Monday, August 22, 2011

ಸೋಜಿಗ!

ಮೇಲ್ಮುಖ ಹರಿಯುವ
ಕಾರಂಜಿ ನೀರಿನ
ತುದಿಯಲೊಂದು ಪುಟ್ಟ ಗೋಲ
ಹರಿವ ನೀರಿನ ಬಲವೇ ಬಲ
ಅತ್ತಿತ್ತ ಜಗ್ಗದ ಗೋಲ
ನೋಡಿ ಹಿರಿಯರಿಗೂ ಎಳೆಯರಿಗೂ ಸೋಜಿಗ
ನೀರ್ಬಲದ ಗೋಲ
ನಡು ದಾರಿಯಲ್ಲಿ
ನೆನಪಾಗುವಾಗ
ಮನದಲ್ಲೊಂದು ಭಯದ ಸೆಳೆ

ಹೆದರಿ,ಬೆವೆತ ಮಸ್ತಿಷ್ಕದಲ್ಲಿ
ನಿಜದ ಅರಿವು ಸಟ್ಟನೆ ಹೊಳೆ
ಹೊಳೆದು..
ನೀರು ನಿಂತ ಮರುಘಳಿಗೆಯಲ್ಲಿ
ಕೆಳಗುರುಳುವ ಗೋಲ!
ಈಗಿತ್ತು ಈಗಿಲ್ಲ!
ಬದುಕು ಕಡೆಗೂ
ಹಳೆಯ ಹಿರಿಯರ ಮಂತ್ರಶ್ಲೋಕಗಳ
ನೀರಮೇಲಣ ಗುಳ್ಳೆಗಳ
ಭಾಷ್ಯವೇ!
ನೀನು ಯಾವಾಗ
ಹರಿದು ಹೋದೆ?
ನಾನು ಯಾವಾಗ ಬಿದ್ದೆ?
ಸೋಜಿಗಕ್ಕೇ ಅಚ್ಚರಿ.
ಸ್ವಮರುಕದ ಎಣ್ಣೆಯಲಿ
ಬಿದ್ದ ನೋವಿಗೆ ಮಾಲೀಷು,
ಪುಕ್ಕಟೆ ಮಾಲೀಷು.

Monday, August 8, 2011

ಹೂಕಣಿವೆಯ ಹಾದಿ..


ನಿರಾಕರಣದ
ಚಂದ
ಬೆಟ್ಟ ಬಯಲು ನದಿ ಕಂದರಗಳಲಿ
ಹೊರಳುತ್ತಿದ್ದರೆ
ಊರ ಜಾತ್ರೆಯ ಗದ್ದಲಕೆ
ಹೊಂದಿಕೊಂಡ ನನ್ನ ಕಂಗಳಿಗೆ
ಬೆರಗಿನ ಪೊರೆ,
ಅಂಚಲಿ ಹೊಳೆದವು,
ಕಂಬನಿ ಜೋಡಿ
-
ನೋಡದೆ ಉಳಿದೆನೇ ಇಷ್ಟುದಿನ
ನೋಡಲಾಯಿತಲ್ಲಾ ಈಗಾದರೂ, ಇಷ್ಟಾದರೂ
-
ಬಾನೆತ್ತರಕೆ ಚಿಮ್ಮುವ
ಭುವಿಯ ಬಯಕೆ
ಒತ್ತರಿಸಿ ಖಂಡಾಂತರಗೊಂಡ
ತುಂಡುಗಳೂ ಅಖಂಡವೆನಿಸುವ
ವೈರುಧ್ಯ
ಎಲ್ಲ ಮೀರಬಲ್ಲೆ ಎನ್ನುವ
ನನ್ನ ಒಳಗ ಹಣಿಯುವ
ಮಣಿಸಿಯೇ ತೀರುವ
ನಿಡುದಾರಿ,
ಸೋತು ಕಾಲ್ ಚೆಲ್ಲಿದೊಡನೆ
ನೇವರಿಸುವ ಕುಳಿರು
ಅಲ್ಲ
ಇದನೆಲ್ಲ ಮಾತಿಗಿಡುವ
ನನ್ನ ಹಟವೇ
ಅಲ್ಲಿ ಕುಸಿದು ಕೂತಾಗ ನೀನೆಲ್ಲಿದ್ದೆ?
ಇರಲಿ ಬಿಡು
ಒಣಪೊಗರಿಗೆ ಈಗ ನೆಗಡಿಯಾಗಿದೆ,
ಏನಾದರಾಗಲಿ,
ಹೂಕಣಿವೆಯ ಹಂಬಲು ಕೊಂಚ ಹರಿದಿದೆ,
ಅರಳುಕಣಿವೆಯ ನೋಡಿ ತಣಿದಿದೆ.
ಲಕ್ಷ ಪಯಣಿಗರಲ್ಲಿ ಗುರಿ ಸೇರುವವರು
ಒಬ್ಬಿಬ್ಬರಂತೆ,
ನನ್ನದು ಪಯಣದ್ದೇ ಭಾಗ್ಯ.
ಗುರಿ ಯಾರಿಗೆ ಬೇಕು
ಪಯಣ ಮುಗಿಯದೆ ಇರಬೇಕು.

ನಿರಾಕರಣವ ಧೇನಿಸಿ
ಒಪ್ಪಿಗೆಗೆ ಹಟವಿಡಿಯುವ ನಾ ಮಳ್ಳಲ್ಲವೇ?
ಸಾಲು ಸಾಲು ಅಚಲ
ಸಾರಿ ಸಾರಿ ತಿಳಿ ಹೇಳಿಯೂ
ಕುಗ್ಗುವ ಕುದಿಯುವ ಈ ಬಗೆಗೆ ಮದ್ದಿಲ್ಲವೇ?
ಎತ್ತರದಿ ಮುಗಿಲು ಮುದ್ದಿಸಿ
ಆಳದಿ ಹೊನಲು ರಮಿಸುವ
ಈ ಬದುಕಿಗೆ ಇದೇ ಒಂದು
ಬರೆದಿಡದ ಭಾಷ್ಯವೇ?!
ಎಲ್ಲ ಚಂದಗಳ ನಿವಾಳಿಸಿ ಒಗೆಯಲು
ಕಿಡಿ ಇಲ್ಲ ಇಲ್ಲಿ,
ಭಾವಬಯಕೆಗಳ ಮೇರುತುದಿಯಲಿ
ಎಲ್ಲ ಮೀರಿದ, ತೀರಿದ ಹಿಮತೃಪ್ತಿ!
ಗಮ್ಯಕ್ಕಿಂತ ದಾರಿಯೇ ಸೊಗಸು
ಎಂಬ ಲೌಕಿಕವೆ ಲೇಸು.

