಗುವ ಮೊದಲು,
ದಿನವೂ ಕೆಲಸ ಮುಗಿದ ಮೇಲೆ ಸೋಪು ಹಚ್ಚಿ ತೊಳೆದು ಅಲ್ಲೆ ಕಟ್ಟೆಯ ಮೇಲೆ ಒಣಗಿಸಿಯಾಗಿರುತ್ತದೆ.
ಅಡಿಗೆ ಮನೆಯಲ್ಲಿ ಒಂದು ಬದಿಗೆ ಅದಿರುತ್ತದೆ.
ಒಮ್ಮೊಮ್ಮೆ ತುಂಟ ಮಕ್ಕಳ ಆಟಿಗೆಯೊಡನೆ ಸೇರಿಯೂ ಮತ್ತೆ ಅಡಿಗೆ ಮನೆಗೇ ಓಡಿಬರುತ್ತದೆ.

ಅದನ್ನ ಮಶಿಬಟ್ಟೆ, ಕೈ ಒರ್ಸೊ ಬಟ್ಟೆ, ಅಡಿಗೆ ಬಟ್ಟೆ, ನ್ಯಾಪ್ಕಿನ್ನು, ಇತ್ಯಾದಿಯಾಗಿ ಕರೆಯುತ್ತಾರೆ.

ಒಂದು ಕತೆ ಓದಿದ್ದೆ. ತಾಯಿ ಯಾವತ್ತಿಗೂ ಮಶಿಬಟ್ಟೆಯ ಹಾಗೆ ಅಂತ ಒಂದು ವ್ಯೂ ಅದು. ಯಾರು ಬರೆದಿದ್ದು ಅಂತಲೂ ಮರೆತಿದ್ದೇನೆ.. ಮಾತೃದೇವೋ ಭವದ ನಾಡಿನಲ್ಲಿ ಬಹುಶಃ ಇದು ಜಾಸ್ತಿ ನಿಜ.

ಉಬ್ಬಿ ನಿಂತು ರಸವಾಗಿ ಆವರಿಸಿದ ತಾಯ್ತನವು
ತೊದಲು ಹೆಜ್ಜೆಗಳಲ್ಲಿ ಒಂದೊಂದೇ ದೂರ ಕ್ರಮಿಸುತ್ತಾ
ಆತು ನಿಲ್ಲುವ ನಿಲುಕುಗಳನ್ನ,
ತಲೆಯೂರಿದ ಮಡಿಲನ್ನ,
ಅವುಚಿ ಹಿಡಿದ ಕೈಗಳನ್ನ ಮೀರುತ್ತಾ
ರೂಪವೊಂದು
ಒಳಗಿಂದ ಮೂಡಿ
ಕಣ್ಣೆದುರು ಬಂದು
ಮತ್ತೆ ಕನ್ನಡಿಯೊಳಗೆ ಹೋದಂತಾದ ಘಳಿಗೆಯಲ್ಲಿ
ಏನು ಯೋಚಿಸುತ್ತಿರುತ್ತದೆ?

