Saturday, November 4, 2017

ಪರ್ವತದಲ್ಲಿ ಪವಾಡ - ಸಂಯುಕ್ತಾ ಪುಲಿಗಲ್

ಇಂಗ್ಲಿಷ್ ಮೂಲದ ಉರುಗ್ವೆ ಲೇಖಕನ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್, ನ ಕನ್ನಡ ಅನುವಾದವನ್ನು ಗೆಳತಿ ಸಂಯುಕ್ತ ಪುಲಿಗಲ್ ಮಾಡಿದ್ದಾರೆ. ಪ್ರಪಂಚಕ್ಕೆಲ್ಲ ಹರಡಿರುವ ವಿಸ್ತಾರವಾದ ನೀಲಿ ಆಕಾಶವು, ಇಲ್ಲಿ ದೊಡ್ದ ಊರಿನ ಹಾದಿಗಳ ಬದಿಯಲ್ಲಿನ ಪುಟ್ಟ ಜಾಗದಲ್ಲಿ ನಿಂತ ಚಿಕ್ಕ ಹುಡುಗಿಯ ಪುಟಾಣಿ ಕಣ್ಣುಗಳಲ್ಲಿ ತುಂಬಿಕೊಳ್ಳುವ ಸಹಜ ಬೆರಗನ್ನು ನಾನು ಈ ಪುಸ್ತಕದ ಅನುವಾದ ಓದುವಾಗ ಅನುಭವಿಸಿದೆ. ವಿಸ್ತಾರ ಎಷ್ಟು ಇರಬಹುದು. ಹಿಡಿದಿಡಬಲ್ಲೆ ಎಂಬ ಆತ್ಮವಿಶ್ವಾಸ ಬೇಕು. ಒಂದೊಂದು ಇಂಚಿನಷ್ಟೆ ಇರಬಹುದಾದ ಭೌತಿಕ ಕಣ್ಣು ವಿಸ್ತಾರವನ್ನು ತುಂಬಿಕೊಳ್ಳುತ್ತ ತನ್ನನ್ನೇ ತಾನು ವಿಸ್ತರಿಸಿಕೊಳ್ಳುತ್ತದೆ. ಅದನ್ನು ಸಂಯುಕ್ತ ಸಾಧ್ಯವಾಗಿಸಿದ್ದಾರೆ.
" ಆಂಡೀಸ್ ಪರ್ವತದ ಎತ್ತರದ ಹಿಮಬಂಡೆಗಳ ನಡುವೆಯೆಲ್ಲೋ ತಪ್ಪಿಸಿಕೊಂಡಿದ್ದೇವೆ ಎಂಬುದು ತಿಳಿದಿತ್ತು. ಆದರೆ ನಮ್ಮನ್ನು ಸುತ್ತುವರೆದಿದ್ದ ಆ ಬೆಟ್ಟಗಳು ನಮ್ಮ ಸುತ್ತಲೂ ಎತ್ತರೆತ್ತರ್ದ ಶಿಖರಗಳಾಗಿ ನಿಂತಿದ್ದವು. ಅದರ ತುದಿಯನ್ನು ನೋಡಲು ನನ್ನ ತಲೆ ನನ್ನ ಕತ್ತಿನ ಹಿಂಭಾಗದ ತಳವನ್ನು ಮುಟ್ಟಬೇಕಿತ್ತು! ...
ಆ ಅಪೂರ್ವ ನೋಟವನ್ನು ನಾನು ನೋಡುತ್ತಿದ್ದಾಗ ಭ್ರಮಾಲೋಕದಂತೆ ಕಾಣುತ್ತಿದ್ದ ಆ ಸ್ಥಳದಲ್ಲಿ ನಾವಿದ್ದೇವೆ ಎಂಬ ಸತ್ಯವನ್ನು ಸುಳ್ಳೆಂದು ಭಾವಿಸಲು ಪ್ರಯತ್ನಿಸುತ್ತಿದ್ದೆ. ಬೆಟ್ಟಗಳು ಬೃಹತ್ತಾಗಿದ್ದು ಪರಿಶುದ್ಧತೆ ಮತ್ತು ಗಾಂಭೀರ್ಯತೆಯ ರೂಪ ತಾಳಿದ್ದವು. ಅವುಗಳ ನೋಟ ಮತ್ತು ಮೌನ ನಾನು ಜೀವಮಾನದಲ್ಲಿ ನೋಡಿದ ಯಾವುದೇ ವಿಷಯ, ವಸ್ತುವಿಗಿಂತ ಖಂಡಿತವಾಗಿ ಭಿನ್ನವಾಗಿತ್ತು. ನನಗೆ ಸೇರುವ ನನ್ನ ಪರಿಧಿಗೆ ಒಳಗೊಳ್ಳುವ ಯಾವ ಅಣುವೂ ಅಲ್ಲಿರಲಿಲ್ಲ...."


ಈ ವಾಕ್ಯಗಳು ಈ ಇಡೀ ಅನುಭವಕಥನಕ್ಕೆ ಹಿಡಿದ ಕಿರುಗನ್ನಡಿಯಾಗಿ ನಾನು ಭಾವಿಸುತ್ತೇನೆ. ತನ್ನ ಬಾಲ್ಯಕಾಲ ಅದರ ಮೂಲಕ ಕುಟುಂಬದ ಹಿನ್ನೆಲೆ, ಇತ್ಯಾದಿಗಳಿಗೆ ಸರಾಗವಾಗಿ ಹಿಮ್ಮುಖವಾಗಿ ಹರಿಯುವ ಲೇಖಕನ ನೆನಪು ತನ್ನ ಪ್ರಸ್ತುತ ಪರಿಸ್ಥಿತಿಯ ದಾರುಣತೆಯನ್ನು....- ಬರಿ ಆಟವಾಡುವ ಕಾಲವಷ್ಟೆ ಎಂದು ಮಜವಾಗಿದ್ದ ಆರೋಗ್ಯವಂತ ಸದೃಢ ಮತ್ತು ಜೀವನೋತ್ಸಾಹಿ ಆಟಗಾರರ ತಂಡವು ತನ್ನ ಆಟ ಆಡುವ ಮೊದಲೆ ಸೋತು ಅಸಹಾಯವಾಗಿ ನೆಲಕಚ್ಚಿದ ವಿಲಕ್ಷಣ ಪರಿಸ್ಥಿತಿಯಲ್ಲಿ ಮತ್ತೆ ಹುಮ್ಮಸದಿಂದ ಹಗುರು ಹೆಜ್ಜೆಯಲ್ಲಿ ಬದುಕಿನ ಬಯಲಲ್ಲಿ ಓಡುವ ಭರವಸೆಯೆಲ್ಲ ಮುರುಟಿ ಮಕಾಡೆ ಮಲಗಿದ ಹೊತ್ತಿನಲ್ಲಿ...- ಲೇಖಕ ನಾಂದೋ ಆ ಪರಿಸ್ಥಿತಿಯ ದಾರುಣತೆಯನ್ನು ತನ್ನ ನೆನಪುಗಳ ಮೂಲಕ ಎದುರಿಸುತ್ತಾನೆ. ಆ ನೆನಪುಗಳು ಮೂಡಿದ ಕ್ಷಣಗಳ ಮುಗ್ಧತೆ, ಜೀವನ್ಮುಖತೆ, ತಿಳುವಳಿಕೆ, ಭರವಸೆಗಳನ್ನೆ ಉಂಡು ಬದುಕುವ ಹೊಸದಾದ ಭೀಭತ್ಸ ಆಟದ ಪಟ್ಟುಗಳನ್ನ ಕಲಿಯುತ್ತಾನೆ.
ಈ ಪುಸ್ತಕದ ಕೆಲವು ಪುಟಗಳು ನಿಮ್ಮ ಓದಿಗೆ:

