Tuesday, September 26, 2023

Long Post Alert!


"ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..."

ಬುದ್ಧಚರಣವೆಂಬ ಮಹಾಕಾವ್ಯದಾನೆಯ ಮುಟ್ಟಿನೋಡಿದ ಕುರುಡುನೋಟ.-ಸಿಂಧು

----------------------------------------

ಹೆಸರು ನೋಡಿ ಓಹ್ ಇದು ನನಗೆ ಈಗ ಸಧ್ಯಕ್ಕೆ ಬೇಡ ಅಂದುಕೊಂಡೆ. ಅದು ಮಹಾಕಾವ್ಯ ಅಂತ ವಿವರಣೆ ಓದುತ್ತಲೂ ಬಹುಶಃ ಇದು ನನಗೆ ಆಗಲಿಕ್ಕಿಲ್ಲ ಎಂಬ ಯೋಚನೆ ಬಂತು. ಎಂದಾದರೊಂದು ದಿನ ನೋಡುವ ಎಂಬ ಸಮಾಧಾನವನ್ನೂ ಕೊಟ್ಟುಕೊಂಡೆ.
ಹಾಗಂತಲೇ ಅಲ್ಲಿ ಇಲ್ಲಿ ಈ ಪುಸ್ತಕದ ಕುರಿತು ಕೆಲ ಹಿರಿಯರ ಅಭಿಪ್ರಾಯ ಲೇಖನಗಳು ಪ್ರಕಟವಾದಾಗ ಓದಿದರೂ ಮನಸ್ಸು ಓದಲೆಳಸಿರಲಿಲ್ಲ. ಇದರ ಕುರಿತು ಮಾತನಾಡಿಕೊಂಡರೂ ಗೆಳತಿ ಮಾಲಿನಿ ಈ ಪುಸ್ತಕದ ಕುರಿತು ಬರೆಯುವವರೆಗೂ ಓದುವ ಮನಸ್ಸು ಬಂದಿಲ್ಲದೆ ಇದ್ದದ್ದು ನಿಜ.
ಪುಸ್ತಕದ ಹೆಸರು ಮತ್ತು ಮಹಾಕಾವ್ಯವೆಂಬ ಪ್ರಕಾರ ಸ್ವಲ ಭಯವುಂಟು ಮಾಡಿದ್ದು ನಿಜವೇ ಆದರೂ, ಈ ಕುರಿತು ಬಂದ ಲೇಖನಗಳು ಅವುಗಳಲ್ಲಿಯ ಅಧ್ಯಯನಶೀಲತೆಯ ಗಹನತೆಯಿಂದ ಅಥವಾ ಮೇಲುಮೇಲಿನ ಕೆಲಮಾತುಗಳಿಂದ ಪುಸ್ತಕದ ತಿರುಳಿನ ಕಡೆಗೆ, ಸಂರಚನೆಯ ಕಡೆಗೆ ನನ್ನ ಮನಸ್ಸನ್ನು ಹೊರಳಿಸದೇ ಇದ್ದದ್ದೂ ಅಷ್ಟೇ ನಿಜ.

ಚಿಕ್ಕವರಿದ್ದಾಗ ಅಲ್ಲಿಲ್ಲಿ ಚೂರು ಕೇಳಿದ ಮತ್ತು ಅಮರಚಿತ್ರಕಥೆ, ಚಂದಮಾಮದಲ್ಲಿ ಓದಿದ ಜಾತಕ ಕಥೆಗಳು ಹಾಗೂ ಪಠ್ಯದಲ್ಲಿ ಒದಗಿದ ಬುದ್ಧನಷ್ಟೇ ಗೊತ್ತಿದ್ದ ನನಗೆ ಈ ಮಹಾಕಾವ್ಯವು ಬುದ್ಧನೆಂಬ ಅಗಲವಾದ ಹರಿವಿನ ಹೊಳೆಗೆ ಲೈಫ್ ಜಾಕೆಟ್ ಇರುವ ತೆಪ್ಪವಾಗಿ ಒದಗಿತು ಎಂದರೆ ಉತ್ಪ್ರೇಕ್ಷೆಯಲ್ಲ. ಸಾಮಾನ್ಯವಾಗಿ ಬುದ್ಧ ಎಂದರೆ "ಆಸೆಯೇ ದುಃಖಕ್ಕೆ ಮೂಲ, ಬುದ್ಧ ಎಂದರೆ ನಡುರಾತ್ರೆ ಹೆಂಡತಿ ಮತ್ತು ಮಗು ಮಲಗಿದ್ದಾಗ ಬದುಕಿನ ಅರ್ಥ ತಿಳಿಯಲು ಎದ್ದು ಹೋದ ರಾಜಕುಮಾರ, ಕಿಸಾಗೌತಮಿಗೆ ಸಾವು ಎಲ್ಲರಿಗೂ ಒಂದಿಲ್ಲೊಂದು ದಿನ ಬಂದೇ ಬರುವುದು ಎಂದು ಸುಲಭವಾಗಿ ಸಾಸಿವೆಯ ಮೂಲಕ ಅರ್ಥ ಮಾಡಿಸಿದವನು, ಬುದ್ಧನೆಂದರೆ ಅಂಗುಲಿಮಾಲನಿಗೆ ಬೆರಳು ಕೊಟ್ಟವನು, ಬುದ್ಧನೆಂದರೆ ಅಮ್ರಪಾಲಿಯೆಂಬ ನರ್ತಕಿಯ ಮನೆಗೂ ಬಂದ ಗುರು, ಬುದ್ಧ ಎಂದರೆ ವಿಹಾರ, ಬುದ್ಧ ಎಂದರೆ ಚೈತ್ಯ, ಬುದ್ಧ ಎಂದರೆ ನಲಂದಾ, ಬುದ್ಧ ಎಂದರೆ ಬೋಧಿ ವೃಕ್ಷ, ಬುದ್ಧ ಎಂದರೆ ರಾಜರಾಜರುಗಳನ್ನೆಲ್ಲ ಹಿಂಸೆಯಿಂದ ವಿಮುಖವಾಗಿಸಿದವನು, ಎಂದೆಲ್ಲ ಸ್ವಲ್ಪ ರಮ್ಯ ಮತ್ತು ಸ್ವಲ್ಪ ನಾವು ಸಾಧಾರಣ ಮನುಷ್ಯರಿಂದ ತುಸು ದೂರಕ್ಕೆ ಎತ್ತರಕ್ಕೆ ಇರುವ ಮಹಾನ್ ಚೇತನ ಎಂಬುದಷ್ಟು ಅರೆಬರೆಯಾಗಿ ದಕ್ಕಿದ ಬಾಲ್ಯದ ತಿಳಿವು ಒಂದೆಡೆಗಿತ್ತು. ಮುಂದೆ ಮುಂದೆ ಬೆಳೆಯುತ್ತ ಬರುವಾಗ ಬುದ್ಧನೆಂದರೆ ವೈದಿಕಶಾಹಿಯ ವಿರುದ್ಧ ಸಮಾನತೆಯ ಧರ್ಮ ಕೊಟ್ಟವನು, ಹೊಸಯುಗದ ಹರಿಕಾರ, ಬುದ್ಧನೆಂದರೆ ಗಣರಾಜ್ಯಗಳ ಹಿಂದಿನ ಪ್ರೇರಣೆ, ಬುದ್ಧನೆಂದರೆ ನಲಂದಾ ತಕ್ಷಶಿಲೆ, ಬುದ್ಧನೆಂದರೆ ರಾಹುಲ ಸಾಂಕೃತ್ಯಾಯನರ ಕಥೆಗಳ ತಿರುಳು, ಬುದ್ಧನೆಂದರೆ ಅಂಬೇಡ್ಕರ್ ರಂತಹ ಮಹಾನಾಯಕನನ್ನೆ ಧಾರ್ಮಿಕವಾಗಿಸಿದವನು, ಬುದ್ಧನೆಂದರೆ ಪೌರ್ಣಮಿಯ ಶಾಂತತೆ, ಬುದ್ಧನೆಂದರೆ ಮಂದಸ್ಮಿತ ಹೀಗೆಲ್ಲ. ಜಗತ್ತಿನ ತೊಂದರೆಗಳಿಗೆ "ಬುದ್ಧಂ ಶರಣಂ ಗಚ್ಛಾಮಿ" ಎಂಬ ಏಕೈಕ ಪರಿಹಾರ ಎಂಬ ಅತಿರಮ್ಯ ಆದರ್ಶವೆಂದು ಕಲಿತರೂ ನನ್ನ ಹಾಗಿನ ಸಾಧಾರಣ ಮನುಷ್ಯರಿಗೆ ಒಂದು ಹೆಜ್ಜೆ ದೂರದ ನಮಸ್ಕಾರಕ್ಕೆ ಯೋಗ್ಯ ಎಂಬ ಭಾವನೆ ಇತ್ತು. ಹೆಚ್ಚೆಂದರೆ ಮನೆಯಲ್ಲಿ ದೀಪದ ಬೆಳಕು ಬೀಳುವೆಡೆಯಲ್ಲಿ ಒಂದು ಬುದ್ಧನ ಮೊಗದ ಶಿಲ್ಪವಿದ್ದರೆ ಮನೆಯ ಚಂದ ಹೆಚ್ಚುತ್ತದೆ ಎಂಬ ಅಲ್ಟ್ರಾ ಮಾಡರ್ನ್ ಅಭಿರುಚಿಯೊಂದು ಸೇರಿಕೊಂಡಿತು. ಬದುಕಿನ ದಾರಿಗಳಲ್ಲಿ ಬಗ್ಗು ಬಡಿಸಿಕೊಂಡು ಅಷ್ಟಷ್ಟೇ ದೂರ ಬರುವಾಗ ಕೆಲವು ರಮ್ಯ ಕಲ್ಪನೆಗಳು ವಾಸ್ತವದ ಬಿಸಿಲಿನಲ್ಲಿ ಒಣಗುತ್ತಾ ಹೂಪಕಳೆಗಳು ಉದುರುತ್ತವೆ. ಸಹಜವಾಗಿ ನಾವು ಒಂದು ನಿಟ್ಟುಸಿರಿನೊಂದಿಗೆ ಮುಂದೆ ಹೆಜ್ಜೆ ಇಡುತ್ತೇವೆ.

ಮೂರ್ತಿ ಪೂಜೆಯನ್ನೇ ಕಟುವಾಗಿ ವಿರೋಧಿಸಿದ, ಮೂಢನಂಬಿಕೆಗಳನ್ನು ಹೆಜ್ಜೆಹೆಜ್ಜೆಗೂ ಪ್ರಶ್ನಿಸುತ್ತಾ ಹೊಸ ಆಕಾಶವನ್ನು ತೆರೆದ ಬುದ್ಧನೆಂಬ ಗುರುವಿನ ಹಲ್ಲುಗಳನ್ನು ವಜ್ರದ ಕರಂಡಕವೊಂದರಲ್ಲಿ ಇಟ್ಟು ಬುದ್ಧ ದೇವಾಲಯವೊಂದರಲ್ಲಿ ಪೂಜಿಸಲಾಗುತ್ತದೆ, ಅದಕ್ಕಾಗಿ ಅತಿ ಹೆಚ್ಚು ಪ್ರವಾಸಿಗಳು ಭೇಟಿ ಕೊಡುತ್ತಾರೆ ಎಂದು ತಿಳಿದಾಗ ನಾನು ವೈಚಾರಿಕತೆ ಎಂಬುದು ಕಡತಂದ ರಮ್ಯತೆಯಾಗಿದ್ದರೆ ಎಂಥ ಅಪಾಯ ಎಂದು ಮನಗಂಡೆ. ಇಂಥ ಹಿನ್ನೆಲೆಯಲ್ಲಿ, ಅವರ ಬಿಡಿ ಕಾವ್ಯದ ಅಭಿಮಾನಿಯೇ ಆಗಿದ್ದರೂ ನಮ್ಮ ಹೆಚ್ಚೆಸ್ವೀಯವರ ಬುದ್ಧಚರಣ ಮಹಾಕಾವ್ಯವನ್ನು ಕೈಗೆತ್ತಿಕೊಳ್ಳಲು ನನಗೆ ಅಂಥ ಉಮೇದು ಇರಲಿಲ್ಲ.

ಈ ಪುಸ್ತಕದ ಕುರಿತು ನಾವೊಂದಿಷ್ಟು ಜನ ಕಾವ್ಯಾಸಕ್ತ ಸ್ನೇಹಿತರು ಮಾತನಾಡಿಕೊಂಡಾಗ ನಮ್ಮಲ್ಲಿನ ಚೆನ್ನಾಗಿ ಕವಿತೆ ಬರೆಯುವ ಸಾಕಷ್ಟು ಕಾವ್ಯ ಓದುವ ಗೆಳೆಯರು ಆಡಿದ ಅನುತ್ಸಾಹದ ಮಾತು ಕೂಡ ಇದು ಸ್ವಲ್ಪ ನನ್ನ ತಲೆಯ ಮೇಲೆ ಹೋಗುವ ಪುಸ್ತಕ ಎಂಬ ಭಾವವನ್ನೇ ಹುಟ್ಟಿಸಿತ್ತು.
ಮಾಲಿನಿ ಬುದ್ಧಚರಣದ ಕುರಿತು ಬರೆಯಲು ಹೊರಟಾಗ ನನ್ನನ್ನು ಬಗಲಿಗೆ ಸಿಕ್ಕಿಸಿಕೊಂಡು ಬರೆದ ಪರಿಗೆ ಈ ಸೊಗಸಾದ ಮಹಾಕಾವ್ಯದ ಘಮ ನನ್ನ ಮೊಂಡು ಮೂಗಿಗೂ ಬಂದಿತು.
ರಾತ್ರಿ ರಾಣಿ ಹೂಗಳಿಗೆ ತೀಕ್ಷ್ಣ ಪರಿಮಳವಿದ್ದರೂ ನೀವು ಆ ಬಳ್ಳಿಯಲ್ಲಿ ಬಿಟ್ಟ ಹೂಗೊಂಚಲಿಗೆ ಮೂಗೊಡ್ಡಿದರೆ ಅದರ ಪರಿಮಳದ ಲೋಕ ತೆರೆಯುವುದಿಲ್ಲ. ತುಸು ದೂರದಲ್ಲಿರಬೇಕು. ಮೆಲುವಾಗಿ ಗಾಳಿ ಬೀಸಬೇಕು. ಅಷ್ಟೆ.. ಮನಸ್ಸು ಆ ಪರಿಮಳದ ನಶೆಯಲ್ಲಿ ತೇಲುತ್ತ ಹಗುರಾದ ಭಾವ ತುಂಬುತ್ತದೆ. ಈ ಬುದ್ಧಚರಣವೆಂಬ ಮಹಾಕಾವ್ಯಕ್ಕೆ ಆ ಗುಣವಿದೆ ಎಂದು ನನಗಾದ ಅನುಭವ. ಮಾಲಿನಿ ಲೇಖನವನ್ನು ಮುತ್ತುಮಾಲೆಯಾಗಿ ಪೋಣಿಸುವಾಗ ಮಧ್ಯೆ ಮಧ್ಯೆ ಬೇಕಿದ್ದ ಬಿಡುವಿನಲ್ಲಿ ನನ್ನ ಜೊತೆಗೆ ಕೆಲ ಮಾತುಕತೆ ಆಡುತ್ತಿದ್ದರು. ಮಾಲಿನಿಯ ಲೇಖನದ ಒಳನೋಟಗಳು ನನ್ನನ್ನು ಈ ಮಹಾಕಾವ್ಯದ ಮೊದಲ ಪುಟ ತೆರೆಯಲು ವಿಶ್ವಾಸ ತುಂಬಿದವು.

ಮೊದಲ ಪುಟ ಓದಿದ ಮೇಲೆ ಎಷ್ಟು ಪುಟಗಳಾದವು ಎಂದು ಎಣಿಸುವ ಪ್ರಮೇಯ ಅಥವಾ ಇದು ಮಹಾಕಾವ್ಯ, ಇದು ನನ್ನ ಅಳವಿಗೆ ಹೇಳಿದ್ದಲ್ಲ ಎಂಬ ಆತಂಕ ಬರಲೇ ಇಲ್ಲ. ಈ ಪುಸ್ತಕದ ಪುಟಪುಟಗಳಲ್ಲೂ ಭಾವಗೀತೆಗಳನ್ನೇ ಕವಿ ಕಂಡರಿಸಿಬಿಟ್ಟಿದ್ದಾರೆ.
ಸುಮ್ಮನೆ ಮೊದಲಿಗೆ ಒಂದು ಸಾಲು ನೋಡಿ
ಸಿದ್ಧಾರ್ಥನ ತಾಯಿಮಾಯಾದೇವಿಯ ಮನಸ್ಸಿನ ಕೊಳದಲ್ಲಿ ಏಳುವ ಭಾವನೆಗಳ ಅನುಭಾವದ ಅಲೆಗಳ ಕುರಿತು ಹೇಳುತ್ತಾ ಕವಿ ಬರೆಯುತ್ತಾರೆ:

"ಯಾರ ಬೆರಳೋ ಬಿಡಿಸಿವೆ ನೀರಿನಂಗಣದಿ
ಬೆಳಕಿನೆಳೆಬಟ್ಟನ್ನು| ಮೈತುಂಬ ದೀಪ ಮುಡಿಸಿರುವ
ಕಾಲ್ದೀಪವೆಂಬಂತೆ ಕಾಣುವಳು ಆ ಪುಣ್ಯವತಿ...."

ದುರಂತವೊಂದರ ಮುನ್ನುಡಿ ಬರೆಯುವಾಗಲೂ ಕವಿಯ ಕೈಯಲ್ಲಿ ಅದೇ ಮೆದುವಾದ ದನಿ. ಮಗು ಸಿದ್ದಾರ್ಥನ ತಾಯಿ ಎಳೆ ಬಾಣಂತಿ ಮಾಯಾದೇವಿ ಸಾಯುವ ಮುನ್ನಿನ ಗಳಿಗೆಗಳು ಹೀಗೆ ಸಾಲಾಗಿ ಬಂದಿವೆ. ಹರಿತವಾದ ಸಾಲೊಂದನ್ನು ಬರೆಯುವಾಗ ಕೈ ನಡುಗಿದರೂ ಸ್ಪಷ್ಟವಾಗಿ ಬರೆಯುತ್ತಾರೆ

"ಹತ್ತಿಬತ್ತಿಗೂ ಉರಿವ ದೀಪಕ್ಕೂ ನಂಟು ಕಳಚಿದ ಹಾಗೆ..." ಬಸಿರಿನ ಮೊದಲಲ್ಲಿ ಮೈತುಂಬ ದೀಪ ಹೊದ್ದ ಕಾಲ್ದೀಪದ ಉಪಮೆಯನ್ನು ನೆನಪು ಮಾಡಿಕೊಳ್ಳಿ. ಅದೇ ದೀಪದ ಉಪಮಾನ ಈಗ ಬದುಕಿನ ನಂಟು ಕಳಚುವುದಕ್ಕೂ ಬಂದಿದೆ.

"ಸುರಿಮಳೆಯ ಮುಸುಕಲ್ಲಿ ಬರಸಿಡಿಲು ಕಾಯುತಿದೆ
ಹಸಿಮರವ ನೋಡುತ್ತ ಮಸೆದಲಗು ಕಣ್ಣಲ್ಲಿ"

ಸಿಡಿಲಿನ ಮಸೆದಿಟ್ಟ ಕಣ್ಣಿನಲಗು ಹಸಿಯಾದ ಮರವನ್ನೆ ನಿಟ್ಟಿಸುವ ಈ ಸಾಲಿನ ಚಿತ್ರಕ ಶಕ್ತಿಗೆ ನಾನು ಮನಸೋತೆ.

ಸಿದ್ಧಾರ್ಥ ಯಶೋಧರೆಯ ನೋಡಿದ ಮೊದಲ ಕ್ಷಣವನ್ನು ಚಿತ್ರಿಸುವಾಗ ಬರೆಯುತ್ತಾರೆ.

"ನೀಲಿ ನೆಲದಲ್ಲಿ ಲೀನವಾಯಿತೆ?
ಎಲರು ಮಲರ ಗಲ್ಲವ ಮೆಲ್ಲ
ಗಲುಗಿಸಿತೆ ಮುಟ್ಟಿ ಮುಟ್ಟದ ಹಾಗೆ ಹಗುರವಾಗಿ?"

