Wednesday, March 7, 2007

ಇವತ್ತಿನ ನೇವರಿಕೆ..

ನನ್ನ ಇಷ್ಟದ ಕಾರ್ಟೂನ್ ಸರಣಿಯ ಒಂದು ಆಪ್ತ ಚುಟುಕು..

ಇದಕ್ಕೆ ವ್ಯಾಖ್ಯಾನ ಬೇಕಿಲ್ಲವೇನೋ

[The secret to enjoying your job is to have a hobby thats even worse..]

ಕಾರ್ಟೂನ್ ಕರ್ತೃ ಬಿಲ್ ವಾಟರ್ ಸನ್.ವಿವರಗಳು ಇಲ್ಲಿ ಸಿಗುತ್ತವೆ. http://en.wikipedia.org/wiki/Bill_Watterson

Tuesday, March 6, 2007

ಗಝಲ್ ಒಂದರ ಗುಂಗಿನಲ್ಲಿ..

ಹಮ್ ಕೊ ದಿಲ್ ತಕ್ ಆನೆ ಕಾ ಆಶಾ ಥಿ

ತುಮ್ ತೊ ಜಾನ್ ತಕ್ ಆಗಯೆ..

- ಮಿರಾಝ್ ಎ ಗಝಲ್ ಎಂಬ ಧ್ವನಿಸುರುಳಿಯಲ್ಲಿ ಕೇಳಿದ ಸಾಲು.. ಆಶಾ ಭೋಸ್ಲೆ-ಗುಲಾಮ್ ಅಲಿಯವರ ಗಾಯನದಲ್ಲಿ..


ಒಂದು ಸುಂದರ ಭಾವಭರಿತ ಗಝಲ್ ಏನೆಲ್ಲ ಭಾವನೆಗಳನ್ನು ಪ್ರೇರೇಪಿಸುತ್ತದೆ..!


ದೆಯ ಗುಡಿಯೊಳಗೆ ಬರಲೆಂದು

ನಿರೀಕ್ಷೆಯ ಹೊಸ್ತಿಲಲಿ ಕಾದೆ

ನೀನು ದೊಡ್ಡವ

ಎದೆಯ ಗುಡಿಯೇನು - ಜೀವದಾಳದಲಿ ನೆಲೆ ನಿಂತೆ


ನಾನು ಕೃತಜ್ಞೆ.

Monday, March 5, 2007

ಕ್ಲೀನರ್ ಹುಡುಗನ ಖಾಲಿ ಕಣ್ಣು

ಹೊರಗೆ ಸಣ್ಣ ಮಳೆ,

ರಸ್ತೆಯ ಮೇಲೆ ನೀರಾಗಿ ಹರಿಯುವ ಕೊಳೆ;

ಕೆಫೆಟೋರಿಯಾದ ಮೂಲೆ ಮೇಜು ಬೆಚ್ಚಗಿತ್ತು,

ಜೊತೆಗೆ ಗೆಳೆಯನಿದ್ದ; ಕಾಫಿ ಸ್ಟ್ರಾಂಗಿತ್ತು,

ನೆಂಚಿಕೊಳ್ಳಲು ಗಂಭೀರ ಚರ್ಚೆಯಿತ್ತು.


ಪಕ್ಕದ ಮೇಜಿನ ಎಂಜಲೊರೆಸುವ

ಕ್ಲೀನರ್ ಹುಡುಗನಿಗೆ ದಿವ್ಯ ನಿರ್ಲಕ್ಷ್ಯ,

ನನ್ನ ಮೈಗೆ ಅಗುಳು ಸಿಡಿದು ಸಿಟ್ಟಿಗೆದ್ದೆ,

ಅವನ ಹರಿದು ಹೋಗಿದ್ದ ಕಾಲರ್ ಹಿಡಿದೆ,

ತಲೆ ಮೇಲೆತ್ತಿ ನನ್ನ ನೋಡಿದ ಕಂಗಳು

ಖಾಲಿಯಿದ್ದವು;

ಬಹುಶಃ ಎಂಜಲೊರಸೀ... ಒರಸೀ.


ಹೆದರಿದ್ದರೂ ಕೊಂಕಿದ್ದ ತುಟಿಗಳಂಚಲ್ಲಿ ಅಸಡ್ಡೆಯಿತ್ತು,

ಶಾಲೆಯಲ್ಲಿ ಓದದೇ ಬಿಟ್ಟುಬಂದ ಪದ್ಯಗಳ ಪಲ್ಲವಿಯಿತ್ತು,

ಜಿಡ್ಡುಗಟ್ಟಿದ ಕೆನ್ನೆಗಳ ಮೇಲೆ ಸೀನಿಯರ್ ಭಟ್ಟರೆಳೆದ ಬರೆಯಿತ್ತು,

ಕೆಂಪಾಗಿ ಕೆದರಿದ್ದ ಕೂದಲಡಿಯಲ್ಲಿ
ಅವನನ್ನಿಲ್ಲಿಗೆ ಕಳಿಸಿ ಕಣ್ಣೀರಿಟ್ಟ ಅಮ್ಮನಕ್ಕರೆಯಿತ್ತು,

ಜಾರುತ್ತಿದ್ದ ಚಡ್ಡಿಯ ಬೆಲ್ಟ್ ಹುಕ್ಕಿನಲ್ಲಿ

ಅವನಪ್ಪ ಕೊಟ್ಟ ಉಡಿದಾರವಿತ್ತು,


ಅವನ ಮೈಯಿಡೀ ತಿರಸ್ಕಾರವೇ ಮೂರ್ತಿವೆತ್ತಂತಿತ್ತು

ತನಗೆಟುಕದ ಎಲ್ಲ ಚಂದದ ವಿಷಯಗಳ ಬಗ್ಗೆ -

ಇಸ್ತ್ರಿ ಮಾಡಿದ ಅಂಗಿ, ಬೈಂಡು ಹಾಕಿದ ಪುಸ್ತಕ,ತಿದ್ದಿ ತೀಡಿದ ತಲೆ,

ಜೇಬುಗಳಿಂದಿಣುಕುವ, ಅಮ್ಮನೋ ಅಮ್ಮಾವ್ರೋ ಮಡಿಚಿಕೊಟ್ಟ ಕರ್ಛೀಫು -

ಎಲ್ಲದರ ಬಗ್ಗೆ ತಿರಸ್ಕಾರವಿತ್ತು.


