Friday, March 30, 2007

ನೀಂ ಸತ್ಯವ್ರತನೇ ದಿಟಂ....

ನಾನು ಚಿಕ್ಕವಳಿದ್ದಾಗ ನನಗೆ ಕತೆಗಳ ಕಣಜದಿಂದ ತಿನಿಸನ್ನು ಮೊಗೆಮೊಗೆದು ಕೊಟ್ಟಿದ್ದು ನನ್ನ ಅಜ್ಜ. ನನ್ನ ಬಾಲ್ಯದ ಎಲ್ಲ ಕಲ್ಪನೆಗಳಿಗೂ ಬಣ್ಣ ತುಂಬಿದ್ದು ಅಜ್ಜನ ಕತೆಗಳು. ಸ್ವಲ್ಪ ದೊಡ್ಡವಳಾದ ಮೇಲೂ ಅವನ ಕತೆಗಳೆಂದರೆ ನನಗೆ ಪ್ರೀತಿಯೇ. ಅವನು ನನಗೆ ದಿನವೂ ನಿಗದಿತ ಸಮಯಕ್ಕೆ (ಸಾಮಾನ್ಯವಾಗಿ ರಾತ್ರೆ ಊಟವಾದ ಮೇಲೆ ಕಣ್ಣು ಮುಚ್ಚುವವರೆಗೂ) ಹೊಸಹೊಸದಾದ ಕತೆ ಹೇಳಬೇಕಿತ್ತು. ಒಂದೊಂದು ಸಲ ಅದು ಉದ್ದ ಕತೆಯಾಗಿ ೩-೪ ರಾತ್ರಿಗಳ ಪ್ರದರ್ಶನ ಕಾಣುತ್ತಿತ್ತು. ಹೌದು, ಅಜ್ಜ ಬರೀ ಕತೆಯನ್ನ ಹೇಳುತ್ತಿರಲಿಲ್ಲ. ಅದು ಅಭಿನಯ ಸಹಿತವಾಗಿರುತ್ತಿತ್ತು. ರಾಗಮಾಲಿಕೆಗಳೂ ಇರುತ್ತಿದ್ದವು. ಕತೆಯ ರಸಕ್ಕೆ ತಕ್ಕಂತೆ ಧ್ವನಿ ಏರಿಳಿಸುತ್ತಾ, ಕೈಯಲ್ಲಿ ಕೆಲವು ರಸನಿಮಿಷಗಳನ್ನು ಅಭಿನಯಿಸುತ್ತಾ ಅವನು ಕತೆ ಹೇಳುವ ಕ್ಷಣಗಳಲ್ಲಿ ನಾನು ಈ ನೆಲದ ಮೇಲಿರುತ್ತಿರಲಿಲ್ಲ. ಅವನ ಸುಮನೋಹರ ಕಥಾ ಲೋಕದ ದಾರಿಯಲ್ಲಿ ನಾನು ನಿತ್ಯ ಪಯಣದ ಅಚ್ಚರಿಯ ಧಾರೆಯಲ್ಲಿ ತೇಲಿ ಸಾಗುತ್ತಿದ್ದೆ. ಹೌದು ನಾನು ನಡೆದು ಹೋಗಬಹುದಾದ ಮಾತಲ್ಲ ಅದು.. ಅವನ ಕಥನ ಶಕ್ತಿ ನನ್ನ ತೇಲಿಸಿಕೊಂಡು ಹೋಗುತ್ತಿತ್ತು. ಅಜ್ಜನ ಕತೆಗಳು ಸಾಮಾನ್ಯವಾಗಿ ರಾಮಾಯಣ, ಮಹಾಭಾರತ, ಮತ್ತು ಅವುಗಳ ಉಪಕತೆಗಳು. ಅವುಗಳನ್ನ ನಿನ್ನೆ ಮೊನ್ನೆ ಅವನ ಕಣ್ಣ ಮುಂದೆಯೇ ನಡೆಯಿತೆಂಬಂತೆ ವರ್ಣಿಸಿ ಹೇಳುತ್ತಿದ್ದನು ಅಜ್ಜ. ಮತ್ತು ನನ್ನ ಅರಿವಿಗೆ ಬರುವ ದಿನನಿತ್ಯದ ಸುತ್ತಮುತ್ತಲಿನ ಪ್ರಶ್ನೆಗಳೆಲ್ಲವಕ್ಕೂ ಅಲ್ಲಿಯೇ ಉತ್ತರ ಹುಡುಕಿಕೊಡುತ್ತಿದ್ದ.ಅದರಲ್ಲಿ ಕೆಲವೊಂದು ನನ್ನ ಮೆಚ್ಚಿನದಾಗಿ ಉಳಿದು ಹೋದುವನ್ನ ಆಗಾಗ ದಿನದ ಬೇರೆ ಸಮಯದಲ್ಲಿ ಪುನರಾವರ್ತನೆ ಮಾಡಬೇಕಿತ್ತು. ಮತ್ತೆ ಕೆಲವು ಕತೆಗಳು ಕೆಲ ಜಾಗಕ್ಕೆ ವಿಶೇಷವಾಗಿ ಹೇಳಿಮಾಡಿಸಿದಂತಿರುತ್ತಿದ್ದವು. ಅಜ್ಜನ ಜೊತೆಗೆ ಹಳ್ಳಿಯ ತೋಟಕ್ಕೆ ಹೋಗುವಾಗ, ಗದ್ದೆಯ ಕೆಲಸ ನೋಡುವಾಗ, ರಾತ್ರಿ ಕತ್ತಲಲ್ಲಿ ಹಳ್ಳಿಯಿಂದ ಸಾಗರಕ್ಕೆ ಬರುವ ಬಸ್ಸಿಗೆ ಕಾಯುವಾಗ, ಅಥವಾ ದೂರ ದಾರಿಯಲ್ಲಿ ಅಜ್ಜನ ಕೈ ಹಿಡಿದು ಜೊತೆಯಲ್ಲಿ ನಡೆಯುವಾಗ, ಅಜ್ಜನೊಡನೆ ಅಡಿಕೆ ಆರಿಸುತ್ತಾ ಚಾಲಿ - ಗೋಟು ಬೇರೆ ಮಾಡುವಾಗ - ಆ ಸಂದರ್ಭಗಳಿಗಾಗೇ ಕೆಲವು ವಿಶೇಷ ಕತೆಗಳಿರುತ್ತಿದ್ದವು. ಅವುಗಳದ್ದೆ ಬೇರೆ ಕತೆ.. :)


ನನ್ನ ಬಾಲ್ಯದಲ್ಲಿ ಅಜ್ಜ ಜೀಕಿಬಿಟ್ಟ ಕತೆಗಳ ಜೋಕಾಲಿಯಲ್ಲಿ ಬದುಕು ಕನಸುಗಳ ನಡುವೆ ನಾನು ಇವತ್ತಿಗೂ ತೂಗಾಡತೊಡಗುತ್ತೇನೆ. ಎಲ್ಲ ಬೇಸರಾದಾಗ ಅವನ ಕತೆಗಳ ನೆನಪಿನ ಬುತ್ತಿ ಮನಸ್ಸನ್ನು ತಣಿಸುತ್ತದೆ. ನನಗೆ ಕತೆಗಳು ಕೊಡುವ ಆಪ್ತತೆಯನ್ನ ಪರಿಚಯಿಸಿದವನೇ ಅಜ್ಜ. ನಮ್ಮ ಸುತ್ತಲ ಎಲ್ಲ ಸಂಗತಿಗಳಲ್ಲಿ ಕತೆ ಕಾಣುವ, ಭಾವಲೋಕಕ್ಕೆ ಹೋಗುವ ಒಂದು ಮ್ಯಾಜಿಕ್ ನನಗೆ ಕಲಿಸಿದ್ದು ಅಜ್ಜ. ಅಜ್ಜನ ನೆನಪಿನೊಂದಿಗೆ ಅವನು ಹೇಳಿದ/ಓದಿದ/ಓದಿಸಿದ ಎಲ್ಲ ಕತೆಗಳ ಆಪ್ತ ಅನುಭವ ಬೆಸೆದುಕೊಂಡೆ ಇದೆ.

ಅಜ್ಜನ ಅಪರೂಪದ ಕತೆಗಳಿಗೆ ಬೇರೆಯದೇ ಬರಹವನ್ನಿನ್ನೊಂದು ದಿನ ಬರೆದೇನು.. ಈಗ ನಾನು ಬರೆಯ ಹೊರಟಿದ್ದು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಬಗ್ಗೆ. ಅದರ ಧಾರೆಯಡಿ ನನ್ನನ್ನ ಮೊತ್ತ ಮೊದಲು ತೋಯ್ಸಿದ್ದು ಅಜ್ಜ.


ನನ್ನ ನೆನಪಿನಂತೆ, ನಾನು ೫ನೇ ತರಗತಿ ಮುಗಿಸಿದ ಬೇಸಿಗೆ ರಜೆಯ ಮೊದಲ ವಾರದಲ್ಲೊಂದು ರಾತ್ರಿ ಆ ದಪ್ಪ ರಾಮಾಯಣ ದರ್ಶನಂನ ಪುಸ್ತಕ ತೆಗೆದಿಟ್ಟು ಇನ್ನು ನಿನಗೆ ಈ ಕತೆ ಹೇಳಬಹುದು ನಾನು-ಅಂತ ಅಜ್ಜ ಹೇಳಿದಾಗ ನನಗಾದ ಸಂಭ್ರಮವನ್ನ ಈ ಯಾವ ಸಾಲುಗಳೂ ಹಿಡಿದಿಡಲಾರವು. ರಾಮಾಯಣ ದರ್ಶನಂ ಅಂತಹ ಶ್ರೇಷ್ಠ ಕನ್ನಡ ಕೃತಿಯನ್ನ ರಾಗವಾಗಿ ಓದುತ್ತಾ, ಕ್ಲಿಷ್ಟ ಪದರಾಶಿಗಳನ್ನ ಬಿಡಿಸಿ ಹೇಳುತ್ತಾ, ನನ್ನ ಮುಖಭಾವದ ಮೇಲೆಯೇ-ನನಗೆ ಅರ್ಥವಾಗದ ಸಂಗತಿಗಳನ್ನು ವಿವರಿಸುತ್ತಾ ಅಜ್ಜ ನನಗೆ ಕತೆ ಹೇಳುತ್ತಿದ್ದ. ನನಗೆ ಈಗನ್ನಿಸುತ್ತದೆ ಅವನು ತನಗೆ ತಾನೇ ಕತೆ ಹೇಳಿಕೊಳ್ಳುತ್ತಿದ್ದ. ಆ ಧಾರೆಯಲ್ಲಿ ನಾನು ಎಷ್ಟು ತೊಯ್ದು ಹೋಗಿದ್ದೇನೆಂದರೆ ಈಗಲೂ ಕಣ್ಮುಚ್ಚಿ ನೆನಪಿಸಿಕೊಂಡರೆ ನಾನು ಚಿತ್ರಕೂಟದಲ್ಲಿ, ಪಂಚವಟಿಯಲ್ಲಿ, ಕಿಷ್ಕಿಂಧೆಯಲ್ಲಿ, ಸರಯೂ ನದೀತೀರದ ಕಾಡುಗಳಲ್ಲಿ, ಗುಹನ ದೋಣಿಯಲ್ಲಿ, ಶಬರಿಯ ಆಶ್ರಮದ ಅಂಗಳದಲ್ಲಿ, ರೆಕ್ಕೆ ಮುರಿದ ಜಟಾಯುವಿನ ಸನಿಹದಲ್ಲಿ, ಲಂಕೆಯ ಸಮುದ್ರತೀರದಲ್ಲಿ, ಅಶೋಕವನದಲ್ಲಿ, ವಿಶ್ವಾಮಿತ್ರರ ಆಶ್ರಮದಲ್ಲಿ, ಅಹಲ್ಯೆ ಕಲ್ಲಾದ ದಾರಿಯಲ್ಲಿ, ಜನಕರಾಜನರಮನೆಯ ಶಿವಧನುಸ್ಸಿನ ಸಮೀಪದಲ್ಲಿ, ಕನಕಲಂಕೆಯ ಅನ್ವೇಷಣೆಯಲ್ಲಿ - ಎಲ್ಲಿ ಇಲ್ಲ ಹೇಳಿ - ಎಲ್ಲೆಲ್ಲೂ ಮತ್ತೆ ಅಲೆಯತೊಡಗುತ್ತೇನೆ. ಆ ಸುಂದರ ಕಾವ್ಯದ ನವಿರು ಸೇಚನ ಮನಕ್ಕೆ ಹಾಯೆನಿಸುತ್ತದೆ.


ಅದಾದ ಮೇಲೆ ಕೆಲ ವರ್ಷಗಳಲ್ಲಿ ನಾನೇ ಅದನ್ನು ಓದುವುದನ್ನು ಕಲಿತೆ. ಎಷ್ಟರ ಮಟ್ಟಿಗೆಂದರೆ ಅಜ್ಜನಂತಹ ಅಜ್ಜನೇ ಎರಡು ದಿನ ಬಂದಿದ್ದು ರಾಮಾಯಣ ದರ್ಶನಂ ಓದಿ ಹೇಳು ಬಾ ಎಂದು ಕರೆಯುತ್ತಿದ್ದ.. ಅವನ ಕಥನ ಶಕ್ತಿಯ ಧೂಳಿನಂಶವೂ ನನ್ನಲಿರಲಿಲ್ಲ ಆದರೆ ಸ್ಪಷ್ಟವಾಗಿ ಓದಲು ಕಲಿತಿದ್ದೆ. ಅದು ಅವನಿಗೆ ಖುಷಿ ನೀಡುತ್ತಿತ್ತು. ವಯಸ್ಸಿನ ಒಜ್ಜೆ ಅವನ ನೆನಪಿನ ಮೇಲೆ ಹೇರಿದ್ದರಿಂದ ಎಲ್ಲ ನೆನಪಿರುತ್ತಿರಲಿಲ್ಲ. ಆದರೆ ನಾನು ಓದುವಾಗ ಅವನು ಹಳೆಯ ದಿನಗಳಿಗೆ ರೂಪಾಂತರಗೊಳ್ಳುತ್ತಿದ್ದ. ಅವನಿಗೆ (ನನಗೂ ಕೂಡಾ) ತುಂಬ ಇಷ್ಟವಾದ ಸನ್ನಿವೇಶಗಳು - ರಾಮಾಯಣವೆಂಬ ಮಹಾಧಾರೆಯಿಂದ ಸಿಡಿದು ಬೀಳುತ್ತಿದ್ದ ಪುಟ್ಟ ಆದರೆ ಗಟ್ಟಿ ಪಾತ್ರಗಳ ಮುತ್ತುಹನಿಗಳು. ಶ್ರವಣ, ದಶರಥ, ಮಂಥರೆ, ಗುಹ, ಮಾರೀಚ, ಜಟಾಯು, ಶಬರಿ, ವಾಲಿ, ಲಂಕಿಣಿ, ಮಂಡೋದರಿ, ವಿಭೀಷಣ, ಲಂಕಾನಗರಿ, ಚಿತ್ರಕೂಟ, ಪಂಚವಟಿ, ಇತ್ಯಾದಿಗಳನ್ನ ರಸಋಷಿಯು ಅಷ್ಟು ಆಪ್ತವಾಗುವಂತೆ ಚಿತ್ರಿಸಿದ್ದಾರೆ- ಸರಿ ಅವನಿಗೆ ತುಂಬ ಇಷ್ಟವಾಗುವ ಸನ್ನಿವೇಶಗಳನ್ನು ಓದಿ ಹೇಳುವಾಗ ಮತ್ತೆ ಅಭಿನಯ ಸಹಿತವಾಗಿ ಆ ವಾಕ್ಯಗಳನ್ನು ಪುನರುಚ್ಚರಿಸುತ್ತಿದ್ದ. ಅದರಲ್ಲಿ ನನ್ನ ಮೇಲೆ ತುಂಬ ಪ್ರಭಾವ ಬೀರಿದ ಒಂದು ಅಧ್ಯಾಯವನ್ನ ಇಲ್ಲಿ ಕ್ಲುಪ್ತವಾಗಿ ಬರೆಯುತ್ತಿದ್ದೇನೆ. ಇದು ಆಸಕ್ತ ಓದುಗರಿಗೆ ಪ್ರವೇಶಿಕೆಯಾಗಲಿ ಎಂಬುದು ನನ್ನ ಆಸೆ.


ನೀಂ ಸತ್ಯವ್ರತನೇ ದಿಟಂ....


