Wednesday, January 18, 2012

ದೀಪಕ ರಾಗ

ದೀಪು - ನನ್ನ ತಮ್ಮನ ಸ್ನೇಹಿತ. ನಮ್ಮ ಆತ್ಮೀಯ ಬಳಗ.
ಎಲ್ಲ ಸೌಕರ್ಯಗಳ ನಗರೀಕರಣದ ಬದುಕಲ್ಲಿ ಯಾವಾಗಲೂ ಹಳ್ಳಿಯೂರಿನ ನೆನಪಿನ ನಾವೆಯಲ್ಲಿ ತೇಲಿಹೋಗುವ ನನಗೆ ದೀಪು ಈ ಅಂತರಾಳದ ಮಾಸ್ಟರ್ ಕಾಪಿ ಸೀಡಿ ಕೊಟ್ಟಾಗ ತುಂಬ ಖುಶಿಯಾಯ್ತು. ಇದು ದೀಪುನ ಮೊದಲ ಪ್ರಯತ್ನ. ಏನಾರೂ ಮಾಡ್ಬೇಕು ಅಕ್ಕಾ, ಸುಮ್ನೆ ಸಾಫ್ಟ್ವೇರ್ ಕೆಲ್ಸ ಮಾತ್ರ ಮಾಡ್ಕೊಂಡು ಸಾಕಾಗೋಗಿದೆ ಅಂತ ಈಗೊಂದು ವರ್ಷದ ಹಿಂದೆ ಅವನು ಅಂದಾಗ ನಾನು ನಕ್ಕಿದ್ದೆ. ಎಲ್ರಿಗೂ ಹಾಗೆ, ಆಮೇಲಾಮೇಲೆ ಅದೇ ಅಭ್ಯಾಸ ಆಗಿ ಸುಮ್ನಾಗ್ತಾರೆ ಅಂತ ಅಂದೂ ಇದ್ದೆ. ಅದಕ್ಕೆ ಅವನು ಇಲ್ಲಾ ಅಕ್ಕಾ, ನಾನು ಮ್ಯೂಸಿಕ್ಕಲ್ಲಿ ಏನಾರು ಮಾಡ್ಬೇಕು ನಮ್ಮ ಬದುಕು ತುಂಬಿಕೊಳ್ಳೋಕೆ ಬೇಕಾದಷ್ಟು ದಾರಿ ಇದ್ದೇ ಇರತ್ತೆ. ನಂಗೆ ಸಂಗೀತ.. ಅಂದಾಗ ನಂಗೆ ದೇಜಾ-ವೂ ಅನ್ಸಿದ್ದು ನಿಜ. ಎಳೇ ಕಣ್ಣಿನ ಕನಸುಗಳನ್ನ ಭಂಗಗೊಳಿಸುವ ಇಷ್ಟ ನಂಗೆ ಚೂರೂ ಇರಲಿಲ್ಲ.

ಅವನು ಗಿಟಾರ್ ಕಲಿಯುವುದು, ಕೀ ಬೋರ್ಡ್ ಕಲೀತಿರೋದು, ಈ ಮ್ಯೂಸಿಕ್ ಆಲ್ಬಂ ಮಾಡ್ಬೇಕಿದ್ರೆ ಏನೇನ್ ಮಾಡ್ಬೇಕು ಹೀಗೆಲ್ಲ ಹಂತಗಳಲ್ಲೂ ನನಗೆ ಒಂದೊಂದು ಅಪ್ ಡೇಟ್ ಸಿಗ್ತಾ ಇತ್ತು. ಈ ಕನಸುಗಳ ಹಾದಿಯ ಹೂ ಮೊಗ್ಗುಗಳ ಪರಿಚಯ ಸಿಕ್ಕಿದ್ದೇ ಆಗ ನಂಗೆ.
ನಮ್ಮೂರಿನ ಹುಡುಗ, ತಮ್ಮನ ಗೆಳೆಯ, ಎಳೆಯ ಚೈತನ್ಯ ಎಂಬೆಲ್ಲ ವಾತ್ಸಲ್ಯವನ್ನು ಮೀರಿದ ಒಂದು ಮೆಚ್ಚುಗೆ ನಂಗೆ ಅವನ ಮೇಲೆ.


ಥ್ಯಾಂಕ್ ಗಾಡ್ ಇಟ್ ಈಸ್ ಫ್ರೈಡೇ ಅಂತೇಳಿ ಸೊಂಟಕ್ಕೆ ಗೆಳತಿಯ ಕೈ ಸಿಕ್ಕಿಸಿಕೊಂಡು ರಾಜಧಾನಿಯ ರಸ್ತೆಗಳಲ್ಲಿ ಬೈಕು ಹತ್ತಿ ಹೊಗೆಯೆಬ್ಬಿಸುವ ಸಾಧ್ಯತೆಯ ಅಸಂಖ್ಯಾತ ಯುವಕರ ಮಧ್ಯೆ, ತನ್ನ ಸಂಜೆಗಳನ್ನ ತಾನು ಕಂಡ ಕನಸಿಗೆ, ತಾನು ಅನುಭವಿಸಬೇಕಿರುವ ಹುಚ್ಚಿಗೆ ಮೀಸಲಿಟ್ಟು, ಇವೆಲ್ಲದರ ನಡುವೆ ಗೆಳತಿಯ ಮಾತುಕತೆಗಿಷ್ಟು ಸಮಯ ಕೊಟ್ಟು ಏನೋ ಮಾಡಬೇಕು ಎಂಬಲ್ಲಿನ "ಬ್ಲಾಂಕ್ ಸ್ಪೇಸು"ಗಳಲ್ಲಿ ಸಂಗೀತದ ನೋಟುಗಳನ್ನ ತುಂಬಿಸುವುದು ನಿಜಕ್ಕೂ ವಿಶಿಷ್ಟ ಪ್ರಯತ್ನ.


ಅಕ್ಷರ, ಸಾಹಿತ್ಯ, ಸಂಗೀತ, ಲಯ ಎಲ್ಲವೂ ತುಂಬ ಪರಿಶ್ರಮ ಬೇಡುತ್ತವೆ. ಕರೋಕೆ ಸೀಡಿಗಳನ್ನಿಟ್ಟು ಕವಿತೆ ತುಂಬಿಸುವುದು, ಎಲ್ಲೆಲ್ಲಿಂದಲೂ ಕದ್ದ ರಾಗಗಳನ್ನಿಷ್ಟು ಮಿಸಳ್ ಭಾಜಿ ಮಾಡುವುದು ಹೊಸದೇನಲ್ಲ. ಎಲ್ಲರೂ ಅನಂತಸ್ವಾಮಿ,ಅಶ್ವತ್ಥ ಆಗುವುದಿಲ್ಲ. ಎಲ್ಲ ಅಸಂಗತ ಕವಿತೆಗಳೂ ಗೋಪಿ ಮತ್ತು ಗಾಂಡಲೀನ ಎನಿಸುವುದಿಲ್ಲ. ದೂರದ ನಕ್ಷತ್ರದಟ್ಟ ಕಣ್ಣು ನೆಟ್ಟವನ ಕೈಗಳಲ್ಲಿ ಮನೆಯ ಸುತ್ತಲಿನ ಕತ್ತಲಿಗೆ ಒಂದು ಹಣತೆ ಬೆಳಗುವ ಕೆಲಸ ಮಾಡಬೇಕೆಂಬ ತೀವ್ರತೆ ಎಲ್ಲರಿಗೂ ಅನಿಸುವುದೂ ಇಲ್ಲ. ದೀಪು ಮಾಡಿದ್ದು ಇಂತಹ ಪ್ರಯತ್ನ. ಊರಿಂದ ಬಂದು ಇಲ್ಲಿ ನೆಲೆಸಿದವರ ಹಾಗೆ ಹಳಹಳಿಕೆಗೆ ಬಲಿಯಾಗದೆ, ಯುವ ಸಹಜ ಉತ್ಸಾಹವನ್ನ ಮೊಟಕುಗೊಳಿಸದೆ ತನ್ನ ಚೈತನ್ಯಕ್ಕೊಂದು ಹರಿವನ್ನ ತಾನೇ ಒದಗಿಸಿಕೊಂಡ ಈ ಪ್ರಯತ್ನವನ್ನ ಮೆಚ್ಚಲೇಬೇಕು. ಅಭಿನಂದಿಸಲೇಬೇಕು.


ಇಷ್ಟಕ್ಕೂ ಇವನು ಮಾಡಿದ್ದು ಏನು?
ಅನಿಸಿದ ಕೂಡಲೆ ಸಂಗೀತ ಕಲಿಯಲು ಹೊರಟಿದ್ದು.
ಗಿಟಾರು ಕೊಂಡಿದ್ದಲ್ಲದೇ, ಕೀ ಬೋರ್ಡನ್ನೂ ಕಲಿತಿದ್ದು,
ಗೆಳೆಯ-ಗೆಳತಿಯರ ಗುಂಪಲ್ಲಿ ಕವಿತೆ ಹುಡುಕಿದ್ದು
ಮಾತುಗಳ ಸೇತುವೆಯಲ್ಲಿ ಆಲ್ಬಂ ಮಾಡಲು ಬೇಕಿರುವ ನಂಟು ಹುಡುಕಿದ್ದು
ಸ್ಟುಡಿಯೋ,ರೆಕಾರ್ಡಿಂಗ್, ಕೋ-ಆರ್ಡಿನೇಶನ್, ಗಾಯಕ-ಗಾಯಕಿಯರ ಆಯ್ಕೆ ಮತ್ತು ಮನವೊಲಿಕೆ,ಓಡಾಟ, ಹೊಂದಾಣಿಕೆ, ಕಾರ್ಯಕ್ಷಮತೆ ಎಲ್ಲವನ್ನೂ ನಿಭಾಯಿಸಿದ್ದು.
ಇದೆಲ್ಲದರ ಒಟ್ಟು ಮೊತ್ತವೇ - ಒಂಬತ್ತು ಭಾವದಲೆಗಳ ಮೆಲುದನಿಯನ್ನ ಸೀಡಿಯಲ್ಲಿ ಮೆಲೋಡಿಯಾಗಿ ಕೇಳಿಸಿದ್ದು.