ಕುಡಿದ, ಕುಡಿಯದ, ಚೆಲ್ಲಿದ ಕಾಫಿ ಅವನಿಗೆ ಒಂದೇ ಆಗಿತ್ತು.

ತಿಂಡಿ ಆಗಷ್ಟೇ ಸರ್ವ್ ಮಾಡಿದ್ದೂ,ಉಂಡು ಬಿಟ್ಟೆದ್ದಿದ್ದೂ ಅವನಿಗೆ ಸಮಾನವಿತ್ತು.

ಈಗಾಗಲೇ ಹರಿದಿದ್ದ ಕಾಲರ್ ಮತ್ತಷ್ಟು ಹರಿವುದೆಂಬ ಆತಂಕವಿತ್ತು.

ಗಲ್ಲಾದ ಹಿಂದಿದ್ದ ಯಜಮಾನನ ಕಾಲಿಂದ ಒದೆ ತಿನ್ನುವ ಹೆದರಿಕೆಯಿತ್ತು.


ಹೊರಗೆ ಸಂಘ, ಸಂಘಟನೆಗೆಳ ಕೂಗು ಆಕಾಶಕ್ಕೇರಿತ್ತು

ಬಾಲಕಾರ್ಮಿಕರ ಬವಣೆಯ ವಿರುಧ್ಧ.

ಆಯೋಗಗಳ ಮೇಲೆ ಬೆಣ್ಣೆ ಸವರಲು ಸರ್ಕಾರವಿತ್ತು.


ಆಕಾಶಕ್ಕೇರಿದ ಕೂಗು ಹೋಟೆಲೊಳ ಹೊಕ್ಕಿರಲಿಲ್ಲ

ನಮ್ಮೊಳಹೊಕ್ಕಿರಲಿಲ್ಲ.

ಒಬ್ಬ ಹುಡುಗ ಲೋಟ ತೊಳೆದಾಗ

ಇನ್ನೊಬ್ಬ ಕಡೆದ ಬೆಣ್ಣೆ ತೆಗೆಯುತ್ತಿದ್ದ

ದೋಸೆಗೆ ಸವರಲು,


ನಾನು ಕಾಲರ್ ಹಿಡಿದ ಹುಡುಗನ ಕಣ್ಣು ಖಾಲಿಯಾಗಿತ್ತು

ಬಹುಶಃ ಎಂಜಲೊರಸೀ.. ಒರಸೀ. . .

ಸುವರ್ಣಾ ನದೀತೀರದಲ್ಲೊಂದು ಸಂಜೆ..

ಬಿಸಿಲ ಧಗೆಯ ಕಡಲ ನಾಡಿನ

ಆಸು ಪಾಸಿನ ಹಳ್ಳಿ

ಇಲ್ಲಿ ಭೋರ್ಗರೆವ ಕಡಲಿಲ್ಲ,

ಆಡು ಬಾ ಎಂದು ಕರೆವ ನುಣ್ಪು ಮರಳಿಲ್ಲ

ವೀಕೆಂಡಿಗೆ ಬೀಚಿಗೆ ಧಾವಿಸುವ ಜನಜಂಗುಳಿಯಿಲ್ಲ


ಮೌನ ಹೊದ್ದು ಕಾದಿರುವ ಕಾಡ ಸೆರಗು

ಅಲ್ಲೊಂದು ಇಲ್ಲೊಂದು ತಪಸ್ಸಿಗೆ ಕೂತ ಮನೆ

ಕಾನ ಗಾನದ ಮೌನರಾಗಕೆ ಲಯ ಬೆರೆಸಿ

ಹಾದಿಗರಿಗೆ ಕಾದು ಮಲಗಿರುವ ದಾರಿ..


ಸುಮ್ಮನಿರಲಿ ಹೇಗೆ..

ನೋಡಲ್ಲಿ ಮುಳುಗುತಿಹ ದಿನಮಣಿ ಎಂದು

ಉಲಿದುಲಿದು ಗೂಡು ಸೇರುತ್ತಿರುವ

ಹಕ್ಕಿ ಪ್ರಪಂಚ..


ನಾವು ಹೊರಟ ದಿಕ್ಕು,

ಅರಿಶಿಣಕುಂಕುಮದ ಕಳೆ ಹೊತ್ತು

ಕಾಡುಹೂಗಳ ಪರಿಮಳ ಮುಡಿಗಿಟ್ಟು,

ಕಾಲ್ದೊಳೆಯಲು ಬೆಚ್ಚನೆ ನೀರಿನೊಡನೆ ಕಾದು ನಿಂತಿತ್ತು..


ಇಲ್ಲ ಕಡಲಿಲ್ಲ,

ಸಾಗರದೊಡಲ ತುಂಬುವ ನದಿಯಿತ್ತು,

ಹಗಲಿನ ಬಿಸಿಲು ಆಗಷ್ಟೇ ಸ್ನಾನ ಮಾಡಿ ಹೋಗಿತ್ತೇನೋ,

ಸಂಜೆಗೆಂಪಲಿ ಹೊಳೆದ ನೀರು ಇನ್ನೂ ಬೆಚ್ಚಗಿತ್ತು

ಸಾಗರ ಸಮಾಗಮದ ಬೆವರು ಬೆರೆತು ಉಪ್ಪಾಗಿತ್ತು


ಅಜ್ಜನೊಬ್ಬನಿದ್ದ ಆಚೆ ದಡದಲಿ,

ಮರದ ದೋಣಿಯ ಕೈಗೋಲು ಹಿಡಿದು..

ನಾವು ಅಭ್ಯಾಗತರ ದಡ ಸೇರಿಸಲು ಬಂದವನ

ಬಾಯ ಬೀಡಿಯಲಿ

ಪಡುವಣದಲಿ ಮುಳುಗುವವನ ಕಿಡಿಯಿತ್ತು.


