Monday, March 10, 2008

ಕತೆ ಕತೆ ಕಾಪಿ...!

ದೊಡ್ಡದಾದ ಭವಂತಿ ಇರುವ ನಡುಮನೆಯ ಜಗುಲಿಯಲ್ಲಿ ಪುಟ್ಟ ಪುಟ್ಟ ಗುಡ್ಡಗಳಂತಹ ಅಡಿಕೆ ರಾಶಿ, ಸುತ್ತ ಗುಡ್ಡಗಳನ್ನ ಹರಡಿ ಕೂತು ತನ್ನ ಸೃಷ್ಟಿಯನ್ನ ತಾನೇ ಪರಿಶೀಲಿಸುವ ಶಿಲ್ಪಿಯಂತೆ ಕುಳಿತಿರುವ ಅಜ್ಜ..ಪುಟ್ಟಿ ಓಡೋಡಿ ಬಂದಳು ಶಾಲೆಯಿಂದ. ಇವತ್ತು ಏಪ್ರಿಲ್ ಹತ್ತು. ಇನ್ಮೇಲೆ ಎರಡು ತಿಂಗಳು ಶಾಲೆಗೆ ಬೇಸಿಗೆ ರಜ; ಯುನಿಫಾರ್ಮ್ ಬಿಸಾಕಿ, ಪಾಟಿ ಚೀಲ ಅಮ್ಮಮ್ಮನ ಮರಿಗೆಯ ಪಕ್ಕದ ಸಂದಿಯಲ್ಲೆಸೆದು, ಅವಳಿಗಿಷ್ಟವಾದ ನೇರಳೆ ಬಣ್ಣದ ಫ್ರಾಕಿನ, ಚಿಟ್ಟೆ ಚಿತ್ರದ ಬಿಳಿ ಜೇಬಿನಲ್ಲಿ ಕಿರುನೆಲ್ಲಿಕಾಯಿ ತುಂಬಿಟ್ಟುಕೊಂಡು, ಅಡಿಕೆ ಗುಡ್ಡಗಳ ಬದಿಯಲ್ಲಿ ದಾರಿ ಮಾಡಿಕೊಂಡು, ಅಜ್ಜನ ಪಕ್ಕದಲ್ಲಿ ಜಾಗ ಮಾಡಿಕೊಳ್ಳುತ್ತ ಕೂರಲಿಕ್ಕಿಲ್ಲ..ಅಮ್ಮಮ್ಮನಿಗೆ ಸಿಟ್ಟು - ಸುಮ್ನೆ ಏಳಲ್ಲಿಂದ, ಆರಿಸಿಟ್ಟ ಅಡಿಕೇನೆಲ್ಲ ಸೇರಿಸ್ ಬಿಡ್ತೆ, ಆ ಕಡೆ ಮೆತ್ತಿನ್ ಮೇಲೆ ಬೇರೆ ಆಟ ಆಡು ಹೋಗು..- ಪುಟ್ಟಿ ತುಂಬ ಒಳ್ಳೆಯವಳಂತೆ ಮುಖ ಮಾಡಿಕೊಂಡು ಅಜ್ಜನ ಹತ್ರ - ಇಲ್ಲಜ್ಜಾ ನಂಗೊತ್ತಿದ್ದು ಯಾವ್ದು ಯಾವಡಕೆ ಅಂತ - ಬಿಳೆಗೋಟು, ಚಾಲಿ, ಆಪಿ, ಹುಳುಕ ಅಲ್ದಾ.. ನಾನೂ ಆರಿಸ್ತಿ ಪ್ಲೀಸ್..ಅಜ್ಜ ಯಾವಾಗಲೂ ಅಭಯದಾತ. ಎಷ್ಟು ಸಿಟ್ಟು ಮಾಡಿಕೊಳ್ಳೋಣ ಅಂದರೂ ಪುಟ್ಟಿಯ ಮುಖ ನೋಡಿದ ಕೂಡಲೆ ನಗು ಬಂದು ಸಡಿಲಾಗುವ ಮುಖ ಬಿಗುಗೊಳ್ಳುವುದೇ ಇಲ್ಲ. ಸರಿ ಬಾ, ನೀನು ಬಿಳೆ ಗೋಟು ಮಾತ್ರ ಆರಿಸಿ ಇಕಾ ಈ ರಾಶಿಗೆ ಸೇರಿಸು.. ಬೇರೆ ಅಡಿಕೆ ಎಲ್ಲ ನಾನೇ ಆರಿಸ್ತಿ.