(ಈ ಅಲ್ಪಳ ಬಯಕೆ ತೀರಿಸಿದ ಸಮಸ್ತ ಆತ್ಮೀಯರಿಗೆ, ಸೋಕಿಸಿಕೊಂಡ ಭೂರಮೆಗೆ, ನಿರುಕಿಸಿ ನಕ್ಕ ಬಾನಿಗೆ, ತಂಪಗೆ ಹರಿದ ನೀರಿಗೆ, ಕಂಪಲಿ ಮುಳುಗಿಸಿದ ಕಣಿವೆಗೆ, ಅತ್ತೂ ಕರೆದೂ ಜೊತೆಗೂಡಿದ ಸೃಷ್ಟಿಗೆ, ಜತೆ ಬಂದ ಬಿದಿಗೆಯ ಬಿಂಬಕ್ಕೆ
ಮತ್ತೆ ಮತ್ತೆ ಶರಣು. )

Tuesday, July 5, 2011

ಮಾಯಾಲೋಕ

ಬಾಲ್ಯವೆಂಬ ಮಾಯಾಲೋಕ ಮತ್ತು ನೀನು ಬಿಡಿಸಿಕೊಡುವ ಮಾಯಾಚಾಪೆ ಆಹಾ... ಥ್ಯಾಂಕ್ಸ್ ಅಂದ್ರೆ ಬಯ್ತೀಯ ನೀನು, ಅದಕ್ಕೆ ಇಡೀ ಕವಿತೆಯನ್ನ ಹೂವಪ್ಪುಗೆಯಲ್ಲಿ ನಿನಗರ್ಪಿಸುತ್ತಾ...
{ ನೀನು ಚಾಟಿಸಿದಾಗೆಲ್ಲ
ಇವತ್ತಿನ ನಾನು ಅಳಿದು
ಪಂಚೇಂದ್ರಿಯಗಳಲ್ಲಿ
ಹಳದಿಬೂದುಬಣ್ಣದ ಗೋಡೆ ನಡುವಿನ
ಕೋಣೆ, ನೆಲಬೆಂಚುಗಳು,
ಗುಸುಗುಸು ಮಾತು
ಕಪ್ಪು ಬೋರ್ಡಿನ ಮೇಲೆ ಬಿಳಿ ಬಿಳಿ
ಅಕ್ಷರ ದುಂಡಗೆ ಬರೆಯುತ್ತಿರುವ ಅನಸೂಯಮ್ಮ ಟೀಚರು
ಅಲ್ಲಲ್ಲಿ ಯಾರು ಮೊದಲು ಬರೆದು ಮುಗಿಸುವರೆಂಬ
ಛಲದ ಕಣ್ಣಾಟ,
ಹೊರಗೆ ಅಂಗಳದಲ್ಲಿ
ನೇತುಬಿಟ್ಟ ರೈಲ್ವೆ ಕಂಬಿಯ ಬೆಲ್ಲಿನ ರಿಂಗಣಕ್ಕೆ
ಕಾದ ಕಿವಿಗಳು
ಇನ್ನೇನು ಆಟದ ಬೆಲ್ಲು ಹೊಡಿಯಬೇಕು
ಅಷ್ಟರಲ್ಲಿ ಸುರಿದ ಮಳೆಗೆ
ಮತ್ತೆ ಕೋಣೆಯಲ್ಲೆ ಕೂಡಿಸಿ
ಹಾಡು ಕತೆ ಹೇಳಿಸುತ್ತಿರುವ ರಮಾಮಣಿ ಟೀಚರು
ಕೈಕಟ್ಟಿ ಎಲ್ಲರ ಮುಂದೆ
ನಿಂತು ಬಿಡಿಸುವೆ ನಾನು
ನೀವೆಲ್ಲ ಹತ್ತಿ ಕೂರುವುದಕ್ಕೇ ಕಾದ
ಮಾಯಾಚಾಪೆಯನ್ನು
ಇಂದು ಹೋಗೋಣ ರಷ್ಯಕ್ಕೆ
ನಾಳೆ ಚಿತ್ರಕೂಟಕ್ಕೆ
ನಾಡಿದ್ದು ಮಣ್ಣಿನಮನೆಗೆ
ಯಾನ ಮುಗಿದಿದೆ
ಬೆಲ್ಲು ಹೊಡೆದಿದೆ
ಮಳೆ ನಿಂತಿದೆ
ಶಾಲೆ ಮುಗಿದಿದೆ
ಈಗ ಮನೆಗೋಡುವ ಸಮಯ
ಹಾರಬಹುದು ಮಳೆನೀರಿನ ಹೊಂಡ
ಕೆಸರು ಎರಚಿದರು ಪರವಾಗಿಲ್ಲ
ಶಾಲೆ ಮುಗಿಯಿತಲ್ಲ
ನಾಳೆಗೆ ಬಣ್ಣದ ಬಟ್ಟೆ
ಆಹ್ ಎಷ್ಟು ಜೋರಾದ ಹಾರ್ನ್
ಅಯ್ಯೋ ನನ್ನ ಬಾಲ್ಯವಳಿಯಿತು
ಇಲ್ಲಿದೀನಿ ಗಣಕಯಂತ್ರದ ಮುಂದೆ
ನಿನ್ನ ನೆಟ್ಟು ಕಟ್ಟಾಗಿ
ಚಾಟು ಆಫಾಗಿ
ಮತ್ತಿಲ್ಲೆ ನಾನು
ಹುಶಾರಾಗಿ
ಇರಬೇಕಾದವಳು,
ಯಾರೆಂದರೆ ಅವರೊಡನೆ
ಏನೆಂದರೆ ಅದು ಮಾತಾಡದೆ
ನಗುವನ್ನು ಅಳೆದು ತೂಗಿ ಸೂಸಬೇಕಿರುವವಳು.
ಮತ್ತೆ ನಾಳೆ ಬಾ ನೀನು
ಬೇಗ.
ಆಫ್ ಆಗುವ ಮುನ್ನವೆ ಹೇಳಿಬಿಡು
ನಾನು ಚಾಪೆಯಿಂದಿಳಿಯಕ್ಕೆ ತಯಾರಿರುತ್ತೇನೆ
ಯಾಕೆ ಸುಮ್ಮನೆ ಕ್ರಾಶ್ ಲ್ಯಾಂಡಿಂಗು??
}