{ಅ}

Tuesday, November 26, 2013

ಕಾಕಲಿಪಿ

ಆಹಾ ಇಲ್ಲೊಂದು ರೀಫಿಲ್ ಬಿದ್ದಿದೆ. ಎತ್ತಿಕೊಂಡಳು ಪುಟ್ಟಿ. ಓಹೋ ಇಂಕು ಮುಗಿದೋಗಿದೆ. ಎರಡು ಪುಟ್ಟ ಅಂಗೈಗಳಲ್ಲಿ ಗಸ ಗಸ್ ಉಜ್ಜಿ ಬರೆದರೆ ಸಾಕು ಮತ್ತೆರಡು ಸಾಲು ಬರಿಯಬಹುದು ಅನ್ನುವುದು ಅವಳಿಗೆ ಗೊತ್ತಿರುವ ಲೆಕ್ಕಾಚಾರ.
ಹಂಗಾಗಿ ಅವಳತ್ರ ಇರುವ ಕಬ್ಬಿಣದ ಹಳೆಯದೊಂದು ಜಾಮಿಟ್ರಿ ಡಬ್ಬಿಯ ತುಂಬ ಈ ತರಹ ಸಿಕ್ಕ ರೀಫಿಲ್ಲುಗಳಿದ್ದವು.
ಇನ್ನೊಂದು ಬಟ್ಟೆಯ ಪರ್ಸಿನಲ್ಲಿ ಮುರುಕು ಸೀಮೆಸುಣ್ಣಗಳಿದ್ದವು.
ಈ ಹತ್ಯಾರಕ್ಕೆಲ್ಲಾ ಕ್ಯಾನ್ ವಾಸಾಗಲು ಇದ್ದದ್ದು ಮನೆಯ ಹಿಂದಿನ ಗೋಡೌನ್ ರೂಮಿನ ತುಂಬ ತುಂಬಿಕೊಂಡಿದ್ದ ದೊಡ್ಡವರೆಲ್ಲ ಬರೆದು ಮುಚ್ಚಿಟ್ಟ ನೋಟ್ ಬುಕ್ಕುಗಳು. ಏನಿಲ್ಲಾಂದರೂ ಒಂದೊಂದರಲ್ಲೂ ೩-೪ ಪುಟದಷ್ಟು ಸಿಕ್ಕೇ ಸಿಗುತ್ತಿತ್ತು.
ಸೀಮೆ ಸುಣ್ಣಕ್ಕೆ ಸಿಮೆಂಟು ಗೋಡೆಯೇ ಗತಿ.
ಇಷ್ಟೆಲ್ಲಾ ಇದ್ ಮೇಲೇ ಬರೀದೆ ಇದ್ರೆ ಆಗುತ್ಯೇ. ಬರೀದೆ ಸುಮ್ನಿದ್ ಬುಟ್ರೆ ನಾಳೆ ಬೆಳ್ಗೆ ಭೂಮಿಯ ಹಣೇಬರಹವೇ ಬದಲಾಯ್ಸಿ ಹೋಗುತ್ತೆನೋ ಎಂಬಷ್ಟು ಸೀರಿಯಸ್ ನೆಸ್ಸಲ್ಲಿ ಬರೆಯುವ ಪುಟ್ಟಿ, ಕೈನೋವು ಬಂದ್ರೆ ಒಂಚೂರು ಕೈ ಕುಡುಗಿ ಮತ್ತೆ ಬರೀತಾ ಕೂತಿರ್ತಿದ್ಲು.
ಅವಳೊಬ್ಬಳೇ ಬರೆದು ಮುಗಿಸಿಬಿಟ್ರೆ ಅನ್ನೋ ಆತಂಕದಲ್ಲಿ ಅವಳ ತಮ್ಮನೂ ಬರೆದು ಬಿಸಾಕುತ್ತಿದ್ದ. ಇಷ್ಟಕ್ಕೂ ಇನ್ನೂ ಮೂರನೇ ಕ್ಲಾಸಿನ ಈ ಪುಟ್ಟಿ ಮತ್ತು ಒಂದನೇ ಕ್ಲಾಸಿನ ಈ ಪುಟ್ಟ ಇಬ್ಬರೂ ಏನ್ ಬರೀತಾರೇಂತ ಕೇಳಿದ್ರಾ.?
ಇಂಗ್ಲೀಷು. ಬರೀ ಅಕ್ಷರಗಳಲ್ಲ. ಮೋಡಿ ಅಕ್ಷರಗಳು.
ಎಷ್ಟ್ ಬರೀತಾ ಇರ್ತಿದ್ರು ಅಂದ್ರೆ ಅವರಜ್ಜಿ ಬಂದು ಸಿಟ್ ಮಾಡಿ, ಪುಸ್ತಕ ಕಿತ್ತಾಕಿ ಎಬ್ಬಿಸಿಕೊಂಡೋಗಬೇಕು ಅಷ್ಟು.
ಆಹಾ ಎಂಥಾ ಅಕ್ಷರಮುಖೀ ಮಕ್ಳು, ಏನು ವಿದ್ಯಾರ್ಜನೆ, ಎಂಥಹಾ ದಾಹ ಅಂದ್ಕೊಳ್ಳಕ್ಕೆ ಮುಂಚೆ ಇನ್ನೊಂದಿಷ್ಟು ಮಾಹಿತಿ ಇದೆ.
ಏನು ಬರೀತೀ ಅಂಥ ಕೇಳಿದ್ರೆ ಅವರಿಬ್ರದ್ದೂ ಒಂದೇ ಉತ್ತರ. ಜಡ್ಜ್ ಮೆಂಟು..! ಇಬ್ರಿಗೂ ಜಡ್ಜರ ಕೆಲಸ ಎಂದರೆ ಇಷ್ಟ..ಯಾಕೇಂದ್ರೆ ಅವರು ಸಿಕ್ಕಾಪಟ್ಟೆ ಬರೀತಾರೆ..
ಆ ಜಡ್ಜ್ ಮೆಂಟುಗಳೋ .... ಯಾವ ಬದಿಯಿಂದ ಓದಿದ್ರೂ ಉಂಹೂಂ.. ಭೂಮಿತಾಯಾಣೆಗೂ ಅರ್ಥವಾಗದವು... ನಿಜವಾದ ಜಡ್ಚ್ ಮೆಂಟುಗಳ ಸ್ಪೂಫಿನ ಹಾಗೆ!
ಅಜ್ಜಿಗೆ ಬರುತಿದ್ದ ಸಿಟ್ಟೂ ಈ ಕಾರಣಕ್ಕೆ. ಮನೆಯ ಎಲ್ಲ ಹಿರಿಯರೂ ಕೋರ್ಟು ಕಚೇರಿ ಅಂತ ಅಲೆಯುವುದಕ್ಕೇ ಇರುವಾಗ ಈ ಮಕ್ಕಳೂ ಅದೇ ಗ್ಯಾಂಗಿಗೆ ಸೇರಿದ್ರೆ ಯಾರಿಗ್ ತಾನ್ ಸಿಟ್ ಬರ?!
ಬರೀ ಪುಸ್ತಕದಲ್ಲಿ ಗೀಚಿದ್ ಒಂದೇ ಅಲ್ಲ. ಮನೆಯ ಗೋಡೆ ತುಂಬಾ ನೆಲದಿಂದ ಮೂರು ಮೂರೂವರೆ ಅಡಿಯವರೆಗೆ ಎಲ್ಲಾ ಗೋಡೆಗಳ ಮೇಲೂ ಈ ಕಾಕಲಿಪಿಯೇ ಇರುತ್ತಿದ್ದುದು. ಆಗೆಲ್ಲ ಮನೆಗೆಲಸದವರ ಕಾನ್ಸೆಪ್ಟೇ ಇಲ್ಲದ ಕಾಲ. ಅಜ್ಜಿಯೂ ಚಿಕ್ಕಮ್ಮನೂ ಸಿಟ್ಟು ಮಾಡಿಕೊಂಡಿದ್ದರಲ್ಲಿ ಈಗ ಮಕ್ಕಳ ತಂದೆತಾಯಿಗಳಾದ ಆ ಪುಟ್ಟ ಪುಟ್ಟಿಯರಿಗೆ ಯಾವ ತಪ್ಪೂ ಕಾಣಿಸುವುದಿಲ್ಲ. ಆಗ ಮಾತ್ರ ಗೀಚಿ ಓಡಿಹೋಗುವುದು, ಒಂದೊಂದ್ಸಲ ಸಿಕ್ಕಾಪಟ್ಟೆ ಪ್ರೆಷರ್ರು ಬಿದ್ದಾಗ (ತಿಂಡಿಯಿಲ್ಲ ಅಥವಾ ಶಾಲೆಗೆ ಬರೆದು ಕಳಿಸುವೆ ಎಂಬ ಬೆದರಿಕೆ) ನೆಲಒರೆಸುವ ಬಟ್ಟೆಯಿಂದ ಗೋಡೆ ಒರಸುವುದು ನಡೆಯುತ್ತಿತ್ತು. ಕಾಕಲಿಪಿ ಅಂದ್ರೆ ಶುದ್ಧ ಕಾಕಲಿಪಿ ಅದು.