ಆರಿಸುತ್ತಾ ಕೂತ ಹಾಗೆ ಅಲ್ಲೊಂದಿಷ್ಟು ಹಾತೆಗಳು ಹಾರಾಡುತ್ತಿವೆ. ನೋಡುವಷ್ಟೂ ನೋಡಿ, ಅದಾಗಲೇ ಆರಿಸಿ ಬೇಜಾರು ಬಂದಿದ್ದ ಪುಟ್ಟಿ ಅಜ್ಜನ ಕಡೆ ನೋಡಿದಳು. ಅವನು ಸೀರಿಯಸ್ಸಾಗಿ ಅಡಿಕೆ ಆರಿಸುತ್ತಿದ್ದಾನೆ. ಹಗೂರ ತಿರುಗಿಕೊಂಡು ಒಂದು ಹಾತೆಯನ್ನು ಪಟಾರನೆ ಸೊಳ್ಳೆ ಹೊಡೆಯುವ ಹಾಗೆ ಹೊಡೆದರೆ ಹೋ.. ಅದು ಪಡ್ಚ.. ವಾವ್, ಇದು ಸೊಳ್ಳೆಯಷ್ಟು ಚಾಲಾಕಲ್ಲ ಆರಾಮಾಗಿ ಹೊಡೀಬಹುದು. ಇನ್ನೊಂದೆರಡು ಹೊಡೆದೇಬಿಡುವಷ್ಟರಲ್ಲಿ, ತಲೆ ತಗ್ಗಿಸಿಕೊಂಡು ಅಡಿಕೆ ಆರಿಸುತ್ತಿದ್ದ ಅಜ್ಜ ಕೇಳಿಬಿಟ್ಟ.. ಎಂತ ಮಾಡ್ತಾ ಇದ್ದೆ? ಅಜ್ಜಾ ಸೊಳ್ಳೆ ಹೊಡೀತಾ ಇದ್ದಿ.. ನಿಂಗೆ ಕಚ್ಚಬಾರ್ದು ಅದು ಅಂತ.. ನಮ್ ಪುಟ್ಟಿ ಸಿಕ್ಕಾಪಟ್ಟೆ ಜಾಣೆ. ಆದ್ರೇನು ಮಾಡ್ತೀರಿ ಅವನು ಪುಟ್ಟಿಯ ಅಜ್ಜ, ಇನ್ನೂ ಜಾಣ.. - ಇಷ್ಟು ಮಧ್ಯಾಹ್ನದಾಗೆ ಸೊಳ್ಳೆ ಎಲ್ಲಿಂದ ಬರ್ತು? ಅದು ಹಾತೆ.. ಹಂಗೆಲ್ಲಾ ಹಾತೆ ನೊಣ ಎಲ್ಲ ಹೊಡೀಲಾಗ. ಇರುವೆನೋ ಸೊಳ್ಳೆನೋ ನಮಗೆ ಕಚ್ಚಿ ತೊಂದರೆ ಕೊಟ್ಟರೆ ಮಾತ್ರ ಹೊಡೆಯಬೇಕೆ ವಿನಃ ಸುಮ್ ಸುಮ್ನೆ ಹೊಡದ್ರೆ ಅಣಿಮಾಂಡವ್ಯ ಋಷಿಯ ಕತೆ ಇತ್ತಲಾ ಹಂಗೇ ಆಗ್ತು ನಿಂಗೂ..

