Friday, December 4, 2009

ಝೆಹರ್ ಜೋ ತೂನೇ ದಿಯಾ ಥಾ ವೋ ದವಾ ಹೋ ಬೈಠಾ..

ಅವತ್ತು ಬದುಕೇ ಬೇಜಾರಾಗಿ ಅಳುತ್ತಾ ಕೂತುಬಿಟ್ಟಿದ್ದೆ. ಮಾತನಾಡಿಸಲು ಬಂದ ಗೆಳೆಯ ಗೆಳತಿಯರು ಏನು ಹೇಳಲಿಕ್ಕೂ ತೋಚದೇ, ಸುಮ್ಮನೆ ಹೆಗಲ ಮೇಲೊಮ್ಮೆ ಮೆತ್ತಗೆ ಒತ್ತಿ, ಕೆನ್ನೆ ತಟ್ಟಿ ಸಪ್ಪಗೆ ಹೊರಟು ಹೋಗಿದ್ದರು. ಅವರಿಗೆ ಗೊತ್ತಿತ್ತು ಈ ಕಣ್ಣೀರನ್ನು ಒರೆಸಬಾರದು ಹರಿಯಲು ಬಿಡಬೇಕು ಅಂತ. ಅದಕ್ಕೇ ಅಲ್ಲವಾ ನನಗೆ ಅವರೆಂದರೆ ಅಷ್ಟು ಪ್ರೀತಿ.
ಅಷ್ಟು ಪ್ರೀತಿಯ ಅವರೆಲ್ಲರಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದ ನಾನು ಆ ಹೊತ್ತಿನಲ್ಲಿ ಎಲ್ಲ ಕಳೆದುಕೊಂಡು ಮೋಹದ ಬೆಂಕಿಯಲ್ಲಿ ಬೂದಿಯಾಗುತ್ತಿದ್ದೆ. ಕಣ್ಣೀರು ಎಣ್ಣೆಯ ತಲೆಯ ಮೇಲೆ ಹೊಡೆದ ಹಾಗೆ ಉರಿಗಳನ್ನು ಎತ್ತರಕ್ಕೆಬ್ಬಿಸುತ್ತಿತ್ತು.
ನೀನು ನಿನ್ನ ಎಂದಿನ ಉಡಾಫೆಯ ರೀತಿಯಲ್ಲಿ ಹೊರಳು ದಾರ‍ಿಯಲ್ಲಿ ಹೊರಟು ನಿಂತಿದ್ದೆ. ಆ ದಾರಿಯ ಅನತಿ ದೂರದ ತಿರುವಲ್ಲಿ ಇನ್ಯಾವುದೋ ಮನಸ್ಸಿನ ಮಂಟಪ ಎದ್ದು ನಿಂತಿತ್ತು - ಹೊಸ ಕ್ಷಿತಿಜಗಳನ್ನ ತೆರೆದು ನಿಂತ ಹೊರಳು ದಾರಿ.ಹೀಗೆ ಇದ್ದಕ್ಕಿದ್ದಂಗೆ ನೀನು ಹೊರಟು ಹೋಗುತ್ತಾ ಇದ್ದರೆ ನನ್ನ ಎಲ್ಲ ಅವಲಂಬನೆಗಳ ಹಂದರವೂ ಕುಸಿದುಬಿದ್ದಿತ್ತು.
ಭೂಕಂಪವಾಗುವವರಿಗೂ ಎಚ್ಚರವಾಗಿದ್ದರೆ ಬೀಳುತ್ತಿರುವ ಮನೆಯಿಂದ ಓಡಿಬರಲು ಸಮಯವಿರುತ್ತದೇನೋ.ನಾನು ಪೆದ್ದಿ. ನಿನ್ನ ಮನದ ಒಳ ಮೂಲೆಯಲ್ಲಿ ಕೂತು ಬಾಗಿಲು ಹಾಕಿಕೊಂಡು ಕೀಲಿ ಕಳಕೊಂಡು ಬಿಟ್ಟಿದ್ದೆ. ಸಾವರಿಸಿಕೊಂಡು ಏಳುವಷ್ಟರಲ್ಲಿ ಚಂದದ ಉದ್ಯಾನ ಮರುಭೂಮಿಯಾಗಿಬಿಟ್ಟಿತ್ತು.ಬೆಳ್ಳಗೆ ಮಿನುಗುವ ಚಂದಿರ ಹೋಗಿ, ಉರಿದು ಬೀಳುವ ಉಲ್ಕೆ ಉಳಿದಿತ್ತು.