ನೀಟಾಗಿ ಒಂದು ಸಾಲುತುಂಬ ಕಾಗೆ ಒಂದು ಅಕ್ಷರವೂ ಗ್ಯಾಪು ಬಿಡದ ಹಾಗೆ ಕಾಲಿನ ಇಂಪ್ರೆಷನೆ ಇಟ್ಟರೆ ಏನು ಬರುತ್ತೋ ಅದೇ ಈ ಮಕ್ಕಳ ಜಡ್ಚ್ ಮೆಂಟು. ಹಾಗಂತ ಒಂದೇ ಸಾಲಲ್ಲ. 
ಸಾಲು ಸಾಲು. ಪುಟ ಪುಟಾ. ಪುಸ್ತಕ ಪುಸ್ತಕ..
ನೆನಪಿಸಿಕೊಂಡ ಕೂಡಲೇ ನಂಗೆ ಈಗ್ಲೂ ತಕ್ಷಣ ನಗು ಬಂದ್ ಬಿಡತ್ತೆ. ಅಮ್ಮಮ್ಮನ ಸಿಟ್ಟಿನ ಮಖವೂ ನೆನಪಾಗತ್ತೆ.

ಇದೆಲ್ಲಾ ಈಗ್ಯಾತಕ್ಕೆ ನೆನಪಾತಪಾ ಅಂದ್ರೆ ನಿನ್ನೆ ನನ್ನ ಮುದ್ದಿನ ಮಗಳು ಐದು ತುಂಬಲಿರುವ ಸೃಷ್ಟಿ ಶುಭದಾಯಿನಿ, ಈ
e-ಕಾಲದಲ್ಲೂ ಪೆನ್ನು ಹಿಡಿದು ನೋಟ್ಬುಕ್ಕಿನಲ್ಲಿ ಬರೆಯುತ್ತ ಕೂತಿದ್ದಳು.

ಏನು ಬರೆವಳು ಅಂತ ಹೋಗಿ ನೋಡಿದ್ರೆ. ಅದೇ ಕಾಕಲಿಪಿ.
ಏನದು ಅಂದ್ರೆ
ಇಂಗ್ಲೀಷು.. ಆಲ್ಫಬೆಟ್ಸ್ ಅಲ್ಲಾ, ಜಾಸ್ತಿ ಬರ್ದಿರುತ್ತಲ್ಲಾ ಓದದು ಅದ್ನ ಬರೀತಿದೀನಿ ಅಂದ್ಲು.
ಮರದೊಳಗೆ ಮರಹುಟ್ಟಿ ಮರ ಚಕ್ರ ಕಾಯಾಗಿ ನೆನಪಾಯಿತು. ಬರೀ ಬರೀ ಅಂತ ಖುಶಿಪಟ್ಟೆ. ನಾನೂ ಒಂದೆರಡು ಸಾಲು ಬರೆದೆ.
ಅವಳು ಮೊದಮೊದಲು ಬರೆಯಲು ಕಲಿತಾಗ, ಗೋಡೆಯ ಮೇಲೆಲ್ಲ ಬರೆದು ಅವರಪ್ಪನಿಗೆ ಸಿಟ್ ಬಂದು ಬಯ್ದಾಗ ನಾನು ಅವರಿಬ್ಬರ ನಡುವೆ ಅಡ್ಡಗೋಡೆಯಾಗಿ ಅವಳಿಗೆ ಬರೆಯಲು ಬಿಟ್ಟಿದ್ದೆ.
ಒಂದು ವಾಷು, ಇನ್ನೊಂದು ಕೋಟು ಕೊಟ್ರೆ ನಂ ಗೋಡ್ ವಾಪಸ್ ಮಿರಿಮಿರಿ ಮಿಂಚುತ್ತೆ. ಆದ್ರೆ ಅ ಮೊದಲ ಬರಹದ ಎಳೆ ಕೈಯ ಸುಗ್ಗಿ ತಡೆಯಲು ನಮಗೇನು ಹಕ್ಕು ಅಲ್ವಾ? ಗೋಡೆಗಳಿರುವುದೇ ಬರೆಯಲಿಕ್ಕೆ ಅಂತ ಅಂದಿದ್ದು ಅವಳಿಗೆ ಖುಶಿಯಾಗಿತ್ತು. ಅವರಪ್ಪನಿಗೆ ಸಿಟ್ಟಾಗಿತ್ತು. ಆದ್ರೂ ಅವನ ಬಾಲ್ಯ ನೆನಪಾಗಿದ್ದರ ಫಲ ನಮ್ಮನೆ ಗೋಡೆಗಳಲ್ಲೆಲ್ಲ ಆರ್ಟ್ ಗ್ಯಾಲರಿಯಿತ್ತು.