ಇಷ್ಟೇನಾ ಇದು ಸ್ವಲ್ಪ ಎಫರ್ಟ್ ಹಾಕಿದ್ರೆ ಎಲ್ರೂ ಮಾಡ್ಬೋದು ಅನ್ನಿಸಿದ್ರೂ.. ಒಂದು ನೆನಪಿರಲಿ.
ಅಸ್ಪಷ್ಟ ಕನಸೊಂದು ತೀವ್ರ ಹಪಾಹಪಿಯಾಗಿ ಪ್ರಾಮಾಣಿಕ ಪ್ರಯತ್ನವಾಗಿ ಹಿಡಿದ ಗುರಿಯಾಗಿ ಮೂಡುವ ದಾರಿಯ ಸೆಳೆತಗಳು,ಅಡೆತಡೆಗಳು, ಸೋಮಾರಿತನ ಇದೆಲ್ಲವನ್ನೂ ಮೆಟ್ಟಿ ಮುಂದುವರಿಯುವ ಛಲ ಎಲ್ಲರಲ್ಲೂ ಇಲ್ಲ. ಹೋಗಲಿ ಬಿಡು ಅನ್ನುವುದು ಸುಲಭದ ದಾರಿ. ಈ ಹುಡುಗ ತನ್ನ ತೀವ್ರತೆಯನ್ನ ಕಳೆದುಕೊಳ್ಳದೇ ಅಂದುಕೊಂಡ ದಾರಿಯ ಮೊದಲ ಮೊಗ್ಗು ಅರಳಿಸಿಯೇ ಬಿಟ್ಟಿದ್ದಾನೆ.
ಇಂಪಿನ ದೂರ ದಾರಿಯನ್ನ ಸಾಗುವ ಚೈತನ್ಯ, ಸಂಗಾತಿಯ ಜೊತೆ ಇವನಿಗಿದೆ. ಗೆಳೆಯರ ಬಳಗವಿದೆ, ಎಲ್ಲರನ್ನೂ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಪ್ರಾಮಾಣಿಕವಾದ ಫ್ರೆಶ್ ಆದ ಮನಸ್ಸಿದೆ.
ಅಂತರಾಳದಲ್ಲಿ ಭಾವಜೀವಿಯೊಬ್ಬನ ಮೆಲ್ದನಿಗಳ ಹಾಯಿದೋಣಿಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ದೋಣಿ, ದೊಡ್ಡ ನಾವೆಯಾಗಿ ಭಾವ-ಗೀತೆಗಳ, ಸುಗಮ ಸಂಗೀತದ ಸಮುದ್ರದಲ್ಲಿ ತೇಲಲಿ ಎಂಬುದು ನನ್ನ ಹಾರೈಕೆ.
ಸುಲಭ ಪುನರಾವರ್ತಿತ ಪದಗಳ ಹಂಗನ್ನು ಮೀರಿ, ಟ್ಯೂನುಗಳಿಗೆ ಕವಿತೆಯನ್ನು ಹೊಂದಿಸುವ ಅವಶ್ಯಕತೆಯನ್ನು ದಾಟಿ, ನಮ್ಮ ಹಿರಿಯ, ಮತ್ತು ಇತ್ತೀಚಿನವರೆಗಿನ ಕವಿಗಳ ಕವಿತಾ ಸಂಗ್ರಹಕ್ಕೆ ದೀಪು ಸಂಗೀತ ಸಂಯೋಜಿಸುವಂತಾಗಲಿ. ಕನ್ನಡ ಬರಿಯ ನಾಡ ಉತ್ಸವಗಳಲ್ಲಿ ಬಿಕರಿಯಾಗುವ ಮಾಲು ಎಂಬ ಮಾತುಗಳನ್ನು ಸುಳ್ಳು ಮಾಡುವ, ನೆಟ್ ಯುಗದ ಯುವ ಕನ್ನಡ ಮನಕ್ಕೆ ಸೇತುವೆಯಾಗುವ ಕೆಲಸವು ದೀಪುವಿನಿಂದ ಮತ್ತವನ ಗೆಳೆಯರ ಬಳಗದಿಂದ ಆಗಲಿ ಎಂದು ಬಯಸುತ್ತೇನೆ.

ಒಳಿತೇ ಹಾಡಾಗುವ ದಾರಿಯಲ್ಲಿ ದೀಪಕ ರಾಗ ನುಡಿಸಿದ ಈ ಕಿರಿಯ ವಯಸ್ಸಿನ ತುಂಬು ಚೈತನ್ಯಕ್ಕೆ ನನ್ನ ಮೆಚ್ಚುಗೆ,ಅಭಿನಂದನೆ.
ಅಂತರಾಳ ಧ್ವನಿಮುದ್ರಿಕೆ(ಅಡಕಮುದ್ರಿಕೆ)ಯನ್ನು ನೀವೂ ತಗೊಂಡು, ಕೇಳಿ, ಬೆನ್ತಟ್ಟಬೇಕು.

Thursday, January 12, 2012

ಹೂವು ಚೆಲ್ಲಿ-ದ ಹಾದಿ

ಉದಾತ್ತ ಹೆಜ್ಜೆಗಳ
ಭಾರಕ್ಕೆ
ನಲುಗಿದ ಕಾಲ ಕೆಳಗಿನ ಹೂಗಳ ಬಣ್ಣ
ಮಾಸಲು ಮಾಸಲು,
ಆಗಸಕ್ಕೆ ಮುಖವೆತ್ತರಿಸಿದ
ಕನಸುಕೊಂಬೆಗಳ ತುದಿಗೆ
ಬಿರಿಯದ ಮೊಗ್ಗುಗಳ ಬಣ್ಣದ ಹಂಬಲು.
ಬೇರುಗಳ ಮಾತು ಬೇಡ
ಕಂಪೌಂಡಿಗೆ ಘಾತವಾಗುತ್ತೇಂತ
ಬೇರಿಳಿವ ಜಾತಿಯ ನೆಡುವುದಿಲ್ಲ.

ತೆರೆದ ಬಾಗಿಲಿನ
ಮುಖಮಂಟಪ
-ದ ಒಳಗೆ ಹರಿದ ದಾರಿ
-ಯ ಕೊನೆಗೆ
ಮುಚ್ಚಿದ ಕೊಠಡಿ
ತುಂಬ ಕಿಟಕಿಗಳು
ಭಾರದ ಕದ ತಿರುಗಣೆಯಲ್ಲಿ
ಸಿಕ್ಕಿಹಾಕಿಕೊಂಡಿದೆ
ತೆಗೆಯಲಾಗುವುದಿಲ್ಲ.
ಹೊರಗಿನ ಬೆಳಕು ಬೇಕು ಯಾಕೆ
ಒಳಗೆ ಝಗಮಗಿಸುವ ದೀಪ
ಏಸಿಯ ವೆಂಟು
ಬಾಯಲ್ಲಿ ಕರಗುವ ಐಸ್ಕ್ರೀಮು
ತಿನ್ನುತ್ತ
ನೆನಪಾಗುವ ನಿಂಬೆಹುಳಿ ಪೆಪ್ಪರ್ ಮಿಂಟು.

ದಾರಿಬದಿಯಲಿ ಹೂಬಿಟ್ಟ ಸಂಪಿಗೆಮರ
ಜಡಿದು ಕೂರಿಸಿದ್ದರೂ ಎಲ್ಲೋ ಸಂದಿನಲ್ಲಿ
ತೂರಿಬರುವ ಗಾಢ ಕಂಪು.
ಅರೆಗತ್ತಲ ಬೀದಿಯ
ಹೂವು ಸುರಿವ ಸಂಜೆಯಲಿ
ಜತೆಗೆ ಹೋದ ಒದ್ದೆ ಹೆಜ್ಜೆಗಳು
ಮೋಡ ತುಂಬಿದ
ಆಗಸದಲಿ ಕದ್ದು ಹೊಳೆವ
ತಿಂಗಳು
ಇರುಳ ಹೆರಳಿನ ತುಂಬ
ರಾತ್ರಿರಾಣಿ ಘಮಘಮಿಸಿ
ಅಲ್ಲಿ ಕತ್ತಲಲ್ಲೂ ಬೆಳಗು
ಕತ್ತಲಿಲ್ಲಿ ಒಳಗೂ ಹೊರಗೂ!

ಈ ನೆನಪಿನ ಮಾತು ಬೇಡ ಈಗ
ಇದೊಂದು ಹುಚ್ಚು ಮಂಪರು
ಮಲಗಲು ಒಳ್ಳೆ ಸ್ಲೀಪ್ ವೆಲ್ ಹಾಸಿಗೆಯಿದೆಯಲ್ಲ
ಸುಮ್ಮನೆ ಮಲಗು
ಬೆಳಿಗ್ಗೆ ಬೇಗ ಏಳಬೇಕು.

ಪಾಟಿನೊಳಗಿನ ಮಲ್ಲಿಗೆ ಬಳ್ಳಿಯ
ಕರುಣೆ
ದಿನದಿನವೂ
ಎರಡೆರಡೇ ಅರಳು ಮೊಗ್ಗು.

ಕಲ್ಲುಮುಳ್ಳು ಹಾದಿಯ
ನೋವನುಂಡು ನಡೆದವರು
ಹೂವು ಚೆಲ್ಲಿ-ದ ಹಾದಿಯ
ನುಣ್ಪು ದುಃಖದಿ
ಜಾರಿ ಬಿದ್ದರು,
ಉದಾತ್ತ ಹೆಜ್ಜೆಗಳು ಬಲು ಭಾರ!