ವಾಲಿ, ರಾಮಾಯಣದಲ್ಲೊಂದು ಪೂರಕ ಪಾತ್ರ. ಕಾವ್ಯದ ರಸದೌತಣ ಉಣಬಡಿಸುವ ರಸ‌ಋಷಿ ಕುವೆಂಪುರವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂನಲ್ಲಿ, ವಾಲಿಯ ಪಾತ್ರಚಿತ್ರಣ ಸವಿದವರು ‍ಯಾರೂ ಅವನನ್ನ ನೆನಪುಗಳ ಭಿತ್ತಿಯಿಂದ ಒರೆಸಿಹಾಕುವುದಿಲ್ಲ. ರಸ‌ಋಷಿಯ ವಾಲಿ ನನ್ನ ನಿಮ್ಮಂಥವನು. ಸಾದಾ ಸರಳ. ತಾನು ಇತರರಿಗೆ ಕೇಡು ಬಯಸಲಾರ, ಹಾಗೇ ಬೇರೆಯವರ ಕೇಡು ಸಹಿಸಲೂ ಆರ.

ನಮಗೆ ವಾಲಿ, ಸುಗ್ರೀವನೊಡನೆ ಕದನ ಮಾಡಿ, ರಾಮನಿಂದ ಕೊಲ್ಲಲ್ಪಡುವ ಒಬ್ಬ ಬಲಾಢ್ಯ ವಾನರ ಎಂದಷ್ಟೇ ಗೊತ್ತು. ಇಲ್ಲ ರಸಋಷಿಯ ವಾಲಿ ಹಾಗಿಲ್ಲ. ವಾಲಿಯ ಶಕ್ತಿ, ಸಾಮರ್ಥ್ಯ, ಸ್ವಭಾವ ತಿಳಿಯಬೇಕಿದ್ದರೆ ನೀವು ಈ ಅಣ್ಣ ತಮ್ಮರ ಸಂಬಂಧ, ಅವರ ರಾಜ್ಯ,ಕುಟುಂಬ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಬೇಕು.


ವಾಲಿ, ಸುಗ್ರೀವ ಇಬ್ಬರೂ ಒಬ್ಬರನ್ನೊಬ್ಬರು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ ಅಣ್ಣತಮ್ಮಂದಿರು. ಸುಭಿಕ್ಷ ಕಿಷ್ಕಿಂಧಾ ಕಾಡು, ಸಮಸ್ತ ವಾನರ ಪಡೆಗಳಿಗೂ ವಾಲಿಯೇ ರಾಜ. ಸುಗ್ರೀವ ವಾಲಿಯ ಬಲಗೈ. ರಕ್ತದುಂಧುಭಿ ಎಂಬ ರಾಕ್ಷಸನೊಬ್ಬನನ್ನು ಕೊಲ್ಲುವಾಗ ಆದ ಕಣ್ತಪ್ಪಿನಿಂದ ಅರಿಯದೆ ಸುಗ್ರೀವನು, ವಾಲಿಯನ್ನು ಒಂದು ದೊಡ್ಡ ಬಿಲದಲ್ಲಿ ಬಂಧಿಸಿಬಿಡುತ್ತಾನೆ. ಅಲ್ಲಿಂದ ಹೊರಬರುವ ಆಕ್ರೋಶಗೊಂಡ ವಾಲಿ, ರಾಜ್ಯದಾಸೆಯಿಂದ ಸುಗ್ರೀವ ತನ್ನನ್ನು ಬಂಧಿಸಿದ್ದನು ಎಂಬ ತಪ್ಪುತಿಳುವಳಿಕೆಯಿಂದ, ಸುಗ್ರೀವನನ್ನು ಕಿಷ್ಕಿಂಧೆಯಿಂದ ಹೊರಗಟ್ಟುತ್ತಾನೆ.

ಸುಗ್ರೀವನ ಬಂಟರಾದ ನೀಲ, ಹನುಮಂತ, ಜಾಂಬುವಂತರೂ ಉಟ್ಟಬಟ್ಟೆಯಲ್ಲೇ ಅವನೊಂದಿಗೆ ಹೊರಡುತ್ತಾರೆ. ತನ್ನ ಕುಟುಂಬದಿಂದ, ಪ್ರಿಯಪತ್ನಿ ರುಮೆಯಿಂದ ದೂರವಾಗಿ ಗಡೀಪಾರಾದ ಸುಗ್ರೀವನಿಗೆ ಸಹಜವಾಗಿಯೇ ಅಣ್ಣನ ಮೇಲೆ ಅಸಮಾಧಾನವಾಗುತ್ತದೆ.ಆ ಸಮಯದಲ್ಲೆ‌ ಅವನಿಗೆ ಸೀತೆಯನ್ನು ಕಳೆದುಕೊಂಡು ವ್ಯಾಕುಲನಾದ ರಾಮ ಸಿಕ್ಕುತ್ತಾನೆ. ಮತ್ತು ರಾಮ ತನ್ನಂತೇ ಪತ್ನಿಯನ್ನು ಕಳೆದುಕೊಂಡು ವ್ಯಾಕುಲನಾದ ಸುಗ್ರೀವನಲ್ಲಿ ಸಹಾನುಭೂತಿ ತೋರುತ್ತಾನೆ. ವಾಲಿಯನ್ನು ಸೋಲಿಸಿ ತನಗೆ ರಾಜ್ಯ ಕೊಡಿಸಿದರೆ, ಸೀತೆಯನ್ನು ತಾವೆಲ್ಲ ಸೇರಿ ಹುಡುಕುತ್ತೇವೆ ಅಂತ ಸುಗ್ರೀವ ರಾಮನಿಗೆ ಮಾತು ಕೊಡುತ್ತಾನೆ. ಇದು ಹಿನ್ನೆಲೆ.
ಆದರೆ ವಾಲಿಯನ್ನು ಹೊಡೆದಾಟಕ್ಕೆ ಆಹ್ವಾನಿಸುವುದು ಹೇಗೆ?

'ನೀವು ಸಹಾಯಕ್ಕೆ ಬೆನ್ನಿಗಿದ್ದರೆ ಅದೇ ಧೈರ್ಯವೆಂದ ಸುಗ್ರೀವ ಕಿಷ್ಕಿಂಧೆಯ ಬೆಟ್ಟಗಳು ಅದುರಿ ಹೋಗುವಂತಹದೊಂದು ಘರ್ಜನೆಗೈಯುತ್ತಾನೆ.

ಆ ಸನ್ನಿವೇಶವನ್ನು ಕವಿ ಹೀಗೆ ಬಣ್ಣಿಸುತ್ತಾರೆ.

'ಚಕಿತವಾದುವು ಜಿಂಕೆ, ಕಾಡುಕೋಣ, ಹೆಬ್ಬುಲಿ,ಸಿಂಹ; ತೆರೆತೆರೆಯಾಗಿ ಹರಿದ ಘರ್ಜನೆಯ ಸಿಡಿಲು ಶಾಂತವಾದಾಗ, ದಟ್ಟಡವಿಯ ನಿಶ್ಯಬ್ದದ ಕಡಲು ಮತ್ತೆ ಹೆಪ್ಪುಗಟ್ಟಿತಂತೆ.'

ಸುಗ್ರೀವ ಘರ್ಜನೆಗೆ ಮರುದನಿಯನ್ನು ಆಲಿಸುತ್ತ ನಿಂತ ರಾಮಲಕ್ಷ್ಮಣರಿಗೆ ಕೇಳಿದ್ದೇನು? ಸಿಡಿಲ ಪಡೆಗಳೊಂದಾಗಿ ಆರ್ಭಟಿಸಿದಂತಹ, ಚಂಡೆದನಿಯನ್ನೇ ಮೀರಿದ ವಾಲಿಯ ಹುಯಿಲು! ಕವಿ ವಿವರಿಸುತ್ತಾರೆ... ಬೆಟ್ಟ ಗುಡುಗಿತ್ತಲ್ಲಿ, ಅತ್ತ ಕಾಡು ನಡುಗಿತ್ತು. ಸಿಂಹದಂತೆ ಆರ್ಭಟಿಸುವ ವಾಲಿ, ಮರಗಳ ಮರೆಯಿಂದ ಹುಲಿಯಂತೆ ಚಿಮ್ಮಿ ಬಂದನಂತೆ. 'ತಮ್ಮನನ್ನ ನೋಡಿದನು ವಾಲಿ, ಕೆಂಪಾದುವು ಆಲಿ(ಕಣ್ಣು) ಅಂತ ಬರೆದಿದ್ದಾರೆ ಕವಿ. ಮುಂದೆ ನಡೆದ ಘೋರ ಬಡಿದಾಟದಲ್ಲಿ ಸುಗ್ರೀವ ಹಣ್ಣಾಗುತ್ತಾನೆ. ಸಹಾಯದ ಭರವಸೆಯಿತ್ತ ರಾಮ, ತುಂಬ ಸಾಮ್ಯವಿದ್ದ ಅಣ್ಣ ತಮ್ಮಂದಿರಲ್ಲಿ ಸುಗ್ರೀವನನ್ನು ಗುರುತಿಸಲರಿಯದೆ ಪೆಚ್ಚಾಗುತ್ತಾನೆ. ರಾಮನ ನೆರವು ಬಿಸಿಲುಗುದುರೆಯಾಯ್ತೆಂದು ಮನಗೊಂಡು ಸೆಣಸಲಾಗದ ಸುಗ್ರೀವ ಓಡಿ ಹೋಗಿ ಅಡಗಿಕೊಳ್ಳುತ್ತಾನೆ. ವಿಜಯೋನ್ಮತ್ತ ವಾಲಿ ಕಿಷ್ಕಿಂಧೆಗೆ ಹಿಂದಿರುಗುತ್ತಾನೆ.


ಜರ್ಜರಗೊಂಡ ಸುಗ್ರೀವನನ್ನು ಸಂತೈಸಿದ ರಾಮ, ತನ್ನ ಅಸಹಾಯಕತೆಯನ್ನು ವಿವರಿಸಿ ಮತ್ತೊಮ್ಮೆ ಸುಗ್ರೀವನನ್ನು ಹುರಿದುಂಬಿಸುತ್ತಾನೆ. ಈ ಬಾರಿ ಗುರುತಿಗೆ ಕೆಂಪು ಕಣಗಿಲೆ ಹೂವಿನ ಮಾಲೆಯನ್ನು ಸುಗ್ರೀವನ ಕೊರಳಿಗೆ ತೊಡಿಸುತ್ತಾನೆ. ಇತ್ತ ದಣಿದಿದ್ದರೂ ಉತ್ಸಾಹದಿಂದ ಕಿಷ್ಕಿಂಧೆಯೊಳ ಹೋದ ವಾಲಿಗೆ ಪತ್ನಿ ತಾರೆ ಇದಿರಾಗುತ್ತಾಳೆ. ಕವಿ ವಾಕ್ಯಗಳನ್ನೇ ಸವಿಯಿರಿ ...

ತಾರೆ,

ಕೊಡಗಿನುಡುಗೆಯ ಸೀರೆ,

ಸಿಂಗರಿಸಿದಾ ನೀರೆ.


ಅವಳ ಕೈಸೋಂಕಿನಿಂದಲೇ ದಣಿವಾರಿದ ವಾಲಿಗೆ ' ತಮ್ಮನನ್ನೇ ಬಡಿದೆನಲ್ಲಾ ' ಎಂಬ ಸಂತಾಪ ಮುತ್ತಿಕೊಳ್ಳುತ್ತದೆ. ಅವನನ್ನು ಹೊರಹಾಕಿ, ಕುಟುಂಬದಿಂದ ದೂರವಿರಿಸಿ ತಪ್ಪು ಮಾಡಿದೆ ಎಂದು ಪರಿತಪಿಸುತ್ತಾನೆ. ಅಷ್ಟರಲ್ಲೇ ಚೇತರಿಸಿಕೊಂಡ ಸುಗ್ರೀವನ ಕೂಗು ಮತ್ತೆ ಕೇಳುತ್ತದೆ. ಅದನ್ನ ಕೇಳುತ್ತಲೆ ವಾಲಿ ಸಿಟ್ಟಿನಿಂದ ಎದ್ದು ನಿಲ್ಲುತ್ತಾನೆ. ಇಷ್ಟು ಹೊಡೆಸಿಕೊಂಡರೂ ಸಾಕಾಗದೆ ಮತ್ತೆ ಬಂದನೇ ಎಂಬ ಆಕ್ರೋಶದಿಂದ ಹೊರಟ ವಾಲಿ, ಅಡ್ಡ ಬಂದ ಪತ್ನಿಯನ್ನು ಅತ್ತ ಸರಿಸುತ್ತಾನೆ. ಉಂಹುಂ, ತಾರೆ ಕೋಪೋನ್ಮತ್ತ ವಾಲಿಯ ಕಾಲು ಹಿಡಿಯುತ್ತಾಳೆ. " ಕಣ್ಬನಿಯ ಜೇನಿಳಿವ ತಾವರೆಯ ಚೆಲುವೆ.! " ಸಿಟ್ಟು ಬೇಡ, ವೀರರ ಶಕ್ತಿ ಔದಾರ್ಯದಲ್ಲಿದೆ. ಒಮ್ಮೆ ಸುಗ್ರೀವನ ಹೆಂಡತಿ ರುಮೆಯ ಬಗ್ಗೆ ಯೋಚಿಸು. ಪಾಪದ ಹುಡುಗಿ, ಸುಗ್ರೀವನಿನ್ನೇನು? ನಿನ್ನ ಪ್ರೀತಿಯ ತಮ್ಮ. ಸಣ್ಣವರಿದ್ದಾಗ ನೀವು ಎಷ್ಟು ಹೊಂದಿಕೊಂಡಿದ್ದಿರಿ ಅಂತ ನೆನಪಿಸಿಕೋ. ಬಾಲ್ಯದ ಚಿನ್ನಾಟಗಳನ್ನು ನೆನೆ.' ಅಂತ ವಿನಂತಿಸುತ್ತಾಳೆ.


ಕೇಳಕೇಳುತ್ತಾ ಶಾಂತನಾದ ವಾಲಿಯ ಕಣ್ಮುಂದೆ ಬಾಲ್ಯದ ಎಳೆಬಿಸಿಲು ಮಿಂಚುತ್ತದೆ. ಅಣ್ಣಾ .. ಬಾ .. ಬಾರೆಂದು ಕರೆವ, ಜೊಲ್ಲು ಸುರಿಸಿ ತೊದಲುವ ಸಣ್ಣ ಸುಗ್ರೀವ ನೆಲೆಗೊಳ್ಳುತ್ತಾನೆ. ಆ ಚಿಣ್ಣನನ್ನು ಎತ್ತಿಕೊಂಡು ತಾನಾಡಿಸಿದ ಕೂಸುಮರಿ ಉಪ್ಪಿನಾಟ ನೆನಪಾಗುತ್ತದೆ. ಸ್ನೇಹ ತುಂಬಿದ ಮನಸ್ಸಿನ ವಾಲಿ ತಾರೆಗೆ ಹೇಳುತ್ತಾನೆ. ' ನಡೆ ನಿನ್ನ ತಂಗಿ ರುಮೆಯನ್ನು ಸಿಂಗರಿಸು. ಚಿಕ್ಕವರಿದ್ದಾಗ ನಾವಾಡಿದ ಉಪ್ಪಾಟವನ್ನು ಮತ್ತೆ ಇವತ್ತು ಆಡುತ್ತೇನೆ. ಬಡಿದಾಡುವ ನೆಪದಲ್ಲಿ ಹೋಗಿ ಆ ಪೋರನನ್ನು ಹೊತ್ತು ತರುತ್ತೇನೆ.' ಎಂದುಸುರಿದವನೇ ದಾಪುಗಾಲಿಕ್ಕಿ ಹೊರಟ ಬೃಹದ್ಬಲಶಾಲಿ ವಾಲಿ. ಕದನಕ್ಕೆ ಸಿದ್ಧವಾಗಿದ್ದ ಸುಗ್ರೀವನೆಡೆಗೆ ಧಾವಿಸಿದ ವಾಲಿಯಲ್ಲಿ ಪ್ರೀತಿಯ ಸೆಲೆಯುಕ್ಕುತ್ತಿತ್ತು. ತಮ್ಮನನ್ನಪ್ಪಲು ಮುನ್ನುಗ್ಗಿದ. ಈ ಬದಲಾವಣೆ ತಿಳಿಯದ ಸುಗ್ರೀವ ಅಣ್ಣನೆಡೆ ಬಂಡೆಗಳನ್ನೆತ್ತಿ ತೂರತೊಡಗಿದ. ಅಂಗೈಯಲ್ಲೆ ಅವನ್ನು ತಡೆದು ಮುಂದುವರಿದ ವಾಲಿ, 'ಸಿಂಹವನ್ನು ಗಂಡಭೇರುಂಡ ಎತ್ತಿಕೊಳ್ಳುವಂತೆ' ಸುಗ್ರೀವನನ್ನು ಹೆಗಲ ಮೇಲೆ ಹಾಕಿಕೊಂಡು ಕಿಷ್ಕಿಂಧೆಯೆಡೆ ತೆರಳಿದ.