ನಂಗೆ ತುಂಬಾ ಆಸೆ ಹುಟ್ಟಿಸಿದ, ಪ್ರೀತಿ ಮೂಡಿಸಿದ, ಸಿಟ್ ಬರಿಸಿದ, ನಗು ತರಿಸಿದ, ಕಣ್ಣೀರ್ ಒರೆಸಿದ, ಇರಿಸುಮುರಿಸುಗೊಳಿಸಿದ, ಸಹನೆ ಕಲಿಸಿದ, ಗೊತ್ತಿಲ್ಲದ ಏನೇನನ್ನೋ ಅರುಹಿದ ಮತ್ತು ಇದೆಲ್ಲವನ್ನೂ ಇನ್ನೂ ಟೂ ಫೋಲ್ಡ್ ಮಾಡುತ್ತಲೇ ಇರುವ, ಹಾಗೇ ಸಾಗುವ ನನ್ನ ಪುಟ್ಟ ದಿಲ್ ರುಬಾಳಿಗೆ ನಾಡಿದ್ದಿಗೆ ಐದು ತುಂಬುತ್ತದೆ.
ಒಂದಿಷ್ಟು ಬೆರಗು, ಮತ್ತು ಸಿಕ್ಕಾಪಟ್ಟೆ ಖುಶೀ ನಂಗೆ.

ಈ ಎಡವಟ್ಟು ಹೆಣ್ಣನ್ನು, ಅಮ್ಮನನ್ನಾಗಿಸಿದ ಆ ಮೆರುಗು ಕೆನ್ನೆಯ ಮೇಲೆ ಒಂದಿಷ್ಟು ಒತ್ತಿ ಒತ್ತಿ ಮುದ್ದು. ಮತ್ತು ಆ ಪುಟ್ ಪುಟಾಣಿ ಮೈಗೆ ಕಂಗರೂ ಹಗ್ಗು.


(ರೀಫಿಲ್ ಮತ್ತು ರೂ-ಕಾಂಗ ಚಿತ್ರಗಳು ವೆಬ್ ಕರ್ಟೆಸಿ)

Friday, October 4, 2013

ಮರುದನಿ

ನೀನು
ಕಿನ್ನರಿ, ದೇವತೆ, ಮತ್ತು ಪುಟ್ ರಾಕ್ಷಸಿ
ಅಂದ್ಕೊಂಡಿದ್ದೆ.
ಅದೆಲ್ಲ ಹೌದು.
ಜೊತೆಗೇ....
...ಒಳಗಿನದನ್ನು
ಇಣುಕಿ ನೋಡಲು
ನನ್ನೆಲ್ಲ ಹೆಜ್ಜೆಗಳ
ಸವೆದ ದಾರಿಗಳ
ತಿರುವುಗಳ
ಪಾಯಿಂಟ್ ಆಫ್ ನೋ ರಿಟರ್ನುಗಳ
ಹಾಯ್ದ ಕೆಂಡದ ಕುಳಿಗಳ
ಕೆಲಿಡೋಸ್ಕೋಪಿಕ್ ಕನ್ನಡಿ
ನೀನೆಂಬ ನಿಜದ ಬಿಂಬ-
-ವು, ಇಲ್ಲಿ
ನಿನ್ನ ಕಣ್ಣ ಹೊರಳು,
ಮಾತು,
ಹೊರಳ್ಗೊರಳು,
ತುಟಿ ಕೊಂಕು,
ಬಿರಿ ಮುಗುಳು,
ಅಚ್ಚರಿ, ಅರುಳು ಮರುಳುಗಳಲ್ಲಿ -
ಪ್ರತಿಫಲಿಸುವಾಗ....
ಅರಿವಿನ ಹೊಳೆಗೆ ನೆರೆ!
ಎಂದೋ ಗೊತ್ತಿಲ್ಲದೆ
ಬಿನ್ನವಿಸಿದ
ಪ್ರಾರ್ಥನೆಯ ಕರೆಗೆ
ಸಿಕ್ಕ ಮರುದನಿ
ನೀನು,
ಬದುಕಿನ
ಮಿತಿ ಮತ್ತು ಮೀರುವಿಕೆಯ
ತೋರುವ
ಮಾಯಾಕನ್ನಡಿ.
{ಅ}

Monday, September 16, 2013

ಹೂವ ತರುವರ ಮನೆಗೆ ಹುಲ್ಲ ತರುವ...