Tuesday, January 10, 2012

ಈ ಹುಚ್ಚಿಗೆ ಹೆಸರು ಬೇಕೆ?

ಹಿತವಾದ ಕತ್ತಲ ಇಳಿಸಂಜೆ
ಮಾತುಕತೆ ಮುಗಿಸಿ ಹಗುರಾಗಿ
ಬೀಸುಹೆಜ್ಜೆಯ ಲಘುನಡಿಗೆಯಲಿ
ಬೇಲಿ ದಾಟುವಾಗ ಮನೆಯಂಗಳದಿ-
ಪುಟ್ಟಗೆ ಉರಿವ
ತುಳಸಿಯ ದೀಪ
ಹಚ್ಚಿಡುವ ನೀನು,
ಸುಖಾಸುಮ್ಮನೆ ಕಡೆಗಣ್ಣಲಿ
ನೋಡಿದ್ಯಾಕೆ?

ದೀಪದ ಬೆಳಕನ್ನಷ್ಟೆ ತುಂಬಿಕೊಂಡು
ಮುನ್ನಡೆಯಲಿದ್ದ ನನ್ನ
ಜಗ್ಗಿ ನಿಲ್ಲಿಸಿ, ಮುಗ್ಗರಿಸಿ
ತಿರುತಿರುಗಿ ನೋಡುತ್ತ
ಹೊರಡಲಾರದೆ ಹೊರಟೆ..
ಈಗ ನೋಡು-
ಮಳೆ ನಿಂತ ತಂಪಲ್ಲು
ಹೊತ್ತಿ ಉರಿವ ಒಳಗು!
ನಿನಗೇನೂ..ಅಮ್ಮನ ಕರೆಗೆ
ಜೋಡು ಜಡೆಯ ಬೀಸುತ್ತ
ಕುಣಿವ ಹೆಜ್ಜೆಗಳಲ್ಲಿ ಓಡುತ್ತ
ಹೋಗುವ ಹೊತ್ತು;
ನಾನಿಲ್ಲಿ
ಹೆಜ್ಜೆ ಇಲ್ಲಿಡಲಾ ಬೇಡವಾ
ಯೋಚಿಸುತ್ತಾ
ಕಳೆಯದೇ ಜಾರುವ ಹೊತ್ತನ್ನ
ತುಂಬಲಾರದೆ ನೋಯುತ್ತಾ..

ಹೋಗೇ ಮರಿರಾಕ್ಷಸೀ,
ಇನ್ನೊಮ್ಮೆ ನಿನ್ನ ಯೋಚನೆ ಸುಳಿದರೆ ಕೇಳು
ನಿನ್ನ ದೀಪದುರಿಯ ಕುಡಿಗಣ್ಣು
ನನ್ನ ಕೆನ್ನೆಯ ಕತ್ತಲ ಮೇಲೆ ಪ್ರತಿಫಲಿಸುವವರೆಗೂ..
ಜನ ಹೇಳುತ್ತಾರೆ
ಪ್ರೀತಿ ಪ್ರೇಮ ಬರಿಯ ಮರುಳು..
ಹೌದಾ..?
ಅವರಿಗೇನು ಗೊತ್ತು
ನಿನ್ನ ಕಣ್ಣಿನ ಅಮಲು.

Monday, December 26, 2011

ಟುಪ್ಪೂ ಕಥಾ ಸರಿತ್ಸಾಗರದ ಕೆಲವು ಬಿಂದುಗಳು!

ತುಂಬ ದಿನಗಳಿಂದಲೂ ನನ್ನ "ಟುಪ್ಪೂ ಕಥಾಸರಿತ್ಸಾಗರ"ದ ದಂಡೆಗೆ ಬರಲಿಕ್ಕಾಗಲಿಲ್ಲ. ಕಥೆಗಳು ಕಣ್ಮುಂದೆ ಬಿಚ್ಚಿಕೊಳ್ಳುತ್ತಾ ಮಂತ್ರಮುಗ್ಧವಾಗಿಸುವ ಕ್ಷಣಗಳಲ್ಲಿ ಮೈಮರೆತಿದ್ದೆ ನಾನು. ಅದನ್ನು ಅಕ್ಷರಕ್ಕಿಳಿಸುವ, ನನ್ನ ಅಕ್ಕ,ಗೆಳತಿಯರು ಕೇಳುವ ಹಾಗೆ ಕ್ಯಾಮೆರಾಕ್ಕಿಳಿಸುವ, ರೆಕಾರ್ಡ್ ಮಾಡುವ ಯಾವ ಎಚ್ಚರವೂ ಇಲ್ಲದ ಸುಖವಾದ ಮೈಮರೆವು. ಕೆಲವು ನೆನಪುಗಳು ಅವು ಆದ ವರ್ಷದಲ್ಲಾದರೂ ದಾಖಲಾಗಲಿ ಎಂಬ ಆಸೆಯಿಂದ ಈ ಬರಹ. ಅಮ್ಮಂದಿರೆಂದರೆ ಹೀಗೇ ಮಕ್ಕಳ ಬಾಲ್ಯದಲ್ಲಿ ದಿನವೂ ಮಾತನಾಡಿಸಿದರೂ ನಿಮಗೆ ಒಂದೊಂದು ಹೊಸ ಮುದ್ಗಥೆ ಕೇಳಲು ಸಿಗುತ್ತಿರುತ್ತದೆ. ಅವಳ ಮಾತು ಕತೆ,ತುಂಟತನ,ಮುದ್ದುಗರೆಯುವಿಕೆ, ಆಟ,ನಲಿವು,ಸಿಡುಕು ಸೆಡವು, ಕಾಮಿಡಿಗಳಲ್ಲಿ ಕೆಲವು ನಿಮ್ಮ ಅವಗಾಹನೆಗಾಗಿ ಮತ್ತು ಮುಂದೆಂದೋ ಅವಳು ಓದಿದರೆ, ಅವಳ ಪುಟ್ಟಬಾಯಿ ಅಗಲವಾಗಿ ನಗುವಿನ ಹೂ ತುಂಬಲಿಕ್ಕಾಗಿ.

ರಾಜ್ ಕುಮಾರ ನನ್ನ ಮಗಳ ನೆಚ್ಚಿನ ಮಾಮ. ಅವಳು ಅವನನ್ನು ಕರೆಯುವುದೇ "ಎಲ್ಲೂ ಹೋಗಲ್ಲ ಮಾಮ" ಎಂದು. ಅವನ ಹಳೆಯ ಕೆಲವು ಹಾಡುಗಳು ಅವಳ ಫೇವರಿಟ್ಟು. ನಗುನಗುತಾ ನಲಿ, ಬಾನಿಗೊಂದು ಎಲ್ಲೆ ಎಲ್ಲಿದೆ, ಆಗದು ಎಂದು, ಸಿಹಿಮುತ್ತು ಸಿಹಿಮುತ್ತು ನಂಗೊಂದು, ಥೈ ಥೈ ಬಂಗಾರಿ, ಇಫ್ ಯೂ ಕಮ್ ಟುಡೇ, ಒಂದು,ಎರಡು ಮೂರು ನಾಕು ಆದ್ಮೇಲೆ ಏನು, ಲಾಲಿ ಲಾಲಿ ಸುಕುಮಾರ.. ಇತ್ಯಾದಿ. ರಾಜ್ ಕುಮಾರ್ ನ ಯಾವ ಹಾಡು ಟೀವಿಯಲ್ಲಿ ಬಂದರೂ ಹತ್ತಿರ ಹೋಗಿ ನಿಂತು ನೋಡುತ್ತಾ ಕೇಳುತ್ತಾ ಇರುತ್ತಾಳೆ. :) ಮೊದಮೊದಲು ನಾವು ಅವಳನ್ನ ಬೆಳಗ್ಗೆ ಪ್ಲೇಹೋಮಿಗೆ ಬಿಡುವಾಗ, ಮೇಲೆ ಆಕಾಶ ನೋಡಿ ಟಾಟಾ ಮಾಡುತ್ತಿದ್ದಳು. ಏನೆಂದು ಕೇಳಿದರೆ, ನಕ್ಷತ್ರವಾಗಿರುವ ಎಲ್ಲೂ ಹೋಗಲ್ಲ ಮಾಮಂಗೆ ಟಾಟಾ ಎಂದು ವಿವರಿಸಿದ್ದಳು.
ಅಮರಚಿತ್ರಕಥೆಗಳಲ್ಲಿ ಭಕ್ತ ಪ್ರಹ್ಲಾದ ಅವಳಿಗಿಷ್ಟವಾದ ಕಥೆಗಳಲ್ಲಿ ಒಂದು. ಅವಳು ಪುಟ್ಟ ಮಗುವಾಗಿದ್ದಾಗಿನಿಂದ ಈಗ ಮೂರುವರ್ಷದವರೆಗೆ ಮೂರು ಪ್ರತಿಗಳಲ್ಲಿ ಆ ಪುಸ್ತಕದ ಕಥೆ ಹರಿದಿದೆ( ಅಕ್ಷರಶಃ ಮೊದಲ ಎರಡು ಪುಸ್ತಕಗಳು ಹರಿದು ಚಪ್ಪೆದ್ದು ಹೋಗಿವೆ).
ಒಂಟಿಕಾಲಿನಲ್ಲಿ ತಪಸ್ಸು ಮಾಡುವ ಹಿರಣ್ಯಕಶಿಪು, ತಂಬೂರಿ ನಾರದರ ನಾರಾಯಣ, ನಾರಾಯಣ, ಲಾಲಿ ಲಾಲಿ ಹೇಳುವ ಕಯಾದು, ಪ್ರಹ್ಲಾದನ ಕೈಮುಗಿದ ಹರಿಭಜನೆ, ಕಂಬ ಒಡೆಯುವ ಹಿರಣ್ಯಕಶಿಪುವಿನ ಗದಾಪರ್ವ, ಹೊಟ್ಟೆ ಸೀಳುವ ನರಸಿಂಹ ಮತ್ತು ಅವನ "ಎರಡೂ ಅಲ್ಲ" ಪ್ರಶ್ನೋತ್ತರಗಳು, ಇವು ನಮ್ಮನೆಲ್ಲ ರಂಜಿಸುವ ಅವಳ ಅಭಿನಯದ ಘಳಿಗೆಗಳು. ಹೀಗಿರಲಾಗಿ ಹೋದತಿಂಗಳು ಅವಳು ರಾಜ್ಕುಮಾರ್ ಅಭಿನಯದ ಭಕ್ತಪ್ರಹ್ಲಾದ ಸಿನಿಮಾವನ್ನು ಟೀವಿಯಲ್ಲಿ ಎರಡು ಮೂರು ಸಲ ನೋಡಿಬಿಟ್ಟಳು. ಮೊದಲ ಸಾರಿ ನರಸಿಂಹ ರಾಜಕುಮಾರ್ ನನ್ನ ಎತ್ತಿ ಕೊಂಡು ಹೊಟ್ಟೆ ಸೀಳುವಾಗ ಅವಳಿಗೆ ಭಯವಾಗಿ ಅಳು ಬಂತು. ನರಸಿಂಹನ ಮೇಲೆ ಕೋಪವೂ ಬಂತು. ಎಲ್ಲೂ ಹೋಗಲ್ಲ ಮಾಮ ಪಾಪ ಎಂದುಕೊಂಡು ನೆನೆಯುತ್ತಿದ್ದಳು. ಆಮೇಲೆ ಎರಡು ಸಲ ನೋಡುವಾಗ ಎಲ್ಲೂಹೋಗಲ್ಲ ಮಾಮ ಹಿರಣ್ಯಕಶಿಪುವೇ ಆಗಿ ಕಂಡುಬಂದಿದ್ದರಿಂದ, ಅವಳು ಮತ್ತೆ ವಾಪಸ್ ಪ್ರಹ್ಲಾದನ ಪರವಾಗಿದ್ದಾಳೆ. ಇದೆಲ್ಲ ಹೋಗಲಿ ನಾನು ಅವಳಿಗೆ ಅವಳ ಪೂರ್ತಿ ಹೆಸರು ಸೃಷ್ಟಿ ಶುಭದಾಯಿನಿ... .ಮುದ್ದು ರಾಕ್ಷಸಿ ಎಂದು ಹೇಳಿಕೊಟ್ಟಿದ್ದೆ. ಮೊದಮೊದಲು ಹಾಗೇ ಹೇಳುತ್ತಿದ್ದಳು. ಆಮೇಲೆ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ನಗುತ್ತಿದ್ದಳು. ಆದರೆ ಭಕ್ತಪ್ರಹ್ಲಾದ ನೋಡಿದಾಗಿನಿಂದ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ಕೋಪವೇ ಬಂದುಬಿಡುತ್ತದೆ. ಮೊದಲು ಸಿಡುಕಿ, ಆಮೇಲೆ ಅತ್ತು, ಕೊನೆಗೆ ಪುಸಲಾಯಿಸುತ್ತಾಳೆ. ಹಾಗೆ ಕರೆಯಬಾರದು ಎಂದು. :) ಯಾಕೇಂತ ಕೇಳಿದರೆ ರಾಕ್ಷಸ ಮಕ್ಕಳು ಕರ್ಕಶವಾಗಿ ಹಾಡು ಶ್ಲೋಕ ಹೇಳುತ್ತಾರೆ ಅಂತೆ!. ನಾನು ಕೈಮುಗಿದೆ.

