Sunday, November 1, 2009

ತವಕ..ತಲ್ಲಣ.ಸಂತಸ.. - ಮಿಶ್ರಮಾಧುರ್ಯ ಸೀರೀಸ್

ರದನೋದಯ ಜ್ವರ ದಮ್ ರೋಟ್ ಮೇಲೆ ನಡೆಯುತ್ತಾ ಇದೆ. :)
ಇನ್ನೂ ಹಲ್ ಬಂದಿಲ್ಲ ಹಲ್ ಸೆಟ್ಟಿಗೆ ಆರ್ಡರ್ ಕೊಡಬೇಕೋ ಏನೋ ಅಂತ ಯೋಚನೆ ಮಾಡುತ್ತಾ ತುತ್ತು ಇಡುವಾಗ ಬೆರಳು ಕಡಿದು ಬಿಡಬೇಕೇ..!!
ಟುಪ್ಪೂಗೆ ಹನ್ನೊಂದು ತುಂಬಿತು..!
ಸಣ್ಣದಾಗಿ ಜ್ವರ ಮತ್ತು ಆಗ ಈಗ ಲೂಸ್ ಮೋಶನ್ ಆಗ್ತಾ ಇದ್ರೂ, ದಮ್ರೋಟ್ ಮಾಡಿದ್ರೆ ತಿನ್ನದೆ ಹ್ಯಾಗಿರೋದು ಅಂತ ಚಪ್ಪರಿಸಿಕೊಂಡು ತಿನ್ನುತ್ತೆ ಈ ಪುಟ್ಟಗುಬ್ಬಿ ಈಗ. ಹನ್ನೊಂದು ಮಾಸಗಳುರುಳಿ ವರ್ಷದ ಹೆಜ್ಜೆಗಳು ಮೆತ್ತಗೆ ಮೂಡ್ತಾ ಇದೆ.
ಮರಿಗೆ ಕೈಬಿಟ್ಟು ನಡೆಯಲು ತವಕ, ನೋಟ ಸಕ್ಕತ್ತಾಗಿರುತ್ತಾದರೂ ಅಮ್ಮನಿಗೆ ತಲ್ಲಣ. :)

Monday, September 28, 2009

::ಸೃಷ್ಟಿ ಶುಭದಾಯಿನಿ::

::ಮಾತುಗಳನ್ನು ಮೀರಿದ ಬೆಡಗು::
ಬೆರಗು,ಹೊನಲು,ನಸು-ಬೆಳಗು,ಬೆಳದಿಂಗಳ ಮಿಶ್ರ ಮಾಧುರ್ಯಕ್ಕೀಗ 10 ತಿಂಗಳು!

Thursday, September 24, 2009

Ground Reality hurts.. n its unfair world!

ಸಮಾನತೆ, ಸ್ವಾತಂತ್ರ್ಯ
ಸ್ವಾವಲಂಬನೆ
ಒಳ್ಳೆಯ ಉಕ್ತಲೇಖನದ ಪದಗಳು.
ಎಷ್ಟೇ ಸರಿಯಾಗಿ ಬರೆದರೂ
ಅವು ಪುಸ್ತಕದ ಮೇಲೆ ಮಾತ್ರ.
ಮಾತುಗಳಲ್ಲಿ ಬಂದರೂ
ಭಾಷಣಗಳಲ್ಲಿ ಮಾತ್ರ.
ಪದಗಳಲ್ಲಿ ಮೂಡಿದರೂ
ಪ್ರಶಸ್ತಿ ಪಡೆಯುವ ಕವಿತೆಗಳಿಗೆ ಮಾತ್ರ.
ಚಿತ್ರದಲ್ಲಿ ಬರಬೇಕಿದ್ದರೆ
ಕಲಾತ್ಮಕ ಸಿನಿಮಾಗಳಿಗೆ ಮಾತ್ರ.
ಬದುಕಿನ ಸ್ತರವೇ ಬೇರೆ
ಹೆಣ್ಣು ಯಾವತ್ತಿದ್ದರೂ ಹೊಂದಾಣಿಕೆಗೆ ಮಾತ್ರ.

Friday, August 28, 2009

ಅಶ್ರುತ ಗಾನ..