ಜೀವಂತಿಕೆ ಎಂಬುದು ಆ ಸ್ಥಳದಲ್ಲಿ ಅಸಾಧ್ಯವಾಗಿತ್ತು ಎಂಬ ಆತಂಕ ಮತ್ತು ಅಪಾಯಕಾರೀ ಎಚ್ಚರಿಕೆ ಆಳವಾಗಿ ನಾಟಿದ್ದ ಲೇಖಕ ನಾಂದೋ ಬಹುಶಃ ಇವತ್ತು/ಮುಂದೆ ಈ ಅನುಭವ ಕಥನವನ್ನು ಬರೆಯುವಾಗ ಮತ್ತೆ ಅದೇ ಕ್ಷಣಗಳನ್ನು ಮರುಬದುಕುವಾಗ ಕಣ್ಣು ಮುಚ್ಚಿದಾಗ ಕಂಡಿದ್ದು ಈ ಅಪಾಯದ ಸಾಧ್ಯತೆಗಳ ನಡುವೆ ನೆಟ್ಟಗೆ ಎದ್ದು ನಿಂತ ಆಂಡೀಸ್ ಪರ್ವತಶ್ರೇಣಿಯ ರುದ್ರಸೌಂದರ್ಯ. ಸುವಿಸ್ತಾರವಾದ ಖಾಲಿತನದ ಜೊತೆಜೊತೆಗೆ ಭೂಮಿಯೂ ಆಕಾಶವೂ ಸೇರಿನಿಂತ ಹಾಗಿನ ಮಿಲನದ ಸಾಧ್ಯತೆ ಮತ್ತು ಅಗಾಧತೆ. ಬಹುಶಃ ಲೇಖಕರ ಈ ಗ್ರಹಿಕೆ... ತಾನು ನಂಬಿದ ತಿಳಿದ ಮಾಡಬಹುದಾದ ಎಲ್ಲವೂ ನುಚ್ಚು ನೂರಾಗಿ ಬೀಳುತ್ತಿರುವಾಗಲೂ ಇನ್ನೊಂದೇನೋ ದಾರಿ ಇರಬಹುದು ಬದುಕಿಗೆ ಎಂಬ ಆಶಾಪೂರ್ಣ ನೋಟ, ಸೋಲುವ ಪಂದ್ಯದಲ್ಲೆ ಅತ್ಯುತ್ತಮವಾಗಿ ಆಡುವ ಆಟಗಾರನಂತೆ ಇದೇ ಇವರನ್ನು ಬದುಕಿಸಿಟ್ಟಿತೋ ಎನಿಸುತ್ತದೆ ಈ ಕಥನವನ್ನು ಓದಿದಾಗ.
ಬದುಕು ನಮಗೆ ಒಡ್ಡುವ ಎಲ್ಲಾ ಸವಾಲುಗಳಿಗೂ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ನಮ್ಮ ಬದುಕುಳಿಯುವಿಕೆ ಆಧರಿಸಿದೆ ಎಂಬ ಕರಾಳ ಸತ್ಯಕ್ಕೆ ಅತ್ಯಂತ ನೋವಿನ, ಹತಾಶೆಯ, ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ಮುಖಾಮುಖಿಯಾಗುವ ಸೂಕ್ಷ್ಮಗ್ರಾಹಿಯಾದ ನಾಂದೋ...ಈ ಅನೂಹ್ಯ ಬದುಕಿನ ಪಂದ್ಯದ ನಿಯಮಗಳನ್ನು ಬಂದಂತೆ ಸ್ವೀಕರಿಸುತ್ತ ಹೋಗಿ ಗೆದ್ದೇಬಿಡುವ ಪಂದ್ಯದ ಈ ಕಥನ ಓದುವವರನ್ನು ಮೆತ್ತಗಾಗಿಸುತ್ತದೆ.
ಸ್ವತಃ ಲೇಖಕ ಈ ಪುನರ್ಜನ್ಮವನ್ನು ಹೊಂದಿದ ನಂತರ ಅದರ ಬಗ್ಗೆ ಸಾಮಾನ್ಯವಾಗಿ ಬರುವ ಹಮ್ಮಿನಿಂದ ಒರಟಾಗಿ ದೊರಗಾಗಿ ಮಾರ್ದವರಹಿತವಾಗಿ ಉಳಿದುಬಿಡದೆ......ಬದುಕನ್ನು ಅತಿಹೆಚ್ಚಿನ ಜೀವಪ್ರೀತಿಯಿಂದ ಆಲಂಗಿಸಿಕೊಂಡ ರೀತಿಗೆ ಮನಸ್ಸು ಮಾರುಹೋಗುತ್ತದೆ. ಅವನು ಅಲ್ಲಿಂದ ಬದುಕಿದ್ದು ಒಂದು ಸಾಂಕೇತಿಕ ಪವಾಡವಾಗಿದ್ದರೆ, ಅವನೊಳಗಿನ ಆರ್ದ್ರತೆಯ ಸೆಲೆ ಜಿನುಗುತ್ತಲೇ ಇರುವುದು ಅನಾದಿಕಾಲದಿಂದಲೂ ಘಟಿಸಿಕೊಂಡೇ ಬಂದ ಮನುಷ್ಯನೊಳಗಿರುವ ಪವಾಡವಾಗಿ ಸಾಬೀತಾಗುತ್ತದೆ. ಆ ವಿಷಯದಲ್ಲಿ ಮೂಲ ಪುಸ್ತಕ ಮತ್ತು ಅನುವಾದ ಎರಡೂ ಸುಲಲಿತವಾಗಿ ಗೆದ್ದುಬಿಟ್ಟಿವೆ. ಓದುವವರ ಮನಸ್ಸನ್ನು ಮೆತ್ತಗಾಗಿಸುವ ಈ ಕಥನ ನೈಜ ನಿರೂಪಣೆಯಲ್ಲಿ, ಕಸಿವಿಸಿ ಮೂಡಿಸದೆ ನಿಮ್ಮನ್ನು ತನ್ನೊಳಗೆ ಸೇರಿಸಿಕೊಳ್ಳುವಲ್ಲಿ, ಮಿಡಿಸುವುದರಲ್ಲಿ ಯಶಸ್ವಿಯಾಗಿದೆ.
ಆಂಡೀಸ್ ಪರ್ವತದ ಹಿಮಹೊದ್ದ ಕಣಿವೆಗಳಲ್ಲಿ ಉರುಗ್ವೆಯ ರಗ್ಬಿ ಆಟಗಾರರ ತಂಡದ ವಿಮಾನವು ಅಪಘಾತಕ್ಕೀಡಾಗಿ ಹೋಳಾಗಿ ಬೀಳುತ್ತದೆ. ಯಶಸ್ವಿ ಆಟಗಾರರ ತಂಡ ತಮ್ಮ ಹತ್ತಿರದವರನ್ನು ಕಣ್ಣೆದುರೆ ಕಳೆದುಕೊಂಡು ಸಾವು, ಗಾಯ, ನೋವು, ಆಘಾತಗಳಲ್ಲಿ ತತ್ತರಿಸುತ್ತ ತಿಂಗಳುಗಟ್ಟಲೆ ಹೊರಪ್ರಪಂಚದ ಸಹಾಯವನ್ನು ಎದುರುನೋಡುತ್ತ ನಿರ್ಜನ ಮತ್ತು ದುರ್ಗಮ ಕಣಿವೆಯಲ್ಲಿ ಒದ್ದಾಡುತ್ತಿದೆ. ವಿಪರೀತ ಚಳಿ, ಹಸಿವು, ಬಾಯಾರಿಕೆಗಳಲ್ಲಿ ಬದುಕು ಉಳಿಸಿಕೊಳ್ಳಲು ಅತ್ಯಂತ ದಯನೀಯ ಸ್ಥಿತಿಯಲ್ಲಿ ಸತ್ತು ಹೋದ ತನ್ನವರನ್ನೆ ತಿಂದು ತನ್ನ ಸಾವನ್ನು ದೂರ ನೂಕುವ ದುರಂತ ಕಥನವು ಈ ಪುಸ್ತಕದ ಒಂದು ಆಯಾಮ ಮಾತ್ರ. ಆ ಹೆಪ್ಪುಗಟ್ಟಿಸುವ ಹಿಮವು ನಾಗರಿಕ ಸಂವೇದನೆಗಳನ್ನೆಲ್ಲ ಫ್ರೀಝ್ ಮಾಡುತ್ತಾ ಬದುಕಬೇಕು ಎಂಬ ಜೀವಿಸಹಜ ಆಕಾಂಕ್ಷೆಯೊಂದನ್ನ ಮಾತ್ರವೇ ಫೋಕಸ್ ಮಾಡಿದ ಹಾಗಿದೆ. ವಿಸ್ತಾರವಾದ ಜೀವತುಡಿತದ ಕಥನವು ಇಲ್ಲಿ ಗಟ್ಟಿ ನೆಲವನ್ನು ಸೀಳಿಕೊಂಡು ಹೊರಬರುವ ಸುಕೋಮಲ ಮೊಳಕೆಯನ್ನ ನೆನಪಿಸುವ ಹಾಗೆ ಚಿತ್ರಿತವಾಗಿದೆ.
ಬದುಕಿಗಾಗಿ ಅವರು ಇನ್ನಿಲ್ಲದಂತೆ ನಡೆಸುವ ಪ್ರಯತ್ನದ ಜೊತೆಜೊತೆಗೆ ಅದನ್ನು ಸಾಧ್ಯವಾಗಿಸಿದ ಹಲವಾರು ಒಂದಕ್ಕೊಂದು ಸಂಬಧವಿಲ್ಲದ ಹಾಗೆ ಕಾಣುವ ಆದರೆ ನಿಜಕ್ಕೂ ಆಳದಲ್ಲಿ ಒಂದನ್ನೊಂದು ಪ್ರಭಾವಿಸಿರುವ ಹಲವು ವಿಷಯಗಳ ಬಗ್ಗೆ ಈ ಪುಸ್ತಕದ ಮೂಲಕ ಲೇಖಕ ನಾಂದೊ ಬೆಳಕು ಚೆಲ್ಲುತ್ತಾರೆ. ಹೇಗೆ ರಗ್ಬೀ ಎಂಬ ಚೆಂಡಾಟದ ತಂಡ ಮತ್ತು ಕ್ರೀಡಾ ಮನೋಭಾವವು ಆ ದುರ್ಗಮ ಮನಸ್ಥಿತಿಯಲ್ಲಿ ಅವರನ್ನು ಮುನ್ನಡೆಸಿತು. ಸನ್ನಿವೇಶಗಳನ್ನು ಎದುರಿಸಲು, ಒಪ್ಪಿಕೊಳ್ಳಲು, ಬದಲಾಗಲು. ಕಲಿಯಲು, ಆ ಮೂಲಕ ಬದುಕಲು ಪ್ರೇರೇಪಿಸಿತು ಎಂಬುದನ್ನ ಸವಿವರವಾಗಿ ಆಪ್ತವಾಗಿ ಕಟ್ಟಿಕೊಡುತ್ತದೆ ಈ ಕಥನ. ಈ ನೆಲೆಯಲ್ಲಿ ಇದನ್ನು ಅನುಭಾವ ಕಥನ ಎಂದೂ ಕರೆಯಬಹುದೇನೋ. ಬಹುಶಃ ಈ ಮನೋಭಾವವೇ ಮುಂದೆ ಇದರಿಂದ ಹೊರಬಂದು ಬದುಕು ಕಟ್ಟಿಕೊಳ್ಳುವಾಗ ಒಂದು ಪರಿಪೂರ್ಣ ಅಥವಾ ಹಗುರಾದ ನೋಟವನ್ನು, ಯಾವ ಒಜ್ಜೆಗಳೂ ಇಲ್ಲದೆ ಸ್ವೀಕೃತಿಯ, ಒಪ್ಪಿಕೊಳ್ಳುವಿಕೆಯ ನಿಲುವನ್ನು ಲೇಖಕರಿಗೆ ಕೊಡುತ್ತದೆ. ಈ ನಿಲುವು, ಈ ವ್ಯಕ್ತಿತ್ವ ಇದು ಈ ಕಥನದುದ್ದಕ್ಕೂ ನಮ್ಮ ಅರಿವಿನ ಭಾಗವಾಗಿ ನಿಲ್ಲುತ್ತದೆ. ಧಾರಣ- ಭರಿಸುವುದು ಎಂಬುದರ ವಿಶ್ವರೂಪವನ್ನ ಈ ಪುಸ್ತಕ ಹಿಡಿದಿಟ್ಟಿದೆ ಎಂದನಿಸುತ್ತದೆ ನನಗೆ.
ಈ ಪುಸ್ತಕ ಓದಿ ಅದನ್ನ ಅನುಭವಿಸಿಯೇ ನಿಮ್ಮದಾಗಿಸಿಕೊಳ್ಳಬೇಕು. ನಿಮ್ಮ ನಿಮ್ಮ ಬದುಕಿನ ಮಸೂರದಲ್ಲಿ ಈ ಕಥನ ಹಾಯುವಾಗ ನಾವಿರುವ ರೆಫರೆನ್ಸ್ ಪಾಯಿಂಟಿನಿಂದ ಕಾಣಬಹುದಾದ ಕಾಮನಬಿಲ್ಲಿನ ಬಣ್ಣಗಳು ಮತ್ತು ಕಮಾನು ಅವರವರ ಓದಿನ ಖಾಸಗಿಕ್ಷಣಗಳಿಗೆ ಮಾತ್ರ ದಕ್ಕಬಹುದಾದದ್ದು ಎಂದು ನಮ್ರತೆಯಿಂದ ಹೇಳಬಯಸುತ್ತೇನೆ.
ಸೂಕ್ಷ್ಮವಾಗಿ ಬದುಕನ್ನು ಗ್ರಹಿಸುವ ನಮಗೆ ಅದನ್ನು ಸ್ಥೂಲವಾಗಿ ಗ್ರಹಿಸುವ ವಿಷಯದಲ್ಲಿ ಸ್ವಲ್ಪ ಸಮತೋಲ ತಪ್ಪುತ್ತದೆ. ಅನಿರೀಕ್ಷಿತ ಘಟನೆಗಳು ಸಂದರ್ಭಗಳು ನಮ್ಮ ಗ್ರಹಿಕೆಯನ್ನು ತಿದ್ದುವ ಸವಾಲುಗಳನ್ನು ಒಡ್ದುತ್ತವೆ. ನಮ್ಮ ಪರಿಧಿ ಇದೇ ಇಷ್ಟೆ ಎಂದುಕೊಳ್ಳದೆ ಅದನ್ನು ಮೀರುವ, ಕೊನೆಪಕ್ಷ ಮೀರಲು ಪ್ರಯತ್ನಿಸುವ ಒಪ್ಪಿಕೊಳ್ಳುವ ಮನೋಭಾವವು ಸ್ಥೂಲವಾದ ಸುವಿಸ್ತಾರವಾದ ಈ ಜಗತ್ತಿನ ಬ್ರಹ್ಮಾಂಡದಲ್ಲಿ ನಮ್ಮ ಅಣುತನವನ್ನೂ ಮತ್ತು ಹೇಗೆ ಈ ಅಣುವೇ ಬ್ರಹ್ಮಾಂಡದ ಮೂಲಧಾತು ಎಂಬುದನ್ನೂ ಮನದಟ್ಟು ಮಾಡಿಸುತ್ತದೆ. ಈ ಅಂಶವು ಈ ಪುಸ್ತಕದಲ್ಲಿ ಕಲ್ಪಿಸಲೂ ಅಸಾಧ್ಯವಾದ ಘಟನೆಗಳ ಮೂಲಕ ಅನಾವರಣಗೊಂಡಿದೆ.
ಮೂಲಲೇಖಕ ನಾಂದೋ ಮೊದಲು ಈ ದುರಂತಕ್ಕೀಡಾದಾಗ, ಎರಡನೆಯ ಸಲ ಬರೆದಾಗ ಅನುಭವಿಸಿದ ಈ ಅವಾಕ್ಕಾಗಿಸುವ ಕಥನ ಮತ್ತೆ ಸಂಯುಕ್ತ ಬರೆಯುವಾಗ ಸಮರ್ಥವಾಗಿ ಸಶಕ್ತವಾಗಿ ಬಂದಿದೆ. ಸಂಯುಕ್ತ ತನಗೆ ತೀವ್ರವಾಗಿ ತಟ್ಟಿದ ಈ ಕಥನವನ್ನು ಮೂಲದ ಆಶಯ, ಕಟ್ಟೋಣ, ನಿರೂಪಣೆ, ವಿಷಯ ವಿಸ್ತಾರ ಮತ್ತು ಆಳ ಎಲ್ಲಕ್ಕೂ ಬದ್ಧವಾಗಿಯೇ ನಮ್ಮ ಕನ್ನಡದ ಓದಿಗೆ ಒಗ್ಗಿಸಿದ್ದಾರೆ. ಇದೊಂದು ಅತ್ಯುತ್ತಮ ಪ್ರಯತ್ನ.ಲೇಖಕಿಯ ಮೊದಲ ಪ್ರಯತ್ನವಾಗಿಯೂ ಇದು ಅತ್ಯಂತ ಸಶಕ್ತ ಆಪ್ತ ಅನುವಾದ. ಮೂಲವನ್ನು ಓದಿಯೂ ಇದನ್ನೂ ಓದಲೇಬೇಕಿನ್ನಿಸುವಷ್ಟು ಸೊಗಸಾದ ಅನುವಾದ ಎಂದು ನನಗನ್ನಿಸಿರುವುದರಲ್ಲಿ ಉತ್ಪ್ರೇಕ್ಷೆಯಿಲ್ಲ - ಈ ಪುಸ್ತಕವನ್ನು ಓದಿದರೆ ಅದು ನಿಮಗೆ ಮನದಟ್ಟಾಗುತ್ತದೆ. ಈ ವರ್ಷದ ಒಂದು ಮಸ್ಟ್ ರೀಡ್ ಪಟ್ಟಿಯಲ್ಲಿ ಇರಬೇಕಾದ ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಛಂದ ಪ್ರಕಾಶನಕ್ಕೆ ಅಭಿನಂದನೆಗಳು. ನಮ್ಮ ಸಂಯುಕ್ತಾ ಪುಲಿಗಲ್ ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ತಕ್ಕದಾಗಿ ಬರುತ್ತಿರುವ ಈ ಮೊದ ಮೊದಲ ಪುಸ್ತಕ ಅವರ ಬರಹದ ಬದುಕಿನ ಮೊದಲ ಮೈಲಿಗಲ್ಲು. ಅವರೊಡನೆ ಇನ್ನೂ ದೂರದಾರಿಯಲ್ಲಿ ಓದೋದುತ್ತ ಹೋಗುವ ಖುಷಿ ನನ್ನದು ಮತ್ತು ಓದುಪ್ರೀತಿಯ ನಿಮ್ಮೆಲ್ಲರದೂ ಆಗಲಿ ಎಂದು ಹಾರೈಸುತ್ತೇನೆ. ಅನುವಾದಸಾಗರದ ಮೊದಲ ಜಲಯಾನವನ್ನ ಯಶಸ್ವಿಯಾಗಿ ಪೂರೈಸಿರುವ ಸಂಯುಕ್ತಾಗೆ ಅಭಿನಂದನೆಗಳು. ಹೊಸ ಹೊಸ ಮೇರೆಗಳನ್ನ ಹುಡುಕುವ ಈ ಹುಡುಕಾಟ ನಿರಂತರವಾಗಿರಲಿ ಅಕ್ಷರವಾಗಲಿ.