ಆಕಾಶ ಭುವಿಯೊಡನೆ ಸೇರಿದ ಗಂಡು ಹೆಣ್ಣಿನ ಹಲವಾರು ಚಿತ್ರಣಗಳು ನಮ್ಮ ಕವಿತೆ, ಹಾಡುಗಳಲ್ಲಿವೆ. ಇದು ಹೊಸದಾಗಿ ಚಿಕ್ಕದಾಗಿ ಚೆಲುವಾಗಿ ಹಿಡಿದ ಸಾಲು. ನೀಲಿಯು ನೆಲದಲ್ಲಿ ಲೀನವಾಯಿತೆ ಅಥವಾ ಗಾಳಿಯ ಅಲೆ ಪರಿಮಳದ ಗಲ್ಲವನ್ನ ಮೆಲ್ಲಗೆ ಮುಟ್ಟಿಯೂ ಮುಟ್ಟದ ಹಾಗೆ ಮೆಲ್ಲಗೆ ಅಲುಗಿಸಿತು ಅಷ್ಟೆಯೇ? ಇದನ್ನು ಸಿದ್ಧಾರ್ಥನೇ ಬಲ್ಲ.

ಯಾವುದು ನಿಜವೋ ಯಾವುದು ಕಣ್ಣಿಗೆ ಕಾಣಲು ನಿಜವೋ, ಅದು ಅಷ್ಟೇಯೇ ಅಲ್ಲದೆ ಆಳದಲ್ಲಿ ಅದರ ವಿರುದ್ಧ ಅರ್ಥವೂ ಇದ್ದಿರಬಹುದು ಎಂಬ ಹುದುಗಿಸಿದ ಅರ್ಥವಿರುವ ಸಾಲುಗಳು ಈ ಕಾವ್ಯದ ಉದ್ದಕ್ಕೂ ಚೆಲುವಾದ ಬಣ್ಣ ಬಣ್ಣದ ಹೊಸಹೊಸದಾದ ರೆಕ್ಕೆಗಳಲ್ಲಿ ಪಟಪಟಿಸುವ ಭೃಂಗದ ಹಾಗೆ ಸಾಕಷ್ಟು ಇವೆ.

ಇದೊಂತರ ಒಡಪು ಎಂದುಕೊಂಡರೆ ಒಡಪು. ಅದಿಲ್ಲವೋ ಹಾಗೆಯೇ ಮೇಲಿನಿಂದ ಸವರಲು ಬಲು ಚೆಲುವಾದ ಚಿತ್ತಾರ. ಚಿಟ್ಟೆಯ ಪಟಪಟಿಸುವ ಬಣ್ಣದ ರೆಕ್ಕೆ, ಸ್ವತಂತ್ರ ಹಾರಾಟ ಎಷ್ಟು ನಿಜವೋ ಅಷ್ಟೇ ನಿಜ ನೋಡಲು ಮುಟ್ಟಲು ಅಸಹ್ಯವಾದ ಕಂಬಳಿ ಹುಳು ಮತ್ತು ಕೋಶದೊಳಗೆ ಬಂಧಿಯಾದ ಪ್ಯೂಪಾ.

ಸಿದ್ಧಾರ್ಥ ಹುಟ್ಟಿದಾಗ ನೋಡಬಂದ ಹಿರಿಯಋಷಿ ಭವಿಷ್ಯ ನುಡಿದಿರುತ್ತಾರೆ. ಈ ಮಗು ಮುಂದೆ ಲೋಕದ ಅಳಲಿಗೆ ಅರ್ಥ ಹುಡುಕಿಕೊಡುವ, ನೆಮ್ಮದಿಗೆ ದಾರಿ ತೋರುವ ಸಂನ್ಯಾಸಿಯಾಗುತ್ತಾನೆ ಎಂದು. ಆ ಆತಂಕದಲಿ ತಾಯ್ತಂದೆಯರು ಹೊರಗಿನ ಕಾವು ತಟ್ಟದ ಹಾಗೆ ಮಗನನ್ನು ಬೆಳೆಸಿ, ಎಳೆ ಯವ್ವನದಲ್ಲೆ ಅವನೇ ಮೆಚ್ಚಿದ ಯಶೋಧರೆಯೊಡನೆ ಮದುವೆ ಮಾಡಿ ಆ ಎಳೆ ಜೋಡಿಗಳನ್ನು ನೋಡುತ್ತ ನಿಟ್ಟುಸಿರು ಬಿಡುತ್ತಾರೆ. ಆದರೆ ಲೋಕದ ಅವಶ್ಯಕತೆ ಬೇರೆಯದೇ ಇದೆ. ಮಳೆಗಾಲ ಮತ್ತು ಬೆಳೆಗಾಲ ಮುಗಿಯುತ್ತಲೆ ಚಳಿಗಾಲ ಕಾಲಿಡಲೇಬೇಕಲ್ಲ. ಎಲೆಯುದುರಲೇಬೇಕಲ್ಲ. ಎಂಥ ಕಟ್ಟೆಚ್ಚರದ ನಡುವೆಯೂ ಪ್ರಕೃತಿಯ ಚಕ್ರ ತಿರುಗುವ ಅರಿವನ್ನ ಗಮನಿಸುವ ಜೀವದ ಹಕ್ಕಿಗೆ ದೊಡ್ಡ ಬಯಲೂ ಪಂಜರವೇ. ಸಿದ್ದಾರ್ಥನ ಮನದ ತಳಮಳವನ್ನ ಕವಿ ಕಣ್ಕಟ್ಟುವಂತೆ ಚಿತ್ರಿಸಿದ್ದಾರೆ. ಅಂಥ ಒಂದು ಚಿತ್ರಣ ಇಲ್ಲಿದೆ.

"ಮರಗಳಡಿ ಹುಲ್ಲು ಅದುರುತ್ತಿರಲು,
ಸಣ್ಣ ಗಾಳಿಯ ನೆಪಕೆ ಕಾಯುತ್ತಿದ್ದಂತೆ
ಹಣ್ಣೆಲೆಗಳುದುರುತ್ತಾವೆ ತಲೆ ಮೇಲೆ ಮಳೆಯಂತೆ!"
"ಹಸಿರೆಲೆಗಳಿಂದ ಇಡಿಕಿರಿದಿದ್ದ ಅರಳಿ ಮರ
ಈಗ ನೋಡಿದರೆ ಎಲೆಯಿರದ ರೇಖಾ ಚಿತ್ರ!
"ಬಿದ್ದ ಎಲೆಗಳನ್ನೆತ್ತಬಹುದು ಕಾವಲ ಮಂದಿ
ಬೋಳು ಮರವನ್ನೆತ್ತಬಹುದೆ ಉಪವನದಿಂದ?
ಒಮ್ಮೊಮ್ಮೆ ಖುದ್ದು ತಾನೂ ಒಂದು ಮರವೆಂದು
ಭ್ರಮಿಸುವನು! ಉದುರತೊಡಗುತ್ತಾವೆ ತೋಳಿಂದ
ತಲೆಯಿಂದ ಕಣ್ಣ ರೆಪ್ಪೆಗಳಿಂದ ಒಣಗಿದೆಲೆ!

ಮರುಪುಟದಲಿ ಬರುವ

" ಅಡಕೆಯ ಮೆಣಸು ಮೈಸುತ್ತಿ ಕುಡಿಚಾಚುವಂತೆ ತುಟಿಯೊತ್ತಿ ನೀಳ್ದೋಳಿಗೆ" ಜೀವಸಖಿ ಯಶೋಧರೆ ಸಿದ್ಧಾರ್ಥನ ಜೊತೆಗಿರುವುದನ್ನು ವರ್ಣಿಸುವ ಕವಿಸಾಲು ಸಿದ್ದಾರ್ಥ ಅನುಭವಿಸುತ್ತಿರುವ ವಿವಿಧ ಭಾವಗಳಿಗೆ ರೂಪ ಕೊಡುತ್ತ ಹೋಗಿವೆ.

ತನ್ನ ನೆಮ್ಮದಿಗಾಗಿಯೇ ರೂಪಿಸಲ್ಪಟ್ಟ ಎಲ್ಲವೂ ತನ್ನ ನೆಮ್ಮದಿಯನ್ನೇ ಕದಡುವುವಾಗಿ ಬದಲಾಗುವ ವಿಷಮ ರೂಪಾಂತರವನ್ನು ಗಳಿಗೆಗಳಿಗೂ ಅನುಭವಿಸುವ ಅವನ ತೊಳಲಾಟಗಳು ಈ ಅಷ್ಟಪದಿಗಳಲ್ಲಿ ಚಿತ್ರಿಸಲ್ಪಟ್ಟಿವೆ. ವಿಶೇಷವೆಂದರೆ ಅವನ ತೊಳಲಾಟಗಳು ನಮ್ಮ ತೊಳಲಾಟಗಳಂತೆಯೇ ಭಾಸವಾಗುವ ಕಾವ್ಯಸೇತುವನ್ನ ಕವಿ ನಮಗೆ ಬುದ್ಧಚರಣದ ಮೂಲಕ ಕಟ್ಟಿಕೊಟ್ಟಿದ್ದಾರೆ.


"ಒಳಮನೆಯ ಕಥೆ ಬೇರೆ; ಹೊರಜಗಲಿ ಕಥೆ ಬೇರೆ.
ಮನೆ ಬಯಲ ನೋಡುವುದು ಕಿಟಕಿಗಳ ಕಣ್ತೆರೆದು.
ಮತ್ತೆ ಕಣ್ಮುಗಿದು ಒಳಗಲ್ಲೆ ಉಳಿಯುವ ಯತ್ನ.
ಹೊರಬಿಸಿಲು ಒಳನೆರಳಿಗೂ ಧಗೆಯ ನೀಡುವುದು.
......

ಬೇಡವೆಂದರು ಕಾಡುವುದು ಬಾಹ್ಯ ಜಗತ್ತು.
ಸುಮ್ಮನಿರಗೊಡದೆ ಒಳಗನ್ನು ಯಾವಾಗಲೂ.
...ಏಕಾಂತಕ್ಕೆ ಲೋಕಾಂತದಾವರಣ
...... ಹೊರಗ ಬಿಟ್ಟೊಳಗಿಲ್ಲ, ಒಳಗನ್ನು
ಒಳಗೊಳ್ಳದಿರುವ ಹೊರಗಿಲ್ಲ ಈ ಬದುಕಲ್ಲಿ.. "

ಬದುಕಿನ ಸತ್ಯವನ್ನು ಹೇಳುವ ರೀತಿಗಳು ಬೇರೆ ಬೇರೆ ಇರುತ್ತವೆ. ಇಲ್ಲಿ ಆ ಸತ್ಯ ಸೊಗಸಾದ ಕಾವ್ಯದ ಬಳುಕಲ್ಲಿ ಮಿಂಚುತ್ತಿದೆ. ಮನೆಯೆಂಬ ಒಳಾವರಣ ತನ್ನ ಕಿಟಕಿಗಳ ಕಣ್ಣನ್ನು ತೆರೆಯುತ್ತ ಬಯಲಿನ ಹೊರಾವರಣವನ್ನು ನೋಡುವುದಂತೆ.

ಮತ್ತೆ ಕಣ್ಮುಚ್ಚಿ, ಒಳಗಲ್ಲೆ ಉಳಿಯುವ ಪ್ರಯತ್ನ. ಒಳಗೆಲ್ಲ ತುಂಬಿದ ನೆರಳಿನಲ್ಲೂ ಹೊರಗಣ ಧಗೆ ಹಾಯ್ದೇ ಹಾಯುವುದು.

ಇಲ್ಲಿ ಸಿದ್ದಾರ್ಥನ ಬದುಕಿನ ಉದ್ದೇಶದೊಂದಿಗೆ ನಮ್ಮ ನಿತ್ಯದ ಲೌಕಿಕಗಳೂ ಬೆರೆತುಬಿಡುತ್ತವೆ. ಜೊತೆಗೆ ಒಳಗೆ ಹೊರಗನ್ನ ಸಂಭಾಳಿಸುತ್ತ ಸಾಗುವ ನಮ್ಮ ಪರಿಯೂ ಬರುತ್ತದೆ.

ಹಾಗಂತ ಈ ಯಾವುದೂ ಅರ್ಥ ಮಾಡಿಕೊಳ್ಳಲು ಕಷ್ಟವಾಗುವ ಭಾಷೆಯಲ್ಲಿ ಇಲ್ಲ, ಓದಲು ತೊಡಕಾಗುವ ರಚನೆ ಇಲ್ಲ. ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು ಎಂಬ ಸಾಲಿನ ಲಾಲಿತ್ಯ, ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಹೆಣ್ಣು ಎಂಬ ಸಾಲಿನ ರಮ್ಯವಿಷಾದ, ಅಥವಾ ಉತ್ತರಾಯಣದಲ್ಲಿ ಬರುವ ಎಲ್ಲರಿಗೂ ಊಟ ಬಡಿಸಿ ಕಡೆಯಲ್ಲಿ ಉಣ್ಣುತ್ತಿದ್ದ ನಿನಗೆ ಇಂದು ಮೊದಲು ಬಡಿಸಿದೆ ಎಂಬ ನೋವಿನ ಸೊಲ್ಲು - ಈ ರೀತಿಯಲ್ಲಿಯೇ ಈ ಮಹಾಕಾವ್ಯದ ಅಷ್ಟಪದಿಗಳು ಇವೆ. ಹೌದು ಕೆಲವೊಂದು ಕಡೆ ಸ್ವಲ್ಪ ಈಗಿನ ಆಡುನುಡಿಯಲ್ಲಿ ಅಷ್ಟಾಗಿ ಇಲ್ಲದ ಕನ್ನಡ ಪದಗಳು ಇವೆಯಾದರೂ ಆ ಪದಗಳ ಭಾವಕ್ಕೆ, ಸೊಬಗಿಗೆ, ಅದು ಅಲ್ಲಿ ಬರದೆ ಇದ್ದರೆ ಆಗುತ್ತಿದ್ದ ಅರ್ಥನಷ್ಟಕ್ಕೆ ಯಾವ ಓದುಗನೂ ಒಪ್ಪಲೇ ಬೇಕು ಹಾಗೆ ಬಂದಿವೆ.

ಇದೆಲ್ಲ ನಾನು ಬುದ್ಧಚರಣದ ಸೊಗಸನ್ನು ಎತ್ತಿ ಹಿಡಿಯಲು ಹೇಳಿದೆ. ಈ ಸೊಗಸಾದ ರಚನೆ ಮಹಾಕಾವ್ಯ ಎಂಬ ಪ್ರಕಾರದ ಹೆಸರಿನ ಭಾರದಿಂದಾಗಿ ಎತ್ತರದ ಸಾಲಿಗೆ ಸೇರಿ ನಾವು ಸಾಮಾನ್ಯ ಓದುಗರ ಕೈಗೆ ಎಟುಕದೆ ಹೋಗುವಂತಾಗದೆ ಇರಲಿ, ಕನ್ನಡ ಕವಿತೆಗಳನ್ನ ಓದಿ ಸಂತಸಪಡುವ ನಮಗೆಲ್ಲರಿಗೂ ಸವಿಯಲು ಸಿಗಲಿ ಎಂಬ ಆಶೆಯಲ್ಲಿ ಹೇಳಿದೆ.

ಇದಲ್ಲದೆ ಈ ಮಹಾಕಾವ್ಯದಲ್ಲಿ ಕವಿಯು ವರ್ತಮಾನದ ವಿಚಾರ ಘಟನೆ ವರ್ತನೆಗಳನ್ನು ಒಳಸೇರಿಸಿರುವ ಪರಿ ನನ್ನನ್ನು ಬಹುವಾಗಿ ಪ್ರಭಾವಿಸಿತು. ಎಂದೋ ಶತಮಾನಗಳಾಚೆ ಬರೆದ ಕುಮಾರವ್ಯಾಸ ಭಾರತದಲ್ಲಿ ಆಗಿನ ಕಾಲದ ಸಾಮಾಜಿಕ ಸಂಗತಿಗಳು, ಜನಜೀವನ ಹೇಗೆ ಪ್ರಭಾವ ಬೀರಿರಬಹುದು, ರಾಮಾಯಣ ದರ್ಶನಂ ನಲ್ಲಿ ಹೇಗೆ ಕುವೆಂಪು ಅವರ ಮಲೆನಾಡಿನ ಹಿನ್ನೆಲೆ, ಅಲ್ಲಿನ ಬದುಕು ಪ್ರಭಾವ ಬೀರಿ ಕಾವ್ಯದಲ್ಲಿ ಮಿಳಿತವಾಗಿದೆ ಎಂದು ಚರ್ಚಿಸುವ ನಮಗೆ ನಮ್ಮ ಕಣ್ಣೆದುರಿಗೇ ಇಂದು ಮಹಾಕಾವ್ಯವೊಂದು ಮೈದಳೆದಿದೆ. ಅದೂ ನಾವು ಓದಬಹುದಾದ ಸರಳಗನ್ನಡದಲ್ಲಿ. ಮತ್ತು ಸೊಗಸಾಗಿ ಓದಿಸಿಕೊಂಡು ಹೋಗುವಂತೆ, ಹೆಚ್ಚಿನ ವ್ಯಾಖ್ಯಾನ ಬಯಸದಂತೆ ಸಿಕ್ಕಿದೆ. ಹೀಗಿರುವಾಗ ನಮ್ಮ ವರ್ತಮಾನ, ಜನಪದ, ಜನಜೀವನವು ಈ ಕಾವ್ಯದಲ್ಲಿ ಹೇಗೆ ಮೈಗೊಂಡಿರಬಹುದು ಎಂದು ಓದುತ್ತ ಗ್ರಹಿಸಲು ಸಿಕ್ಕಿರುವುದು ನನಗೆ ಬಹಳ ಇಷ್ಟವಾಯಿತು. ಈ ಅವಕಾಶ ಅಪರೂಪವೇ. ನಾವು ಹಳೆಯ ಮಹಾಕಾವ್ಯಗಳನ್ನು ಈಗ ಓದುವಾಗ ಆ ಕುರಿತು ಬಂದ ವ್ಯಾಖ್ಯಾನಗಳೋ, ವಿಮರ್ಶೆಗಳೋ, ಲೇಖನಗಳೋ ಅವುಗಳನ್ನು ಆಧಾರವಾಗಿಟ್ಟು ಕೊಂಡು ಇದು ಹೀಗಿರಬಹುದು ಅದು ಹಾಗಿರಬಹುದು ಎಂದು ಅಂದಾಜಿಸುತ್ತೇವೆ. ಈ ಬುದ್ಧಚರಣ ಮಹಾಕಾವ್ಯದಲ್ಲಿ ಆ ರೀತಿಯ ಉಪಕರಣಗಳ ಅವಶ್ಯಕತೆ ಇಲ್ಲದೆ ಬರಿದೆ ನಮ್ಮ ಓದು ಮತ್ತು ನಮಗಿರುವ ವರ್ತಮಾನದ ತಿಳುವಳಿಕೆಗಳ ಮೂಲಕವೇ ಅದನ್ನು ಗ್ರಹಿಸಬಹುದಾಗಿದೆ.

ಈ ಕಾವ್ಯದಲ್ಲಿ ಸಿದ್ದಾರ್ಥನು ಅರಮನೆ ತ್ಯಜಿಸುವ ಮುನ್ನ ನಡೆಯುವ ಎರಡು ರಾಜ್ಯಗಳ ಮಧ್ಯದ ಬಿಕ್ಕಟ್ಟನ್ನು ಕವಿ ಗ್ರಹಿಸಿ ನಮಗಾಗಿ ಕಟ್ಟಿಕೊಟ್ಟ ರೀತಿಯನ್ನು ನೋಡಿ.

"ಈ ಇತ್ತ ಶಾಕ್ಯ; ಆ ಅತ್ತ ಕೋಲಿಯ ರಾಜ್ಯ.
ನಡುವೆ ಜುಳುಜುಳನೆ ಮುಗ್ಧತೆಯಲ್ಲಿ ರೋಹಿಣಿ.
ಕೃಷಿಯ ಕಸುಬೇ ಮುಖ್ಯ ಎರಡು ರಾಜ್ಯಗಳಲ್ಲು.
ನದಿಯ ನೀರಿನ ಹಂಚಿಕೆಗಾಗಿ ಸತ್ತೆಗಳ
ನಡುವೆ ಎಡೆಬಿಡದೆ ಪ್ರತಿ ವರ್ಷವೂ ನಡೆಯುವುದು
ಕಿತ್ತಾಟ. ದಾನಕ್ಕೆ ಕೊಟ್ಟ ದಟ್ಟಿಯ ತಮ್ಮ
ಹಿತ್ತಲಲ್ಲಳೆಯುವರು ಮಾರುಗೈ ಆಡಿಸುತ."
ನಿಮಗೆ ಪ್ರತೀವರ್ಷವೂ ನಡೆಯುವ ಚೆಕ್ ಡ್ಯಾಂ ಪ್ರಹಸನಗಳೂ, ನದೀ ತಿರುವು ಯೋಜನೆಗಳು, ಕಡತಗಳಲ್ಲಿ ಕೋಟಿಗಟ್ಟಲೆ ನುಂಗಿರುವ ಸಾವಿರಾರು ಎಕರೆ ಕೆರೆ ಪುನರುಜ್ಜೀವನ ಕಾಮಗಾರಿಗಳು ನೆನಪಾಗದೆ ಇದ್ದರೆ ಕೇಳಿ.