ನನ್ನ ಹುಚ್ಚುತನವೇ ನನ್ನ ಹುಚ್ಚಿಯನ್ನಾಗಿ ಮಾಡಿತು ಅಂದರೆ ಅಲ್ದೆ ಮತ್ತಿನ್ನೇನು ಅಂತೀಯ ನೀನು.
ನಿನ್ನದೇ ಹುಚ್ಚು ನನಗೆ ಎನ್ನುವ ನನ್ನ ಮಾತು ತುಟಿಯವರೆಗೆ ಬಂದಿದ್ದು ನಿನ್ನ ಕುಹಕದ ನಗೆಯನ್ನು ನೋಡಿ ಸಪ್ಪಗಾಗಿ ಬಂದ ಕಡೆಯೇ ಹೋಯಿತು.
ಹೋದರೆ ಹೋಗು ಮತ್ತೆ ಬರುತ್ತೀಯ ನೀನು ಅಂದುಕೊಂಡು ಸುಮ್ಮನುಳಿದೆ.
ಎಷ್ಟು ದೂರ ಹೋದೆ ನೀನು, ಕರೆದರೂ ಕೇಳಿಸದ ತೀರದ ಗುಂಟ ನಿನ್ನ ಹಾದಿ.
ಹೆಜ್ಜೆ ಬೆರೆಸಲೂ ಆಗದ ನನಗೆ ಉಳಿದದ್ದು ಒಳಗುದಿ.
ಸುತ್ತಲ ಜನ ಅಯ್ಯೋ ಪಾಪ ಎಂದು ಹೇಳುತ್ತಾ ನಕ್ಕರು. ಬೇಡವೆಂದರೂ ಮಾಡಿಕೊಂಡೆ ಈಗ ಅನುಭವಿಸು ಎಂಬ ಭಾವ ಮಾತಲ್ಲಿ ಹೊರಬರದ ಹಾಗೆ ನೋಡಿಕೊಂಡರು. ಅಷ್ಟು ಮುತುವರ್ಜಿ.
ಬಿದ್ದವಳ ಮೇಲೊಂದು ಕಲ್ಲು ಹಾಕದೆ ಇರುವುದು ಹೇಗೆಂದು ಸಂಕಟವಾಗಿ ನಗೆಮೊಗ್ಗುಗಳನ್ನೆಸೆದರು.
ನನ್ನ ತಪನೆಯ ಉರಿಯ ವರ್ತುಲ ಹೊಕ್ಕಲಾಗದ ಮೊಗ್ಗುಗಳು ತೊಟ್ಟಿನ ಸಮೇತ ಅರಳದೆಯೆ ಕರಕಲಾದವು.
ಒಳಗೆ ಉರಿ, ಹೊರಗೆ ಬೂದಿ, ಕಣ್ಣಲ್ಲಿ ಉರಿಯುವ ಕೆಂಡ. ಸಂಕಟದ ಸಾಗರಕ್ಕೆ ಒಂದೇ ನದಿ.
ತಣ್ಣಗೆ ಗಾಳಿ ಸುಳಿದಾಗಲೆಲ್ಲ ನನ್ನೊಳಗಿನ ಉರಿ ಮತ್ತಷ್ಟು ಕೆನ್ನಾಲಗೆ ಚಾಚಿತು.
ಹೀಗೆ ಬಿಟ್ಟು ಹೋಗಲೇಬೇಕೆಂದು ಇದ್ದವನು ನನ್ನನ್ನ ಕರೆದುಕೊಂಡು ಬಂದೆ ಯಾಕೆ. ಏನು ಕೇಳಿದರೆ ಏನು ಫಲ. ನಮ್ಮ ಮಧ್ಯೆ ಉಳಿದಿರುವುದು ನಿರ್ವಾತ! ನಾನುಹೇಳಿದ್ದು ನಿನಗೆ ಕೇಳುವುದಿಲ್ಲ. ಏನನ್ನಾದರೂ ಹೇಳುವುದು ನಿನಗೂ ಬೇಕಿಲ್ಲ.