ಎಂಟನೆಯ ದಿನದ ಮಧ್ಯಾಹ್ನ ಸೂಜಿಯ ಮೇಲೆ ತೋಳು ಬಳಸಿ ಮಲಗಿದ್ದೆ. ಆಗ ಅವಳಲ್ಲಿ ಏನೋ ಬದಲಾವಣೆಯಾದ ಅನುಭವವಾಯಿತು. ಅವಳ ಮುಖದಿಂದ ನೋವಿನ ಛಾಯೆ ಮಾಯವಾಗಿತ್ತು. ದೇಹದ ಬಿಗಿ ಸಡಿಲವಾಗಿತ್ತು. ಅವಳ ಉಸಿರಾಟ ತೆಳುವಾಗಿ, ನಿಧಾನವಾಗಿತ್ತು. ನನ್ನ ತೋಳಬಂಧಿಯಿಂದ ಅವಳ ಜೀವ ಜಾರಿಹೋಗುತ್ತಿದ್ದಂತೆ ಭಾಸವಾಗುತ್ತಿತ್ತು. ಆದರೆ ಅದಕ್ಕಾಗಿ ನಾನು ಏನನ್ನೂ ಮಾಡದ ಅಸಹಾಯಕತೆಯಲ್ಲಿ ಇದ್ದೆ. ಕೊನೆಗೆ ಅವಳ ಉಸಿರಾಟ ಸಂಪೂರ್ಣ ನಿಂತಿತ್ತು, ಅವಳು ನಿಶ್ಚಲವಾದಳು.
“ಸೂಜಿ? ಓ ದೇವರೇ, ದಯವಿಟ್ಟು ನಿಲ್ಲು...ಸೂಜಿ! ನಾನು ಅರಚಿದೆ.
ನಾನು ಮೊಣಕಾಲೂರಿ ಕೂತು ಅವಳ ಬೆನ್ನನ್ನು ನೆಲಕ್ಕೆ ತಾಗಿಸಿ ಅವಳ ತುಟಿಯಲ್ಲಿ ತುಟಿಯೊತ್ತಿ ಗಾಳಿ ಊದಲು ಪ್ರಯತ್ನಿಸಿದೆ. ಅದನ್ನು ಹೇಗೆ ಮಾಡುವುದು ಎಂದೂ ನನಗೆ ಸರಿಯಾಗಿ ತಿಳಿದಿರಲಿಲ್ಲ. ಹೇಗಾದರೂ ಮಾಡಿ ಅವಳನ್ನು ಕಾಪಾಡುವ ಆತುರದಲ್ಲಿದ್ದೆ. “ಸೂಜಿ, ದಯವಿಟ್ಟು, ನನ್ನೊಬ್ಬನನ್ನೇ ಬಿಟ್ಟು ಹೋಗಬೇಡ ಎಂದು ಕೂಗಿದೆ. ನಾನು ನಿತ್ರಾಣನಾಗುವವರೆಗೂ ಅವಳ ಜೀವವನ್ನು ಹಿಡಿದಿಡಲುಯತ್ನಿಸಿದೆ. ನನ್ನೊಟ್ಟಿಗೆ ರಾಬರ್ಟೊ ಮತ್ತು ಕಾರ್ಲಿಟೊಸ್ ಪ್ರಯತ್ನಿಸಿದರು. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ಇತರರು ಮೌನವಾಗಿ ನನ್ನ ಸುತ್ತುವರೆದಿದ್ದರು
ರಾಬರ್ಟೊ ನನ್ನ ಬಳಿ ಬಂದು, “ಅವಳು ದೇಹ ತ್ಯಜಿಸಿದ್ದಾಳೆ ನ್ಯಾಂಡೊ ಎಂದು ನನ್ನ ಬೆನ್ನು ಸವರಿ, “ಈ ರಾತ್ರಿ ಅವಳೊಟ್ಟಿಗೆ ಇರು. ನಾಳೆ ಅವಳ ದೇಹವನ್ನು ಸಮಾಧಿ ಮಾಡೋಣ ಎಂದ. ನಾನು ನನ್ನ ತಂಗಿಯನ್ನು ತೋಳುಗಳಲ್ಲಿ ಬಂಧಿಸಿದೆ. ನಾನು ಆ ಕ್ಷಣದಲ್ಲಿ ನನ್ನ ತಂಗಿಗೆ ಯಾವ ನೋವೂ ಆಗದಂತೆ, ಗಟ್ಟಿಯಾಗಿ ಬಿಗಿದಪ್ಪಬಹುದಾಗಿತ್ತು. ಅವಳ ದೇಹವಿನ್ನೂ ಬೆಚ್ಚಗಿತ್ತು. ಅವಳ ಕೂದಲು ನನ್ನ ಕೆನ್ನೆಯ ಮೇಲೆ ಮೃದುವಾಗಿ ಸವರುತ್ತಿತ್ತು. ಆದರೆ, ನನ್ನ ಕೆನ್ನೆಯನ್ನು ಅವಳ ತುಟಿಗೆ ತಾಗಿಸಿದಾಗ ಅವಳ ಬೆಚ್ಚನೆಯ ಉಸಿರು ನನಗೆ ತಾಕಲಿಲ್ಲ. ನನ್ನ ಸೂಜಿ ಇನ್ನಿಲ್ಲವಾಗಿದ್ದಳು. ನಾನು ಅವಳ ದೇಹದ ಪರಿಮಳ, ಕೂದಲಿನ ಮೃದುತ್ವ, ಸೌಮ್ಯ ಶರೀರ ಎಲ್ಲವನ್ನೂ ನನ್ನ ನೆನಪಿನಲ್ಲಿ ತುಂಬಿಡಲು ವ್ರಯತ್ನಿಸಿದೆ. ನಾನು ಅವನ್ನೆಲ್ಲ ಕಳೆದುಕೊಳ್ಳುತ್ತಿದ್ದೇನೆ ಎಂದು ನೆನೆದು ದುಃಖ ಒತ್ತರಿಸಿ ಬರುತ್ತಿತ್ತು. ನನ್ನ ದೇಹ ಮನಸ್ಸೆಲ್ಲಾ ನೋವಿನಿಂದ ಚೀತ್ಕರಿಸಿತು. ದುಃಖನನ್ನನ್ನಾವರಿಸುತ್ತಿದ್ದಂತೆಯೇ, ಮತ್ತೊಮ್ಮೆ ಆ ಗಂಭೀರ ಧ್ವನಿ ನನ್ನ ಕಿವಿಯಲ್ಲಿ ಹೇಳಿತು
“ಅಳು ದೇಹದ ಉಪ್ಪನ್ನು ಕಡಿಮೆ ಮಾಡುತ್ತದೆ." 
ನಾನು ಇಡೀ ರಾತ್ರಿ ಅವಳೊಟ್ಟಿಗೆ ಎಚ್ಚರವಾಗಿಯೇ ಕಳೆದೆ. ನನ್ನ ಎದೆ ದುಃಖದಿಂದ ಭಾರವಾಗಿತ್ತು. ಆದರೆ ಅಳು, ಕಣ್ಣೀರು ಆ ಸಮಯದಲ್ಲಿ ನನಗೆ ದುಬಾರಿಯಾಗಿತ್ತು. ಮರುದಿನ ಮುಂಜಾನೆ ಸೂಜಿಗೆ ನೈಲಾನ್ ದಾರಗಳನ್ನು ಕಟ್ಟಿ ವಿಮಾನದ ಹೊರಗೆ ಎಳೆದೊಯ್ದರು. ಅವಳನ್ನು ಹಿಮದ ನೆಲದ ಮೇಲೆ ಎಳೆದೊಯ್ಯುವುದನ್ನು ನಾನು ನೋಡುತ್ತಿದ್ದೆ. ಆ ಒರಟಾದ, ಜರೆದಂತಹ ಎಳೆಯುವಿಕೆ ನನಗೆ ನೋಡಲು ಕಷ್ಟವಾಗುತ್ತಿತ್ತು. ಆದರೆ ಇತರರಿಗೆ ಅದು ಅಭ್ಯಾಸವಾಗಿಹೋಗಿತ್ತು. ಸತ್ತ ನಂತರ ದೇಹ ಹೆಚ್ಚು ಭಾರವಾಗಿ ಹೊತ್ತೊಯ್ಯಲು ಕಷ್ಟವಾಗಿ, ಆ ಹಿಮದಲ್ಲಿ ಇನ್ನೂ ಅಸಾಧ್ಯವಾಗಿ ತೋರುತ್ತಿತ್ತು. ಅದಕ್ಕೆ ಹಾಗೆ ಎಳೆದೊಯ್ಯುವುದು ಸುಲಭವಾಗುತ್ತಿತ್ತು. ಆದ್ದರಿಂದ ನಾನೂ ಅದನ್ನು ಅನಿವಾರ್ಯವೆಂದು ಒಪ್ಪಿದೆ.
ಉಳಿದ ಶರೀರಗಳ ಸಮಾಧಿಯಾಗಿದ್ದ, ವಿಮಾನದ ಎಡಭಾಗದತ್ತ ಸೂಜಿಯನ್ನು ಎಳೆದೊಯ್ದೆವು. ಹೆಪ್ಪುಗಟ್ಟಿದ ಕಳೇಬರಗಳು ಮಂಜಿನ ನಡುವೆ ನಿಖರವಾಗಿ ಕಂಡುಬರುತ್ತಿದ್ದವು. ಆ ದೇಹಗಳು ಕೆಲವೇ ಇಂಚುಗಳ ಹಿಮದ ಲೇಪನದಿಂದ ಆವೃತಗೊಂಡಿದ್ದವು. ಅಲ್ಲಿ ನೋಡುತ್ತಿದ್ದಂತೆ ಸುಲಭವಾಗಿ ನನಗೆ ನನ್ನ ತಾಯಿಯ ನೀಲಿ ಅಂಗಿ ಕಾಣಿಸಿತು. ಅವಳ ಪಕ್ಕದಲ್ಲೇ ಸೂಜಿಗಾಗಿ ಸಣ್ಣ ಹಳ್ಳವನ್ನು ತೋಡಿದೆ. ಸೂಜಿಯನ್ನು ಅಲ್ಲಿ ಮಲಗಿಸಿ, ಅವಳ ಕೂದಲು ಸವರಿದೆ. ನಂತರ ಅವಳ ದೇಹವನ್ನು ನಿಧಾನವಾಗಿ ಮಂಜಿನ ಮರಳಿನಿಂದ ಮುಚ್ಚಿದೆ. ಇಡೀ ದೇಹ ಹಿಮದಲ್ಲಿ ಮುಚ್ಚಿಹೋಗುವವರೆಗೂ ಮುಖವನ್ನು ತೆರೆದೇ ಇಟ್ಟಿದ್ದೆ. ಅವಳ ಮುಖ ಬೆಚ್ಚನೆಯ ಹೊದಿಕೆಯಡಿ ನೆಮ್ಮದಿಯ ನಿದ್ರೆಯಲ್ಲಿ ಜಾರಿದಂತೆ ಕಾಣುತ್ತಿತ್ತು. ನಾನೊಮ್ಮೆ ಕಡೇ ಬಾರಿಗೆ ಅವಳ ಮುಖವನ್ನು ನೋಡಿ ನನ್ನ ಮನಸಾರೆ ತುಂಬಿಕೊಂಡು ಅವಳನ್ನು ಸಂಪೂರ್ಣ ಹಿಮಾವೃತಗೊಳಿಸಿದೆ. ನನ್ನ ಪ್ರೀತಿಯ ಸೂಜಿ ನನ್ನಿಂದ ಶಾಶ್ವತವಾಗಿ ದೂರವಾಗಿದ್ದಳು.
ಕೆಲಸ ಮುಗಿದ ನಂತರ ಜೊತೆಗಾರರೆಲ್ಲರೂ ವಿಮಾನದತ್ತ ತೆರಳಿದರು. ನಾನು ಪರ್ವತದ ಎತ್ತರವನ್ನು ಗಮನಿಸಿದೆ. ಪಶ್ಚಿಮದತ್ತ ಬೆಟ್ಟದ ನಡುವಿನ ದಾರಿಯನ್ನು ಹುಡುಕುತ್ತಾ ನನ್ನ ಕಣ್ಣು ಸುತ್ತಾಡಿತು. ಕಣ್ಣೆತ್ತರಿಸಿದಷ್ಟು ಎತ್ತರಕ್ಕೆ ಬೆಟ್ಟದ ತುದಿ ಸಾಗುತ್ತಲೇ ಇದೆ. ನಾವು ವಿಮಾನಾಪಘಾತದಲ್ಲಿ ಆಳದಾಳದೊಳಕ್ಕೆ ಉರುಳಿ ಬಿದ್ದಿದ್ದೇವೆ. ಇದು ಹೇಗಾಗಲು ಸಾಧ್ಯ? ನಾವು ಚಿಲಿಯಲ್ಲಿ ಒಂದು ಪಂದ್ಯವಾಡಲು ಹೊರಟಿದ್ದೆವು! ಇದ್ದಕ್ಕಿದ್ದಂತೆ ನನ್ನೊಳಗೆಲ್ಲ ಒಂದು ರೀತಿಯ ಶೂನ್ಯವಾವರಿಸಿತು. ಖಾಲಿತನ ಕಾಡಿತು. ಅಲ್ಲಿವರೆಗಿನ ನನ್ನೆಲ್ಲ ಸಮಯ ತಂಗಿ ಸೂಜಿಯ ಆರೈಕೆಯಲ್ಲಿ ಕಳೆದಿದ್ದೆ. ನನ್ನ ಸ್ವಂತದ ನೋವು, ಹೆದರಿಕೆಗಳನ್ನು ಅವಳ ಆರೈಕೆಯ ಜವಾಬ್ದಾರಿ ಮುಚ್ಚಿಟ್ಟಿತ್ತು. ಆದರೆ ಈಗ ನಾನು ಸಂಪೂರ್ಣ ಏಕಾಂಗಿಯಾಗಿದ್ದೆ. ನನ್ನ ಸುತ್ತುವರೆದಿದ್ದ ಭಯಾನಕ ಸತ್ಯದಿಂದ ನನ್ನನ್ನು ದೂರವಾಗಿಸುವ ಇನ್ಯಾವ ಕಾರಣವೂ ನನ್ನ ಬಳಿ ಇರಲಿಲ್ಲ. ನನ್ನ ತಾಯಿ, ತಂಗಿ ಸತ್ತಿದ್ದರು. ಸ್ನೇಹಿತರೂ ಇಲ್ಲವಾಗಿದ್ದರು. ನಾವು ಗಾಯಗೊಂಡು, ಹೊಟ್ಟೆ ಹಸಿದು, ಚಳಿಗೆ ನಡುಗಿ ಮರಗಟ್ಟುತ್ತಿದ್ದೆವು. ಒಂದು ವಾರಕ್ಕಿಂತ ಹೆಚ್ಚು ದಿನಗಳು ಕಳೆದಿದ್ದರೂ ರಕ್ಷಣಾಪಡೆಯ ಯಾವ ಸುದ್ದಿಯೂಇರಲಿಲ್ಲ. ಆ ಪರ್ವತಗಳ ಭಯಾನಕ ಶಕ್ತಿ ನಮ್ಮನ್ನು ಆವರಿಸುತ್ತ ತನ್ನ ನಿರ್ದಾಕ್ಷಿಣ್ಯ, ನಿಷ್ಕರುಣ ರೌದ್ರತೆಯನ್ನು ನಮಗೆ ತೋರಿಸುತ್ತಿದೆ ಎಂಬ ಅನುಭವ. ಆ ಕ್ಷಣದಲ್ಲಿ ನಾನು ಸುತ್ತಲೂ ಗಮನಿಸಿ, ಮನೆಯಿಂದ ಎಷ್ಟು ದೂರ ಗಮಿಸಿ ಈ ತಾಣದಲ್ಲಿ ಅನಾಥನಾಗಿದ್ದೆ ಎಂಬ ಕಲ್ಪನೆಯಿಂದ, ಹತಾಶೆಯಿಂದ ಕುಸಿದುಬಿದ್ದೆ. ಮೊಟ್ಟಮೊದಲ ಬಾರಿಗೆ ನಾನಿನ್ನು ಉಳಿಯಲಾರೆ ಎನಿಸಿತ್ತು.
ಇಷ್ಟಕ್ಕೂ ನಾನೀಗಾಗಲೆ ಸತ್ತಿದ್ದೆ. ನನ್ನ ಬದುಕಿನ ಸತ್ವವನ್ನೆಲ್ಲ ನನ್ನಿಂದ ಕಸಿದುಕೊಂಡಾಗಿತ್ತು. ನಾನು ಕನಸು ಕಂಡ ಭವಿಷ್ಯ ನನ್ನದಾಗಿ ಉಳಿದಿರಲಿಲ್ಲ. ನಾನು ಮದುವೆಯಾಗಬಹುದಾದ ಹೆಣ್ಣಿಗೆ ನಾನು ಯಾರೆಂದು ತಿಳಿಯುವುದೂ ಇಲ್ಲ. ನನಗೆ ಹುಟ್ಟಬಹುದಾದ ಮಕ್ಕಳೂ ಹುಟ್ಟಲಾರರು. ನಾನು ಇನ್ನೆಂದಿಗೂ ನನ್ನ ಅಜ್ಜಿಯ ಪ್ರೀತಿಯ ನೋಟವನ್ನಾಗಲಿ, ಅಕ್ಕ ಗ್ರೆಸಿಲ್ಲಾಳ ಆತ್ಮೀಯ ಅಪ್ಪುಗೆಯನ್ನಾಗಲಿ ಅನುಭವಿಸಲಾರೆ. ನನ್ನ ತಂದೆಯ ಬಳಿಗೆ ಇನ್ನೆಂದಿಗೂ ಮರಳಲಾರೆ!
ಈ ಗಾಢ ಆಲೋಚನೆಗಳ ನಡುವೆಯೇ ನನ್ನ ಮನದಲ್ಲಿ ತಂದೆಯ ಚಿತ್ರಣ ಮೂಡಿಬಂತು. ಅವರು ಅನುಭವಿಸುತ್ತಿರಬಹುದಾದ ಏಕಾಂಗಿತನ ನನ್ನನ್ನು ಘಾಸಿಗೊಳಿಸಿತು. ಆ ಕ್ಷಣವೇ ಅವರ ಬಳಿ ಓಡಿ ಹೋಗಬೇಕೆಂಬ ವಿಚಿತ್ರ ಸೆಳತಕ್ಕೆ ಒಳಗಾದೆ. ಆದರೆ, ನನ್ನೆಲ್ಲ ನಿಶ್ಶಕ್ತಿ, ಅಸಹಾಯಕತೆ ಹುಚ್ಚನನ್ನಾಗಿಸುತ್ತಿದ್ದವು. ಆಗ, ಆ ಕ್ಷಣ, ನನ್ನ ತಂದೆ ಅರ್ಜೆಂಟಿನಾ ನದಿಯ ದೋಣಿಯಲ್ಲಿ ಸೋಲುತ್ತಾ ಸೋಲುತ್ತಾ ಗೆದ್ದ ಚಿತ್ರಣ ಕಣ್ಣ ಮುಂದೆ ಬಂತು. ಅವರ ಮಾತುಗಳು ನನಗೆ ನೆನಪಾದವು: “ನಾನು ಸೋಲೊಪ್ಪುವುದಿಲ್ಲ ಎಂದು ನಿರ್ಧರಿಸಿದೆ. ನಾನು ಇನ್ನೂ ಸ್ವಲ್ಪ ಕ ಷ್ಟಪಡುತ್ತೇನೆ ಎಂದು ನಿರ್ಧರಿಸಿದೆ.
ಅದು ನನ್ನಿಷ್ಟದ ಕಥೆಯಾಗಿತ್ತು. ಆದರೆ ಆ ಕ್ಷಣ ನನಗೆ ಅದು ಕಥೆಗಿಂತ ಮಿಗಿಲಾದ್ದು ಎಂಬ ಅರಿವಾಯಿತು. ಅದು ನನ್ನ ತಂದೆ ನನಗೆ ಬಳುವಳಿಯಾಗಿ ಕೊಟ್ಟ ಧೈರ್ಯ ಮತ್ತು ವಿವೇಕದ ಸಂಕೇತವಾಗಿತ್ತು. ಒಂದು ಕ್ಷಣ ನನ್ನಲ್ಲೇ ಅವರಿರುವ ಅನುಭವವಾಯಿತು. ಅದರ ನಂತರ ಒಂದು ತೀವ್ರ ನಿಶ್ಶಬ್ದ ನನ್ನೊಳಸುಳಿದಿತ್ತು.
ಪಶ್ಚಿಮದ ಬೆಟ್ಟತಪ್ಪಲಿನತ್ತ ನನ್ನ ಕಣ್ಣು ಹಾಯಿಸಿದೆ. ಅದರ ಉದ್ದಕ್ಕೂ ನನ್ನನ್ನು ನನ್ನ ಮನೆ ತಲುಪಿಸುವ ದಾರಿಯನ್ನು ಕಣ್ಣಲ್ಲೇ ಹೆಣೆದೆ. ಆ ದಾರಿ ನನ್ನ ತಂದೆಯ ಪ್ರೀತಿ ತುಂಬಿದ ಜೀವಧಾರೆಯಂತೆ ಭಾಸವಾಯಿತು. ಪಶ್ಚಿಮದತ್ತ ನೋಡುತ್ತಲೇ ಮೌನವಾಗಿನನ್ನ ತಂದೆಗೆ ಒಂದು ವಾಗ್ದಾನವಿತ್ತೆ. “ನಾನು ಕಷ್ಟಪಡುತ್ತೇನೆ, ಹೋರಾಡುತ್ತೇನೆ. ಮನೆಗೆ ಬರುತ್ತೇನೆ. ನಮ್ಮಿಬ್ಬರ ನಡುವಿನ ಜೀವತಂತುವನ್ನು ಈ ರೀತಿ ಮುರಿದು ಬೀಳಲು ನಾನು ಬಿಡುವುದಿಲ್ಲ. ನಿನಗಿದೋ ನನ್ನ ವಾಗ್ದಾನ. ನಾನು ಈ ಬೆಟ್ಟತಪ್ಪಲಿನಲ್ಲಿ ಸಾಯುವುದಿಲ್ಲ! ಇಲ್ಲಿ ಸಾಯುವುದಿಲ್ಲ!
ಎಂದಿನಂತೆ ಮಾಂಟೆವಿಡಿಯೊನಲ್ಲಿ ಸಾಧಾರಣ ಬದುಕು ಜೀವಿಸುತ್ತಿದ್ದನನಗೆ ಆ ಸಮಯದಲ್ಲಿ ಸೂಜಿ ನನ್ನಿಂದ ದೂರಾಗಿದ್ದಿದ್ದರೆ ಬಹುಶಃ ತಿಂಗಳಾನುಗಟ್ಟಲೆ ಆ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸಂದರ್ಭ ಹಾಗಿರಲಿಲ್ಲ. ಇಲ್ಲಿನ ಯಾವುದೇ ನಿಷ್ಕರುಣ ರಿಸರ ನನಗೆ ದುಃಖದಲ್ಲಿ ಮುಳುಗಿ ನೋವಿನಲ್ಲಿ ಉನ್ಮತ್ತನಾಗುವಷ್ಟು ಸ್ವಾತಂತ್ರ್ಯವನ್ನು ಕೊಟ್ಟಿರಲಿಲ್ಲ. ಮತ್ತೊಮ್ಮೆ ನನ್ನೊಳಗಣ ಆ ನಿರ್ದಾಕ್ಷಿಣ್ಯ,ತಣ್ಣನೆಯ ಧ್ವನಿ ನನ್ನೆಲ್ಲ ಮಾನಸಿಕ ಖಿನ್ನತೆಗಳನ್ನು ಮೀರಿ ಹೊರಜಿಗಿದುನನಗೆ ಕೇಳಿಸಿತು. ಮುಂದಿನದನ್ನು ಆಲೋಚಿಸು. ನೀನು ಮುಂzಬದಲಿಸಬಲ್ಲ ಕ್ಷಣಗಳಿಗಾಗಿ ನಿನ್ನ ಶಕ್ತಿಯನ್ನು ಉಳಿಸಿಕೊ. ಹಿಂದಿನದನ್ನುನೆನೆಸಿಕೊಂಡು ಕೊರಗುತ್ತಿದ್ದರೆ ನೀನು ಸಾಯಿತ್ತೀಯೆ. ನನ್ನ ದುಃಖದ ಮಡುವನ್ನು ಅಷ್ಟು ಸುಲಭವಾಗಿ ಇಲ್ಲವಾಗಿಸಲು ನನಗೆ ಸಾಧ್ಯವಾಗಲಿಲ್ಲ. ಆ ಸ್ಥಳದಲ್ಲಿ ಅಂದಿನವರೆಗೂ ನನ್ನ ಜೊತೆಗಿದ್ದ ಸೂಜಿಯ ಇಲ್ಲದಿರುವಿಕೆನನ್ನನ್ನು ಕಾಡಿತು. ಅವಳಿಗಾಗಿನ ನನ್ನ ದುಃಖವೇ ಈಗ ನನಗೂ ಅವಳಿಗೂ ಇದ್ದ ಸಂಬಂಧವಾಗಿ ಉಳಿದುಬಿಟ್ಟಿತು. ಒಂದು ಮೌನದ ಕಣ್ಣೀರು ಬಿಟ್ಟರೆ ನನಗೆ ಮತ್ತೇನೂ ತೋಚಲಿಲ್ಲ. ಮೈ ಕೊರೆಯುವ ಚಳಿಯನ್ನು ಮೀರಲು ಯತ್ನಿಸುತ್ತ ದೀರ್ಘವಾದ ಆ ರಾತ್ರಿ ಕಳೆಯತೊಡಗಿದೆ. ನನ್ನೊಳಗಿನ ಭಾವುಕತೆ ನಿಧಾನವಾಗಿ ಬತ್ತತೊಡಗಿತ್ತು. ಇರುಳು ಕಳೆದು ನಿದ್ದೆಯಿಂದ ಎದ್ದಾಗ ದುಃಸ್ವಪ್ನದ ತೀವ್ರತೆ ಕಳೆವಂತೆನನ್ನೊಳಗೇ ಕಾಡುತ್ತಿದ್ದ ತಂಗಿಯ ಸಾವಿನ ದುಃಖ ತನ್ನ ತೀವ್ರತೆ ಕಳೆದುಕೊಳ್ಳತೊಡಗಿತು. ಬೆಳಗಾಗುವಷ್ಟರಲ್ಲಿ ನಾನು ಖಾಲಿತನವನ್ನು ಅನುಭವಿಸಿದ್ದೆ. ನನ್ನ ಕಾಡುವ ಮನಸ್ಸಿನಿಂದ ಸೂಜಿ ಹೊರಬಂದುನನ್ನ ತಾಯಿ ಮತ್ತು ಪಂಚಿಟೋರ ಜೊತೆ ಸೇರಿಹೋಗಿದ್ದಳು. ಈಗ ಎಲ್ಲರೂ ನನ್ನ ಭೂತದಲ್ಲಿ ಲೀನರಾಗಿದ್ದರು. ಅಷ್ಟು ಬೇಗ ನನ್ನಿಂದ ದೂರವಾಗಿ ಹೋಗಿದ್ದರು. ಪರ್ವತ ಶ್ರೇಣಿಗಳು ನನ್ನನ್ನು ಬದಲಾಗುವಂತೆ ಬಲವಂತ ಮಾಡುತ್ತಿದ್ದವು. ಹೊಸ ಸತ್ಯಗಳಿಗೆ ನಾನು ತೆರೆದುಕೊಂಡುಹೋದಷ್ಟೂ ನನ್ನ ಮನಸ್ಸು ಹಗುರ ಮತ್ತು ನಿರ್ದಾಕ್ಷಿಣ್ಯವಾಗುತ್ತಿತ್ತು. ನನ್ನ ಮುಂದಿನ ಜೀವನಒಂದು ಪ್ರಾಣಿ ತನ್ನುಳಿವಿಗಾಗಿ ಹೋರಾಡುವಷ್ಟು ನೇರವಾಗಿ ಕಾಣುತ್ತಿತ್ತು. ಸೋಲು-ಗೆಲುವಿನ ಒಂದು ಸರಳ ಪಂದ್ಯಸಾವು ಅಥವಾ ಬದುಕು. ಕಷ್ಟ ಮತ್ತು ಅವಕಾಶ! ಮನಸ್ಸಿನ ಸಂಕೀರ್ಣ ಭಾವನೆಗಳನ್ನು ಮೀರಿದ ಮನುಷ್ಯನ ಸರಳ ಸ್ವಭಾವಗಳು ಮೇಲೇರಲಾರಂಭಿಸಿದ್ದವು. ನನ್ನ ಬದುಕಿನ ಎಲ್ಲ ಅಸ್ತಿತ್ವಗಳು ಎರಡೇ ಸೂತ್ರಗಳ ಸುತ್ತ ಸುತ್ತುತ್ತಿದ್ದವು. ನಾನು ಸಾಯುತ್ತಿದ್ದೇನೆ ಎಂಬ ಹೆದರಿಕೆ ಮತ್ತು ಹೇಗಾದರೂ ಮಾಡಿ ನನ್ನ ತಂದೆಯೊಡನೆ ಇರಬೇಕು ಎಂಬ ಹಂಬಲ.....

