Friday, November 27, 2009

ಬಚ್ಚಲ ರೊಚ್ಚು..

ಅವನಿಂದ ನೂರಾಅರವವತ್ನಾಲ್ಕಕ್ಕೂ ಹೆಚ್ಚು ಮನೆಯ ದೀಪಗಳು ನಂದಿದವು. ಅವನ ಯೋಚನೆಗಳು ಕ್ರೌರ್ಯದ ಪರಮಾವಧಿಯವು ಮತ್ತು ನೀಚ ಉದ್ದೇಶಗಳು. ಇದರ ಬಗ್ಗೆ ಯಾವುದೇ ಧರ್ಮ,ಜಾತಿ,ರಾಷ್ಟ್ರೀಯತೆಯನ್ನು ಮೀರಿ ಎಲ್ಲರ ಅಭಿಪ್ರಾಯವೂ ಒಂದೇ.
ಆದರೆ ಅದೇ ಅವನಿಂದ ನಾಡಿನ ಎಲ್ಲ ಮಾಧ್ಯಮಗಳ ಮಾರಾಟ ಮತ್ತು ಮೌಲ್ಯವರ್ಧನೆ ಆಗುತ್ತಿರುವುದು ಅಸಹ್ಯದ ಪರಮಾವಧಿ ಎಂಬುದು ನನ್ನ ಅನಿಸಿಕೆ.
ಅವನು ಈಗ ಕಟಕಟೆಯಲ್ಲಿದ್ದಾನೆ. ಅವನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡಿದೆ ಅಷ್ಟು ಖರ್ಚು ಮಾಡಿದೆ, ಇಟ್ಟುಕೊಳ್ಳುವುದೇಕೆ, ಕಲ್ಲು ಹೊಡೆದೋ ಗುಂಡು ಹೊಡೆದೋ ಕೊಂದುಬಿಡಬೇಕು ಎಂದು ಆವೇಶದಲ್ಲಿ ಯೋಚಿಸುವ ಮುನ್ನ ಹುತಾತ್ಮ ಮೇ.ಸಂದೀಪ್ ಉನ್ನಿ ಕೃಷ್ಣನ್ ಅವರ ಅಪ್ಪ ನೀಡಿದ ಉತ್ತರವನ್ನು ದಯವಿಟ್ಟು ಓದಿ ಮನನ ಮಾಡಿಕೊಳ್ಳಿ. [ನನಗೆ ಆ ನರಕೀಟದ ಹೆಸರನ್ನು ೨೪ ಸಲ ಬರೆಯಲು ಮತ್ತು ಓದಲು ಅಸಹ್ಯವಾದದ್ದರಿಂದ ಅವನ ಹೆಸರು ಬಂದಲ್ಲೆಲ್ಲ ಕಪ್ಪು ಬಣ್ಣ ಬಳಸಿದ್ದೇನೆ.]
ಈ ನರಹಂತಕನ ಮುಖ ನೋಡಬೇಕೂನಿಸುತ್ತಾ ನಿಮಗೆ ಅಂತ ನಮ್ಮ ಮಾಧ್ಯಮ ಪ್ರತಿನಿಧಿ ಶಿಖಾಮಣಿ ಮಾಡಿದ ಪ್ರಶ್ನೆಗೆ ಅವರು ಹೇಳಿದ್ದಿಷ್ಟು –
ಈ ಮಹಾನ್ ತಂದೆಯ ಯೋಚನೆಯನ್ನ ದೃಷ್ಟಿಕೋನವನ್ನ ಗೌರವಿಸುವುದು ಈ ಸಂದರ್ಭದಲ್ಲಿ ತುಂಬ ಸೂಕ್ತ.
ಎಷ್ಟು ಕೋಟಿಗಳೂ ನಾವು ಕಳೆದುಕೊಂಡ ಅಮೂಲ್ಯ ಜೀವಗಳಿಗೆ ಸಮನಲ್ಲ. ಈ ತರಹದ ಘಟನೆಗಳು ಮುಂದೆ ನಡೆಯದ ಹಾಗೆ ಜವಾಬ್ದಾರಿ ತೆಗೆದುಕೊಳ್ಳುವವರು ಮಾಡುತ್ತಿರುವ ಕೆಲಸ ಮಧ್ಯೆ ಅನಾವಶ್ಯಕ ಭಾವೋದ್ವೇಗದ ಆರೋಪಣೆಗಳು ಸಲ್ಲ.
ಆ ಕರಾಳ ದಿನ ಜೀವ ಕಳೆದುಕೊಂಡ ಮತ್ತು ಜೀವರಕ್ಷಣೆಗಾಗಿಯೇ ಜೀವತೆತ್ತ ಎಲ್ಲರ ನೆನಪಿಗೆ ತಲೆಬಾಗುತ್ತಾ,
ಪ್ರೀತಿಯಿಂದ
ಸಿಂಧು.
[ಮಾಹಿತಿ ಚಿತ್ರದ ಮೂಲ - ವಿಜಯಕರ್ನಾಟಕ ೨೬.೧೧.೦೯]