Monday, March 12, 2018

ಕವಿ ಮಿತಿ

ನೆಲ ಹೇಳಿತು
ಮುಗಿಲು ಕಿವಿಗೊಟ್ಟಿತು
ಮಧ್ಯದ ಜನಸಂಕುಲ ಗಾಬರಿಯಾಯಿತು
ಒಂದು ತುಂತುರು ಮಳೆ
ಮಳೆ ನಿಂತ ತಂಗಾಳಿ, ಹಕ್ಕಿ ಕುಕಿಲು
ಎಂದಿನ ಹಾಗೆ ಟ್ರಾಫಿಕ್ಕು, ಕೆಲಸ, ಶಬ್ಧ,
ತುಂಬಿ ತುಳುಕುವ ಸಾರಿಗೆ,ಆಸ್ಪತ್ರೆ, ಹೋಟೆಲು,
ಹನಿ ತುಳುಕದ ಹಾಗೆ ಎಚ್ಚರದ ಬಾಟಲು.

ಆಗಸ ಪಿಸುನುಡಿಯಿತು
ಭುವಿ ಕಿವಿಯಾಯಿತು
ಮಧ್ಯದ ಜನಸಂಕುಲ ಕುಮ್ಹಿಟಿಬಿದ್ದರು
ಆತಂಕ, ಸಾಶಂಕ, ದೇಗುಲಗಳಲ್ಲಿ ಪರಿಪರಿಯ ಅರ್ಚನೆ ತಳ್ಳಂಕ
ಮತ್ತೊಂದು ಸುರಿಮಳೆ
ತೊಳೆದ ಕೊಳೆ, ಮುರಿದು ಬಿದ್ದ ರೆಂಬೆ ಕೊಂಬೆ
ಪಕ್ಕದ ಮರದಲ್ಲಿ ಗೂಡು ಸಿದ್ಧಗೊಳ್ಳುತ್ತಿರುವ ಸಂಜೆ
ಬೆಳಕು ಚೆಲ್ಲಿದ ಪಾದಪಥ, ಕಿವಿ ತುಂಬುವ ಹಾರ್ನುಗೀತ
ಮತ್ತದೇ ಟ್ರಾಫಿಕ್ಕು, ಕಿಕ್ಕಿರಿದ ಸಿಗ್ನಲು,
ಉದ್ದ ಕ್ಯೂಭರಿತ ಸಾರಿಗೆ, ಆಸ್ಪತ್ರೆ, ಹೋಟೆಲು
ಒಂದೆರಡು ಹನಿ ತುಳುಕಿಯೂ ತುಳುಕದ ಬಾಟಲು.

ಮಧ್ಯೆ ಟೆಕ್ನಾಲಜಿ
ಪತ್ರ,ಮೆಸೇಜು,ಚಿತ್ರ, ಎಮೋಜಿ
ಎಲ್ಲ ಸ್ತಬ್ಧ.
ಶಬ್ಧದೊಳಗಣ ನಿಶ್ಯಬ್ಧ
ದೊಳಗೆ
ಅಮೃತವಾಹಿನಿಯೊಂದು
ಹರಿಯುತ್ತಲೆ ಇರಲಿ
ಎಂದಷ್ಟೆ ಬಯಸುವುದು
ಕವಿಯ ಭಾಗ್ಯ.

1 comment:

sunaath said...

ಕವಿಗೆ ಸಲ್ಲುವ ಭಾಗ್ಯವು ಭುವನದ ಭಾಗ್ಯವೂ ಹೌದು!