Friday, April 6, 2018

ನಡೆಯುತ್ತ ನಡೆಯುತ್ತ...

ಮಲ್ಲಿಗೆಯಿಂದ ಮಲ್ಲಿಗೆಗೆ,
ಕನಸಿನಿಂದ ಕನಸಿಗೆ,
ದಾಟುತ್ತ ದಾಟುತ್ತ,
ಈಗ ನನಸಿನ ಬಯಲು,
ಸ್ವಪ್ನ ಹರಡಿದ ಮುಗಿಲು,
ವಸಂತದ ಗಂಧ ಗಾಳಿ ಹೂಗೊಂಚಲು
ಎಂದಿನ ಹಾಗೆ ಚೆಲುವರಿದೂ,
ಕೇಳದಿದೆ ಕೋಗಿಲೆಯ ಕುಕಿಲು,
ನೆರಳಿಗಿಂತಲೂ ಉದ್ದದ ಬಿಸಿಲು.

ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿಕೂತು
ಯಾರಿಗೂ ಹೇಳದ ಪಯಣ-
-ದ ದಾರಿ ಬದಲಾಗಿ
ಸಮಾಹಿತ-
-ದ ನಿರ್ವಾತ,
ಝಗಮಗಿಸುವ ಸೂರ್ಯನೇ
ಬೆಚ್ಚಿ ಬೆಮರುವ ಕಪ್ಪುಕುಳಿ ಬದುಕಿನ
ಅವಕಾಶದಿ,
ಬಗೆಬಗೆಯ ಉಲ್ಕಾಪಾತ.
ಈಗ ಮಲ್ಲಿಗೆ ಬಳ್ಳಿ ಡೆಸ್ಕ್ ಟಾಪಿನ ಸ್ಕ್ರೀನ್ ಸೇವರಲ್ಲಿದೆ,
ರಾತ್ರಿ ರಾಣಿಯ ಬೊನ್ಸಾಯ್ ಕಿಟಕಿ ಪಕ್ಕದ ಕುಂಡದಲ್ಲಿದೆ,
ಮಕ್ಕಳ ಕೈಗೆ ಸಿಕ್ಕಿ ತುದಿ ಹರಿದ-
ಜತೆಪಯಣದ ಚೊಲೋ ಚಿತ್ರವ ಫ್ರೇಮಲ್ಲಿ ಸಿಕ್ಕಿಸಲಾಗಿದೆ.

ಕೆ.ಎಸ್.ನ ಹೇಳಿದಂತೆ
"ಕವಿತೆ ಕರವಸ್ತ್ರ"
ಮತ್ತು ಚಿಕಿತ್ಸೆ ಕೂಡ.
ಲಘು ಗುರು ಮಾತ್ರೆಗಳ ಬಲವೇ ಬಲ.
ಬೇಂದ್ರೆ ಅಜ್ಜ ಬೇಜಾರಾಗಬ್ಯಾಡ್ರಿ
ನೀವು ಹೇಳಿದ ಹಾಗೆ
"ಕವಿಗೆ ಏನು ಬೇಕು
ಹೂತ ಹುಣಸೀಮರ ಸಾಕು"
ಬದುಕಿನ ಮರದೆದೆಗೆ ಕವಿತೆಯ ಹನಿ ಹನಿ ಬೇಕು.
ಆದರೂ ಕೊನೆಗೆ ಒಂದು ಮಾತು ಹೇಳಲು
ಅಡಿಗರೇ ಸೂಕ್ತ..
"ಮುಗಿಲು ಮಿಂಚಿನ ತತ್ತಿ
ತಳಕ್ಕೆ ಬೆಳಕಿನ ಮರಿಗಳಿಳಿಯಲಿಲ್ಲ.
ಅಷ್ಟೊಂದು ಮಿಂಚು ಮಿಂಚಿದ್ದಕ್ಕೂ
ಅಡಿಗೆಮನೆಯ ತರಗೆಲೆ ಹೊತ್ತಲಿಲ್ಲ."
ಪಯಣ ಪೂರ್ಣದೆಡೆಗೇ ಇದ್ದರೂ
ಪುಡಿಯಾಗುವುದು ನಿಯಮ.

2 comments:

sunaath said...

‘ಸರಿ, ಸಿಂಧೂ’!

ಸಿಂಧು sindhu said...

ಸುನಾಥ ಕಾಕಾ, ಇದು
ಕವಿತೆಗಿಂತ ಜಾಸ್ತಿ ಲಹರಿಯೇ.