ಬೇಸರ,ಸಂಕಟ,ಅನಾನುಕೂಲಗಳನ್ನೆಲ್ಲ
ಮೂಟೆ ಕಟ್ಟಿಟ್ಟ
ಆಹ್ಲಾದದ ಹಾದಿಯದು
ಪುಲ್ಲ ಕುಸುಮಿತ ದ್ರುಮದಲ ಶೋಭಿನೀ
ಹೊರೆಗೆಲಸದ ಕಟ್ಟೆಯಿಳಿದು
ಕಾಲು ಚೆಲ್ಲಿದ ಕೂಡಲೆ
ಮುತ್ತಿಡುವ ಆಶಾದಾಯಿನಿ

ಯಾವ ತಿರುವಲ್ಲಿ ತಿರುಗಿದೆನೋ ಗೊತ್ತಿಲ್ಲ
ಅನುಕೂಲಗಳ ಆತಂಕರಹಿತ
ಅನಾಹತ ಹೈವೇಗೆ ಬಂದಾಯಿತು
ಇಲ್ಲೇ ಸುದೂರದಿ
ನೀಲಿಗೆರೆಯ ಸುತ್ತಲ
ಹಸಿರು ಪದರದ ಹಾದಿಯ ಸಂಜೀವಿನೀ
ದೂರವೇನಿಲ್ಲ,
ಕಾಲಿಗೆ ದಕ್ಕುವುದಿಲ್ಲ,
ನಡುವೆಯಿರುವುದೀಗ
ದಾಟಿ ಹಾರಬಹುದಾದ ಕಿಟಕಿಯಲ್ಲ
ದಿನದಿನವೂ ಮೊನಚಾಗಿ ಚುಚ್ಚುವ ಕನ್ನಡಿ!
ಮುಂದೆ ಮುಂದೆ ಹೋದರೆದಾರಿ ಸಿಕ್ಕದಲ್ಲ
ಹಿಂದೆ ತಿರುಗಿ ಹೋಗಬಹುದೆ?
ಅದರ ಗುಟ್ಟು ನನಗೆ ತಿಳಿಯದಲ್ಲ..!
ಕೂತು ಯೋಚಿಸಲು ಗಡಿಬಿಡಿ
ಕೊನೆಗೆ ಷರಾ ಹೋಗಲಿಬಿಡಿ..
ಆಕಡೆ ನೋಡದಿದ್ದರಾಯಿತು
ದಾರಿ ತನ್ನ ಪಾಡಿಗೆ ತಾನು ಕನ್ನಡಿಯಲ್ಲಿರಲಿಬಿಡಿ

ಆದರೂ...

ಈಗ ಇಲ್ಲದಿದ್ದರ ಕುರಿತು
ಕೊರಗಿ ನಲುಗುವ ಮೊದಲು
ಒಂದು ಕೃತಜ್ಞತೆ ಹೇಳಬೇಕಿದೆ,
ಇಲ್ಲಿಯವರೆಗೆ ನಿಲುಕಿದ್ದಕ್ಕೆ
ಬೇಕಿತ್ತೋ ಬೇಡವೋ ಒಳಗೊಂಡಿದ್ದಕ್ಕೆ
ಕೇಳದೆಯೇ ಒಲಿದು ಬಂದದ್ದಕ್ಕೆ
ಕಣ್ಣಹನಿಯಿಳಿಯುವಾಗ ಅಂಗೈ ಹಿಡಿದದ್ದಕ್ಕೆ
ಹೆಜ್ಜೆ ಜಾರುವಾಗ, ಕೈಬೆರಳ ಬಿಗಿದು ಹಿಡಿದ ಬಿಸುಪಿಗೆ
ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?

ಸಂಕಟಕಳೆದು
ನಲಿವು ಮುಗಿದು
ಸ್ಥಿತಪ್ರಜ್ಞಯೋಗದಲ್ಲೂ
ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!

Thursday, August 27, 2009

ನೀಲಾಂಬರದ ನಡುವಿನ ಚಂದಿರನ ಸೇರಲು ನಗುತ ಹೊರಟ ರೋಹಿಣಿ..

ಮಲ್ಲಿಗೆಯ ಪರಿಮಳದ ಹಾದಿ ಹಿಡಿದು ನಡೆದ ವೆಂಕಮ್ಮ ಕೆ.ಎಸ್.ನ ಅವರ ಬಗೆಗೆ ನನ್ನ ನುಡಿನಮನವನ್ನ ಕೆಂಡಸಂಪಿಗೆ ಪ್ರಕಟಿಸಿದೆ.
ನಿನ್ನೆ ಬುಧವಾರ ಬೆಳಿಗ್ಗೆ
ತನ್ನ ಹಾದಿ ಕಾಯುತ್ತ ಕೂತಿರಬಹುದಾದ
ಕವಿಚೇತನವನ್ನ ಸೇರಲು
ಅವರ ಮನೆಯೊಡತಿ ಹೊರಟು ಹೋಗಿದ್ದಾರೆ.