ಹೀಗೊಂದು ಮಳೆ ಸುರಿವಾಗ ನನಗೆ ಹನಿಯಾಗಿ ದೊರಕಿದ್ದು...

ಏನು ಮಾತಾಯಿತು ಏನು ಸಿಕ್ಕಿತು ಏನನ್ನಿಸಿತು ಎಂಬ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ.

ಮಳೆ ಬಂತು. ನಾನೆಷ್ಟು ಒಡ್ಡಿದೆನೋ ಅಷ್ಟು ನೆಂದೆ. ನೆರೆ ಇನ್ನೂ ಬರಬೇಕಿದೆ. ಈಗಿನ್ನೂ ಭಾದ್ರಪದ ಮುಗಿಯುತ್ತಿದೆ. ಆಷಾಢ  ಬರುವ ಮೊದಲು ಹೇಮಂತ ಶಿಶಿರಗಳಿವೆ.

ಮಳೆ ಬರಬೇಕು
ಈವರೆಗೆ ಕಟ್ಟಿದ್ದು,
ಗೋಡೆಗೆ  ಕೊಟ್ಟ ತಳಪಾಯ
ಮೇಲಿಟ್ಟ ಹೊದಿಕೆ
ಬಣ್ಣ ಬಣ್ಣದ ಸುಣ್ಣ
ಗಟ್ಟಿಸಿ ಹಾಕಿದ ಚಿಲಕ
ತೆಗೆಯದೆ ಬಿಟ್ಟ ಕಿಟಕಿ
ಎಲ್ಲ ಮುಳುಗಿಸುವ
ಕರಗಿಸುವ
ಮಳೆ ಬೇಕು
ಕೊಚ್ಚಿಕೊಂಡೋಗುವ
ನೆರೆಯಲ್ಲಿ
ಮುಳುಗದೆ
ತೋರಬೆರಳಿನ
ಆಸರೆಯಲ್ಲಿ
ಸಾಗಬೇಕು,
ಬಯಲಿಗೆ
ಎತ್ತಲಿಂದಲೂ ಹಾದಿಯಿದೆ
ನಾವು ಹೊರಡಬೇಕು.
**************************************************************

ಬೇಕು ಎನ್ನುವುದು ಬೇಕು.
ಸಿಗಬೇಕಿದ್ದರೆ
ಮೊದಲು ಕರೆಯಬೇಕು.
ಮರುದನಿ
ಹುಟ್ಟಿಸಲು
ಕರೆದನಿಯೇ ಬೇಕು.
ಇದೆಲ್ಲ ಕೇಳಲು
ಶಬುದ ನಿಲ್ಲಿಸಬೇಕು.
ಎದೆಕಲಕಿ ಪ್ರಾರ್ಥಿಸಬೇಕು
ಒಳಗಿರುವ ಗುಟ್ಟು
ಹೊರಬರಲೆಂದು.

**********************************************

ಗುರಿ ಇರುವುದು ಬಾಣದ ಮೊನೆಯಲ್ಲಿ
***************************************************

ಕಾಯುವಿಕೆ ಎಂದೂ ಒಬ್ಬರದಲ್ಲ..
*************************************

ಗಟ್ಟಿ ಮನೆಗಳ ಅಂಗಳದಲ್ಲಿ ಕಟ್ಟೆಯಲ್ಲಿ ಕೂತು ಪ್ರವಾಹಕ್ಕೆ ಕಾಯುವವರು ಹುಚ್ಚರೇ ಇರಬಹುದು. ಹುಚ್ಚು ಹಿಡಿಯದೆ ಇದ್ದರೆ ನೆರೆಗೆ ಸಿಕ್ಕುವುದು ಹ್ಯಾಗೆ. ನೆರೆ ಬರದೆ ಹೊಸತು ಹುಟ್ಟುವುದು ಹ್ಯಾಗೆ. ಇದ್ದ ಬೆಳಕು ಹೊಸದಾಗಿ ಮೂಡುವುದು ಹ್ಯಾಗೆ...
******************************************************************************
ಹೂವ ತರುವರ ಮನೆಗೆ ಹುಲ್ಲು ತಂದವರ ಮಾತುಗಳಲ್ಲಿ ತೊಯ್ದೆ ನಾನು. -ಸಿಂಧು

 
 

Wednesday, September 11, 2013

ಬಾಗು-ಬಳುಕು

ನೇರ

ಗೆರೆ ಕೊರೆದಂತೆ

ಅತ್ತಿತ್ತ ಅಲುಗದಂತೆ

ಚೆಲ್ಲದಂತೆ

ಚದುರದಂತೆ

ನುಣ್ಪು ಚೂರೂ

ದೊರಗಾಗದಂತೆ..