Friday, November 3, 2017

ನಂಬಿಕೆ

ನಂಬಿಕೆ
ಎಂಬ ಎರಡು ಅಲಗಿನ ಕತ್ತಿ
-ಯ ಮಜಾ ಅಂದರೆ
ನಂಬಿದರೂ ನಂಬದಿದ್ದರೂ
ಮೆದುವಾದ ಮನಸು ಕೆತ್ತಿ
-ದ ಮರದ ಹಾಗೆ
ಗಾಯವುಳಿಯುವುದು
ಮರ ಬೆಳೆಯುತ್ತಲೇ ಇರುವುದು.

ರೆಂಬೆರೆಂಬೆಗೆ ಚಾಚಿದ ಹಸಿರು ಮೇಲುದ ,
ಗೊಂಚಲು ಗೊಂಚಲು ಹೂ,
ಕಟ್ಟಿದ ಕಾಯಿ,
ಮಾಗುವ ಹಣ್ಣು,
ದೊರಗು ದೊರಗು ಮೈಯೊಳಗೆ
ಉಜ್ಜಿ ಹದ ಮಾಡಲು
ಪಾತ್ರಕ್ಕೆ ತಕ್ಕ ಹಸನಾದ ಮರಮುಟ್ಟು.
ಹಸಿರೆಲೆ ಹಳದಿಯಾಗಿ
ನೆಲದೆಡೆಗೆ ಪಯಣ
ನೆಲದೊಳಗಣ ಬೇರು
ಕಾಂಡದಾಚೆಗೆ ನೀಕಿದರು
ನಿಲುಕದ ಗಗನ.

ನಂಬಿಕೆ ಎಂಬ ಎರಡು ಅಲಗಿನ ಕತ್ತಿ
-ಯ ಮಜಾ ಎಂದರೆ
ಬಟ್ಟೆ ಸುತ್ತಿ ಮುಚ್ಚಿಟ್ಟರೆ
ಮುಟ್ಟದೆ ಸವರದೆ ದೂರವಿದ್ದರೆ
ನಂಬುವುದು ನಂಬದಿರುವುದು ಎಂಬ ವ್ಯತ್ಯಾಸವೂ ಬೇಡ.

ಸ್ನೇಹ ನಿಜಕ್ಕೂ ಇದೆಲ್ಲವನ್ನು ಮೀರಿದ್ದು
ಅದಕ್ಕೆ ಕತ್ತಿವರಸೆ ಆಗಿ ಬರುವುದಿಲ್ಲ.

