Tuesday, July 10, 2018

"ಕರೆದ ದಾರಿ ಬೇರೆ, ಮತ್ತೆ
ಹಿಡಿದ ದಾರಿ ಬೇರೆಯೆ!
ಹಾತೊರೆದು ನಡೆವರನ್ನು
ಹಾದಿಗೆಡಿಸುತಾರೆಯೆ?"
 - ದಿಗ್ಭ್ರಾಂತ ಕವಿತೆ - ಗಂಗಾಧರ ಚಿತ್ತಾಲ


ಇವತ್ತು ಈ ಕವಿತೆ ಓದಿ ಒಂದು ವಿಚಿತ್ರ ಮನಸ್ಥಿತಿ ಉಂಟಾಯಿತು. ಎಲ್ಲೆಲ್ಲಿಯದೋ ಯಾವಯಾವದೋ ವಿಷಯಗಳು ಕನೆಕ್ಟ್ ಆಗಿಬಿಟ್ಟಿತು.
ಒಂದೊಳ್ಳೆಯ ಕವಿತೆ ಅಂದ್ರೆ ಹೀಗೆ ಅಲ್ಲವೆ? ನಾನು ಹುಟ್ಟುವುದಕ್ಕೂ ಮೂವತ್ತು ವರುಷಗಳಿದ್ದಾಗ ಬರೆದ ಕವಿತೆ ನಾನು ಹುಟ್ಟಿ ನಲವತ್ತು ವರುಷದ ಮೇಲೆ ನನ್ನನ್ನು ಅಲುಗಾಡಿಸುವ ಈ ಕಾವ್ಯಾನುಸಂಧಾನಕ್ಕೆ ಮನಸೋತಿರುವೆ.
ಪು.ತಿ.ನ ಬರೆದ ಹಾಗೆ "ಕಥೆಗಳ ಬರೆಯುವ ಕಥೆಗಾರ ನಿನ್ನ ಕಲೆಗೆ ಯಾವುದು ಪಾರ.."

ಇದೇ ಹುಕಿಯಲ್ಲಿ ನನ್ನದೊಂದು ಸೊಲ್ಲು ತಡೆದರೂ ಮತ್ತೆ ಬಂದು ಬರೆಸಿಕೊಂಡಿತು.

ಬದಲಾದ ಹಾದಿ, ಹೆಜ್ಜೆ,
ಜತೆಪಯಣದ ವಜ್ಜೆ
ನೋಡುತ್ತಲೆ ಕಳೆದ ದಿನಗಳ
ನಿಲ್ದಾಣದಿಂದ ಹೊರಟು
ನೋಡದಿದ್ದರೂ ನಡೆದೀತೆಂಬ
ನಿಲುಗಡೆಗಳ ದಾರಿ
ತುಟಿಮುಚ್ಚಿದ ಕಣ್ರೆಪ್ಪೆಗಳು ಉದುರಿವೆ
ತುಟಿ ಮುಟ್ಟಲಾರದೆ ಅದುರಿದೆ
ನೀನು ನಡೆದುಬಿಟ್ಟಿದ್ದೀ
ನಾನು ಹೊರಳಿಬಿಟ್ಟಿರುವೆ
ಆದರೂ
ಆ ನೀನು
ಕಾಲವಳಿಸದ ನಿಜ
ನನ್ನ ನೆನಪಿನಲ್ಲಿ,
ಒಂದೇ ಹಾದಿಯ, ಹೆಜ್ಜೆ-ಮೇಲೆ-ಹೆಜ್ಜೆಯೇ ಕನಸಿನಲ್ಲಿ.