ಚಂದದ ಹೊಳೆಮಧ್ಯ..
ದೋಣಿ ಚಲನ ನಿಂತರೆಕ್ಷಣ..

ಅನಾವರಣಗೊಂಡಿತ್ತೊಂದು ಸುಂದರ ಸಂಜೆ!

ಅಲ್ಲಿ ಹೊಳೆಯಿರಲಿಲ್ಲ,
ಹೊಳವಿತ್ತು
ಗಾಳಿಯದು ಬೀಸುತ್ತಿಲ್ಲ,
ಸಂಜೆ ಕಟ್ಟಿದ ಕವನಗಳ ಪಿಸುನುಡಿಯುತ್ತಿತ್ತು
ನೀರಲೆಗಳಲ್ಲಿ
ಸೂರ್ಯ ಮೂಡಿಸಿ ಹೋದ ಭಾವಚಿತ್ತಾರವಿತ್ತು
ಧಾವಿಸಿ ಬರುವ ಕತ್ತಲ ಮೊಗದಿ
ಸಂಜೆಬೆಳಕಿನ ಮುಂದಲೆಬೊಟ್ಟು..
ಕವಿಯುವ ಕತ್ತಲೆಯೂ ಮುದವೆನಿಸಿತ್ತು.


ಮೋಡಗಳ ಕಿಟಕಿ ಸರಿಸಿ ತೂರಿಬಂದ
ಚೂರಾದ ಚಂದ್ರ..


ಬಾನ ಬೆಳದಿಂಗಳು ಮನಸ್ಸಿಗಿಳಿಯುವುದೆಂತು..

ಗ್ರಹಗತಿ ಜಾತಕ ಹೊಂದಬೇಕೆ?
ಕಾಡಸೆರಗಿನ ಈ ಹೊಳೆ ದಾಟುವುದೆ ಸಾಕೆ!


ಜಾತಕ ಗ್ರಹಗತಿಯೋ, ಹೊಳೆದಾಟುವುದೋ

ಅನುಭವಿಸುವ ಮನ ಭಾವತೀವ್ರತೆಯಲಿ ತೊಯ್ದಿರಲು

ಬೇರಾವ ಹೊಂದಾಣಿಕೆ ಯಾಕೆ?

Friday, March 2, 2007

ಕೇಳಬಾರದಿತ್ತು . . ಆದ್ರೂ. .

ಹೆಜ್ಜೆ ಮೂಡಿರದ ಹಾದಿ,

ಗುರಿಯಿರದ ಪಯಣ,

ನಾನು ಹಿಡಿದಿದ್ದೇ ದಿಕ್ಕು.


ಕಗ್ಗತ್ತಲ ದಾರಿಗೆ

ಬೆಳಕು ಚೆಲ್ಲಿದ್ದು

ನಿನ್ನ ಕಣ್ಗಳ ಜೋಡಿ ನಕ್ಷತ್ರ.


ಹೆಜ್ಜೆಗೊಮ್ಮೆ ಧುಮ್ಮಿಕ್ಕುವ

ಅಳಲಿನ ಜಲಪಾತಕ್ಕೆ

ಕಟ್ಟೆ ಕಟ್ಟಿದ್ದು

ನಿನ್ನ ನೇವರಿಕೆ.


ಏನೂ ಬೇಡವೆನಿಸಿ

ಎಲ್ಲ ಕಳಚಿಕೊಳ್ಳಲು

ನಿರ್ಧರಿಸಿದಾಗ-

ಎದೆಗೊತ್ತಿ ಹಿಡಿದು,

ಅಲ್ಲಿ ದೂರದ ಹಸಿರುಕಾಡಿನ

ಬೆಟ್ಟದಂಚಿಂದ ಮೂಡುತಿದ್ದ

ಸೂರ್ಯನ ಎಳೆಗಿರಣಗಳನ್ನ

ಕಣ್ಮುಂದೆ ಹರಡಿದ್ದು

ನಿನ್ನ ನೋಟ.


ರಾತ್ರಿಯ ನೀರವತೆಗೆ

ಕಂಗೆಟ್ಟು ಮನ ಮರುಗಿದಾಗ -

ಹರಿವ ನದಿಯ ನೀರ ಜತೆ

ಮಿಲನಗೊಂಡ,

ಬೆಳದಿಂಗಳ ಪ್ರತಿಫಲನದ ರಾಗಮಾಲಿಕೆ

ಕೇಳಿಸಿದ್ದು ನಿನ್ನ ಜಾದೂ.


ಈ ಪಯಣ ಮುಗಿವವರೆಗೂ

ಜೊತೆಗಿರುವ ಭಾಷೆ ಕೊಟ್ಟಿದೀಯ.


ಹೀಗೆ ಕೇಳಬಾರದು

ಆದರೆ ಜೀವ ಸುಮ್ಮನಿರುತ್ತಿಲ್ಲ. . .


ದೇವರೇ

ಈ ಪಯಣ ಮುಗಿಯದಿರಲಿ,

ಕೊನೆಯ ತಿರುವಿಗೆ

ಬರುವ ಮೊದಲೇ

ದಾರಿ ತಪ್ಪಿ ಹೋಗಲಿ.

**************

ಅವತ್ಯಾವತ್ತೋ ವರ್ಷಗಳ ಹಿಂದೆ ಬರೆದಿದ್ದು..
ಇವತ್ತೂ ಇನ್ನೂ ಹಂಗೇ ಅನ್ನಿಸ್ತಿದೆ.. ನಾಳೆಯೂ ಅಷ್ಟೆ..,
ಅದೃಷ್ಟದ ಸಂಗತಿಯೆಂದರೆ ದೇವರು ಒಪ್ಪಿಕೊಂಡಿದ್ದಾನೆ.. :-)

Thursday, March 1, 2007

ನಗೆ ಹೂವಿನ ಬಳ್ಳಿ..