Thursday, November 2, 2017

ಅತಂತ್ರ ಜೂಡ್ -

ಛಾಯಾ ಭಗವತಿ ( ಮೂಲ ಇಂಗ್ಲಿಷ್ - ಜೂಡ್ ದಿ ಅಬ್ಸ್ಕ್ಯೂರ್ - ಥಾಮಸ್ ಹಾರ್ಡಿ) 

ಒಂದು ವಿಶಾಲ ಹುಲ್ಲುಗಾವಲು ಅದರಾಚೆಗೆ ಬೆಟ್ಟಸಾಲು, ಬಳಸಿ ಹರಿಯುವ ಹೊಳೆ, ಕತ್ತು ಮೇಲೆತ್ತಿದರೆ ನೀಲಿ ಆಕಾಶ... ದೂರದಲ್ಲಿ ಕುರಿಗಾಹಿಗಳ ಮಂದೆ, ರಾಟೆಯಿಂದ ನೀರು ಸುರಿಯುತ್ತಿದೆ. ಗಾಳಿಯಂತ್ರದ ಚಿತ್ತಾರವಿದೆ, ಈಗಷ್ಟೆ ಬಿಸಿಲು ಬಿದ್ದು ಓಡಾಡುವ ಜನ ಮೈಯುದ್ದ ಕೋಟು ತೊಟ್ಟು ಮೊಣಕಾಲುದ್ದದ ಶೂಸು ತೊಟ್ಟಿರುವರು. ಇಲ್ಲೊಂದು ಕುದುರೆ ಗಾಡಿಯ ಕ್ಯಾರೇಜು ಕೂಡ. ಚರ್ಚಿನ ಗಂಟೆ ರಿಂಗಣಿಸುತ್ತಿದೆ. ಇದು ವಿಕ್ಟೋರಿಯನ್ ಕಾಲದ ಇಂಗ್ಲೆಂಡಿನ ಹಳ್ಳಿಗಾಡಿನ ಚಿತ್ರಣ. ವಿಶಾಲ ವಿಶ್ವದ ಸಮೃದ್ಧ ಭೂತಾಣದಲ್ಲಿ ಬಡತನದ ಬಾಲ್ಯ, ಅಚ್ಚರಿಗಳ ಹೊಸತನ, ಇಂಡಸ್ಟ್ರಿಯಲ್ ಮತ್ತು ಮಾರುಕಟ್ಟೆ ಇಂಗ್ಲೆಂಡಿನಿಂದ ದೂರವಾದ ಹಳ್ಳಿಗಾಡಿನ ಶ್ರಮಜೀವಿ ಸಮಾಜ, ಮಕ್ಕಳು, ದೊಡ್ಡವರು, ಈಗಷ್ಟೆ ಬೇಯಿಸುತ್ತಿರುವ ಬ್ರೆಡ್ಡಿನ ಹಬೆ, ದನಗಾಹಿಗಳ ಅಡಿಗೆಮನೆಯಲ್ಲಿ ಕಾಯುತ್ತಿರುವ ಹಾಲು, ತೆಗೆದಿಡುತ್ತಿರುವ ಬೆಣ್ಣೆ, ಹಾಲು ಕರೆಯುವ, ಹಸು ಮೇಯಿಸುವ ಜನರ ತಿರುಗಾಟ, ಗುಂಪು ಗುಂಪಲ್ಲಿ ಸೆಳೆಯುವ ಒಬ್ಬಳೇ ತಾಜಾ ತರುಣಿ,  ಅಲಕ್ಷದಲ್ಲಿ ಆದರೆ ಸುಲಕ್ಷಣವಾಗಿ ಕಣ್ಸೆಳೆಯುವ ಆ ಅವನು... ಎಲ್ಲ ಚಿತ್ರಣಗಳೂ ಕಣ್ ಕಟ್ಟುವಂತೆ ಇರುತ್ತವೆ. ಪರಿಸ್ಥಿತಿಯ ಒತ್ತಡದಲ್ಲಿ ಸಹಜ ಕಾಮನೆಗಳು ಅರಳುವ, ಕೆರಳುವ, ಬೇಯುವ, ನೋಯುವ ಮತ್ತು ಸಾಯುವ ಬಗೆ ಬಗೆಯನ್ನೂ, ಅವಕ್ಕೆ ಪೂರಕ ಮತ್ತು ಮಾರಕವಾಗುವ ಸಾಮಾಜಿಕ, ಪ್ರಾಕೃತಿಕ, ಧಾರ್ಮಿಕ, ಮತ್ತು ವೈಚಾರಿಕ ಹಿನ್ನೆಲೆಗಳ ಮಹಾನಾಟಕ ಈ ಕ್ಯಾನ್ವಾಸಿನಲ್ಲಿ ಮೂಡುತ್ತ ಹೋಗುವ ಬಗೆಯನ್ನು ಓದಿಯೇ ಅನುಭವಿಸಬೇಕು. ಇದು ಆಂಗ್ಲ ಲೇಖಕ ಥಾಮಸ್ ಹಾರ್ಡಿಯ ಕಾದಂಬರೀ ಲೋಕ. ದುರಂತ ಕಥಾನಕಗಳ ಸರದಾರ ಹಾರ್ಡಿಯ ಒಂದು ಪುಸ್ತಕ ಓದಿದರೆ ಅದರ ಆವರಿಸುವಿಕೆಯಿಂದ ಹೊರಬರಲು ತುಂಬ ಕಾಲ ಬೇಕು. ದುರಂತಗಳನ್ನು ಓದುವುದು ಸಂಕಟದ ಅನುಭವ. ಆದರೂ ಹಾರ್ಡಿಯ ಕಾದಂಬರಿಗಳಲ್ಲಿ ಆ ಪಾತ್ರಗಳು ತಾವಾಗಿಯೇ ದುರಂತದ ಕಣಿವೆ ಜಾರುವಾಗ, ಸುತ್ತಲಿದ್ದವರು ನೂಕುವಾಗ, ಇನ್ನು ಹಲವರು ಮೇಲೆಳೆಯುವಾಗ, ಅಯ್ಯೋ ಹೀಗಾಯಿತಲ್ಲ ಅನ್ನಿಸುವಾಗ ಇದೆಲ್ಲವನ್ನು ಮೀರಿದ ಒಂದು ಪ್ರಾಕೃತಿಕ ಸಮಗ್ರತೆಯಲ್ಲಿ ಇವೆಲ್ಲ ಒಂದು ಹುಲ್ಲಿನ ಬಾಗು ಬಳುಕು ಇರಬಹುದೆ..ಎಂಬ ನೋಟವನ್ನು ನಮಗೆ ಕಾಣಿಸುವ ಹಾಗಿನ ಚಿತ್ರಣಗಳು ಇವನ್ನು ಕಾದಂಬರಿಯ ನೆಲೆಯಿಂದ ಇನ್ನೆಲ್ಲಿಗೋ ಎತ್ತುತ್ತವೆ. ಗದ್ಯಕಾವ್ಯದ ಚೆಲುವು ಉಣ್ಣಿಸುತ್ತವೆ.
ಒಂದು ದಿನ ಗೆಳತಿ ಛಾಯಾ ತಾನು ಜೂಡ್ - ದಿ. ಅಬ್ಸ್ ಕ್ಯೂರ್ ಎಂಬ ಹಾರ್ಡಿಯ ಮಹಾಕಾದಂಬರಿಯ ಸಂಗ್ರಹಾನುವಾದ ಮಾಡಿರುವುದಾಗಿ ತಿಳಿಸಿದಾಗ ನಾನು ಮಾತುಮರೆತೆ. ಸ್ವಾಭಾವಿಕವಾಗಿ ಕನಸುಗಾರನಾದ ಹುಡುಗನೊಬ್ಬ ಉನ್ನತ ಬದುಕಿನ ಕನಸು ಕಾಣುತ್ತ, ತನ್ನ ಸುತ್ತಲಿನ ಪರಿಸ್ಥಿತಿ ಮತ್ತು ಒತ್ತಡಕ್ಕೆ ಮಣಿಯುತ್ತ, ನಂಬಿಕೆ ಅಪನಂಬಿಕೆಗಳ ಮಧ್ಯದ ತೂಗುಸೇತುವೆಯಲ್ಲಿ ತುಯ್ಯುತ್ತ, ಬದುಕಿನ ಚೆಲುವಿಗೆ, ಮೋಸಕ್ಕೆ ಮತ್ತು ದಾರುಣತೆಗೆ ತನ್ನನ್ನೇ ತಾನು ಕೊಟ್ಟುಕೊಳ್ಳುವ ಕಥೆಯಲ್ಲಿ ಹಾರ್ಡಿ ಆ ಕಾಲದ ಹಳ್ಳಿ ಇಂಗ್ಲೆಂಡಿನಲ್ಲಿದ್ದ ಸಾಮಾಜಿಕ ಪರಿಸರಕ್ಕೆ ಕನ್ನಡಿ ಹಿಡಿದಿದ್ದಾನೆ. ಶಿಕ್ಷಣ, ವೃತ್ತಿ, ಗಳಿಕೆ, ಸ್ಥಾನಮಾನ, ಧಾರ್ಮಿಕತೆ, ಮತ್ತು ಕುಟುಂಬ ಜೀವನ, ಮತ್ತು ಪ್ರೇಮ ಇವುಗಳ ವಿವಿಧ ರೂಪುಗಳನ್ನು ಈ ಹಿನ್ನೆಲೆಯಲ್ಲಿ ಕುಶಲ ಶಿಲ್ಪಿಯ ಹಾಗೆ ಕಂಡರಿಸಿದ್ದಾನೆ. ಸ್ವತಃ ಶಿಲ್ಪಿಯಾದ ನಾಯಕ ತನ್ನ ಜೀವನಶಿಲ್ಪವನ್ನೇ ಕಂಡರಿಸಲಾಗದ ವಿಪರೀತ ಪ್ರತಿಮೆ ಮನಸ್ಸನ್ನು ನಲುಗಿಸುತ್ತದೆ. ಎಂದೋ ಯಾವ ಕಾಲದಲ್ಲೋ ನಡೆದ ಕಥೆ ಈಗ್ಯಾಕೆ ಎನ್ನಲು ಬರದ ಕ್ಲಾಸಿಕ್ ಕಾದಂಬರಿಗಳ ಸಾಲಿನಲ್ಲಿರುವ ಇದು, ಇದರಲ್ಲಿ ಬರುವ ದ್ವಂದ್ವಗಳು ಇವತ್ತಿಗೂ ಅವತ್ತಿಗಿಂತ ಹೆಚ್ಚು ಪ್ರಸ್ತುತವಾಗಿವೆ ಎಂದು ನನ್ನ ಅನಿಸಿಕೆ. ಈ ಕಾದಂಬರಿಯ ಸಂಗ್ರಹಾನುವಾದವನ್ನು ಛಾಯಾ ಮಾಡಿದ್ದಾರೆ. ದೊಡ್ಡ ಕಾದಂಬರಿಯನ್ನು ಸಂಗ್ರಹಗೊಳಿಸುವ ಅನುವಾದದಲ್ಲಿರುವ ಮಿತಿಯ ನಡುವೆಯೂ ಈ ಅನುವಾದ ಉತ್ತಮವಾಗಿ ಬಂದಿದೆ. ಹಾರ್ಡಿಯ ಮೂಲ ಕಾದಂಬರಿಯನ್ನು ಓದುವಂತೆ ಪ್ರೇರೇಪಿಸುವುದರಲ್ಲಿ ಈ ಅನುವಾದ ಮೊದಲ ಸಮರ್ಥ ಹೆಜ್ಜೆ. ಅಷ್ಟು ದೊಡ್ಡ (೪೦೦ ಪುಟಗಳ) ಕಾದಂಬರಿಯನ್ನು ಸಂಗ್ರಹಾನುವಾದ ಮಾಡಿದರೂ ಎಲ್ಲಿಯೂ ಓದಲು ಅಡಚಣೆಯಾಗುವುದಿಲ್ಲ. ಒಂದು ಅಧ್ಯಾಯದಿಂದ ಇನ್ನೊಂದಕ್ಕೆ ಇರುವ ಹರಿವು ಸರಾಗವಾಗಿದೆ. ಹಿರಿಯರಾದ ಕೆ.ವಿ.ನಾರಾಯಣರು ದಾಖಲಿಸಿದ ಹಾಗೆ ಮಹಾಕೃತಿಯ ಮೈಗೆಡಲೀಯದೆ ಮರುರೂಪಿಸಿರುವ, ಕಿರಿದರೊಳ್ ಪಿರಿದರ್ಥವನ್ನು ಅಡಕಗೊಳಿಸುವ ಈ ಬಗೆಯನ್ನು ಛಾಯಾ ಸುಲಲಿತವಾಗಿ ಮಾಡಿದ್ದಾರೆ. ಪ್ರಪಂಚದ ಸಾಹಿತ್ಯಕೃತಿಗಳಿಗೆ ಪ್ರವೇಶಿಸಲು ಇದು ಕೈಪಿಡಿಯಾಗಿ ಕೆಲಸ ಮಾಡುತ್ತದೆ.

ಬೇಲೂರಿನ ದೇಗುಲದೊಳಗೆ ಇರುವ ಕಂಬವೊಂದರಲ್ಲಿ ಇಡೀ ದೇವಾಲಯದ ಮಿನಿಯೇಚರ್ ಇರುವ ಕಂಬವೊಂದಿದೆ. ಅದು ಛಾಯಾ ಮಾಡಿರುವ ಅತಂತ್ರ-ಜೂಡ್  ಕೃತಿಗೆ ಸಾರ್ಥಕ ಉಪಮೆ. ಎಲ್ಲರೂ ಓದಿ. ಹೊಸ ಓದುಗರು ದಯವಿಟ್ಟು ಓದಿ ಎಂಬುದು ನನ್ನ ನಮ್ರ ಸಲಹೆ.


ಶಿಕ್ಷಣಕ್ಕೆ ಹಂಬಲಿಸುವ ಶ್ರಮಿಕ ವರ್ಗ, ಅದನ್ನು ಸಾಧಿಸಲು ಅವರು ಪಡುವ ಕಷ್ಟ, ಧಾರ್ಮಿಕ ಮತ್ತು ಸಾಮಾಜಿಕ ಕಟ್ಟಳೆಗಳ ಮಧ್ಯೆ ನಲುಗುವ ಮಹಿಳೆಯ ಮನೋಲೋಕ, ತಮ್ಮ ಮಿತಿಗಳನ್ನ ಮೀರುವ ಪ್ರಯತ್ನದಲ್ಲಿಯೇ ಸುತ್ತಲಿನ ಸಮಾಜದಿಂದ ಜರ್ಝರಿತರಾಗುವ ಜ್ಯೂಡ್ ಮತ್ತು ಸ್ಯೂ.. ಸಂಪೂರ್ಣ ಭಿನ್ನ ವಿಚಾರಧಾರೆಯ ಇಬ್ಬರೂ ಕೊನೆಯಲ್ಲಿ ಹೇಗೆ ತಮ್ ತಮ್ಮ ಮೂಲ ವಿಚಾರಗಳ ವಿರುದ್ಧ ಹಾದಿಯಲ್ಲಿ ಮನಸಿಲ್ಲದ ಮನಸಿನಲ್ಲಿ ಹೊರಟುಬಿಡುವರು ಎಂಬುದು ಆಗಿನ್ನೂ ಕೈಗಾರಿಕೆಗಳ, ನಗರೀಕರಣದ, ಸಂಬಂಧ ಬೆಸೆಯುವ ರೈಲುದಾರಿಯ ಪ್ರತಿಮೆಯಲ್ಲಿ ಅಲ್ಲಲ್ಲಿ ಬದಲಾಗುವ ನಿಲ್ದಾಣಗಳ ಸೂಚನೆಯಲ್ಲಿ ಓದುಗರ ಮನಸ್ಸಿನ ನೀಲಿಯಲ್ಲಿ ಹೊಗೆ ಚೆಲ್ಲುತ್ತ ಸಾಗುವ ದೀರ್ಘ ರೈಲಾಗಿ ಈ ಕಾದಂಬರಿ ಅನಿಸಿತು ನನಗೆ. ಅನುವಾದ ಕಷ್ಟ. ಹಳೆಯ ಕಾಲದ ಚಿತ್ರಣಗಳ ಅನುವಾದ ಇನ್ನೂ ಕಷ್ಟ. ಅದನ್ನು ಆ ಕ್ಲಾಸಿಕಲ್ ಸಾಹಿತ್ಯವನ್ನು ಚೆನ್ನಾಗಿ ಮನನ ಮಾಡಿಕೊಂಡ ಮನಸ್ಸು ಸೊಗಸಾಗಿ ಮಾಡಬಲ್ಲದು. ಓದುವವರ ಮನಮುಟ್ಟುವ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಲೂ ಬಲ್ಲದು ಅಂತ ಈ ಅನುವಾದ ಓದಿ ಅನಿಸಿತು ನನಗೆ.

ಕುದಿ ಎಸರು.....ತಿಟ್ಹತ್ತಿ ತಿರುಗಿ ನೋಡಿದಾಗ...