ಅವಳಿಗಿಷ್ಟವಾದ ಇನ್ನೊಂದು ಅಮರಚಿತ್ರಕತೆ (ನಂಗೂ ತುಂಬ ಇಷ್ಟ) "ನನ್ನ ಗೋಪಾಲ" ಈ ಕಥೆಯನ್ನು ನಾನು ತುಂಬ ದಿವಸಗಳ ಕಾಲ ಅವಳನ್ನು ರೆಡಿ ಮಾಡಲು ಉಪಯೋಗಿಸುತ್ತಿದ್ದೆ. ಆ ಕಥೆಯಲ್ಲಿ ಗೋಪಾಲನಿಗೆ ಅಮ್ಮ ಸ್ನಾನ ಮಾಡಿಸಿ, ಅಂಗಿ ಹಾಕಿ, ಕಾಲ್ಚೀಲ ಹಾಕಿ, ತಲೆಬಾಚಿ ಶಾಲೆಗೆ ಕಳಿಸ್ತಾರೆ. ಅವಳನ್ನು ರೆಡಿ ಮಾಡುವಾಗ ಈ ರೆಫರೆನ್ಸ್ ಒಳ್ಳೆ ಸಹಾಯ ಮಾಡುತ್ತಿತ್ತು. ಈಗ ಅವನು ಕಾಲ್ಚೀಲ ಹಾಕಿಯೇ ಇಲ್ಲ, ಚಡ್ಡಿ ಇಲ್ಲ ಬರಿಯ ಪಂಚೆ, ಎಲ್ಲಿ ತಲೆ ಬಾಚ್ತಾ ಇದಾರೆ ತೋರ್ಸು ಅಂತೆಲ್ಲ ಕೇಳುತ್ತಾಳೆ. ನಾನು "ಚಿತ್ರದಲ್ಲಿ ಕಾಣಿಸದ ಕತೆಯಲ್ಲಿ" (ಎಲ್ಲ ಚಿತ್ರಗಳಾಚೆಗಿನ ಚಿತ್ರ!) ಎನ್ನುವ ಸಬೂಬಿನೊಂದಿಗೆ ಮ್ಯಾನೇಜ್ ಮಾಡ್ತಾ ಇದೀನಿ. ಸದ್ಯಕ್ಕೆ ಇದು ಕೆಲಸ ಮಾಡುತ್ತಿದೆ. ಒಬ್ಬಳೆ ಹೋಗುವಾಗ ತಾನು ಕೃಷ್ಣಮಾಮಿಯನ್ನು ಕರೆಯುವುದಾಗಿಯೂ ಆಗ ತನಗೆ ಭಯ ಆಗುವುದಿಲ್ಲವೆಂದೂ ಅವಳೂ ಹೇಳುತ್ತಿರುತ್ತಾಳೆ. ಇದರ ಸತ್ವ ನಂಗೆ ಗೊತ್ತಿಲ್ಲ. ಯಾಕೆಂದರೆ ಬಾಗಿಲಿಂದ ಆಚೆ ಹೋದಕೂಡಲೆ ಅಮ್ಮನ ಕೈಬಿಡುವುದಕ್ಕೆ ಗೊತ್ತಿಲ್ಲ ನಮ್ಮ ದೇವರಿಗೆ.
ಇದರ ಮಧ್ಯೆ ದಿನಾ ಅಮ್ಮಮ್ಮ ಹೇಳುವ ಕಿಷನನ ಕತೆಗಳು ಅಂದ್ರೆ ನಮ್ಮಗೂಗೆ ಸಿಕ್ಕಾಪಟ್ಟೆ ಇಷ್ಟ. ಅವಳ ತುತ್ತಿನ ಚೀಲ ತುಂಬುವುದೆ ಈ ಕಥೆಗಳಿಂದಾಗಿ. ಅದರ ಗುಂಗಿನಲ್ಲಿ ನಂಜೊತೆ ಮನೆಗೆ ಬರುವವಳು ದಿನಾ ಬೆಣ್ಣೆ ಮಡಿಕೆಯೊಡೆಯುತ್ತಾ, ಕುರ್ಚಿ ಸಂದಿಯಲ್ಲಿ ಅಡಗಿಕೊಳ್ಳುತ್ತಾ, ಮೃಣ್ಮಯ ಬಾಯನ್ನು ತೋರುತ್ತಾ, ಕಿರುಬೆರಳಿನಲ್ಲಿ ಗಿರಿಯನ್ನೆತ್ತುತ್ತಾ ಇರುತ್ತಾಳೆ. ಯಾವುದಕ್ಕಾದರೂ ನಾನು ಬೈದರೆ ನಾನು ತುಂಟತನ ಮಾಡಿದೆ ಅಷ್ಟೇಮ್ಮಾ ಕಿಶನನ ಹಾಗೆ ಅಂದು ಬಿಡುತ್ತಾಳೆ. ನಾನು ದೇವಕಿ, ಅಮ್ಮಮ್ಮ ಯಶೋದೆ ಮತ್ತು ಇವಳೇ ಕೃಷ್ಣ. ಸಂದರ್ಭಕ್ಕೆ ತಕ್ಕ ಹಾಗೆ ಅಲ್ಲಿ ಇದ್ದವರು ನಂದಗೋಪಾಲ, ಮತ್ತು ಗೋಪಿಕೆಯರು. ಅವಳು ದೇವಕಿಯಮ್ಮಾ ಅಂತ ಕರೆದಾಗ ನಾನು ಬರೀ ಏನು ಎಂದರೆ ಮೂಗಿನ ತುದಿಯ ಕೋಪ ಮಾತಿಗೆ ಮತ್ತು ಕಣ್ಣಹನಿಗೆ ಬಂದುಬಿಡುತ್ತದೆ. ಏನು ಕೃಷ್ಣಾ ಎಂದೇ ಕೇಳಬೇಕು. ಬದುಕಿನ ಬ್ರಹ್ಮಾಂಡ ದರ್ಶನ ಆಗುತ್ತಾ ಇರುತ್ತದೆ ನನಗೆ.