ಇಲ್ಲಿ ನಾನು ಈ ಕುರಿತು ಇರುವ ಹನ್ನೊಂದು ಹನ್ನೆರಡು ಅಷ್ಟಪದಿಗಳನ್ನೂ ಬರೆಯುವುದಿಲ್ಲ. ಆದರೆ ನೀವು ಇದನ್ನು ಓದಬೇಕು. ಮೆಲುದನಿಯಲೇ ಆದರೂ ವಾಸ್ತವವನ್ನು ಸ್ಪಷ್ಟವಾಗಿ ನಿಖರವಾಗಿ ತೆರೆದಿಟ್ಟಿರುವ ಹೆಚ್ಚೆಸ್ವೀಯವರ ವರ್ತಮಾನ ಪ್ರಜ್ಞೆ ಮತ್ತು ಅದನ್ನು ಹೇಳುವ ರೀತಿಗೆ ನಾನು ಮನಸೋತಿರುವೆ. ಇಲ್ಲಿ ಕಾವ್ಯ ವರ್ತಮಾನದ ಕಹಿಯನ್ನು ತನ್ನದೇ ರೀತಿಯಲ್ಲಿ ಓದುವ ಮನಸ್ಸಿಗೆ ಔಷಧದಂತೆ ದಾಟಿಸುತ್ತದೆ.

"ಅನಿವಾರ್ಯವಾಗಿ ಆಡಳಿತ ನಡೆಸುವ ಮಂದಿ
ಉದ್ವಿಗ್ನಕಾರಿ ಹೇಳಿಕೆಯನ್ನು ನೀಡುವರು.
ರೋಹಿಣಿಯು ನಮ್ಮದೂ! ನಮ್ಮದೂ! ಎನ್ನುತ್ತ
ಹರಿವು ತಗ್ಗಿದ ನದಿಯ ಸೆರಗನ್ನು ಜಗ್ಗುತ್ತ
ಬೆತ್ತಲಾಗಿಸುತ್ತಾರೆ ಹತ್ತು ಮಂದಿಯ ನಡುವೆ."
ರೋಹಿಣಿ ಎಂಬಲ್ಲಿ ಕಾವೇರಿಯೋ, ಕೃಷ್ಣೆಯೋ, ನೇತ್ರಾವತಿಯೋ, ಎತ್ತಿನಹೊಳೆಯೋ, ಶರಾವತಿಯೋ ಹಾಕಿದರೆ ಏನೂ ವ್ಯತ್ಯಾಸವಾಗುವುದಿಲ್ಲವಷ್ಟೆ!

"ನಲುಗುವಳು ತಾಯಿ. ನದಿ ನೀರು ಕಣ್ಣೀರಾಗಿ
ಹೊತ್ತಿ ಉರಿವುದು ನೀರ್ಗಿಚ್ಚು ಉಲ್ಬಣಗೊಂಡು.
ಈ ವರ್ಷ ಕೂಡ ಮಳೆ ಕಮ್ಮಿ. ಸೋತಿದೆ ಮಾತು.
... ಭತ್ತ ಕಬ್ಬಿನ ಗದ್ದೆ ಒಣಗುವುದು. ಒಣಗಿದರೆ
ಎದೆಯ ಆರ್ದ್ರತೆ ಕೂಡ ಒಣಗುವುದು. ಕಿತ್ತಾಟ
ಶುರುವಾಗುವುದು..."

ಇದರ ಜೊತೆಜೊತೆಗೇ ಯುದ್ಧೋನ್ಮಾದ, ದ್ವೇಷ ಮತ್ತು ಕೋಪದ ಕೈಗೆ ಸಿಕ್ಕ ಅರಸೊತ್ತಿಗೆಯ ಕುರಿತು ರಾಜಕುಮಾರ ಸಿದ್ಧಾರ್ಥನಾಡುವ ಮಾತು ಒಬ್ಬರಿನ್ನೊಬ್ಬರ ಮೇಲೆ ಕೆರಳಿ ಕೆಂಡವಾಗಿರುವ ಜನಕ್ಕೆ ಸೇನಾಧಿಪತಿಗಳಿಗೆ ರುಚಿಸುವುದಿಲ್ಲ.

"ಯುದ್ಧ ಪ್ರತಿಯುದ್ಧವನ್ನು ಹುಟ್ಟಿಸುವುದರಿಯಿರಿ
ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೆ?
.. ಬಲವುಳ್ಳ ಮಂದಿ ದುರ್ಬಲರನ್ನು ಮುಗಿಸುವರು...
ಯುದ್ಧದಲಿ ಕಾದುವವರು ಯಾರು? ನವತರುಣರು.
ಬಾಳಿ ಬದುಕುವ ಕನಸ ಕಟ್ಟಿಕೊಂಡಂಥವರು.
...ಮರಣ ಮನೆಗೋಡೆಗಳ ಮಾಡುವುದು ದುರ್ಬಲ..
...ಕೋಪದಲಿ ಕೊಯ್ದ ಬೆಳೆ ಚಿಗುರಲಾರದು ಮತ್ತೆ...

ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರಿಗಳು, ರಾಜ್ಯಪ್ರಮುಖರು ಒಪ್ಪುವುದಿಲ್ಲ ಶಾಂತಿಗೆ.
ಇಂದು ನಮ್ಮ ಕಾಲದ ಮಹಾಯುದ್ಧಕ್ಕೆ ಮೂಕ ಪ್ರೇಕ್ಷಕರಾಗಿರುವ ನಮಗಲ್ಲದೆ ಇನ್ಯಾರಿಗೆ ಇದು ಹೆಚ್ಚು ಅರ್ಥವಾಗಬಹುದು?!

ಏನೆಲ್ಲ ತೊಳಲಾಟಗಳ ನಡುವೆ ತನ್ನ ಮೂಲ ಸ್ಥಾಯೀಭಾವವಾದ ವೈರಾಗ್ಯಕ್ಕೆ ಸಲ್ಲುವ ಸಿದ್ಧಾರ್ಥ ಹಲವು ಪ್ರಯತ್ನಗಳ ನಂತರ ಒಂದು ರಾತ್ರಿ ಜೀವಸಖಿಯನ್ನೂ ಅವಳ ಮಗ್ಗುಲಲ್ಲಿ ಕನಸಿನಂತೆ ಇರುವ ಎಳೆಗೂಸನ್ನೂ ಕ್ಷಣಮಾತ್ರ ನೋಡಿ ಮನಸ್ಸು ಗಟ್ಟಿಯಾಗಿಸಿ ಹೊರಟುಬಿಡುತ್ತಾನೆ. ನಿದ್ದೆಯಲ್ಲಿರುವ ಪ್ರಿಯೆಯ ಅಲುಗುವ ರೆಪ್ಪೆಯ ನೆನಪನ್ನು ಕಷ್ಟಪಟ್ಟು ಹಿಂದಕ್ಕೆ ಸರಿಸುತ್ತಾ ತನ್ನ ಪರಿಚಿತ ಲೋಕದಿಂದ ದೂರದೂರಕ್ಕೆ ಸಾಗುವ ಸಿದ್ಧಾರ್ಥ ಹಲವು ಅನುಭವಗಳ ನದಿಯ ದಾಟಿ, ಹಲವು ದರ್ಶನಗಳ ಬೆಟ್ಟ ತಪ್ಪಲು ಹಾಯುತ್ತಾನೆ. ಎಷ್ಟೆಲ್ಲ ಸಾಧನೆಗಳ ಹಾದಿಯಲ್ಲಿ ಹಾಯುವವನಿಗೆ ಅರ್ಥವಾಗುವುದೊಂದು ಸತ್ಯ. ಏನೆಲ್ಲ ಮಾಡಿದರೂ "ಮನ ನಿಲ್ಲಬೇಕು ತನುವಲ್ಲ" ಎಂಬುದನ್ನ ಕವಿ ಬಹಳ ಸೊಗಸಾಗಿ ಹೇಳುತ್ತ ರಾಜಕುವರನು ಬುದ್ಧನಾಗುವ ಹಾದಿಯ ಚಿತ್ರಣವನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಕುರಿತು ಇರುವ ಕೆಲ ಸಾಲುಗಳ ಹೈಲೈಟು ನೋಡಿ.

"ನಿಂತಲ್ಲಿಯೇ ನಿಂತು ಉರಿಯುವನು ಭಾಸ್ಕರ
ಇರುವಲ್ಲಿಯೇ ಇದ್ದು ಅಲೆಯುವುದು ಮಾನಸ" ಬಯಲಲ್ಲಿ ಕುಳಿತು ಬೆಳಗು ಸಂಜೆಗಳನ್ನ ಏಕತ್ರ ಧ್ಯಾನಿಸುವ ಸಂತನ ಅನುಭಾವದ ಮೆಟ್ಟಿಲುಗಳನ್ನ ಹತ್ತಲು ಈ ಕಾವ್ಯ ಕೈಗೋಲಾಗಿ ಒದಗುತ್ತದೆ.

"...ಒಡಲ ಕಾಳಗ ಮುಗಿದರೂನು ಒಳಮನದ
ಕಾಳಗವು ಮುಗಿದಿಲ್ಲ.."
"..ಮನೆಯ ಕಟ್ಟುವ ಮಂದಿ ಯಾರು ಎಂಬುದ ಅರಿತೆ!
ಮತ್ತೆ ಈ ಮನೆಯ ಕಟ್ಟೋಣ ಸಾಧ್ಯವೆ ಇಲ್ಲ.
ನಾಶವಾಗಿದೆ ಮನೆಯ ನಿರ್ಮಾಣ ಸಾಮಗ್ರಿ!

ಬುದ್ಧನಾಗುವ ಹಂತ ಹಂತದ ಕುರಿತ ಈ ಅಷ್ಟಪದಿಗಳು ಆಧ್ಯಾತ್ಮದ ಉತ್ತುಂಗ ಒಳನೋಟಗಳನ್ನು ಹಾಯಿಸುತ್ತ ಇವೆ. ಕೆಲವು ಪದ್ಯಗಳಂತೂ "ಕಂಡವರಿಗಷ್ಟೆ, ಕಂಡವರಿಗಲ್ಲ, ಸಿಕ್ಕವರಿಗಷ್ಟೆ, ಸಿಕ್ಕವರಿಗಲ್ಲ" ಎಂಬಂತಹ ರಚನೆಗಳು. ಮೇಲುಮೇಲಕ್ಕೆ ಕಥನದ ಓಘಕ್ಕೆ ಸೊಗಸಾಗಿ ಒದಗುತ್ತವೆ. ಆಳಕ್ಕಿಳಿದರೆ ಆ ಮಾತೇ ಬೇರೆ.

ಬುದ್ಧನಾದ ನಂತರ ತನಗೆ ಒದಗಿದ ಜ್ಞಾನೋದಯವನ್ನ ಲೋಕಕ್ಕೆ ಹಂಚುವ ಬುದ್ಧನನ್ನ ಕವಿ ವರ್ಣಿಸುವ ಪರಿ ನೋಡಿ.
"ತೆರಳಿದ್ದ ಬತ್ತಿ, ಮರಳಿದೆ ಸ್ವಚ್ಛ ಬೆಳಕಾಗಿ.." ಇದಕ್ಕಿಂತ ಸರಳವಾಗಿ ಸೊಗಸಾಗಿ ಹೇಳಬಹುದೆ ಪರಿವರ್ತನೆಯನ್ನ?!

ಕಪಿಲವಸ್ತುವಿಗೆ ಬಂದ ಬುದ್ಧಗುರುವನ್ನು ನೋಡಲು ಹೊರಟ ಯಶೋಧರೆಯ ಮನದ ವಿಪ್ಲವಗಳಂತೂ ವಿಷಾದಭರಿತ ಭಾವಗೀತಗಳ ಧಾರೆಯಾಗಿವೆ ಕವಿಯ ಕೈಯಲ್ಲಿ.

"..ಅಲೆಗಳ ವಿಪ್ಲವ. ಮಧ್ಯೆ ಮುಗಿದ ತಾವರೆ ಮೊಗ್ಗು.
ಕಂಬನಿಗಳ ಕೊಳದಲ್ಲಿ ಸ್ತಬ್ಧ ದೋಣಿಯ ಕಣ್ಣು..."
ಬುದ್ಧ ಮತ್ತು ಯಶೋಧರೆಯ ಭೇಟಿ ಓದುವವರ ಮನವನ್ನು ಮಿಡಿಸುತ್ತದೆ.


"ಕಣ್ಣೆತ್ತಿ ನೋಡುವಳು..
ಮೀನು ಕಲಕಿದೆ ಕೊಳವ. ಅಲೆಯು ಮೆಲ್ಲಗೆ ಬಂದು
ತಾಗುತಿದೆ ದಂಡೆಯನು.
...ಎಲ್ಲ ಸುಖದಲು ಜತೆಯಲ್ಲೆ ಇದ್ದವನು ಮುಕ್ತಿ ಸುಖದಲಿ ಅಗಲಿದೆಯೇಕೆ..."

ಎಂಬ ದುಃಖದ ಪ್ರಶ್ನೆಗೆ ಬುದ್ಧ ಉತ್ತರಿಸುತ್ತಾನೆ....


ಮನೆಯಲ್ಲೆ ನಿಂತ ತಾಪಸಿ ನೀನು.
ಬೆಳಕನರಸುತ ನಾನು ತೊರೆದೆನೀ ಮನೆಯನ್ನ.
ನೀನು ನಂದಾದೀಪ ಆದೆ ಈ ಮನೆಯಲ್ಲೆ...!

ಇದಕ್ಕಿಂತ ಮಿಗಿಲಾದ ಉತ್ತರವ ಬಯಸದ ಆ ಹೆಣ್ಣುಜೀವ ಬುದ್ಧಚರಣಕ್ಕೆ ಶರಣಾಗುತ್ತದೆ.

ಬುದ್ಧನ ಬೋಧನೆಗಳು ಈ ಕಾವ್ಯದಲ್ಲಿ ಉಪನ್ಯಾಸಗಳ ಸಾಲುಗಳಾಗಿ ಬಂದಿಲ್ಲ. ಜೀವನಾನುಭವದ ಇಂಕಿನಲ್ಲಿ ಅದ್ದಿ ತೆಗೆದ, ಯಾರಿಗೂ ಅರ್ಥವಾಗಬಹುದಾದ ಸೊಗಸಾದ ಕವಿತೆ ಸೊಲ್ಲುಗಳಾಗಿ ಬಂದಿವೆ.

"ಬುದ್ಧ ನಿರ್ವಾಣ ಮಾರ್ಗಕ್ಕೆ ಕೈಮರ ಮಾತ್ರ.
ನಡೆಯುವುದು ನೀವೆ; ನೋಡುವುದು ನಿಮ್ಮದೆ ನೇತ್ರ."
"ಗಾಳಿಯಲಿ ಕರಗುವುದು ಅಗರುಬತ್ತಿಯ ಧೂಪ
ಬಯಲಲ್ಲಿ ಏನನೋ ಬರೆಯುತ್ತ ಇರುವಂತೆ;
ಬರೆದದ್ದ ಕೈಯಾರೆ ಅಳಿಸುತ್ತ ಇರುವಂತೆ."
"ಇದ್ದಷ್ಟು ದಿನ ನಾವು
ಬದುಕೋಣ ನಮ್ಮಂತೆ ಇರುವ ಮಂದಿಯ ನಂಬಿ.
ನಮ್ಮಂತೆಯೇ ಕಣ್ಣು ಕಣ್ಣೀರ ಉಳ್ಳವರು
ನೋಡೋಣ ಹೇಗೆ ಕೆಂಗಣ್ಣರಾಗುವರೆಂದು."

ಬುದ್ಧನ ಈ ಮಾತಿನ ಮುಂದಿನ ಸಾಲಲ್ಲಿಯೇ ಸೇರಿಸುತ್ತಾರೆ ಕವಿ

ಕೇಳಲಿಕ್ಕೇನೋ ಹಿತ, ಆಚರಣೆಗಿದು ಕಷ್ಟ.

ಬುದ್ಧನ ಪ್ರಿಯ ಶಿಷ್ಯ ಆನಂದನೊಡನೆ ಬುದ್ಧನ ಮಾತನ್ನ ಕವಿ ಕಂಡರಿಸುವ ಪರಿ ನೋಡಿ.

ಆನಂದ ಹೇಳುತ್ತಾನೆ; ಭಂತೆ,
ನಿನ್ನೆದುರು ನಾನೇನು ನುಡಿದೇನು? ಕಡಲೆದುರು ನಿಂತ ಬೊಗಸೆಯ ಚಿಪ್ಪು."
ಬುದ್ಧ ನುಡಿಯುತ್ತಾನೆ. "ಚಿಪ್ಪಲ್ಲೆ ಮುತ್ತುಂಟು!" ಇದು ಬುದ್ಧನ ವಿಧಾನ.
"ಇರುಳ ಚೆಲುವೆಗೆ ತೆಗೆದ ನೇರ ಬೈತಲೆಯಂತೆ ಬುದ್ಧನ ನುಡಿ.
ನೆಮ್ಮದಿಯ ಸಂಚಾರ ಮನದೊಳಗೆ."
"ನೆರಳು ಬಿಸಿಲಿನ ನಂಟು, ಬಿಡಿಸಲಾಗದ ಗಂಟು.
ಬಿಸಿಲಿರದೆ ನೆರಳಿಲ್ಲ.!.." ಬದುಕಿನ ಏರುಪೇರನ್ನು ಸೈರಿಸುವ ವಿಧಾನಗಳನ್ನು ಕವಿ ಬುದ್ಧನ ಮೂಲಕ ಹೇಳಿಸುತ್ತಿರುವರು.

ಊರಿಂದ ಊರಿಗೆ ತಿರುಗುವ ಬುದ್ಧಗುರು, ದಾರಿಯಲ್ಲೇ ನಡಿಗೆಯಲ್ಲೇ ಪಯಣದಲ್ಲೇ ಬದುಕಿನ ಸತ್ಯವನ್ನು ಜೊತೆಗಾರರಿಗೆ ಮನನ ಮಾಡಿಸುವ ರೀತಿ ಹೆಚ್ಚೆಸ್ವೀಯವರ ನುರಿತ ಭಾಷೆಯಲ್ಲಿ

ಬಿಸಿಲಹಾದಿಯಲ್ಲಿ ಕುಡಿಯಲು ಸಿಗುವ ಮಜ್ಜಿಗೆಯಂತೆ ತಂಪೊದಗಿಸುತ್ತದೆ.
"ಬಿಸಿಲ ಹೂ ನೆರಳಿನಲ್ಲಿ ಚದುರಿಬಿದ್ದಂತೆ ಕಾಣುತ್ತ ಇದೆ.
..ಈಗ ಇದೆ, ಮರುಗಳಿಗೆ ಇರುವುದೆನುವಂತಿಲ್ಲ.
ಇರುವಾಗ ನೋಡು. ಇರದಿರುವಾಗ ಹಲುಬದಿರು.."


ಕೊನೆಯ ಪಯಣವೊಂದರ ಚಿತ್ರಣವನ್ನೇ ನೋಡಿ.

"ಹೊತ್ತಿನ್ನು ಮೂಡಿಲ್ಲ. ಸುರಿಯುತಿದೆ ಹುಡಿಮಂಜು.
ಇಬ್ಬನಿಯ ಹೊದ್ದ ಕಾಷಾಯ ಪಡೆ ನಡೆಯುತಿದೆ.
ಮಾತಿರದ ಮೌನದಲಿ ಜಪಮಣಿಯನೆಣಿಸುತ್ತ.
ಮುಂದೆ ಗುರು, ನುಣ್ಣನೆಯ ಊರುಗೋಲೂರುತ್ತ."