ಎರಡು ದಿನದಿಂದ ಆಕಾಶಕ್ಕೆ ತೂತು ಬಿದ್ದಂತೆ ಜಡಿಯುತ್ತಿದ್ದ ಮಳೆ ಸುಸ್ತಾಗಿ ಗಿರಿಧಾಮಗಳಿಗೆ ವಿಶ್ರಾಂತಿಗೆ ಹೋಗಿತ್ತು. ಸಧ್ಯ ಅಂಧುಕೊಳ್ಳುತ್ತ ಬೆಳಗ್ಗೆ ಸ್ವಲ್ಪ ಪುಕ್ಕಲುತನದಲ್ಲೆ ಮೋಡದ ಮರೆಯಿಂದ ಹೊರಗೆ ಇಣುಕಿದ್ದ ಸೂರ್ಯ, ಮಳೆಯ ಬೆನ್ನು ನೋಡಿದವನೆ ಓಹೊ.. ಚಿಗಿತುಕೊಂಡು ಚುರುಚುರು ಸುಡಲು ಶುರು ಮಾಡಿದ್ದ.

ನಾನೇನೋ ಜೋರಿನಿಂದಲೆ ಹೆಜ್ಜೆ ಇಟ್ಟು ಬಸ್ಟಾಪಿಗೆ ಬಂದು ನೋಡುತ್ತೇನೆ; ಅರೆ ಇವಳು ಇನ್ನೂ ಅಲ್ಲೆ ತಿರುವಿನಲ್ಲೆ ಇದ್ದಾಳೆ. ನಿಧಾನವಾಗಿ ಇಟ್ಟು ಬರುತ್ತಿದ್ದ ಹೆಜ್ಜೆ, ಹತ್ತಿರವಾಗುತ್ತಲೆ ಮುಖ ನೋಡಿದೆ. ನಿರಿಬಿದ್ದ ಕೆನ್ನೆಯ ಬಂಗಾರಕಾಂತಿಗೆ ಕಣ್ಣುಗಳು ತಮ್ಮ ಬೆಳ್ಳಿ ಬೆಳಕಿಂದ ಎಂದಿನಂತೆ ಸ್ಫರ್ಧೆ ಹೂಡಿದ್ದುವಾದರೂ ಹಣೆಯ ಮೇಲೆ ಮುತ್ತಿನ ಮಣಿಗಳು ಮೂಡಿದ್ದವು. ಹರೆಯವಿಡೀ ನನ್ನ ಇಷ್ಟಾನಿಷ್ಟಗಳಿಗೆ ಓಗೊಟ್ಟು ನನ್ನ ಸಮಕ್ಕೂ ಮನೆಯಲ್ಲಿ ದುಡಿದು, ಮಕ್ಕಳ ದೇಖರೇಖೆ ನೋಡಿಕೊಂಡ ಗೃಹ ಲಕ್ಷ್ಮಿ. ಮೊಮ್ಮಕ್ಕಳು ಹೈಸ್ಕೂಲಿನಲ್ಲಿದ್ದರೂ ಇವತ್ತಿಗೂ ಅಜ್ಜಿಯ ಕೈತುತ್ತೇ ಆಹಾರ. ಈಗ ಸ್ಕೂಲಿಗೆ ರಜೆ ಬಂತೆಂದು ಅವರು ಮಾವನ ಮನೆಗೆ ಹೋಗಿ ಅಜ್ಜಿಗೂ ಬಿಡುವಿನ ಕಾಲ. ಇಂದಿರಾನಗರದಲ್ಲಿದ್ದ ಬಾಲ್ಯಸಖಿ, ತಂಗಿಯ ಮನೆಗೆ ಒಂದು ವಿರಾಮದ ಭೇಟಿಗಾಗಿ ನಿನ್ನೆ ಕೇಳಿದಾಗ ನನಗಂತೂ ಖುಷಿಯೇ ಆಗಿತ್ತು. ನಾನೇನು ತಿರುಗಾಲ ತಿಪ್ಪ, ಇವಳಿಗಾದರೋ ದಿನಾ ಮನೆಯಲ್ಲಿ ಬೆಳಿಗ್ಗೆ ಮೊಮ್ಮಕ್ಕಳ ಸವರಣೆ, ಪಕ್ಕದ ಬೀದಿಯ ದೇವಸ್ಥಾನದ ಹೂಬತ್ತಿ, ಮಧ್ಯಾಹ್ನದ ಟೀವಿ ಧಾರಾವಾಹಿ, ಕೋಳಿನಿದ್ದೆ, ಸಾಯಂಕಾಲದ ಬಾಯ್ರುಚಿಗಳ ತಯಾರಿಕೆ, ಸಂಜೆ ಯಥಾಪ್ರಕಾರ ಟೀವಿ, ಹೀಗೇ ಸಮಯ ಕಳೆದುಬಿಡುತ್ತಾಳೆ. ನಾನು ಗುಂಡುಗೋವಿ ಮನೇಲೆ ಕುಳಿತು ಮಾಡೋದಾದ್ರೂ ಏನು? ಮನೇಲಿದ್ರೆ ಇವಳೆಲ್ಲಿ ಸುಮ್ಮನೆ ಬಿಡುತ್ತಾಳೆ? ನಾನು ಮನೆಯಲ್ಲಿದ್ದಾಗಲೇ ಇವಳಿಗೆ ಕೊತ್ತಂಬರಿ ಕಟ್ಟು ಬೇಕನ್ನಿಸುತ್ತದೆ. ನಿಂಬೆ ಹಣ್ಣು ಖಾಲಿಯಾಗಿಬಿಟ್ಟಿರುತ್ತದೆ. ಏನೂ ಇಲ್ಲದಿದ್ದರೆ ಲೈಟು ಬಿಲ್ಲು ಕಾಯುತ್ತಿರುತ್ತದೆ. ಹೀಗಾಗೇ ನಾನು ಬೆಳಿಗ್ಗೆಯ ತಿಂದಿ ಕರಗುವುದಕ್ಕೆ ಮುಂಚೆ ಇವಳ ಕೈಯಿಂಧ ಸ್ಟ್ರಾಂಗ್ ಕಾಫಿ ಒಂದು ಲೋಟ ಇಳಿಸಿ ಗಡೀಪಾರಾಗಿಬಿಟ್ಟರೆ ಅಡಿಗೆಮನೆಯಿಂದ ಇಂಗಿನ ಒಗ್ಗರಣೆ ತಂಬುಳಿಯಲ್ಲಿ ಸೊಂಯ್ಯೆನ್ನುವಾಗಲೆ ವಾಪಸ್ಸಾಗುವುದು.