ಇದ್ದರೆ

ಮುರಿಯಬಹುದು

ಕತ್ತರಿಸಬಹುದು

ಅಳಿಸಬಹುದು

ತುಂಬಿಕೊಳ್ಳದೆ ಇರಬಹುದು

ಜಾರಿ ಹೋಗಬಹುದು

ಯಾರಿಗೂ ಬೇಕು ಅನ್ನಿಸದೆ ಹೋಗಬಹುದು.

ಅದಕ್ಕೇ

ಇರಬೇಕು

ಬಾಗು, ಬಳುಕು,

ತುಂಬಿಕೊಳ್ಳುವ ದೊರಗು,

ದಾರಿ ಸಿಗದಿದ್ದರೆ ಸುತ್ತಿ ಬಳಸುವ

ಡೊಂಕು.

ಇರಿಯುವುದು ಸುಲಭ,

ಅರಳುವುದು ಕಷ್ಟ.

ನೇವರಿಸುವುದು ಬಲು ಕಷ್ಟ.

ನದಿ, ಹರಿವು,ಬಾಗು, ಬಳುಕು. ತೋರಿದ ಬೆಳಕು

ಮಬ್ಬು ಹರಿಸಬೇಕು,

ಮುಂದೆ ನಡೆಯಬೇಕು.

Friday, August 30, 2013

ಉಹ್...

ಜಗವೆಲ್ಲ
ಫೇಸ್ಬುಕ್ಕು, ಟ್ವಿಟ್ಟರಲ್ಲಿ ಮುಳುಗಿ

ತೇಲಾಡುತ್ತಿರುವಾಗ

ಬದುಕಿನ ಗಂಟನ್ನು

ಜಾಣಜಾಣೆಯರೆಲ್ಲ

ಸೋಶಿಯಲ್ ಕನ್ನಡಿಯಲ್ಲಿ

ಹಿಡಿದ್ ಹಿಡಿದು ಸಂಭ್ರಮಿಸಿ

ಟೋಸ್ಟ್ ಮಾಡುವ

ಹೊತ್ತಲ್ಲಿ

ಇಲ್ಲೊಂದು ಪುಟ್ಟ

ಮೂಲೆಯಲಿ

ಸುಮ್ಮಗೆ ಎಲೆ ಬಗ್ಗಿಸಿ

ಮರವೊಂದು

ನಿಂತಿದೆ.

ಏಸಿಯಲಿ ಕುಳಿತು

ಕೀ ಕುಟ್ಟುವವರಿಗೆ

ಬಿಸಿಲ ಅರಿವಿಲ್ಲ

ನೆರಳು ಬೇಕಿಲ್ಲ

ಕಿವಿಗಳಲಿ ಇಯರ್ಫೋನು

ತುರುಕಿ ಜಗದಗಲದ ಸಂಗೀತ

ಕೇಳುವವರಿಗೆ

ಕೊಂಬೆಯಲಿ ಉಲಿವ

ಹಕ್ಕಿದನಿಯ ಗರಜಿಲ್ಲ

ಹಳೆಹಳೆಯವರು

ಕೀ ಒತ್ತದವರು, ಶಾಯಿಯಲದ್ದಿ

ಬರೆದವರು

ಸ್ಕ್ಯಾನು ಮಾಡಿ ಆರ್ಟಿಕಲು

ಕಳಿಸಿದವರು

ಸುಮ್ಮನಿದ್ದಾರೆ, ಮೇಲು ಬರೆಯಲು ಬರುವುದಿಲ್ಲ

ಬಾಣಶೂರರಿಗೆ

ತಿಳಿಯಬೇಕಾದ ದರ್ದಿಲ್ಲ.

ಮರ ಸುಮ್ಮಗಿದೆ.

ಕಡಿದಷ್ಟೂ ಚಿಗುರುವುದು

ಮರದ ಗುಣ.

ಮನುಷ್ಯನದಲ್ಲ.

ತಿರುಗಿ ನೋಡದೆ

ಹೊರಟ ಕ್ರೌರ್ಯಕ್ಕೆ

ಮಾತು ನುಂಗಿ

ನಿಲ್ಲುವುದೆ ಮದ್ದಿರಬಹುದೆ?!

Thursday, August 1, 2013

ಹೊಸ್ತಿಲು

ಹೊಸ್ತಿಲು ದಾಟುತ್ತಿರುತ್ತೇನೆ
ನಡೆದಷ್ಟೂ ಸಾರಿ,
ನಡೆದಷ್ಟೇ ದಾರಿ.
ಹೆಜ್ಜೆ ದಣಿದಾಗ
ಸುದೂರದಿ ಮರದ ನೆರಳು,
ಅಷ್ಟರ ಮಟ್ಟಿನ ಪುಣ್ಯ.

ನೆರೆ ಇಳಿದು
ಕೆಸರು ಕಳೆದು
ಬೇಸಗೆಯಲ್ಲಿ ಬೆಂದು
ಬಿರುಕಾದ
ಕಣಿವೆಯ ಮಡಿಲ ತುಂಬ
ಸಾವಯವ ಕೃಷಿ.
 