ಈ ಚಿತ್ರ ಕಣ್ಣ ಮುಂದೆ ಸ್ಪಷ್ಟವಾಗಿ ಮೂಡದಿದ್ದರೆ ಕೇಳಿ.

ಹುಟ್ಟಿದ ವೈಶಾಖ ಪೂರ್ಣಿಮೆಯಂದೆ ಅಸ್ತಮಿಸಿದ ಬುದ್ಧನ ನಿರ್ವಾಣ ಕ್ಷಣ ಕವಿಯ ಸಾಲಿನಲ್ಲಿ ಹೀಗೆ ಮೈದೋರಿದೆ.

"ಚಂದ್ರ ಮುಳುಗುತ್ತಾನೆ ತನ್ನ ಬೆಳ್ದಿಂಗಳಿನಲಿ ತಾನು."
"ದೀಪ ನಂದಿತು ದೀಪದಲ್ಲಿ, ಮುಳುಗಿತು ನೀರು ನೀರಲ್ಲಿ"
ತೊಂಗಲಲಿ ತೂಗುತಿದೆ ಬಣ್ಣದಿರುಗಿದ ಹಣ್ಣು ಎಂಬ ಸಾಲಲ್ಲಿ ಸಾವಿನ ಸಹಜತೆ, ಪ್ರಕೃತಿಯ ಚಕ್ರ ಎಲ್ಲವೂ ಆಪ್ತವಾಗಿ ಮೂಡಿವೆ.


ಇಡೀ ಕೃತಿಯಲ್ಲಿ ಕವಿಯ ಆಶಯವಾದ ಮಧ್ಯಮಮಾರ್ಗ ಬುದ್ಧಬೋಧನೆಯಾದ ಮಧ್ಯಮಮಾರ್ಗ ಎರಡೂ ಮಿಳಿತವಾಗಿ ಬುದ್ಧ ಕಥನವಾಗಿ ಹರಿದಿದೆ.
ಬರುವುದೆಲ್ಲಾ ಬರಲಿ, ಹೋಗಲಿ ಹರಿದು,
ಇರುವೆ ನಾನಿರುವಂತೆ.
ಇರಲಿ ಸಮಶ್ರುತಿ, ಸ್ವಸ್ಥ ಚಿತ್ತ.
ನೆಲೆಸಿರಲೆದೆಯಲ್ಲಿ ಸ್ವಸ್ತಿ... ಎಂಬ ಆರಂಭಕಾಂಡದ ಸಾಲುಗಳು ಈ ಇಡೀ ಮಹಾಕಾವ್ಯದ ಅಂತಃಸ್ರೋತವಾಗಿ ಹರಿದಿವೆ.

ಅಗಲಿಕೆಯ ಶೋಕಸಾಗರವನ್ನು ದಾಟುವ ಜ್ಞಾನವ ಗಳಿಸಿದ ಬುದ್ಧನ ದಾರಿಯೇ ಕವಿಗೆ ತನ್ನ ಬದುಕಿನಲ್ಲಿ ಅನುಭವಿಸಿದ ಅಗಲಿಕೆಯ ಶೋಕದ ಹರಿವನ್ನು ದಾಟಲು ಸರಿಯಾದ ಆಯ್ಕೆ ಎಂದು ಶುರುವಾಗುವ ಮಹಾಕಾವ್ಯ, ಈ ಆಯ್ಕೆ ಬರಿದೆ ಕವಿಯ ವೈಯಕ್ತಿಕಕ್ಕಷ್ಟೆ ಅಲ್ಲ ಸಮಸ್ತರಿಗೂ ಅನ್ವಯಿಸುವುದು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ರಚಿಸಿರುವ ಚಿತ್ರಕ ಸಾಲುಗಳ ಅಷ್ಟಪದಿಯ ಮೂಲಕ ಮತ್ತೆ ಮತ್ತೆ ಮನದಟ್ಟಾಗುತ್ತದೆ.

ಈ ೩೦೦ ಪುಟಗಳ ಪುಸ್ತಕದಲ್ಲಿ ಅಲ್ಲಿಲ್ಲಿ ಬಹಳ ಅಪರೂಪಕ್ಕೆ ಪಿಟಕಗಳ ಕೆಲವು ಶ್ಲೋಕಗಳು ಬರುವಲ್ಲಿ, ಈ ಶ್ಲೋಕಗಳ ಭಾವಾರ್ಥ ಅಥವ ವಾಚ್ಯಾರ್ಥವನ್ನು ಟಿಪ್ಪಣಿಯಾಗಿ ಕೊಟ್ಟಿದ್ದರೆ ಚೆನ್ನಿತ್ತು ಎನಿಸಿತು. ಅಲ್ಲದೆ ನಾವು ಇಂದಿನ ಕನ್ನಡದವರು ಬಳಸದೇ ಇರುವ ಹಲವಾರು ಕನ್ನಡಪದಗಳು ಹೊಸ ಪೀಳಿಗೆಗೆ ಎಷ್ಟು ದಕ್ಕೀತು ಎಂದು ಹೇಳಲು ನನಗೆ ಗೊತ್ತಾಗುವುದಿಲ್ಲ. ಹಾಗಾಗಿ ಕೆಲವು ಅಪರೂಪದ ಪದಗಳ ಕೈಪಿಡಿಯೊಂದು ಪುಸ್ತಕದಲ್ಲೇ ಅಡಿಟಿಪ್ಪಣಿಗ್ಯಾಗಿದ್ದರೆ ಒಳ್ಳೆಯದು. ಹಾಗಂತ ಈ ಬಗೆಯವು ತುಂಬ ಇಲ್ಲ. ಬಹಳ ಅಪರೂಪಕ್ಕೆ ಇವೆ. ಉಳಿದ ಎಲ್ಲವೂ ನಮ್ಮ ಆಡುಭಾಷೆಯನ್ನೆ ಕುಸುರಿಕೆತ್ತಿ ಕಾವ್ಯಕ್ಕೆ ಒಗ್ಗಿಸಿದ್ದಾರೆ.

ಈ ಕಾವ್ಯವನ್ನು ಓದುವಾಗ ನನಗೆ ಇನ್ನೊಂದು ಅನುಭವವಾಯಿತು. ಕೆ.ಎಸ್.ನರಸಿಂಹಸ್ವಾಮಿಯವರ ಕಾವ್ಯವೆಂದರೆ ನನಗೆ ತುಂಬ ಇಷ್ಟ. ನರಸಿಂಹಸ್ವಾಮಿಯವರೇ ಈ ಕವಿತೆಗಳನ್ನು ಬರೆದಿರಬಹುದೆ ಎಂಬಂತಹ ಲಾಲಿತ್ಯ, ನಿಖರವಾಗಿದ್ದನ್ನು ಮೆತ್ತಗೆ ಹೇಳುವ ಮೆದು ದನಿ, ವಿಷಯ ಹೀಗಿದೆ ಎಂದು ಕಥನಕ್ಕೆಳೆಸುವ ಚಿತ್ರಕ ಶಕ್ತಿ ಈ ಕಾವ್ಯ ಓದುತ್ತ ಅನುಭವಿಸಿ ಬೇರೆಯದೇ ಲೋಕಕ್ಕೆ ಹೋಗಿಬಿಟ್ಟೆ.

ಈ ಮಹಾಕಾವ್ಯವನ್ನು ನಮಗೆ ಓದುಗರಿಗೆ ರಸಧಾರೆಯಾಗಿ ಸೃಷ್ಟಿಸಿ ಕೊಟ್ಟ ಕವಿ ಶ್ರೀ ಹೆಚ್.ಎಸ್.ವೆಂಕಟೇಶ್ ಮೂರ್ತಿಯವರಿಗೆ ನನ್ನ ನಮನಗಳು. ಬುದ್ಧಚರಣವೆಂಬ ಮಹಾಕಾವ್ಯದ ಆನೆಯನ್ನ ಮುಟ್ಟಿ ನೋಡಿದ ನನ್ನ ಕುರುಡುನೋಟವನ್ನು ಇಲ್ಲಿ ಹಂಚಿಕೊಂಡಿದ್ದೇನೆ ಅಷ್ಟೆ.

ಬುದ್ಧಚರಣ ಸ್ಪಂದನ ಪುಸ್ತಕಕ್ಕೆ ಬರೆದ ಲೇಖನ. (2023)

 ಹಳೆಯ ಹಾಡು

Inspired by WB Yeats' Old song

ಪ್ರೀತಿಸದಿರು ಬಹುಕಾಲ

ಸದಾ ಪ್ರೀತಿಸಿದ ನಾನೀಗ

ಮೂಲೆಗುಂಪಾದ

ಮರೆವೆಗೆ ಸಂದ ಹಳೆ ಹಾಡಿನ ರಾಗ


ಕಳೆದ ತಾರುಣ್ಯದ ವರುಷಗಳಲಿ

ಅನ್ಯನಾಗದೆ ಭಿನ್ನತೆ ಇಲ್ಲದೆ

ಬೇರ್ಪಡಿಸಲಾಗದ ಏಕೋಭಾವದಿ

ಇಹೆವೆಂದು ನಾನು ನಂಬಿದೆ


ಓ ಓ..ಚಣಮಾತ್ರದಲಿ ಸರಿದಳು ಅವಳು

ಓ ಪ್ರೀತಿಸದಿರು ಬಹು ಕಾಲ

ಹಾಗೆ ಪ್ರೀತಿಸಿದೆಯಾದರೆ

ಆಗಿಬಿಡುವೆ ನೀನೂ

ಮೂಲೆಗುಂಪಾಗದ

ಮರೆವೆಗೆ ಸಂದ ಹಾಡಿನ ರಾಗ..


ಗೆಜ್ಜೆ


ಕಂದರ ಪಾದದಿ ನಲಿಯುವ ಗೆಜ್ಜೆ,
ಕುಣಿಯುವ ಕಾಲಲಿ ಉಲಿಯುವ ಗೆಜ್ಜೆ,
ಎಳೆಯುವತಿಯ ಪಾದದಿ ಬಿಂಕದ ಗೆಜ್ಜೆ,
ಕಟೆದ ಶಿಲ್ಪಗಳ ಕುಸುರಿಯ ಗೆಜ್ಜೆ,
ಜಾತ್ರೆಯಲಿರುವ ಹೊಸಹೊಸ ಗೆಜ್ಜೆ.

ಸಿಂಗಾರದ ಗೆಜ್ಜೆ, ಶೃಂಗಾರದ ಗೆಜ್ಜೆ,

ಹೆಜ್ಜೆಯ ಜೊತೆಗೆ ಸಡಗರದ ಗೆಜ್ಜೆ.

ಅಜ್ಜ ಕೊಡಿಸಿದ ಗೆಜ್ಜೆ,

ಮಾವನಿಡಿಸಿದ ಗೆಜ್ಜೆ

ಅಮ್ಮ ಸಂಪಾದಿಸಿದ ಗೆಜ್ಜೆ,

ಹಬ್ಬದ ಗೆಜ್ಜೆ,

ಮದುವೆಯ ಗೆಜ್ಜೆ,

ಗೆಣೆಕಾರ ಕೊಡಿಸಿದ ಗೆಜ್ಜೆ,

ವಿಧವಿಧಗಳ ನೋಡುತ

ಮನವಿಡುವುದು ಹಳೆಹಾದಿಗೆ ಹೆಜ್ಜೆ.


ಮೊನ್ನೆ ನೋಡಿದೆನೊಂದು

ಅಪರೂಪದ ಗೆಜ್ಜೆ!

ದ್ವಿಚಕ್ರವಾಹನದಿ ಅವಡುಗಚ್ಚಿ

ನಮ್ಮ ವಾಹನದೋಟಕೆ ಸಮನಾಗಿ
ಓಡಿಸುತಿಹ 
ತಾಯಿಯೋರ್ವಳ ತಾಯಿಯೋರ್ವಳ
ಮರಗಾಲನು 
ಬಳಸಿ ಕುಳಿತಿಹ ಗೆಜ್ಜೆ!


ಸದ್ದು ಮಾಡದೆಯೂ ದನಿಯಾಗುವ ಗೆಜ್ಜೆ

ವಿಶ್ವಾಸದ ತೊರೆಗೆ ಹನಿಯಾಗುವ ಗೆಜ್ಜೆ.

ಜೀವಂತ ಕಾವ್ಯದ ಬನಿಸಾಲು ಗೆಜ್ಜೆ.


 ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಬರಹ ಸಂಪುಟಗಳ ಬಿಡುಗಡೆ

8 January 2023 ಯಂದು ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಸಾಹಿತ್ಯ ಬಿಡುಗಡೆ ಮೈಸೂರಿನಲ್ಲಿ ಆದಾಗ ಅವರ ಸಾಹಿತ್ಯ(ವಿಶೇಷವಾಗಿ ಕವಿತೆಗಳು) ಕುರಿತು ನನ್ನ ಮಾತು.

ಹಿರಿಯ ಕವಿ, ವಿಮರ್ಶಕರರಾದ ಮತ್ತು ಆತ್ಮೀಯರಾದ ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಬರಹಗಳ ಸಂಪುಟ ಪ್ರಕಟವಾಗುತ್ತಿರುವುದು ಗೊತ್ತಾಗಿ ಬಹಳ ಸಂತೋಷ, ಸಂಭ್ರಮ ಆಯಿತು. ಆ ಸಂಪುಟಗಳ ಬಿಡುಗಡೆಯಲ್ಲಿ ನನಗೆ ಮಾತನಾಡಬೇಕು ಅಂತ ಕರೆದಾಗ ಸ್ವಲ್ಪ ತಲೆ ಗಿಮ್ಮೆಂದಿತು. ಎಲ್ಲೂ ಅಷ್ಟಾಗಿ ಹೋಗದ ನನಗೆ, ಗುರುಸಮಾನರಾದ ಹಿರಿಯರಾದ ಚೊಕ್ಕಾಡಿಯವರ ಮಾತಿಗೆ ಇಲ್ಲವೆನ್ನದೆ ಒಪ್ಪಿದೆ. ನನ್ನ ಓದಿಗೆ ದಕ್ಕಿದಷ್ಟು ಚೊಕ್ಕಾಡಿಯವರ ಕಾವ್ಯ, ವಿಮರ್ಶೆ, ಮತ್ತು ಕಥೆಗಳ ಕುರಿತು ಕೆಲವು ಅಭಿಪ್ರಾಯಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತೇನೆ. ನಾನು ಅಕಡೆಮಿಕೆ ಆಗಿ ಸಾಹಿತ್ಯಾಭ್ಯಾಸ ಮಾಡಿಲ್ಲ. ಓದುಪ್ರೀತಿಯಿಂದ ನನಗೆ ಸಿಕ್ಕಷ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಮೊದೂಲಿಗೆ ಚೊಕ್ಕಾಡಿಯವರ ಹತ್ತಿರದ ಪರಿಚಯವಾದ ಹೊಸದು. ಅದೊಂದು ಸಾಹಿತ್ಯ ಪ್ರೀತಿಯ ಗೆಳೆಯರೆಲ್ಲ ಸೇರಿದ್ದ ಗಳಾಸು ಸಂಜೆ. ಅವರು ನನ್ನ ಆಸಕ್ತಿಯ ಕವಿ,ಸಾಹಿತ್ಯ ಇತ್ಯಾದಿಯಾಗಿ ವಿಚಾರಿಸಿದರು.

ಇವರು ಮುನಿಸು ತರವೇ, ದಿನ ಹೀಗೆ ಜಾರಿ ಹೋಗಿದೆ ಮುಂತಾದ ಬಹಳ ಇಷ್ಟವಾದ ಭಾವಗೀತೆಗಳ ಕವಿ, ಮತ್ತು ಹಿರಿಯರು ಎಂಬ ಗೌರವಭರಿತ ಸಂಕೋಚದಲ್ಲಿ ನಾನು ಮಾತಾಡುವುದೋ ಬೇಡವೋ ಅಂತ ಮಾತಾಡುತ್ತಿದ್ದೆ.

ಆಗ ಅವರು ಇದ್ದಕ್ಕಿದ್ದಂತೆ ಒಂದು ಕಥೆ ಹೇಳಿದರು. ನೋಡಿ ಒಬ್ಬ ಅಜ್ಜ ಅಥವಾ ಅಪ್ಪ ಮಗುವನ್ನು ಸಂತೆಗೆ ಕೊಂಡು ಹೋದ ಅಂತ ಇಟ್ಟುಕೊಳ್ಳೋಣ. ಒಬ್ಬ ಅಪ್ಪ ತನ್ನ ಹೆಗಲ ಮೇಲೆಯೇ ಮಗುವನ್ನು ಕೂರಿಸಿ ಜಾತ್ರೆ ಸುತ್ತಾಡಿಸಿ, ಇದು ನೋಡು ಅದು ನೋಡು ಅಂತೆಲ್ಲ ತಾನು ಕಂಡಿದ್ದನ್ನ, ಗ್ರಹಿಸಿದ್ದನ್ನ, ಅನುಭವಿಸಿದ್ದನ್ನ ಮಗುವಿಗೆ ತೋರಿಸಬಹುದು. ಅಥವಾ ಮಗೂ ಇದು ಸಂತೆ, ಈ ಮಾಳದ ಬೌಂಡರಿಯಲ್ಲಿ ಅಡ್ಡಾಡಿ ನಿನಗೇನೇನು ಕಾಣುತ್ತದೋ ನೋಡು ಅಂತ ಒಂದು ಆವರಣ ಕೊಟ್ಟು ಅಡ್ಡಾಡಿ ಅನುಭವಿಸಿ ನೋಡಲು ಬಿಡಬಹುದು. ಎರಡೂ ಒಳ್ಳೆಯ ವಿಧಾನವೇ. ಆದರೆ ನಮಗೆ ಯಾವುದು ಬೇಕು, ನಮಗೆ ಯಾವುದಾದೀತು ಅನ್ನುವುದು ನಮ್ಮ ಮನೋಧರ್ಮದ ಮೇಲೆ ನಿರ್ಧರಿಸಬೇಕು ಅಂತ ನನಗೆ ಅನಿಸುತ್ತಪ್ಪಾ. ನೀವು ಹೊಸಬರು ನಿಮಗೆ ಹೇಗೆ ತೋರುತ್ತೋ ಹಾಗೆ ಮಾಡಿ. ನಾನು ಹೇಳಿದ್ದನ್ನ ಓದುವಾಗ ಗಮನಿಸುತ್ತಿರು ಅಂದರು. ನಾನು ಅವತ್ತೇ ಅವರಿಗೆ ಅಡ್ಡಬಿದ್ದೆ. ಆಕ್ಚುವಲೀ ಅವರು ಕುವೆಂಪು ಮತ್ತು ಬೇಂದ್ರೆಯವರ ಕಾವ್ಯವಿಧಾನದ ಕುರಿತು ಮಾತನಾಡಿದ್ದರು.

ಅವತ್ತಿನಿಂದ ಇವತ್ತಿನವರೆಗೂ ಸಾಹಿತ್ಯದ ಕುರಿತ ನನ್ನ ಪ್ರಶ್ನೆಗಳಿಗೆ ಕೆಲವಾರು ಬದುಕಿನ ಕುರಿತ ಪ್ರಶ್ನೆಗಳಿಗೂ ಚೊಕ್ಕಾಡಿಯವರು ಸಂತೆಮಾಳದಲ್ಲಿ ನನ್ನನ್ನು ಓಡಾಡಲು ಗ್ರಹಿಸಲು ಬಿಟ್ಟ ಅಪ್ಪನ ಕೆಲಸವನ್ನು ಮಾಡಿದ್ದಾರೆ. ಅದನ್ನು ನನಗೆ ಅಂತಲ್ಲ, ಸಾಹಿತ್ಯ ಪ್ರೀತಿಯ ಯಾರು ಬಂದರೂ ಮಾಡಿದ್ದಾರೆ.


ಚೊಕ್ಕಾಡಿಯವರ ಸಮಗ್ರ ಸಾಹಿತ್ಯದ ಕುರಿತಾಗಿ ಮೊದಲಿಗೆ ಒಂದೆರಡು ಮಾತುಗಳನ್ನು ನನಗೆ ಹೇಳಬೇಕಿದೆ.

ಹಲವು ಕಡೆ ಚೊಕ್ಕಾಡಿಯವರೇ ಬರೆದುಕೊಂಡಿರುವಂತೆ ಅವರ ಬಡತನದ ಬಾಲ್ಯ ಮತ್ತು ಬೆಳೆಯುವ ಕಾಲದ ತವಕ ತಲ್ಲಣಗಳಿಗೆ ಅವರು ಸಾಹಿತ್ಯವನ್ನು ಅಡಗುದಾಣವಾಗಿ ಉಪಯೋಗಿಸಿಕೊಂಡಿದ್ದಾರೆ. ಸಾಕಷ್ಟು ಲೇಖಕರಿಗೆ ಕೂಡಾ ಈ ಮಾತು ಅನ್ವಯಿಸುತ್ತದೆಯೇನೋ.