ಊಟವಾದ ಮೇಲೆ ಒಂದೊಂದು ದಿನ ಅವಳ ಕರಕರೆಗೆ ಅವಳ ಮೆಚ್ಚಿನ ಸೀರಿಯಲ್ಲು ನೋಡಿ ವಾದವಿವಾದಲ್ಲಿ ತೊಡಗುತ್ತೇನಾದ್ರೂ ದಿನಾ ಊಟ ಮುಗಿದ ಕೂಡಲೆ ನಿದ್ರಾದೇವತೆಯ ಅರ್ಚನೆಯಲ್ಲೆ ಸಮಯಹೋಗಿಬಿಡುತ್ತದೆ. ಸಂಜೆ ಕಾಫಿಯ ಘಮಘಮ ಬರುತ್ತಲೂ ಅದು ಹ್ಯಾಗೋ ಪಂಚೇಂದ್ರಿಯಗಳು ಸರ್ರನೆ ಎಚ್ಚರಾಗಿ ಇಹಲೋಕಕ್ಕಿಳಿಯುತ್ತೇನೆ. ಕಾಫಿ ಬೀಳುತ್ತಲೇ ಗಾಡಿ ಓವರಾಯಿಲ್ಲಾಗಿ ಚುರುಕಾಗುತ್ತದೆ(ಮೊನ್ನೆ ಮೊಮ್ಮಗ ನಾನು ಹೀಗೆ ಹೇಳಿದಾಗ ನಗುತ್ತಿದ್ದ - ಅಜ್ಜಯ್ಯ ಅದು ಓವರಾಯಿಲ್ಲಲ್ಲ ಓವರ್ ಹಾಲ್ ಅನ್ ಬೇಕು.. ಅಂತ). ಸ್ನೇಹಿತರೊಡನೆ ವಾಯುವಿಹಾರ,ಹರಟೆಗಳನ್ನು ಮುಗಿಸಿ, ಮನೆಗೆ ವಾಪಸ್ಸಾದರೆ ಅಲ್ಲಿ ಧಾರಾವಾಹಿ ಲೋಕ. ಅದು ಕೊನೆಗೊಳ್ಳುತ್ತಲೆ ನನ್ನವಳೂ,ಸೊಸೆಯೂ ಬಡಿಸುವ ನಳಪಾಕ, ಇದು ಮುಗಿದೊಡನೆ ಮೊಮ್ಮಕ್ಕಳೊಡನೆ ಕಥಾಲೋಕ, ಅದು ಮುಗಿಯುವಷ್ಟರಲ್ಲಿ ತನ್ನೊಳಗೆ ಜಾರಿಸಿಕೊಳ್ಳುವ ನಿದ್ರಾಲೋಕ. ಹೀಗೇ ಲೋಕಾಂತರಗಳ ಪಯಣದಲ್ಲಿ ನಾನೊಬ್ಬ ನಿತ್ಯ ಪಯಣಿಗ.

ನನ್ನ ಕರಕರೆ ಹಾಗಿರಲಿ, ಅದೋ ಇವಳು ಬಂದು ಬಸ್ಟಾಪಿನಲ್ಲಿ ಎರಡು ಕ್ಷಣ ಕೂತು ಬೆವರೊರೆಸಿಕೊಳ್ಳುವಷ್ಟ್ರಲ್ಲಿ ಬಂದೇ ಬಿಡ್ತು 201. ಕೈ ಮಾಡಿ ಹತ್ತುವಷ್ಟರಲ್ಲಿ ಸಾಕಾಯ್ತಪ್ಪ. ಡ್ರೈವರನಂತೂ ತಾನೇ ಪೆಟ್ರೋಲು ಕುಡಿದುಬಿಟ್ಟಿದ್ದಾನೋ ಎಂಬಥ ಯಮಸ್ಪೀಡಿನಲ್ಲಿದ್ದ. ಯಾವಾಗಲೂ ಬಸ್ಸಲ್ಲಿ ಓಡಿಯಾಡುವ ನಾನೇ ಉಸಿರು ಬಿಡುತ್ತಿದ್ದರೆ ಇನ್ನು ನನ್ನವಳ ಪಾಡೇನು. ಪುಣ್ಯಕ್ಕೆ ಇಬ್ಬರಿಗೂ ಜೊತೆಗೇ ಸೀಟು ಸಿಕ್ಕಿತು. ನಾವು ಹತ್ತಿದ್ದು ಪುಷ್ಪಕ್ ಬಸ್ಸು ಬೇರೆ. ಹಿಂದೆ ಒರಗಲು ಆರಾಮಾಗಿತ್ತು. ಟಿಕೆಟ್ ಕೊಳ್ಳಲು ಪರ್ಸಿಗೆ ಕೈಹಾಕಿದಾಗ ಸಿಕ್ಕಿಬಿಟ್ಟಿತು. ಗುಂಡಗೆ, ತಣ್ಣಗೆ ಇದ್ದ ಮ್ಯಾಂಗೋಬೈಟ್. ಟಿಕೆಟ್ ಕೊಂಡವನೆ ಅತ್ತಿತ್ತ ನೋಡಿದೆ. ಎಲ್ಲ ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿದ್ದವರು. ನಾವು ಕೂತಿದ್ದು ಮೂರು ಜನ ಕೂರುವ ಸೀಟು. ಕಿಟಕಿಯ ಪಕ್ಕದಲ್ಲಿ ಯಾರೋ ಯುವತಿ. ಆಫೀಸಿಗೆ ಹೊರಟವಳಿರಬೇಕು, ಕೈಯಲ್ಲೊಂದು ಕಥೆಪುಸ್ತಕ ಬೇರೆ ಇತ್ತು. ನನ್ನವಳು ನನ್ನ ಆ ಯುವತಿಯ ಮಧ್ಯದಲ್ಲಿ ಸುಧಾರಿಸಿಕೊಳ್ಳುತ್ತಾ ಕುಳಿತಿದ್ದಳು. ನನಗೆ ಮಮತೆ ಉಕ್ಕಿ ಬಂತು.