ಒಬ್ಬ ಗೆಳೆಯ, ಒಬ್ಬ ಗೆಳತಿ, ಇನ್ನೊಬ್ಬ ತಮ್ಮ ನನ್ನ ಅಳಲಿನ ಹರಿವಿನುದ್ದಕ್ಕೂ ಸುಮ್ಮನೆ ನಡೆಯುತ್ತ ಬಂದರು. ನಾನು ಅಳು ನಿಲ್ಲಿಸಿ ಅವರೆಡೆಗೆ ನೋಡುವ ದಿನಕ್ಕೆ ಕಾಯುತ್ತಾ! ಇದು ಅರಿವಾದ ದಿನ ಒರೆಸಿಕೊಂಡ ಕಣ್ಣು ಮತ್ತೆ ತೇವಗೊಳ್ಳಲಿಲ್ಲ.

ಏನು ಗೊತ್ತಾ ?ನೀನು ಒಳ್ಳೆಯವನು. ನನ್ನ ಮೇಲೆ ನನಗೇ ನಂಬಿಕೆ ಬೆಳೆದಿದ್ದೇ ನೀನು ಬಿಟ್ಟು ಹೋಗಿದ್ದರಿಂದ. ಅವಲಂಬನೆಗಳನ್ನ ಮೀರಿದ ನನ್ನದೇ ಬದುಕನ್ನ ನಾನು ಕಟ್ಟಿಕೊಂಡಿದ್ದೇ ನೀನು ಇಲ್ಲದೆ ಹೋದದ್ದರಿಂದ.ನನ್ನ ಇವತ್ತಿನ ಖುಶಿಯ ಒರತೆಯೇ ನೀನು ಅವತ್ತು ಉಣಿಸಿದ ದುಃಖ. ನೀನೇನಾದ್ರೂ ಹಾಗೆ ಮಾಡದೆ ಇದ್ದಿದ್ದರೆ ಇವತ್ತು ನಾನು ಬರಿಯ ನೆರಳಾಗಿ ಅಷ್ಟೇ ಇರುತ್ತಿದ್ದೆ. ಸಧ್ಯ . ಇವತ್ತಿಲ್ಲಿ ಕಾರ್ತೀಕ. ವಿಷವೇ ಔಷಧಿಯಾಗುವುದನ್ನ ಗಝಲ್ಲುಗಳಲ್ಲಿ ಮಾತ್ರ ಕೇಳಿದ್ದೆ. ನಿನ್ನ ಕೃಪೆ. ಅದನ್ನೇ ಅನುಭವಿಸುತ್ತಿದ್ದೀನಿ.

ಕೃತಜ್ಞತೆಗಳೊಂದಿಗೆ
-ನವೀನ

ಕೊನೆಯ ಒಂದು ಮಾತು:
ನೀನು ಮೋಸ ಮಾಡಿದೆ ಎಂಬ ಬೇಸರವಿಲ್ಲ ನನಗೆ. ನೀನೂ ಮೋಸ ಮಾಡಿದೆಯಲ್ಲ ಎಂಬ ವಿಷಾದವಷ್ಟೇ.

Friday, November 27, 2009

ಬಚ್ಚಲ ರೊಚ್ಚು..