ಅವರ ಗದ್ಯ ಸಾಹಿತ್ಯ - ಅಂದರೆ ಕಥೆಗಳು, ಮತ್ತು ಕಾದಂಬರಿಯನ್ನು ಓದಿದಾಗ ಮೊದಲು ಮನಸ್ಸಿಗೆ ಬರುವ ಭಾವ... ಉಹ್..ಈ ಬದುಕು ಎಷ್ಟು ಗಂಭೀರ ಮತ್ತು ದಾರುಣ ಎಂದು. ಅವರ ಮೊದಮೊದಲ ನೂರಾರು ಕವಿತೆಗಳಲ್ಲೂ ಕೂಡಾ ಈ ಬದುಕಿನ ಕಟುವಾಸ್ತವವಗಳು ಸ್ವಲ್ಪ ಕಣ್ಣಿಗೆ ಹೊಡೆಯುವಂತೆಯೇ ಇವೆ. ನಂತರದ ಮಾಗಿದ ಕಾಲದ, ಜವಾಬುದಾರಿಗಳು ಒಂದು ಹಂತಕ್ಕೆ ಬಂದು ಬದುಕು ಸ್ವಲ್ಪ ದಡ ಹತ್ತಿದ ಕಾಲದ ಕವಿತೆಗಳು ಆ ಕಟುತನವನ್ನು ಕಡಿಮೆ ಮಾಡಿಕೊಂಡು ನೋಡಿ ಹೀಗೆಲ್ಲ ಆಯಿತು ಅಂತ ಮೆಲುಮಾತಿನಲ್ಲಿ ಶತಮಾನದ ಹಿಂದಿನ ಕತೆಗಳನ್ನು ಹೇಳುವ ಅಜ್ಜನ ಟೋನಿನಲ್ಲಿ ಬಂದಿವೆ. ನನ್ನ ಮೆಚ್ಚಿನ ಕಥೆಗಾರ ಥಾಮಸ್ ಹಾರ್ಡಿ ಹೇಳುವಂತೆ ನಾವೆಲ್ಲರೂ ಈ ಅಗಾಧ ವಿಶ್ವದ ಒಂದು ಸಣ್ಣಾತಿಸಣ್ಣ ಕಣಗಳು. ವಿಶಾಲ ಪ್ರಕೃತಿಯನ್ನ ಗಮನಿಸುತ್ತಿದ್ದರೆ ಇದು ನಮ್ಮ ಅನುಭವಕ್ಕೆ ಬರುತ್ತದೆ. ಇದು ಬಹುಶಃ ಚೊಕ್ಕಾಡಿಯವರ ಸಾಹಿತ್ಯದ ಬೆಳವಣಿಗೆಯನ್ನು ಗುರುತಿಸಲು ಸಹಾಯಕ್ಕೆ ಬರುತ್ತದೆ.

ಮೊದಮೊದಲಿಗೆ ತನ್ನ ಪರಿಸ್ಥಿತಿಯಿಂದಾಗಿ ಉಂಟಾದ ಅಸಹಾಯಕತೆ, ಸಿಟ್ಟು ಆಕ್ರೋಶಗಳನ್ನೆಲ್ಲ ಹೊರಹಾಕಲು ಸಾಧನವಾದ ಸಾಹಿತ್ಯ ಥಟ್ಟನೆ ನವ್ಯದ ಸ್ವಕೇಂದ್ರಿತ ಫಾರ್ಮ್ಯಾಟನ್ನು ಅಪ್ಪಿಕೊಂಡಿದ್ದನ್ನು ನೋಡಬಹುದು. ಯಾರೇ ಆದರೂ ಆಗ ಚಾಲ್ತಿಯಲ್ಲಿದ್ದ, ಟ್ರೆಂಡಾಗಿದ್ದ ನವ್ಯ ಮತ್ತು ಅಡಿಗರ ಸೆಳೆತಕ್ಕೆ ಒಳಗಾಗದೆ ಇದ್ದ ಕಾಲಮಾನವೇ ಅದು. ಆದರೆ ವಿಶ್ವ ಸಾಹಿತ್ಯವನ್ನು ಓದುತ್ತ, ಗಮನಿಸುತ್ತ, ಬರಿದೆ ತನ್ನ ಬರವಣಿಗೆಯಲ್ಲದೆ ಇತರರ ಬರವಣಿಗೆಯನ್ನೂ ಓದುತ್ತ ಬೆಳೆದ ಕವಿ ಸುಬ್ರಾಯರಿಗೆ ತನ್ನ ಅಂತರಂಗಕ್ಕೆ ಸಂಬಂಧಿಸಿದ ಹಾಗೆ, ತನ್ನ ಬಹಿರಂಗಕ್ಕೆ ಲಗತ್ತಾಗುವ ಹಾಗೆ ತನ್ನ ಅಭಿವ್ಯಕ್ತಿ ಏನಿರಬೇಕು ಎಂದು ಸ್ಪಷ್ಟವಾಗುತ್ತ ಹೋದ ಹಾಗೆ ಅವರ ಕವಿತೆಗಳು ಸ್ವಯಂಕೇಂದ್ರಿತ ಆಕ್ರೋಶದಿಂದ, ಸಮಾಜಸುಧಾರಣೆಯನ್ನು ಬರಹದಿಂದ ಮಾತ್ರವೇ ಮಾಡಬಹುದು ಎಂಬ ಮಜಲಿನಿಂದ ತನ್ನ ಸುತ್ತಲ ಪರಿಸರಕ್ಕೆ ದಾಟಿಕೊಂಡವು. ಅವರ ಬಾಲ್ಯವನ್ನು ಬಡತನ, ಅಸಹಾಯಕತೆಗಳು ಹೇಗೆ ಆಕ್ರಮಿಸಿಕೊಂಡಿದ್ದವೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಅವರಿದ್ದ ಪರಿಸರವೂ ಪೊರೆದಿತ್ತು ಅನ್ನುವುದನ್ನು ನಾವು ಗಮನಿಸಬೇಕು. ಹಾಗಂತ ಇಲ್ಲಿ ಪ್ರಕೃತಿ ಪ್ರೀತಿ ಎಂಬ ರೊಮ್ಯಾಂಟಿಸಿಸಂ ಇಲ್ಲ. ಇದ್ದದ್ದನ್ನು ಆಕರ್ಷಕವಾಗಿ ಉದ್ರೇಕಗೊಂಡು ದಾಟಿಸುವ ಭಾವೋದ್ವೇಗ ಇಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳುವ ಸಹಜ ನಡೆ... ಮರವೊಂದು ಚಿಗುರಿ ಹಬ್ಬಿ ನೆರಳಾಗಿರುವುದು ಅಥವಾ ಎಲೆಯುದುರುತ್ತಿರುವುದು ನಮಗೆ ನೋಡುವವರಿಗೆ ಒಂದು ಭಾವೋದ್ವೇಗವನ್ನು ಹುಟ್ಟಿಸಲೂಬಹುದು. ಇಲ್ಲ ಅನ್ನಲಾರೆ. ಆದರೆ ಮರಕ್ಕೆ ಚಿಗುರುವುದು, ಹರಡಿಕೊಳ್ಳುವುದು, ಹೂಹಣ್ಣು ಬಿಡುವುದು, ಎಲೆಯುದುರುವುದು, ಹಕ್ಕಿಗಳಿಗೆ ಗೂಡು ಕಟ್ಟಲು ರೆಂಬೆ ಇದ್ದೇ ಇರುವುದು, ಅಥವ ನಾವು ಮನುಷ್ಯರು ಕತ್ತರಿಸಿದಾಗ ಸುಮ್ಮನುಳಿಯುವುದು, ಮತ್ತೆ ವಸಂತದಲ್ಲಿ ಚಿಗುರುವುದು ಬಹಳ ಸಹಜ ಪ್ರಾಕೃತಿಕ ಸಂಗತಿ. ಅದಕ್ಕೆ ಈ ಕುರಿತು ಸಂಭ್ರಮಾಚರಣೆಯಾಗಲೀ ಸಂತಾಪವಾಗಲಿ ಇಲ್ಲ. ಈ ಸಹಜತೆಯನ್ನ, ಇಲ್ಲಿನ ನೇರನಿಷ್ಠುರತೆಯನ್ನ ಸುಬ್ರಾಯ ಚೊಕ್ಕಾಡಿಯವರು ಹಾಸಿ ಹೊದ್ದರು ಮತ್ತು ಅದು ಅವರ ಕಾವ್ಯಮಾರ್ಗದ ಮೇಲೆ ಕೂಡಾ ಪ್ರಭಾವ ಬೀರಿತು ಎನ್ನುವುದು ನನ್ನ ಅಭಿಪ್ರಾಯ.

ಚೊಕ್ಕಾಡಿಯವರ ನಾನೇಕೆ ಬರೆಯುತ್ತೇನೆ ಲೇಖನದಲ್ಲಿ ಒಂದು ಕಡೆ ಲಾರೆನ್ಸನನ್ನು ಉದ್ಧರಿಸಿ ಹೇಳುತ್ತಾರೆ. I am free as a rooted tree is free. ಇದು ಚೊಕ್ಕಾಡಿಯವರ ಕವಿತೆಗಳ ಭಂಡಾರಕ್ಕೆ ಕೀಲಿ ಕೈ ಕೂಡ. ಅವರಿಗೆ ಮನುಷ್ಯನ ಮಿತಿ ಹಾಗೂ ಮೀರುವಿಕೆಗಳ ಸ್ಪಷ್ಟ ವಾಸ್ತವಿಕ ಅರಿವು ಇದೆ. ಎಲ್ಲಿ ಗಪ್ಪಗಿರಬೇಕು ಅಥವಾ ಎಲ್ಲಿ ದನಿಯೆತ್ತಲೇಬೇಕು ಎಂಬ ತಿಳಿವು ಇದೆ. ಹೇಳಲೇಬೇಕಾದ್ದನ್ನು ಹೇಳುವ ನಿಷ್ಠುರತೆಯಲ್ಲೂ ಕೆಲವು ಸಲ ಸುಮ್ಮನಿದ್ದು ಬಿಡಬೇಕು ಎಂಬ ಸೌಜನ್ಯವೂ ಇದೆ.

ಒಂದೆರಡು ಕವಿತೆಗಳನ್ನು ಗಮನಿಸೋಣ.


ಹಂಗು ಎಂಬ ಈ ಕವಿತೆ ಚೊಕ್ಕಾಡಿಯವರ ಕಾವ್ಯಧರ್ಮವನ್ನ ಮನೋಧರ್ಮವನ್ನ ಸ್ಪಷ್ಟವಾಗಿ ಚಿತ್ರಿಸುತ್ತದೆ. ಹಾಗಂತ ವಾಚಾಳಿತನವೇನಿಲ್ಲ.

ಹಂಗು.

ಹಾರಿ ಹೋಗುತ್ತದೆ ಹಕ್ಕಿಗಳು ಗಾಳಿ ಬೀದಿಯಲಿ

ಜಗತ್ತನ್ನೇ ಆವರಿಸಿಕೊಳ್ಳುತ್ತ

ಮರ ಮಾತ್ರ ಅಲ್ಲೆ ನಿಂತಿರುತ್ತದೆ ನೆಲದಲ್ಲಿ ಕಾಲೂರಿ – ದಿಗಂತದತ್ತ

ಕೊಂಬೆರೆಂಬೆಗಳ ಚಾಚಿ ಜಗವನ್ನು ಒಳಗೊಳ್ಳುತ್ತ.


ಸಂಜೆ ಹಿಂದಿರುಗಿದ ಹಕ್ಕಿಗಳು ತೂಗು ಹಾಕುತ್ತವೆ ಮರಕ್ಕೆ ನಮ್ಮ

ಹಾಡುಗಳನ್ನು ನೆಲಮುಗಿಲನೊಳಗೊಂಡ ಜಗದ ಪಾಡುಗಳನ್ನು

ಬೆಳಗೆದ್ದು ನೋಡಿದರೆ, ಮರವೋ ಮಿಟುಕಿಸುತ್ತದೆ – ಮೈತುಂಬಿರುವ

ಹೊಸ ಚಿಗುರು, ಹೂವು ಹಣ್ಣುಗಳ ಕಣ್ಣುಗಳನ್ನು.


ಯಾರವಿವೊ? ಹಕ್ಕಿಗಳ ಕೊಡುಗೆಗಳ ರೂಪಾಂತರವೆ ಅಥವಾ ಮರವು

ನೆಲದಿಂದ ಪಡೆದದ್ದೇ? ಯಾವುದೂ ಸರಿಯಿರಬಹುದು;

ಇಲ್ಲದಿರಬಹುದು.

ಮರದಲ್ಲೇ ಹಕ್ಕಿಗಳ ಹೆಜ್ಜೆಗುರುತುಗಳಿಲ್ಲ; ಹಕ್ಕಿಗಳಲೂ

ಮರದ ಯಾವುದೇ ನೆನವರಿಕೆ ಉಳಿದಂತಿಲ್ಲ.


ಕವಿದ ಕತ್ತಲಲೆ ವರ್ಗಾವಣೆಗೊಂಡವೇ – ಹಕ್ಕಿಗಳು,

ಮರದ ಗಳಿಕೆಗಳು ಮುಟ್ಟಿಯೂ ಮುಟ್ಟದ ರೀತಿಯಲ್ಲಿ?

ಹಕ್ಕಿಗಳು ಹಾಗೂ ಮರ ಮಾತ್ರ ಸುಮ್ಮನೆ ನಿದ್ದೆಹೋಗುತ್ತವೆ

ರಾತ್ರಿ-ಮಾತಿರದೆ, ಯಾವುದೇ ಗೊಡವೆಯೇ ಇರದ ರೀತಿಯಲ್ಲಿ.


ಕನಸಿನ ಅನೂಹ್ಯ ಓಣಿಗಳಲ್ಲಿ ಹಕ್ಕಿಗಳಿಗೋ ಮರದ ಘನತೆ, ಮರಕ್ಕೆ

ಹಕ್ಕಿಗಳ ಲವಲವಿಕೆ ದಕ್ಕಿ ಅದಲು ಬದಲಾದಂತಿದೆ

ನಿಂತವರು ಅಲೆದಂತೆ, ಅಲೆದವರು ನಿಂತಂತೆ, ಈಗ ಹಕ್ಕಿಗಳಿಗಿಲ್ಲ

ಮರದ ಹಂಗು; ಮರಕ್ಕಿಲ್ಲ ಹಕ್ಕಿಗಳ ಹಂಗು.



ಚಕ್ರಚಲನೆ


ದೇಶಪ್ರೇಮಿಗಳಿಗೂ ದೇಶದ್ರೋಹಿಗಳಿಗೂ

ಬಹಳ ವ್ಯತ್ಯಾಸವೇನೂ ಇಲ್ಲ

ನಮ್ಮ ದೇಶದಲ್ಲಿ!

ಒಂದೇ ನಾಣ್ಯದ ಎರಡು ಮುಖಗಳಂತೆ ಅವರು!


ಹೀಗೆಂದರೆ ನಾನು

ಯಾರೂ ಕೋಪಿಸಬೇಕಾಗಿಲ್ಲ,

ಗಮನಿಸಿ ನೋಡಿ:


ಸರಕಾರ ಬದಲಾದಾಗ ಆಗುತ್ತಾರೆ

ದೇಶಪ್ರೇಮಿಗಳು ದೇಶದ್ರೋಹಿಗಳು

ಹಾಗೂ

ದೇಶದ್ರೋಹಿಗಳೂ ದೇಶಪ್ರೇಮಿಗಳು

ಅದೆ ಅದೆ ಬದಲಾದ

ಸರಕಾರದ ದೃಷ್ಟಿಯಲ್ಲಿ.


ಇತಿಹಾಸದ ಚಲನೆ

ಇರುವುದೇ ಹೀಗೆ

ಚಕ್ರ ಚಲನೆಯ ಹಾಗೆ.


ಇದಲ್ಲದೆ ಇವರದ್ದು ಇನ್ನೊಂದು ನನಗೆ ಬಹಳ ಮೆಚ್ಚಿನ ಕವಿತೆಯೊಂದಿದೆ. ಇದರಲ್ಲಿ ಅದು ಎಂಬ ಕವಿತೆ.


ಇದರಲ್ಲಿ ಅದು


ಒಂದು ಕಪ್ಪೆಯ ಬದುಕಿನಲ್ಲಿ

ಏನಿರುತ್ತದೆ ?

ಮೇಲಕ್ಕೂ ಕೆಳಕ್ಕೂ ಜಿಗಿಯುತ್ತದೆ

ಒಣ ನೆಲಕ್ಕೆ ಮಳೆ ಕರೆಯುತ್ತದೆ

ಹಸುರಿನ ಮರೆಯಲ್ಲಿ ಬೇಟೆಗೆ

ಕಾದಿರುತ್ತದೆ.


ಒಂದು ಹಾವಿನ ಬದುಕಿನಲ್ಲಿ

ಏನಿರುತ್ತದೆ?

ಆಚೆಗೂ ಈಚೆಗೂ ತೆವಳುತ್ತದೆ.

ಹೊಳೆಯುವ ಮೈಯಲಿ ಹೊರಳುತ್ತದೆ

ಹಸುರಿನ ಮರೆಯಲಿ ಬೇಟೆಗೆ

ಕಾದಿರುತ್ತದೆ.

ಕಪ್ಪೆ ಹಾವುಗಳೆರಡೂ ಕಾದೇ ಇರುತ್ತವೆ ಅನವರತ

ಜಗತ್ತೇ ತಟಸ್ಥ ಎದುರಲ್ಲಿ

ಎನ್ನುವ ಹಾಗೆ ಧ್ಯಾನ ಸ್ಥಿತಿಯಲ್ಲಿ -


ಬೆನ್ನ ಹಿಂದಿನ - ಕವಿವ ಮತ್ತಿಗೆ

ಕಣ್ಣ ಮುಂದಿನ ಕರೆವ ತುತ್ತಿಗೆ

ವಿದಾಯ ಹೇಳಿದ ಹಾಗೆ ಎಲ್ಲ ಆಪತ್ತಿಗೆ


ಕೊನೆಗೂ ಒಮ್ಮೆ ಅನಿವಾರ್ಯ

ಮುಖಾಮುಖಿಯಲ್ಲಿ ಮಾತ್ರ

ಒಂದು ಇನ್ನೊಂದಾಗುವ ಪವಾಡ ನಡೆಯುತ್ತದೆ .


ಹಾವಿನ ಕಣ್ಣಲ್ಲಿ; ಕಪ್ಪೆಗೆ -ಜೀವದ ಅರಳು

ಕಪ್ಪೆಯ ಕಣ್ಣಲ್ಲಿ; - ಹಾವಿಗೆ ಸಾವಿನ ನೆರಳು.


ನೀವು ಇತ್ತೀಚಿನ ಕಲ್ಲುಮಂಟಪ ಸಂಕಲನ ಅಥವ ಹಲವಾರು ಪ್ರಕಟಿತ ಕವಿತೆಗಳಲ್ಲಿ ಗಮನಿಸಿದರೆ ಈ ಇದರಲ್ಲಿ ಅದು ಅಥವಾ ಅದರಲ್ಲಿ ಇದು ಎಂಬುದು ಮತ್ತೆ ಮತ್ತೆ ಒರೆಹಚ್ಚಲ್ಪಟ್ಟ ಉಪಯೋಗಿಸಲ್ಪಟ್ಟ ಸ್ಥಾಯೀಭಾವವಾಗಿ ನನಗೆ ಕಾಣಿಸುತ್ತದೆ. ಯಾವುದು ಅನುಕ್ಷಣಕ್ಕೂ ಬದಲಾಗುತ್ತಲೇ ಅದೇ ಆಗಿ ಉಳಿದಿರುತ್ತದೆಯೋ... ಅದನ್ನ ಸ್ಥಾಯೀ ಭಾವ ಎನ್ನುವುದೂ ಬಹುಶಃ ಸಂಕೀರ್ಣತೆಯೇ ಇರಬಹುದು. ಆದರೆ ಈ ಮರುಕಳಿಕೆ ನನಗೆ ಅಚ್ಚರಿಯನ್ನಿತ್ತಿದೆ.