ಇವಳೇ ಅಲ್ಲವೆ ನನಗೆ ಜಾಂಡೀಸಾದಾಗ ದಿನವಿಡೀ ಮಗ್ಗುಲಲ್ಲಿ ಕೂತು ನನ್ನ ಇಷ್ಟದ ಪುಸ್ತಕಗಳನ್ನು ಓದಿ ಹೇಳಿದ್ದು, ಬೇಳೆ ಸಾರಿನ ಚಪ್ಪೆ ಊಟ ರುಚಿಸದೆ ನಾನು ಹಟ ಮಾಡುವಾಗ ನಯದಿಂದ, ನಲವಿಂದ ನನ್ನ ಮನವೊಲಿಸಿ ತಟ್ಟೆ ಖಾಲಿ ಮಾಡಿಸುತ್ತಿದ್ದಿದ್ದು. ಇವಳಲ್ಲವೆ ನಾನು ಕಾಲುನೋವೆಂದಾಗಲೆಲ್ಲ ಛೇಡಿಸುವ ಮಾತುಗಳನ್ನಾಡುತ್ತಲೇ ಎಣ್ಣೆ ಸವರಿ ಒತ್ತುವುದು, ಮಧ್ಯಾಹ್ನ ಬಳಲಿದಂತೆ ಕಂಡರೆ ನಿಂಬೆ ಹುಳಿ ಹಿಂಡಿ ಪಾನಕ ಕೊಡುವುದು. ಸಣ್ಣ ಸಣ್ಣ ವಿಷಯಕ್ಕೆಲ್ಲಾ ಗಾಬರಿ ಪಟ್ಟುಕೊಳ್ಳುವ ಹೆಂಡತಿಯ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಲೇ, ಕಣ್ಣೂ ಕೈಕಾಲು ಆಡದ ಧಾವಂತದಲ್ಲಿ ನನ್ನ ಕೈಹಿಡಿದು ನಡೆಸಿಕೊಂಡು ಹೋಗುವವಳು. ಧಾರಾವಾಹಿಯ ಕ್ಷುಲ್ಲಕ ಸಂಗತಿಗಳಿಗೂ ನನ್ನೊಂದಿಗೆ ವಾದ ಮಾಡಿ ಪ್ರತಿಪಕ್ಷದಲ್ಲೆ ಇಧ್ಧುಕೊಂಡೂ ಈ ಬದುಕಿನ ಒಗಟನ್ನ ನನ್ನೊಡನೆ ಜೊತೆಜೊತೆಯಾಗೇ ಬಿಡಿಸಿದವಳು...

ಇಂತಹ ಅಪರೂಪದ ದೇವಿ ಈಗ ಬಸ್ಸಿನ ಕುಲುಕಿಗೆ, ಬಿಸಿಲ ಧಗೆಗೆ ಪಕ್ಕಾಗಿ ಮುದುಡಿ ಕುಳಿತಿದ್ದರೆ ಸುಮ್ಮನಿರಲು ನನಗೆ ಮನಸ್ಸಾದ್ರೂ ಹ್ಯಾಗೆ ಬರುತ್ತೆ ನೀವೇ ಹೇಳಿ. ಮ್ಯಾಂಗೋಬೈಟನ್ನ ತೆಗೆದು ಅವಳ ಮುದುರುಮುದುರಾಗಿದ್ದ ಅಂಗೈ ಬಿಡಿಸಿ ಇಟ್ಟೆ. ಬಸ್ಸಿನ ಕುಲುಕಾಟದಲ್ಲಿ ಅವಳಿಗೆ ಬಿಡಿಸಲು ಆಗಲಿಲ್ಲ. ಕೊಡಿಲ್ಲಿ ಎಂದವನೆ ಬಿಡಿಸಿ ಬಾಯಲ್ಲಿಟ್ಟುಬಿಟ್ಟೆ.

ಓಹ್! ನನಗೆ ನನ್ನನ್ನೇ ಮರೆತುಹೋದಂತಾಯಿತು. ಅವತ್ತು ಮದುವೆ ಮುಗಿದು ನಮ್ಮನೆಯ ಗೃಹ ಪ್ರವೇಶ ಮಾಡುವಾಗ, ನನ್ನ ತಂಗಿ ಇವಳ ಕೈಹಿಡಿದು ನಿಲ್ಲಿಸಿ ನನ್ನ ಹೆಸರು ಹೇಳಲು ತಡೆದಾಗ ಬಂತಲ್ಲಾ ಅದೇ ನಾಚಿಕೆಯ ತೆರೆ, ಈಗ ಇಲ್ಲಿ!

"ಶ್ಶಿ, ಸುಮ್ಮನಿರಿ ಯಾರಾದರೂ ನೋಡಿ ಏನೆಂದುಕೊಂಡಾರು" ಅಂತ ಬಯ್ಯುತ್ತಾ ಪಕ್ಕದಲ್ಲಿ ಕುಳಿತಿದ್ದ ಹುಡುಗಿಯ ಕಡೆ ಕಡೆಗಣ್ಣಿನ ನೋಟ ಬೀರಿದಳು. ಆ ಹುಡುಗಿ ನಮ್ಮನ್ನ ಗಮನಿಸಿಬಿಟ್ಟಿದ್ದಳು. ಏನೂ ನೋಡದವರ ಹಾಗೆಯೇ ಅವಳು ಕುಳಿತಿದ್ದರೂ ಅವಳ ತುಟಿಯಂಚಿನಲ್ಲಿ ಹುಟ್ಟಿದ ನಗುವಿನ ಚಿಗುರು ಕೆನ್ನೆಯ ಕುಳಿಗಳವರೆಗೂ ಬೆಳೆದೇ ಬಿಟ್ಟಿತ್ತು.