Wednesday, June 22, 2011

ಹೂಕಣಿವೆಯ ಹಂಬಲು

ಇಲ್ಲೆ ಗಣಕದ ಕಿಂಡಿಯಲ್ಲಿ
ಇಣುಕಿದರೆ
ಮಳೆಬಿಲ್ಲಿನ ಬಣ್ಣಗಳ ಹಾಯಿಸಿ
ನಗುವ
ಹೂಕಣಿವೆಯೇ,
ಇದೆಯೆ ನನಗೆ
ನಿನ್ನ ಒಡಲಲಿ ಹರಿದಾಡುವ ಭಾಗ್ಯ?

ಬಿಳಿಬೆಟ್ಟಗಳ ತಪ್ಪಲಲಿ
ದೀರ್ಘವಾಗಿ ಸುಯ್ಯುತಿರುವ
ಮರಗಳೆ ನೀವು ಕಾದಿರುವುದಾರನ್ನ?
ಗಿರಿಯ ಸಂದುಗಳಲಿ ತೂರಿ
ಹರಿವ ದೇವನದಿಗಳೆ
ನೀವು ಕರೆಯುವುದು ಯಾರನ್ನ?
ಸಂಗಮಿಸಿ ಹರಿವ ನದಿಗಳು
ಸೂಚಿಸುವುದೇನನ್ನ?
ದೂರಹಾದಿಯ ಪಯಣದ
ರೋಚಕತೆಯೇ ನೀನು
ಬಳಸಿರುವೆಯೇಕೆ ಹೀಗೆ ನನ್ನ?
ಲಕ್ಷಗಳಲ್ಲಿಹುದು ಸಂಖ್ಯೆ
ನಿನ್ನ ಮಡಿಲಲಿ ಸಾಗಿದ ಪಯಣಿಗರದು
ಮುಟ್ಟಿ ಮೀರಿದವರಾರು ಗುರಿಯ?


ಫ್ರಾಂಕ್ ಸ್ಮಿಥ್ ಮಹಾಶಯ
ಹೆಸರಿಡುವ ಮೊದಲೇ
ನೀನಲ್ಲಿದ್ದೆ.
ಇಂದಿಗೂ ಇರುವೆ,
ಋತುಮಾನದ ಜತೆಗೂಡಿದ
ಭುವಿಯ ಅರಳುವಿಕೆಯ
ಸಂಭ್ರಮಕ್ಕೆ ಸಾಕ್ಷಿಯಾಗಿ!
ಕಾಲದೇಶಗಳ ಮೀರಿದಂತೆ,
ರಾಜಕೀಯ ನುಸುಳದಂತೆ,
ಸಣ್ಣತನವ ಅರೆಯುವಂತೆ.
ಅಂದಿಗೂ ಇಂದಿಗೂ ಎಂದಿಗೂ!
ನೋಡಲು ರಮ್ಯ,
ಹೊಂದಲು ಅಗಮ್ಯ!


ಇದೆಯೆ ನನಗೆ ನಿನ್ನ
ಒಡಲಲಿ ಹರಿದಾಡುವ ಭಾಗ್ಯ?!
ಕಾದಿರುವೆ-
ಅದು-ಇದು ಎಲ್ಲದೂ
ಒಂದೇ ಎನಿಸುವ ಬಿಳಿಬಿಳಿ ಅದ್ವೈತಕ್ಕಾಗಿ..!