ಕೆಲವು ರಷ್ಯಾ ರಾದುಗ ಪ್ರಕಾಶನದ ಕತೆಗಳು ಅವಳಿಗಿಷ್ಟ. ಅದರಲ್ಲಿ ಮಾಟಗಾತಿ ಬರುತ್ತಾಳೆ. ಆಮೇಲೆ ಸ್ನೋವೈಟಿನಲ್ಲೂ ಅಷ್ಟೇ ಒಂದು ಭಯಂಕರ ಮೋಸದ ಮಾಟಗಾತಿ ಇದ್ದಾಳೆ. ಹೀಗಾಗಿ ಮಾಟಗಾತಿಯೆಂದರೆ ನಮ್ಮ ಸಿಂಗಾರಿಗೆ ಸ್ವಲ್ಪ ನಿಜವಾದ್ದು ಮತ್ತು ಸ್ವಲ್ಪ ಜಾಸ್ತಿ ತೋರಿಕೆಯದ್ದೂ ಎರಡೆರಡು ರೀತಿಯ ಭಯ. "ಮಾ" ಅಂದರೆ ಸಾಕು ಅವಳು ಬಂದುಬಿಡುತ್ತಾಳೆ ಎಂದು ಹೆದರಿಸಿ ಅವಳನ್ನು ನಿದ್ದೆಗೆ ದಬ್ಬಿದ ಮಧ್ಯರಾತ್ರಿಗಳು ತುಂಬ ಇದ್ದವು. ಈಗ ಈ ಟ್ರಿಕ್ಕು ನಡೆಯುವುದಿಲ್ಲ. ಅವಳು ಮಾಟಗಾತಿಗೇ ಫೋನ್ ಮಾಡಿಬಿಡುತ್ತಾಳೆ. ಒಂದು ಮಾಟಗಾತಿ ಪೊರಕೆಗೆ ಸಮೀಕರಿಸುವ ಕೋಲಿಟ್ಟುಕೊಂಡಿದ್ದಾಳೆ. ಅದರ ಮೇಲೆ ಕುಳಿತು ಅಬ್ರಕದಬ್ರ ಹೇಳಿ ಎಲ್ಲೆಂದರಲ್ಲಿ ಸುತ್ತಿ ಬರುತ್ತಾಳೆ. ಆದರೆ ಆಳದಲ್ಲಿ ಮಾಟಗಾತಿಯೆಂದರೆ ಭಯವೂ ಇದೆ. ಏನೆಂದರೆ ನೀವೇನಾದರೂ ಅವಳಿಗೆ ರೋಪ್ ಹಾಕಿದರೆ, ಅವಳು ಮಾಟಗಾತಿಗೆ ಫೋನ್ ಮಾಡುತ್ತಾಳೆ ಅಷ್ಟೆ. ನಾನೇನಾದ್ರೂ ಮಾಟಗಾತಿಯ ಮಾತೆತ್ತಿದರೆ ಅವಳು ಸ್ಲೀಪಿಂಗ್ ಬ್ಯೂಟಿಯಲ್ಲಿ ಬರುವ ಒಳ್ಳೆಯ ಮಾಟಗಾತಿಯಾಗಿಬಿಡುತ್ತಾಳೆ. ಹೀಗೆ ಈ ಮಾತುಗಾತಿಯ ಹತ್ತಿರ ಮಾಟಗಾತಿ ಸೋತು ಬಂದ ದಾರಿಯಲ್ಲೇ ಪೊರಕೆ ಹತ್ತಿ ಸಾಗಬೇಕು.

ಅವಳ ಇನ್ನೊಂದು ಹಾಟ್ ಫೇವರಿಟ್ ಕಥೆ ಮಣಿಕಂಠನದ್ದು. ಇದು ಅಜ್ಜ ಹೇಳುವ ಹಾಡು ಮತ್ತು ಕಥೆ. ಪಂದಳ ರಾಜನಿಗೆ ಸಿಕ್ಕಿದ ಮಣಿಕಂಠ, ಹುಲಿಯಹಾಲು ತರಲು ಹೋಗಿ ಮಹಿಷಿಯನ್ನು ಸೋಲಿಸಿ, ಹುಲಿಗಳ ಮೇಲೆ ಹತ್ತಿ ಅರಮನೆಗೆ ಬರುವ ಕಥೆ. ಇದು ಕೇಳುತ್ತ ಕೇಳುತ್ತ ನಿದ್ದೆ ಬಂದುಬಿಡುತ್ತದೆ ನಮ್ಮ ಮಗುವಿಗೆ. ಮಧ್ಯಾಹ್ನ ಎರಡುಗಂಟೆಯ ಹೊತ್ತಿಗೆ ಒಂದು ಸಲ ಅಜ್ಜನೂ, ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ನಾನೂ ಎಲ್ಲ ಕಥೆಗಳನ್ನು ಹೇಳಿ ಮುಗಿದ ಮೇಲೆ ಇದು ಹೇಳಿ ಮಲಗಲು ಪ್ರಯತ್ನ ಮಾಡುತ್ತೇವೆ. :)

ಈ ಎಲ್ಲ ಕಥೆಗಳಲ್ಲೂ,ಘಟನೆಗಳಲ್ಲೂ ತನಗೆ ಬೇಕಾದ್ದನ್ನು ಆವಾಹಿಸಿಕೊಂಡು ತಾನು ಅದೇ ಆಗುವ ಒಂದು ಮುಗ್ಧತೆಯ ಜಾದೂ ಇವಳಲ್ಲಿದೆ. ಅದೇ ಈ ಎಲ್ಲ ಚಂದ ಸಂಗತಿಗಳ ಹೂರಣ. ಒಂದು ಕಥೆಯ ಕಾಂಗರೂ ಮರಿಯಾಗಿ ಒಂದು ವಾರ ಓಡಾಡಿಕೊಂಡಿರುತ್ತಾಳೆ. ಆ ವಾರವಿಡೀ ಎಲ್ಲರೂ ಅವಳನ್ನು ರೂಮರಿ ಎಂದೇ ಕರೆಯಬೇಕು. ನಾನೆಲ್ಲಾದರೂ ಬೈದರೆ ಕಣ್ಣ ತುಂಬು ನೀರು ತುಂಬಿ ರೂಮರಿಗೆ ಯಾರಾರೂ ಬೈತಾರ ಅಂತ ಹೇಳಿ ನನ್ನ ಅಳಿಸುತ್ತಾಳೆ. ಆಮೇಲೆ ಇನ್ನೊಂದು ವಾರ ಸ್ನೋವೈಟಿನ ಒಬ್ಬ ಪುಟ್ಟ ಕುಳ್ಳನ ಹಾಗೆ ಓಡಾಡಿಕೊಂಡಿರುತ್ತಾಳೆ. ಮತ್ತಿನ್ನೊಂದು ವಾರ ಸಿಂಡ್ರೆಲಾ ಮತ್ತವಳ ಡ್ಯಾನ್ಸು ನಡೆಯುತ್ತದೆ. ಅದರ ಮುಂದಿನ ವಾರ ಗೋಪಾಲ, ಆಮೇಲೆ ಪ್ರಹ್ಲಾದ, ಕೃಷ್ಣ ಎಲ್ಲ ಆಗಿ ರೂಪಾಂತರ ಹೊಂದುತ್ತಿರುತ್ತಾಳೆ. ಈ ವಾರ ಗೋಲ್ಡಿಲಾಕ್ಸ್ ಕತೆಯ ಪಾಪು ಕರಡಿಯಾಗಿದ್ದಾಳೆ. ಈ ಎಲ್ಲ ರೂಪಗಳಲ್ಲು ಆಗಾಗ ಕೃಶ್ಣ ಮತ್ತು ಛೋಟಾ ಭೀಮ್ ಮಾತ್ರ ಖಾಯಮ್ಮಾಗಿ ಬಂದು ಹೋಗುತ್ತಾರೆ. ಮುಂದಿನ ವಾರದ ಕಥೆಗೆ ನಾನು ಸ್ಕೆಚ್ಚು ಹಾಕುತ್ತಾ ಇದ್ದೀನಿ.

ಈ ಎಲ್ಲ ಕಥೆ ಹೇಳುವಾಗಿನ ಒಂದು ಕಷ್ಟ ಅಂದರೆ ಈ ಕ್ವೆಶ್ಚನ್ ರಾಣಿಯ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಹೇಳುವುದು. ನಚಿಕೇತನ ಕತೆ ಹೇಳಿ ತುಂಬ ಕಷ್ಟ ಆಗಿಬಿಟ್ಟಿತ್ತು. ಸಾಯುವುದನ್ನು ವಿವರಿಸಿ ಯಾರೆಲ್ಲ ಸಾಯಬಹುದು ಅಂತ ಹೇಳಿ ಕೊನೆಗೆ ಈಗ ಯಾರ್ಯಾರೂ ಸಾಯುವುದೇ ಇಲ್ಲ ಅಂತ ಒಪ್ಪಿಸುವ ಹೊತ್ತಿಗೆ ಸಾಕಾಗಿ ಹೋಗಿತ್ತು ನನಗೆ.