ಅವನಿಂದ ನೂರಾಅರವವತ್ನಾಲ್ಕಕ್ಕೂ ಹೆಚ್ಚು ಮನೆಯ ದೀಪಗಳು ನಂದಿದವು. ಅವನ ಯೋಚನೆಗಳು ಕ್ರೌರ್ಯದ ಪರಮಾವಧಿಯವು ಮತ್ತು ನೀಚ ಉದ್ದೇಶಗಳು. ಇದರ ಬಗ್ಗೆ ಯಾವುದೇ ಧರ್ಮ,ಜಾತಿ,ರಾಷ್ಟ್ರೀಯತೆಯನ್ನು ಮೀರಿ ಎಲ್ಲರ ಅಭಿಪ್ರಾಯವೂ ಒಂದೇ.
ಆದರೆ ಅದೇ ಅವನಿಂದ ನಾಡಿನ ಎಲ್ಲ ಮಾಧ್ಯಮಗಳ ಮಾರಾಟ ಮತ್ತು ಮೌಲ್ಯವರ್ಧನೆ ಆಗುತ್ತಿರುವುದು ಅಸಹ್ಯದ ಪರಮಾವಧಿ ಎಂಬುದು ನನ್ನ ಅನಿಸಿಕೆ.
ಅವನು ಈಗ ಕಟಕಟೆಯಲ್ಲಿದ್ದಾನೆ. ಅವನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡಿದೆ ಅಷ್ಟು ಖರ್ಚು ಮಾಡಿದೆ, ಇಟ್ಟುಕೊಳ್ಳುವುದೇಕೆ, ಕಲ್ಲು ಹೊಡೆದೋ ಗುಂಡು ಹೊಡೆದೋ ಕೊಂದುಬಿಡಬೇಕು ಎಂದು ಆವೇಶದಲ್ಲಿ ಯೋಚಿಸುವ ಮುನ್ನ ಹುತಾತ್ಮ ಮೇ.ಸಂದೀಪ್ ಉನ್ನಿ ಕೃಷ್ಣನ್ ಅವರ ಅಪ್ಪ ನೀಡಿದ ಉತ್ತರವನ್ನು ದಯವಿಟ್ಟು ಓದಿ ಮನನ ಮಾಡಿಕೊಳ್ಳಿ. [ನನಗೆ ಆ ನರಕೀಟದ ಹೆಸರನ್ನು ೨೪ ಸಲ ಬರೆಯಲು ಮತ್ತು ಓದಲು ಅಸಹ್ಯವಾದದ್ದರಿಂದ ಅವನ ಹೆಸರು ಬಂದಲ್ಲೆಲ್ಲ ಕಪ್ಪು ಬಣ್ಣ ಬಳಸಿದ್ದೇನೆ.]
ಈ ನರಹಂತಕನ ಮುಖ ನೋಡಬೇಕೂನಿಸುತ್ತಾ ನಿಮಗೆ ಅಂತ ನಮ್ಮ ಮಾಧ್ಯಮ ಪ್ರತಿನಿಧಿ ಶಿಖಾಮಣಿ ಮಾಡಿದ ಪ್ರಶ್ನೆಗೆ ಅವರು ಹೇಳಿದ್ದಿಷ್ಟು –
ಈ ಮಹಾನ್ ತಂದೆಯ ಯೋಚನೆಯನ್ನ ದೃಷ್ಟಿಕೋನವನ್ನ ಗೌರವಿಸುವುದು ಈ ಸಂದರ್ಭದಲ್ಲಿ ತುಂಬ ಸೂಕ್ತ.
ಎಷ್ಟು ಕೋಟಿಗಳೂ ನಾವು ಕಳೆದುಕೊಂಡ ಅಮೂಲ್ಯ ಜೀವಗಳಿಗೆ ಸಮನಲ್ಲ. ಈ ತರಹದ ಘಟನೆಗಳು ಮುಂದೆ ನಡೆಯದ ಹಾಗೆ ಜವಾಬ್ದಾರಿ ತೆಗೆದುಕೊಳ್ಳುವವರು ಮಾಡುತ್ತಿರುವ ಕೆಲಸ ಮಧ್ಯೆ ಅನಾವಶ್ಯಕ ಭಾವೋದ್ವೇಗದ ಆರೋಪಣೆಗಳು ಸಲ್ಲ.
ಆ ಕರಾಳ ದಿನ ಜೀವ ಕಳೆದುಕೊಂಡ ಮತ್ತು ಜೀವರಕ್ಷಣೆಗಾಗಿಯೇ ಜೀವತೆತ್ತ ಎಲ್ಲರ ನೆನಪಿಗೆ ತಲೆಬಾಗುತ್ತಾ,
ಪ್ರೀತಿಯಿಂದ
ಸಿಂಧು.
[ಮಾಹಿತಿ ಚಿತ್ರದ ಮೂಲ - ವಿಜಯಕರ್ನಾಟಕ ೨೬.೧೧.೦೯]