ನೀವು ಓದಿನೋಡಿ ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಅಡಿಗರು, ಎಕೆಆರ್, ಎಕ್ಕುಂಡಿಯವರು, ಕಣವಿ, ಎಸ್.ಆರ್. ಮಂಜುನಾಥ್ (ಜೀವಯಾನ), ಮತ್ತು ಈಗ ಬರೆಯುತ್ತಿರುವ ಹೊಸಕವಿಗಳಿಗಿಂತ ಸ್ವಲ್ಪ ಹಿಂದಿನ ಎಲ್ಲ ಮಾಗಿದ ಕವಿಗಳ ಕಾವ್ಯದಲ್ಲೂ ಈ ಬಗೆಯ ಇದು ಅದಿರಬಹುದೇ, ಅಥವ ನಾವು ಹೀಗೆ ಎಂದು ಕೊಂಡಿದ್ದು ಹಾಗೂ ಇರಬಹುದು, ಕಣ್ಣಿಗೆ ಕಂಡದ್ದಷ್ಟೇ ಅಲ್ಲದೆ ಸಂಪೂರ್ಣ ವಿರುದ್ಧಾರ್ಥವೂ ಇರಬಹುದು ಎಂಬ ಹೊಳಹುಗಳು ಕಾಣುತ್ತವೆ. ಉದಾಹರಣೆಗೆ ಬೇಂದ್ರೆಯವರ ಬೆಳಗು, ಕುವೆಂಪು ಅವರ ದರ್ಶನಂ, ಕೆ.ಎಸ್.ಎನ್.. ಅವರ ಎಲ್ಲಚಿತ್ರಗಳಾಚೆಗಿನ್ನೊಂದು ಚಿತ್ರದ ಪ್ರತಿಮೆ, ಅಡಿಗರ ಕಾಡ ಮೂಲಕವೇ ಪಥ ಆಗಸಕ್ಕೆ.., ಎಕೆಆರ್...ಅವರ ಕವಿತೆಗಳೆಲ್ಲ ಚಕ್ರವರ್ತಿಯ ಕರುಣೆ ..ಇತ್ಯಾದಿ ಹೆಚ್ಚೂ ಕಮ್ಮಿ ಇದನ್ನೇ ಹೇಳುತ್ತವೆ.

ಮಂಜುನಾಥರ ಹಕ್ಕೀ ಪಲ್ಟೀ..ಇರಬಹುದು..ಅಥವಾ ಚೊಕ್ಕಾಡಿಯವರ ಸ್ಪರ್ಧೆ ಕವಿತೆಗಿರುವ ಸಾಮ್ಯತೆ ನನ್ನನ್ನು ಬೆಚ್ಚಿ ಬೀಳಿಸಿತು ಕೂಡಾ..

ರಭಸದಿಂದ ದಿಗಂತವನ್ನೇ

ಸೀಳಿ ಮುನ್ನಡೆವಂತೆ

ನುಗ್ಗಿದ್ದು

ನೀಲಿ ಆಕಾಶದಲ್ಲಿ

ಕಲ್ಲೇ?

ಹಕ್ಕಿಯೇ?

ಅಥವಾ

ಕವಿತೆಯೇ?


ಕಾವ್ಯ ಎಂದರೇನು ಎಂಬುದನ್ನು ತಿಳಿಸಲು ಸುಬ್ರಾಯ ಚೊಕ್ಕಾಡಿಯವರು ಒಂದು ಕಡೆ ಬಲಿಯ ಅಂತಿಮ ಕೂಗು ಎಂಬ ಲೇಖನ ಬರೆದಿದ್ದಾರೆ. ಒಂದು ಅತ್ಯಾಧುನಿಕ ಕಸಾಯಿಕಾನೆಯ (slaughter house) ಒಡೆಯ ತನ್ನ ಸ್ನೇಹಿತನಾದ ಕವಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ಎಲ್ಲ ಅಚ್ಚುಕಟ್ಟು ವ್ಯವಸ್ಥೆಯ ಬಗ್ಗೆ ವಿವರಿಸುತ್ತಾನೆ. ಪ್ರಾಣಿಯೊಂದನ್ನು ಯಂತ್ರದ ಬಾಯಿಗೆ ಕೊಟ್ಟ ಮೇಲೆ ಹೇಗೆ ಅದರ ದೇಹದ ಎಲ್ಲ ಉಪಯುಕ್ತ ಭಾಗಗಳು, ತ್ಯಾಜ್ಯ ಎಲ್ಲವೂ ಸಮರ್ಥವಾಗಿ ಪ್ಯಾಕ್ ಆಗುತ್ತವೆ, ಅಥವ ವಿಲೇವಾರಿಯಾಗುತ್ತದೆ ಮತ್ತು ಈ ಪ್ರೊಸೆಸ್ ನಲ್ಲಿ ಆ ಪ್ರಾಣಿಯ ಪ್ರಾಡಕ್ಟು ಹಾಗೂ ಆವರಣ ಎಲ್ಲವೂ ಎಷ್ಟು ಆರೋಗ್ಯಕರವಾಗಿ, ಶುಚಿಯಾಗಿ ಇಡಲ್ಪಟ್ಟಿದೆ. ಎಲ್ಲಿಯೂ ಒಂದು ಕೊಸರಿರದ ಹಾಗೆ ಹೇಗೆ ವ್ಯವಸ್ಥೆ ಮಾಡಲ್ಪಟ್ಟಿದೆ ಎಂದು ವಿವರಿಸುತ್ತಾನೆ. ಈ ಎಲ್ಲ ವಿವರಗಳನ್ನೂ ಕೇಳುತ್ತ ತಲೆದೂಗುತ್ತಿರುವ ಕವಿ ಒಂದು ಕ್ಷಣ ಮೌನವಾಗಿದ್ದು.. ತನ್ನ ಸ್ನೇಹಿತನಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ. How do you handle and dispose the final cry before it dies? ಇದು ಕವಿ ಮತ್ತು ಇತರರಿಗಿರುವ ನೋಟದ ಬಹಳ ಚಿಕಿತ್ಸಕ ಅಂತರ. ಇದು ನಮಗೆಲ್ಲರಿಗೂ ಅನಿಸಬಹುದು. ಆದರೆ ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಶಕ್ತಿ ಇರುವ ನಿಜವಾದ ಕವಿ ಈ ಉದ್ವೇಗವನ್ನು ಕಾಲಾತೀತವಾದ ಕಾಡುವ ಪ್ರಶ್ನೆಯಾಗಿಸಬಹುದು, ನಮ್ಮ ಮನಸ್ಸಿನಲ್ಲಿ ಈ ಉದ್ವೇಗವನ್ನು ಹಾಯಿಸಿ ನಮ್ಮ ದೈನಂದಿನ ಓಟ ಅಥವ ಈಜಿಗೆ ಒಂದು ದಿಕ್ಕು ನೀಡಲೂಬಹುದು.


ಇದೇ ಮಾತಿಗೆ ಬಂದರೆ.. ಅಡಿಗರು ಬರೆದರು

"ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ

ರಾಮಾಯಣ ಶ್ಲೋಕ ರೇಷ್ಮೆ ತೊಗಲು"


ಕವಿತೆಗಳನ್ನ ಬರೆಯುವುದು, ವಿಮರ್ಶೆ ಬರೆಯುವುದು ಎಲ್ಲ ಒಂದು ಮಟ್ಟಿಗಿನ ಸಾಮರ್ಥ್ಯವಾದರೆ ಅವುಗಳನ್ನು ಓದುವ ಆಸಕ್ತಿಯಿರುವ ಸಹೃದಯರಿಗೆ ಮುಟ್ಟಿಸುವ ಕೆಲಸ ಅದಕ್ಕಿಂತಲೂ ಬಹಳ ದೊಡ್ಡದು. ಹೀಗೆ ಮಾಡಿದರೆ ಮಾತ್ರ ಸಾಹಿತ್ಯ ಪರಂಪರೆಯ ನದಿಗೆ ಪಾತ್ರ ದೊರಕುವುದು. ರಭಸದಿಂದ ಸುರಿವ ಜಲಪಾತವನ್ನ ದೂರದಲ್ಲೇ ನೋಡಿ ಆನಂದಿಸುತ್ತೇವೆಯೇ ಹೊರತು.. ಮುಟ್ಟಲು ಆಗುವುದಿಲ್ಲ. ಆದರೆ ಸುಬ್ರಾಯ ಚೊಕ್ಕಾಡಿಯಂತಹ ತೀಕ್ಷ್ಣಮತಿಗಳು ಮತ್ತು ಟೀಚರು ಆ ಜಲಪಾತದ ಹಿನ್ನೆಲೆಗೆ ಹೋಗಲು ಇರುವ ಕಾಲುದಾರಿಯನ್ನು ತೋರಿಸುತ್ತಾರೆ. ಯಾವ ಕೀ ಹಾಕಿದರೆ ಯಾವ ಬಾಗಿಲು ತೆರೆಯಬಹುದು ಎಂಬುದನ್ನು ತಿಳಿಸಿಕೊಡುತ್ತಾರೆ. ಅದನ್ನ ಚೊಕ್ಕಾಡಿಯವರ ವಿಮರ್ಶಾ ಬರಹಗಳು ಬಲು ಸಮರ್ಥವಾಗಿ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಬರೆಯುವ ಹಂಬಲ ಅದಮ್ಯವಾಗಿರುವವರು ಓದಲೇಬೇಕಾದ ಬರಹಗಳಿವೆ ಅವರ ವಿಮರ್ಶಾ ಸಂಕಲನದಲ್ಲಿ.


ಬೇಡ ಬಾಣ ಬಿಟ್ಟಿದ್ದು ಹಕ್ಕಿಗೇ ಆದರೂ ಅದು ತಗುಲಿದ್ದು ಕವಿ ವಾಲ್ಮೀಕಿಗೆ. ಆ ಶೋಕವು ಮುಂದಿನ ಶ್ಲೋಕಕ್ಕೆ ನಾಂದಿಯಾಯಿತು ಎಂಬ ಕತೆಯನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಒಬ್ಬ ಟೀಚರ್ ನಮಗೆ ಈ ಸಂಬಂಧವನ್ನು ಗುರುತಿಸಿ ನೋಡಿ ಇದನ್ನು ನೋಡುವುದು ಹೀಗೆ...

ಮೂಡಲ ಮನೆಯ ಬೆಳಗು ಕವಿತೆ ಕೇಳುತ್ತ ಖುಷಿ ಪಡುವುದು ಒಳ್ಳೆಯದೇ ಆದರೆ ಅದರ ಪ್ಯಾರಾ ಪ್ಯಾರಾಗಳಲ್ಲಿ ಕವಿ ಬೇಂದ್ರೆ ಹೇಳಹೊರಟಿರುವುದು ಪಂಚೇಂದ್ರಿಯಗಳ ಅನುಭವ ಸಾದೃಶ್ಯವನ್ನ... ಗಮನಿಸಿ ನೋಡಿ ಮೊಗ್ಗೆ ಪಟಪಟನೇ ಒಡೆದು ಎನ್ನುವಾಗ ಮೌನದಲ್ಲಿನ ನಿಶ್ಯಬ್ಧದಲ್ಲಿ ದೊರೆಯುವ ಗ್ರಹಣ, ಎಲೆಗಳ ಮೇಲೆ ಎಲೆಯಂತೆಯೇ ಮರೆಸುವ ಹಾಗೆ ಬಿದ್ದಿರುವ ತುಷಾರ ಬಿಂದುಗಳನ್ನ ನೋಡುವ ದೃಷ್ಟಿ, ಬಣ್ಣದ ಪರಾಗವನ್ನೇ ಹೊದ್ದು ಹಾರುವ ದುಂಬಿಯ ದಂಡು ಸವರಿಕೊಂಡು ಹೋಗುವಾಗ ಸಿಗುವ ಸ್ಪರ್ಶ, ಹೀಗೇ ರುಚಿ, ಆಘ್ರಾಣಿಸುವಿಕೆ ಎಲ್ಲ ಹೇಳುತ್ತ ಕೊನೆಗೆ ಈ ಎಲ್ಲದರ ಮೂಲಕ ಆವರಿಸಿಕೊಳ್ಳುವ ಬೆಳಕಿನಲ್ಲಿ ತುಂಬಿರುವ ಶಾಂತಿರಸ... ಹೀಗೆ ತಿಳಿಸಿಕೊಡುವ ಸಾಮರ್ಥ್ಯ ಇರುವ ಅಪರೂಪದ ಟೀಚರಾಗಿ, ಓದುಗೆಳೆಯರಾಗಿ ಸುಬ್ರಾಯ ಚೊಕ್ಕಾಡಿಯವರು ಮಾಡಿರುವ ಕೆಲಸ, ಸಾಹಿತ್ಯ ಪರಿಚಾರಿಕೆಗೆ ಒಂದು ಮಿತಿ ಇಲ್ಲ. ಎಲ್ಲ ಕಾಲದಲ್ಲೂ ಎಲ್ಲ ಸಾಹಿತ್ಯಾಸಕ್ತರಿಗೂ ಅವರು ಅದನ್ನ ತೋರಿಸಿಕೊಟ್ಟಿದ್ದಾರೆ.


ಎಕೆ.ಆರ್ ಬರೆದ ಹಾಗೆ ಕಣ್ಣೆದುರಿಗೆ ಪ್ರತ್ಯಕ್ಷವಾದದ್ದನ್ನ ನೋಡುವುದಕ್ಕೆ ಎರಡು ಕಣ್ಣು ಸಾಲದು ಸ್ವಾಮೀ ಅದೃಷ್ಟ ಬೇಕು... ಎಂಬುದನ್ನ ಚೊಕ್ಕಾಡಿಯವರು ಬಹಳ ಸಲ ನನಗೆ ಸಾಹಿತ್ಯ ಕುರಿತ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದಾರೆ.


ಚೊಕ್ಕಾಡಿಯವರ ಕಥೆಗಳ ಕುರಿತು ಬಹುಶಃ ಅಧ್ಯಕ್ಷರಾದ ಮತ್ತು ನಮ್ಮ ನಡುವಿನ ಸೊಗಸಾದ ಕಥೆಗಾರರಾದ ಶ್ರೀ ರಶೀದ್ ಮಾತಾಡುತ್ತಾರೆ. ಆದರೂ ಅವರ ಕಥೆಗಳ ಕುರಿತು ನನ್ನದು ಒಂದೆರಡು ಮಾತು. ಕವಿತೆಗಳಲ್ಲಿ ಲಂಬಿಸಿದ ಮಾರ್ದವತೆ ಆ ಕತೆಗಳಲ್ಲಿ ಇಲ್ಲ. ಹಾಗಂತ ಅದು ಕೊರತೆಯಾಗಿ ಅಲ್ಲ. ಆ ಕಥೆಗಳ ಕಥಾಂಶವೇ ಹಾಗಿದೆ. ದಾರುಣ ವಾಸ್ತವದ ಕಥನಕ್ಕೆ ಬೇರೆ ದಾರಿಯೇ ಇಲ್ಲ. ಆ ಕಥೆಗಳು ವಾಸ್ತವಕ್ಕೆ ಕನ್ನಡಿ ಹಿಡಿದಷ್ಟೇ ನಮ್ಮ ಮನಸ್ಸಿಗೂ ಕನ್ನಡಿ ಹಿಡಿಯುತ್ತವೆ. ಕನ್ನಡಿ ಎಂದರೆ ಅದೇ. ಏನಿದೆಯೋ ಅದನ್ನೇ ತೋರುವುದು. ಆ ನಿಟ್ಟಿನಲ್ಲಿ ಚೊಕ್ಕಾಡಿಯವರು ಜನಪ್ರಿಯ ಆಗದೆ ಇದ್ದರೂ ಬಹಳ ಸಮರ್ಥ ಗಟ್ಟಿ ಕಥೆಗಾರರು ಕೂಡ.

ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಅವಕಾಶ ಕೊಟ್ಟ ರೂಪ ಪ್ರಕಾಶನದ ಮಹೇಶ್, ನನ್ನ ಮಾತುಗಳ ಮೇಲೆ ಭರವಸೆಯಿಟ್ಟ ಅರವಿಂದ ಚೊಕ್ಕಾಡಿಯವರಿಗೆ ನನ್ನ ಧನ್ಯವಾದಗಳು.

 ಬರೆಯುವಾಗ ಇರಬೇಕಾದ ಎಚ್ಚರ


ಕತೆಗಾರನಿಗೆ ತನಗೆ ಬರೆಯಲು ಇರುವ ವಿಪುಲ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಈ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಬಹುದೆಂಬುದರ ವಿವೇಕಪೂರ್ಣ ಜವಾಬ್ದಾರಿಯ ಸೂಕ್ಷ್ಮವೂ ಇರಬೇಕು ಎಂಬ ಮಾತು ನಮಗೆಲ್ಲರಿಗೆ ಅಪ್ಲೈ ಆಗುತ್ತದೆ. ಎದುರು ಕಾಣಿಸುವ/ಕಟ್ಟಿರುವ ಸಂಗತಿಗೆ ಅದಷ್ಟೇ ಅಲ್ಲದೆ, ನಮಗೆ ಗೋಚರಿಸುವದಷ್ಟೇ ಅಲ್ಲದೆ ಇರುವ ಹಲವು ಆಯಾಮಗಳ ಬಗೆಗೆ ಒಂದು ಎಚ್ಚರ ಇರಬೇಕು ಅಂತ ಬಲವಾಗಿ ಅನಿಸಿತು. ನನ್ನ ಧಾಟಿ ಪುರಾತನವಾಯಿತೋ ಏನೋ ಕ್ಷಮಿಸಿ. ಮತ್ತು ನನ್ನ ಊದುವಿಕೆ ಸಾಕು. ಕುರ್ತಕೋಟಿಯವರ ಮಾತುಗಳನ್ನೇ ಓದಿ.

" ಮಾಸ್ತಿಯವರ ಒಂದು ಕತೆ "ಬಿಳಿಗಿರಿ ರಂಗ" ಇದು ತನ್ನ ರಹಸ್ಯವನ್ನು ಬೇಗನೆ ಬಿಟ್ಟುಕೊಡುವುದಿಲ್ಲ. ರಂಗಪ್ಪ ಎಂಬ ಒಬ್ಬ ಭಕ್ತ ತನ್ನ ಮನೆದೇವರಾದ ಬಿಳಿಗಿರಿ ರಂಗನಿಗೆ ಆನೆಯ ಉತ್ಸವವನ್ನು ಮಾಡಲು ಹರಕೆ ಹೊತ್ತಿದ್ದಾನೆ. ಅವನ ತಂದೆ ಸಾಯುವಾಗ ಈ ಹರಕೆಯ ವಿಷಯವನ್ನು ಹೇಳಿದ್ದ. ಇಪ್ಪತ್ತು ವರ್ಷಗಳವರೆಗೆ ಹಣವನ್ನು ಕೂಡಿಟ್ಟು ಕೊನೆಗೆ ಒಂದು ದಿನ ಉತ್ಸವವನ್ನು ನಡೆಸಲು ನಿಶ್ಚಯಿಸುತ್ತಾನೆ. ತನ್ನ ತಾಯಿ, ಹೆಂಡತಿ ಮಕ್ಕಳನ್ನು ಕರೆದುಕೊಂಡು ಬೆಟ್ಟದ ಬುಡದ ಒಂದು ಮಂಟಪದಲ್ಲಿ ಒಂದು ರಾತ್ರಿ ಉಳಿಯುತ್ತಾನೆ. ಆದರೆ ತಾಯಿಗೆ ವಾಂತಿ ಬೇಧಿ ಶುರುವಾಗಿ ಬೆಟ್ಟವನ್ನು ಹತ್ತುವುದು ಆಗುವುದಿಲ್ಲ. ಅವಳನ್ನು ಅಲ್ಲಿಯೇ ಬಿಟ್ಟು ಉಳಿದವರು ಬೆಟ್ಟವನ್ನೇರಿ ಹೋಗುತ್ತಾರೆ. ಸಂಜೆಗೆ ಇನ್ನೇನು ಉತ್ಸವ ಮುಗಿಯಬೇಕು ಎನ್ನುವಷ್ಟರಲ್ಲಿ ತಾಯಿಯ ಸ್ಥಿತಿ ಚಿಂತಾಚಜನಕವಾಗಿದೆಯೆಂದು ಸುದ್ದಿ ಬರುತ್ತದೆ. ಮಗ ಅಲ್ಲಿಯೇ ಇರಲಾರದೆ ಬೆಟ್ಟವಿಳಿದು ಬರುತ್ತಾನೆ. ಜೊತೆಗೆ ಒಬ್ಬ ಸೋಲಿಗರ ಹುಡುಗ ಬರುತ್ತಾನೆ. ಅವನ ಹೆಸರು ರಂಗ. ಅವರಿಬ್ಬರೂ ಬರುವಾಗ ಜೊತೆಯಲ್ಲಿ ಒಂದು ಆನೆಯೂ ಬರುತ್ತದೆ. ರಂಗಪ್ಪನಿಗೆ ಹೆದರಿಕೆ. ಆದರೆ ಹುಡುಗ ಧೈರ್ಯ ಹೇಳುತ್ತಾನೆ. ಕೆಳಗಿಳಿದು ಬಂದ ಮೇಲೆ ತಾಯಿ ಸ್ವಲ್ಪ ಹುಶಾರಾಗುತ್ತಿರುತ್ತಾಳೆ. ಅದನ್ನು ತಿಳಿದು ಸಮಾಧಾನವಾಗುತ್ತದೆ. ಅಷ್ಟರಲ್ಲಿ ಆನೆಯೂ ಅಲ್ಲಿಗೆ ಬರುತ್ತದೆ. ಸೋಲಿಗರ ಹುಡುಗ ಇನ್ನು ತಾನು ಹೋಗುತ್ತೇನೆಂದು ಆನೆಯನ್ನೇರಿ ಕುಳಿತು ಹೊರಡುತ್ತಾನೆ. ತಾಯಿಗೆ ಆನೆಯ ಮೇಲೆ ಸೋಲಿಗರ ಹೆಣ್ಣಿನೊಡನೆ ಕುಳಿತ ಬಿಳಿಗಿರಿ ರಂಗನೇ ಕಾಣಿಸಿ ಕೈ ಮುಗಿಯುತ್ತಾಳೆ. ಆ ಸ್ಥಳಕ್ಕೆ ಅಂದಿನಿಂದ ಆನೆ ರಂಗನ ಹುಂಡಿ ಎಂದು ಹೆಸರಾಗುತ್ತದೆ.