ಅಣಿಮಾಂಡವ್ಯ!!! - ಈಗ ಪುಟ್ಟಿ ಗಾಳಕ್ಕೆ ಸಿಕ್ಕ ಮೀನು.. ಅಜ್ಜನ ಕತೆಯ ಗಾಳ ಎಂತ ಪವರ್ ಫುಲ್ ಗೊತ್ತಾ- ಅಜ್ಜಾ ಅದ್ಯಾವ ಕತೆ ನಂಗೆ ಗೊತ್ತೇ ಇಲ್ಯಲ್ಲಾ.. ಅಜ್ಜನ ಮುಖದಲ್ಲಿ ಕಂಡೂ ಕಾಣದ ನಗು, ಸರಿ ಹೇಳ್ತಿ ಮತ್ತೆ ನೀನು ಸುಮ್ಮನೆ ಹಾತೆ ಹೊಡೀದೆ ಕೂರಕ್ಕು ಅಷ್ಟೇ.ಹೋ ಅದ್ಯಾವ ಮಹಾ ಕೆಲಸ.. ಹೇಳ ಹೇಳುತ್ತಲೇ ಅವಳ ಕೈ ಅಲ್ಲೇ ಹಾರುತ್ತಿದ್ದ ಹಾತೆಯತ್ತ ಹೋಯಿತು.. ನೋಡಿದ್ಯಾ ನೋಡಿದ್ಯಾ ಇದೇ ಬ್ಯಾಡ ಅಂತ ಹೇಳಿದ್ದು..ಸರಿ ಸರಿ ನಾನು ಕೈ ಕಟ್ಟಿ ಕೂರ್ತೀನಿ ನೀನ್ ಕತೆ ಹೇಳು -

ಒಂದು ಕಾನಿನಲ್ಲಿ ಅಣಿ ಮಾಂಡವ್ಯ ಅಂತೊಬ್ಬ ಋಷಿ ಇದ್ದ. ತುಂಬ ಒಳ್ಳೆಯ ಋಷಿ. ಗೆಡ್ಡೆ ಗೆಣಸು ತಿಂದುಕೊಂಡು, ದೇವರ ಪೂಜೆ, ತಪಸ್ಸು ಮಾಡಿಕೊಂಡು ತನ್ನ ಪಾಡಿಗೆ ತಾನಿರುತ್ತಿದ್ದ. ಒಂದು ಇರುವೆಯನ್ನೂ ಕೊಲ್ಲುತ್ತಿರಲಿಲ್ಲ. ಅಂತಹಾ ಋಷಿ ಒಂದು ದಿನ ಸತ್ತು ಹೋದ. ಅಷ್ಟು ಒಳ್ಳೆಯವನು ತಾನು ಇನ್ನು ಸ್ವರ್ಗಕ್ಕೇ ಹೋಗುವುದು, ದೇವರ ಜೊತೆ ಆನಂದದಿಂದ ಇರಬಹುದು ಅಂದುಕೊಂಡಿದ್ದ. ನೋಡಿದರೆ ನರಕಕ್ಕೆ ಬಂದು ಬಿಟ್ಟಿದ್ದಾನೆ. ಏನು ಎತ್ತ ಅಂತ ಅವನು ಕೇಳುವುದಕ್ಕೆ ಮೊದಲೇ ಯಮದೂತರು ಅವನನ್ನ ಎತ್ತಿಕೊಂಡು ಹೋಗಿ ಕುದಿಯುತ್ತಿರುವ ಎಣ್ಣೆ ಕೊಪ್ಪರಿಗೆಯೊಳಗೆ ಅದ್ದಿ ತೆಗೆದರು..ಪುಟ್ಟಿಯ ಬಾಯಿ ಭಯದಿಂದ ತೆರೆದುಕೊಂಡುಬಿಟ್ಟಿದೆ. ಕಟ್ಟಿಕೊಂಡಿದ್ದ ಕೈ ಯಾವಾಗಲೋ ಬಿಚ್ಚಿಹೋಗಿ, ನೆಲಕ್ಕೆ ಊರಿಕೊಂಡು ಅಜ್ಜನ ಕತೆಯನ್ನ ಮೈಯಿಡೀ ಕಿವಿಯಾಗಿಸಿ ಕೇಳುತ್ತಿದ್ದಾಳೆ.