ತನ್ನ ಗೆಳೆಯನನ್ನು ಹೊತ್ತೋಡುತ್ತಿರುವ ವಾಲಿಯನ್ನು ನೋಡಿದ ರಾಮನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ದಿಕ್ಕೆಟ್ಟ ರಾಮ ಓಡುತ್ತಿದ್ದ ವಾಲಿಯ ಬೆನ್ನಿಗೆ ತೀಕ್ಷ್ಣ ಬಾಣವೊಂದನ್ನೆಸೆದ.


ಕವಿ ಹೋಲಿಕೆ ನೋಡಿ.. " ಕಲ್ಪವೃಕ್ಷವೊಂದು ಕಡಿದುರುಳಿತೋ ಅಥವಾ ಸ್ವರ್ಗದ ಐರಾವತವೆ ನೆಲದಲ್ಲಿ ಬಿತ್ತೋ ಎಂಬಂತೆ" ವಾಲಿ ನೆಲಕ್ಕುರುಳುತ್ತಾನೆ.

ಮರಸು ಕೂತ ಬೇಟೆಗಾರ,ಕೋವಿಯ ಈಡಿಗೆ ಬಲಿಯಾದ ಬೇಟೆಯನ್ನು ನೋಡಿ ಅದರ ಬಳಿಗೋಡುವ ಹಾಗೆ ರಾಮಾದಿಗಳು ಬಿದ್ದ ವಾಲಿಯೆಡೆಗೆ ಧಾವಿಸಿ, ತಮ್ಮ ಸಾಹಸಕ್ಕೆ ತಾವೇ ದನಿಯಾದರಂತೆ. ಕೆಲಕ್ಷಣದ ಸಂಭ್ರಮವಿಳಿದ ಬಳಿಕ ಸುಗ್ರೀವ, ಬಸವಳಿದು ಬಿದ್ದ ಅಣ್ಣನೆಡೆ ನೋಡಿದ.

'ಹಿರಿದಾದುದಳಿಯೆ, ಹಗೆಯಾದರೇನು, ಹಿರಿತನಕೆ ನೋವಾಗದುಂಟೆ' ಎಂದು ಕೇಳುವ ಕವಿ, ಸುಗ್ರೀವ-ರಾಮಾದಿಗಳ ಖಿನ್ನತೆಯನ್ನು ಬಣ್ಣಿಸುತ್ತಾರೆ. ಕಣ್ಣೀರು ಕೆಡವುತ್ತ ಸುಗ್ರೀವ ನಿಂತರೆ, ತನ್ನ ಬಿಲ್ಜಾಣ್ಮೆಯನ್ನು ತಾನೇ ಹಳಿದುಕೊಂಡನಂತೆ ರಾಮ.


ಸುಳಿದ ತಂಗಾಳಿಯಲೆಗೆ ಎಚ್ಚರಾದ ವಾಲಿ ನಡುಕುದನಿಯಲ್ಲಿ, ಎಲ್ಲರೆಡೆ ನೋಡಿ ನುಡಿಯುತ್ತಾನೆ.

'ಏನು ಮಾಡಿದೆಯೋ ಸುಗ್ರೀವಾ..ಮುದ್ದಾಡಲೆಂದು ಬಂದ ಅಕ್ಕರೆಯ ಕೈಗಳನ್ನೇ ಕಟ್ಟಿಬಿಟ್ಟೆಯಲ್ಲಾ..? ಯಾರದು? ನನ್ನ ಬೆನ್ನಿಗೆ ಬಾಣ ಬಿಟ್ಟ ವೀರವೇಷಿ? ಓಹೋ ರಾಮನೋ..! ಊರಿಗೆ ತಮ್ಮನನ್ನು ಹೊತ್ತುಕೊಂಡೊಯ್ಯುತ್ತಿದ್ದ ಅಣ್ಣನನ್ನು ಹೇಡಿತನದಿಂದ ಕೊಂದೆಯಲ್ಲಾ !ನಿನ್ನನ್ನ ಮನತುಂಬೆ ಹೊಗಳುತ್ತಿದ್ದ ತಾರೆಯ ಬಾಳಿಗೆ ಕಿಚ್ಚಿಟ್ಟೆಯಲ್ಲಾ! ಧಿಕ್ಕಾರ ನಿನ್ನ ಕಲಿತನಕ್ಕೆ, ಧಿಕ್ಕಾರವಿರಲಿ ನಿನ್ನ ಶೌರ್ಯದ ಕೀರ್ತಿಗೆ! ಹೇಡಿಯ ಹಾಗೆ ಅಡಗಿ ಬಾಣ ಬಿಟ್ಟಿದ್ದರಿಂದ ಬದುಕಿದೆ ನೀನು, ಅಲ್ಲದೆ ನನ್ನ ಕೆಣಕಲಾದೀತಾ ನಿಂಗೆ?" ಉಸಿರು ಸುಯ್ಯುತ್ತದೆ.


ಬೆನ್ನಿಗೆ ನೆಟ್ಟ ಬಾಣದಿಂದ ಧಾರೆಯಾಗಿ ಸುರಿವ ರಕ್ತ, ಕಪ್ಪಡರಿದ ಮುಖ, ಆಡಲಾಗದೆ ಆಡುವ ಮಾತು, ಏದುಸಿರು ಎಲ್ಲವೂ ವಾಲಿಯ ಪರ ವಾದಿಸುತ್ತಿದ್ದರೆ. . . . ರಾಮ ಉತ್ತರಿಸಲಾಗದೆ ತಲೆ ತಗ್ಗಿಸಿದನಂತೆ.

ಅಳುತ್ತಳುತ್ತ ಕಾಲಿಗೆರಗಿದ ಸುಗ್ರೀವನನ್ನು ವಾಲಿಯೇ ಸಂತೈಸಿದ. ರಾಮ ನಮ್ಮ ಅತಿಥಿ, ಅವನಿಗೆ ನೆರವಾಗು ಎಂದು ಸುಗ್ರೀವನಿಗೆ ಹೇಳುತ್ತಿರುವಂತೆಯೆ ಕೇಳಿಸಿತು ರೋದನದ ಧ್ವನಿ. " ಏನದು ಸ್ವರ್ಗದ ಹಾಡು ಭೂಮಿಗೆ ಧುಮ್ಮಿಕ್ಕುವಂತಿದೆ, ಏನಾ ಧ್ವನಿ?" ವಾಲಿ ತಮ್ಮನನ್ನು ಕೇಳಿದ. ಉಕ್ಕಿಬಂದ ಅಳುವಿನ ನಡುವೆ ಸುಗ್ರೀವ್ ಉತ್ತರಿಸುತ್ತಾನೆ. . . 'ಬಳಿ ಸಾರುತಿದೆ ರೋದಿಸುತಿಹ ಕಿಷ್ಕಿಂಧೆ.'

ತೇಲುಗಣ್ಣಾದ ವಾಲಿಗೆ ಇತ್ತಲಿನ ಅರಿವೆ ಹೋಗಿಬಿಟ್ಟಿತ್ತು. ಒಂದೇ ಸಮನೆ ಮಾತನಾಡತೊಡಗಿದ.

"ಏನಂದೆ?
ಹೌದೌದು ಬಳಿಸಾರುತಿದೆ ಸಂಧ್ಯೆ!

ಬೆಟ್ಟದ ಮೇಲೆ ಹಬ್ಬುತಿದೆ ಸುಂದರ ಸಂಧ್ಯೆ!

ಆಃ ನನ್ನ ಕಿಷ್ಕಿಂಧೆ, ತಾಯ್ತಂದೆಯರ ನಾಡೆ,

ತಾಯ್ ನುಡಿಯ ಮಲೆಗುಡಿಯ ಬೆಟ್ಟದಡವಿಯ ಬೀಡೆ!

ನಾನು ಹುಟ್ಟುವಾಗ ಅಮ್ಮನ ಬಸಿರಾಗಿದ್ದವಳು, ಆಮೇಲೆ ನಲ್ಮೆಯ ತೊಟ್ಟಿಲಾದೆ.

ಎಳೆಯನಿಗೆ ಜೋಗುಳವಾದೆ, ನನ ತಾರುಣ್ಯಕೆ ಉಯ್ಯಾಲೆಯಾದೆ.

ಮುಪ್ಪಿಗೆ ಧರ್ಮದಾಶ್ರಯವಾಗಿ, ಸಾವಿಗೆ ಶಾಂತಿಯ ಮಡಿಲಾಗಬೇಕಾಗಿದ್ದ

ನಿನ್ನನ್ನು ನಾನೀಗ ತೊರೆಯುತ್ತಿದ್ದೇನೆ ಮನ್ನಿಸಮ್ಮಾ.

ಮುಗಿಲಲೆವ ಸೊಬಗಿನ ನೆಲೆಯಾದ ನಿನ್ನ ಬೆಟ್ಟಗಳಲ್ಲಿ ನಾನಿನ್ನು ಕಾಲಾಡಲಾರೆ

ಚೆಲುವಿನ ಚಿಪ್ಪೊಡೆದು ಮುತ್ತುನೀರು ಸಿಡಿಸುವ

ನಿನ್ನ ಜಲಪಾತಗಳಲ್ಲಿ ನಾನಿನ್ನು ಮೈತೊಯ್ಯಿಸಲಾರೆ

ನನ್ನ ತೋಳುಗಳ ಆಟಕ್ಕೆ ನಿನ್ನ ಅಡವಿಯ

ಹಣ್ಣು ಹೊತ್ತ ಮರಗಳು ಇನ್ನು ತೂಗುವುದಿಲ್ಲ, ತೊನೆಯುವುದಿಲ್ಲ, ಬಾಗುವುದಿಲ್ಲ

ನಿನ್ನಗಲ ಬಾಂದಳದ ಮೋಡಮಾಲೆಯ ಚಂದವನ್ನು ನೋಡದಿನ್ನು ಈ ವಾಲಿಯ ಕಣ್ಣಾಲಿ.

ಸುಗ್ರೀವಾ.. ನೆನಪಿದೆಯಾ ನಿನಗೆ ಈಜು ಕಲಿಸುವಾಗ

ನೀನು ಪಂಪಾ ಸರೋವರದಲ್ಲಿ ಮುಳುಗಿ ಉಸಿರಿಗೆ ಕಾತರಿಸುತ್ತಿದ್ದೆ.

ನಾನು ನಿನ್ನ ಜುಟ್ಟು ಹಿಡಿದು ಮೇಲೆತ್ತಿ ಬದುಕಿಸಿದೆ.

ಅಂದು ನೀನು ಉಸಿರಿಗಾಗಿ ಅನುಭವಿಸಿದ ಸಂಕಟ

ಈಗ ನನಗೆ ಗೊತ್ತಾಗುತ್ತಿದೆ.

ಬಾಳಿನಂಚಿನಲ್ಲಿ ನಿಂತಾಗ ನನಗೆ ತಿಳಿದ ಸತ್ಯವೊಂದನ್ನ ಹೇಳ್ತೇನೆ.

"ನಾವು ಗಟ್ಟಿಯೆಂದು ತಿಳಿದಿರುವುದೆಲ್ಲಾ ಜೊಳ್ಳು, ಬರೀ ಜೊಳ್ಳು . . .!!

ಸಾವಿನ ಗಾಳಿ ತೂರುತ್ತಾ ಇದ್ದರೆ ಈಗ ನನಗೆ ಈ ಅರಿವಾಗುತ್ತಿದೆ"

ಎಂದು ನುಡಿಯುತ್ತಾ ಕೊನೆಯುಸಿರೆಳೆಯುತ್ತಾನೆ ವಾಲಿ. ಸಂಕಟವೇ ಮೂರ್ತಿವೆತ್ತ ತಾರೆ, ಪ್ರಿಯಸಖನೊಂದಿಗೆ ತಾನೂ ಚಿತೆಯೇರುತ್ತಾಳೆ.


ಈ ಅಧ್ಯಾಯವನ್ನು ನಾನು ಹಲವು ಬಾರಿ ಓದಿದ್ದೇನೆ. ಪ್ರತಿಬಾರಿಯೂ ಕಣ್ಣೀರಿಟ್ಟಿದ್ದೇನೆ. ನನ್ನ ಸಣ್ಣತನಕ್ಕೆ ನಾಚಿದ್ದೇನೆ. ವಾಲಿಯ ದಾರ್ಶನಿಕತೆಯೆಡೆಗೆ ಬೆರಗುಗೊಂಡಿದ್ದೇನೆ. ಕವಿಯ ವರ್ಣನೆಗೆ ಮನಸೋತಿದ್ದೇನೆ. ಕವಿವರ್ಣನೆಯ ಜಲಧಾರೆಗೆ ಸಿಕ್ಕರಷ್ಟೇ ನಿಮಗೆ ಈ ಅಮೃತದ ಸವಿ ಹತ್ತುವುದು. ರಾಮಾಯಣದರ್ಶನದ "ನೀಂ ಸತ್ಯವ್ರತನೇ ದಿಟಂ . . " ಎಂಬ ಅಧ್ಯಾಯದಲ್ಲಿ ಚಿತ್ರಿತವಾದ ವಾಲಿಯನ್ನೊಮ್ಮೆ ತಪ್ಪದೇ ಮಾತನಾಡಿಸಿ.


ಇಂತಹ ಒಂದು ಅಮೂಲ್ಯ ಸಂಪತ್ತನ್ನ ನನಗೆ ಕೊಡುಗೆಯಾಗಿ ನೀಡಿದ, ತನ್ನೆಲ್ಲ ಕತೆಗಳ ಆಸ್ತಿಯನ್ನೂ ನನಗೆ ನೀಡಿ ಹೋದ ಅಜ್ಜನಿಗೆ ನಾನು ಚಿರಋಣಿ. ನನ್ನ ಬದುಕಿನ ಹಲವು ಸ್ತರಗಳಲ್ಲಿ ಅಜ್ಜ ನಾನೇ ಆಗಿ ಬೆರೆತುಹೋಗಿದ್ದಾನೆ. ನನ್ನ ಆತಂಕದ ಕ್ಷಣಗಳಲ್ಲಿ ಮಡಿಲಾಗಿದ್ದಾನೆ. ಭೌತಿಕವಾಗಿ ಇನ್ನಿಲ್ಲವಾಗಿಯೂ, ನನ್ನ ಮನಸ್ಸಿನಂಗಳದಲ್ಲಿ ದಿನವೂ ದೀಪವಾಗಿ ಬೆಳಗಿದ್ದಾನೆ.

Thursday, March 29, 2007

ಜಯಂತ ಕಾಯ್ಕಿಣಿಯವರ ಹೊಸ ಕತೆ - ನೀರು

ನಿದ್ದೆ, ಎಚ್ಚರ ,ನೀರು, ಬೆಳಕು, ಪಯಣ, ಭಯ, ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ
ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ
ಸಲುಗೆಯ ದಣಿವು ಇತ್ತು.

"ಕಾಳಜಿ ಮಾಡಬೇಡಿ ಸಾಬ್, ಬೇಗ ಬಲುಬೇಗ ಗುಣವಾಗ್ತೀರಿ, ನಿಮ್ಮ ಮೊಮ್ಮಗಳ ಮದುವೆ ಖಂಡಿತ
ನೋಡ್ತೀರಿ. ನನ್ನ ಈ ರಾತ್ರಿಯ ದುವಾ ಇದೆ ನಿಮಗೆ"

ಲಕ್ಷಾಂತರ ಮನೆಗಳನ್ನು ನಡುನೀರಿನಲ್ಲಿ ಬಿಟ್ಟು ಲಕ್ಷಾಂತರ ಜನರನ್ನು ಅಂಚಿಗೆ ತಳ್ಳಿದ ಈ ಜಲಪ್ರಳಯದ ಅನಂತರದ ಈ ಸುದೀರ್ಘ ನೀರವದ ಬೀದಿಯಲ್ಲಿ, ಇರುಳಿನ ಕೊನೆಗಳಿಗೆಯಲ್ಲಿ, ಆರಾಧ್ಯ ಜೀವದ ಲೇಸಿಗೆಂದು ಹೃದಯ ತುಂಬಿ ತಂದ ಪುಟ್ಟ ಬಿಂದಿಗೆಯೊಂದು ಚಲಿಸಿ ಹೋದ ರೀತಿಯನ್ನು ಸುಮ್ಮನೆ ನೋಡಿದ ಸಂತೋಷನ್ ಗೆ ದೇವರನ್ನೇ ಕಂಡಂತಾಯಿತು..

ಮೇಲಿನ ಈ ಮೂರೂ ಪಂಕ್ತಿಗಳು ನನ್ನ ಪ್ರೀತಿಯ ಕತೆಗಾರ ಜಯಂತ್ ಕಾಯ್ಕಿಣಿಯವರ ಇತ್ತೀಚಿನ ಪ್ರಕಟಿತ ಕತೆ - ನೀರು - ಇಂದ ಆಯ್ದದ್ದು. ತರಂಗದ ಈ ಬಾರಿಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ.