Wednesday, May 4, 2011

ಅಗಲ-ಆಳ

ಬಾಲ್ಯದ ಓದಿಗೆ ಹರವಿತ್ತು
ಆಳವಿರಲಿಲ್ಲ
ಅದಾಗ್ಯೂ
ನೆನಪು ಕಂಡರಿಸಿದ ಚಿತ್ರಗಳು ಹಲವು
ಆತು ಕೂತ ಸಾಲುಗಳೊ ಇನ್ನೂ ಹಲವು
ಮಿಲನ ಮುಗಿಯಲಿ,
ಆದರೇನು
ಎದೆಗೂತ್ತಿ ಹಿಡಿ ನನ್ನ
ರಾತ್ರಿಯ ನಶೆ ಕತ್ತಲಲ್ಲೆ ಕರಗಲಿ
ಬೆಳಗಾದರೂ ನಿನ್ನ ಕೈ ನನ್ನ
ಬರಿಮೈಯ ಬಳಸಿಯೇ ಇರಲಿ;
ಅವತ್ತು ಓದಿದ ಇಂಗ್ಲಿಷಿನ ಸಾಲುಗಳು
ಕನ್ನಡ ಮಣ್ಣಲ್ಲಿ ಮೊಳಕೆಯೊಡೆದ
ಆಶೆಯ ಬಳ್ಳಿಗೆ
ಇಂಬು ಕೊಟ್ಟ ಪರಿಗೆ ಏನ ಹೇಳಲಿ?!
ಯೂರಿಪಿಡೀಸನ ಮೀಡಿಯಾ ಅಂದುಕೊಂಡದ್ದು ತುಂಬ ನಿಜ
ಹೆಣ್ಣಿಗೆ - ಒಲವೇ ನನ್ನ ಬದುಕು
ಗಂಡಿಗೆ - ಒಲವು ಬದುಕನ್ನ ತುಂಬಬೇಕು
ಅದೇನೆ ಇರಲಿ
ಕಲಿತ ಪಾಠಗಳ ಜಾಗ ಪುಸ್ತಕಗಳಲ್ಲಿ
ಅಂತಾದರೆ
ಸಮಯ ಕಳೆಯಲು ಓದಿದ ಸಾಲುಗಳಲ್ಲಿ
ಅನಾವರಣಗೊಳ್ಳುತ್ತಿರುವುದೇನು!!
ಯಾರೋ ಹೇಳಿದರು
ಒಳ್ಳೆಯ ಪುಸ್ತಕ ನಿನಗೆ ಈ ಮುಂಚೆಯೆ ಗೊತ್ತಿದ್ದನ್ನೆ
ಅರ್ಥ ಮಾಡಿಸುವ ಬಗೆ
ನಕ್ಕಿದ್ದೆ ನಾನು ಎಂಥ ತಲೆಪ್ರತಿಷ್ಠೆ!
ಅನಿಸುತ್ತಿದೆ ಈಗ -
ಬರಿಮೈಯ ಬಳಸಲು
ಅವನ ಕೈ ಸಾಲದಷ್ಟು ಅಗಲಕ್ಕೆ
ನಾನು ಹರಡಿಕೊಂಡಿರುವಾಗ-
ಬದುಕು ಒಂದು ಒಳ್ಳೆಯ ಪುಸ್ತಕದ ಹಾಗೆ
ಎಂದೊ ಮನದೊಳು ಹೊಕ್ಕ ಹರವಿನ
ಆಳವನ್ನು ಇಂದು ಅರಿತ ಹಾಗೆ!
ಆಹ್ ಎನ್ನಿಸಿದ
ಆಶೆ
ನಿರಾಶೆಯ ದಿಬ್ಬ ಹತ್ತಿಳಿದರೂ
ನಿರೀಕ್ಷೆಯ ಹೊಸ್ತಿಲಲ್ಲಿ ದೀಪ ಹಚ್ಚಿಟ್ಟು
ಕಾಯುವ ಸೊಗಸೆ ಬೇರೆ!
ಮುಂದಿನ ಇರುಳಿನ ಕತ್ತಲ
ಸೊಗಯಿಸುವ ದೀಪ, ಜೊತೆಗೆ
ದೀಪದುರಿಯ ಕಣ್ಣು!

Wednesday, April 20, 2011

ತೆರೆದ ಬಾಗಿಲು

ಒಳಹೋಗುವುದೂ ಅಥವಾ ತಟ್ಟುತ್ತ ಕಾಯುತ್ತಿರುವುದೂ ನಮಗೇ ಬಿಟ್ಟಿದ್ದು!