Monday, November 2, 2009

ತವಕ..ತಲ್ಲಣ.ಸಂತಸ.. - ಮಿಶ್ರಮಾಧುರ್ಯ ಸೀರೀಸ್

ರದನೋದಯ ಜ್ವರ ದಮ್ ರೋಟ್ ಮೇಲೆ ನಡೆಯುತ್ತಾ ಇದೆ. :)
ಇನ್ನೂ ಹಲ್ ಬಂದಿಲ್ಲ ಹಲ್ ಸೆಟ್ಟಿಗೆ ಆರ್ಡರ್ ಕೊಡಬೇಕೋ ಏನೋ ಅಂತ ಯೋಚನೆ ಮಾಡುತ್ತಾ ತುತ್ತು ಇಡುವಾಗ ಬೆರಳು ಕಡಿದು ಬಿಡಬೇಕೇ..!!
ಟುಪ್ಪೂಗೆ ಹನ್ನೊಂದು ತುಂಬಿತು..!
ಸಣ್ಣದಾಗಿ ಜ್ವರ ಮತ್ತು ಆಗ ಈಗ ಲೂಸ್ ಮೋಶನ್ ಆಗ್ತಾ ಇದ್ರೂ, ದಮ್ರೋಟ್ ಮಾಡಿದ್ರೆ ತಿನ್ನದೆ ಹ್ಯಾಗಿರೋದು ಅಂತ ಚಪ್ಪರಿಸಿಕೊಂಡು ತಿನ್ನುತ್ತೆ ಈ ಪುಟ್ಟಗುಬ್ಬಿ ಈಗ. ಹನ್ನೊಂದು ಮಾಸಗಳುರುಳಿ ವರ್ಷದ ಹೆಜ್ಜೆಗಳು ಮೆತ್ತಗೆ ಮೂಡ್ತಾ ಇದೆ.
ಮರಿಗೆ ಕೈಬಿಟ್ಟು ನಡೆಯಲು ತವಕ, ನೋಟ ಸಕ್ಕತ್ತಾಗಿರುತ್ತಾದರೂ ಅಮ್ಮನಿಗೆ ತಲ್ಲಣ. :)

Tuesday, September 29, 2009

::ಸೃಷ್ಟಿ ಶುಭದಾಯಿನಿ::

::ಮಾತುಗಳನ್ನು ಮೀರಿದ ಬೆಡಗು::
ಬೆರಗು,ಹೊನಲು,ನಸು-ಬೆಳಗು,ಬೆಳದಿಂಗಳ ಮಿಶ್ರ ಮಾಧುರ್ಯಕ್ಕೀಗ 10 ತಿಂಗಳು!

Friday, September 25, 2009

Ground Reality hurts.. n its unfair world!

ಸಮಾನತೆ, ಸ್ವಾತಂತ್ರ್ಯ
ಸ್ವಾವಲಂಬನೆ
ಒಳ್ಳೆಯ ಉಕ್ತಲೇಖನದ ಪದಗಳು.
ಎಷ್ಟೇ ಸರಿಯಾಗಿ ಬರೆದರೂ
ಅವು ಪುಸ್ತಕದ ಮೇಲೆ ಮಾತ್ರ.
ಮಾತುಗಳಲ್ಲಿ ಬಂದರೂ
ಭಾಷಣಗಳಲ್ಲಿ ಮಾತ್ರ.
ಪದಗಳಲ್ಲಿ ಮೂಡಿದರೂ
ಪ್ರಶಸ್ತಿ ಪಡೆಯುವ ಕವಿತೆಗಳಿಗೆ ಮಾತ್ರ.
ಚಿತ್ರದಲ್ಲಿ ಬರಬೇಕಿದ್ದರೆ
ಕಲಾತ್ಮಕ ಸಿನಿಮಾಗಳಿಗೆ ಮಾತ್ರ.
ಬದುಕಿನ ಸ್ತರವೇ ಬೇರೆ
ಹೆಣ್ಣು ಯಾವತ್ತಿದ್ದರೂ ಹೊಂದಾಣಿಕೆಗೆ ಮಾತ್ರ.