ಮೊನ್ನೆ ಅನಾರೋಗ್ಯದ ಕಾರಣ ಸಿಕ್ಕ ರಜೆಯಲ್ಲಿ ಇಡೀ ದಿನ ರಾತ್ರಿ ಈ ಪುಸ್ತಕ ಓದಿ ಮುಗಿಸಿದೆ. spellbound  ಅಥವಾ  ಮಾತುಮರೆತೆ ಎನ್ನುವುದು ಈ ಪುಸ್ತಕಕ್ಕೆ ನನ್ನ ಮೊದಲ ಸ್ಪಂದನೆ. ಒಂದರ್ಧ ಗಂಟೆ ಸುಧಾರಿಸಿಕೊಂಡು ಮುಂದಿನ ಎರಡು ದಿನಗಳಲ್ಲೆಲ್ಲ ಪುಸ್ತಕದ ಓದು ನೆನಪಾಗುತ್ತಲೇ ಇರುವಾಗ ಮತ್ತೆ ಮತ್ತೆ ಬಂದ ಭಾವ "ಈ ಲೇಖಕಿಗೆ. (ಹುಂ ಪುಸ್ತಕದೊಳಗಿನ ವ್ಯಕ್ತಿಯಾಗಿ ಅಲ್ಲ).. ಕೈ ಮುಗಿಯಬೇಕು. ಗೌರವದಿಂದ ತಲೆಬಾಗಿ ನಂತರ ಗಟ್ಟಿಯಾಗಿ ತಬ್ಬಿಗೊಳ್ಳಬೇಕು" ಎಂಬುದು.
ನಾನೂ ಆಗೀಗ ಕೆಲವು ಸ್ನೇಹಿತರ ಪುಸ್ತಕ-ಸಾಹಿತ್ಯ ಚಟುವಟಿಕೆಗಳಲ್ಲಿ ಕಂಡ ಎತ್ತರದ ನಿಲುವಿನ ವಿಜಯಮ್ಮ ಹಾಗೆ ಮೇಲುಮೇಲಿಂದಲೇ ತುಂಬ ಇಷ್ಟವಾಗಿದ್ದರು. ನನಗೆ ಅವರು ಪತ್ರಕರ್ತೆ ಎಂಬುದರ ಹೊರತಾಗಿ ಅವರ ಇನ್ಯಾವ ವಿವರಗಳೂ ಈ ಪುಸ್ತಕ ಓದುವವರೆಗೆ ಗೊತ್ತಿರಲಿಲ್ಲ. ಆ ಕಾರ್ಯಕ್ರಮಗಳಲ್ಲಿ ಅವರಾಡಿದ ನೇರ ಮೌಲಿಕ ಅನಿಸಿಕೆಗಳು ಮೇಲಕ್ಕೆ ಕಾಣುವ ಅವರ ಚುಂಬಕ ವ್ಯಕ್ತಿತ್ವವನ್ನು ಇನ್ನೂ ಇಷ್ಟವಾಗಿಸಿದ್ದವು. ಅವರ ಮಾತುಕತೆಗಳಲ್ಲಿ ಹಣಿಕಿ ಹಾಕುವ ಹಳೆಯ ಎಷ್ಟೊಂದು ಜನ ಸಾಹಿತಿಗಳ ಬಿಡಿ ಬಿಡಿ ಚಿತ್ರಗಳು ನನಗೆ ಇಷ್ಟವಾಗಿದ್ದವು. ಶ್ರೀನಿವಾಸರಾಜು, ಕಿ.ರಂ, ರಾಜರತ್ನಂ, ಮಾಸ್ತಿ.. ಇವರುಗಳ ಬಗ್ಗೆ ಅವರಾಡುವ ಪಕ್ಕದ ಮನೆಯ ಹುಡುಗಿಯ ಹಾಗಿನ ಸರಳ, ಸಲಿಗೆಯ ಮತ್ತು ಅಕ್ಕರೆಯ ಚಿತ್ರಣಗಳು ನನ್ನ ಓರಗೆಯವರಿಗೆ ಮುಖ್ಯವಾದ ಕೊಂಡಿಗಳು. ಎಲ್ಲ ಮೇರು ಸಾಹಿತಿಗಳನ್ನೂ ಅವರವರ ಭವ್ಯ ಫ್ರೇಮುಗಳಲ್ಲಿ ದೂರದಿಂದ ಕಂಡವರಿಗೆ ಇವರು ಕಡೆದಿಡುವ ದಿಟ್ಟ, ಸ್ಪಷ್ಟ ಆದರೂ ಅಕ್ಕರೆಯ ಚಿತ್ರಣಗಳ ಅವಶ್ಯಕತೆ ತುಂಬ ಇದೆ ಅನಿಸುತ್ತದೆ ನನಗೆ.
ಇಷ್ಟೆಲ್ಲ ಹೇಳಲೇಬೇಕೆನಿಸಿತು ಏಕೆಂದರೆ ಆ ಮಾತುಕತೆಗಳಲ್ಲಿ, ಬರಹಗಳಲ್ಲಿ ಇರುವ ಸ್ಪಷ್ಟತೆ, ದಿಟ್ಟತನ, ಮತ್ತು ತಾನು ಬರೆದ ವಿಚಾರಗಳ ಬಗ್ಗೆ ನಿಷ್ಠುರವಾದ ಅಕ್ಕರೆ ಈ ಪುಸ್ತಕದಲ್ಲಿದೆ. ಹಾಗಂತ ಎಲ್ಲಿಯೂ ಹೊಂದಾಣಿಕೆಯಿಲ್ಲದ ನಿರ್ಲಿಪ್ತ ಪ್ರಸ್ತುತಿಯಲ್ಲಿ ಲೇಖಕಿಯಾಗಿ ಅವರು ಅದ್ಭುತವಾಗಿ ಹೊಮ್ಮಿದ್ದಾರೆ. ನಾನು ಓದಿದ ಕೆಲವು ಅನುವಾದಿತ ಕೃತಿಗಳಲ್ಲಿ ( ಕುಣಿಯೇ ಘುಮಾ - ಮಾಧವಿ ದೇಸಾಯಿ/ಮರಾಠಿ, ನ-ಹನ್ಯತೆ - ಮೈತ್ರೇಯಿ ದೇವಿ/ಬಂಗಾಳಿ..., ಕಮಲಾದಾಸ್-ನನ್ನ ಕಥೆ/ ಮಲಯಾಳಿ, ) ಮತ್ತು ನಮ್ಮದೇ ಪ್ರತಿಭಾ ಬರೆದಿರುವ ಅನುದಿನದ ಅಂತರಗಂಗೆ...ಈ ಮೊದಲಾದ ದಿಟ್ಟ ಕೃತಿಗಳಲ್ಲಿ ನಾನು ನನ್ನನ್ನು, ಜಗತ್ತಿನ ಎಲ್ಲ ಹೆಣ್ಣು ಜೀವಗಳ ಚಡಪಡಿಕೆಯನ್ನು ಅನುಭವಿಸಿದ್ದೆ. ಪ್ರತಿಯೊಂದೂ ಓದು ಸಹಾ ನನ್ನದೇ ಮಿತಿಗಳನ್ನ ಅರ್ಥ ಮಾಡಿಕೊಳ್ಳಲು ತಮ್ಮದೇ ರೀತಿಯಲ್ಲಿ ನೆರವಾಗಿವೆ. ಈ ಪುಸ್ತಕ ಇದೇ ಹಾದಿಯಲ್ಲಿ ಆಳವಾದ ಮತ್ತು ವಿಸ್ತಾರವಾದ ಗುರುತು ನೆಟ್ಟಿದೆ.
ತನ್ನ ಅತ್ಯಂತ ಖಾಸಗೀತನದಲ್ಲಿ ಹೆಣ್ಣು ಅನುಭವಿಸಿದ ಹತಾಶೆ, ಅವಮಾನ, ಕೀಳರಿಮೆ ಮತ್ತು ಅಭಿವ್ಯಕ್ತವಾಗಿಲ್ಲದೆಯೂ ಒಳಗಿಂದಲೇ ಚುಚ್ಚುತ್ತಲೇ ಇರುವ ಪ್ರತಿರೋಧ ಇದನ್ನು ಸಮಸ್ತರ ಎದುರಿಗೆ ಇಡುವುದು ತುಂಬ ಧೈರ್ಯ ಬೇಡುವ ಸವಾಲಿನ ಕೆಲಸ. ಓದುವಾಗ ಭೇಷ್ ಎಂದವರು ಮತ್ತೆ ಎದುರಿಗೆ ಸಿಕ್ಕಾಗ ನೋಡುವ ಬೇರೆಯದೇ ನೋಟವನ್ನು ತಡೆಯುವ ಧೈರ್ಯ ಇದ್ದವರು ಮಾತ್ರ ಬರೆಯುವ ಧೈರ್ಯ ಮಾಡಬಲ್ಲರು ಎನ್ನುವುದು ನನ್ನ ಮಾತು. ಅದನ್ನ ಇಲ್ಲಿ ವಿಜಯಮ್ಮ ಮಾಡಿದ್ದಾರೆ. ಅವರ ಹೆಸರಲ್ಲೇ ಇರುವ ಅಮ್ಮ ಕಿರಿಯರ ಎಲ್ಲ ದಿಗ್ಭ್ರಮೆಗಳನ್ನು ಸಂತೈಸಿದರೆ, ಅವರ ಬದುಕಿನ ಹಲ ಮಗ್ಗುಲುಗಳನ್ನು ಈಗಲೇ ನೋಡಿದ ಅವರ ಓರಗೆಯವರ ಓಹ್..ನೋಟಗಳನ್ನು ನಲ್ಲಿಫೈ ಮಾಡುತ್ತದೆ. ಯಾವ ನೋವನ್ನೂ ವೈಭವೀಕರಿಸ‌ದ, ನವಿರಾಗಿಸದ ಒಂದು ಅನುದ್ವೇಗದ ಬರಹವಿಲ್ಲಿದೆ.
ಓದುವಾಗ ಸಿಟ್ ಹತ್ತುತ್ತದೆ ನನಗೆ ಅಯ್ಯೋ ಯಾಕೆ ಸುಮ್ಮನಿದ್ದಳಿವಳು ಎನಿಸುವ ತುದಿಯಲ್ಲಿ ನಿಲ್ಲಿಸುವ ಭಾಗಗಳಿವೆ. ಇಡೀ ಪುಸ್ತಕ ಓದಿ ಮುಗಿಸಿ ಮತ್ತೊಮ್ಮೆ ಮನಸ್ಸಿನಲ್ಲಿ ಕೆಲ ವಿವರಗಳನ್ನ ಹಾಯಿಸುವಾಗ ಅನಿಸುತ್ತದೆ. ಅವರಿಗೆ ಸಿಕ್ಕ ಭಯಂಕರ ಬಾಲ್ಯ ಅವರ ಜೀವನದ  ಎಲ್ಲ ನಡವಳಿಕೆಗಳಲ್ಲೂ ಚಾಚಿಕೊಂಡಿದೆ ಅಂತ. ಅಯ್ಯೋ ಪಾಪ ಎನ್ನಿಸುವ ಅಮ್ಮನ - ಮೈ ಮೇಲೆ ಎರಗುವ ಅಪ್ಪ ಮುಂದಿನ ಒಂದಷ್ಟು ಬಾಲ್ಯಕಾಲ ಅಮ್ಮನಿಲ್ಲದ ಬಾಲೆಯ ಬೆಚ್ಚನೆ ಆಸರೆಯಾಗಿ ಉಳಿದುಬಿಡುತ್ತಾನೆ. ಬಾಯಿಮುಚ್ಚಿಕೊಂಡು ನಲುಗುವ ಅಮ್ಮ ಬರಿ ಹೂವಿನಭಿಷೇಕ ಮಾಡುತ್ತ ಖುಷಿ ಪಡುವ ಅಮ್ಮ ಆ ಮುಗ್ಧ ಮನದ ಮೇಲೆ ಎಂತಹ ಪ್ರಭಾವ ಬೀರಿರಬಹುದು. ನೋವೋ ನರಕವೋ ಇದೇ ನನ್ನ ಬದುಕು. ಬಿಟ್ಟು ಬಂದರೆ ಹಂಗಿಸುವ ಸಮಾಜ ಎಂದು ನೋವು ನುಂಗಿ ನಿಲ್ಲುವ ಆ ತಾಯಿಯು ಮಾತಿಲ್ಲದೆ ತನ್ನ ಸಬ್-ಮಿಶನ್ ಅನ್ನು ಈ ಬಾಲೆಗೆ ದಾಟಿಸಿದ ರೀತಿ ನನ್ನನ್ನು ಅಲುಗಾಡಿಸಿಬಿಟ್ಟಿದೆ. ಮುಂದೆಂದೂ ಗಂಡನೆಂಬ ಜೀವಿ ತನ್ನ ಮೇಲೆ ಮಾಡುವ ಎಲ್ಲ ಅತ್ಯಾಚಾರಗಳನ್ನು ಮಾತಿಲ್ಲದೆ ನುಂಗುವ ಕೂಗು ಮುಚ್ಚಿಹಿಡಿಯುವ ಇವರ ಕ್ರಿಯೆ ಪ್ರತಿಕ್ರಿಯೆಗಳ ಮೂಲ ನನಗೆ ಇವರ ಬರಪೀಡಿತ ಬಾಲ್ಯದಲ್ಲಿ ಕಾಣುತ್ತದೆ. ಅಂತೂ ಒಂದಿನ ಮಗನ ಪ್ರತಿಕ್ರಿಯೆಯ ಮೂಲಕ ತನ್ನ ಪ್ರತಿರೋಧಕ್ಕೆ ಒಂದು ಕಿಟಕಿ ತೆಗೆದದ್ದನ್ನು ನೋಡಿ ಅದರಾಚೆಗೆ ದಾಪುಗಾಲು ಇಡುತ್ತಾರೆ. ಮುಂದಿನ ದಾಪುಗಾಲುಗಳ ಪಯಣದ ಕಥನಕ್ಕೆ ಕಾಯುತ್ತಿದ್ದೇನೆ.
ನಿಜಕ್ಕೂ ಇವರು ಕೊನೆಗಾದರೂ ಹಾಗೆ ಮಾಡದಿದ್ದರೆ ನನಗೆ ಉಸಿರೇ ಕಟ್ಟುತ್ತಿತ್ತು. ತಾನು ಬಿಗಿಯಾಗಿ ಸುತ್ತಿಟ್ಟ ತನ್ನ ಮಿತಿಯನ್ನ ತಾನೇ ಮೀರುವ ಈ ಭಾಗಕ್ಕೆ ಬಂದ ಮೇಲೆ ಅವರು ಅನುಭವಿಸಿದ ಎಲ್ಲ ನೋವಿನ ಕ್ಷಣಗಳನ್ನು ತಡೆದುಕೊಳ್ಳುವ ಶಕ್ತಿ ನನಗೆ ಬಂತು. ಬಹುಶಃ ಮೊದಲಲ್ಲೆ ಇರುವ ಈ ಸೂಚನೆಯೇ ನನಗೆ ಈ ಪುಸ್ತಕದ ಕುದಿಯನ್ನ ತಡೆದು ಮುಂದೋದಲು ಆಸರೆಯೆಂದರೂ ತಪ್ಪಿಲ್ಲ.
ಇದು ಅವರು ಬರೆದ ಹಾಗೆ ಸಾಗಾ ಆಫ್ ಎ ಡೆಸರ್ಟೆಡ್ ವುಮನ್ ಅಲ್ಲ. ಇದು ಸಾಗಾ ಆಫ್ ಆನ್ ಅಸರ್ಟಿವ್ ವುಮನ..... ಬಗ್ಗಿ ಸಾಕಾಗಿ ಮೇಲೆದ್ದ ದಿಟ್ಟೆಯ ಪಯಣ.