ಅಯ್ಯಯ್ಯೋ ಅಮ್ಮಾ ಅಂತ ಕೂಗಿಕೊಂಡ ಅಣಿಮಾಂಡವ್ಯ ಋಷಿ. ಅಷ್ಟರಲ್ಲಿ ಅಲ್ಲಿಗೆ ಬಂದ ಚಿತ್ರಗುಪ್ತ ಅಣಿಮಾಂಡವ್ಯನ ಲೆಕ್ಕದ ಪುಸ್ತಕ ನೋಡಿ, ಈಗ ಇವನನ್ನ ತಲೆಕೆಳಗಾಗಿ ನೇತು ಹಾಕಿ, ಕೆಳಗಡೆ ಬೆಂಕಿ ಹಾಕಿ ಅಂತ ಹೇಳಿದ.ಯಮದೂತರಿಗೇ ಅಷ್ಟೆ ಸಾಕು. ಚಿತ್ರಗುಪ್ತ ಹೇಳಿದ ಹಾಗೆ ಮಾಡುವುದೇ ಕೆಲಸ. ಅವರು ಬಂದವರು ಯಾರು ಏನು ಅಂತೆಲ್ಲ ನೋಡುವುದಿಲ್ಲ. ಯಾರ ಜೊತೆಯೂ ಮಾತಾಡುವುದಿಲ್ಲ. ಅವರಿಗೆ ನೆಹರೂನೂ ಒಂದೇ ಅಣಿಮಾಂಡವ್ಯ ಋಷಿಯೂ ಒಂದೇ.
ನಾನೂ ಅಷ್ಟೇನಾ ಅಜ್ಜಾ.. ಮಕ್ಕಳಿಗೂ ಹಾಗೇನಾ..ಛೇ ಛೇ ಮಕ್ಕಳೆಲ್ಲಿ ನರಕಕ್ಕೆ ಹೋಗ್ತಾರೆ. ಇದೆಲ್ಲ ದೊಡ್ಡವರಿಗೆ ಮಾತ್ರ. ಮುಂದೆ ಕೇಳು..


ಅವರು ಅವನನ್ನ ತಲೆ ಕೆಳಗೆ ಮಾಡಿ ನೇತುಹಾಕಿದರು. ಕೆಳಗೆ ದೊಡ್ಡ ಉರಿಯ ಬೆಂಕಿ ಮಾಡಿದರು. ಉರಿ ಹೆಚ್ಚೂ ಕಮ್ಮಿ ಅವನ ಎತ್ತಿಕಟ್ಟಿದ ಜಟೆಯವರೆಗೂ ಬರುತ್ತಿದೆ. ಉರಿ ಸೆಕೆ ತಾಳಲಾಗುತ್ತಿಲ್ಲ. ಇನ್ನೇನು ಎಚ್ಚರ ತಪ್ಪಬೇಕು ಅಷ್ಟರಲ್ಲಿ ಚಿತ್ರಗುಪ್ತ ಬಂದು, ಈಗ ಒಂದು ಸರಳನ್ನು ಕೆಂಪಗೆ ಕಾಯಿಸಿ, ಅವನ ಕುಂಡಿಗೆ ಚುಚ್ಚಿ ಅನ್ನಬೇಕೇ..! ಇದನ್ನು ಕೇಳಿದ ಅಣಿಮಾಂಡವ್ಯ ದೇವರೇ ನನ್ನನ್ನು ಹೇಗಾದರೂ ಕಾಪಾಡು, ಯಾವ ಪಾಪವನ್ನೂ ಮಾಡದ ನನಗ್ಯಾಕೆ ಈ ಶಿಕ್ಷೆ ಅಂತ ಕೇಳಿಕೊಂಡ.. ಅಷ್ಟರಲ್ಲಿ ಯಮಧರ್ಮರಾಯ ಅಲ್ಲಿಗೆ ಬಂದ. ಬಂದವನು ಎಲ್ಲ ಪಾಪಿಗಳೂ ಅನುಭವಿಸುತ್ತಿದ್ದ ಶಿಕ್ಷೆಯನ್ನೆಲ್ಲಾ ಹೀಗೇ ಒಂದು ಸಾರಿ ಕಣ್ಣಾಡಿಸಿ ನೋಡಿ ಇನ್ನೇನು ಹೊರಡಬೇಕು, ಆಗ ಅವನ ಕಣ್ಣಿಗೆ ಅಣಿಮಾಂಡವ್ಯ ಋಷಿಯು ಬಿದ್ದ. ಅರೇ ಇದೇನು ಇವರಿಲ್ಲಿ ಅಂದುಕೊಂಡು ಹತ್ತಿರ ಹೋಗಿ ಗಮನಿಸಿ ನೋಡಿದರೆ ಹೌದು, ಋಷಿವರ್ಯರೇ..