ಮೇಲುನೋಟಕ್ಕೆ ಇದು ಪಾರಮಾರ್ಥಿಕ ಅನುಭವವನ್ನು ಪ್ರಕಟಿಸುವ ಕಥೆಯೆಂದೇ ಕಾಣುತ್ತದೆ. ರಂಗನ ವಿಗ್ರಹವನ್ನು ಆನೆಯ ಮೇಲೆ ಕಂಡವಳು ತಾಯಿ ಮಾತ್ರ. ಅವಳು ಬೆಟ್ಟದ ಮೇಲೆ ಹೋಗಲಿಲ್ಲ. ದೇವರೇ ಬೆಟ್ಟವಿಳಿದು ಬಂದು ಅವಳಿಗೆ ದರ್ಶನವಿತ್ತ. ಕತೆಯ ಕೊನೆಯ ಭಾಗದಲ್ಲಿ " ಬಹಳ ಜನಕ್ಕೆ ಈ ಕತೆಯಲ್ಲಿ ನಂಬಿಕೆ ಇಲ್ಲ" ಎಂಬ ಮಾತು ಬರುತ್ತದೆ. "ದೇವರು ಯಾವ ಹೊತ್ತಿನಲ್ಲಿ, ಯಾವ ರೂಪದಲ್ಲಿ ಬರುವನೋ ಹೇಳುವಂತಿಲ್ಲ" ಎಂಬ ಮಾತೂ ಬರುತ್ತದೆ. ನಂಬುವದು ಬಿಡುವುದು ಅವರವರ ಸಂಸ್ಕಾರದ ಫಲ. ತಾಯಿ ಮಲಗಿದ್ದ ಆ ಸ್ಥಳವನ್ನು ಮಗ ಕೊಂಡುಕೊಂಡು ಮುಂದೆ ಅಲ್ಲಿ ಅವಳ ನೆನಪನ್ನು ಸ್ಥಿರವಾಗಿಸಿದ.

ತಾಯಿಯ ಕಣ್ಣಿಗೆ ಆನೆಯ ಮೇಲೆ ಬಿಳಿಗಿರಿ ರಂಗನ ರೂಪ ಕಂಡಿತು. ಆದರೆ ಉಳಿದವರಿಗೆ ಅದು ಕಾಣುವುದಿಲ್ಲ. ಉಳಿದವರ ಕಣ್ಣಿಗೆ ಕಂಡದ್ದೆಂದರೆ ಸೋಲಿಗರ ಹುಡುಗ ಅಳಿಲಮರಿಯಂತೆ ಅನೆಯ ಮೇಲೆ ಏರಿ ಹೋದದ್ದು. ಮಗನಿಗೆ ಬೆಟ್ಟವಿಳಿಯುವಾಗ ಭಯ. ಸೋಲಿಗರ ಹುಡುಗನಿದ್ದದ್ದರಿಂದ ಧೈರ್ಯ ಬಂದಿತ್ತು. ಆದರೆ ಮಗನಿಗೆ ಬಿಳಿಗಿರಿರಂಗನ ದರ್ಶನವಾಗಲಿಲ್ಲ. ಅವನು ಬೆಟ್ಟದಿಂದ ಇಳಿದು ಬರುವಾಗ ಜೊತೆಯಲ್ಲಿ ಬಂದ ಆನೆಯ ಹೆಜ್ಜೆಗಳ ಸಪ್ಪಳ ಅವನಿಗೆ ಭೀತಿಯನ್ನು ತಂದಿತ್ತು. ಸೋಲಿಗರ ಹುಡುಗ ಜೊತೆಯಲ್ಲಿ ತಾನಿದ್ದೇನೆ ಎಂದು ಹೇಳಿದ್ದರೂ ಅವನಿಗೆ ಒಳಗಿಂದೊಳಗೆ ಭಯವಿತ್ತು. ಆನೆ ಬರುತ್ತಿದೆಯೆಂದು ಗೊತ್ತಾಯಿತೇ ಹೊರತು ಆನೆ ಬರುತ್ತಿರುವುದರ ಉದ್ದೇಶ ಅವನಿಗೆ ಗೊತ್ತಿರಲಿಲ್ಲ. ಇಲ್ಲಿ ಪ್ರಶ್ನೆ ಎಂದರೆ ಆನೆ ಅವನ ರಕ್ಷಕ ದೈವವಾಗಿ ಬಂದಿತೇ ಇಲ್ಲವೇ ಎನ್ನುವುದು. ನಮಗೆಲ್ಲ ಕಾಡಿನ ಭಯ. ಕಾಡಿನ ಭಯವೆಂದರೆ ಅಜ್ಞಾತದ ಭಯ. ದೇವರ ಭಯವೂ ಹೆಚ್ಚೂ ಕಡಿಮೆ ಅದೇ ರೀತಿಯ ಭಯ. ಈ ಭಯದಿಂದ ನಮ್ಮ ಮತ್ತು ದೇವರ ನಡುವಿನ ಸಂಬಂಧ ಸಹಜವಾಗಿರುವುದಿಲ್ಲ. ಕತೆಯಲ್ಲಿರುವ ತಾಯಿಗೆ ಮಾತ್ರ ಆನೆಯ ಮೇಲೆ ಕುಳಿತವನು ರಂಗನೇ ಹೊರತು ಬೇರೆ ಯಾರೂ ಅಲ್ಲ. ಆ ಹುಡುಗ ಹಾವಿನ ತಲೆಯ ಮೇಲೆ ಮೆಟ್ಟಿ ಕುಣಿದಿದ್ದೇನೆ ಎಂದು ಹೇಳಿದರೂ ಮಗನಿಗೆ ನಂಬಿಕೆ ಬರಲಿಲ್ಲ. ತಾಯಿಗೆ ಸೋಲಿಗರ ಹುಡುಗನಲ್ಲಿ ರಂಗ ಕಂಡ ಮೇಲೆ ಮಗ ಆ ಘಟನೆಯ ಬಗ್ಗೆ ಯೋಚಿಸಲು ತೊಡಗಿದ. ಸೋಲಿಗರ ಹುಡುಗ ಬೆಟ್ಟವನ್ನು ಇಳಿಯುವಾಗ ಆಡಿದ ಮಾತುಗಳನ್ನು ಕುರಿತು ಯೋಚಿಸಿದ. ಬಹುಶಃ ತನ್ನೊಡನೆ ಬಂದವನು ರಂಗನೇ ಇರಬೇಕು ಎಮ್ದು ಸಾವಕಾಶವಾಗಿ ಮನದಟ್ಟು ಮಾಡಿಕೊಂಡ.

ಇಷ್ಟಾಗಿಯೂ ಈ ಕತೆಯ ಮೂಲ ಸಮಸ್ಯೆ ದೇವರ ಸಮಸ್ಯೆ ಅಲ್ಲವೆಂದು ಅನಿಸುತ್ತದೆ. ದೇವರ ಅಸ್ತಿತ್ವದ ಸಮಸ್ಯೆಯನ್ನು ಒಂದು ಕತೆಯ ಮೂಲಕವಾಗಿ ಪರಿಹರಿಸುವುದು ಅಸಾಧ್ಯ. ಇನ್ನೂ ಒಮ್ದು ಮಾತೆಂದರೆ ಈ ಕತೆಗೆ ದೇವರ ಬಗ್ಗೆ ನಂಬಿಕೆ ಇದೆಯೇ ಹೊರತು ಸಂಶಯವಿಲ್ಲ. ತಾಯಿಗೆ ಕಾಣುವ ದೇವರು ಮಗನಿಗೆ ಕಾಣುವುದಿಲ್ಲವೆಂಬ ಸಂಗತಿಯೂ ವಿವಾದಗ್ರಸ್ತವಲ್ಲ. ದೇವರಿದ್ದಾನೆ, ಜಗತ್ತು ಇದೆ. ಆದರೆ ದೇವರು ಜಗತ್ತಿನಲ್ಲಿ ಕಾಣುವ ಬಗೆ ಮಾತ್ರ ಸಂದಿಗ್ಧವಾಗುತ್ತದೆ. ಬೆಟ್ಟವಿಳಿಯುವಾಗ ಜೊತೆಯಲ್ಲಿ ನಡೆದು ಬಂದ ಆನೆಯನ್ನು ದೇವರ ಕೃಪೆ ಎಂದು ತಿಳಿಯುವುದು ಹೇಗೆ.ಬೆಟ್ಟ, ಆನೆ, ತಿಳಿನೀರಿನ ಕೊಳ ಇವೆಲ್ಲ ಪ್ರತ್ಯೇಕವಾಗಿ ಅರ್ಥವಾಗುತ್ತವೆ. ಜೊತೆಯಲ್ಲಿ ಬಂದ ಸೋಲಿಗರ ಹುಡುಗ ಆನೆಗಳ ಬಗ್ಗೆ ಮಾತನಾಡುತ್ತಾನೆ. ಹಾವುಗಳ ಬಗ್ಗೆ ಮಾತನಾಡುತ್ತಾನೆ. ಹಾವುಬಂದರೆ ತಲೆ ಮೆಟ್ಟಬೇಕು, ಬಾಲವನ್ನಲ್ಲ ಎಂದು ಎಚ್ಚರಿಕೆ ಕೊಡುತ್ತಾನೆ. ಹಾವುಗಳನ್ನು ಮೆಟ್ಟಿ ಕುಣಿದಿದ್ದೇನೆ ಎನ್ನುತ್ತಾನೆ. ಇದೆಲ್ಲ ಅರ್ಥವಾಗುವ ಮಾತು ನಿಜ. ಆದರೆ ಪ್ರತ್ಯೇಕವಾಗಿ ಇವು ಯಾವುದೂ ದೇವರ ಕೃಪೆಯಲ್ಲ. ಅಂದ ಮೇಲೆ ಒಟ್ಟಿಗೆ ಕೂಡಿದಾಗ ಅದು ದೇವರ ಕೃಪೆ ಎಂದು ಹೇಗೆ ಅರ್ಥವಾಗುತ್ತದೆ? ದೇವರು ಯಾವ ಹೊತ್ತಿನಲ್ಲಿ ಯಾವ ರೂಪದಲ್ಲಿ ಬರುತ್ತಾನೋ ಹೇಗೆ ಹೇಳುವದು? ಕತೆ ಹೇಳುವವನು ಆಡಿದ ಮಾತಿದು. ನಡೆದ ಘಟನೆಯನ್ನೆಲ್ಲ ಒಂದು ವಾಕ್ಯ ಇಎಂದು ತಿಳಿದರೂ ಈ ವಾಕ್ಯದಲ್ಲಿ "ದೇವರ ಕೃಪೆ" ಎಂದು ಅರ್ಥವನ್ನು ಸ್ಫುರಿಸುವ ಪ್ರತಿಭೆ ಯಾವದು? ಕತೆ ಇದರ ಬಗ್ಗೆ ಮೌನವಾಗಿದೆ. ಬಹುಶಃ ಈ ಮೌನದ ಅರ್ಥವೆಂದರೆ ಹೀಗೆ ನಡೆದಿರುವ ಘಟನೆಗಳ ಹಿಂದೆ ಅವ್ಯಕ್ತವಾಗಿ ದೇವರ ಕೃಪೆ ವಾಕ್ಯದ ಸತ್ಯವಾಗಿ ಓಡಾಡುತ್ತದೆ. ವಾಕ್ಯ ಅಧೀನವಾಗಿದೆ. ಆದರೂ ತಾನು ಅಧೀನನಾಗಿರುವದು ವಾಕ್ಯಕ್ಕೆ ಗೊತ್ತಿಲ್ಲವೆಂದು (ಗೊತ್ತಿಲ್ಲದೆಇರುವುದರಿಂದ) ಅದು ಸ್ವತಂತ್ರವಾಗಿಯೂ ಇದೆ.

ಬಿಳಿಗಿರಿ ರಂಗನ ಬೆಟ್ಟ ಒಂದು ಬೆಟ್ಟ. ಬೆಟ್ಟವೆಂದ ಮೇಲೆ ಕಾಡು, ಕಾಡಿನಲ್ಲಿ ಆನೆಗಳು ಮತ್ತು ತಿಳಿನೀರಿನ ಕೊಳ. ಅಲ್ಲಿಯೇ ಹುಟ್ಟಿ ಬೆಳೆದ ಸೋಲಿಗರು. ಇವರೆಲ್ಲ ರಂಗನನ್ನು ಅರ್ಥ ಮಾಡಿಕೊಂಡಿರುವವರು ಎಂದು ನಮಗೆ ಅರ್ಥವಾದರೂ ಅರ್ಥವಾಗದೆ ಇರುವ ಇನ್ನೊಂದು ಸಂಗತಿ ಇದೆ. ಆ ಸಂಗತಿ ಎಂದರೆ ತನ್ನ ಅಭಿವ್ಯಕ್ತಿಗಾಗಿ ದೇವರು ಈ ಸ್ಥಳವನ್ನು ಆಯ್ದುಕೊಂಡಿರುವುದು. ಈ ಸ್ಥಲದ ಬಗ್ಗೆ ದೇವರಿಗೆ ಒಂದು ಪಕ್ಷಪಾತವಿದೆ. ಹುಟ್ಟಿ ಸಾಯುವ ಸೋಲಿಗರ ನಡುವೆ ಪರಮಾತ್ಮ ತಾನು ಇರಬೇಕೆನ್ನುತ್ತಾನೆ. ಮದ್ದಾನೆಗಳನ್ನೂ ಹಾವುಗಳನ್ನೂ ಮೆಟ್ಟಿ ಅವುಗಳನ್ನು ಪಳಗಿಸಿದ್ದಾನೆ. ಎಲ್ಲಕ್ಕೂ ಹೆಚ್ಚಾಗಿ ಸೋಲಿಗರ ಹೆಣ್ಣನ್ನು ಮದುವೆಯಾಗಿದ್ದಾನೆ. ಅವನು ಮದುವೆಯಾಗಿರದಿದ್ದರೆ ನಿಸ್ಸಂಗನಾದ ದೇವರಿಗೆ ಸಂಸಾರ ಹೇಗೆ ಅರ್ಥವಾಗಬೇಕು? ಸೃಷ್ಟಿಯೆಲ್ಲ ಅವನ ಅಧೀನವಾಗಿದೆ. ಆನೆಗಳು, ಹಾವುಗಳು, ಅವನ ಮಾತು ಕೇಳುತ್ತವೆ. ಅವನ ಅಪ್ಪಣೆಯಿಲ್ಲದೆ ತೃಣ ಕೂಡ ಅಲುಗಾಡುವುದಿಲ್ಲ. ಆದರೆ ದೇವರಿಗೂ ತೃಣ ಅರ್ಥವಾಗಬೇಕಾದ ಅವಶ್ಯಕತೆಯಿದೆ. ತಿಳಿದುಕೊಳ್ಳಬೇಕಾದರೆ ಸ್ವಂತವಿದ್ದದ್ದು ಇತರ ಆಗಬೇಕು. ದೇವರು ಸ್ವಂತವಾದರೆ ಪ್ರಕೃತಿ ಇತರ; ಅದರಂತೆಯೇ ಪ್ರಕೃತಿ ಸ್ವಂತವಾದರೆ ದೇವರು ಇತರ. ದೇವರು ಅಂತರ್ಯಾಮಿಯಾಗುವುದು ಬಹುಶಃ ಇದಕ್ಕಾಗಿ. ದೇವರು ಸ್ವಂತ ಆದರೆ ನಮ್ಮ ಮೂಲಕ ತನ್ನನ್ನೇ ನೋಡಿಕೊಳ್ಳುತ್ತಾನೆ. ತಾಯಿಯ ಕಣ್ಣಿಗೆ ಒಳಗಿದ್ದ ದೇವರು ಆನೆಯ ತಲೆಯ ಮೇಲೆ ಸೋಲಿಗರ ಹೆಣ್ಣಿನೊಂದಿಗೆ ಕಂಡ. ಇದಕ್ಕೆ ಕಾರಣವೆಂದರೆ ಅವನು ಅಲ್ಲಿ ಬಂದದ್ದು ಸೋಲಿಗರ ರಂಗನಾಗಿ.

ಮಾಸ್ತಿಯವರ ಕತೆಗಳಲ್ಲಿನ ಪ್ರಾದೇಶಿಕತೆ. ಬಿಳಿಗಿರಿ ರಂಗನ ಬೆಟ್ಟ ಕೂದ ಅಂತ ಒಂದು ನಿರ್ದಿಷ್ಟವಾದ ಪ್ರದೇಶ. ಈ ಪ್ರದೇಶದಲ್ಲಿ ನಡೆದ ಒಂದು ಸಂಗತಿಯ ಅರ್ಥವೇನು ಎಂದು ಕೇಳುವ ಸ್ವಾತಂತ್ರ್ಯವನ್ನು ಈ ಕತೆ ಇಟ್ಟುಕೊಂಡಿದೆ. ಈ ಸಂಗತಿಯನ್ನು ಹೇಗೆ ಬೇಕಾದರೂ ಅರ್ಥೈಸಬಹುದು. ವಿವರಣೆಯ ಸ್ವಾತಂತ್ರ್ಯ ಅಪಾರವಾಗಿದೆ. ಮಾಸ್ತಿಯವರ ಪ್ರತಿಭೆಯ ವೈಶಿಷ್ಟ್ಯವೆಂದರೆ ಈ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಬಹುದೆಂಬ ಧರ್ಮ ಸೂಕ್ಷ್ಮ, ಮತ್ತು ಸ್ವಾತಂತ್ರ್ಯವನ್ನು ಉಪಯೋಗಿಸುವ ಜವಾಬ್ದಾರಿ." - as quoted by Shri Kurthukoti

ವಿವೇಕಪೂರ್ಣವಾದ ಬರವಣಿಗೆ ಯಾವುದೆಂದರೆ ಸ್ವಾತಂತ್ರ್ಯದ ಉಪಯೋಗದಿಂದ ಸತ್ಯದ ರೂಪರೇಷೆಗಳು ವಿಕೃತವಾಗಬಾರದು ಎಂಬ ಎಚ್ಚರದಿಂದ ಕೂಡಿದ ಬರವಣಿಗೆ. 

 ತುಂಟು ತಮಾಷಿ ರಾತ್ರಿಗಳ ಜಾದೂಗಾರ


ಮಗಳು ಚಂದ್ರಗ್ರಹಣದ ಚಿತ್ರ ಬಿಡಿಸುತ್ತಿದ್ದಳು. ನೋಡಿದ ಅಮ್ಮ ಕೇಳಿದಳು. ಇದೇನು ಇಷ್ಟು ಹತತ್ರ ಬರೆದ್ ಬಿಟ್ಟಿದೀಯಲ್ಲ.ಚೂರು ವಿಶಾಲವಾಗಿ ಬರಿ.