ಜಯಂತ್ ನನ್ನ ಪ್ರೀತಿಯ ಬರಹಗಾರರು. ಒಬ್ಬ ಲೇಖಕರಾಗಿ ಮತ್ತು ವ್ಯಕ್ತಿಯಾಗಿ ನಾನು ಅವರನ್ನು ತುಂಬ ಇಷ್ಟಪಡುತ್ತೇನೆ. ಅವರ ಸಹವಾಸವೇ, ಮಾತುಕತೆಯೇ ಒಂದು ಆಹ್ಲಾದ.. ಕಡಲ ದಂಡೆಯ ಸಂಜೆ ಗಾಳಿಯಂತೆ... ಅವರ ಬರಹಗಳು ಮಬ್ಬು ಕವಿದ ಮನಸ್ಸಿನಲ್ಲಿ ಮಿನುಗುವ ಪುಟ್ಟ ದೀಪಗಳಾಗಿ ಚಿಂತನೆಯ ಬೆಳಕು ಹಚ್ಚುತ್ತವೆ. ಇಲ್ಲ ಅವರೇನು ಉಪದೇಶ ಮಾಡುವುದಿಲ್ಲ, ದಾರಿದೀಪವೂ ಅಲ್ಲ - ಕತ್ತಲ ಹಾದಿಯುದ್ದದ ಮನೆಗಳ ದೀಪದ ಕೋಲಿನಂತೆ ಅವರ ಬರಹ/ಕತೆ/ಕವನಗಳು. ಅದು ಕಣ್ಣೂ ಕುಕ್ಕುವ ಪ್ರಖರ ಬೆಳಕಲ್ಲ, ಇದೇ ದಾರಿಯಲ್ಲಿ ಹೋಗಿ ಎಂದು ಹೇಳುವ ಕೈಮರವಲ್ಲ.. ನಿಮ್ಮ ದಾರಿಯ ನೀವೇ ಹುಡುಕಿಕೊಳ್ಳಲು ಸುಲಭವಾಗುವಂತೆ, ನಿಮಗೇ ಉದ್ದೇಶಿಸದಂತೆ, ಆದರೆ ನಿಮಗಾಗೇ ಕಾದಿರುವಂತೆ ಬೆಳಗಿರುವ ಬೆಳಕಿನ ಕೋಲುಗಳು. ಓದತೊಡಗಿದಂತೆ ಆಪ್ತವಾಗಿ ತೆರೆದುಕೊಳ್ಳುವ ಕಥಾಲೋಕದೊಂದಿಗೆ ನಿಮ್ಮೊಳಹೊಕ್ಕು, ನಿಮ್ಮ ನಡೆ ನುಡಿ ಆಲೋಚನೆಗಳಲ್ಲಿ ನಿಮ್ಮವೇ ಆಗಿ ಹೊರಹೊಮ್ಮುವ ಭಾವ ದೀಪಗಳು.


ಕೆಲದಿನಗಳ ಹಿಂದೆ ದೇಶಕಾಲದಲ್ಲಿ ಅವರ ಚಾರ್ ಮಿನಾರ ಕತೆಯ ನೈಋತ್ಯ-ಪುನರ್ವಸು ಚಿತ್ರಣದಿಂದ ನಾನಿನ್ನೂ ಹೊರಬಂದಿರಲಿಲ್ಲ.. ಈಗ ನೀರು ಓದಿದೆ.


ಮುಂಬೈ ಎಂಬ ಮಹಾನಗರಿಯ ಬಗ್ಗೆ ಆಗೀಗ ಓದುವಾಗ ಹುಟ್ಟುವ ಪರಕೀಯಭಾವ ಜಯಂತರ ಕತೆಯ ಮೂಲಕ ನೀಗುತ್ತದೆ. ಮುಂಬೈ ಶಹರು (ಜಯಂತರದೇ ಭಾಷೆ) ನನ್ನ ಪುಟ್ಟ ಊರಿನ, ಮಲೆನಾಡಿನ ಸೆರಗಾಗಿ ಭಾಸವಾಗುತ್ತದೆ. ನಗರದ ಎಲ್ಲ ಮಹಾಚಿತ್ರಗಳ ನಡುವೆ ಒಂದು ಮಾನವೀಯತೆಯ ಚಿತ್ರ ಮೂಡಿನಿಲ್ಲುತ್ತದೆ.


ನೀರು ಕತೆಯ ಬಗ್ಗೆ ನಾನೇನೂ ಹೆಚ್ಚು ಬರೆಯುವಷ್ಟಿಲ್ಲ.. ಜಯಂತರ ಕತೆಗಳನ್ನು ಕತೆಯಾಗಿ ಓದಿಯೇ ಅನುಭವಿಸಬೇಕು. ಅವಕ್ಕೆ ವಿಮರ್ಶೆಯ ಬಿಂಕ ಬಿನ್ನಾಣವಿಲ್ಲ. ಪರಿಚಯದ ಸಡಗರ ಬೇಕಿಲ್ಲ. ಆಫೀಸಿನಿಂದ ಬಂದು ಸುಮ್ಮನೆ ಕಿಟಕಿ ಬದಿಯ ಕುರ್ಚಿಯಲ್ಲಿ ಕೂತು, ಕತೆ ಓದಲು ಪ್ರಾರಂಭಿಸಿದರೆ ಕೊನೆಯ ಸಾಲಿಗೆ ಬಂದಾಗಲೇ ಕಣ್ಣು ಮೇಲೆತ್ತಲಾಗುವುದು..ಉಹ್ ಎಂಬ ನಿಟ್ಟುಸಿರು ತನ್ನಿಂತಾನೆ ಜಾರುತ್ತದೆ. ಇಲ್ಲೆ ಮನೆಯ ಮೂಲೆಯಿಂದ ಲೋಕಾಂತರದ ಟ್ರೇನ್ ಹಿಡಿದಿರುತ್ತೇವೆ.. ಅಲ್ಲೆಲ್ಲ ಓಡಾಡಿ, ಕತೆಯ ಪಾತ್ರಗಳೊಡನಾಡಿ ಅವರ ಸಂಕಟಕ್ಕೆ ಬಿಕ್ಕಿ, ಚಿಕ್ಕ ಖುಷಿಗಳಿಗೆ ನಗು ಸೂಸಿ, ಅವರ ತಳಮಳಕ್ಕೆ ಒಡಲಾಗಿ ಸಹಪ್ರಯಾಣ ಮಾಡುತ್ತೇವೆ.


ಮತ್ತೆ ಮೇಲೆ ಹೇಳಿದ ಅವರ ನೀರು ಕತೆಯ ಸಾಲುಗಳಿಂದಲೇ ಈ ಬರಹವನ್ನು ಮುಗಿಸಬಯಸುತ್ತೇನೆ. - ಲಕ್ಷಾಂತರ ಮನೆಗಳನ್ನು ನಡುನೀರಿನಲ್ಲಿ ಬಿಟ್ಟು ಲಕ್ಷಾಂತರ ಜನರನ್ನು ಅಂಚಿಗೆ ತಳ್ಳಿದ ಈ ಜಲಪ್ರಳಯದ ಅನಂತರದ ಈ ಸುದೀರ್ಘ ನೀರವದ ಬೀದಿಯಲ್ಲಿ, ಇರುಳಿನ ಕೊನೆಗಳಿಗೆಯಲ್ಲಿ, ಆರಾಧ್ಯ ಜೀವದ ಲೇಸಿಗೆಂದು ಹೃದಯ ತುಂಬಿ ತಂದ ಪುಟ್ಟ ಬಿಂದಿಗೆಯೊಂದು ಚಲಿಸಿ ಹೋದ ರೀತಿಯನ್ನು ಸುಮ್ಮನೆ ನೋಡಿದ ಸಂತೋಷನ್ ಗೆ ದೇವರನ್ನೇ ಕಂಡಂತಾಯಿತು.. -


ಮಳೆಯ ಪ್ರಳಯದಲ್ಲಿ ಭಾವನೆಗಳನ್ನು ಲಯಗೊಳಿಸಿ ಹೊಸ ಸೃಷ್ಟಿ ನಡೆಸಿದ ಸೃಜನಶೀಲ ಕತೆಯಿದು.. ತಪ್ಪದೇ ಓದಿ.

Wednesday, March 28, 2007

ಹೊಸ ಬಗೆಯ ಹೂವು

ಹೂಗಳೆಂದರೆ ಚಂದ,ಆಹ್ಲಾದ,
ಕಿರಿಕಿರಿಗೊಂಡ ಮನಸ್ಸಿಗೂ ಮುದದ ಗಂಧ!
ಹೂಗಳೆಂದರೆ ಊರಿನ ನೆನಪು, ಅವಳ ಒನಪು,
ಬೆಳಿಗ್ಗೆ ಕಣ್ಬಿಟ್ಟು ಹಿತ್ತಲಲ್ಲಿಣುಕಿದರೆ ಕಿಲಕಿಲ ಕಿನ್ನರಿಯರ ಕಂಪು!


ಹೂಗಳೆಂದರೆ ಮಹಾನಗರದ ಎಲೈಟ್ ಮತ್ತು ಸೋಲೈಟ್
ಮದುವೆಗಳ ಬಿಂಕಬಿನ್ನಾಣ,
ಎಲ್ಲ ಫಾರ್ಮಲ್ ಭೇಟಿಗಳ ಮೊದಲಲಂಕಾರ,
ಸಾವ ಹೊಸ್ತಿಲಲಿ ಹಿರಿಕಿರಿಯ ನಮಸ್ಕಾರ!

ಹೂಗಳೆಂದರೆ ಹೂವಾಡಗಿತ್ತಿ,
ಅವಳ ಮಕ್ಕಳ ಸ್ಕೂಲ್ ಫೀಸು,
ಸಂಜೆಹೊತ್ತಲಿ ರಸ್ತೆಯಂಚಲಿ ಬುಟ್ಟಿ ಬುಟ್ಟಿ ಕನಸು - ದೇವರಿಗೆ
ಮತ್ತು ಮನೆ ಬೆಳಗುವ ದೇವತೆಯರ ಮುಡಿಗೆ!
ಹೂಗಳೆಂದರೆ ಸರ್ವಋತು ಸೂಚಕ,

ಕೆ.ಎಸ್.ನ. ರೂಪಕ!

ಮೊನ್ನೆ ಹೊಸ ಬಗೆಯ ಹೂವೊಂದರ ಪರಿಚಯವಾಯಿತು..
ನೋಡಿ ಮನ ಭಯಪಟ್ಟಿತು,
ಗಾಬರಿಯ ಕಟ್ಟೆಯಲಿ ಆತಂಕದ ಚಿಲುಮೆ
ಜೀವ ಹೌಹಾರಿ ಡಾಕ್ಟರ ಬಳಿಗೋಡಿ
ಇಂದು ಬೆಳಿಗ್ಗೆ ಆಪರೇಶನ್ನು
ಅಪ್ಪಾಜಿಯ ಕಣ್ಣಲಿ ಪೊರೆಬಂದು ಹೂವು.. :(
ಕೀಳಿಸದೆ ಹೋದರೆ ನೋವು,
ಹೋಗಿಯೇಬಿಡಬಹುದು ನೋಟದ ಕಸುವು!



ಇದೂ ಹೂವೆ!
ಬಳ್ಳಿಯಲಿ ಬಿಡುವಂತಿಲ್ಲ, ಕಿತ್ತು ದೂರವಿಡಬೇಕು..



Thursday, March 22, 2007

" ಹಾಲ್ಕಾಫಿ "

ಕುದಿಯುವ ನೀರನ್ನ ಫಿಲ್ಟರಿಗೆ ಹಾಕಿದೆ. ಫ್ರೆಶ್ಶಾದ ಡಿಕಾಕ್ಷನ್ ಇಳಿಯುತ್ತಿದ್ದಂತೆ ಘಮ್ಮೆನ್ನುವ ಪರಿಮಳ ಅಡಿಗೆ ಮನೆಯಿಡೀ ತುಂಬಿತು. ಒಂದು ಕ್ಷಣ ಪರಿಮಳವನ್ನು ಪೂರ್ತಿ ಆಸ್ವಾದಿಸಿದೆ... ..

ಅಯ್ಯೋ ಎಂತಹ ಕೆಲ್ಸ!

ಚುಕ್ಕಿಯ ಎಲ್ಲ ಪ್ರಜ್ಞೆಗಳೂ ಮಲಗಿ ನಿದ್ರಿಸಿದ್ದರೂ, ಆ ಚೂಪು ಮೂಗು ಮಾತ್ರ ಎದ್ದೇ ಇರುತ್ತೆ.

ಕಾಫಿ ಸ್ಮೆಲ್ ಬಂದ ಕೂಡಲೇ ಎಂಥ ಕುಂಭಕರ್ಣನ ನಿದ್ರೆಯಲ್ಲಿದ್ರೂ, ಯಾವ ಆಟದ ಮಧ್ಯೆ ಇದ್ರೂ, ಅಪ್ಪನ ಕುತ್ತಿಗೆಗೆ ಕೈ ಬಳಸಿ ಅವನ ಲಾಲಿ ಕೇಳುತ್ತಾ ಕಣ್ಣು ತೇಲುತ್ತಿದ್ದರೂ ತಟ್ಟನೆ ಎದ್ದುಬಿಡುತ್ತಾಳೆ.

ಬೇರೆ ಸಮಯದಲ್ಲಿ ಅವಳನ್ನ ನಿದ್ರೆಯಿಂದ ಎಬ್ಬಿಸೋದು ಹರಸಾಹಸ. ಅವಳಾಡುವ ಆಟದ ಮೇಲಿಂದ ಅವಳ ಗಮನ ಸೆಳೆಯಲು ಮನುಷ್ಯ ಮಾತ್ರದವರಿಗೆ ಸಾಧ್ಯವಿಲ್ಲದ್ದು. ಅದಕ್ಕೆ ಅವಳ ನೆಚ್ಚಿ ನ ನಾಯಿ ಪಿಟ್ಕಿ, ಅವಳಪ್ಪನ ಪ್ರೀತಿಯ ಬೆಕ್ಕು ಕಾಳಿ, ಗಿಣಿರಾಮ, ಪಕ್ಕದ ಮನೆಯ ಯಮುನಕ್ಕನ ಆಕಳ ಕರು ಕೆಂಪಿ, ಇವುಗಳಿಗೆ ಮಾತ್ರ ಸಾಧ್ಯ. ಅಲ್ದೇ ಗೇಟಿನ ಮೇಲೆ ಕೂತು ಚೀಂವ್ ಚೀಂವ್ ಅನ್ನುವ ಹೆಸರಿಡದ ಹಕ್ಕಿಯಾದ್ರೂ ಆದೀತು, ಮರಕೋತಿಯಾಡುವ ಅಳಿಲುಗಳ ಪರಿವಾರವೂ ಸಾಕು . . . ಆಟ ಬಂದ್ ! ಎದ್ದು ಬಿಡುತ್ತಾಳೆ. ಅದೇ ನಾವು ಕರೆಯಲಿ. . . ದಿವ್ಯ ನಿರ್ಲಕ್ಷ್ಯ.

ಹೊಟ್ಟೆ ಹಸಿದಿದ್ದರೆ, ನಿದ್ದೆ ತೀಡುತ್ತಿದ್ದರೆ ಅಥ್ವಾ ಇನ್ನೇನೋ ನೈವೇದ್ಯ ಬೇಕಿದ್ದರೆ ಮಾತ್ರ ಅಮ್ಮನವರ ತೇರು ನಮ್ಮಕಡೆಗೆ. ಕಾಫಿ ಪರಿಮಳ ಬಂದ್ರೆ ಸಾಕು ಎಲ್ಲಿದ್ರೂ ಹಾಜರ್ ಅನ್ನಿ. ಈ ಹೆಗ್ಗುಣಕ್ಕೇ ನಾನು ಅವಳನ್ನ ಅವಳಪ್ಪನ ಮಗಳು ಅಂತ ಕರಿಯೋದು. ಆಂ ಏನು? ನಂಗೆ ಮ್ಯಾಚಾಗೋ ಗುಣಗಳ ಬಗ್ಗೆ ಮುಂದೆ ಮಾತಾಡೋಣ. ಅಥವಾ ಯಾರಿಗ್ಗೊತ್ತು, ಈಗಾಗ್ಲೇ ಅವಳಪ್ಪ ಅಂಶು ನಿಮ್ಗೆ ಅಮ್ಮನ ಮಗಳ ಗುಣಗಾನ ಕೇಳಿಸಿಬಿಟ್ಟಿರಬಹುದು.

ನೋಡಿ, ಕೇಳ್ತಿದೆಯ ಗೆಜ್ಜೆಯ ಘಲ್ ಘಲ್? ಅವಳು ಬರ್ತಿರೋ ಅವತಾರ ನೋಡಿ . . .