ಚಿತ್ರಗುಪ್ತಾ ಅಂತ ಕೂಗಿ ಕರೆದರೆ ಅವನು ಓಡೋಡುತ್ತ ಬಂದ. ಇದೇನು ಇವರಿಲ್ಲಿ ಅಂತ ಕೇಳಿದಾಗ ಚಿತ್ರಗುಪ್ತನು ಪಾಪದ ಲೆಕ್ಕದ ಪುಸ್ತಕ ತೆಗೆದು ನೋಡಿದ. ಹೌದು ದೇವಾ ಇವರು ಸಣ್ಣಕಿದ್ದಾಗ ಒಂದು ಭಯಾನಕ ಪಾಪ ಮಾಡಿದ್ದರು. ಇವರ ತಂದೆ ಯಾಗ, ನೇಮಗಳಲ್ಲಿ ನಿರತರಾಗಿದ್ದರೆ, ಇವರು ಮಾತ್ರ ಸುತ್ತ ಮುತ್ತ ಸುಳಿದಾಡುವ ನೊಣಗಳನ್ನು ಹಿಡಿದು, ಅವುಗಳ ಕುಂಡಿಗೆ ದರ್ಭೆ ಚುಚ್ಚಿ ಆಟವಾಡುತ್ತಿದ್ದರು,ಅಂತಹ ಪಾಪಕ್ಕೆ ಇದೇ ಶಿಕ್ಷೆ. ಅದಕ್ಕೇ ಅವರು ಆಮೇಲೆ ಯಾವ ಪಾಪವನ್ನೂ ಮಾಡದೆ ತುಂಬ ಒಳ್ಳೆಯವರಾಗಿ ಬದುಕು ನಡೆಸಿದರೂ ನರಕಕ್ಕೆ ಬಂದಿರುವುದು -ವಿವರಣೆ ನೀಡಿದ. ಯಮನಿಗೆ ಎಲ್ಲೋ ಏನೋ ತಪ್ಪಾಗಿದೆ ಅನಿಸಿತು. ಅಷ್ಟೊತ್ತಿಗೆ ಅಣಿಮಾಂಡವ್ಯ ಋಷಿಯೂ ಸಹ ಯಮದೇವಾ, ನಾನು ಮಾಡಿದ ಆ ತಪ್ಪು ಎಷ್ಟನೇ ವರ್ಷದಲ್ಲಿ ನಡೆದಿದ್ದು ಅಂತ ಕೇಳಿದ. ಚಿತ್ರಗುಪ್ತ ಪುಸ್ತಕ ನೋಡಿ ಸುಮಾರು ನಾಲ್ಕರಿಂದ ನಾಲ್ಕೂವರೆ ವರ್ಷ ಪ್ರಾಯ ನಿಮಗಾಗ ಅಂತ ಹೇಳಿದ. ಅದಾದ ಮೇಲೆ ಇನ್ನೇನು ಪಾಪವನ್ನು ಮಾಡಿದ್ದೇನೆ ಅಂತ ಋಷಿ ಮತ್ತೆ ಕೇಳಿದ. ಇನ್ಯಾವುದೂ ಪಾಪವೇ ಇಲ್ಲ. ಭೂಮಿಯಲ್ಲಿ ನಾಲ್ಕು ಸಂವತ್ಸರ ಮಳೆ ಬೆಳೆ ಚೆನ್ನಾಗಿ ಆಗುವಷ್ಟು