Monday, October 25, 2010

ಮಹೇಶ ಇನ್ನು ನೆನಪು!!


ಬದುಕಿಗೆಷ್ಟೊಂದು
ಭಾಷ್ಯ ಬರೆಯಬಹುದು..
ಇದು ಇದೇ, ಇದು ಇದಲ್ಲ
ಎಂಬ ತರ್ಕವ ಮಣಿಸಿ, ಜಯಿಸಿ,
ನಾಳೆಯು ನನ್ನದೆಂಬ
ಭರವಸೆಯ ಬೆನ್ನತ್ತಿ
ಇಂದು ಕನಸಿನಲ್ಲಿ ಜಾರುತ್ತಾ
ಆಹ್
ಸಾವಿಗೊಂದೇ ಸಾಲು
ತರ್ಕಕ್ಕೆ ಮೀರಿದ್ದು
ಚರಮಗೀತೆ.
ಕುವೆಂಪುರ ವಾಲಿಯೆಂದ ಮಾತಿನ ನೆನಪು
ಸಾವ್ ಗಾಳಿ ತೂರಲರಿವಪ್ಪುದಯ್...
ನಾವು ಗಟ್ಟಿಯೆಂದರಿತುದು ಜೊಳ್ಳು
ಜೊಳ್ಳೆಂದರಿತುದೇ ಗಟ್ಟಿ!

ಆತ್ಮೀಯ ಮಹೇಶನಿಗೆ ಕೊಡದೆ ಉಳಿದ ಅಪ್ಪುಗೆಯೊಂದಿಗೆ, ಆಡದೆ ಉಳಿದ ಮಾತುಗಳೊಂದಿಗೆ, ಹಂಚಿಕೊಳ್ಳದೆ ಉಳಿದ ನಗೆಯೊಂದಿಗೆ, ನಮ್ಮೆಲ್ಲ ನಲ್ಮೆಯ ಕ್ಷಣಗಳನ್ನು ತೋಯಿಸಿಯೇ ತೀರುವೆನೆಂಬ ಹಟ ತೊಟ್ಟಿರುವ ದುಃಖದೊಂದಿಗೆ ಈ ಸಾಲುಗಳ ಅರ್ಪಣೆ.

ಮಾತೆತ್ತಿದ್ದರೆ ಮನೆಗೆ ಕರೆವವರು
ಉಂಡು ಹೋಗಿರೆಂದವರು
ಚಟುವಟಿಕೆಗೆ ಕೊನೆಮೊದಲಿಲ್ಲದವರು
ಮಲಗಿದ್ದಾರಿಲ್ಲಿ ಮಿಸುಕಾಡದೆ
ಕಣ್ಣು ಮುಚ್ಚಿಹರಂತೆ,
ಚೈತನ್ಯಶೀಲ ಬದುಕಿನ
ದಾರಿಯದು
ಇದ್ದಕಿದ್ದಂತೆ ತುಂಡರಿಸಿ
ಆವರಿಸಿತೆಲ್ಲ ಮೌನ,ಕತ್ತಲು,ಜಡತೆ, ಸಾವು
ಇದು ಅನ್ಯಾಯ.
ಚಂದ ಚಿತ್ರವ ಕೊರೆದು ಕತ್ತರಿಸಿ
ಫ್ರೇಮಲ್ಲಿಟ್ಟು ಕೊಟ್ಟ ಕೈಗಳ
ಕಟ್ಟಿ ಮಲಗಿಸಿ ಚೌಕಟ್ಟಿ-
ನೊಳಗೆ ನೂಕಿದ ವಿಧಿಯೆ
ಇದೂ ಒಂದು ವಿಧಾನವೆ?

ನೋವು,ಶೂನ್ಯಗಳಲ್ಲಿ ಮುಳುಗಿರುವ ಅವನ ಕುಟುಂಬಕ್ಕೆ ಧೈರ್ಯ ಮತ್ತು ಸ್ಥೈರ್ಯವನ್ನು ಬಯಸುತ್ತಾ
ಪ್ರೀತಿಯಿಂದ,
ಸಿಂಧು