ಈಗಾಗಲೇ ಇದನ್ನು ಓದಿದವರ ಕೆಲವು ಅನಿಸಿಕೆಗಳಲ್ಲಿ ಇಷ್ಟೊಂದು ವಿವರಗಳ ಅವಶ್ಯಕವಿತ್ತೆ/ಸಾಮಾಜಿಕ ಸ್ಥಿತಿಗತಿಗಳ ವಿವರವಿಲ್ಲ/ಕೆಳಸ್ತರದ ಬದುಕಿನ ಪರಿಚಯ ಬರಲಿಲ್ಲ.. ಇತ್ಯಾದಿ ಅನಿಸಿಕೆಗಳನ್ನು ಕೇಳಿದೆ. ನಾನು ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅನಿಸುತ್ತಿರುವುದು ಒಂದು ಪದವನ್ನೂ ಅವರು ಅನವಶ್ಯಕ ಉಪಯೋಗಿಸಿಲ್ಲ ಎಂದು. ದೇಹದೊಳಗೆ ಸರಳು ತೂರಿ ಬೆಂಕಿಯ ಮೇಲೆ ಸುಡುವಾಗ ಎಲ್ಲ ಮಗ್ಗುಲುಗಳೂ ಬೆಂದವೇ ಎಂದು ಖಾತ್ರಿ ಮಾಡುತ್ತಾನೆ ಬಾಣಸಿಗ. ಆ ಬೆಂದ ಜೀವ ಹೀಗ್ ಹೀಗೆ ಮಾಡಿಬಿಟ್ಟರಲ್ಲಾ ಅಂತ ವಿವರಿಸುವಾಗ ಬರೀ ನನ್ನ ಸುಟ್ಟು ತಿಂದರು ಅಂತ ಬರೆದರೆ ಅದರ ಸುಡು ಉರಿ ಓದುವವರದ್ದಾಗುವುದು ಹೇಗೆ. ಒಂದು ಕಥೆ, ಕಾದಂಬರಿ, ಅಂಕಣ, ವರದಿ ಬರೆಯುವಾಗ ಅವಶ್ಯಕ ವಿವರಗಳು ಎಂದು ಗಂಡೊಬ್ಬ ಡೀಟೈಲಾಗಿ ಖಾಸಗಿ ವಿವರಗಳನ್ನು ಬರೆದರೆ ಅದು ಬೋಲ್ಡ್ ಬರವಣಿಗೆಯಾಗುವುದಾದರೆ, ವಿಜಯಮ್ಮ ಬರೆದ ಪುಸ್ತಕದಲ್ಲಿನ ಹುರಿಯುವಿಕೆಯ ವಿವರವಿಲ್ಲದೆ ಇದ್ದರೆ ಅದರ ಉರಿ ನಮಗೆ ತಾಗುವುದೇ ಇಲ್ಲ. ಅದು ಮತ್ತೊಂದು ದಿಟ್ಟ ಹೆಣ್ಣಿನ ಸಾಧನ ಕಥೆಯಾಗುತ್ತದೆ ಅಷ್ಟೆ.

ಮದುವೆಯೆಂದಾದ ಮೇಲೆ ಇವರು ಅನುಭವಿಸಿದ ಭಯಂಕರ ಸಂಗತಿಗಳ ಮುಂದೆ ಹುಟ್ಟಿನಿಂದ ಇವರು ಹೆಣ್ಣಾಗಿ ಅನುಭವಿಸಿದ ಸಂಕಟಗಳ ಸರಮಾಲೆ ಮಂಕಾಗಿ ನಮ್ಮ ಗಮನ ಬೇರೆಡೆ ಹೋಗಿಬಿಡುತ್ತದೆ. ತೆವಲು ತೀರಿಸಿಕೊಂಡು ಹೆಣ್ಣು ಹೆತ್ತೆಯಲ್ಲಾ ಎಂದು ಹೆಣ್ಣನ್ನು ಇನ್ನೊಬ್ಬ ಹೆಣ್ಣು ಅತ್ತೆಯೇ ಬೈದಾಡುವ ಅವಳನ್ನು ಜೀವನದ ಸಹಜ ನೆಮ್ಮದಿಗಳಿಂದ ದೂರವಿಡುವ ಪರಿಸ್ಥಿತಿ ಇವತ್ತಿಗೂ ಏನೂ ಬದಲಾಗಿಲ್ಲ. ಇದು ವಿಜಯಮ್ಮನ ಬಾಲ್ಯಕಾಲದಿಂದ ಇವತ್ತಿನವರೆಗೂ ಹಾಗೇ ಇದೆ. ಸುತ್ತಲ ಮನೆಗಳವರು, ಗಂಡು ಮಕ್ಕಳು ಜೊತೆ ಹೆಣ್ಮಕ್ಕಳನ್ನು ತುಚ್ಛೀಕರಿಸುವ ದಿನಗಳೂ ಹಾಗೇ ಇವೆ. ವಿದ್ಯಾವಂತ ಮಧ್ಯಮ ಮತ್ತು ಮೇಲ್ಮಧ್ಯಮವರ್ಗದಲ್ಲಿ ಆಯ್ಕೆರಹಿತ ಒಪ್ಪಿಗೆ ಹೊಂದಾಣಿಕೆ ಇದ್ದರೂ ಹೆಣ್ಣು ಮಕ್ಕಳು ಮುಸುಕಿನೊಳಗೆ ಅನುಭವಿಸುವ ಗುದ್ದು ಅವರಿಗಷ್ಟೇ ಗೊತ್ತು. ಶ್ರಮಿಕ ವರ್ಗ ಮತ್ತು ಕೆಳವರ್ಗದ ಸ್ಥಿತಿ ಇಂದಿಗೂ ಹಾಗೇ ಇದೆ.
ರಾತ್ರಿ ಶೌಚಾಲಯವಿಲ್ಲದೆ ಹೊರಗೆ ಬಂದ ಮಗುವನ್ನ ಪಕ್ಕದ ಮನೆಯವನೇ ಹೆಂಡತಿ ಊರಿಗೆ ಹೋದಳಲ್ಲಾ..ಇವಳೇ ಇರಲಿ ಅಂತ ಅನುಭವಿಸಿ ಗುರುತು ಹೇಳಿದರೆ ಅಂತ ಕಲ್ಲೆತ್ತಿ ಹಾಕುತ್ತಲೇ ಇದ್ದಾನೆ.
ಒಬ್ಬಳೇ ಹೆಂಗಸು ಕತ್ತಲಾದ ಮೇಲೆ ಆಟೋ ಹತ್ತಿದರೂ ಕೈಯ ಮಗುವನ್ನೂ ಹೊರಗೆಸೆದು ಸಿಕ್ಕಿದ್ದೇ ಸಾಕು ಎಂದು ತಮ್ ತಮ್ಮ ಪುರುಷತ್ವವನ್ನು ಇಳಿಸಿ ಹಗುರಾಗುವ ಗಂಡಸರು ನಮ್ಮ ನಡುವೆಯೇ ಆಟೋ, ಬಸ್ಸು, ಕಾರು, ವ್ಯಾನು ಸಾರ್ವಜನಿಕ ಸಾರಿಗೆಯಲ್ಲೆ ಓಡಾಡುತ್ತಿದ್ದಾರೆ.
ಡಿಜಿಟಲ್ ಇಂಡಿಯಾದ ಯುವ ಸಮಾಜ ಸರಿಯಾದ ಓದು ಕೆಲಸವಿಲ್ಲದೆ ಮೊಬೈಲಲ್ಲಿ ಒನ್ ಡೇ ಪ್ಯಾಕುಗಳಲ್ಲೇ ಇಳಿಸಲು ಬರುವ ವಿಡಿಯೋ ನೋಡಿ ಹುಚ್ಚೆದ್ದು ಕೈಗೆ ಸಿಕ್ಕವರ ಮಗು, ಅಜ್ಜಿ, ಹುಡುಗಿ, ಹೆಂಗಸು ಎಂದು ನೋಡದೆ ಮೇಲೆಲ್ಲ ಹಾಯ್ದುಕೊಂಡು, ಕಣ್ಣಿಗೆ ಸಿಕ್ಕಿದ್ದರಲ್ಲೆಲ್ಲ ಅವರನ್ನ ತಿವಿದು ತಮ್ ತಮ್ಮ ಜೀವನದ ಸಾರ್ಥಕ್ಯ ಮೆರೆಯುತ್ತಿದ್ದಾರೆ.
ನಾವು ಹುಡುಗಿಯರು ತಲೆಬಗ್ಗಿಸಿ, ಸೆರಗು ಸಿಕ್ಕಿಸಿ, ಮೇಲುದ ಹೊದ್ದು....ಊರೆಲ್ಲ ಓಡಾಡುತ್ತೇವೆ. ಕೆಲವರು ಎದೆಯುಬ್ಬಿಸಿ ಕಣ್ಣಲ್ಲಿ ಕಣ್ಣು ನೆಡುತ್ತಾರೆ. ಕೈ ಮುಷ್ಟಿಯಾಗುತ್ತದೆ. ಆದರೂ ನಮ್ಮ ಹುಡುಗರು ನಮ್ಮನ್ನು ನೋಡುವ ದೃಷ್ಟಿ ಬದಲಾಗದೆ ಈ ಎರಡೂ ಉಪಯೋಗವಿಲ್ಲವೇ ಅಂತ ನಾನು ಬೇಯುತ್ತೇನೆ. ನನ್ನ ಮಗ ಎಲ್ಲರಲ್ಲೂ ಮನುಷ್ಯರನ್ನೇ ಕಾಣಲಿ..ವಸ್ತುವನ್ನಲ್ಲ ಅಂತ ಕಣ್ತುಂಬಿ ಬೇಡಿಕೊಳ್ಳುತ್ತೇನೆ.

Monday, October 30, 2017

ಹಿಜಾಬ್ - by ಗುರುಪ್ರಸಾದ್ ಕಾಗಿನೆಲೆ - ನನ್ನ ಓದು.

[[ ಹಿಜಬ್ - by  ಗುರುಪ್ರಸಾದ್ ಕಾಗಿನೆಲೆ - ನನ್ನ ಓದು.]]


"ನಾಗರೀಕತೆಯ ಸಂಭ್ರಮ ಹೆಚ್ಚುತ್ತಿದ್ದಂತೆಯೇ ಅಂತರಾಳದಲ್ಲಿ ಒಂಟಿತನ, ಬೇಸರ, ತಲ್ಲಣ ವಿಜೃಂಭಿಸುತ್ತಲೇ ಉಳಿದಿವೆ. ತಾನು ಕಟ್ಟಿದ ನಾಗರೀಕ ನಾಗಪಾಶಗಳ ನಡುವೆಯೂ ಆತ ತನಗೇ ತಾನು ಪರಕೀಯನೆನಿಸುತ್ತಿರುವಾಗ... ನಿಸರ್ಗದ ಮಡಿಲಿಗೂ ಎರವಾಗಿ ಅಖಿಲ ವಿಶ್ವಪ್ರಕೃತಿ ಪ್ರಪಂಚದಿಂದಲೂ ತಾನು ಪ್ರತ್ಯೇಕನೆಂಬ ಅಸಹಾಯಕತೆಯ ಅರಿವೂ ಮನುಷ್ಯನನ್ನು ಕಾಡುತ್ತಿರುತ್ತದೆ.
ಅಶಕ್ತನೂ ಏಕಾಕಿ. ಸಮರ್ಥನೂ ಏಕಾಕಿ.ಸೆರೆಮನೆಯಲ್ಲಿ ಬಿದ್ದವನೂ ಏಕಾಕಿ.ಅರಮನೆಯಲ್ಲಿ ಇದ್ದವನೂ ಏಕಾಕಿ.
ಮಾನವನು ಮಾನವತೆಯಿಂದ ಮಾತ್ರ ಈ ಅಸಹಾಯಕತೆಯನ್ನು ನೀಗಿಕೊಳ್ಳಬಹುದು. ಸಾಹಿತ್ಯ ಈ ನೋವಿಗೆ ನಾಲಗೆಯನ್ನು ನೀಡಬಹುದು."

ಈ ವಿಷಯವನ್ನು ನಾನು ಇತ್ತೀಚೆಗೆ ಹಳೆಯ ಸಾಕ್ಷಿ ಪತ್ರಿಕೆಯ ಒಂದು ಲೇಖನದಲ್ಲಿ ಓದಿದೆ. ಪರಕೀಯ ಪ್ರಜ್ಞೆ ಎಂಬ ವಿಷಯದ ಬಗ್ಗೆ ಮನಮುಟ್ಟುವಂತೆ ಬರೆದವರು ಶ್ರೀ ಗೌರೀಶ ಕಾಯ್ಕಿಣಿಯವರು. ( ಅನೇಕ ಪ್ರಕಾಶನವು ಅಡಿಗ ಸಂಕಥನದಲ್ಲಿ ಈ ಪತ್ರಿಕೆಗಳನ್ನು ಮರುಪ್ರಕಟಿಸಿದೆ. http://adiga.sankathana.com/category/sakshi/)