ಆದ್ರೆ ನನಗೇನೂ ನಾಚಿಕೆಯಾಗಿರಲಿಲ್ಲ. ಯಾಕಾಗ್ಬೇಕೂಂತೀನಿ. ಅದನ್ನೆ ಕೇಳಿದೆ ನನ್ನವಳನ್ನ. "ಏನಂದ್ಕೋತಾರೆ ಯಾರಾದ್ರೂ? ಅಜ್ಜನಿಗೆ ಅಜ್ಜಿಯೆಂದರೆ ತುಂಬ ಪ್ರೀತಿ ಅಂತ ಅಂದುಕೊಳ್ತಾರೆ. ಅದರಲ್ಲೇನಪ್ಪಾ ತಪ್ಪು? ಅದು ಸತ್ಯ ತಾನೇ. ಸ್ವಲ್ಪ ರೊಮ್ಯಾಂಟಿಕ್ ಆಗಿರೋವ್ರೇನಾದ್ರೂ ನೋಡಿದ್ರೆ ಆ ದೇವರ ಹತ್ರ "ನಾನೂ ಅಜ್ಜಿಯಾದಾಗ, ನನ್ನ ಮೊಮ್ಮಕ್ಕಳ ಅಜ್ಜ ನನಗೂ ಹೀಗೇ ಬಾಯಲ್ಲಿ ಚಾಕಲೇಟಿಡುವಂತೆ ಮಾಡಪ್ಪಾ, ತಿರುಗಿ ಅವನ ಬಾಯಿಗೆ ಹಾಕಲು ನಾನೂ ಒಂದು ಚಾಕಲೇಟು ಇಟ್ಕೊಂಡಿರ್ತೀನಿ" ಅಂತ ಪ್ರಾರ್ಥಿಸಿರುತ್ತಾರೆ. ಏನಂತೀಯಾ ಅಂದೆ. ನನ್ನವಳ ಕಣ್ಣ ಕಾಂತಿ ಹೌದು ಹೌದು ಅಂತ ಕೂಗಾಡುತ್ತಿದರೂ ಕೇಳಿಸಿಕೊಳ್ಳದ ಹಾಗೆ ಆ ಪುಟ್ಟ ಬಾಯಿ "ಶ್ಶಿ ಹೋಗಿ, ನಿಮ್ ದೊಂದು ಮಳ್ಳು ವೇಷ" ಅಂತ ಸುಳ್ಳಾಡಿಯೇಬಿಟ್ಟಿತು. ಆ ಸುಳ್ಳಿಗೆ ತಕ್ಕ ಶಿಕ್ಷೆ ಕೊಡಲು ಅದು ತಕ್ಕ ಸಮಯ ಮತ್ತು ಜಾಗ ಎರಡೂ ಆಗಿರಲಿಲ್ಲವಾಗಿ ಅವಳ ತುಂಟ ಬಾಯಿ ಬಚಾವಾಯ್ತೆನ್ನಿ. ಈಗ ನಾನೂ ಸ್ವಲ್ಪ ಕಡೆಗಣ್ಣಿನಿಂದಲೇ ಕಿಟಕಿಯ ಹುಡುಗಿಯ ಮುಖ ನೋಡಿದೆ. ಹೋ ಈಗಂತೂ ನಮ್ಮ ಮಾತು ಅವಳಿಗೆ ಚಾಚೂ ತಪ್ಪದೆ ಕೇಳಿಸಿದ್ದರ ಫಲವಾಗಿ, ಆಗ ಕೆನ್ನೆಯ ಕುಳಿಯವರೆಗಷ್ಟೆ ಬಂದಿದ್ದ ನಗುವಿನ ಚಿಗುರು ಈಗ ಮುಖಮಂಡಲವಿಡೀ ಹಬ್ಬಿ ಹೂಬಿಟ್ಟಿತ್ತು. ಆದರೂ ಸಭ್ಯತೆಯ ಎಲೆಯ ಮರೆಯಡಿ ಆ ನಗೆಹೂಗಳನ್ನ ಅಡಗಿಸಿಡಲು ಆಕೆ ಪ್ರಯತ್ನವನ್ನಂತೂ ಮಾಡುತ್ತಿದ್ದಳು.

ಒಂದೆರಡು ಸಾರಿ ಚಾಕಲೇಟನ್ನು ಚೀಪುವಷ್ಟರಲ್ಲಿ ನನ್ನವಳ ತಲೆಯ ಬಲ್ಬು ಹೊತ್ತಿಕೊಂಡಿತು. "ಅರೇ ನಿಮಗೆಲ್ಲಿ, ನೀವು ತಿನ್ನಲೆ ಇಲ್ಲ್ವೇ" ಎಂದುಲಿಯುವಾಗ ಅವಳ ಕಂಠದಲ್ಲಿ ಕ್ಷಣಗಳ ಮುಂಚೆ ಕಾಣಿಸಿದ್ದ ನಾಚಿಕೆಯ ಸೋಂಕೂ ಇರಲಿಲ್ಲ. ಆದರೆ ನನಗೆ ಮಾತ್ರ ಸ್ವಲ್ಪ ನಾಚಿಕೆಯಾಯ್ತು. ಮಾತು ಕೇಳಿಸದವನಂತೆ ಆ ಕಡೆ ತಿರುಗುವ ಮುನ್ನ ಕಿಟಕಿಯ ಹುಡುಗಿಯ ಕಡೆಗೊಮ್ಮೆ ನೋಡಿದರೆ ಈಗ ಅವಳ ನಗುವಿನ ಚಿಗುರು ಕಂಗಳಿಂದಲೂ ಇಣುಕುತ್ತಿತ್ತು. ಇದಾವುದನ್ನೂ ಗಮನಿಸದ ನನ್ನಾಕೆಯ ಮಾತು ನನ್ನ ಸಂಕಷ್ಟಕ್ಕೆ ಮತ್ತೂ ತುಪ್ಪ ಹೊಯ್ದಿತು.