ಮುಳ್ಳು ಚುಚ್ಚಿದ ಕಾಲು
ಕಿತ್ತಿಟ್ಟರೆ
ಮೆತ್ತಗೆ ಅಪ್ಪುವ ಹುಲ್ ಹಾಸು
ಕಂಬಳಿ ಹುಳು ತಾಗಿ
ತುರಿಸುತ್ತ ನಡೆವಾಗ
ಹೂವಿಂದ ಹೂವಿಗೆ
ಹಾರುವ ಭೃಂಗ
ನೋಡುತ್ತ
ಕಾಲ ಕಳೆದಿದ್ದು
ಗೊತ್ತಾಗುವುದೇ ಇಲ್ಲ
ಕೂಡಿದ್ದೇನು ಅಂತಲೂ ಗೊತ್ತಾಗಲಿಲ್ಲ
ಕೊಟ್ಟಿದ್ದು ಮರೆಯುವಳಿಗೆ
ಇಸಕೊಳ್ಳಲು ಮುಜುಗರ.

ವರುಷಕ್ಕೊಮ್ಮೆ ದಾಟುವ ಹೊಸ್ತಿಲು
ಎಡವುತ್ತದೆ.
ಕಣ್ಣು ತುಂಬುವಾಗ
ನೆನಪೆಲ್ಲ ಮಸುಕು.

(ಕಣ್ಣೀರೆ ಅಸ್ತ್ರವೆಂದಿದ್ದು ಇದಕ್ಕೇ ಇರಬಹುದು.)

ನಗುವಾಗ ನಕ್ಕು
ಅಳುವಾಗ ಅತ್ತಿದ್ದರೆ
ಅರ್ಧ ದಾರಿ ಮುಗಿಯಿತು
ಎಂದರು ಕವಿ
ನಗುವಾಗ ನಗಲಾಗದೆ
ಅಳುವಾಗ ಅಳಲಾಗದೆ
ಅದಲು ಬದಲಾದವರ
ದಾರಿ ಮುಗಿಯುವುದೆ
ಬರಿದೆ ಸಾಗುವುದೆ?!

ನಡೆದಷ್ಟೂ ದಾರಿ
ನಡೆದಷ್ಟೇ ದಾರಿ.
ಹೊಸ್ತಿಲು ದಾಟುತ್ತಿರುತ್ತೇನೆ.
ಎಡವಿದಾಗೆಲ್ಲ
ಒಂದು ಭಾವಸ್ರೋತ,
.....ಕವಿತ.
.....ಅನುಗ್ರಹೀತ.

[ಕಂಬನಿ ಬದುಕು.
ಕವಿತೆ ಕರವಸ್ತ್ರ.]


("ಅಳುವಾಗ ಅತ್ತು ನಗುವಾಗ ನಕ್ಕು ಮುಗಿದಿತ್ತು ಅರ್ಧ ದಾರಿ" ಮತ್ತು "ಕಂಬನಿ ಬದುಕು ಕವಿತೆ ಕರವಸ್ತ್ರ" ಇವು ಕೆ.ಎಸ್.ನ ಅವರ ಕವಿತೆಸಾಲುಗಳು.)

Tuesday, July 2, 2013

ಹೂ-ಬಲ...

ಸಂಜೆಯಿಡೀ..
ಭೋರೆಂದು ಸುರಿವ ಮಳೆಗೆ
ಗೋಣು ಬಗ್ಗಿಸಿ ನಿಂತ
ಪಾರಿಜಾತ ಮರದ
ಗೆಲ್ಲುಗಳಲ್ಲಿ ಅಲ್ಲಲ್ಲೇ
ಅರೆಬಿರಿವ ಪಾರಿಜಾತ..

ಹೂಬಿರಿವ ಸದ್ದು ಕೇಳುವುದಿಲ್ಲ,
ಕಿವಿಗೆ ಸ್ಕಾರ್ಫ್ ಬಿಗಿಯಲಾಗಿದೆ.

ಸುರಿವ ಮಳೆಯ ತಡೆದ
ಎಳೆಮೊಗ್ಗ ಎಸಳುಗಳು
ಬೆಳಗು ಮುಂಚಿನ ನಸುಗಾಳಿಗೆ
ಉದುರಿದವು ನೆಲದೊಡಲಿಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ

ಗಂಧಶಾಲಿನೀ ಬೆಳಗು
ಎಂದು ಕವಿಯ ಮೆಸೇಜು,
ದಾರಿ ಬದಿಯ ಮರದ ಕೆಳಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ
ತುಂಬುತ್ತಿರುವುದು
ಆಯುವ ಅಜ್ಜನ ಜಾಲರಿಬುಟ್ಟಿ.

ಗಿಡದಿಂದ, ನೆಲದಿಂದ,
ಬುಟ್ಟಿಯಿಂದ, ದೇವರ ಪದತಳದಿಂದ
ಮಣ್ಣು ಸೇರಿದ ಹೂವಿ-
ನ ಗಂಧ ಗಾಳಿ ಪಾಲಾದರೂ
ಭಾವಕೋಶದಿ ನಿತ್ಯ ಗಂಧಿ.

ಸುರಿಮಳೆಗೆ ಬಗ್ಗಿ ನಿಂತು
ಭರಿಸಿದ ಹೂವು
ನಸುಗಾಳಿಗೆ ಉದುರಿತು
ಎಂಬುದು
ಮಾರಲ್ ಆಫ್ ದ ಸ್ಟೋರಿ.