ನನ್ನ ಬಹಳ ಹತ್ತಿರದ ಗೆಳೆಯನೊಬ್ಬ ಮೊನ್ನೆ ಮೊನ್ನೆ ಬೆಂಗಳೂರು ಬಿಟ್ಟು ಬೇರೆ ಊರಿಗೆ ನೆಲೆ ಹುಡುಕಿಕೊಂಡು ಹೋದ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನೂ, ಹುಡುಗಾಟಿಕೆಯಲ್ಲಿ ಚಿಕ್ಕವನೂ, ಉತ್ಸಾಹದಲ್ಲಿ ಹಿಂದಿಕ್ಕಲಾಗದವನೂ ಆದ ಈ ಗೆಳೆಯ, ಇನ್ನೊಬ್ಬ ಗೆಳೆಯ, ನಾನು ಮತ್ತು ನನ್ನ ಸಂಗಾತಿ - ನಾವು ನಾಲ್ವರದ್ದೇ ಒಂದು ಪುಟ್ಟ ಗುಂಪು. ಮಹಾನಗರದ ತಿರುಗಣಿಯಲ್ಲಿ ನಾವೇ ಬೇಕಾಗಿ ಸಿಕ್ಕು ನುರಿಸಿಕೊಂಡು, ಸಾಕು ಸಾಕಾಗಿ ಅಲ್ಲಿ ಇಲ್ಲಿ ಆಗ ಈಗ ಒಂದೆರಡುಮೂರು ದಿನಗಳ ಮಟ್ಟಿಗೆ ಕೆಲವು ಸುತ್ತಾಟ ಮಾಡುವುದು ನಮ್ಮ ಜಾಯಮಾನ. ಇದಲ್ಲದೆ ಪುಸ್ತಕ, ಸಮಾಚಾರ, ಹರಟೆ, ಪ್ರಕೃತಿ, ಹಕ್ಕಿಗಳು, ಮಳೆ,ಕಾಡು ಇವೆಲ್ಲ ನಮ್ಮ ಸಮಾನ ಆಸಕ್ತಿಯ ವಿಷಯಗಳು. ಎಲ್ಲರೂ ಬೇರೆ ಬೇರೆ ಬಡಾವಣೆಗಳಲ್ಲಿ ಗೂಡು ಕಟ್ಟಿಕೊಂಡವರು. ನೆಟ್ಟು,ಟಾಕು,ಫೋನು,ಫ್ಲಿಕರ್ರು ಹೀಗೆ ದಿನದಿನದ ಹೆಚ್ಚಿನ ಮಾತುಕತೆ. ತಿಂಗಳಿಗೊಮ್ಮೆ ಒಂದು ಭಾನುವಾರ ಬೆಳಗಿನಿಂದ ಇಳಿಮಧ್ಯಾಹ್ನದವರೆಗೆ ನಮ್ಮನೆಯಲ್ಲಿ ಸೇರಿ ಮಾತು-ನಗು-ಹರಟೆ ಮತ್ತು ಎಲ್ಲಿಗಾದರೂ ಹೊರಡುವ ಪ್ಲಾನು. ಅಲ್ಲಲ್ಲಿ ಕಾಫಿ,ಟೀ,ಪಾನಕ,ಹಣ್ಣು. ಇತ್ಯಾದಿ.
ಬೆಂಗಳೂರು ಬಿಡುವ ಬೇರೆ ಊರಲ್ಲಿ ನೆಲೆಸುವ ಗದ್ದೆಯೋ,,ತೋಟವೋ ಕೃಷಿ ಮಾಡುವ ಮಾತುಕತೆ ಮಾತ್ರ ಪ್ರತೀಸಲವೂ ನಡೆಯುತ್ತಿತ್ತು. ನೀನು ಮಾತನಾಡುವುದು ಸುಲಭ, ಹೇಳಿದಂತೆಲ್ಲ ಮಾಡಲಿಕ್ಕಾಗುವುದಿಲ್ಲ, ಇದು ಎಂತ ಈ ವಯಸ್ಸಲ್ಲಿ ಮಗಳ ಶಾಲೆ ಬಗ್ಗೆ ಆಲೋಚಿಸು ಮೊದಲು ಅಂತೆಲ್ಲ ಏನೇನೋ ಹೇಳಿ ನನ್ನ ತಲೆ ತಿನ್ನುವ ಈ ಗೆಳೆಯ ಇಂತಹದೆ ಒಂದು ಮಾತುಕತೆಯ ಮಧ್ಯದಲ್ಲಿ - ನಾನು ಕೆಲಸ ಬಿಡೋದೂಂತ ಮಾಡಿದ್ದೇನೆ. ಮುಂದಿನ ವರ್ಷದೊಳಗೆ ನಮ್ಮ ಜಾಗಕ್ಕೆ ಹತ್ತಿರವಾಗಿ ಮನೆ ಮಾಡಿ, ಕುಟುಂಬವನ್ನೂ ಕರೆದೊಯ್ಯುವ ಯೋಚನೆ ಇದೆ - ಅಂತ ಘೋಷಿಸಿಬಿಟ್ಟ. ನಾವು ಎಂದಿನಂತೆ ಭಾಳ ಸೀರಿಯಸ್ಸಾಗಿ ಆ ಬೆಳೆ ಬೆಳೆದರೆ ಒಳ್ಳೆಯದು ಈ ಬೆಳೆ ಬಗ್ಗೆ ಅಡಿಕೆಪತ್ರಿಕೆಯಲ್ಲಿ ಬಂದಿದೆ ಅಂತೆಲ್ಲ ವಿಶ್ಲೇಷಣೆ ಮಾಡುತ್ತ ಕೂತೆವು.