ಮೂಗಿನ ಹೊರಳೆಗಳೆರಡೂ ಅರಳಿಕೊಂಡಿದ್ರೂ ಕಣ್ಣು ಮಾತ್ರ ಅರ್ಧ ಮುಚ್ಚಿಕೊಂಡೇ ಇದೆ. ರಾತ್ರಿ ಯಾವಾಗಲೋ ಸೆಕೇಲಿ ಚಡ್ಡಿ ಕಿತ್ತೆಸೆದುಬಿಟ್ಟಿದ್ದಾಳೆ. ಬಣ್ಣ ಬಣ್ಣದ ಚಿಟ್ಟೆಯ ಚಿತ್ರದ ಬನೀನು ಮಾತ್ರ ಒಂದು ಕೈಯಿಂದ ಕಳಚಿಹೋಗಿದ್ರೂ ಇನ್ನೊಂದು ಕೈನ ಬಿಗಿಯಾಗಿ ಕಚ್ಚಿಕೊಂಡೇ ಇದೆ. ಅವಳಪ್ಪ ಕಟ್ಟಿದ್ದ ಪಿಳ್ಳು ಜುಟ್ಟು ಚಿಕ್ಕ ಮುದ್ದು ಹೋರಿಗೆ ಹುಟ್ಟಿದ ಎರಡು ಕೊಂಬುಗಳ ತರಹ ಉತ್ತರ ದಕ್ಷಿಣಗಳಿಗೆ ತಿರುಗಿಕೊಂಡ್ಬಿಟ್ಟಿದೆ.

ಅವಳಜ್ಜಿ ದೃಷ್ಟಿ ನಿವಾರಣೆಗೆ ಅಂತ ಕೈಗೆ ಹಾಕಿದ್ದ ಕಪ್ಪುಮಣಿಬಳೆ ಮಲಗಿಕೊಂಡಾಗ ಮುಖಕ್ಕೆ ಒತ್ತಿತ್ತು ಅನ್ಸುತ್ತೆ. ಅಲ್ಲೇ ಎಡಗೆನ್ನೆಯ ಮೇಲೆ ಗುರುತು ಮೂಡಿತ್ತು., ಸ್ವಲ್ಪ ಕೆಳಗೆ ಯಾವಾಗಲೋ ಸುರಿದ ಜೊಲ್ಲಿನ ಕಲೆ ಲಕ್ಷದ್ವೀಪ ಸಮೂಹದ ಮ್ಯಾಪಿನ ಹಾಗೆ.

ಓ, ಉದುರ್ತು ಮುತ್ತು.

"ಚಂದೂ ಕಾಪಿ ಕೊಡೇ"

ನಾನು ಸುಮ್ನಿದ್ದೆ ಮಾತಾಡದೇ.

"ಬಿಚಿ ಕಾಪಿ ಮಾಡು ನೀನು,. ನಾನೂ--ಈವತ್ತು--ನಾನೇ ಬೆಚ್ಚು ಮಾತೀನಿ. ಅದೇ ಕೆಂಪಿ ಪೇಟ್ಟಿದೆಯಲ್ಲಾ - ಕ್ಲೋಜಪ್ - ಅದಾಕ್ಕೋತೀನಿ. ಆತಾ? ಜಾನೆ ಅಮ್ಮಾ ಅಲ್ಲಾ ನೀನು? ಹೂಂ ನಗು ಬತ್ತಾ ಇದೆ - ಎಲ್ಲಿ ಈ ಕೆನ್ನೆಗೊಂದು ಸೀಯಾಗಿರೋ ಮುತ್ತು - ಊಂ - ಸೀ ಇದೆ."

ನಾನು ಹೊರಟೆ, ಬಾತ್ ರೂಂ ಕಡೆ. ಹಿಂದೆಯೇ ಪುಟ್ಟಪುಟ್ಟಹೆಜ್ಜೆಯ ಚಿನ್ನಾರಿ ದೇವತೆ. ಹಲ್ಲುಜ್ಜಿ ಮುಗಿಸಿದ ಅವಳಿಗೆ ಮುಖ ಒರೆಸಲು ಟವೆಲ್ ಕೊಟ್ಟವಳು ಹೇಳಿದೆ.

"ಚುಕ್ಕೀ, ಕುಳ್ಳಮ್ಮೀ, ಅಪ್ಪನ್ನೆಬ್ಸಿ ಅವನಿಗೆ ಬ್ರಷ್ ಮಾಡ್ಸು ಅಷ್ಟೊತ್ತಿಗೆ ಕಾಫಿ ರೆಡಿ."

ಪುಟ್ಟಹೆಜ್ಜೆಗಳು ರೂಮಿನ ಕಡೆ ಘಲ್ಲು ಘಲ್ಲೆಂದವು. ಗಂಟೆ ಆರೂವರೆಯಾಗಿದ್ರೂ ದಿಂಬಿನ ಕೆಳಗೆ ಮುಖ ತೂರಿಸಿ ಸಾಗರೋಲ್ಲಂಘನದ ಭಂಗಿಯಲ್ಲಿ ಪವಡಿಸಿರುವ ಸುಧಾಂಶುವಿನ ನಿದ್ದೆಗೆ ಉಂಟಾಗುವ ಅಡಚಣೆ ನೆನೆದು ನಗುಬಂತು.

"ಅಮ್‌ಚೂ, ಅಮ್‌ಚೂ, ಅಮ್‌ಚಪ್ಪಾ " ಕಿನ್ನರಿಯ ಇಂಪಾದ ರಾಗ. . . ಈಗ ಮೇಲೆಹತ್ತಿ ಕೂತಿರ್ತಾಳೆ, ತನ್ನ ಪುಟ್ಟ ಕೈಗಳಲ್ಲಿ ಕೂದಲು ಕೆದರುತ್ತಾ. ಮತ್ತೆ " ಅಮ್‌ಚೂ, ಏಳಪ್ಪಾ ಬೇಗ, ಅಮ್ಮ ಕಾಪಿ ಮಾತಿದಾಳೆ, ಘಮಘಮಾ ಕಾಪಿ" ಓ ಈಗ ಕಿವಿ ತಿರುಚುತ್ತಿದ್ದಾಳೆ. ಹಾಂ ಅಂತೂ ಸಾಹೇಬರು ಎದ್ದರು.

"ಚು" ಅಂಶೂನ ದನಿ;

"ಅಮ್" ಚುಕ್ಕಿಯ ಉಲಿ;

"ಕ್ಕೀ" ಅಂಶು;

"ಚೂ" ಚುಕ್ಕಿ;

ಮೇಲೆಸೆದು ತೋಳಲ್ಲಿ ತುಂಬಿಕೊಂಡಾಂತ ಕಾಣುತ್ತೆ, ಚುಕ್ಕಿಯ 'ಚಿಕ್ಕ ಝರಿಯ ಜುಳುಜುಳು ನಾದ'ದ ನಗು. ಅಪ್ಪ ಮಗಳ ಸವಾರಿ ಬಾತ್ ರೂಮಿನಿಂದ ಬಂದು ಅಡಿಗೆ ಮನೆಗೆ ಧಾಳಿ ಇಡುವಷ್ಟರಲ್ಲಿ ಕಾಫಿ ರೆಡಿಯಾಗಿತ್ತು.

ಇಬ್ಬರಿಗೂ ಕಾಫಿ ಕೊಟ್ಟು ನಾನೊಂದು ಲೋಟ ಕೈಗೆತ್ತಿಕೊಂಡೆ.

"ಊಂ._.." ಅಸಮಾಧಾನದ ದನಿ "ಚಂದೂ ನಂಗೆ ಹಾಲ್ಕಾಪಿ ಬ್ಯಾಡ.. ಊಂ._ ಅಪ್ಪಂಗೆ ಕೊತ್ತಿದೀಯಲ ಚ್ರಾಂಗ್ ಕಾಪಿ ಅದೇ ಬೇಕು."

ಅಮ್‌ಚೂ ನೋಡು ಮತ್ತೆ, ಅಮ್ಮಂದು ಬರೀ ಮೋಚ, ಬೆಲ್ಗಾ ಮುಂಚೆ ನಾನೇ ಎದ್ದು ಬೆಚ್ಚು ಮಾದಿದೀನಿ, ನಿನ್ನ ಎಬ್ಚಿದೀನಿ. ಆದ್‌ಡೂ ಹಾಲ್ಕಾಪಿ ಕೊತ್ತಿದಾಳೆ. ನೀನೇ ಹೇಳು."

ನಾನು ಅಂಶುನ ನೋಡಿದೆ. ಅವನ ಕಣ್ತುಂಬ ನಗು. ಆದ್ರೂ ಸೀರಿಯಸ್ಸಾದ ಮುಖ ಮಾಡ್ಕೊಂಡು

" ಏನ್ ಮೇಡಂ, ನಮ್ಹುಡುಗಿ ತುಂಬ ಜಾಣೆ. ಅಂತವಳಿಗೇ ಟೋಪಿ ಹಾಕ್ತೀರಲ್ಲ. ಏನೋ ನಾನಾದ್ರೆ ಪೆದ್ದಗುಂಡ.. .. ಅಯ್ ಅಯ್ ಚಂದು ಚೂಟಬೇಡಾ ಬಿಡೇ.. .. ಅಬ್ಬ

ಹೋಗ್ಲಿ ಸ್ವಲ್ಪ ಡಿಕಾಕ್ಷನ್ ಹಾಕ್ಬಿಡು, ಕುಳ್ಳಮ್ಮಿಗೆ ಖುಷಿಯಾಗುತ್ತೆ." ಅಂದ.

ಕೆಂಪಗಾಗಿದ್ದ ಅವನ ತೋಳು ಬಿಟ್ಟು ಚುಕ್ಕಿಯ ಲೋಟಕ್ಕೆ ಎರಡು ಹನಿ ಡಿಕಾಕ್ಷನ್ ಹಾಕಿದೆ.

" ಅಮ್‌ಚೂ, ಬರೀ ಎಲ್ಡೇ ಹನಿ" ಅಳುಮುಖದ ಕಂಪ್ಲೇಂಟ್.

" ಹೋಗ್ಲಿ ಬಿಡು ಪಾಪೂ, ಸಧ್ಯ ಒಂದೇ ಹನಿ ಹಾಕ್ಲಿಲ್ಲವಲ್ಲಾ.. ಈ ಅಮ್ಮಂದ್ರೆ ಹೀಗೆ ಬರೀ ಹಾಲ್ಕಾಫಿ ಕೊಡ್ತಾರೆ. ನಾನು ನಿಂಗೆ ಸಂಜೆ ಉಪಹಾರದರ್ಶಿನೀಲಿ ಸ್ಟ್ರಾಂಗ್ ..ಏನ್ಹೇಳು..

"ಚ್ರಾಂಗ್" ಚುಕ್ಕಿಯ ಉಲಿ;

"ಹಾಂ ಸ್ಟ್ರಾಂಗ್ ಕಾಫಿ ಕೊಡಿಸ್ತೀನಿ ಆಯ್ತಾ. ಬಾ ಈಗ ಸಿಕ್ಕಿರೋದನ್ನ ಗುಳುಂ ಮಾಡೋಣ. ಆವಾಗ ಅಮ್ಮಂಗೆ ಕೊಡ್ಸೋದೇ ಬೇಡ. ಏನಂತೀಯ? " ನನ್ನಿಂದ ಸೇಫ್ ಡಿಸ್ಟೆನ್ಸಿನಲ್ಲಿ ನಿಂತುಕೊಂಡ ಅಂಶು ಚುಕ್ಕಿಗೆ ಸಮಾಧಾನ ಹೇಳಿದ.

ಕೆಂಪಗಾಗಿದ್ದ ಕಣ್ಣು ತಿಕ್ಕುತ್ತಾ ಚುಕ್ಕಿ ನಗುವರಳಿಸಿದಳು.

"ಇಲ್ಲ ಅಮ್‌ಚೂ, ಚಂದೂಗೂ ಕೊದ್‌ಚಾಣ."

ನಾನು ಖುಷಿಯಿಂದ ಅಂಶುನ ಕಡೆ ತಿರುಗಿ ಹುಬ್ಬು ಹಾರಿಸಿದೆ. ಮೇಲೇರಿದ ಹುಬ್ಬು ಕೆಳಗಿಳಿಯುವಷ್ಟರಲ್ಲಿ ಚುಕ್ಕಿ ಮಾತು ಪೂರ್ತಿ ಮಾಡಿದಳು.

"ಆದ್ರೆ ಕಾಪಿ ಬ್ಯಾಡ, ಹಾಲ್ಕಾಪಿ ಕೊದ್‌ಚಾಣ."

ಈಗ ಅಂಶುನ ಕೀಟಲೆಯ ಕಣ್ಣುಗಳಿಗೆ ಸಿಕ್ಕದಂತೆ ನಾನು ಅಡಿಗೆ ಮನೆ ಕಡೆಗೆ ಜಾರಿಕೊಂಡೆ. ಈ ಅಪ್ಪ ಮಗಳಿಬ್ಬರಿಗೂ ತಕ್ಕ ಶಾಸ್ತಿ ಮಾಡಬೇಕಲ್ಲಾ ಅಂದುಕೊಳ್ತಾ ಇದ್ದೆ.

ಅಷ್ಟರಲ್ಲಿ ಅತ್ತೆ ಕರೆದರು.

"ಚಂದನಾ, ಏನೆ ಮಗೂ ಬೇಗೆದ್ಬಿಟ್ಟಿದೀಯ ಇವತ್ತು? ಸಂಕಟ ಆಗ್ತಿದೆಯಾ ? ಬಾ ಒಂತೊಟ್ಟು ಕಾಫಿ ಬೆರಸಿಕೊಡ್ತೀನಿ. ಹಾಲ್ಕಾಫಿ. ಬಸುರಾಗಿದ್ದಾಗ ಬೆಳಿಗ್ಗೆ ಮುಂಚೆ ಸ್ಟ್ರಾಂಗಾಗಿ ಕಾಫಿ ಬೇಡ. ಆಯ್ತಾಮ್ಮಾ. ಅವ್ನೆಲ್ಲಿ ಅಂಶು ಎದ್ದಿಲ್ವಾ ಇನ್ನೂ? ತಗೋ ಕುಡಿ. ಅಂಶುಗೆ ಬೇರೆ ಬೆರಸಿಕೊಡ್ತೀನಿ."

ನಾನು ಕಾಫಿ ಅದೇ ಹಾಲ್ಕಾಫಿ ಬಾಯಿಗಿಟ್ಟೆ.

ಕೈ ತಂತಾನೆ ತುಸುವೇ ಉಬ್ಬಿನಿಂತಿದ್ದ ಹೊಟ್ಟೆಯ ಮೇಲಾಡಿತು. ಒಳಗೆ ಚುಕ್ಕಿ ನಗುತ್ತಾ ಕೇಳುತ್ತಿದ್ದಳು

"ನಂಗಾಮೇಲೆ ಹಾಲ್ಕಾಪಿ ಕೊದಲ್ಲ ತಾನೇ?"

ಬೈಯ್ಕೊಂಡೆ,

" ಇಲ್ಲ ಕಣೇ ಮರಿ ರಾಕ್ಷಸಿ, ಖಂಡಿತಾ ಇಲ್ಲ" .....

Thursday, March 15, 2007

ಈ ಹೊಸ್ತಿಲಲ್ಲೇ. . .

ಇಲ್ಲೇ ಈ ಹೊಸ್ತಿಲಲ್ಲೇ
ನೀನು ಮೊದಲ ಬಾರಿ ನಿಂತಿದ್ದು;
ಕಣ್ಣ ಹನಿ ಒರೆಸುತ್ತ,
ನನ್ನ ನೋಡಿ ನಗುವಿನ ಹೂವರಳಿಸಿದ್ದು;
ನಿನ್ನ ಬಾಳನದಿ
ನನ್ನ ಬದುಕಲ್ಲಿ ಸೇರಿಹೋಗಿದ್ದು;
ನೆಮ್ಮದಿಯ ದಿನಗಳ
ರಂಗೋಲಿಯಿಟ್ಟಿದ್ದು;
ಪ್ರತಿ ಬೆಳಗೂ
ನನ್ನ ಕೆನ್ನೆಗೊಂದು ಮುತ್ತನೊತ್ತಿದ್ದು;
ಪ್ರತಿಸಂಜೆಯೂ
ನಿರೀಕ್ಷೆಯ ನಕ್ಷತ್ರ ನಿನ್ನ ಕಣ್ಣಲ್ಲಿ ಮಿನುಗಿದ್ದು;
ದಿನದಿನವೂ
ಬಾಳ ಹಣತೆ ಬೆಳಗಿದ್ದು;
ದಣಿದು ಬಂದ ನನ್ನ
ಬೆವರನ್ನೊರೆಸಿ ತಂಪು ನೀಡಿದ್ದು;
ಪಡುವಣದಂಚಿನಲ್ಲಿ ಅಡಗಹೊರಟ
ಸೂರ್ಯನ ಹೊಂಗಿರಣಗಳೆಡೆ
ನೀನು ಬೆರಳು ಮಾಡಿದ್ದು. . .