Tuesday, April 9, 2013

ಬಕೆಟ್ ಲಿಸ್ಟ್

ವಯಸ್ಸಾಯ್ತು
ಅಂತ ಹೇಳುವ ಕ್ಯಾಲೆಂಡರು,
ಇನ್ ಬಾಕ್ಸಲ್ಲಿ ಸ್ಮೈಲಿಗಳಿಂದಲೇ
ತುಂಬಿ ತುಳುಕಿರುವ
ಶುಭ ಸಂದೇಶಗಳು.
ಅವಳು ಕೆನ್ನೆಗಿತ್ತ ಒಂದು
ಹೆಚ್ಚುವರಿ ಮುತ್ತು
ಎಲ್ಲ ನೆನಪಿಸುತ್ತಿವೆ
ಹೌದು ವಯಸ್ಸಾಯ್ತು
ಅಷ್ಟೇನು ಹೆಚ್ಚಲ್ಲ ಅಂದ್ಕೊಂಡ್ರೂ
ವಾರ್ಷಿಕ ಪ್ಯಾಕೇಜಿನಲ್ಲಿ
ಚೆಕಪ್ ಮಾಡಿಸಬೇಕಾಗುವಷ್ಟು
ತಮಾಷಿ ಅಂದ್ರೆ
ನನ್ನ ಲಿಸ್ಟಿನ ಬಕೆಟ್ಟು ದೊಡ್ಡದಿದೆ.
ಒದೆಯೋಕ್ಕೆ ಕಸುವಿದ್ರೆ ಮಾತ್ರ
ಸುಸೂತ್ರ ಪಯಣ.
ಇಷ್ಟ್ ವರ್ಷಕ್ಕೂ ಆಸೆ ತೀರಲಿಲ್ವೆ
ಅನ್ನಕೂಡದು ನೀವು
ಈ ಬಕೆಟ್ಟಿನ ಅಳತೆ ಸಿಕ್ಕಿದ್ದು
ಹಿಂದೆ ಪೂರೈಸಿದ ಮಹದಾಸೆಗಳ
ಬಕೆಟ್ಟನ್ನು ನೋಡಿಯೇ.
ಅವತ್ತೆಂದೋ ಬರೆದ ನೆನಪು
ಅಡಿಗರ ಸಾಲು ಸಾಲುಗಳಲ್ಲೆ
ಪಸರಿಸುತ್ತಿರುವ ಬದುಕು
ಆಶೆಯೆಂಬ ತಳವೊಡೆದ ದೋಣಿ..
ಒಡೆದದ್ದು ಗೊತ್ತಿದ್ದರೆ ದೋಣಿ ಮುಳುಗುತ್ತದೆ
ಗೊತ್ತಾಗದ ಹಾಗೆ
ಹುಟ್ಟು ಹಾಕುವುದು ಕಲಿತಿದ್ದು
ಅಮ್ಮನೊಳಗೆ ಕುಡಿಯೊಡೆದಾಗಲೆ
ಇರಬೇಕು.
ಇಲ್ಲಿ ಬಂದ ಮೇಲೆ
ಬರಿದೆ ಬೆರಗು.. ಅಷ್ಟಿಷ್ಟು ಕೊರಗು.
ಇಲ್ಲ ಬೇಸರವಿಲ್ಲ.
ಮತ್ತೆ ಮೊದಲಿಂದ ಶುರು ಮಾಡೆಂದರೆ
ಅದೇ ಹೆಜ್ಜೆಗಳೇ
ಅದೇ ತಿರುವೇ
ಅದೇ ದಾರಿಯೇ.
ಎಡವದೆಯೆ ಮೈಗಾಯ ಒಡೆಯದೆಯೆ
ನಡೆಯ ಕಲಿತವರಾರು ಅಂದಂತೆ ಡೀವೀಜಿ
ಆ ಖುಶೀ, ಪೆದ್ದುತನ, ಮಂಕು, ಹಟ
ಎಡವಟ್ಟು, ಹಳವಂಡಗಳ
ಹೊರತಾಗಿ ಹೇಗಿರಲಿ ನಾನು
ಅಳುವಿನ ಜಲಪಾತವೇ ಇದ್ದರೂ
ತಡೆಯಲು ತಕ್ಕ ಬಂಡೆ ಗುಡ್ಡಗಳ
ಇತ್ತದ್ದೂ ಈ ಬದುಕೇ
ನೋಟ ಚಂದವಿದೆ
ಬೇಸರ ಮೂಡಿದರೆ ತಿರುಗಿದಲ್ಲೆಲ್ಲ
ಹೊಸನೋಟ.
ಗೋಡೆಗಳಿಲ್ಲ ತೆರೆದ ಬಾಗಿಲು
ಹೋದ ಜನ್ಮದ ಪುಣ್ಯ
ಸುತ್ತಲೂ ಆಕಾಶಚುಂಬಿ ಕಟ್ಟಡಗಳೂ ಇಲ್ಲ.
ವಿಷ್ಯ ಏನಪಾಂದ್ರೆ
ವಯಸ್ಸಾಯ್ತು
ಎಲ್ರಿಗೂ ಆಗತ್ತೆ.
ಆದರೆ ವಯಸ್ಸಿನ ಜತೆಗೆ ನನ್ನ ಬಕೆಟ್ ಲಿಸ್ಟೂ ಬೆಳೆದ್ ಬಿಟ್ಟಿದೆ.. :)