ಅದಾಗಿ ಒಂದ್ನಾಲ್ಕು ವಾರಕ್ಕೆ ಆಫೀಸಿನಲ್ಲಿದ್ದಾಗ ಫೋನ್ ಬಂತು.
ಏನಮ್ಮಾ ಬಿಸೀನಾ?...
ಇಲ್ಲ ಹೇಳಿ,,
ಒಂದು ಮಜಾ ಗೊತ್ತ?ಆ ಬಡ್ಡೀಮಗ ನನ್ ಮ್ಯಾನೇಜರ ಮುಖ ನೋಡ್ಬೇಕಿತ್ತು ನೀನು..
ಯಾಕೆ ಏನಾಯ್ತು?!..
...ಅದೇ ಹಳೆ ಪುರಾಣ. ನೀನು ಈ ಪ್ರಾಜೆಕ್ಟ್ ತೆಕ್ಕೋ ಮುಂದಿನ ವರ್ಷ ಇಷ್ಟು ಕೆ.ಜಿ. ನಾಣ್ಯಗಳ ಹೆಚ್ಚುವರಿ ಸಂಬಳ ಕೊಡ್ತೀನಿ.. ನೀನಿಲ್ಲದೆ ನನಗೇನಿದೆ... ಅಪ್ರೈಸಲ್ ಮಣ್ಣು ಮಸಿ.. ಹೋಗಲೋ ಹೋಗ್ ಅಂತ ರಾಜಿನಾಮೆ ಬಿಸಾಕ್ಬಿಟ್ಟೆ. ಈ ಮ್ಯಾನೇಜರ್ ನನ್ ಮಕ್ಳಿಗೆಲ್ಲ ಹಂಗೇ ಮಾಡ್ಬೇಕು. ಬುರುಡೆಗೆ ಬಿಸಿನೀರು ಕಾಯ್ಸುದು ಅಂತಾರಲ್ಲ ಹಂಗೆ! ಅದು ಹಾಳಾಗ್ಲಿ ನಾನು ಫೋನ್ ಮಾಡಿದ್ದು ಅದಕ್ಕಲ್ಲ. ...
ಮತ್ತೆ?
ಅದೇ ನಮ್ ಜಾಗದಲ್ಲಿ ನೀರು ಚೆನ್ನಾಗಿದೆ. ಈಗಿನ್ನೂ ಮಳೆ ಕಚ್ಚಿಕೊಳ್ಳುತ್ತಿದೆ ಅದಕ್ಕೆ ಸುವರ್ಣಗೆಡ್ಡೆ ಹಾಕಿಬಿಡೋಣ ಅಂತಿದೀನಿ. ಈ ಬುಧವಾರ ಊರಿಗೆ ಹೋಗಲಿಕ್ಕುಂಟು ಬರ್ತೀಯಾ ನೀನು? ಅವನು ಎಂದಿನ ಹಾಗೆಯೇ ಬಿಸಿಯಲ್ಲದಿದ್ರೆ ಇಬ್ರೂ ಬನ್ರಲ್ಲ. ಹೇಗೂ ಅಲ್ಲೊಂದು ಶೆಡ್ ಉಂಟು. ಗಂಜಿ ಊಟಕ್ಕೆ ಕರೆಂಟಿನೊಲೆ ಉಂಟು..ರಾತ್ರಿ ಹೊರಗೆ ಬಯಲಲ್ಲಿ ನಕ್ಷತ್ರ ನೋಡಿಕೊಂಡು...
ಯಾವ ಜಾಗ, ಏನ್ ಕತೆ?
ಅರ್ರೇ ಯಾವಾಗ್ಲೂ ಮಾತಾಡ್ತ ಇದ್ವಲ್ಲ ಅದೇ. ಅಲ್ಲಿ ಹೋಗಿ ಕೃಷಿ ಮಾಡೋದು ಅಂತ ನಿರ್ಧಾರ ಮಾಡಿಯಾಯ್ತು ನಾನು. ಎಲ್ಲ ಮಾಡಿಯಾಯ್ತು. ವರ್ಚುಯಲ್ ಸಗಣಿ ಹೊತ್ತಿದ್ದಾಯ್ತು. ನಿಜವಾದ ಮಣ್ಣೂ ಹೊತ್ ಬಿಡೋಣ ಅಂತ. ಹ್ಯಾಗೆ?
ಅಯ್ಯೋ ನಿಮ್ಮ. ಇರಿ ಸಂಜೆಗೆ ಸರಿಯಾಗಿ ಕೊರೆದುಕೊಂಡು ಮಾತಾಡೋಣ. ನಾನ್ ಕ್ಯಾಬ್ ಹತ್ತಿದ ಮೇಲೆ ಫೋನಿಸ್ತೀನಿ. ಅಂದು ಫೋನಿಟ್ಟೆ. ತಲೆ ಸಣ್ಣಗೆ ತಿರುಗುತ್ತಿತ್ತು.
ಸಂಜೆಯ ಮಾತುಕತೆಯಲ್ಲಿ ಈ ಹೊಸನೆಲೆ ಕಂಡುಕೊಳ್ಳುವ ಅಂದಾಜು ಸಿಕ್ಕಿತು. ವಾವ್ ಅಂತ ಮನಸ್ಸು ಘೋಷಿಸಿಬಿಟ್ಟಿದ್ದರೂ ಅಷ್ಟು ಚಿಕ್ಕವಳಿದ್ದಾಗಿನಿಂದ ಪೋಷಿಸಿಕೊಂಡು ಬಂದ ತಲೆಒಳಗಿನದ್ದು ವಾಸ್ತವದ ಲೆಕ್ಕಾಚಾರ ಹಾಕಿ ತಳಮಳಗೊಳ್ಳುತ್ತಿತ್ತು. ಅದಕ್ಕೆಲ್ಲಾ ಇನ್ನೊಂದಿಷ್ಟು ಪ್ರಶ್ನೆ ಉತ್ತರ ನಡೆದವು.
ಕೊನೆಯದಾಗಿ ನಿಕ್ಕಿ (ಖಚಿತ) ಯಾಗಿದ್ದೆಂದರೆ ಕೆಲವು ಹುಚ್ಚಿಗೆ ಮದ್ದಿಲ್ಲ. ಅದನ್ನು ಹುಚ್ಚಾಗಿ ಅನುಭವಿಸಿಯೇ ತೀರಿಸಿಕೊಳ್ಳಬೇಕು. ಮತ್ತು ಅಂಥವು ಸಿಕ್ಕಾಪಾಟ್ಟೆ ಥ್ರಿಲ್ಲಿಂಗ್ ಆಗಿರುತ್ತವೆ. ಆ ಥ್ರಿಲ್ಲಿನ ಮುಂದೆ ಅನುಭವಿಸಿದ ಅನುಭವಿಸಲೇಬೇಕಿರುವ ಕಷ್ಟ-ಕಿರಿಕಿರಿಗಳು ಹಿನ್ನೆಲೆಟ್ರಾಕಿನಲ್ಲಿರುತ್ತವೆ ಅಂತ.