ಹೋದವಾರ ಒಂದು ರಾತ್ರಿ ಮಲಗುವಾಗ ಎಂದಿನಂತೆ ನಮ್ಮ ಸಂವಾದ ನಡಿಯುತ್ತಿತ್ತು. ಇದು ಒಂದ್ರೀತಿ ಮಾತಿನ ಯುದ್ದ. ಎಷ್ಟೋ ದಿನ ನನ್ನ ಮಾತು ಅವಳು ಕೇಳದೆ ನಾನು ಸಿಟ್ಟು ಮಾಡಿಕೊಂಡು ಎದ್ದು ಹೋಗಿ ಆಚೆ ಮಲಗಿ ಅವಳು ಮತ್ತೆ ಅತ್ತು ಕರೆದು ಅಪ್ಪನ ಮೂಲಕ ನನ್ನಲ್ಲಿ ಸಂಧಾನ ನಡೆಸಿ ನನ್ನ ತೋಳು ಬಳಸಿ ಮಲಗುತ್ತಾಳೆ. ಮತ್ತೊಂದಷ್ಟು ಸಲ ಅವಳಿಗೆ ಕೋಪ ಬಂದು, ನನಗೆ ಬೇಜಾರಾಯಿತು ಅಂತ ಹೇಳಿ ಕತ್ತಲಲ್ಲೆ ಎದ್ದು ಗೋಡೆ ಕಡೆ ಮುಖ ಮಾಡಿ ಕೂತು, ಆಮೇಲೆ ನಾನು ಅವಳಿಗಿಷ್ಟವಾದ ಏನೇನೋ ಕತೆ ಹೇಳಿ ಮುದ್ದು ಮಾಡಿ ಒಲಿಸಿಕೊಳ್ಳುತ್ತೇನೆ. ಹೆಚ್ಚಿನ ರಾತ್ರಿಗಳು ಕತೆ, ಪ್ರಶ್ನೆ, ಕತೆ ಮತ್ತು ಹಾಡುಗಳಲ್ಲಿ ಹನ್ನೆರಡಕ್ಕೆ ಕೊನೆಯಾಗುತ್ತವೆ. ಹೋದ್ವಾರ ಏನಾಯ್ತೂಂದ್ರೆ ನಾನು ಅವಳನ್ನ ನೀನು ದೊಡ್ಡವಳಾದ ಮೇಲೆ ಏನು ಮಾಡುತ್ತೀ ಎಂದು ಕೇಳಿದೆ. ಅವಳೂ ನಾನು ದೊಡ್ಡವಳೇ ಆಗೋಲ್ಲಮ್ಮ ಅಂತ ಡಿಕ್ಲೇರ್ ಮಾಡಿದಳು. ಅದ್ಯಾಕೆ ಅಂದ್ರೆ, ಅವಳ ಮುದ್ದು ಟ್ಯೂನಿನಲ್ಲಿ ಉತ್ತರ ಬಂತು. ನಾನು ದೊಡ್ಡವಳಾದ್ರೆ ನೀನೂ ದೊಡ್ಡವಳಾಗಿ ಮುದುಕಿಯಾಗಿ ಆಮೇಲೆ ಸತ್ತು ಹೋಗುತ್ತೀ. ಅದು ನಂಗೆ ಬ್ಯಾಡ. ನಾನು ಹೀಗೇ ಇರ್ತಿ. ನೀನು ಹೀಗೇ ಇರು ಎಂದಳು. ಈ ಮೊದ್ದು ಮುದ್ದಿಗೆ ತುಂಬಿ ಬಂದ ಕಣ್ಣನ್ನು ನಾನು ನಕ್ಕು ಇಂಗಿಸಿದೆ. ಈ ಪ್ರೀತಿ ಹಿಂದೆ ಎಂದೂ ಸಿಕ್ಕಿರಲಿಲ್ಲ, ಮತ್ತು ಮುಂದೆಂದೂ ಸಿಗುವುದೂ ಇಲ್ಲ. ಸಿಕ್ಕಾಗ ಒಡ್ಡಿಕೊಂಡು ನಿಲ್ಲುವುದಷ್ಟೇ ನನ್ನ ಭಾಗ್ಯ.

ಮೊನ್ನೆ ಶನಿವಾರ ಎಲ್ಲ ಕಡೆಯೂ ಕ್ರಿಸ್ಮಸ್ ವ್ಯಾಪಾರ ಭರಾಟೆ. ಅಲ್ಲದೆ ಶುಕ್ರವಾರ ಅವಳ ಪ್ಲೇಹೋಮಿನಲ್ಲೂ ಕ್ರಿಸ್ಮಸ್ ಆಚರಣೆ ಇತ್ತು. ಹಾಗಾಗಿ ಒಂದೆರಡು ದಿನದಿಂದ ಸಾಂತಾಕ್ಲಾಸ್ ಬಗ್ಗೆಯೇ ಮಾತು ಕತೆ ಮತ್ತು ಜಿಂಗಲ್ ಬೆಲ್ ಹಾಡು. ನಿನ್ನೆ ಭಕ್ತಿಪೂರ್ವಕವಾಗಿ ಅವಳು ಒಂದು ಹೊಸಾ ಕ್ರೇಯಾನ್ ಸೆಟ್ಟು ಬೇಡಿಕೊಂಡೂ ಆಯಿತು. ನಾವಿಬ್ಬರೂ ಮೇಲಿಂದ ಮೇಲೆ ಒಳ್ಳೆಯ ನಡವಳಿಕೆಯ ಮಕ್ಕಳಿಗೆ ಕ್ರಿಸ್ಮಸ್ ತಾತ ಉಡುಗೊರೆ ಕೊಟ್ಟೇ ಕೊಡ್ತಾನೆ ಅಂತ ಹೇಳಿ ನಿನ್ನೆಯ ಭಾನುವಾರವನ್ನು ಮ್ಯಾನೇಜ್ ಮಾಡಿದ್ದೇನೋ ಹೌದು. ಕೊನೆಗೆ ಇವತ್ತು ಬೆಳಿಗ್ಗೆ ಅವಳು ಏಳುವಾಗ ನೋಡುತ್ತಾಳೆ ಚೆಂದದ ಹೊಳೆಯುವ ಗಿಫ್ಟ್ ಚೀಲದಲ್ಲಿ ಒಂದು ಹೊಸಾಥರದ ಕ್ರೇಯಾನ್ ಪೆನ್ ಸೆಟ್ಟಿದೆ!. ಕವರಿನ ಮೇಲೆ ಮೆರ್ರಿ ಕ್ರಿಸ್ಮಸ್ ಎಂದು ಕೂಗುತ್ತಿರುವ ಬಿಳಿಗಡ್ಡದ ಸಾಂತಾ!! ಅವಳ ಖುಶಿಯನ್ನ ಬರೆಯಲು ನನ್ನ ಕೈಸೋತಿದೆ. ಅವಳು ನಿದ್ದೆಯಲ್ಲಿದ್ದಾಗಲೇ ಬೆಳಿಗ್ಗೆಯೇ ಅವನು ಇಡ್ತಾನೆ ಎಂಬ ನಿರೀಕ್ಷೆ ನಿಜವಾಗಿ ಸಕತ್ ಥ್ರಿಲ್ಲಾಗಿಬಿಟ್ಟಿತ್ತು. ಆದರೂ ಒಂದು ಅನುಮಾನವಿತ್ತು. ಪಕ್ಕದಲ್ಲಿದ್ದ ಅಪ್ಪನಿಗೆ ಹೇಳಿದಳೂ. ಅಪ್ಪಾ ಸಾಂತಾ ಕೊಟ್ಟಿರುವ ಕ್ರೇಯಾನ್ಸ್, ಅವತ್ತು ಪ್ರತ್ಯೂಷಿ ನನ್ ಹ್ಯಾಪಿ ಬರ್ಥ್ ಡೇಗೆ ಕೊಟ್ಟಿದ್ನಲ್ಲಾ ಆ ಕ್ರೇಯಾನ್ಸ್ ಥರಾನೇ ಇದೆ ಅಲ್ವಾ ಅಂತ. :) ಆ ಕ್ರೇಯಾನ್ಸ್ ನಿಂಗೆ ತುಂಬ ಇಷ್ಟ ಆಗಿತ್ತಲ್ವಾ ಅದ್ಕೇ ಅದೇ ತರದ್ದು ಕೊಟ್ಟಿದಾನೆ ಅಂತ ಹೇಳಿ ಅಪ್ಪ ಬಚಾವಾಗಿದ್ದಾನೆ. ಮಗಳು ಆ ಸೆಟ್ಟಲ್ಲಿರುವ ಎಲ್ಲ ಬಣ್ಣಗಳನ್ನೂ ಹೆಸರಿಸುತ್ತಾ ಕ್ರಿಸ್ ಮಸ್ ರಜೆ ಕಳೆಯಲಿದ್ದಾಳೆ. ಆ ಕ್ರೇಯಾನ್ಸ್ ಎಲ್ಲ ಖಾಲಿ ಮಾಡಕ್ಕೆ ಅಂತ ಒಂದು ಕಲರಿಂಗ್ ಬುಕ್ ಬೇರೆ ಇದೆ. ಮುಂದಿನ ಕತೆ ಮುಂದಿನ ವರ್ಷ. ಅಲ್ಲೀವರೆಗೂ ತುಂಬ ಕೆಲ್ಸ ಇದೆ. ಕಲರಿಂಗ್ ಅಂದ್ರೆ ಸುಮ್ನೇನಾ?

ಸೃಷ್ಟಿ ಶುಭದಾಯಿನಿಗೆ ಈ ನವೆಂಬರ್ ಕೊನೆಯಲ್ಲಿ ಮೂರ್ವರ್ಷ ತುಂಬಿತು.
ನಾಳೆಯಿಂದ ನಿಂಗೆ ಮೂರ್ ವರ್ಷ ಅಂತಂದೆ ನಾನು ಹಿಂದಿನ ದಿನ. "ಆವಾಗ ನೀನೇನಾಗಿರ್ತೀಯಾ" ಮುದ್ದಾದ ಮಾತಿನ ಬಾಣ ತೂರಿಬಂತು.
ಸ್ವಚ್ಛ ಕಣ್ಣುಗಳ ತಿಳಿಗೊಳದಲ್ಲಿ ಬೀಳದೆ ಉತ್ತರಿಸಲು ಸಾಧ್ಯವೇ?
ಪ್ರಶ್ನೆಯ ಕಡಲು ಬತ್ತುವುದೇ ಇಲ್ಲ. ಉತ್ತರದ ನದಿ ಸಣ್ಣಗೆ ಸೊರಗಿದರೂ ಹರಿದು ತುಂಬುತ್ತಿರುತ್ತದೆ. ಎಷ್ಟೇ ಉತ್ತರ ಹೇಳಿದರೂ ಕೊನೆ ಕೊನೆಯ ಪ್ರಶ್ನೆ ಬರುವಾಗ ಬೇಸಿಗೆಯಾಗಿ ಉತ್ತರವಿಲ್ಲದೆ ನಿಲ್ಲಬೇಕಾದ ಸಂಭವವೇ ಜಾಸ್ತಿ. ಅದಕ್ಕೇ ಅವಳು ನನ್ನ "ಲಾಜವಾಬ್" ಮಗಳು!