ಕಾವ್ಯಶ್ರೀ..ಯ ಹಿರಿಯಚೇತನಗಳನ್ನ ಕಳೆದುಕೊಂಡ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಬರಲಿ.
ಪ್ರೀತಿಯ ನಮನಗಳು ವೆಂಕಮ್ಮನವರಿಗೆ.

ಪ್ರೀತಿಯಿಂದ
ಸಿಂಧು

Wednesday, August 19, 2009

ಬರಿ ಬೆಳಗಲ್ಲೋ ಅಣ್ಣಾ...

ಪಾದರಕ್ಷೆಯೊಳಗಣ ಒದ್ದೆ ಮುದ್ದೆ ಪಾದ
ನೆನೆದು ತೋಯ್ದ ರಸ್ತೆಯ ಮೇಲೆ
ಕೊಡೆಯ ಕೆಳಗೇ ನಡೆದೂ
ಮೇಲುದದ ತುದಿಯಲ್ಲಿ ತುಂತುರು ಹನಿಗಳು
ಛೇ, ಬೆಳಗಿನ ಹೊಸ್ತಿಲಲಿ
ಹೀಗೆ ಮಳೆ ಹುಯ್ದರೆ
ಆಫೀಸಿಗೆ ಹೋಗುವುದು ಹೇಗೆ
ಎಷ್ಟು ಕಷ್ಟವಪ್ಪಾ ಬದುಕೂ...
ಥಂಡಿಯಲಿ ತುಟಿ ಸುತ್ತಿಸಿ ಒಳಗಿನ ಬಿಸಿಯನ್ನು
ಗಾಳಿಯಲಿ ಊದಿಬಿಟ್ಟ ಉಂಗುರಗಳನ್ನ
ನೋಡುತ್ತ ಕತ್ತು ಮೇಲೆತ್ತಿದರೆ..

ಬೀದಿಯಂಚಲಿ
ಮೋಡವೇ ತನ್ನೊಳಗೆ ಎಂಬಂತೆ
ಹನಿಯಿಡುತ್ತಿರುವ ಆಕಾಶಮಲ್ಲಿಗೆಯ ಮರ
ತೂಗಿಬಿದ್ದ ಬೆಂಡೋಲೆಹೂಗಳ ಗೊಂಚಲಲ್ಲಿ
ಪರಿಮಳವ ಹೊದ್ದು
ಇಳಿಯುತ್ತಿರುವ ಬನಿ
ಯಾರೂ ರಂಗೋಲಿಯಿಡದ
ಮುಖ್ಯರಸ್ತೆಯ
ಮೈಯ ತುಂಬ
ಚಿತ್ತಾರವಿಟ್ಟ ಬಿಳಿಬಿಳಿಹೂಗಳು
ಎಲೆಮರೆಯಲ್ಲಿ ಒದ್ದೆ ಪುಕ್ಕ
ಕೊಡವುತ್ತ ಆರ್ದ್ರವಾಗಿ ಕುಳಿತು
ಬೆಚ್ಚನೆ ರಾಗವ ಉಲಿಯುತ್ತಿರುವ ಹಕ್ಕಿ ಸಮುದಾಯ
ಬೇಡಿಕೆ, ಬೇಸರಗಳಿಲ್ಲದ ಸಹಜ ಸತ್ಯ ಬದುಕು

ಅದೇ ಒದ್ದೆಮುದ್ದೆ ಹಾದಿ,
ಮೈ ತೋಯಿಸುವ ಮಳೆ ಆಪ್ತವೆನಿಸಿ..
ಅಷ್ಟೇ ಅಲ್ಲ
ಕಾದಿರುವ ಬೆಚ್ಚನೆ ಕ್ಯಾಬು,
ಒಣಗಿ ಗರಿಗರಿಯಾಗಿರುವ ಆಫೀಸು ಕ್ಯೂಬು
ಎಲ್ಲ ನೆನಪಾದವು...
ಇದು ಬರಿ ಬೆಳಗಲ್ಲೋ ಅಣ್ಣಾ -
ಬೇಂದ್ರೆ ಅಂದರಂತೆ
ಹೌದೆನಲು ಮಾತು ಮರೆತು ನಿಂತೆ!

ಕಾರ್ಪೋರೇಟ್ ಮೌನದಲಿ
ಮರೆತ ಮಾತು ಆವಿಯಾಗುತ್ತಿದೆ
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ
ನೋಡಬೇಕು ಅಷ್ಟೆ!