ಅವನ ಜಾಗದಲ್ಲಿರುವ ದಿಬ್ಬದ ಮೇಲೊಂದು ಮನೆ(ಅದಕ್ಕೆ ಫ್ಯಾಂಟಮ್ಮಿನ ಮನೆಯ ಹೆಸರು ವೃಕ್ಷ ಗೃಹ) ಹಿಂಬದಿಯಲ್ಲಿ ವಿಂಡ್ ಮಿಲ್ಲು, ಒಂದು ಜಟ್ಟಿ ನಾಯಿ.. ಕಡಿಮೆಯಿರುವುದು ಹೀರೋಕುದುರೆ ಅದರ ಬದಲು ಪಲ್ಸರಿದೆ! ಇದು ನಮ್ಮ ಮಾತುಕತೆಗಳ ಸ್ಯಾಂಪಲ್. ಏನು ಹಾಕಿ, ಹೇಗೆ ಬೆಳೆದು, ಯಾವ ರೀತಿಯಲ್ಲಿ ಮಾರಾಟ ಮಾಡ್ಬೇಕು ಅಂತ ಯೋಚನೆ ಮಾಡೋದು ಬಿಟ್ಟು, ಇಂತದೇ ಕಲ್ಪನೆಯ ಮಾಯಾಚಾಪೆಯಲ್ಲಿ ಕೂತು ಸುತ್ತುವ ಕೆಲಸ ನಮ್ಮದು. ಇದೆಲ್ಲ ಒಂದು ವರ್ಷದ ಹಿಂದಿನ ಮಾತು.ಮೊನ್ನೆ ಬೆಳಗ್ಗೆ ಆ ಗೆಳೆಯ,ಅವನ ಹೆಂಡತಿ, ಪುಟ್ಟ ಮಗಳು ಮತ್ತು ಅವರಮ್ಮನನ್ನು ಹೊಸ ಊರಿಗೆ ಹೊರಟ ಕಾರಿನಲ್ಲಿ ಹತ್ತಿಸಿ ಕೈಬೀಸಿ ಕಳಿಸಿಯಾಯ್ತು.
ಮೊನ್ನೆ ಮೊನ್ನೆ ಅವನ ಹತ್ತಿರ ನಾನು ಊರಿಗೆ ಹೋಗುವ ಪ್ಲಾನು ಹೇಳಿ ಬಯ್ಯಿಸಿಕೊಂಡಿದ್ದೂ, ಅವನು ಹೋಗ್ತೀನಿ ಅಂದಾಗ ನಾನು ಉಚಾಯಿಸಿ ಮಾತನಾಡಿದ್ದೂ, ಅವನು ನಿಜ್ವಾಗ್ಲೂ ಕೆಲಸ ಬಿಟ್ಟಾಗ ಸಕ್ಕತ್ ಥ್ರಿಲ್ಲಾದರೂ ತುಂಬ ಹೆದರಿಕೆಯಾಗಿದ್ದೂ, ಆಮೇಲೆ ವಾರವಾರವೂ ಏನೇನು ಮಾಡುವುದೆಂದು ಹರಟಿದ್ದೂ, ಮುಂದಿನವಾರ ಹೊರಡುತ್ತೇನಮ್ಮಾ ಅಂತ ಅಂದಾಗ ಆ ದಿನ ಹತ್ತಿರವಾಗುವವರೆಗೂ ಅದರ ಗಂಭೀರತೆಯನ್ನೇ ಅರಿಯದೆ ಹೋಗಿದ್ದೂ ಎಲ್ಲವೂ ಅವನ ಮನೆಯ ಮುಂದೆ ಆಟೋ ಇಳಿಯುವಾಗ ಒಟ್ಟಿಗೆ ನೆನಪಾದವು. ಅವನು ಎಂದಿನ ಟ್ರೆಕ್ಕಿಂಗ್ ಹೊರಟ ಸರಾಗ ಹರಿವಿನಲ್ಲಿ ಹೊರಟಿದ್ದಾನೆ. ಒಳಗೆ ಆತಂಕದ ಸುಳಿಗಳಿರಬಹುದು. ಅವನ ಜೊತೆಗಾತಿ ಹೆಂಡತಿ ಸಂತೈಸುತ್ತಾಳೆ. ಮಗಳು ಅವನ ಕೆನ್ನೆಗಳಲ್ಲಿ ನಗು ಮೂಡಿಸುತ್ತಾಳೆ. ನಾವು ಗೆಳೆಯರು ಶುಭ ಆಶಯಗಳ ಕೊಡೆಬಿಚ್ಚಿ ಅವನ ಜೊತೆಗಿದ್ದೇವೆ.ಪಯಣಕ್ಕೆ ಶುಭಕೋರಲು ಬಂದಿದ್ದ ನನ್ನ ಇನ್ನೊಬ್ಬ ಗೆಳೆಯ ಹೇಳಿದ. ಏನೇ ಇದು, ಟಾರ್ಜಾನೇ ಹೊರಟು ಹೋದ ಮೇಲೆ ಇನ್ನು ನಾವು ಹ್ಯಾಗೆ ಸುತ್ತಾಟ ಮಾಡೋದು ಅಂತ. ಹೌದು ಅಂವ ಒಂದ್ರೀತಿ ಫ್ಯಾಂಟಮ್ಮು ಮತ್ತು ಟಾರ್ಜಾನಿನ ಕನ್ನಡರೂಪ. ನಾನು ಮಾತಿಗೆ ಸಲೀಸಾಗಿ ಹೇಳಿಬಿಟ್ಟೆ. ಅವನಿರುವ ಊರಿನ ಹತ್ತಿರವೇ ನಾವು ಸುತ್ತೋದು ಅಂತ. ಇದೆಲ್ಲ ಅಷ್ಟು ಸುಲಭಕ್ಕಲ್ಲ. ನಾವು ಯೋಚನೆಯಲ್ಲೇ ಪ್ರಪಂಚ ಸುತ್ತುವ ಮಂದಿ. ಹೆಜ್ಜೆ ಎತ್ತಿಡುವಾಗ ವಾಸ್ತವದ ನೋವುಗಳು ಮಗ್ಗಲು ಮುರಿಯುತ್ತವೆ."A dream is given to you only to make it come true" ಅಂತ ಒಂದು ಮಾತಿದೆ. ಅದು ಇವನ ಬದುಕಾಗಲಿ ಅಂತ ಹಾರೈಕೆ.