ಪುಣ್ಯವಿದೆ ನಿಮ್ಮ ಆಯುಸ್ಸಿನಲ್ಲಿ ಅಂತ ಹೇಳಿದ. ಇದನ್ನು ಕೇಳಿ ಋಷಿಗೆ ತುಂಬ ದುಃಖವಾಯಿತು. ಅವನು ಯಮನಿಗೆ ಹೇಳಿದ, ದೇವಾ, ತಪ್ಪು ಮಾಡಿದ್ದಕ್ಕೆ ತಕ್ಕ ಶಿಕ್ಷೆ ವಿಧಿಸಲೇ ಬೇಕು. ಆದರೆ ಏನೂ ತಿಳಿಯದ ಬಾಲ್ಯಕಾಲದಲ್ಲಿ ಮಾಡಿದ ಒಂದು ತಪ್ಪಿಗೆ ಜೀವನ ಪೂರ್ತಿ ಮಾಡಿದ ಒಳ್ಳೆಯ ಕೆಲಸಗಳೂ, ಪುಣ್ಯಗಳಿಕೆಯನ್ನೆಲ್ಲಾ ಬದಿಗಿಟ್ಟು ಹೀಗೆ ಶಿಕ್ಷೆ ಕೊಟ್ಟರೆ ಪ್ರಪಂಚದಲ್ಲಿ ಅರಾಜಕತೆ ಹೆಚ್ಚಾಗುತ್ತದೆ. ಆಮೇಲೇ ಎಲ್ಲರೂ ಒಂದ್ಸಲ ತಪ್ಪು ಮಾಡಿದವರೆಲ್ಲ ಹೇಗಿದ್ರೂ ಶಿಕ್ಷೆ ಆಗೇ ಆಗತ್ತೆ ಅಂತ ಮತ್ತೆ ಮತ್ತೆ ತಪ್ಪು, ಪಾಪ, ಅನ್ಯಾಯಗಳನ್ನ ಮಾಡುತ್ತಲೇ ಹೋಗುತ್ತಾರೆ, ಇದಕ್ಕೆ ಒಂದು ಪರಿಹಾರವಿರಬೇಕು. ಅಂತ ಹೇಳಿದ.
ಯಮನಿಗೆ ಹೌದು ಇದು ಸರಿ ಅನ್ನಿಸಿತು. ಕೂಡಲೇ ಯಮದೂತರಿಗೆ ಋಷಿಯನ್ನು ಇಳಿಸಿ, ಸೂಕ್ತ ಉಪಚಾರ ಮಾಡಲು ಹೇಳಿದನು. ಋಷಿಯು ಸ್ವಲ್ಪ ಚೇತರಿಸಿಕೊಂಡ ಮೇಲೆ, ತನ್ನ ಸಭೆಗೆ ಕರೆಸಿ, ನಡೆದ ಅಚಾತುರ್ಯಕ್ಕೆ ಕ್ಷಮೆ ಕೇಳಿ, ಈ ತೊಂದರೆಗಾಗಿ ಏನು ಬೇಕಾದರೂ ವರ ಕೇಳಲು ಹೇಳಿದನು. ಅದಕ್ಕೆ ಋಷಿಯು, ಆರು ವರ್ಷದ ಒಳಗಿನ ಮಕ್ಕಳು ತಪ್ಪು ಮಾಡಿದರೆ ಅದನ್ನು ಪಾಪವೆಂದು ಚಿತ್ರಗುಪ್ತರು ಬರೆದುಕೊಳ್ಳಬಾರದಾಗಿಯೂ ಮತ್ತು ಯಾವ ಮನುಷ್ಯನೂ ಮೊದಲ ಬಾರಿ ತಿಳಿಯದೆ ತಪ್ಪು ಮಾಡಿದರೆ ಅದನ್ನು ಕ್ಷಮಿಸಬೇಕೆಂದೂ ಕೇಳಿಕೊಂಡನು.