ಇಲ್ಲೆ ಈ ಹೊಸ್ತಿಲಲ್ಲೇ

ನಿನ್ನ ನಗುವಿನ ಹೂವು
ಬಾಡಿ ಹೋಗಿದ್ದು;
ರಂಗೋಲಿ ಅಳಿಸಿಹೋಗಿದ್ದು;
ಮುತ್ತು ಕಳೆದುಹೋಗಿದ್ದು;
ಕಣ್ಣ ನಕ್ಷತ್ರ ಆರಿಹೋಗಿದ್ದು;
ಬದುಕು ಕತ್ತಲಾಗಿದ್ದು;
ಕೊನೆಯ ಬಾರಿ
ನನ್ನೆಡೆ ತಿರುಗಿನೋಡಿದ್ದು;
ಬೆನ್ನು ತಿರುಗಿಸಿ
ಹರಿವು ಬದಲಿಸಿ
ದೂರ ಹೋಗಿದ್ದು. .


ಇನ್ನೇನಿಲ್ಲ, ಮನೆಯೊಳಬರುತ್ತ
ಹೊಸ್ತಿಲೆಡವಿದೆ,
ಎಲ್ಲ ನೆನಪಾಯಿತಷ್ಟೆ.


[ಒಂದು ಹಳೆಯ ನೆನಪಿನ ನೇವರಿಕೆ.. 02.06.2001]

Thursday, March 8, 2007

ಮಗಳ ಕಣ್ಣಲ್ಲಿ ನಾವು ಕಂಡ ಕನಸು..

ಮಧ್ಯಾಹ್ನವಿಡೀ ಯಕ್ಷ ಕುಣಿತ ಕುಣಿದ ಮಳೆ, ಸಂಜೆಯ ಹೊತ್ತಿಗೆ ಮೋಡದ ಹಿಂದೆ ಪಾಪದ ಮುಖ ಮಾಡಿ ನಿಂತಿದ್ದ ಸೂರ್ಯನ ದೈನ್ಯ ನೋಡಲಾಗದೆ, ಹೋಗ್ಲಿ ಆಡ್ಕೊ ಅಂತ ಬಿಟ್ಟ ಕೂಡಲೆ, ಸೂರ್ಯ ಒಂದು ನಿಮಿಷವನ್ನೂ ವೇಸ್ಟು ಮಾಡದೆ ಇಳಿ ಸಂಜೆಯಲ್ಲೆ ಕಣ್ಣಿಗೆ ಕಂಡಲೆಲ್ಲ ಸಂಜೆಯ ಕೆಂಪು ಎರಚಿದ. ಗಡಿಬಿಡಿಯಲ್ಲಿ ಬಣ್ಣ ಮಡಕೆಯಿಂದ ಚೆಲ್ಲಿ ಹೋಗಿ ಬಾನಿಡೀ ಹರಡಿ, ಆಕಾಶದ ನೀಲಿಯೇ ಫೇಡ್ ಆಗಿಹೋಯಿತು. ಯಾರಾದ್ರೂ ನೋಡಿ ಏನಂತಾರೋ ಎಂಬ ಧಾವಂತದಿಂದ ಸೂರ್ಯ ಸರಸರನೆ ಹತ್ತಿರವೇ ಸಿಕ್ಕ ಗುಡ್ಡದ ಹಿಂದೆ ಜಾರತೊಡಗಿದ. ಮನೆಗೆ ಮರಳುವ ದಾರಿಯಲ್ಲಿದ್ದ ಹಕ್ಕಿಗಳಿಗೆ ಈ ಗುಟ್ಟು ಗೊತ್ತಾಗಿ ಸುಮ್ಮನಿರಲಾಗದೆ ದಾರಿಯಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಹೇಳತೊಡಗಿದವು. ಎಲ್ಲೆಲ್ಲೂ ಹಕ್ಕಿಗಳ ಚಿಲಿಪಿಲಿ.

ರಾಮಚಂದ್ರ ರಾಯರು ಮಳೆಯ ಪ್ರತಾಪದಿಂದ ಗದ್ದೆಯಲ್ಲಿ ಏನೇನು ಹೆಚ್ಚುಕಡಿಮೆಯಾಗಿದೆ ನೋಡಲು ಹೋದವರು ಮನೆಗೆ

ವಾಪಸಾಗುತ್ತಿದ್ದರು. ಕ್ಷಣ ಕಾಲ ಅಲ್ಲೇ ಬ್ಯಾಣದ ಬದಿಯಲ್ಲಿ ನಿಂತಿದ್ದು ಸೂರ್ಯನ ಚೇಷ್ಟೆ ನೋಡಿ ಹೊರಟವರಿಗೆ ಹಕ್ಕಿಗಳ ಗಾಸಿಪ್ ನಗು ತರಿಸಿತು. ಹಾಗೆ ಮುಂದರಿದವರಿಗೆ ಶಾಲೆಯ ಬಯಲ ಹತ್ತಿರ ಬಂದಾಗ ಒಂದಿಷ್ಟು ಹುಡುಗರೂ ಮತ್ತು ಮಾಷ್ಟ್ರೂ ಅಲ್ಲೇ ಏನೋ ಬ್ಯಾನರ್ ಕಟ್ಟುತ್ತಾ ನಿಂತಿದ್ದು ಕಾಣಿಸಿತು. ಹತ್ತಿರ ಹೋಗಿ ವಿಚಾರಿಸಿದರು. ಮರುದಿನ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿತ್ತು. ಹಿರಿಯ ಶಿಕ್ಷಣ ತಜ್ಞರೊಬ್ಬರು ಅಥಿತಿಯಾಗಿ ಬರುವವರಿದ್ದರು. ಹಿಂದಿನ ವರ್ಷ ಎಸ್ಸೆಲ್ಸಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನ, ಕ್ವಿಝ್, ಹಲವು ಬೌಧ್ಧಿಕ ಆಟಗಳು ಇನ್ನೂ ಏನೇನೋ ಇತ್ತು. ಊರ ಹಿರಿಯರಿಗೂ ಆಹ್ವಾನವಿತ್ತು. ಮಾಷ್ಟ್ರು ರಾಯರನ್ನೂ ಕರೆದರು. ಅವರಿಗೆ ಏನು ಉತ್ತರ ಹೇಳಿದರೋ ನೆನಪಿಲ್ಲ.

ಕೂಡಲೆ ಮನೆಯ ಹಾದಿ ಹಿಡಿದ ರಾಯರಿಗೆ ಮನೆಯ ದಣಪೆ ಅಡ್ಡ ಬಂದಾಗಲೆ ಎಚ್ಚರ. ಒಳ ಹೋದವರೇ ಕೈಕಾಲು ತೊಳೆದು ದೇವರಿಗೆ ನಮಸ್ಕಾರ ಮಾಡಿದವರು ಜಗುಲಿಯಲ್ಲಿದ್ದ ಆರಾಮಕುರ್ಚಿಯಲ್ಲಿ ಕೂತುಬಿಟ್ಟರು. ಮಡದಿ ಜಯಲಕ್ಷ್ಮಿ ಸಂಜೆಯ ಸೀರಿಯಲ್ ನೋಡಲು ಕರೆಯುತ್ತಿದ್ದರೂ ಒಳಗೆ ಹೋಗದೆ ಅಲ್ಲೇ ಕೂತರು. ಸಂಜೆಯ ದೀಪ ಹೊತ್ತಿತ್ತು. ಕಿಟಕಿಯ ಕಬ್ಬಿಣದ ಡಿಸೈನು ಗೋಡೆಗಳ ಮೇಲೆ ಇನ್ನೋಂದೇ ವಿನ್ಯಾಸ ರಚಿಸಿತ್ತು.

ಆ ವಿನ್ಯಾಸಗಳನ್ನೇ ನೋಡುತ್ತಿದ್ದ ರಾಯರ ಕಣ್ಣು ಕಂಡ ನೋಟ ಮಾತ್ರ ಬೇರೆಯದೇ. ಆ ವಿನ್ಯಾಸಗಳ ಮರೆಯಿಂದ ಮಗಳು ಮಧುರಳ ನಿಲುವು ಊಂಹೂ ಎರಡು ಮಕ್ಕಳ ಅಮ್ಮ ಈಗಿನ ಮಧುರ ಅಲ್ಲ, ಅವತ್ತಿನ ಎರಡು ಜಡೆಯ ಪುಟ್ಟಿಯದು ಮೂಡತೊಡಗಿತ್ತು. ಬೆಳಿಗ್ಗೆ ಅವಳನ್ನು ಎಬ್ಬಿಸುವುದೇ ಒಂದು ಹರಸಾಹಸ ರಾಯರಿಗೆ. ದಿನಾ ರಾತ್ರಿ ಮಲಗುವಾಗ, 'ಅಪ್ಪಾಜಿ

ಬೆಳಿಗ್ಗೆ ಐದು ಗಂಟೆಗೇ ಎಬ್ಬಿಸು,' ಅಂತ ಹೇಳಿ ಮಲಗುತ್ತಿದ್ದ ಮಗಳ ಅಹವಾಲಿಗೆ ಉತ್ತರವಾಗಿ ರಾಯರು ನಾಲ್ಕೂಮುಕ್ಕಾಲಿಗೆ ಅಲಾರ್ಮ್ ಇಟ್ಟು ಎದ್ದು ಬಚ್ಚಲೊಲೆಗೆ ಬೆಂಕಿ ಹಾಕಿ, ಮಧುರಳನ್ನು ಎಬ್ಬಿಸುವ ಹೊತ್ತಿಗೆ ಐದೂವರೆಯಾಗಿ ಹಂಡೆಯಲ್ಲಿನ ನೀರು ಕುದಿಯತೊಡಗುತ್ತಿತ್ತು. ಅಷ್ಟು ಹೊತ್ತಿಗೆ ಎದ್ದೂ ಮಧುರಳಿಗೆ ಇನ್ನೂ ಕಣ್ಣು ಕೂತೇ ಇರುತ್ತಿತ್ತು. ಪತ್ನಿಗೆ ಎದ್ದು ಕಾಫಿ ಮಾಡಿಕೊಡೆ ಪಾಪ ಮಗೂಗೆ ಎಂದರೆ ಅವಳಿಗೆ ಸಿಟ್ಟೋ ಸಿಟ್ಟು. "ಅವಳು ಎದ್ದು ಓದೋ ವೇಷಕ್ಕೆ ಕಾಫಿ ಬೇರೆ. ಒಂದಿನ ತಾನಾಗೆ ಅಲಾರ್ಮ್ ಇಟ್ಟು ಐದು ಗಂಟೆಗೆ ಏಳಲಿ. ಒಂದಿನ ಏಳಲಿ ಸಾಕು, ದಿನಾ ಕಾಫಿ ಮಾಡಿಕೊಡ್ದೆ ಇದ್ರೆ ಕೇಳಿ. ಅಂತ ಸಿಡುಕುವಳು. ಹಂಗೂ ಹಿಂಗೂ ಅವಳನ್ನ ಪುಸಲಾಯಿಸಿ ಕಾಫಿ ಮಾಡಿಸಿಕೊಳ್ಳುವಾಗ ಆರು ಗಂಟೆಯೇ ಆಗಿರುತ್ತಿತ್ತು. ಮತ್ತೆ ಅರ್ಧ ಗಂಟೆಗೆಲ್ಲ ಮಗಳು ಪುಸ್ತಕ ಬ್ಯಾಗಿಗೆ ತುಂಬಿ ಹಿತ್ತಲಲ್ಲಿ ಗಿಡಕ್ಕೆ ನೀರು ಹೊಯ್ಯುತ್ತಿರುತ್ತಿದ್ದಳು.

ಅವಳು ಬೇಲಿಯಂಚಲ್ಲಿದ್ದ ಗಂಟೆದಾಸವಾಳದ ಹೂವು ಕೊಯ್ಯುವಾಗ, ಪತ್ನಿ ದೂರು ಹೇಳುತ್ತಿದ್ದಳು. ನೋಡಿ ಅರ್ಧ ಗಂಟೆಯೂ ಓದಿಲ್ಲ ಎಸ್ಸಲ್ಸಿ ಬೇರೆ, ನಾನು ಹೇಳಿದರಂತೂ ಅವಳ ಕಿವಿಗೇ ಹೋಗುವುದಿಲ್ಲ. ನೀವಾದ್ರೂ ಹೇಳಬಾರದೆ. ಸರಿ ಹೇಗೂ ಹೂವು ಕೀಳುತ್ತಾ ಇದ್ದಾಳೆ ಮಾತಾಡೋಣ ಅಂತ ಹೋಗುವಾಗ ಅವಳು ತುಂಬೆಯ ಹೂವು ಕೊಯ್ಯುತ್ತಿದ್ದವಳು, ನಾನು ಹತ್ತಿರ ಹೋದಕೂಡಲೇ ಅಲ್ಲಿ ಹೊಸದಾಗಿ ಮೊಳಕೆಯೊಡೆದಿದ್ದ ಸಿಕ್ಸ್‌ಮಂತ್ ತೋರಿಸುತ್ತಾಳೆ. ಅದು ನೋಡಿ ಮುಗಿಯುವಾಗ ಅಲ್ಲಿ ಬಿದಿರಮಟ್ಟಿಯಲ್ಲಿ ಬಂದು ಗೂಡು ಕಟ್ಟಿದ ಅದ್ಯಾವುದೋ ಹೆಸರು ಗೊತ್ತಿಲ್ಲದ ಹಕ್ಕಿಯ ಕೂಗು ಕೇಳಿಸುತ್ತದೆ. ಅದನ್ನ ನಾವಿಬ್ಬರೂ ನೋಡಿ ಬರುವಾಗ ನನಗೆ ಅಲ್ಲಿ ಬೇಲಿಯ ಸಾಲಿನಲ್ಲಿ ನೆಟ್ಟಿದ್ದ ಅನಾನಸ್ ನೆನಪಾಗುತ್ತದೆ. ಇಬ್ಬರೂ ಅದರ ಬೆಳವಣಿಗೆ ನೋಡಿಕೊಂಡು ಹಿಂದಿರುಗುವಾಗ ಗುಲಾಬಿ ಗಿಡಗಳ ಕಟ್ಟಿಂಗ್ ಮಾಡಬೇಕಾಗಿದ್ದು ನೆನಪಾಗುತ್ತದೆ. ಅದನ್ನೆಲ್ಲ ಮಾಡಿ ಮುಗಿಸಿ ಮನೆಯೊಳ ಹೋಗುವಾಗ ರೇಡಿಯೋದಲ್ಲಿ ಏಳೂವರೆಯ ವಾರ್ತೆ ಅರ್ಧ ಮುಗಿದಿರುತ್ತದೆ. ಆಗ ಹೆಂಡತಿ ತಂದುಕೊಡುವ ಕಾಫಿಯಂತೆ ಅವಳ ಕಣ್ಣೂ ಹೊಗೆಯುಗುಳುತ್ತದೆ. ಹೋಗಿ ಹೋಗಿ ನಿಮಗೆ ಹೇಳಿದೆನಲ್ಲಾ ಎಂಬ ಸಂತಾಪದಿಂದ. ಮಧುರಳಿಗೆ ಅಮ್ಮನ ಸಿಟ್ಟು ತಾಗುವುದೇ ಇಲ್ಲ.

ಮಧುರಳಿಗೆ ಅಮ್ಮನ ಸಿಟ್ಟು ತಾಗುವುದೇ ಇಲ್ಲ. ನನ್ನವಳು ಈಗ ಇಷ್ಟು ಸಿಟ್ಟು ಮಾಡಿದರೂ ಅವಳು ಶಾಲೆಗೆ ಹೊರಡುವಾಗ ಮಾತ್ರ ಮಧುನ ಕೈನೋಯುತ್ತೇನೋ ಎಂಬಂತೆ ಅವಳ ಶಾಲೆಯ ಬ್ಯಾಗ್ ಕೈಯಲ್ಲಿ ಹಿಡಿದು ಅವಳನ್ನು ಸೈಕಲ್ ಹತ್ತಿಸಿ ಟಾಟಾ ಮಾಡುತ್ತಾಳೆ. ಏನಿದೂ ಇಷ್ಟೊಂದು ಉಪಚಾರ ಎಂದು ಛೇಡಿಸಿದರೆ ಸಾಕು ಅವಳ ಚೆಹರೆಯೇ ಬದಲಾಗುತ್ತದೆ. ಎಂದಿನ ಉತ್ತರ ರೆಡೀ ಇರುತ್ತದೆ. "ಏನೋ ನಮ್ಗೆಲ್ಲ ಶಾಲೆಯ ಕಟ್ಟೆ ಹತ್ತಲಿಕ್ಕಾಗಲಿಲ್ಲ, ಮಗಳು ಹತ್ತಿದವಳು ಚೆನ್ನಾಗಿ ಓದಲಿ ಅಂತ ಆಸೆಯಪ್ಪಾ...