ಮಹಾನಗರದಲ್ಲಿ ಕೆಲಸದಲ್ಲಿರುವ ಇಬ್ಬರು ಮಕ್ಕಳ ಅಮ್ಮನಾದ ನಾನು ಈ ನಗರ ಜೀವಿತದಿಂದ ಪಡೆದುಕೊಂಡಿದ್ದು ಸಾಕಷ್ಟು ಇದೆ. ಅದರಲ್ಲಿ ಬಹುಪಾಲು ತಲ್ಲಣವೇ ಇದೆ. ಹಳೆಯ ಕಾಲದ ನನ್ನ ಮೆದುಳಿನ ಮಾದರಿಗೆ ಈಗಿನ ಕೆಲವು ನಡಾವಳಿಗಳು ಒಪ್ಪಿಕೊಳ್ಳಲು ಕಷ್ಟವಾಗುತ್ತಿರುತ್ತದೆ. ಎಲ್ಲರೂ ರೆಡೀ ಗೆಟ್ ಸೆಟ್ ಗೋ.. ಅಂತ ಓಡುತ್ತಿರುವಾಗ ನಾನು ಪಕ್ಕದಲ್ಲಿ ನಿಲ್ಲಲು ಬಯಸಿದರೆ ನನ್ನ ತಲೆಯೇ ಸಾಕಷ್ಟು ಕೆಟ್ಟಿರಬಹುದು ಎಂದು ನನಗೇ ಅನಿಸುವಷ್ಟು ಹೊಸಕಾಲದ ಮೆದುಳಿನ ಭಾಗವೂ ಕೆಲಸ ಮಾಡುತ್ತಿರುವುದರಿಂದ ಇದನ್ನ ಅಪ್ಪಿಕೊಳ್ಳದೇ ಬೇರೆ ದಾರಿಯೂ ಇಲ್ಲ. ಇದರ ಮಧ್ಯ ಗೌರೀಶರು ಬರೆದ ಮಾತು "ಸಾಹಿತ್ಯವು ಈ ನೋವಿಗೆ ನಾಲಗೆಯನ್ನು ನೀಡಬಹುದು.."(ಇದು ಬರೆದು ಮೂರ್ನಾಲ್ಕು ದಶಕಗಳೇ ಕಳೆದಿವೆ) ಇವತ್ತಿಗೂ ಅವತ್ತಿಗಿಂತ ಹೆಚ್ಚಾಗಿ ಪ್ರಸ್ತುತವಾಗುವ ದೇಶಕಾಲಾತೀತ ಸ್ಥಿತಿಯಲ್ಲಿ ನಾವಿದ್ದೇವೆ. ನೋವಿಗೆ ನಾಲಗೆಯಷ್ಟೇ ಅಲ್ಲದೆ ಸಾಹಿತ್ಯವು ನೋವಿಗೆ ಹೆಗಲಾಸರೆಯೂ ಆಗಿದೆ ಎಂಬುದನ್ನು ನಾನು ಖಡಾಖಂಡಿತ ಹೇಳಬಯಸುತ್ತೇನೆ. ಅದಿಲ್ಲದೆ ಎಂದೋ ಕಡಲತಡಿಯಲ್ಲಿ ಗೌರೀಶರು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿ ಬರೆದಿಟ್ಟ ವಿಚಾರಗಳು ಈಗ ಜಗತ್ತಿನ ಪುಟ್ಟ ಜಗಲಿಕಟ್ಟೆಯಾಗಿರುವ ಬೆಂಗಳೂರಿನ ಓರ್ವ ಕೆಲಸಗಿತ್ತಿ ಅಮ್ಮನಿಗೆ ಇದು ನನ್ನ ವಿಚಾರವೂ ಆಗಿದೆ ಎನ್ನಿಸಿದ್ದು. 
              ಈಗೊಂದು ವಾರದ ಹಿಂದೆ ಓದಿದ ಗುರುಪ್ರಸಾದ್ ಕಾಗಿನೆಲೆಯವರು ಬರೆದ "ಹಿಜಾಬ್" ನಿಜಕ್ಕೂ ಬರಿಯ ಸೋಮಾಲೀ ನಿರಾಶ್ರಿತರ ಬಗ್ಗೆ ಮಾತ್ರ ಅಲ್ಲ. ಮನುಷ್ಯ ತಾನೇ ತಾನಾಗಿ ನಿರಾಶ್ರಿತರ ದಂಡೆಯ ಪರಕೀಯ ಬಂದರಿನಲ್ಲಿ ಹೇಗೆ ಲಂಗರು ಹಾಕಿಕೊಳ್ಳುತ್ತಾನೆ ಎಂಬುದರ ಬಗ್ಗೆ ಬರೆದಿರುವುದು ಅನಿಸುತ್ತಲೇ ಇರುವುದೆ ಸಾಕ್ಷಿ.
ಒಂದು ವಿಚಾರ ಮತ್ತು ಸಾಹಿತ್ಯ ಕೃತಿ ಅದನ್ನು ಆಡಿ, ಬರೆದು ಪ್ರಕಟಿಸಿದ ಕೂಡಲೆ ಅದು ಓದಿದವರೆಲ್ಲರ ಮಡಿಲಿಗೆ ಬಂದ ಮಗುವಾಗುತ್ತದೆ. ಅದು ನಮ್ಮ ಮನದಂಗಳದಲ್ಲಿ ಹೇಗೆ ಬೆಳೆದು ನಮ್ಮನ್ನು ಆವರಿಸಿಕೊಳ್ಳುತ್ತದೆ ಅಥವಾ ದಾಟಿಸುತ್ತದೆ ಎಂಬುದನ್ನು ಅನುಭವಿಸಿ ಮಾತ್ರ ತಿಳಿಯಬಹುದಾಗಿದೆ.
ಹಿಜಾಬ್ - ಕನ್ನಡಕ್ಕೆ ಹೊಸದೆನ್ನುವ ಕಟ್ಟೊಣ ಮತ್ತು ವಿಷಯವೈವಿಧ್ಯವನ್ನು ಪರಿಚಯಿಸುತ್ತಿದೆ. ಈ ಮೊದಲು ಅನುವಾದಗಳ ಮೂಲಕ ಪ್ರಪಂಚದ ವಿವಿಧ ಕಥೆಗಳು ಆಯಾಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಬಂದಿವೆ. ಇದು ಹಿಜಾಬ್ ನಲ್ಲಿ ಲೇಖಕರ ಅನುಭವಪಾಕಕ್ಕೆ ಸಿಕ್ಕಿ ಹದವಾಗಿ ಕನ್ನಡದ ಕನ್ನಡಕದೊಳಗೆ ಕಂಡ ಹೊರದೇಶ, ಪರಕೀಯತೆ ಮತ್ತು ಅಲ್ಲಿರುವ ಇನ್ನಿತರ ನಿರಾಶ್ರಿತತೆ ಈ ಬಗ್ಗೆ ಮನೋಜ್ಞವಾಗಿ ಮೂಡಿಬಂದಿದೆ.
ಗುರುಪ್ರಸಾದರ ಬರವಣಿಗೆಯಲ್ಲಿ ಹಿಡಿತವಿದೆ. ಒಳ್ಳೆಯ ಕನ್ನಡವಿದೆ. ದಟ್ಟ ದೇಸೀ ಪಾತಳಿಯಲ್ಲಿ ಚಿಗುರಿಚಿಗುರಿ ನಿಂತ ಹೊರದೇಶದ ಪೈನ್ ಮರಗಳ ಸಾಲಿನ ನೆರಳುಹಾದಿಯಿದೆ. ಇಲ್ಲಿನ ಶರದೃತುವಿನ ನೆನಪಿನಂಗಳದಲ್ಲಿ ಅಲ್ಲಿನ ಎಲೆಯುದುರುವ ಕಾಲದ ಬಣ್ಣಬಣ್ಣದ ಎಲೆಗಳಿವೆ. ಇಲ್ಲಿನ ಮಾಗಿಚಳಿಯ ಇಬ್ಬನಿಯೊಡನೆ ಅಲ್ಲಿನ ಹಿಮಾಚ್ಛಾದಿತ ಹೊರಾಂಗಣ ಜಾಕೆಟ್ ತೊಟ್ಟು ಕೂತಿದೆ ಎನ್ನಿಸುವಂತೆ ಈ ಕಥೆಗಳಲ್ಲಿನ ವಿವರಗಳು ಆಪ್ತವಾಗಿ ಕಟ್ಟಲ್ಪಟ್ಟಿದೆ. ಭಾವೋದ್ವೇಗವಿಲ್ಲದ ಅಂತಃಕರಣದ ಸೆಲೆಯ ಜಿನುಗು ಕಥೆಯುದ್ದಕ್ಕೂ.

ಗುರು ಎಂಬ ಉತ್ತಮಪುರುಷ (first person)ದಲ್ಲೆ ಮೊದಲಿಂದ ಕೊನೆಯವರೆಗೆ ತೊಡಗುವ ಈ ಕಥೆ ನಿರೂಪಕನ ಮನವನ್ನು ಮೆಟ್ಟಿಲು ಮೆಟ್ಟಿಲಾಗಿರುವ ರಂಗಸ್ಥಳದಂತೆ ತೆರೆದಿಟ್ಟಿದೆ. ಒಂದೊಂದು ಸಾಲು ಒಳಹೊಕ್ಕ ಹಾಗೆ ಇನ್ನೊಂಚೂರು ಈ ಕಥೆಯಲ್ಲಿ ನಡೆಯುವ ರುದ್ರರಮಣೀಯ ತಲ್ಲಣದ ನಾಟಕದ ವೇದಿಕೆಯ ಸಮೀಪಕ್ಕೆ ಹೋಗುತ್ತೇವೆ.

  • ಅಮೆರಿಕಾ ಎಂಬ ಸ್ವರ್ಗದ ಗ್ರೀನ್ ಕಾರ್ಡಿನ ಮೋಹಕ್ಕೆ ಭಾರತೀಯರು ಪಡುವ ಪಡಬಾರದ ಪಾಟಲುಗಳು,
  • ಸೋಮಾಲೀ ನಿರಾಶ್ರಿತರ ಅಭದ್ರತೆ.
  • ಇಲ್ಲಿಯೇ ಬೆಳೆದ ಮೊದಲ ಜನರೇಶನ್ನಿಗೆ ಓದು ಮತ್ತು ಆಹಾರ ಕೊಟ್ಟ ಆತ್ಮವಿಶ್ವಾಸ ಹಾಗೂ ಎಡಬಿಡಂಗಿತನ
  • ಯಾವುದೇ ಊರಿನಲ್ಲೂ ಧರ್ಮವೆಂಬ ಅಫೀಮಿನ ತಿರುಗಣಿಗೆ ಸಿಕ್ಕಿಬಿದ್ದವರ ತ್ರಿಶಂಕು ಸ್ಥಿತಿ ಇವುಗಳನ್ನ ಈ ಕಥೆ ಮನಮುಟ್ಟುವಂತೆ ತೆರೆದಿಡುತ್ತದೆ.

ಕಾದಂಬರಿಯ ಮುಖ್ಯ ಸ್ರೋತ ನಿರಾಶ್ರಿತತೆಯೇ ಆದರೂ... ಜನಾಂಗನಿಂದನೆಗಳ ಸೂಕ್ಷ್ಮಚಿತ್ರಣ, ಇರುವ ರೂಲುಗಳನ್ನೆ ಉಪಯೋಗಿಸಿಕೊಂಡು ತಮಗೆ ಬೇಕಾದ ಹಾಗೆಯೇ ತಾವಿರುವ ಅಮಾನುಷ ನಾಗರೀಕತೆ ಇಲ್ಲಿ ಚೊಕ್ಕವಾಗಿ ಬರೆಯಲ್ಪಟ್ಟಿದೆ. ಆ ಪುಟ್ಟ ನಗರದ ಮೇಯರ್ ಬರೆಯುವ ಪತ್ರ ಜಗತ್ತಿನ ಅಸಹಿಷ್ಣುತೆಗಳೆಲ್ಲದರ ಮಾದರಿಯ ಹಾಗೆ ತೋರಿತು ನನಗೆ.

ನಾನು ಈ ಮೊದಲು ಉದ್ಧರಿಸಿದ ಗೌರೀಶರ -" ಸೆರೆಮನೆಯಲ್ಲಿ ಬಿದ್ದವನೂ ಏಕಾಕಿ, ಅರಮನೆಯಲ್ಲಿ ಇದ್ದವನೂ ಏಕಾಕಿ" ಎಂಬ ವಾಕ್ಕು ದೇಶಾಂತರವನ್ನು ಮೀರಿ ನಿಜವಾಗುತ್ತ ಹೋಗುವುದನ್ನು ಈ ಕಾದಂಬರಿಯ ಓದು ನನಗೆ ಮನಗಾಣಿಸಿತು. ಈ ಎಲ್ಲ ವಿಚಾರಗಳನ್ನೆಲ್ಲ ಬದಿಗಿಟ್ಟು ಸುಮ್ಮನೆ ಓದಬೇಕೆನಿಸಿದರೂ ಸಹ ಹಿಜಾಬ್  - ಕೈಯಲ್ಲಿ ಹಿಡಿದ ಮೇಲೆ ಕೆಳಕ್ಕಿಡಲಾರೆ ಅನ್ನಿಸುವಷ್ಟು ತೀವ್ರವಾಗಿ ಆವರಿಸಿಕೊಳ್ಳುವ ಗತಿಯಲ್ಲಿ ಸಾಗುತ್ತದೆ. ಇಂಗ್ಲಿಷ್ ಕ್ರೈಮ್ ಥ್ರಿಲ್ಲರುಗಳಲ್ಲಿರುವ ಪೇಸ್ ಅನ್ನು ಗುರುಪ್ರಸಾದ್ ಕನ್ನಡಕ್ಕೆ ಪರಕೀಯವೆನ್ನದ ಹಾಗೆ ಪರಿಚಯಿಸಿದ್ದಾರೆ. ಅದು ನನಗೆ ಖುಷಿಯಾಯಿತು. ಥ್ರಿಲ್ ಇಲ್ಲಿ ಗತಿ ಮಾತ್ರ. ಕಥೆಯಲ್ಲಿ ರೋಚಕತೆಯನ್ನು ಆಭರಣವಾಗಿಸಿಲ್ಲ. ಅದು ಸರಳ ಸಹಜ ತೆರೆದುಕೊಳ್ಳುವಿಕೆ. ಜಲಪಾತವೊಂದು ತನ್ನೆಲ್ಲ ವೇಗದಲ್ಲೂ ಸಹಜ ಪಾತವನ್ನು ನಮ್ಮ ಮನಸ್ಸಿಗೆ ತಂದು ಮೆತ್ತಗಾಗಿಸುವ ಹಾಗೆ ಈ ಕಥೆಯ ಮಾರ್ದವತೆಯೇ ಅದರ ವಿಶಿಷ್ಟತೆ ಕೂಡ.

ಇಷ್ಟೆಲ್ಲ ಹೇಳಿದ ಮೇಲೆ ಇನ್ನೊಂದು ಅಜೀಬ್ ವಿಷಯ ಇದೆ. ಕಥೆಗಾರ ಮೊದಲಿಗೆ words, as is well known are the great foes of reality. ಎಂಬ ಜೋಸೆಫ್ ಕಾನ್ರಡ್ ಮಾತನ್ನು ಬರೆದಿದ್ದಾರೆ. ಅವರು ಈ ಮಾತನ್ನು ಪುಸ್ತಕದಲ್ಲಿ ಪದೇ ಪದೇ ಬರುವ ಮಾಧ್ಯಮಗಳ ಅತ್ಯುಪಯೋಗ ಮತ್ತು ನಮಗೆ ಬೇಕಾದ ಮಾತನ್ನು ನಾವೇ ಹೇಳಿಸುವ ಸಂಧಿಗ್ಧ ಪರಿಸ್ಥಿತಿಗಳ ಬಗ್ಗೆ ಉದ್ಧರಿಸಿರಬಹುದು.
ಆದರೆ ಅದೇ ಪದಗಳೇ ವಾಸ್ತವದ ಗಾಯಕ್ಕೆ ನೋವಿನ ಮುಲಾಮು ಸವರಿದ ಹಾಗೆ ಲೇಖಕನಿಗೆ ಈ ಕೃತಿಯ ಮೂಲಕ ಒಲಿದಿವೆ. ನೋವಿನ ನಾಲಗೆ ಅಭಿವ್ಯಕ್ತಿಯ ಸ್ವಾತ್ರಂತ್ರವೂ ಹೌದು ಹರಣವೂ ಹೌದು ಎಂಬುದನ್ನು ಮರುನಿರೂಪಿಸಿದ ಅತ್ಯಂತ ಅಚ್ಚುಕಟ್ಟು ಕಾದಂಬರಿ ಇದು.

ಹಿಜಾಬ್  ಓದಿ. ನಿಮಗೆ ಏನನಿಸುತ್ತೆ ಹಂಚಿಕೊಳ್ಳಿ.