ಯಮನೂ ಸಂತುಷ್ಟಗೊಂಡು ಒಪ್ಪಿಕೊಂಡನು. ಆದರೆ ಮಾಡುತ್ತಿರುವುದು ತಪ್ಪೆಂದು ತಿಳಿದ ಮೇಲೂ ಅದನ್ನೇ ಮಾಡಲು ಹೊರಟರೆ ಅದು ಮಹಾಪಾಪವೆಂದೂ, ಅಂತಹ ಪಾಪಕ್ಕೆ ನರಕದಲ್ಲಿ ಕಠಿಣ ಶಿಕ್ಷೆ ಕಾದಿದೆಯೆಂದೂ ಎಚ್ಚರಿಸಲು ಮರೆಯಲಿಲ್ಲ. ನಂತರ ದೇವದೂತರನ್ನು ಕರೆಸಿ, ಋಷಿಯನ್ನು ದೇವಲೋಕಕ್ಕೆ ಕಳಿಸಿಕೊಟ್ಟನು.

ಅದಕ್ಕೇ ಹೇಳುವುದು, ಸುಮ್ಮಸುಮ್ಮನೆ ಯಾವ ಪ್ರಾಣಿ,ಪಕ್ಷಿ,ಕ್ರಿಮಿ, ಕೀಟಗಳನ್ನೆಲ್ಲ ಹಿಂಸಿಸಬಾರದು ಎಂದು.ಅಷ್ಟರಲ್ಲೇ ಪುಟ್ಟಿಗೆ ಭಯ ಹತ್ತಿಕೊಂಡುಬಿಟ್ಟಿತು. ಹಾಗಾದ್ರೆ ಈಗ ನಾನು ಹಾತೆಯನ್ನೆಲ್ಲ ಪಟ್ ಅಂತ ಹೊಡೆದುಕೊಂದೆನಲ್ಲಾ ಅದಕ್ಕೆ ನನಗೆ ಆಮೇಲೆ ಶಿಕ್ಷೆಯಾಗುತ್ತಾ.. ಅಜ್ಜನನ್ನು ಪೀಡಿಸಿತೊಡಗಿದಳು. ಇಲ್ಲ ಮಾರಾಯಿತಿ, ಇಲ್ಲ. ನೀನಿನ್ನೂ ತುಂಬ ಚಿಕ್ಕವಳು. ಅಲ್ಲದೆ ನಾನು ಹಾತೆಯನ್ನು ಹೊಡೆಯಬಾರದು ಅಂತ ಹೇಳಿದ ಮೇಲೆ ನೀನು ಹಾತೆಗಳ ತಂಟೆಗೇ ಹೋಗಿಲ್ಲ. ತಿಳಿದೂ ತಿಳಿದೂ ತಪ್ಪು ಮಾಡುವವರಿಗೆ ಮಾತ್ರ ಹೀಗೆಲ್ಲ ಶಿಕ್ಷೆಯಾಗುತ್ತದೆ ಅಂತ ಹೇಳುತ್ತಿದ್ದಾನೆ ಅಜ್ಜ..


