Monday, August 11, 2008

ಮತ್ತೆ ಸಿಗುವುದು ಬೇಕೆ..?

ಪುಟ್ಟಪುಟ್ಟ ಬಿಳಿನೀಲಿ ಹೂಗಳು
ಅಲ್ಲೊಂದು ಇಲ್ಲೊಂದು..
ಬರಿಯ ಮುಳ್ಳು ತುಂಬಿದ
ಎಲೆಗಳಿಲ್ಲದ ಪೊದೆಯ ಮಧ್ಯೆ
ಚುಚ್ಚಿ ಗಾಯವಾಗಿ ರಕ್ತಸುರಿದು
ಪೊದೆಯನ್ನೇ ಕಿತ್ತು
ಒಣಗಿಸಿ ಕತ್ತರಿಸಿ
ಬೂದಿಯಾಗಿಸಿ
ಕಲ್ಲಗೋರಿಯಲಿ ಮಲಗಿಸಿ
ಮೇಲಿಷ್ಟು ಮಣ್ಣೆಳೆದು
ಪ್ರಮಾಣ ಮಾಡಿ
ಎಪಿಗ್ರಾಫಿಯಾ ಬರೆದಿದ್ದೂ ಆಗಿದೆ
ಮತ್ತೇಕೆ ಕೆದಕುತ್ತೀಯೆ
ಏಳುವುದು ಬರಿಧೂಳು
ಕಾಲ ಕೆಳಗಿರುವುದು ಶೂನ್ಯ,
ಕಾಲು ಹೊತ್ತಿರುವ
ಮನದ ಗೂಡಲ್ಲಿ
ಸೂತಕದ ನೆರಳು.

ಮಾಗಿದ ಗಾಯವ ಕಿತ್ತು
ಒಣಗಿಸುವ ಉಪಚಾರವೇಕೆ,
ದಾರಿ ಬದಲಿಸಿದ ಮೇಲೆ
ಮತ್ತೆ ಸಿಗುವುದು ಬೇಕೆ?
ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.
ಆ ಹಾದಿಯ ಗುರಿಯೇ ಅಲ್ಲಿಗೆ -
ಯಾರೂ ಜೊತೆಯಾಗುಳಿಯದೆ
ಗಾಡಿ ಬದಲಿಸುವ ಜಂಕ್ಷನ್ನಿಗೆ.

ಇಲ್ಲ ಅವಳಿಲ್ಲ ಹುಡುಕುವುದು ಬೇಡ
ಕಲ್ಲಕೆಳಗಿನ ಕರಗಿದ ಬೂದಿಯೆಡೆಯಲ್ಲಿ
ಉಳಿದಿರಬಹುದು ಅವಳ
ಚಹರೆಯ ಕುರುಹು,
ಮೇಲೆ ಹುಡುಕುವುದು ಬೇಡ..