ಪುಸ್ತಕ ಪ್ರೀತಿಯ ಈ ಗೆಳೆಯನಿಗೆ ಕೊಡಲಿಕ್ಕೆಂದು ಒಂದಿಷ್ಟು ಪುಸ್ತಕ ಕೊಳ್ಳಲು ಅಂಕಿತಕ್ಕೆ ಹೋಗಿದ್ದೆ. ಬೇಕಾದ ಪುಸ್ತಕ ಕೊಳ್ಳುವಷ್ಟರಲ್ಲಿ ಪ್ರಕಾಶ್ ಇದು ನೋಡಿ ನೀವಿನ್ನೂ ಓದಿರಲ್ಲ ಅಂತ ಕೊಟ್ಟರು. ತೇಜಸ್ವಿ ಹೆಸರಿನಲ್ಲಿ ತೀರ್ಥ, ಪ್ರಸಾದ ಕೊಟ್ಟಿದ್ದರೂ ತಗೊಳ್ಳುವ ನಾನು ಆ ಪುಸ್ತಕದ ಲೇಖಕಿಯ ಹೆಸರು ನೋಡಿಯೇ ಮರುಳಾಗಿಬಿಟ್ಟೆ. ಒಂದು ಗೆಳೆಯನಿಗೂ ಇನ್ನೊಂದು ನನಗೂ ಎತ್ತಿಟ್ಟಿಕೊಂಡುಬಿಟ್ಟೆ. ಅದು ನಮ್ಮ ಪ್ರೀತಿಯ ರಾಜೇಶ್ವರಿ ತೇಜಸ್ವಿಯವರು ಬರೆದ "ನನ್ನ ತೇಜಸ್ವಿ". ಸರಿಯಾಗಿ ಮಂಗಳವಾರ ರಾತ್ರಿಯಿಂದ ಓದಲು ತೊಡಗಿ, ಬುಧವಾರ, ಗುರುವಾರ ರಾತ್ರಿಗಳಲ್ಲಿ ಮುಂದುವರಿಸಿ ಮುಗಿಸಿಬಿಟ್ಟೆ. ಅದರಲ್ಲಿರುವ ತೇಜಸ್ವಿ ನಾನು ಅಂದುಕೊಂಡ ಹಾಗೇ ಇದ್ದರಲ್ಲಾ ಎಂಬ ಅಚ್ಚರಿಯೊಂದಿಗೆ, ಅವರ ಪ್ರೀತಿಯ ಸಂಗಾತಿ ರಾಜೇಶ್ ಮೇಲಿನ ಪ್ರೀತಿ ಮತ್ತು ಅಭಿಮಾನ ಸಿಕ್ಕಾಪಟ್ಟೆ ಜಾಸ್ತಿಯಾಗ್ಬಿಟ್ಟಿದೆ. ಅವರು ಹಾಗಿರಲು ಇವರು ಹೀಗಿರುವುದೇ ಕಾರಣ. ನನ್ನನ್ನು ಒಂದು ಜ್ವರದ ಹಾಗೆ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತು. ಇದು ಅಭಿಮಾನವನ್ನು ಮೀರಿದ, ಕನ್ನಡದ ಓದುಪ್ರೀತಿಯ ಸೃಜನಶೀಲ ಮನಸ್ಸುಗಳೆಲ್ಲ ಓದಲೇಬೇಕಿರುವ ಪುಸ್ತಕ. ಓದುಪ್ರೀತಿಯವರು ಅಂತ ಯಾಕಂದೆ ಅಂದರೆ ಇದು ೫೦೦ಕ್ಕೂ ಹೆಚ್ಚಿನ ಪುಟಗಳಿರುವ ಮಹಾ ಓದು. ಆ ಚೈತನ್ಯಪೂರ್ಣ ಸಾಂಗತ್ಯವನ್ನು ವಿವರಿಸಲು ಇದು ಕಡಿಮೆಯೇ ಅನ್ನಿಸಿದರೂ, ಇನ್ನೂ ಹೆಚ್ಚು ಬರೆದು ವಾಚ್ಯವಾಗದೆ ಅವರ ಬದುಕಿನ ಸವಿಯನ್ನು ನಮ್ಮ ಮನದ ಭಿತ್ತಿಯಲ್ಲಿ ಕಲ್ಪಿಸಿಕೊಳ್ಳಲಿಕ್ಕೂ ಅವಕಾಶ ನೀಡಿದ್ದಾರೆ ಲೇಖಕಿ. A typical Tejaswi style! ಆ ಕೊನೆಯ ಸಿಟೌಟಿನ ಅಧ್ಯಾಯವೇ ಸಾಕು ಈ ಬರಹದ ರೂಹನ್ನ ಕಟ್ಟಿಕೊಡಲು. ಈ ಮಾತುಗಳೆಲ್ಲ ಯಾಕೆ. ಅವರ ಪುಸ್ತಕ ಓದಿ. ರಾಜೇಶ್ವರಿಯವರ ಮೊದಲಮಳೆಗೆ ಅರಳಿ ಸುಗಂಧಿಸುವ ಕಾಫಿಹೂಗಳಂತಹ ಬರಹಮಾಲೆಯನ್ನ ಓದಿಯೇ ಅನುಭವಿಸಬೇಕು.
----------------------------------
ಇದು ಬದುಕಿನ ತಿರುಳೋ ಅಥವಾ ಇದೇ ಬದುಕೋ ಗೊತ್ತಾಗದ ಅರೆ ಎಚ್ಚರದ ಕನಸು ಮುಗಿಯುವಷ್ಟರಲ್ಲಿ ಬದುಕು ಕೊನೆಯ ನಿಲ್ದಾಣಕ್ಕೆ ಬಂದಿರುತ್ತದೆ. ಇವತ್ತು ೩೩ ವರ್ಷ ಕಳೆದ ಬದುಕಿನ ತಿರುವಿನಲ್ಲಿ ನಿಂತು ಯೋಚಿಸುತ್ತೇನೆ. ಕಳೆದ ೩೩ ವರ್ಷಗಳಲ್ಲಿ ಬದುಕಿನ ಪಾತ್ರೆಗೆ ನಾನು ತುಂಬಿದ್ದೇನು? ಅದರಿಂದ ಹರಿಸಿದ್ದೇನು?ಅಥವಾ ಉಮರ ಹೇಳಿದಂತೆ ಬೋರಲು ಬಿದ್ದ ಬದುಕಿನ ಪಾತ್ರೆ ತುಂಬದೆ ಉಳಿದಿದೆ, ತುಳುಕುವುದಕ್ಕೇನಿದೆ? ಅಥವಾ ಈ ೩೩ಕ್ಕೆ ಎಲ್ಲ ಮುಗಿಯಿತು ಎಂಬಂತೆ ಕೂರಬೇಕೆಂದೆ ನನಗೆ ಈ ವಯಸ್ಸನ್ನು,ಆರೋಗ್ಯವನ್ನು, ಏನಾದರೂ ಮಾಡುವ ಚೈತನ್ಯವನ್ನು, ಮಾಡಬೇಕೆಂಬ ತುಡಿತವನ್ನು ನನ್ನನ್ನು ರೂಪಿಸಿದ ಸೃಷ್ಟಿ ದಯಪಾಲಿಸಿದೆಯೇ? ಅಥವಾ ಈ ತಪನೆಯೇ ಒಂತರ ಏನನ್ನೂ ಮಾಡಲು ಸಾಧ್ಯವಿರುವ ಎಲ್ಲಕ್ಕೂ ಒಡ್ಡಿನಿಂತ ಹೊಸ ಬಾಗಿಲೆ? ನಾನು ಹ್ಯಾಗೆ ಗ್ರಹಿಸಿದೆ ತೊಳಲಾಟವನ್ನ,ಸಂಕ್ರಮಣವನ್ನ ಅಂತ ಮುಂದೆ ಎಂದಾದರೂ ಹೇಳಿಯೇನು.
-ಪ್ರೀತಿಯಿಂದ,ಸಿಂಧು