ತಾನ್ ತನನನಾ... ಇದ್ದಕ್ಕಿದ್ದಂಗೆ ಟೀವಿ ವಾಲ್ಯೂಮ್ ಜಾಸ್ತಿಯಾಗಿ ಕುರ್ಚಿಯಲ್ಲಿ ಕೂತ ಹಾಗೇ ಮಂಪರಿಗೆ ಜಾರಿದ್ದ ನನಗೆ ಎಚ್ಚರವಾಯಿತು. ಅಜ್ಜನ ಕತೆಯ ಕನಸು ಫ್ರೇಮ್ ಬೈ ಫ್ರೇಮ್ ನೆನಪಿತ್ತು. ಅರೇ ಈ ಕನಸು ಈಗ್ಯಾಕೆ ಬಿತ್ತು ಅಂತ ಯೋಚನೆ ಮಾಡುವಷ್ಟರಲ್ಲಿ ಜಾಹೀರಾತು ಮುಗಿದು ಮತ್ತೆ ವಾರ್ತೆ ಶುರುವಾಯಿತು. ವಾರ್ತೆಯ ತುಂಬಾ ಗಾಂಧಿಗಿರಿಯ ಸಂಜಯ್ ದತ್ತನ ಶಿಕ್ಷೆ/ಕೋರ್ಟು/ಜೈಲುವಾಸದ ಸುದ್ದಿ.. ಹಾಗೇ ಬಿಚ್ಚು ಹೀರೋ ಸಲ್ಮಾನನ ಪೋಚಿಂಗ್ ಕೇಸಿನ ವಿಶ್ಲೇಷಣೆ... ಇವರಿಗ್ಯಾರಿಗೂ ಹೀಗೆ ಕತೆ ಹೇಳುವ ಅಜ್ಜನೇ ಇರಲಿಲ್ಲವೇ ಅಂತನ್ನಿಸತೊಡಗಿತು... ಜಡ್ಜ್ ಸಾಹೇಬರ ಕರುಣೆಯನ್ನು ಗಳಿಸಲು ಇತ್ತೀಚೆಗೆ ಮಾಡಿದ ಸೇವೆ, ಒಳ್ಳೆಯ ಕೆಲಸ, ಅಮ್ಮನ ಮದರ್ ಇಂಡಿಯಾ ಇಮೇಜು, ಗಾಂಧೀಜಿಯ ಹೆಸರು ಎಲ್ಲ ಬಳಸುವ ಜಾಣ್ಮೆ ಮನಸ್ಸಿಗೆ ಕಷ್ಟ ಕೊಡುತ್ತಿದೆ.
ಚಿತ್ರಗುಪ್ತನೆಲ್ಲಿದ್ದಾನೆ? ಅವನ್ಯಾಕೆ ಬಂದು ಈ ಮಂದಿಯನ್ನ, ಇಂತಹ ಆಮಿಷಗಳಿಗೆ ಬಲಿಯಾಗುವ ನ್ಯಾಯಾಧೀಶರನ್ನ ಲೆಕ್ಕದ ಪುಸ್ತಕ ತೋರಿಸಿ ಎಚ್ಚರಿಸುವುದಿಲ್ಲ? ಸಿನಿಮಾ ಮಂದಿ ಹೋಗಲಿ, ನಮ್ಮ ಮಕ್ಕಳೇ ವೈಭವೀಕರಿಸಿದ ಆಕ್ಷನ್ ಸಿನಿಮಾಗಳು, ಕ್ರೈಂ ಸ್ಟೋರಿ ನೋಡಿ ನೋಡಿ ಯಾವ ನರಕದ ಕತೆಯೂ ಭಯ ಹುಟ್ಟಿಸುವುದಿಲ್ಲ. ಹೇಗಾದರೂ ಮಾಡಿ, ಋಷಿ ಮುನಿಗಳನ್ನ, ಮುಲ್ಲಾ ನಸರುದ್ದೀನನನ್ನ, ಶಹಜಾದೆಯನ್ನ, ಬೀರಬಲ್ಲನನ್ನ, ವಿಷ್ಣುಶರ್ಮನನ್ನ,ಮಾರ್ಕ್ ಟ್ವೈನ್ ನನ್ನ ನಮ್ಮ ಮಕ್ಕಳಿಗೆ ಗೊತ್ತು ಮಾಡಿಕೊಡಬೇಕಲ್ಲಾ, ಇದರ ಹೊರತಾಗಿ ಇನ್ಯಾವ ಅವೇರ್ ನೆಸ್ ಕ್ಯಾಂಪೈನ್ ಬೇಕು?!