Friday, August 28, 2009

ಅಶ್ರುತ ಗಾನ..

ಬೇಸರ,ಸಂಕಟ,ಅನಾನುಕೂಲಗಳನ್ನೆಲ್ಲ
ಮೂಟೆ ಕಟ್ಟಿಟ್ಟ
ಆಹ್ಲಾದದ ಹಾದಿಯದು
ಪುಲ್ಲ ಕುಸುಮಿತ ದ್ರುಮದಲ ಶೋಭಿನೀ
ಹೊರೆಗೆಲಸದ ಕಟ್ಟೆಯಿಳಿದು
ಕಾಲು ಚೆಲ್ಲಿದ ಕೂಡಲೆ
ಮುತ್ತಿಡುವ ಆಶಾದಾಯಿನಿ

ಯಾವ ತಿರುವಲ್ಲಿ ತಿರುಗಿದೆನೋ ಗೊತ್ತಿಲ್ಲ
ಅನುಕೂಲಗಳ ಆತಂಕರಹಿತ
ಅನಾಹತ ಹೈವೇಗೆ ಬಂದಾಯಿತು
ಇಲ್ಲೇ ಸುದೂರದಿ
ನೀಲಿಗೆರೆಯ ಸುತ್ತಲ
ಹಸಿರು ಪದರದ ಹಾದಿಯ ಸಂಜೀವಿನೀ
ದೂರವೇನಿಲ್ಲ,
ಕಾಲಿಗೆ ದಕ್ಕುವುದಿಲ್ಲ,
ನಡುವೆಯಿರುವುದೀಗ
ದಾಟಿ ಹಾರಬಹುದಾದ ಕಿಟಕಿಯಲ್ಲ
ದಿನದಿನವೂ ಮೊನಚಾಗಿ ಚುಚ್ಚುವ ಕನ್ನಡಿ!
ಮುಂದೆ ಮುಂದೆ ಹೋದರೆದಾರಿ ಸಿಕ್ಕದಲ್ಲ
ಹಿಂದೆ ತಿರುಗಿ ಹೋಗಬಹುದೆ?
ಅದರ ಗುಟ್ಟು ನನಗೆ ತಿಳಿಯದಲ್ಲ..!
ಕೂತು ಯೋಚಿಸಲು ಗಡಿಬಿಡಿ
ಕೊನೆಗೆ ಷರಾ ಹೋಗಲಿಬಿಡಿ..
ಆಕಡೆ ನೋಡದಿದ್ದರಾಯಿತು
ದಾರಿ ತನ್ನ ಪಾಡಿಗೆ ತಾನು ಕನ್ನಡಿಯಲ್ಲಿರಲಿಬಿಡಿ

ಆದರೂ...

ಈಗ ಇಲ್ಲದಿದ್ದರ ಕುರಿತು
ಕೊರಗಿ ನಲುಗುವ ಮೊದಲು
ಒಂದು ಕೃತಜ್ಞತೆ ಹೇಳಬೇಕಿದೆ,
ಇಲ್ಲಿಯವರೆಗೆ ನಿಲುಕಿದ್ದಕ್ಕೆ
ಬೇಕಿತ್ತೋ ಬೇಡವೋ ಒಳಗೊಂಡಿದ್ದಕ್ಕೆ
ಕೇಳದೆಯೇ ಒಲಿದು ಬಂದದ್ದಕ್ಕೆ
ಕಣ್ಣಹನಿಯಿಳಿಯುವಾಗ ಅಂಗೈ ಹಿಡಿದದ್ದಕ್ಕೆ
ಹೆಜ್ಜೆ ಜಾರುವಾಗ, ಕೈಬೆರಳ ಬಿಗಿದು ಹಿಡಿದ ಬಿಸುಪಿಗೆ
ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?

ಸಂಕಟಕಳೆದು
ನಲಿವು ಮುಗಿದು
ಸ್ಥಿತಪ್ರಜ್ಞಯೋಗದಲ್ಲೂ
ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!