"ನನ್ನ ಬಾಯಿಗೆ ಚಾಕಲೇಟು ಇಡುವಾಗ ಮಾತ್ರ ನಿಮಗೆ ನಾಚಿಕೆ ಗೀಚಿಕೆ ಏನೂ ಇರಲಿಲ್ಲ, ಈಗೆಲ್ಲಿಂದ ಬಂತೋ. ಅದೂ ಪಾಪ ವಯಸ್ಸಾಗಿದೆ, ಬಿಸಿಲೂ, ಶೆಖೆಗೆ ಒಂದು ಚಾಕಲೇಟು ತೆಗೆದು ನೀವೇ ಬಾಯಲ್ಲಿಟ್ಟುಕೊಳ್ಳಿ ಅಂತ ನಾನು ಹೇಳಿದ್ದಕ್ಕೆ ಇಷ್ಟು ನಾಚಿಕೆಯೇ! ರಾಮ ರಾಮ,ಈ ಗಂಡಸರ ಹಣೆಬರಹವೆ ಇಷ್ಟು" ಅಂತ ನನ್ನ ಜಾತಿಗಿಷ್ಟು ಮಂತ್ರ ಹೇಳಿದಳು. ಅವಳ ಕಳಕಳಿಯೇ ಹೀಗೆ. ಯಾವಾಗಲೂ ಸಿಡುಕಿನ ಸೀರೆ ಹೊದ್ದುಕೊಂಡೇ ಇರುತ್ತದೆ. ಒಂದೊಂದು ಸಲ ಕಿವಿಹಿಂಡುವ ರೇಶ್ಮೆ ಸೀರೆಯೂ ಇರುತ್ತದೆ. ಆದರೆ ಅದು ಎಲ್ಲರ ಎದುರಿಗಲ್ಲ. ಗರ್ಭಗುಡಿಯ ಮಿಣುಕುದೀಪದ ಬೆಳಕಿನಲ್ಲಿ ಮಾತ್ರ. ನನ್ನ ದೇವತೆಯ ಆಗ್ರಹ ಅನುಗ್ರಹಗಳ ಬಗ್ಗೆ ಬರೆಯಲು ಹೊರಟರೆ ಕಾದಂಬರಿಯೇ ಆದೀತು ಬಿಡಿ.

ಅರೆ ಆ ಕಿಟಕಿಯ ಹುಡುಗಿಯ ಸ್ಟಾಪು ಬಂತೂಂತ ಕಾಣುತ್ತೆ. ಎದ್ದು ಹೊರಡಲು ಸವರಿಸುತ್ತಿದ್ದಾಳೆ. ಎಷ್ಟೇ ಮರೆಮಾಚಿದರೂ ಆ ತುಟಿಯಂಚಿನ ಕಿರುನಗೆಯ ಹೂವೊಂದು ಹೊರಗೆ ಇಣುಕುತ್ತಲೇ ಇದೆ. ಅವಳು ಅಜ್ಜಿಯಾದಾಗ ಹೇಗಿರುತ್ತಾಳೋ ಅನ್ನಿಸಿತು.

ಅಷ್ಟರಲ್ಲೆ ಆ ಹುಡುಗಿ ಎರಡು ಮ್ಯಾಂಗೋ ಬೈಟುಗಳನ್ನ ಹೊರತೆಗೆದು ನನ್ನವಳ ಅಂಗೈ ಬಿಡಿಸಿ ಇಟ್ಟು, ನಾನು ಹೇಗೂ ಇಳಿಯುತ್ತಿದ್ದೀನಿ, ಮುಂದಿನ ಸ್ಟಾಪು ಬರುವುದರಲ್ಲಿ ಇಬ್ಬರೂ ಬಿಡಿಸಿ ಬಾಯಿಗಿಟ್ಟುಬಿಡಿ, ಅಂದು ನನ್ನವಳ ಸುಕ್ಕು ಕೆನ್ನೆಯನ್ನು ಒಮ್ಮೆ ಮೆತ್ತಗೆ ಹಿಂಡಿ ನನ್ನೆಡೆ ತುಂಟ ನಗು ಬೀರಿ ಹೊರಟಳು. ಹೋಗುತ್ತಾ ನನಗೆ ಹೀಗೆ ಹೇಳಿ ಹೋದಳು.

"ನಾನೂ, ನನ್ನವನೂ ಅಜ್ಜ, ಅಜ್ಜಿಯರಾಗಿ ಚಾಕಲೇಟು ಬಾಯಿಗಿಡುವಾಗ, ಜೊತೆಯಲ್ಲಿ ಹೀಗೇ ನನ್ನಂತ ತುಂಟಿಯೊಬ್ಬಳು ಇದ್ದರೆ ಇನ್ನೂ ಚೆನ್ನಾಗಿರುತ್ತಲ್ವಾ ತಾತ?"

ಅವಳು ಇಳಿದು ಹೋದ ಮೇಲೆ ನನ್ನವಳೆಡೆ ನೋಡಿದೆ. ಅರೆ.. ಆ ಹುಡುಗಿಯ ನಗುವಿನ ಚಿಗುರು ನನ್ನವಳ ಮುಖದಲ್ಲೂ ಹಬ್ಬಿ ಹೂಬಿಟ್ಟಿದೆ!

.................

ಬಹಳ ದಿನಗಳ ಹಿಂದೆ ಬರೆದಿದ್ದು.. ಆದ್ರೆ ಹೂಬಳ್ಳಿ ಇನ್ನೂ ಫ್ರೆಶ್ ಆಗೇ ಇದೆ ಅಂತ ನನಗನ್ನಿಸುತ್ತೆ.. ಜೊತೆಯಾಗಿ ನಗುತ್ತ ಅಳುತ್ತ ದಾರಿ ಸಾಗಿದ ಈ ಜೋಡಿ ಪಯಣಿಗರ ಹೂಬನ ಹೀಗೇ ಸದಾ ತಂಪಾಗಿ, ಇಂಪಾಗಿ, ಕಂಪಾಗಿ... ಗೊಂಚಲು ಗೊಂಚಲು ಹೂ ತೂಗಿ...