Monday, December 19, 2011

ಸ್ವಪ್ನ ವಾಸ್ತವ ದತ್ತ...!

ತಡೆಹಿಡಿದಿಟ್ಟವು ಕೆಲವು
ಕಾಣದಂತೆ ಒರೆಸಿದವು ಹಲವು
ಮೂಡುವುದಕ್ಕೂ ಮೊದಲೆ
ಅವಡುಗಚ್ಚಿದ ಹೊಡೆತಕ್ಕೆ
ಕರಗಿಹೋದವು ಕೆಲವು
ಹರಿದು ಹೋಗಲೆಂದೇ ಸುರಿದ ಅಬ್ಬಿಯೇ ಬೇರೆ
ಅವ ಒರೆಸಿದ್ದೊಂದಷ್ಟು
ಎಲ್ಲರ ನೇವರಿಕೆಯಲ್ಲಿ ಒಣಗಿದವೊಂದಷ್ಟು
ಹೀಗೆ ಹಾಗೆ
ನನ್ನೊಳಗೆ ಹೊರಗೆ
ಸುಳಿದ ಸುಳಿವ ಹನಿಗಳನ್ನೆಲ್ಲ
ಅಕ್ಷರವಾಗಿಸಿದರೆ
ಅರೆ..!
ಕವಿತೆ
ಅರೆಗವಿತೆ?!!

------------------------
ಬನಿಯು ಹನಿವ
ಸಾಲುಗಳಲಿ
ಮೆತ್ತಗೆ ತೂರುವ ಬೆಳಕಬಲೆ
ಅಲ್ಲಿ ಒಳಗೆ
ಮೋಡ ಮುಸುಕಿದ
ಮನದಂಗಳದಲಿ
ಚೂರು ಬಗ್ಗಿಸಿ ಹರಿಯಿಸಿದರೆ
ಸಾಕು ಮಳೆಬಿಲ್ಲು!
ನೋಡನೋಡುತಲೆ ಕಳೆವ ದಿನದ
ಕೊನೆಗೆ ರಾತ್ರಿ
ಕತ್ತಲೆ ಅಲ್ಲು ಇಲ್ಲು ಎಲ್ಲು.
ಮಳೆಸುರಿದ ಇರುಳು ಕಳೆದು
ಬೆಳ್ಳಗೆ ಹೊಳೆದ ಬೆಳಗಿನ
ನೀಲಿಬಟ್ಟಲ ತುಂಬ ಮೊಸರು ಮೊಸರು ಮೋಡ,
ದಾರಿಯಿಡೀ ತುಂಬಿದ ಉದುರೆಲೆಗಳ
ಮೆಟ್ಟುತ್ತ ಮೇಲೆ ನೋಡಾ
ಹನಿಯಿಳಿವ ಎಲೆಗಳ ಹಿನ್ನೆಲೆಗೆ
ಘಮಗುಡುವ ಹೂಗೊಂಚಲು
ತೆಳುಪರಿಮಳವಿದು ಉಕ್ಕಿಸುವ
ಭಾವೋತ್ಕರ್ಷವದು ಗಾಢ!
--------------------------------
ಹಾವು ಹರಿದಂತೆ ಸರಿವ ದಾರಿ
ಕಾಡ ಸೆರಗಿನ ಹುಲ್ಲುಹಾವಸೆ
ಮುಳ್ಳು ಚುಚ್ಚದ ಹಾಗೆ
ಬದಿಯಲ್ಲಿ ಬೀಳದ ಹಾಗೆ
ಎಚ್ಚರದಿ
ಗಮಿಸುವ ಕನಸಿನೊಳಗಣ ಹಾದಿ
ಅವರು ಇವರು ಎಲ್ಲರೂ
ಜೊತೆಜೊತೆಗೆ ಸಾಗಿ
ಇಳಿದ ನೆಲೆಯ ಹೆಸರು ನೋಡದೆ
ವಿದಾಯದಲ್ಲಿ ನಗುವ ಹಂಚಿ
ಮುಂದೆ ಸಾಗುವ
ಲಗ್ಗೇಜು ಇರದ ಹಾದಿ
ಎಚ್ಚರದ ಹೆಜ್ಜೆ ಬೇಡುವ
ಕನಸಿನ ಹಾದಿ.
ಸ್ವಪ್ನಂ ಶರಣಂ ಗಚ್ಛಾಮಿ!

Thursday, November 10, 2011

ಪುರಸತ್ ಕೇ ರಾತ್ ದಿನ್

ಹೀಗೊಂದು ಪುರಸೊತ್ತಿನ ಕ್ಷಣದಲ್ಲಿ ಅಕ್ಷರಕ್ಕೆ ಹರಿದ ಲಹರಿ.

"ದಿಲ್ ಡೂಂಢ್ ತಾ ಹೈ ಫಿರ್ ವೊಹೀ ಪುರಸತ್ ಕೇ ರಾತ್ ದಿನ್.. "ಅಂತ ಶೀರ್ಷಿಕೆ ಕೊಟ್ಟು ಬರೆದ ಕಾಲಂ ಒಂದನ್ನು ಓದುತ್ತಿದ್ದ ದಿನಗಳಲ್ಲಿ ಆ ಇಡೀ ಸಾಲಿನ ಅರ್ಥವೇ ಹೊಳೆದಿರಲಿಲ್ಲ. ಆ ಹಾಡನ್ನು ಕೇಳಿರಲಿಲ್ಲ. ಆದರೆ ಆ ಲೇಖನವಿಡೀ ಹಾಡಿನ ಅಂತರಾಳವಿತ್ತು. ಮತ್ತು ಅದು ಸುಮ್ ಸುಮ್ನೇ ನಂಗೆ ಇಷ್ಟವಾಗಿಬಿಟ್ಟಿತು.
ನಮ್ಮ ಕರ್ನಾಟಕದ ಎತ್ತರದ ಗಿರಿಯ ಶಿಖರದಲ್ಲಿ ಕಳೆದ ಒಂದು ಸಂಜೆ ನನ್ನ ವಾಕ್ ಮನ್ನಲ್ಲಿ ಆ ಹಾಡು ಪೂರ್ತಿಯಾಗಿ ಕಿವಿಗಿಳಿಯಿತು. ಹತ್ತಿದ ಸುಸ್ತನ್ನು ಅಳಿಸಿ ಮನಸ್ಸನ್ನ ಹೊಸದೇ ಒಂದು ಭಾವೋದ್ದೀಪ್ತ ಮಜಲಿಗೊಯ್ದು ನಿಲ್ಲಿಸಿತು. ಆ ಎತ್ತರ ಬಾನೆತ್ತರದಲ್ಲಿ ನನ್ನ ಕಾಲು,ಹಿಂಬದಿಗಳು ಮಾತ್ರ ನೆಲಕ್ಕಂಟಿದ್ದವು. ಮನ ಮುಗಿಲ ಅಂಚುಗಳಲ್ಲಿ ಸುತ್ತುತ್ತಿತ್ತು.
ಹಾಡಿದವರು ಭೂಪಿಂದರ್ ಮತ್ತು ಬರೆದವರು ಗುಲ್ಜಾರ್ ಎಂಬ ವಿಷಯ ತಿಳಿಯಿತು. ಅವತ್ತು ಸಂಜೆ ಇರುಳುಗೆಂಪಲ್ಲಿ ಹರಿದ ಇಂಪು, ರಾತ್ರಿ ನಕ್ಷತ್ರಗಳು ಮಿಂಚುವಾಗಲೂ ಹರಿಯುತ್ತಲೇ ಇತ್ತು. ನಡುರಾತ್ರಿ ಕಳೆದು ಇಬ್ಬನಿತಂಪು ನಮ್ಮ ಟೆಂಟಲ್ಲಿ ಹನಿಯುವವರೆಗೂ ಹಾಡುತ್ತಿದ್ದ ವಾಕ್ ಮನ್ ಶೆಲ್ ಖಾಲಿಯಾಗಿ ನಿಲ್ಲುವವರೆಗೂ! ಬೆಳಿಗ್ಗೆ ಎದ್ದ ಕೂಡಲೆ ಪುರಸೊತ್ತಿನ ರಾತ್ರಿ ಮುಗಿದು ರಾಶಿ ರಾಶಿ ಮುಗಿಲುಗಳ ಹಿಂಡು ನಮ್ಮ ಶಿಖರವನ್ನು ಮುತ್ತಿದ ಚಟುವಟಿಕೆಯ ಬೆಳಗು ಹರಿಯಿತು! ಆಮೇಲೆ ಹಲವು ರಾತ್ರಿಗಳ ದೀಪವಾರಿದ ನಂತರದ ಅಳಲಿನ ಗಳಿಗೆಗಳಲ್ಲಿ ಸಾಥಿ ಕೊಟ್ಟ ಹಾಡು, ಗಡಿಬಿಡಿಯ ಗಳಿಕೆಯ ದಿನಗಳಲ್ಲಿ ನನ್ನ ಬಿಝಿ ಶೆಡ್ಯೂಲು ನೋಡಿ ವಾರ್ಡ್ ರೋಬಿನ, ಕೆಳ ಅಂಚಿನ ಡ್ರಾದಲ್ಲಿ ಹಳೆಯ ಕ್ಯಾಸೆಟ್ಟುಗಳ ಒಳಗೇ ಉಳಿಯಿತು.
ಇವತ್ತು ಇನ್ನೇನೋ ಹಳೆಯದರ ನೆನಪಿನ ದೀಪ ಹಚ್ಚಿಟ್ಟುಕೊಂಡು, ಕಳೆದ ದಿನಗಳ ಇರುಳುಗತ್ತಲೆಯ ಗೋಡೌನಿನಲ್ಲಿ ಅಲೆದಾಟ. ಅಲ್ಲಿ ಜಗಜೀತರ ದನಿ ತುಮ್ ಕೋ ದೇಖಾ ತೋ.. ಅಂತ ನಸುನಗುತ್ತಾ ಫುರ್ ಸತ್ ಕೇ ರಾತ್ ದಿನ್ ನೆನಪು ಮಾಡಿಕೊಡುತ್ತಿದೆ. ಅಷ್ಟೆಯೇ ಆ ಪುರಸೊತ್ತಲ್ಲಿ ಏನೇನು ಮಾಡಬಹುದು ಅಂದುಕೊಂಡೇ ರೋಮಾಂಚಿತಳು ನಾನು. ಮಾಡಿದೆನಾ ಅಂತ ಕೇಳಬೇಡಿ. ಅಕಸ್ಮಾತ್ ಕೇಳಿದರೆ ಹೇಳಲಿಕ್ಕೆ ಸಮಯವಿಲ್ಲ. :)
ಥೋಡೀ ಸೀ ಜಮೀ ಥೋಡಾ ಆಸ್ ಮಾ ದ ಟ್ಯೂನು ಸರಿಯಾಗುವುದು ೩೦*೪೦ ಚಿಕ್ಕ ಮನೆಯೋ ಅಥವಾ ಅಪಾರ್ಟ್ ಮೆಂಟೂ ನಡೆಯುತ್ತೋ ಅಂತ ಗೊಂದಲಗೊಳ್ಳುತ್ತೇನೆ ನಾನು. ಅರಳು ಹುರಿದ ಹಾಗೆ ಮಾತನಾಡದಿದ್ದರೂ ಹುರಿದ ಅರಳನ್ನು ತಿನ್ನುತ್ತ ಮಾತನಾಡಿ ಕಳೆಯುವ ನಮ್ಮ ವೀಕೆಂಡಿನ ಸಂಜೆಗಳಲ್ಲಿ ಕಾಗೆ ಹಾರಿಸುವ ಅವಶ್ಯಕತೆ ಇಲ್ಲ. ಅವೆಲ್ಲ ಗೂಡು ಸೇರಿದ ಮೇಲೆಯೇ ನಾವು ಹೊರಗೆ ಬರುವುದು.