ಹೀಗೆ ಉರುಳಿದ ದಿನಗಳ ಕೊನೆಗೆ ಒಂದು ಏಪ್ರಿಲ್ ಬಂತು. ಮೊದಲ ವಾರವಿಡೀ ಮಧುರಳಿಗೆ ಪರೀಕ್ಷೆ. ಅವಳು ಎಂದಿನಂತೆ ಆರುಗಂಟೆಗೆ ನಿದ್ದೆಕಣ್ಣಲ್ಲೆ ಎದ್ದು ಓದಿ ಹಿತ್ತಲಲ್ಲಿ ನಲಿದು ಪರೀಕ್ಷೆಗೆ ತಯಾರಾಗಿ ಹೋದಳು. ದೇವರಿಗೆ ಮಾತ್ರಾ ನನ್ನವಳಿಂದ ದಿನಾ ಒಂದು ಎಕ್ಸ್‌ಟ್ರಾ ತುಪ್ಪದ ದೀಪ! ಏಪ್ರಿಲ್ ಮುಗಿದು ಮೇಯ ಕೊನೆಯ ವಾರ ಒಂದಿನ ಮಧ್ಯಾಹ್ನ ಊಟ ಮಾಡುವಾಗ ಪ್ರದೇಶಸಮಾಚಾರದಲ್ಲಿ ಎಸ್ಸಲ್ಸಿ ರಿಸಲ್ಟು ಪ್ರಕಟವಾಗಿದೆ ಅಂತ ಗೊತ್ತಾಗಿದ್ದೆ ಮಧುರಳ ಊಟ ಚುಟುಕಾಯಿತು. ಅವಳಮ್ಮನ ಆತಂಕ ಇಲ್ಲಿ ಬರೆಯಲಿಕ್ಕೆ ಬರುವುದಿಲ್ಲ. ನನಗೂ ಏನೋ ಎಂಬ ಆತಂಕವಿದ್ದರೂ ಮಧುರಳ ಚುರುಕುಬುಧ್ದಿಯ ಬಗ್ಗೆ ವಿಶ್ವಾಸವಿತ್ತು. ಮರುದಿನ ರಿಸಲ್ಟು ನೋಡಲು ಶಾಲೆಗೆ ಹೊರಟವಳನ್ನ ನಾನೂ ಜೊತೆಗೇ ಬರಲಾ ಅಂತ ಕೇಳಿದೆ. ಬೇಡವೆಂದು ತಲೆಯಾಡಿಸಿದವಳೇ ಸೈಕಲ್ ಹತ್ತಿ ಬಾಣದಂತೆ ಸಾಗಿದ್ದಳು. ಮತ್ತೆ ಅರ್ಧ ಗಂಟೆಗೆ ವಾಪಸ್ಸಾದವಳ ಮುಖದ ಮೇಲೆ ಮೂಡಿದ ಬೆವರು ಹನಿಗಳಲ್ಲಿ ಬೆಳಗಿನ ಸೂರ್ಯ ಹೊಳೆಯುತ್ತಿದ್ದ. ತುಟಿಗಳಂಚಲ್ಲಿ ಗೆದ್ದ ನಗುವಿತ್ತು. ಕಣ್ಣಮಿಂಚಲ್ಲಿ ಸಂತಸದ ಹೊಳಪು.

ಅವಳು, ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಳು. ಶಾಲೆಗೆ ಫಸ್ಟು. ರಾಜ್ಯಮಟ್ಟದಲ್ಲೂ ನೂರರ ಸ್ಥಾನದೊಳಗೆ. ಅವಳಮ್ಮನ ಹೆಮ್ಮೆಯನ್ನ ಇಲ್ಲಿ ಮಾತಿನಲ್ಲಿ ಬಣ್ಣಿಸಲಾಗುವುದಿಲ್ಲ. ಪುಟ್ಟ ಊರಿನ ಕನ್ನಡ ಶಾಲೆಯಲ್ಲಿ ಟ್ಯೂಷನ್ನಿನ ಆಸರೆಯಿಲ್ಲದೆ, ಮಗಳು ಇಷ್ಟು ಸಾಧನೆ ಮಾಡಿದ್ದು ಅಮ್ಮನಿಗೆ ಹೆಮ್ಮೆ. ತಾನು ಪಡೆಯಲಾಗದ್ದನ್ನು ಮಗಳು ಪಡೆದು ಗೆದ್ದಳಲ್ಲಾ ಅಂತ ಸಂತಸ. ಒಂದು ವಾರವಿಡೀ ಅವಳು ಏನು ಓದಬಹುದು ಮುಂದಕ್ಕೆ ಅಂತ ಮೂರು ಜನಕ್ಕೂ ಚರ್ಚೆ. ಕೊನೆಗೆ ಅವಳು ಬೆಂಗಳೂರಿನಲ್ಲಿ ನನ್ನವಳ ಅಣ್ಣನ ಮನೆಯಲ್ಲಿ ಎಲೆಕ್ಟ್ರಾನಿಕ್ಸ್ ಪಿ.ಯು.ಸಿ ಓದಲಿ ಅಂತ ನಿರ್ಧಾರವಾಯಿತು. ಎಲೆಕ್ಟ್ರಾನಿಕ್ಸ್ ಮಧುರಳ ಇಷ್ಟ. ಬೆಂಗಳೂರಿನ ಒಳ್ಳೆಯ ಕಾಲೇಜಿನಲ್ಲೇ ಮಗಳು ಓದಬೇಕೆಂದು ಅವಳಮ್ಮನ ಇಷ್ಟ. ಸರಿ ಎಲ್ಲ ರೆಡಿಯಾಯಿತು.

ಬೆಂಗಳೂರಿಗೆ ಹೋಗುವ ದಿನ ಬೆಳಿಗ್ಗೆ ಮಧುರ ಐದು ಗಂಟೆಗೇ ಎದ್ದಿದ್ದಳು. ನಾನು ಎಬ್ಬಿಸದೆಯೇ. ಕಾಫಿಯ ಪರಿಮಳ ಮೂಗಿಗೆ ಬಂದು ಎಚ್ಚರಾಗಿ ನೋಡಿದೆ. ಅವಳಮ್ಮನೂ ಎದ್ದಿದ್ದಾಳೆ ಕೈಯಲ್ಲಿ ಬಿಸಿಬಿಸಿ ಕಾಫಿ. ಕಣ್ಣು ಮೂಗು ಕೆಂಪಾಗಿದ್ದವು. ಮಗಳಿನ್ನು ಜೊತೆಯಲ್ಲಿರುವುದಿಲ್ಲವಲ್ಲಾ ಅನ್ನುವ ತಳಮಳ.

ಮಧುರಳನ್ನು ಬೆಂಗಳೂರಿಗೆ ಕಳಿಸಿ ತುಂಬಾ ದಿನಗಳವರೆಗೂ ನಾನು ಐದು ಗಂಟೆಗೆ ಅಲಾರ್ಮ್ ಇಡುತ್ತಿದ್ದೆ. ಆದರೆ ಕೂಡಲೇ ಏಳುತ್ತಿರಲಿಲ್ಲ. ಹೂ ಕೀಳುವಾಗ ಬೇಲಿತುದಿಯ ಗಂಟೆದಾಸವಾಳ ಕೀಳಬೇಕು ಅಂತಲೇ ಅನ್ನಿಸುತ್ತಿರಲಿಲ್ಲ. ಸಿಕ್ಸ್‌ಮಂತ್ ಹೂಗಳು ಅರಳಿ ಒಣಗುತ್ತ ಹೋಗಿದ್ದವು. ಬಿದಿರು ಮಟ್ಟಿಯ ಹಕ್ಕಿ ಗೂಡು ತೊರೆದು ಬೇರೆ ಕಡೆ ಹೋಗಿತ್ತು. ಅನಾನಸ್ ಗಿಡ ಫಲ ಬಿಟ್ಟಿದ್ದರೂ ಕೀಳುವ ಮನಸ್ಸಿರಲಿಲ್ಲ. ಗುಲಾಬಿ ಕಟ್ಟಿಂಗಿನ ಕತ್ತರಿಗೆ ತುಕ್ಕು ಹಿಡಿಯುತ್ತಿತ್ತು. ನನ್ನವಳು ದಿನಾ ಮಧುರಳ ಬಿ.ಎಸ್.ಎ. ಸೈಕಲ್ ಒರೆಸಿಡುತ್ತಿದ್ದಳು.


ಹೀಗಿರುವಾಗ ಒಂದು ದಿನ ಮಧುರಳ ಶಾಲೆಯ ಮಾಷ್ಟ್ರು ಹೇಳಿಕಳಿಸಿದ್ದರು. ಪ್ರತಿಭಾ ಪುರಸ್ಕಾರವಿದೆ. ಮಧುರಳಿಗೆ ಮೊದಲ ಬಹುಮಾನ, ಅವಳ ಬದಲು ನೀವು ತಂದೆತಾಯಿ ಬರಬೇಕೂಂತ. ನಿಗದಿಯಾದ ದಿನ ನಾನೂ ನನ್ನವಳೂ ಮಧುರಳ ಶಾಲೆಯ ಕಟ್ಟೆ ಹತ್ತಿದೆವು. ಅಲ್ಲಿ ಹಿಂದಿನ ಸಾಲಿನ ಕುರ್ಚಿಯಲ್ಲಿ ಕುಳಿತಿದ್ದ ನಮ್ಮನ್ನ ಡಯಾಸಿಗೆ ಕರ್ಕೊಂಡು ಹೋಗಿ ಕೂರಿಸಿದಾಗ ಮಾತ್ರ ತಬ್ಬಿಬ್ಬಾದೆವು. ಅಲ್ಲಿ ನಮ್ಮನ್ನ ಯಶಸ್ವೀ ಪ್ರತಿಭೆಯ ತಂದೆತಾಯಿಗಳು ಅಂತ ಹಾರವಿಟ್ಟು ಮಧುರಳಿಗೆ ಸಲ್ಲಬೇಕಾದ ಬಹುಮಾನವನ್ನ ನಮ್ಮ ಕೈಯಲ್ಲಿಟ್ಟಾಗ ಮಾತ್ರ ನಮ್ಮಿಬ್ಬರ ಕಣ್ಗಳು ತುಂಬಿ ಬಂದಿದ್ದವು.. ಮಾತು ಹೊರಡಲಿಲ್ಲ.

ವಿದ್ಯೆಯ ಕನಸು ಮಾತ್ರ ಕಂಡ ನಮಗೆ ವಿದ್ಯೆಯನ್ನೇ ಸಾಕ್ಷಾತ್ಕರಿಸಿಕೊಂಡ ಮಗಳು. ಅವಳ ಮೂಲಕ ಶಾಲೆಯ ಕಟ್ಟೆ ಹತ್ತಿ ಈ ಸನ್ಮಾನ ಸಿಕ್ಕಿತಲ್ಲ ಎಂಬ ಭಾವದಲ್ಲಿ ನಾವು ಮೂಕರಾಗಿಹೋಗಿದ್ದೆವು. ಮನೆಗೆ ಬರುವಾಗ ದಾರಿಯಲ್ಲಿ ನನ್ನವಳು ಹೇಳಿದಳು. ಇದನ್ನು ನೋಡಲು ಈಗಿಲ್ಲಿ ಮಧುರ ಇರಬೇಕಿತ್ತು. ನಾನು ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಅವತ್ತು ರಾತ್ರೆ ಇಬ್ಬರೂ ಮಧುರಂಗೆ ಎಸ್.ಟಿ.ಡಿ ಮಾಡಿ ಮಾತಾಡಿಸಿದ್ದೆವು. ಇದೆಲ್ಲ ಈಗ ನಿನ್ನೆ ನಡಿಯಿತೇನೋ ಎಂಬಷ್ಟು ಹಸಿರಾಗಿದೆ. ಆಮೇಲೆ ಎಷ್ಟೊಂದು ವರ್ಷಗಳು ಕಳೆದಿವೆ.

ಅವಳು ಒಂದೊಂದೇ ವರ್ಷವನ್ನೂ ಚೆನ್ನಾಗಿ ಓದಿ ಇಂಜಿನಿಯರ್ರಾದಳು. ಮುಂದೆ ಮೆಚ್ಚಿದವನೊಂದಿಗೆ ಮದುವೆಯಾದಳು. ಈಗ ಎರಡು ಪುಟ್ಟ ಮಕ್ಕಳ ಪ್ರೀತಿಯ ಅಮ್ಮನಾಗಿದ್ದಾಳೆ. ಪ್ರತೀವರ್ಷವೂ ಮಳೆಗಾಲದಲ್ಲಿ ಹದಿನೈದಿಪ್ಪತ್ತು ದಿನ ಊರಲ್ಲಿರಲು ಬರುತ್ತಾಳೆ. ಅವಳು ಬಂದಾಗ ಮಾತ್ರ ಅವಳೇ ಕೊಯ್ದು ತರುವ ಗಂಟೆದಾಸವಾಳ ಹೂಗಳ ಪೂಜೆ. ಸಂಜೆ ಅವಳ ಶಾಲೆಯವರೆಗೂ ಎಲ್ಲರೂ ವಾಕಿಂಗ್ ಹೋಗುತ್ತೇವೆ. ಎಲ್ಲ ಸಂತಸದ ಅಧ್ಯಾಯಗಳೇ ತುಂಬಿವೆ. ಆದ್ರೂ ಈ ಎಲ್ಲ ಸಂತಸಕ್ಕಿಟ್ಟ ಕಿರೀಟ ಅವತ್ತು ನಾವು ಅವಳ ಶಾಲೆಯ ಡಯಾಸಲ್ಲಿ ಅನುಭವಿಸಿದ್ದು.


ನಮ್ಮ ಎಳೆತನದ ಕನಸಿನ ಚೂರೊಂದನ್ನ ನಾವು ಕೇಳದೆಯೇ ಆ ಪುಟ್ಟ ಹುಡುಗಿ ನಮಗೆ ಹೆಕ್ಕಿಕೊಟ್ಟಿದ್ದಳು. ನಮ್ಮ ಎದೆಗೂಡಲ್ಲಷ್ಟೆ ಉಳಿದು ಹೋದ ಆಸೆಯ ಮೊಟ್ಟೆಗೆ ಆ ಚಿನ್ನಾರಿ ಕಾವು ಕೊಟ್ಟು ಮರಿಮಾಡಿ ಹಾರಿಬಿಟ್ಟಿದ್ದಳು. ನಮ್ಮ ನೆನಪಿನ ನೆಲದಾಳದಲ್ಲಿ ಉಳಿದಿದ್ದ ಬಯಕೆಯ ಗಡ್ಡೆಯಲ್ಲಿ ಅವಳು ನೀರೆರದು ಮೊಳಕೆಯೊಡೆಸಿದ್ದಳು. ನಾವೆಂದೂ ಹತ್ತಲಾಗದೇ ಹೋದ ಮೆಟ್ಟಿಲನ್ನ ಆ ಪುಟಾಣಿ ಕೈಗಳು ಹತ್ತಿಸಿದ್ದವು.


ಇವತ್ತು ಸಂಜೆ ಮಾಷ್ಟ್ರು ನಾಳಿನ ಪ್ರತಿಭಾ ಪುರಸ್ಕಾರಕ್ಕೆ ಕರೆದಾಗ ಈ ಎಲ್ಲ ಸಂಗತಿಗಳು ಒಮ್ಮಿಂದೊಮ್ಮೆಗೇ ಮನದ ಕೊಳದಲ್ಲಿ ಅಲೆಯೆಬ್ಬಿಸಿದವು. ಅಲೆಗಳ ಚಿನ್ನಾಟವನ್ನ ನೀವು ನೋಡಿದಿರಷ್ಟೆ. ಇರಿ, ನನ್ನವಳಿಗೆ ನಾಳಿನ ಸಮಾರಂಭಕ್ಕೆ ರೆಡಿಯಾಗಿರಲು ಹೇಳಬೇಕು. ನಾಳೆ ಇನ್ಯಾವುದೋ ತಾಯ್ತಂದೆಗಳ ಕನಸು ನನಸಾಗಿರುತ್ತೆ. ಅದನ್ನು ನೋಡಲೆಂತಹ ಖುಶಿ. ತುಂಬ ಚೆನ್ನಾಗಿರತ್ತೆ. ನೀವೂ ಬನ್ನಿ.

Tuesday, March 6, 2007

ಇವತ್ತಿನ ನೇವರಿಕೆ..

ನನ್ನ ಇಷ್ಟದ ಕಾರ್ಟೂನ್ ಸರಣಿಯ ಒಂದು ಆಪ್ತ ಚುಟುಕು..

ಇದಕ್ಕೆ ವ್ಯಾಖ್ಯಾನ ಬೇಕಿಲ್ಲವೇನೋ

[The secret to enjoying your job is to have a hobby thats even worse..]

