Monday, May 6, 2019

ಮಾತು, ಮೌನದ ಗೆರೆಯ ನಡುವೆ..

ಮಾತನಾಡುತ್ತ ಆಡುತ್ತ ,
ನೀನು ಹೂಂಗುಡುವ ಹೊತ್ತು
ಕೇಳುವ ನನಗೆ ಗೊತ್ತು:
ನುಗ್ಗಿ ನುರಿಯಾದ ಚಿತ್ತ
ಈಗಿಲ್ಲ ಇತ್ತ;
ಬೇಸರದಿ ಮುದುಡುತ್ತ,
ಒಳಗೊಳಗೆ ಸರಿಯುತ್ತ,
ಹರಿವು ಬಂದತ್ತ ಹರಿಯುತ್ತ,
ಮಾತು ಮರೆತಿರುವ ಹೊತ್ತು.
ಉಳಿದ ಮಾತು ನೆನಪಾದರೆ ನಾಳೆಯಿದೆಯೆನ್ನುತ್ತ
ಫೋನಿಡುವ ಮನದ ಹುತ್ತ-
-ವೊಡೆದರೆ ಶೋಕಭರಿತ ಕಾವ್ಯ ಉನ್ಮತ್ತ.

ಯಾರು ಜೀವವೇ ಯಾರು ಬರೆದವರು..?

ಮೊದಮೊದಲು ಬರೆದಾಗ ಅಂದುಕೊಂಡೆ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ
ಆಮೇಲಾಮೇಲೆ
  ಓದಿದವರ ಆಹಾ...ಚೆನಾಗಿದೆ ಕೇಳಲು ಬರೆಯುತಿರುವೆ
  ನಾನು ಮೆಚ್ಚುವವವರು ಮೆಚ್ಚಲು ಬರೆಯುತಿರುವೆ
  ಇಂದು ನನ್ನ ಲೇಖನಿ ಕಸಿಯುವವಳು ಎಂದಾದರೂ ಓದಲೆಂದು ಬರೆಯುತಿರುವೆ
  ಎಳೆಬೆನ್ನ ಮೇಲೆ ಸೆಳೆದ ನನ್ನದೇ ಕೈಯ ಹಕೀಕತ್ತು ನನಗೇ ಗೊತ್ತಾಗಲು ಬರೆಯುತಿರುವೆ
   ....
ಮತ್ತೆ ಈಗೀಗ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ;
ಆರುವುದೋ, ತೀರುವುದೋ..ಮತ್ತೆ ಹೊತ್ತಿ ಉರಿಯುವುದೋ
ತಿಳಿದವಳಲ್ಲ.
ದುಗುಡವಾರಲೆಂಬ ಹಂಬಲ ಮತ್ತು ಅಸಹಾಯಕತೆ
ಯಲಿ ಮುಳುಗಿ ಬರೆವ ಕ್ಷಣಗಳಲಿ ನಾನು ನಾನಲ್ಲ.
ಬರೆವಾಗ ಇರುವವಳು
ಕರೆದಾಗ ಬರದವಳು
ಬರೆದ ಮೇಲೆ ಇರುವವಳಲ್ಲ.