ಈ ಹಾಡು ನೀವು ಕೇಳಿರದೆ ಇದ್ದರೆ ಇಲ್ಲಿವರೆಗೂ.. ಈಗ ಕೇಳಿ.

http://www.muzigle.com/track/thodi-si-zamin-thoda-aasman
ನಂಗೆ ತುಂಬ ಇಷ್ಟ ಆದ ಈ ಹಾಡಿನ ಸಾಹಿತ್ಯ ಗುಲ್ಜಾರ್ ಅವರದ್ದು.
ಇದೊಂದು ಡ್ಯುಯೆಟ್ - ಭೂಪಿಂದರ್ ಮತ್ತು ಲತಾ ಅವರ ಧ್ವನಿ. ಆರ್‍.ಡಿ ಬರ್ಮನ್ ಅವರ ಸಂಗೀತ.

ಇವಳು: ಥೋಡಿ ಸಿ ಝಮೀ.. ಥೋಡಾ ಆಸ್.ಮಾ
ಅವನು: ತಿನ್ ಕೋಂ ಕಾ ಬಸ್ ಇಕ್ ಆಶಿಯಾಂ
ಇವಳು: ಮಾಂಗಾ ಹೈ ಜೋ ತುಮ್ ಸೆ ವೋ ಜ್ಯಾದಾ ತೊ ನಹೀಂ ಹೈ
ಅವನು: ದೇನೆ ಕೋ ತೊ ಜಾನ್ ದೇ ದೇ ವಾದಾ ತೋ ನಹೀ ಹೈ
ಇವಳು: ಕೋಯೀ ತೇರೆ ವಾದೋಂ ಪೇ ಜೀತಾ ಹೈ ಕಹಾಂ..
ಅವನು:ಮೇರೇ ಘರ್ ಕೇ ಆಂಗನ್ ಮೇ ಚೋಟಾ ಸಾ ಝೂಲಾ ಹೋ
ಇವಳು:ಸೌಂಧೀ ಸೌಂಧೀ ಮಿಟ್ಟೀ ಹೋಗೀ ಲೇಪಾ ಹುವಾ ಚೂಲಾ ಹೊ
ಅವನು: ಥೋಡೀ ಥೋಡೀ ಆಗ್ ಹೋಗೀ.. ಥೋಡಾ ಸಾ ಧುವಾಂ
ಅವನು: ರಾತ್ ಕಟ್ ಜಾಯೇಗೀ ತೋ ದಿನ್ ಕೈಸೇ ಬಿತಾಯೇಂಗೇ
ಇವಳು: ಬಾಜರೇ ಕಿ ಖೇತೋಂ ಮೇ ಕವ್ವೇ ಉಡಾಯೇಂಗೇ
ಅವನು: ಬಾಜರೇ ಕಿ ಸಿಟ್ಟೋಂ ಜೈಸೀ ದೇತೀ ಹೋ ಜವಾಂ (ಜವಾಬ್)

ಯಾಕೋ ಈ ಕ್ಯಾಸೆಟ್ಟಿನಲ್ಲಿದ್ದ ಇಂಡೆಕ್ಸಿನ ಯಾವ ಹಾಡು ಕೇಳಿದರೂ ಮನಸ್ಸು ಮೋಡಕಟ್ಟುತ್ತದೆ. ಮಳೆಬರುವ ಸೂಚನೆ ಕಂಡ ಅವನು ಬೇಗನೆ ಕೊಡೆ ಸೂಡಿಕೊಂಡು ಒಂದು ಸಣ್ಣ ನಗೆಯೊಂದಿಗೆ ಹೊರಟುಬಿಡುತ್ತಾನೆ. ನಾನು ಒದ್ದೆ ಒಳಗೆ ಹೊರಗೆ ಗರಿ ಗರಿ ಇಸ್ತ್ರಿ ಬಟ್ಟೆ. ಪುಕ್ಕ ಕಿತ್ತ ಗರಿ.
ಯಾರಿಗೆ ತಾನೆ ಬೆಳಕು ಹರಿಯುವವರೆಗೆ..ರಾತ್ರಿ ಇಡೀ ಕೆಲಸಕ್ಕೆ ಬಾರದ ಮಾತನಾಡುತ್ತಾ ಸುಳ್ಳೆ ಸುಳ್ಳೆ ಆಕಾಶದ ಚುಕ್ಕಿ ಎಣಿಸುತ್ತಾ ಒಬ್ಬರಿಗಿನ್ನೊಬ್ಬರು ಆತು ಕೂತು, ಬೆಳಗಾದ ಕೂಡಲೆ ಹೊಲಕ್ಕೆ ಕಾಳು ತಿನ್ನಲು ಬಂದ ಹಕ್ಕಿಗಳನ್ನು ಹಾರಿಸುವ ಕೆಲಸದಲ್ಲಿ ಕಳೆದುಹೋಗಲು ಇಷ್ಟವಾಗುವುದಿಲ್ಲ? ಅದರಲ್ಲೂ ಜೋಳದ ಕಾಳು ಹುರಿದು ಅರಳಾಗುವ ಹಾಗೆ ಮಾತನಾಡುವವಳಿಗೆ!
ಏನೋ ಇಲ್ಲಿ ಕ್ಯೂಬಲ್ಲಿ ಏಸಿ ಆಫೀಸಿನಲ್ಲಿ ಹೊರಗಿನ ಗಾಳಿಯೇ ಬೀಸುವುದಿಲ್ಲ.. ಕಾಳು ತಿನ್ನುವ ಹಕ್ಕಿಯೆಲ್ಲಿ ಹುಡುಕಲಿ?


ಏನೇ ನೀನು ಅಂಗಳ ಇಲ್ದೇ ಇದ್ರೂ ಜಗಲಿಗೇ ಕಟ್ಟಿದೀನಲ್ಲ ಜೋಕಾಲಿನ. ಇಷ್ಟು ದಪ್ಪ ಆಗಿ ನನ್ನ ಹತ್ರ ತೂಗು ಅಂದ್ರೆ ಆಗಲ್ಲ ಅಂತೀನಷ್ಟೆ ಅನ್ನುವ ಬದಲು ಅವನು ಜಾಣ, ಮಾತಿರದೆ ನಗು ಸೂಸಿ ಜೋಕಾಲಿಯನ್ನೊಮ್ಮೆ ನನ್ನನ್ನೊಮ್ಮೆ ನೋಡಿ ನಮ್ಮ ಮುದ್ದುರಾಕ್ಷಸಿಯನ್ನ ಎತ್ತಿಕೊಂಡು ಜೋಲಿಯಲ್ಲಿಟ್ಟು ತೂಗುತ್ತಾನೆ. "ಯಹಾಂ ಏಕ್ ಶೆಹಜಾದೀ ಸೋಯೀ ಹುಯೀ ಹೈ...ಎಂಬ ಸೊಲ್ಲು ಚೂರು ಪಾರು ಕೇಳ್ತಾ ಇದೆ.
ಅವಳು ಎದ್ದ ಮೇಲೆ ಹಾಡುತ್ತಾಳೆ. ಏಕ್ ಫರಿಂದಾ ಹೋ ಶರ್ಮಿಂದಾ..ಆವೋ ಜಂಗಲ್...ಸೋಚ್ ರಹಾ ಹೈ ಬಾಹರ್ ಆಕೆ ಕ್ಯೂಂ ನಿಕಲಾ ಹೈ....
ಓಹ್ ಇರಿ. ಅವಳು ಏಳುವುದಕ್ಕೆ ಮೊದಲು ನನ್ನ ಕೆಲಸ ಮುಗಿಸಬೇಕು. ಮತ್ತೆ ನಾಳೆ ಸಿಗೋಣ.