ಕಾರ್ಟೂನ್ ಕರ್ತೃ ಬಿಲ್ ವಾಟರ್ ಸನ್.ವಿವರಗಳು ಇಲ್ಲಿ ಸಿಗುತ್ತವೆ. http://en.wikipedia.org/wiki/Bill_Watterson

Monday, March 5, 2007

ಗಝಲ್ ಒಂದರ ಗುಂಗಿನಲ್ಲಿ..

ಹಮ್ ಕೊ ದಿಲ್ ತಕ್ ಆನೆ ಕಾ ಆಶಾ ಥಿ

ತುಮ್ ತೊ ಜಾನ್ ತಕ್ ಆಗಯೆ..

- ಮಿರಾಝ್ ಎ ಗಝಲ್ ಎಂಬ ಧ್ವನಿಸುರುಳಿಯಲ್ಲಿ ಕೇಳಿದ ಸಾಲು.. ಆಶಾ ಭೋಸ್ಲೆ-ಗುಲಾಮ್ ಅಲಿಯವರ ಗಾಯನದಲ್ಲಿ..


ಒಂದು ಸುಂದರ ಭಾವಭರಿತ ಗಝಲ್ ಏನೆಲ್ಲ ಭಾವನೆಗಳನ್ನು ಪ್ರೇರೇಪಿಸುತ್ತದೆ..!


ದೆಯ ಗುಡಿಯೊಳಗೆ ಬರಲೆಂದು

ನಿರೀಕ್ಷೆಯ ಹೊಸ್ತಿಲಲಿ ಕಾದೆ

ನೀನು ದೊಡ್ಡವ

ಎದೆಯ ಗುಡಿಯೇನು - ಜೀವದಾಳದಲಿ ನೆಲೆ ನಿಂತೆ


ನಾನು ಕೃತಜ್ಞೆ.

ಕ್ಲೀನರ್ ಹುಡುಗನ ಖಾಲಿ ಕಣ್ಣು

ಹೊರಗೆ ಸಣ್ಣ ಮಳೆ,

ರಸ್ತೆಯ ಮೇಲೆ ನೀರಾಗಿ ಹರಿಯುವ ಕೊಳೆ;

ಕೆಫೆಟೋರಿಯಾದ ಮೂಲೆ ಮೇಜು ಬೆಚ್ಚಗಿತ್ತು,

ಜೊತೆಗೆ ಗೆಳೆಯನಿದ್ದ; ಕಾಫಿ ಸ್ಟ್ರಾಂಗಿತ್ತು,

ನೆಂಚಿಕೊಳ್ಳಲು ಗಂಭೀರ ಚರ್ಚೆಯಿತ್ತು.


ಪಕ್ಕದ ಮೇಜಿನ ಎಂಜಲೊರೆಸುವ

ಕ್ಲೀನರ್ ಹುಡುಗನಿಗೆ ದಿವ್ಯ ನಿರ್ಲಕ್ಷ್ಯ,

ನನ್ನ ಮೈಗೆ ಅಗುಳು ಸಿಡಿದು ಸಿಟ್ಟಿಗೆದ್ದೆ,

ಅವನ ಹರಿದು ಹೋಗಿದ್ದ ಕಾಲರ್ ಹಿಡಿದೆ,

ತಲೆ ಮೇಲೆತ್ತಿ ನನ್ನ ನೋಡಿದ ಕಂಗಳು

ಖಾಲಿಯಿದ್ದವು;

ಬಹುಶಃ ಎಂಜಲೊರಸೀ... ಒರಸೀ.


ಹೆದರಿದ್ದರೂ ಕೊಂಕಿದ್ದ ತುಟಿಗಳಂಚಲ್ಲಿ ಅಸಡ್ಡೆಯಿತ್ತು,

ಶಾಲೆಯಲ್ಲಿ ಓದದೇ ಬಿಟ್ಟುಬಂದ ಪದ್ಯಗಳ ಪಲ್ಲವಿಯಿತ್ತು,

ಜಿಡ್ಡುಗಟ್ಟಿದ ಕೆನ್ನೆಗಳ ಮೇಲೆ ಸೀನಿಯರ್ ಭಟ್ಟರೆಳೆದ ಬರೆಯಿತ್ತು,

ಕೆಂಪಾಗಿ ಕೆದರಿದ್ದ ಕೂದಲಡಿಯಲ್ಲಿ
ಅವನನ್ನಿಲ್ಲಿಗೆ ಕಳಿಸಿ ಕಣ್ಣೀರಿಟ್ಟ ಅಮ್ಮನಕ್ಕರೆಯಿತ್ತು,

ಜಾರುತ್ತಿದ್ದ ಚಡ್ಡಿಯ ಬೆಲ್ಟ್ ಹುಕ್ಕಿನಲ್ಲಿ

ಅವನಪ್ಪ ಕೊಟ್ಟ ಉಡಿದಾರವಿತ್ತು,


ಅವನ ಮೈಯಿಡೀ ತಿರಸ್ಕಾರವೇ ಮೂರ್ತಿವೆತ್ತಂತಿತ್ತು

ತನಗೆಟುಕದ ಎಲ್ಲ ಚಂದದ ವಿಷಯಗಳ ಬಗ್ಗೆ -

ಇಸ್ತ್ರಿ ಮಾಡಿದ ಅಂಗಿ, ಬೈಂಡು ಹಾಕಿದ ಪುಸ್ತಕ,ತಿದ್ದಿ ತೀಡಿದ ತಲೆ,

ಜೇಬುಗಳಿಂದಿಣುಕುವ, ಅಮ್ಮನೋ ಅಮ್ಮಾವ್ರೋ ಮಡಿಚಿಕೊಟ್ಟ ಕರ್ಛೀಫು -

ಎಲ್ಲದರ ಬಗ್ಗೆ ತಿರಸ್ಕಾರವಿತ್ತು.


ಕುಡಿದ, ಕುಡಿಯದ, ಚೆಲ್ಲಿದ ಕಾಫಿ ಅವನಿಗೆ ಒಂದೇ ಆಗಿತ್ತು.

ತಿಂಡಿ ಆಗಷ್ಟೇ ಸರ್ವ್ ಮಾಡಿದ್ದೂ,ಉಂಡು ಬಿಟ್ಟೆದ್ದಿದ್ದೂ ಅವನಿಗೆ ಸಮಾನವಿತ್ತು.

ಈಗಾಗಲೇ ಹರಿದಿದ್ದ ಕಾಲರ್ ಮತ್ತಷ್ಟು ಹರಿವುದೆಂಬ ಆತಂಕವಿತ್ತು.

ಗಲ್ಲಾದ ಹಿಂದಿದ್ದ ಯಜಮಾನನ ಕಾಲಿಂದ ಒದೆ ತಿನ್ನುವ ಹೆದರಿಕೆಯಿತ್ತು.


ಹೊರಗೆ ಸಂಘ, ಸಂಘಟನೆಗೆಳ ಕೂಗು ಆಕಾಶಕ್ಕೇರಿತ್ತು

ಬಾಲಕಾರ್ಮಿಕರ ಬವಣೆಯ ವಿರುಧ್ಧ.

ಆಯೋಗಗಳ ಮೇಲೆ ಬೆಣ್ಣೆ ಸವರಲು ಸರ್ಕಾರವಿತ್ತು.


ಆಕಾಶಕ್ಕೇರಿದ ಕೂಗು ಹೋಟೆಲೊಳ ಹೊಕ್ಕಿರಲಿಲ್ಲ

ನಮ್ಮೊಳಹೊಕ್ಕಿರಲಿಲ್ಲ.

ಒಬ್ಬ ಹುಡುಗ ಲೋಟ ತೊಳೆದಾಗ

ಇನ್ನೊಬ್ಬ ಕಡೆದ ಬೆಣ್ಣೆ ತೆಗೆಯುತ್ತಿದ್ದ

ದೋಸೆಗೆ ಸವರಲು,


ನಾನು ಕಾಲರ್ ಹಿಡಿದ ಹುಡುಗನ ಕಣ್ಣು ಖಾಲಿಯಾಗಿತ್ತು

ಬಹುಶಃ ಎಂಜಲೊರಸೀ.. ಒರಸೀ. . .

Sunday, March 4, 2007

ಸುವರ್ಣಾ ನದೀತೀರದಲ್ಲೊಂದು ಸಂಜೆ..

ಬಿಸಿಲ ಧಗೆಯ ಕಡಲ ನಾಡಿನ

ಆಸು ಪಾಸಿನ ಹಳ್ಳಿ

ಇಲ್ಲಿ ಭೋರ್ಗರೆವ ಕಡಲಿಲ್ಲ,

ಆಡು ಬಾ ಎಂದು ಕರೆವ ನುಣ್ಪು ಮರಳಿಲ್ಲ

ವೀಕೆಂಡಿಗೆ ಬೀಚಿಗೆ ಧಾವಿಸುವ ಜನಜಂಗುಳಿಯಿಲ್ಲ


ಮೌನ ಹೊದ್ದು ಕಾದಿರುವ ಕಾಡ ಸೆರಗು

ಅಲ್ಲೊಂದು ಇಲ್ಲೊಂದು ತಪಸ್ಸಿಗೆ ಕೂತ ಮನೆ

ಕಾನ ಗಾನದ ಮೌನರಾಗಕೆ ಲಯ ಬೆರೆಸಿ

ಹಾದಿಗರಿಗೆ ಕಾದು ಮಲಗಿರುವ ದಾರಿ..


ಸುಮ್ಮನಿರಲಿ ಹೇಗೆ..

ನೋಡಲ್ಲಿ ಮುಳುಗುತಿಹ ದಿನಮಣಿ ಎಂದು

ಉಲಿದುಲಿದು ಗೂಡು ಸೇರುತ್ತಿರುವ

ಹಕ್ಕಿ ಪ್ರಪಂಚ..


ನಾವು ಹೊರಟ ದಿಕ್ಕು,

ಅರಿಶಿಣಕುಂಕುಮದ ಕಳೆ ಹೊತ್ತು

ಕಾಡುಹೂಗಳ ಪರಿಮಳ ಮುಡಿಗಿಟ್ಟು,

ಕಾಲ್ದೊಳೆಯಲು ಬೆಚ್ಚನೆ ನೀರಿನೊಡನೆ ಕಾದು ನಿಂತಿತ್ತು..


ಇಲ್ಲ ಕಡಲಿಲ್ಲ,

ಸಾಗರದೊಡಲ ತುಂಬುವ ನದಿಯಿತ್ತು,

ಹಗಲಿನ ಬಿಸಿಲು ಆಗಷ್ಟೇ ಸ್ನಾನ ಮಾಡಿ ಹೋಗಿತ್ತೇನೋ,

ಸಂಜೆಗೆಂಪಲಿ ಹೊಳೆದ ನೀರು ಇನ್ನೂ ಬೆಚ್ಚಗಿತ್ತು

ಸಾಗರ ಸಮಾಗಮದ ಬೆವರು ಬೆರೆತು ಉಪ್ಪಾಗಿತ್ತು


ಅಜ್ಜನೊಬ್ಬನಿದ್ದ ಆಚೆ ದಡದಲಿ,

ಮರದ ದೋಣಿಯ ಕೈಗೋಲು ಹಿಡಿದು..

ನಾವು ಅಭ್ಯಾಗತರ ದಡ ಸೇರಿಸಲು ಬಂದವನ

ಬಾಯ ಬೀಡಿಯಲಿ

ಪಡುವಣದಲಿ ಮುಳುಗುವವನ ಕಿಡಿಯಿತ್ತು.


ಚಂದದ ಹೊಳೆಮಧ್ಯ..
ದೋಣಿ ಚಲನ ನಿಂತರೆಕ್ಷಣ..

ಅನಾವರಣಗೊಂಡಿತ್ತೊಂದು ಸುಂದರ ಸಂಜೆ!

ಅಲ್ಲಿ ಹೊಳೆಯಿರಲಿಲ್ಲ,
ಹೊಳವಿತ್ತು
ಗಾಳಿಯದು ಬೀಸುತ್ತಿಲ್ಲ,
ಸಂಜೆ ಕಟ್ಟಿದ ಕವನಗಳ ಪಿಸುನುಡಿಯುತ್ತಿತ್ತು
ನೀರಲೆಗಳಲ್ಲಿ
ಸೂರ್ಯ ಮೂಡಿಸಿ ಹೋದ ಭಾವಚಿತ್ತಾರವಿತ್ತು
ಧಾವಿಸಿ ಬರುವ ಕತ್ತಲ ಮೊಗದಿ
ಸಂಜೆಬೆಳಕಿನ ಮುಂದಲೆಬೊಟ್ಟು..
ಕವಿಯುವ ಕತ್ತಲೆಯೂ ಮುದವೆನಿಸಿತ್ತು.


ಮೋಡಗಳ ಕಿಟಕಿ ಸರಿಸಿ ತೂರಿಬಂದ
ಚೂರಾದ ಚಂದ್ರ..


ಬಾನ ಬೆಳದಿಂಗಳು ಮನಸ್ಸಿಗಿಳಿಯುವುದೆಂತು..

ಗ್ರಹಗತಿ ಜಾತಕ ಹೊಂದಬೇಕೆ?
ಕಾಡಸೆರಗಿನ ಈ ಹೊಳೆ ದಾಟುವುದೆ ಸಾಕೆ!


ಜಾತಕ ಗ್ರಹಗತಿಯೋ, ಹೊಳೆದಾಟುವುದೋ

ಅನುಭವಿಸುವ ಮನ ಭಾವತೀವ್ರತೆಯಲಿ ತೊಯ್ದಿರಲು

ಬೇರಾವ ಹೊಂದಾಣಿಕೆ ಯಾಕೆ?

Friday, March 2, 2007

ಕೇಳಬಾರದಿತ್ತು . . ಆದ್ರೂ. .

ಹೆಜ್ಜೆ ಮೂಡಿರದ ಹಾದಿ,

ಗುರಿಯಿರದ ಪಯಣ,

ನಾನು ಹಿಡಿದಿದ್ದೇ ದಿಕ್ಕು.


ಕಗ್ಗತ್ತಲ ದಾರಿಗೆ

ಬೆಳಕು ಚೆಲ್ಲಿದ್ದು

ನಿನ್ನ ಕಣ್ಗಳ ಜೋಡಿ ನಕ್ಷತ್ರ.


ಹೆಜ್ಜೆಗೊಮ್ಮೆ ಧುಮ್ಮಿಕ್ಕುವ

ಅಳಲಿನ ಜಲಪಾತಕ್ಕೆ

ಕಟ್ಟೆ ಕಟ್ಟಿದ್ದು

ನಿನ್ನ ನೇವರಿಕೆ.


ಏನೂ ಬೇಡವೆನಿಸಿ

ಎಲ್ಲ ಕಳಚಿಕೊಳ್ಳಲು

ನಿರ್ಧರಿಸಿದಾಗ-

ಎದೆಗೊತ್ತಿ ಹಿಡಿದು,

ಅಲ್ಲಿ ದೂರದ ಹಸಿರುಕಾಡಿನ

ಬೆಟ್ಟದಂಚಿಂದ ಮೂಡುತಿದ್ದ

ಸೂರ್ಯನ ಎಳೆಗಿರಣಗಳನ್ನ

ಕಣ್ಮುಂದೆ ಹರಡಿದ್ದು

ನಿನ್ನ ನೋಟ.


ರಾತ್ರಿಯ ನೀರವತೆಗೆ

ಕಂಗೆಟ್ಟು ಮನ ಮರುಗಿದಾಗ -

ಹರಿವ ನದಿಯ ನೀರ ಜತೆ

ಮಿಲನಗೊಂಡ,

ಬೆಳದಿಂಗಳ ಪ್ರತಿಫಲನದ ರಾಗಮಾಲಿಕೆ

ಕೇಳಿಸಿದ್ದು ನಿನ್ನ ಜಾದೂ.


ಈ ಪಯಣ ಮುಗಿವವರೆಗೂ

ಜೊತೆಗಿರುವ ಭಾಷೆ ಕೊಟ್ಟಿದೀಯ.


ಹೀಗೆ ಕೇಳಬಾರದು

ಆದರೆ ಜೀವ ಸುಮ್ಮನಿರುತ್ತಿಲ್ಲ. . .


ದೇವರೇ

ಈ ಪಯಣ ಮುಗಿಯದಿರಲಿ,

ಕೊನೆಯ ತಿರುವಿಗೆ

ಬರುವ ಮೊದಲೇ

ದಾರಿ ತಪ್ಪಿ ಹೋಗಲಿ.

**************

ಅವತ್ಯಾವತ್ತೋ ವರ್ಷಗಳ ಹಿಂದೆ ಬರೆದಿದ್ದು..
ಇವತ್ತೂ ಇನ್ನೂ ಹಂಗೇ ಅನ್ನಿಸ್ತಿದೆ.. ನಾಳೆಯೂ ಅಷ್ಟೆ..,
ಅದೃಷ್ಟದ ಸಂಗತಿಯೆಂದರೆ ದೇವರು ಒಪ್ಪಿಕೊಂಡಿದ್ದಾನೆ.. :-)