ಮಗಳು ನಗುತ್ತ ಉತ್ತರಿಸಿದಳು. ಅಮ್ಮಾ ನಿನ್ನ ಲಿಟರರಿ ಮೂನಿನ ಹಾಗಲ್ಲ ಇದು. ನಂಗೆ ಈ ಪುಟದ ಅರ್ಧ ಭಾಗದಲ್ಲಿ ಗ್ರಹಣದ ಚಿತ್ರ ಬಿಡಿಸಿ, ಅದರ ಕುರಿತು ಬರೆಯಬೇಕು. ನಿಜವಾಗ್ಲೂ ಚಂದ್ರ ಭೂಮಿಯಿಂದ 3.84.000 ಕಿಮೀ ದೂರದಲ್ಲಿದಾನೆ.. ಅಂ... ದೂರದಲ್ಲಿದೆ. ಈ ಚಿತ್ರದ್ಲಲ್ಲಿ ಚಂದ್ರ ಹೆಚ್ಚೂಕಮ್ಮಿ ಭೂಮಿಯದೇ ಗಾತ್ರದಲ್ಲಿ ಬರೆದಿದೀನಿ. ಆದರೆ ಅದು ಭೂಮಿಗಿಂತ 80 ಪಟ್ಟು ಚಿಕ್ಕದು. ನನಗ್ಗೊತ್ತು ನಿನಗೆ ಆಕಾಶದಲ್ಲಿ ಚಂದ್ರ ಕಂಡ ಕೂಡಲೆ ಮನಸ್ಸು ಹಗುರಾಗುತ್ತದೆ ಅಥವಾ ಭಾರವಾಗುತ್ತದೆ ಆ ಕ್ಷಣದ ನಿನ್ನ ಮೂಡಿನ ಮೇಲೆ. ಆದರೆ ಚಂದ್ರನಿಗೆ ಏನಾಗುತ್ತದೆ ಗೊತ್ತಾ ನಿನಗೆ. ನಾವು ಯಾರೇ ನೋಡಲಿ, ನೋಡದೆ ಇರಲಿ, ಚಂದ್ರಕ್ಕೆ ಆ ಯೋಚನೆಯಿಲ್ಲ. ಅದು ಭೂಮಿಯನ್ನ ಸುತ್ತುತ್ತಿರುವ ಉಪಗ್ರಹ ಮಾತ್ರ. ನೋ ಲೈಫ್. ನೋಡೋಣ ಈ ಚಂದ್ರಯಾನದಿಂದ ಏನೇನು ಹೊಸ ವಿಷಯ ಸಿಗುತ್ತೋ...!

ಉಫ್ ಅಂತ ಉಸಿರೆಳೆದ ಅಮ್ಮ ಶುರುಮಾಡಿದಳು. ನೋಡೇ ಮಗು ನೀನ್ ಹೇಳಿದ್ದೆಲ್ಲಾ ನಿಜಾನೇ. ಆ ಚಂದ್ರ ತನ್ನ ಕಕ್ಷೆಯಲ್ಲಿ ಅದೇ ಆರ್ಬಿಟ್ಟಲ್ಲಿ ಐದೂಮುಕ್ಕಾಲ್ ಡಿಗ್ರೀ ವಾರೆಯಾಗಿ ನಮ್ ಭೂಮೀನ ಅಂದಾಜು 28ದಿನಗಳಲ್ಲಿ ಸುತ್ತಿಬರೋ ನಿರ್ಜೀವ ಉಪಗ್ರಹ ಅನ್ನುವುದು ವೈಜ್ಞಾನಿಕವಾಗಿ ಸಿದ್ಧಪಡಿಸಿದ ಸತ್ಯಾಂಶ ಹೌದು. ಆದ್ರೆ ಹಾಗಂತ ನಮ್ ಲಿಟರರಿ ಮೂನ್ ಏನೂ ಕಡಿಮೆಯಿಲ್ಲ ಆಯ್ತಾ. ನಮ್ಮ ಪುರಾಣ ಕಥೆಗಳಿಂದ ಹಿಡಿದು ಇತ್ತೀಚೆನ ಕವಿಕಥೆಗಾರರಿಗೂ ಚಂದ್ರ ಅಚ್ಚುಮೆಚ್ಚಿನ ಸಂಗಾತಿ. ಚಂದ್ರನಲ್ಲಿ ಬರಿದೆ ನಿರ್ವಾತ ಅದೇ ವ್ಯಾಕ್ಯೂಮ್ ಇರುವುದು ಹೌದು. ಆದರೆ ಅದೇ ಚಂದ್ರನ ಮೇಲೆ ನಮ್ಮಮನೋರಥ ನಮಗೆ ಎಷ್ಟು ಬೇಕೋ ಅಷ್ಟೇ ವೇಗದಲ್ಲಿ ಸಾಗುತ್ತಲ್ಲೇ.

ಬರೀ ಕುಳಿಗಳು, ಧೂಳು, ಕಲ್ಲು, ಮಣ್ಣು ತುಂಬಿದ ಚಂದ್ರನ ಸಾವಿರ ಚಿತ್ರಗಳನ್ನ ಯಾವುದೇ ಡಿಜಿಟಲ್ ಸ್ಯಾಟಲೈಟು ತೆಕ್ಕೊಟ್ಟಿರಬಹುದು. ಭೂಮಿಗೆ ಒಂದೇ ಚಂದ್ರ, ಗುರುಗ್ರಹಕ್ಕೆ 95 ಚಂದ್ರ ಇದಾರೆ ಅಂತ ಕಂಡು ಹಿಡ್ದಿದೀವಿ ಅಲ್ವಾ. ಆದರೆ ರಾತ್ರೆಯಾಕಾಶದ ಕಡುಗತ್ತಲಲ್ಲಿ ಮೋಡಮರೆಯಿಂದ ಹಗೂರಕೆ ಹೊರಬರುವ ಚಂದ್ರನ್ನ ನೋಡಿದ ಕೂಡಲೆ ನಿನಗೆ ಆ ನಿರ್ಜೀವ ಚಿತ್ರಗಳ ಯೋಚನೆ ಬರುತ್ತಾ.. ಗುರುಗ್ರಹದ 95 ಅಥವಾ ಶನಿಗ್ರಹದ 145 ಚಂದ್ರಗಳ ಬಗ್ಗೆ ನೆನಪಿಸಿಕೊಳ್ಳೋಲ್ಲ ಅಲ್ವಾ.. ನಮ್ಮ ಚಂದಿರ ನಮಗೆ ಉದ್ದೀಪಿಸುವ ಮಾರ್ದವ ಭಾವನೆಗಳೇ ಬೇರೆ. ಖುಷಿಯಾದರೆ... ಹಾಲ್ಬೆಳದಿಂಗಳು ಚೆಲ್ಲುವ ಬೆಳ್ಳಿ ಚಂದಿರ ಬೇಜಾರಾಗಿದ್ದರೆ ಶಬನಮ್ ಭೀ ರೋಯೇ ಆಗಿರುವ ಚಂದಿರ... ಅಲ್ವಾ..ನಿನ್ನ ಆನಿಮೇ ಸೀರಿಯಲ್ಲುಗಳಲ್ಲಿ ಬರುವ ಭೂತಚಂದಿರಗಳ ಕಥೆಯೇನು, ಹಾರರ್ ಸಿನಿಮಾಗಳು ಅದೇನೋ ವ್ಯಾಂಪೈರ್ ಡೈರೀ, ಟ್ವೈಲೈಟು..ಅದರಲ್ಲೆಲ್ಲ ಹೆದರಿಕೆ ಹೆಚ್ಚಿಸುವ ರಕ್ತಪಿಪಾಸು ಚಂದಿರ ಯಾರು....ಅಮ್ಮನ ಮಾತುಗಳನ್ನು ತುಂಡರಿಸಿ

ಓ...ಓಓಓ.. ಸರಿ ಸರಿ.. ಅಮ್ಮಾ ನಾನು ನನ್ನ ಹೋಮ್ ವರ್ಕು ಮುಗಿಸುವೆ...ನೀನು ನಿನ್ನ ಚಂದಿರನನ್ನು ಬರೆಯುವ ಟೇಬಲ್ಲಿನ ಮೇಲೆ ಕೂರಿಸಿ ಮಾತನಾಡಿಸಿಕೋ..ಅಂತ ಸುಮ್ಮನಾಗಿಸಿದಳು ಮಗಳು.

ಚಂದಿರನನ್ನು ನಾನು ಓದುವ ಟೇಬಲ್ಲಿಗೆ ಕರೆತಂದೆ. ಜಗತ್ತಿನೆಲ್ಲೆಡೆಯ ಸಾಹಿತ್ಯದ ವಿವಿಧ ಭಾಷೆಗಳಿಂದ ಚಂದಿರನ ಬೆಳಕು ನನ್ನ ಟೇಬಲ್ಲಿಗೆ ಹರಿದವು. ಅದರಲ್ಲಿ ಕೆಲಕಿರಣಗಳು ಈ ಲೇಖನದಲ್ಲಿ...

ಶತಮಾನಗಳಿಂದ ನಮ್ಮ ಸಾಹಿತ್ಯದಲ್ಲಿ ಚಂದಿರನೆಂದರೆ ಬೆರಗು, ನಿಗೂಢತೆ, ಚೆಲುವು, ಪ್ರಣಯಕ್ಕೂ ವಿರಹಕ್ಕೂ ಸಮಾನವಾಗಿ ಸಲ್ಲುವ ಜೊತೆಗಾರ/ತಿ, ಸಾವಲ್ಲಿ ಮಂಕಾದ ಕಿರಣಗಳನ್ನ ಸೂಸುತ್ತ ನೇವರಿಸುವ ಸಾಂತ್ವನ, ಇನ್ನೂ ಕೆಲಕಡೆ ನವಿರುಹಾಸ್ಯಕ್ಕೆ ಚೆಲ್ಲಿದ ಬೆಳದಿಂಗಳು, ಕುಡುಕರ ದಾರಿದೀಪ, ತತ್ವಜ್ಙಾನಿಗಳ ನಂದಾದೀಪ, ಹುಚ್ಚುಮನಸ್ಸನ್ನು ಕೆದರಿಸುವ ಉದ್ದೀಪನ, ಭೂತಪಿಶಾಚಗಳ ಉತ್ತೇಜಕ, ಮೂಢನಂಬಿಕೆಗಳ ವಾಹಕ, ಮಕ್ಕಳನ್ನು ಥಟ್ಟನೆ ಹಿಡಿದಿಡುವ ಅವರ ರಚ್ಚೆಗಳನ್ನು ಪಟಕ್ಕನೆ ಬದಲಿಸಬಲ್ಲ ಸೂತ್ರ.. ಹೀಗೆಲ್ಲ ಹಲಬಗೆಗಳಲ್ಲಿ ಬಗೆಬಗೆಯಾಗಿ ವರ್ಣಿಸಲ್ಪಟ್ಟ ಹಲವಾರು ಪ್ರತಿಮೆಗಳಿವೆ. ಮಜವೆಂದರೆ ಓದುವಾಗ ಚಂದಿರನ ಕುರಿತ ವೈಜ್ಞಾನಿಕ ಅಂಶಗಳ್ಯಾವುದೂ ಗೊತ್ತಿದ್ದರೂ ನೆನಪಾಗುವುದಿಲ್ಲ. ಸಾಹಿತ್ಯದ ಮೋಡಿಯಲ್ಲಿ ಚಂದಿರ ಸಜೀವವಾಗಿ ನಮ್ಮ ಭಾವಗಳಿಗೆ ಸ್ಪಂದಿಸುತ್ತಾನೆ. ಜಗತ್ತು ಕಂಡ ಶ್ರೇಷ್ಠ ನಾಟಕಕಾರ, ಕವಿ ಶೇಕ್ಸ್ಪಿಯರನ ಕೃತಿಗಳಲ್ಲಿ ಆಯಾ ಕೃತಿಗಳ ಭಾವಸೇಚನಕ್ಕೆ ತಕ್ಕಂತೆ ಚಂದಿರ ಬಂದೇ ಬರುವನು. ಒಮ್ಮೆ ದೇವತೆಗಳ ತೂಗುಕುರ್ಚಿಯಾದರೆ, ಇನ್ನೊಮ್ಮೆ ಯಕ್ಷಿಣಿಯರ ನಿಗೂಢತೆಯನ್ನ ಚೂರು ಚೂರೇ ನಮ್ಮ ಕಣ್ಣಿಗೆ ಹಾಯಿಸುವ ಬೆಳಕಿನ ಸೇತುವೆ. ಒಮ್ಮೆ ಸಮಾಜದ ಕೊಳಕುಕಸರುಗಳಿಗೆ ಬಿರಿಬೆಳಕನ್ನು ಬೀರುವ ಹುಣ್ಣಿಮೆಯೇ, ಇನ್ನೊಮ್ಮೆ ಪ್ರೇಮಿಗಳ ಪಿಸುಮಾತಿನ ರಾತ್ರಿಯ ಮೃದುಹೊದಿಕೆಯಾದ ಬೆಳದಿಂಗುಳು. ಒಮ್ಮೆ ಏಕಾಂತ ಸಂಭಾಷಣೆಯ ಒಬ್ಬನೇ ಕೇಳುಗನಾದರೆ ಇನ್ನೊಮ್ಮೆ ತುಂಟುತಮಾಷಿಯ ರಾತ್ರಿಗಳ ಜಾದೂಗಾರ. ಪ್ರಣಯ, ಹುಚ್ಚು, ನಿಗೂಢತೆ, ಮನುಷ್ಯ ಮನಸ್ಸಿನ ಅತಿರೇಕ, ಚಾರಿತ್ರ್ಯದ ಕಲ್ಪನೆಗಳ ಎರಡು ತುದಿ ಇವುಗಳನ್ನ ನಿರೂಪಿಸಲು ಶೇಕ್ಸ್ಪಿಯರ್ ಚಂದಿರನನ್ನು ಸಮರ್ಥವಾಗಿ ಬಳಸಿದ್ದಾನೆ.

ನನ್ನ ಟೇಬಲ್ಲಿನ ತುದಿಯಲ್ಲಿ ನಡುವಸಂತದ ರಾತ್ರಿಯ ಕನಸಿನ ಚಾಪೆ ಬಿಡಿಸುತ್ತಾ ಶೇಕ್ಸ್ಪಿಯರ್ ಗುನುಗುತ್ತಿದ್ದಾನೆ.

Four days will quickly steep themselves in night; Four nights will quickly dream away the time: And then the moon – like to a silver bow New-bent in heaven – shall behold the night Of our solemnities.

(ನಾಕಾರು ದಿನ ರಾತ್ರಿಗಳು ಪಟಪಟನೆ ಸಾಗುವವು ಕನಸಿನಂತೆ..ದೇವಲೋಕದ ಬೆಳ್ಳಿಚಂದಿರ ಬಾಗಿಬರುವನು ನಮ್ಮ ಮಿಲನದ ಕ್ಷಣಗಳ ಕಾಯಲಂತೆ...)

ಆಹಾ..ಎಂದು ಉಧ್ಗರಿಸುವ ಮುಂಚೆಯೇ ಆ ಕನಸಿನ ಚಾಪೆಯನ್ನು ಮಡಚುತ್ತಾ ಪಿ.ಬಿ.ಶೆಲ್ಲಿ ಉಸುರಿದ.

Wandering companionless Among the stars that have a different birth,— And ever changing, like a joyless eye That finds no object worth its constancy?

(ಚೇತನ ತುಂಬಬಲ್ಲವರಾರಿಲ್ಲದೆ ಸಂತಸರಹಿತ ನೋಟವದು ಎಲ್ಲೂ ನಿಲ್ಲದೆ ಅತ್ತಿತ್ತ ಓಡುವಂತೆ ಮಿನುಗುತಾರೆಗಳ ಮಧ್ಯೆ ಮಂಕಾಗಿ ಚಣಚಣಕೂ ಬದಲಾಗುವ ಜತೆರಹಿತ ಚಂದಿರ)

ಅವ ಮಡಚಿಟ್ಟ ಚಾಪೆಯನ್ನು ಬದಿಗೆ ಸರಿಸುತ್ತ ವರ್ಡ್ಸವರ್ಥ್ ಲೂಸಿಕವಿತೆಯೊಂದನ್ನು ಪುಟ್ಟಬಟ್ಟಲಲ್ಲಿ ಕೈಗಿಟ್ಟ..down behind the cottage roof / At once the planet dropped

ಪ್ರೇಯಸಿಯ ಹಂಬಲದ ಪಯಣದಲ್ಲಿ ಪ್ರೇಮಿಯ ಜತೆಗೆ ದಾರಿಯಿಡೀ ಹತ್ತಿಳಿಯುತ್ತ ಸಾಗುತ್ತಿದ್ದವ ಇದ್ದಕ್ಕಿದ್ದಂತೆ ಮನೆಯಿಂಚಿನ ಆಗಸದಿಂದ ಜಾರಿಬಿದ್ದು ಅಸ್ತಮಿಸುತ್ತಾನೆ, ಲೂಸಿಯ ಸಾವನ್ನು ಸೂಚಿಸುವಂತೆ! ಆ ನೋವಿನ ಕ್ಷಣದಲ್ಲಿ ಮುಚ್ಚಿದ ಕಣ್ಣಿಗೆ ಚುಚ್ಚುತ ಬಂದಳು ಎಮಿಲಿ..

I watched the Moon around the House..

And next—I met her on a Cloud— Myself too far below To follow her superior Road— Or its advantage—Blue—

(ಜಗುಲಿಯಲಿ ನಿಂತೇ ನಾ ನೋಡಿದೆನವಳ ಚಂದಿರಳ..ಮಂತ್ರಮುಗ್ಧಳಾಗಿ ಹೊರಟೆ ಹಿಂದೆ ಅವಳ...ಅವಳೋ ನನ್ನೊಲವ ಅರಿವಿರದ ತನದೇ ಪಯಣದ ಗುರಿ ಸಾಧಿಸುವ ನಿರ್ಮೋಹಿ ಚೆಲುವೆ. ಮರ್ತ್ಯಳೆನ್ನ ಬಯಕೆ,ಛಲ ಹೊಂದದೇ ಹೋಯಿತು ದಿವದ ಸುಂದರಿಯ ಪಥಕೆ..)

ಈ ವಾಸ್ತವದ ಲೇಪನದ ಮಂಕು ಬಡಿದು ಕೂತ ನನ್ನನು ಮೆಲುವಾಗಿ ಸಂತೈಸಲು ಬಂದನು ಉಮರ.

Ah, Moon of my Delight who know'st no wane, The Moon of Heav'n is rising once again: How oft hereafter rising shall she look Through this same Garden after me - in vain!

(ಸ್ವರ್ಗದ ಚಂದಿರ ಬೆಳೆವುದು ಕ್ಷಯಿಪುದು ದಿನದಿನವೂ ಬದುಕಿನ ಬನದಿ. ಆದರೇನಂತೆ ಆಹ್.. ನನ್ನ ಸ್ವಾನಂದದ ಚಂದಿರ ಇನ್ನೆಂದೂ ಕ್ಷೀಣಿಸದ ಹಾಗೆ ಬೆಳಗಿದೆ..)

ಉಮರನ ಒಸಗೆಯಿಂದ ಸ್ವಲ್ಪ ಸಮಾಧಾನವಾಗುವಾಗಲೇ...ರಮಿಸುತ ಬಂದರು ರಫಿ ಮತ್ತು ಲತಾ. ಕೈಫ್ ಭೂಪಾಲಿಯವರ ಕವಿತೆಯ ಉಲಿಯುತ್ತಾ

ಚಲೋ ದಿಲ್ ದಾರ್ ಚಲೋ ಚಾಂದ್ ಕೇ ಪಾರ್ ಚಲೊ..

ನಾನೆದ್ದು ಹೊರಟೆ..ಹಮೇ ತಯ್ಯಾರ್ ಚಲೋ ಅಂತ.

*****************************************************
20 August 2023 : ಭಾನುವಾರ ವಿಜಯ ಕರ್ನಾಟಕದ ಲವಲವಿಕೆಗೆ ಬರೆದ ಲೇಖನ : ಚಂದ್ರಯಾನ್ 3 ರ ಯಶಸ್ಸಿಗೆ ಕಾಯುತ್ತಿರುವ ಹೊತ್ತಲ್ಲಿ ಬರೆದ ಲೇಖನ.