Thursday, November 13, 2008

ಕೃಷ್ಣಪಕ್ಷದ ಲಹರಿ..

ಈಗಷ್ಟೆ ನಿಂತ ಮಳೆ,
ಮರಮರದ ಹಸಿರೆಲೆಯ
ತುದಿಮೂಗಲ್ಲಿ ಪುಟ್ಟ ಪುಟ್ಟಹನಿ,
ಮೋಡ ಚೆದುರಿ, ಕೊನೆಯ ಕಿರಣಗಳು
ಕೆಂಪಗೆ ನೀಲಿಯಲ್ಲಿ ಹರಡುತ್ತಾ
ಹಿತವಾದ ಸಂಜೆ,
ದಾರಿ ಇಕ್ಕೆಲದ ಕಳೆಗಿಡಕ್ಕೂ
ಮಳೆಹನಿಯ ಸವಿದು
ಎಂತದೋ ಬಳುಕು ;
ದಾರಿಬದಿಯ ನೀರಹರಿವಿನಲ್ಲಿ
ಚಿಣ್ಣರ ಪುಟ್ಟ ಕಾಲಾಟ;
ತುಂಬಿಬಂದಿದೆ ಮನ
ಮನೆಗೆ ಬಂದವಳು ಕದವ ತೆರೆದೆ
ಬಾಲ್ಕನಿಯಾಚೆಗೆ ದೂರದಲಿ
ಸಾವನದುರ್ಗದ ಮೇರುನೋಟ;
ನೀನಿಲ್ಲ ಜತೆಯಲ್ಲಿ
ಅಕ್ಷಾಂಶವೇ ಬೇರೆ
ಹರಡಿಬಿದ್ದಿದೆ ಗುರುತು ಹಾಕಿಟ್ಟ ಭೂಪಟ
ಗೊತ್ತು ಕೆಲದಿನಗಳ ದೂರ
ಹೇಗೆ ಇಳುಕಲಿ ಮನದ ಭಾರ?
ಕೈ ಮುಗಿದು ಕೂತಿದ್ದೇನೆ
ಬಿಸಿಹಾಲಿನ ಬಟ್ಟಲ ಮುಂದೆ..
ಗೊತ್ತು ನೀನಲ್ಲೆ ಇದ್ದರೂ
ಮನಸು ಇಲ್ಲೆ ಉಳಿದಿದೆ..!